"ಬಾಗುರೂಂಬಾ ದೊಹೊ" ಶ್ರೇಷ್ಠ ಬೋಡೋ ಸಂಪ್ರದಾಯಗಳನ್ನು ಗೌರವಿಸುತ್ತದೆ : ಪ್ರಧಾನಮಂತ್ರಿ
2020ರ ಬೋಡೋ ಶಾಂತಿ ಒಪ್ಪಂದವು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಿತು, ಇದರ ನಂತರ, ನಂಬಿಕೆ ಮರಳಿತು ಮತ್ತು ಸಾವಿರಾರು ಯುವಕರು ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದರು: ಪ್ರಧಾನಮಂತ್ರಿ
ಪ್ರತಿಭಾನ್ವಿತ ಬೋಡೋ ಯುವಕರು ಇಂದು ಅಸ್ಸಾಂನ ಸಾಂಸ್ಕೃತಿಕ ರಾಯಭಾರಿಗಳಾಗಿ ಹೊರಹೊಮ್ಮುತ್ತಿದ್ದಾರೆ: ಪ್ರಧಾನಮಂತ್ರಿ
ಅಸ್ಸಾಂನ ವಿಶ್ವಾಸ, ಶಕ್ತಿ ಮತ್ತು ಪ್ರಗತಿಯೊಂದಿಗೆ, ಭಾರತದ ಬೆಳವಣಿಗೆಯ ಯಶೋಗಾಥೆ ವೇಗಗೊಳ್ಳುತ್ತಿದೆ: ಪ್ರಧಾನಮಂತ್ರಿ

ನಮಸ್ಕಾರ!

ಏನು ಸಮಾಚಾರ? ಮಾಘ ಬಿಹು ಮತ್ತು ಮಾಘ ದೋಮಶಿ ಸಂಭ್ರಮದಲ್ಲಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು.

ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರೇ, ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರೇ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೋವಾಲ್ ಅವರೇ, ಪಬಿತ್ರ ಮಾರ್ಗರಿಟಾ ಅವರೇ, ಅಸ್ಸಾಂ ವಿಧಾನಸಭೆ ಸ್ಪೀಕರ್ ಶ್ರೀ ಬಿಸ್ವಾಜಿತ್ ಡೈಮರಿ ಅವರೇ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಅವರೇ, ರಾಜ್ಯ ಸರ್ಕಾರದ ಸಚಿವರೆ, ಎಲ್ಲಾ ಗೌರವಾನ್ವಿತ ನಾಗರಿಕ ಸಹೋದರ ಸಹೋದರಿಯರೆ ಮತ್ತು ಅಸ್ಸಾಂನ ನನ್ನ ಸಹೋದರ ಸಹೋದರಿಯರೆ,

ಅಸ್ಸಾಂನ ಸಂಸ್ಕೃತಿ ಮತ್ತು ಇಲ್ಲಿನ ಬೋಡೊ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಪಾಲಿನ ಅದೃಷ್ಟ. ಪ್ರಧಾನಮಂತ್ರಿಯಾಗಿ, ನಾನು ಅಸ್ಸಾಂಗೆ ಬಂದಿರುವಷ್ಟು, ಬೇರೆ ಯಾವುದೇ ಪ್ರಧಾನಮಂತ್ರಿ ಈ ಹಿಂದೆ ಬಂದಿಲ್ಲ. ಅಸ್ಸಾಂನ ಕಲೆ ಮತ್ತು ಸಂಸ್ಕೃತಿಗೆ ದೊಡ್ಡ ವೇದಿಕೆ ಸಿಗಬೇಕೆಂಬುದು ನನ್ನ ಬಯಕೆ. ಭವ್ಯ ಕಾರ್ಯಕ್ರಮಗಳ ಮೂಲಕ, ದೇಶ ಮತ್ತು ಜಗತ್ತಿನಲ್ಲಿ ಅದರ ಗುರುತನ್ನು ಸ್ಥಾಪಿಸಬೇಕು. ಇದಕ್ಕಾಗಿ ಹಿಂದಿನಿಂದಲೂ ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ. ಅದು ದೊಡ್ಡ ಪ್ರಮಾಣದಲ್ಲಿ ಬಿಹು ಸಂಬಂಧಿತ ಕಾರ್ಯಕ್ರಮಗಳಾಗಲಿ, ಜುಮೈರ್ ಬಿನೋದಿನಿಯ ಅಭಿವ್ಯಕ್ತಿಯಾಗಲಿ, ಒಂದೂವರೆ ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ಭವ್ಯ ಬೋಡೊಲ್ಯಾಂಡ್ ಉತ್ಸವವಾಗಲಿ ಅಥವಾ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ, ಅಸ್ಸಾಂನ ಕಲೆ ಮತ್ತು ಸಂಸ್ಕೃತಿಯಲ್ಲಿರುವ ಅದ್ಭುತ ಆನಂದವನ್ನು ಪಡೆಯುವ ಯಾವುದೇ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಇಂದು ಮತ್ತೊಮ್ಮೆ, ಬಾಗುರುಂಬದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಬೋಡೊ ಗುರುತಿನ ಜೀವಂತ ಆಚರಣೆಯಾಗಿದೆ. ಇದು ಬೋಡೊ ಸಮಾಜ ಮತ್ತು ಅಸ್ಸಾಂನ ಪರಂಪರೆಯ ಗೌರವವೂ ಆಗಿದೆ. ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಜನರಿಗೆ ಮತ್ತು ವಿಶೇಷವಾಗಿ ಎಲ್ಲಾ ಕಲಾವಿದರಿಗೆ ನನ್ನ ಶುಭಾಶಯಗಳು ಮತ್ತು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

‘ಬಾಗುರೂಂಬಾ ದೊಹೊ’ ಕೇವಲ ಒಂದು ಹಬ್ಬವಲ್ಲ. ಇದು ನಮ್ಮ ಶ್ರೇಷ್ಠ ಬೋಡೊ ಸಂಪ್ರದಾಯವನ್ನು ಗೌರವಿಸುವ ಮಾಧ್ಯಮ, ಇದು ಬೋಡೊ ಸಮಾಜದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಮಾಧ್ಯಮ. ಬೋಡೋಫ ಉಪೇಂದ್ರನಾಥ ಬ್ರಹ್ಮ, ಗುರುದೇವ್ ಕಾಲಿಚರಣ್ ಬ್ರಹ್ಮ, ರೂಪನಾಥ್ ಬ್ರಹ್ಮ, ಸತೀಶ್ ಚಂದ್ರ ಬಸುಮತರಿ, ಮೊರದಮ್ ಬ್ರಹ್ಮ, ಕನಕೇಶ್ವರ ನರ್ಜರಿ, ಸಾಮಾಜಿಕ ಸುಧಾರಣೆ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ರಾಜಕೀಯ ಪ್ರಜ್ಞೆಗೆ ಶಕ್ತಿ ನೀಡಿದ ಅನೇಕ ಮಹಾನ್ ವ್ಯಕ್ತಿಗಳು ಇದ್ದಾರೆ. ಈ ಸಂದರ್ಭದಲ್ಲಿ, ಬೋಡೊ ಸಮಾಜದ ಈ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನಾನು ಗೌರವದಿಂದ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಬಿಜೆಪಿ ಅಸ್ಸಾಂನ ಸಂಸ್ಕೃತಿಯನ್ನು ಇಡೀ ಭಾರತದ ಹೆಮ್ಮೆ ಎಂದು ಪರಿಗಣಿಸುತ್ತದೆ. ಭಾರತದ ಇತಿಹಾಸವು ಅಸ್ಸಾಂನ ಭೂತಕಾಲ, ಅಸ್ಸಾಂನ ಇತಿಹಾಸದೊಂದಿಗೆ ಮಾತ್ರ ಪೂರ್ಣಗೊಂಡಿದೆ. ಅದಕ್ಕಾಗಿಯೇ ಬಿಜೆಪಿ ಸರ್ಕಾರದಲ್ಲಿ, ಬಾಗುರುಂಬ ದಹೌನಂತಹ ದೊಡ್ಡ ಉತ್ಸವಗಳು ನಡೆಯುತ್ತಿವೆ, ಬಿಹುಗೆ ರಾಷ್ಟ್ರೀಯ ಗುರುತು ನೀಡಲಾಗುತ್ತದೆ, ನಮ್ಮ ಪ್ರಯತ್ನಗಳ ಮೂಲಕ ಚರೈಡಿಯೊ ಮೊಯಿದಮ್ ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ, ಅಸ್ಸಾಮಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗುತ್ತದೆ.

ಸಹೋದರ ಸಹೋದರಿಯರೆ,

ಬೋಡೊ ಭಾಷೆಗೆ ಅಸ್ಸಾಂನ ಸಹ ಅಧಿಕೃತ ಭಾಷೆಯ ಸ್ಥಾನಮಾನವನ್ನು ನಾವು ನೀಡಿದ್ದೇವೆ. ಬೋಡೊ ಭಾಷೆಯಲ್ಲೇ ಶಿಕ್ಷಣ ಬಲಪಡಿಸಲು ನಾವು ಪ್ರತ್ಯೇಕ ನಿರ್ದೇಶನಾಲಯವನ್ನು ಸಹ ಸ್ಥಾಪಿಸಿದ್ದೇವೆ. ನಮ್ಮ ಈ ಬದ್ಧತೆಯಿಂದಾಗಿ, ಬಾಥೌ ಧರ್ಮವು ಸಂಪೂರ್ಣ ಗೌರವದ ಮನ್ನಣೆ ಪಡೆದಿದೆ, ಬಾಥೌ ಹಬ್ಬ(ಪೂಜೆ)ಕ್ಕೆ ರಾಜ್ಯ ರಜಾದಿನ ಘೋಷಿಸಲಾಗಿದೆ. ಒಂದೆಡೆ, ಮಹಾನ್ ಯೋಧ ಲಚಿತ್ ಬೋರ್ಫುಕನ್ ಅವರ ಭವ್ಯ ಪ್ರತಿಮೆ ಸ್ಥಾಪಿಸಿದ್ದು ಬಿಜೆಪಿ ಸರ್ಕಾರ ಮಾತ್ರ. ಅದೇ ಸಮಯದಲ್ಲಿ, ಬೋಡೋಫಾ ಉಪೇಂದ್ರನಾಥ ಬ್ರಹ್ಮ ಅವರ ಪ್ರತಿಮೆಯನ್ನು ಸಹ ಅನಾವರಣಗೊಳಿಸಲಾಗಿದೆ. ಅದೇ ರೀತಿ, ಶ್ರೀಮಂತ ಶಂಕರದೇವ್ ಅವರ ಭಕ್ತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಪ್ರದಾಯ, ಜ್ಯೋತಿ ಪ್ರಸಾದ್ ಅಗರ್ವಾಲಾ ಜಿ ಅವರ ಕಲೆ ಮತ್ತು ಪ್ರಜ್ಞೆ - ಬಿಜೆಪಿ ಸರ್ಕಾರವು ಅಸ್ಸಾಂನ ಪ್ರತಿಯೊಂದು ಪರಂಪರೆ ಮತ್ತು ಪ್ರತಿಯೊಂದು ಹೆಮ್ಮೆಯ ಗೌರವವನ್ನು ತನ್ನ ಅದೃಷ್ಟವೆಂದು ಪರಿಗಣಿಸುತ್ತದೆ. ಕಾಕತಾಳೀಯವಾಗಿ, ಇಂದು ಜ್ಯೋತಿ ಪ್ರಸಾದ್ ಅಗರ್ವಾಲಾ ಜಿ ಅವರ ಪುಣ್ಯತಿಥಿಯೂ ಆಗಿದೆ. ನಾನು ಅವರಿಗೆ ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ.

 

ಸ್ನೇಹಿತರೆ,

ಇಂದು ನಾನು ಇಲ್ಲಿಗೆ ಬಂದಾಗ, ನನ್ನ ಮನಸ್ಸಿಗೆ ಬಹಳಷ್ಟು ವಿಷಯಗಳು ಬಂದವು! ನನ್ನ ಅಸ್ಸಾಂ ತುಂಬಾ ಮುಂದೆ ಸಾಗುತ್ತಿದೆ ಎಂದು ಯೋಚಿಸಿ ನಾನು ಭಾವುಕನಾಗುತ್ತಿದ್ದೇನೆ. ಪ್ರತಿದಿನ ರಕ್ತಪಾತವಾಗುತ್ತಿದ್ದ ಸಮಯ, ಇಂದು ಅಲ್ಲಿ ಸಂಸ್ಕೃತಿಯ ಅದ್ಭುತ ಬಣ್ಣಗಳನ್ನು ಅಲಂಕರಿಸಲಾಗುತ್ತಿದೆ! ಗುಂಡುಗಳ ಪ್ರತಿಧ್ವನಿ ಇದ್ದ ಸಮಯ, ಇಂದು ಖಾಮ್ ಮತ್ತು ಸಿಫುಂಗ್‌ನ ಮಧುರವಾದ ಧ್ವನಿ ಅನುರಣಿಸುತ್ತಿದೆ. ಮೊದಲು ಕರ್ಫ್ಯೂನಿಂದ ಮೌನವಿದ್ದ ಸ್ಥಳದಲ್ಲಿ, ಇಂದು ಸಂಗೀತದ ರಾಗಗಳು ಪ್ರತಿಧ್ವನಿಸುತ್ತಿವೆ. ಮೊದಲು ಅಶಾಂತಿ ಮತ್ತು ಅಸ್ಥಿರತೆ ಇದ್ದಲ್ಲಿ, ಇಂದು ಬಾಗುರುಂಬದ ಆಕರ್ಷಕ ಪ್ರದರ್ಶನಗಳು ನಡೆಯಲಿವೆ. ಇಂತಹ ಭವ್ಯ ಕಾರ್ಯಕ್ರಮವು ಕೇವಲ ಅಸ್ಸಾಂನ ಸಾಧನೆಯಲ್ಲ. ಈ ಸಾಧನೆ ಇಡೀ ಭಾರತಕ್ಕೆ ಸೇರಿದೆ. ಅಸ್ಸಾಂನಲ್ಲಿನ ಈ ಬದಲಾವಣೆಯ ಬಗ್ಗೆ ಪ್ರತಿಯೊಬ್ಬ ದೇಶವಾಸಿ ಹೆಮ್ಮೆಪಡುತ್ತಿದ್ದಾರೆ.

ಸ್ನೇಹಿತರೆ,

ನನ್ನ ಅಸ್ಸಾಮಿ ಜನರು, ನನ್ನ ಬೋಡೊ ಸಹೋದರ ಸಹೋದರಿಯರು ಇದಕ್ಕಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬ ತೃಪ್ತಿ ನನಗಿದೆ. ಡಬಲ್-ಎಂಜಿನ್ ಸರ್ಕಾರಕ್ಕೆ ನೀವು ನೀಡಿದ ಶಾಂತಿ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು, ನಿಮ್ಮ ಆಶೀರ್ವಾದದೊಂದಿಗೆ ನಾವು ಅದನ್ನು ಪೂರೈಸುವ ಮೂಲಕ ತೋರಿಸಿದ್ದೇವೆ. 2020ರ ಬೋಡೊ ಶಾಂತಿ ಒಪ್ಪಂದವು ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಅಂತ್ಯ ಹಾಡಿತು. ಈ ಒಪ್ಪಂದದ ನಂತರ, ನಂಬಿಕೆ ಮರಳಿತು ಮತ್ತು ಸಾವಿರಾರು ಯುವಕರು ಹಿಂಸಾಚಾರದ ಹಾದಿ ತೊರೆದು ಮುಖ್ಯವಾಹಿನಿಗೆ ಬಂದರು. ಒಪ್ಪಂದದ ನಂತರ, ಬೋಡೊ ಪ್ರದೇಶದಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾದವು.  ಶಾಂತಿ ಎಂಬುದು ಕಾನೂನು ಮತ್ತು ಸುವ್ಯವಸ್ಥೆಗೆ ಮಾತ್ರ ಸೀಮಿತವಾಗದೆ, ದೈನಂದಿನ ಜೀವನದ ಭಾಗವಾಯಿತು, ನಿಮ್ಮೆಲ್ಲರ ಪ್ರಯತ್ನಗಳು ಇದರಲ್ಲಿ ದೊಡ್ಡ ಪಾತ್ರ ವಹಿಸಿವೆ.

ಸ್ನೇಹಿತರೆ,

ಅಸ್ಸಾಂನ ಶಾಂತಿ, ಅಸ್ಸಾಂನ ಅಭಿವೃದ್ಧಿ ಮತ್ತು ಅಸ್ಸಾಂನ ಹೆಮ್ಮೆಯ ಕೇಂದ್ರದಲ್ಲಿ ಯಾರಾದರೂ ಇದ್ದರೆ, ಅದು ಅಸ್ಸಾಂನ ಯುವಕರು. ಅಸ್ಸಾಂನ ಯುವಕರು ಶಾಂತಿ ಸ್ಥಾಪನೆಗಾಗಿ ಆರಿಸಿಕೊಂಡ ಹಾದಿಯನ್ನು ನಾನು ಮತ್ತು ನಾವೆಲ್ಲರೂ ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯಬೇಕಾಗಿದೆ. ಶಾಂತಿ ಒಪ್ಪಂದದ ನಂತರ, ನಮ್ಮ ಸರ್ಕಾರ ಬೋಡೊಲ್ಯಾಂಡ್‌ನ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಸರ್ಕಾರವು ಪುನರ್ವಸತಿ ಪ್ರಕ್ರಿಯೆಯನ್ನು ವೇಗವಾಗಿ ಮುಂದುವರಿಸಿದೆ.  ಸಾವಿರಾರು ಯುವಕರಿಗೆ ಹೊಸ ಆರಂಭವನ್ನು ಮಾಡಲು ಕೋಟ್ಯಂತರ ರೂಪಾಯಿಗಳ ಆರ್ಥಿಕ ಸಹಾಯ  ನೀಡಲಾಗಿದೆ!

 

ಸ್ನೇಹಿತರೆ,

ಬಿಜೆಪಿ ಸರ್ಕಾರದ ಪ್ರಯತ್ನಗಳ ಫಲಿತಾಂಶ ಇಂದು ನಮ್ಮೆಲ್ಲರ ಮುಂದೆ ಇದೆ. ನನ್ನ ಪ್ರತಿಭಾನ್ವಿತ ಬೋಡೊ ಯುವಕರು ಇಂದು ಅಸ್ಸಾಂನ ಸಾಂಸ್ಕೃತಿಕ ರಾಯಭಾರಿಗಳಾಗುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೂ ಬೋಡೊ ಸಮಾಜದ ಪುತ್ರರು ಮತ್ತು ಪುತ್ರಿಯರು ವೈಭವವನ್ನು ತರುತ್ತಿದ್ದಾರೆ. ಇಂದು ಹೊಸ ಆತ್ಮವಿಶ್ವಾಸದಿಂದ, ಅವರು ಹೊಸ ಕನಸುಗಳನ್ನು ಬಹಿರಂಗವಾಗಿ ನೋಡುತ್ತಿದ್ದಾರೆ, ತಮ್ಮ ಕನಸುಗಳನ್ನು ನನಸಾಗಿಸುತ್ತಿದ್ದಾರೆ, ಅಸ್ಸಾಂನ ಅಭಿವೃದ್ಧಿಗೆ ವೇಗ ನೀಡುತ್ತಿದ್ದಾರೆ.

ಸ್ನೇಹಿತರೆ,

ನಾವು ಅಸ್ಸಾಂನ ಕಲೆ, ಸಂಸ್ಕೃತಿ ಮತ್ತು ಗುರುತನ್ನು ಗೌರವಿಸಿದಾಗ, ತೊಂದರೆಗೊಳಗಾಗುವ ಕೆಲವು ಜನರಿದ್ದಾರೆ. ಅಸ್ಸಾಂನ ಗೌರವ ಇಷ್ಟಪಡದ ಪಕ್ಷದ ಜನರು ಯಾರು ಎಂದು ನಿಮಗೆಲ್ಲರಿಗೂ ತಿಳಿದಿದೆಯೇ? ಉತ್ತರ ಒಂದೇ - ಕಾಂಗ್ರೆಸ್ ಪಕ್ಷ! ಭೂಪೇನ್ ಹಜಾರಿಕಾ ಜಿ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ ಪಕ್ಷ ಯಾವುದು? ಕಾಂಗ್ರೆಸ್ ಪಕ್ಷ! ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಯಾವ ಪಕ್ಷ ವಿರೋಧಿಸಿತು? ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪುತ್ರನಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಏಕೆ ಸ್ಥಾಪಿಸಲಾಗುತ್ತಿದೆ ಎಂಬುದನ್ನು ಅವರು ವಿರೋಧಿಸಿದರು.

ಸ್ನೇಹಿತರೆ,

ಇಂದಿಗೂ ನಾನು ಅಸ್ಸಾಂ ಸಂಸ್ಕೃತಿಗೆ ಸಂಬಂಧಿಸಿದ ಯಾವುದನ್ನಾದರೂ ಧರಿಸಿದಾಗ, ಗಮೋಸಾ, ಗಮೋಸಾ ನನ್ನೊಂದಿಗಿದ್ದರೆ, ಯಾವ ಪಕ್ಷವು ಅಸ್ಸಾಂ ಅನ್ನು ಅಣಕಿಸುತ್ತದೆ? ಅದೇ ಕಾಂಗ್ರೆಸ್ ಪಕ್ಷ.

 

ಸಹೋದರ ಸಹೋದರಿಯರೆ,

ಇಷ್ಟು ದಶಕಗಳಿಂದ ಅಸ್ಸಾಂ ಮತ್ತು ಬೋಡೋಲ್ಯಾಂಡ್ ಪ್ರದೇಶವು ಮುಖ್ಯವಾಹಿನಿಯಿಂದ ದೂರವಿತ್ತು, ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಅಸ್ಸಾಂನಲ್ಲಿ ಅಸ್ಥಿರತೆ ಸೃಷ್ಟಿಸಿತು, ಕಾಂಗ್ರೆಸ್ ಅಸ್ಸಾಂ ಅನ್ನು ಹಿಂಸಾಚಾರದ ಬೆಂಕಿಗೆ ತಳ್ಳಿತು, ಸ್ವಾತಂತ್ರ್ಯದ ನಂತರ ಅಸ್ಸಾಂ ಕೂಡ ಅನೇಕ ಸವಾಲುಗಳನ್ನು ಎದುರಿಸಿತು! ಆದರೆ ಕಾಂಗ್ರೆಸ್ ಏನು ಮಾಡಿತು? ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು, ಕಾಂಗ್ರೆಸ್ ಅವುಗಳ ಮೇಲೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡಿತು. ನಂಬಿಕೆಯ ಅಗತ್ಯವಿತ್ತು ಆದರೆ ಕಾಂಗ್ರೆಸ್ ವಿಭಜನೆಯನ್ನು ಹೆಚ್ಚಿಸಿತು. ಸಂಭಾಷಣೆಯ ಅಗತ್ಯವಿತ್ತು, ಆದರೆ ಕಾಂಗ್ರೆಸ್ ನಿರ್ಲಕ್ಷಿಸಿತು ಮತ್ತು ಸಂಭಾಷಣೆಯ ಹಾದಿಗಳನ್ನು ಮುಚ್ಚಿತು! ವಿಶೇಷವಾಗಿ, ಬೋಡೊಲ್ಯಾಂಡ್ ಪ್ರದೇಶದ ಧ್ವನಿಯನ್ನು, ಬೋಡೊಲ್ಯಾಂಡ್ ಜನರನ್ನು ಎಂದಿಗೂ ಸರಿಯಾಗಿ ಕೇಳಲಿಲ್ಲ. ತನ್ನ ಜನರ ಗಾಯಗಳನ್ನು ಗುಣಪಡಿಸುವ ಅಗತ್ಯವಿದ್ದಾಗ, ಅಸ್ಸಾಂ ಜನರಿಗೆ ಸೇವೆ ಸಲ್ಲಿಸುವ ಅಗತ್ಯವಿದ್ದಾಗ, ಕಾಂಗ್ರೆಸ್ ಆಗ ಅಸ್ಸಾಂನ ಬಾಗಿಲುಗಳನ್ನು ತೆರೆಯುವ ಮೂಲಕ ಒಳನುಸುಳುಕೋರರನ್ನು ಸ್ವಾಗತಿಸುವಲ್ಲಿ ನಿರತವಾಗಿತ್ತು.

ಸ್ನೇಹಿತರೆ,

ಕಾಂಗ್ರೆಸ್ ಪಕ್ಷ ಅಸ್ಸಾಂನ ಜನರನ್ನು ತನ್ನವರು ಎಂದು ಪರಿಗಣಿಸಲೇ ಇಲ್ಲ. ಕಾಂಗ್ರೆಸ್ ಜನರು ವಿದೇಶಿ ನುಸುಳುಕೋರರನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಇಲ್ಲಿಗೆ ಬಂದು ಕಾಂಗ್ರೆಸ್‌ನ ಕಟ್ಟಾ ಮತ ಬ್ಯಾಂಕ್ ಆಗುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಆಳ್ವಿಕೆಯಲ್ಲಿ, ವಿದೇಶಿ ನುಸುಳುಕೋರರು ಬರುತ್ತಲೇ ಇದ್ದರು, ಅಸ್ಸಾಂನ ಲಕ್ಷಾಂತರ ಬಿಘಾ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಲೇ ಇದ್ದರು, ಕಾಂಗ್ರೆಸ್ ಸರ್ಕಾರ ಅವರಿಗೆ ಸಹಾಯ ಮಾಡುತ್ತಲೇ ಇತ್ತು. ಇಂದು ಹಿಮಂತ ಜಿ ಅವರ ಸರ್ಕಾರವು ಅಸ್ಸಾಂನ ಜನರಿಗೆ ಸೇರಿದ ಲಕ್ಷಾಂತರ ಬಿಘಾ ಭೂಮಿಯನ್ನು ನುಸುಳುಕೋರರಿಂದ ಮುಕ್ತಗೊಳಿಸುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.

ಸ್ನೇಹಿತರೆ,

ಕಾಂಗ್ರೆಸ್ ಯಾವಾಗಲೂ ಅಸ್ಸಾಂ ಮತ್ತು ಇಡೀ ಈಶಾನ್ಯವನ್ನು ನಿರ್ಲಕ್ಷ್ಯದ ಕಣ್ಣಿನಿಂದ ನೋಡಿದೆ. ಈಶಾನ್ಯದ ಅಭಿವೃದ್ಧಿಯೇ ಅಗತ್ಯವೆಂದು ಪರಿಗಣಿಸದ ಕಾಂಗ್ರೆಸ್ ಜನರಿಗೆ, ಅವರ ಗಮನ ಅಸ್ಸಾಂನ ಅಭಿವೃದ್ಧಿಯತ್ತ ಹೇಗೆ ತಾನೇ ಹೋಗಲು ಸಾಧ್ಯ? ಬೋಡೊ ಪ್ರದೇಶದ ಭರವಸೆಗಳು ಮತ್ತು ನಿರೀಕ್ಷೆಗಳ ಬಗ್ಗೆ ಯೋಚಿಸಲು ಅವರಿಗೆ ಎಲ್ಲಿ ಬಿಡುವು ಸಿಗುತ್ತಿತ್ತು? ಅದಕ್ಕಾಗಿಯೇ, ಕಾಂಗ್ರೆಸ್ ಸರ್ಕಾರಗಳು ಉದ್ದೇಶಪೂರ್ವಕವಾಗಿ ಈ ಪ್ರದೇಶವನ್ನು ಸಮಸ್ಯೆಗಳಿಗೆ ತಳ್ಳಿದವು.

 

ಸಹೋದರ ಸಹೋದರಿಯರೆ,

ನಮ್ಮ ಡಬಲ್-ಎಂಜಿನ್ ಸರ್ಕಾರವು ಕಾಂಗ್ರೆಸ್‌ನ ಆ ಪಾಪಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದೆ. ಇಂದು ಇಲ್ಲಿ ಅಭಿವೃದ್ಧಿ ನಡೆಯುತ್ತಿರುವ ವೇಗ ನಿಮ್ಮ ಮುಂದಿದೆ. ನೋಡಿ, ನಾವು ಬೋಡೊ-ಕಚಾರಿ ಕಲ್ಯಾಣ ಸ್ವಾಯತ್ತ ಮಂಡಳಿ ರಚಿಸಿದ್ದೇವೆ. ಬೋಡೊಲ್ಯಾಂಡ್ ಪ್ರದೇಶದ ಉತ್ತಮ ಅಭಿವೃದ್ಧಿಗಾಗಿ 1,500 ಕೋಟಿ ರೂಪಾಯಿಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡಲಾಗಿದೆ. ಕೊಕ್ರಝಾರ್‌ನಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಆರಂಭಿಸಲಾಗಿದೆ. ತಮುಲ್ಪುರದಲ್ಲಿ ವೈದ್ಯಕೀಯ ಕಾಲೇಜಿನ ನಿರ್ಮಾಣವೂ ವೇಗ ಪಡೆದಿದೆ. ನರ್ಸಿಂಗ್ ಕಾಲೇಜುಗಳು ಮತ್ತು ಪ್ಯಾರಾ-ಮೆಡಿಕಲ್ ಸಂಸ್ಥೆಗಳ ಮೂಲಕ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಗೋಬರ್ಧನ, ಪರ್ಬತ್‌ಜೋರಾ ಮತ್ತು ಹೊರಿಂಗಿಯಂತಹ ಪ್ರದೇಶಗಳಲ್ಲಿ ಪಾಲಿಟೆಕ್ನಿಕ್ ಮತ್ತು ತರಬೇತಿ ಸಂಸ್ಥೆಗಳನ್ನು ಸಹ ನಿರ್ಮಿಸಲಾಗಿದೆ.

ಸ್ನೇಹಿತರೆ,

ಬೋಡೊಲ್ಯಾಂಡ್‌ಗಾಗಿ ಪ್ರತ್ಯೇಕ ಕಲ್ಯಾಣ ಇಲಾಖೆ ಮತ್ತು ಬೋಡೊಲ್ಯಾಂಡ್ ಆಡಳಿತ ಸಿಬ್ಬಂದಿ ಕಾಲೇಜನ್ನು ಸಹ ಸ್ಥಾಪಿಸಲಾಗಿದೆ. ಇದು ಬೋಡೊ ಸಮುದಾಯದ ಕಲ್ಯಾಣಕ್ಕಾಗಿ ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಸಹಾಯ ಮಾಡುತ್ತಿದೆ.

ಸ್ನೇಹಿತರೆ,

ಬಿಜೆಪಿ ಸರ್ಕಾರವು ಹೃದಯಗಳ ಅಂತರ ತೆಗೆದುಹಾಕಿದೆ, ಅಸ್ಸಾಂ ಮತ್ತು ದೆಹಲಿ ನಡುವಿನ ಅಂತರ ಕೊನೆಗೊಳಿಸಿದೆ, ಉತ್ತಮ ಮೂಲಸೌಕರ್ಯಗಳ ಮೂಲಕ, ಅಸ್ಸಾಂನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಇರುವ ಅಂತರವನ್ನು ಕಡಿಮೆ ಮಾಡುತ್ತಿದೆ. ಹಿಂದೆ ತಲುಪಲು ಕಷ್ಟಕರವಾಗಿದ್ದ ಪ್ರದೇಶಗಳಲ್ಲಿ ಇಂದು ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುವಂತೆ ಅಂತಹ ರಸ್ತೆಗಳನ್ನು ಮಾಡಲಾಗುತ್ತಿದೆ. ಕೊಕ್ರಜಾರ್ ಅನ್ನು ಭೂತಾನ್ ಗಡಿಗೆ ಸಂಪರ್ಕಿಸುವ ಬಿಷ್ಮುರಿ-ಸರಲ್ಪಾರ ರಸ್ತೆ ಯೋಜನೆಗೆ ಕೋಟ್ಯಂತರ ರೂಪಾಯಿ ವ್ಯವಸ್ಥೆ ಮಾಡಲಾಗಿದೆ. ಕೊಕ್ರಜಾರ್‌ನಿಂದ ಭೂತಾನ್‌ನ ಗೆಲೆಫುಗೆ ಪ್ರಸ್ತಾವಿತ ರೈಲು ಯೋಜನೆಯು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ನಾವು ಇದನ್ನು ವಿಶೇಷ ರೈಲ್ವೆ ಯೋಜನೆಯೆಂದು ಘೋಷಿಸಿದ್ದೇವೆ. ನಾವು ಇದನ್ನು ಆಕ್ಟ್ ಈಸ್ಟ್ ನೀತಿಯ ಪ್ರಮುಖ ಭಾಗವನ್ನಾಗಿ ಮಾಡಿದ್ದೇವೆ. ಅದು ಪೂರ್ಣಗೊಂಡ ನಂತರ, ವ್ಯಾಪಾರ ಮತ್ತು ಪ್ರವಾಸೋದ್ಯಮ ಎರಡಕ್ಕೂ ಉತ್ತೇಜನ ಸಿಗುತ್ತದೆ.

ಸ್ನೇಹಿತರೆ,

ಒಂದು ಸಮಾಜವು ತನ್ನ ಬೇರುಗಳೊಂದಿಗೆ ಸಂಪರ್ಕದಲ್ಲಿರುವಾಗ, ಸಂಭಾಷಣೆ ಮತ್ತು ವಿಶ್ವಾಸ ಬಲವಾಗಿದ್ದಾಗ ಮತ್ತು ಸಮಾನ ಅವಕಾಶಗಳು ಪ್ರತಿಯೊಂದು ವಲಯವನ್ನು ತಲುಪಿದಾಗ, ಸಕಾರಾತ್ಮಕ ಬದಲಾವಣೆಗಳು ಗೋಚರಿಸುತ್ತವೆ. ಅಸ್ಸಾಂ ಮತ್ತು ಬೋಡೊಲ್ಯಾಂಡ್‌ನ ಪ್ರಯಾಣವು ಆ ದಿಕ್ಕಿನಲ್ಲಿ ಸಾಗುತ್ತಿದೆ. ಅಸ್ಸಾಂನ ಆತ್ಮವಿಶ್ವಾಸ, ಅಸ್ಸಾಂನ ಸಾಮರ್ಥ್ಯ ಮತ್ತು ಅಸ್ಸಾಂನ ಪ್ರಗತಿಯಿಂದ ಭಾರತದ ಬೆಳವಣಿಗೆಯ ಕಥೆ ಹೊಸ ಬಲ ಪಡೆಯುತ್ತಿದೆ. ಇಂದು ಅಸ್ಸಾಂ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ತನ್ನ ಗುರುತನ್ನು ಮೂಡಿಸುತ್ತಿದೆ. ಅಸ್ಸಾಂನ ಆರ್ಥಿಕತೆಯು ವೇಗ ಪಡೆಯುತ್ತಿದೆ. ಈ ಬೆಳವಣಿಗೆಯಲ್ಲಿ, ಈ ಬದಲಾವಣೆಯಲ್ಲಿ, ಬೋಡೊಲ್ಯಾಂಡ್ ಮತ್ತು ಇಲ್ಲಿನ ಜನರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India turns the tables on China: The great supply chain flip begins

Media Coverage

India turns the tables on China: The great supply chain flip begins
NM on the go

Nm on the go

Always be the first to hear from the PM. Get the App Now!
...
Prime Minister expresses grief over mishap in Coimbatore
April 17, 2026

The Prime Minister, Shri Narendra Modi, has expressed deep anguish over the mishap in Coimbatore, Tamil Nadu.

Shri Modi said that he is distressed to hear about the incident and extended his heartfelt condolences to those who have lost their loved ones. He also prayed for the speedy recovery of those injured in the mishap.

The Prime Minister’s Office posted on X;

“Distressed to hear about the mishap in Coimbatore, Tamil Nadu. I extend my heartfelt condolences to those who have lost their loved ones in the mishap. Prayers for the speedy recovery of those injured: PM @narendramodi”