ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಬಂದವರು, ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದಾರೆ: ಪ್ರಧಾನಮಂತ್ರಿ
ಸೇವೆ, ಸಮರ್ಪಣೆ ಮತ್ತು ಸಂಯಮ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿವೆ: ಪ್ರಧಾನಮಂತ್ರಿ

ಇಂದು ಮೊದಲ ಬಾರಿಗೆ ರಾಜ್ಯಸಭೆಯ ಅಧ್ಯಕ್ಷತೆ ವಹಿಸಿದ ಉಪರಾಷ್ಟ್ರಪತಿ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು.  ಈ ದಿನವು ರಾಜ್ಯಸಭೆಯ ಎಲ್ಲಾ ಗೌರವಾನ್ವಿತ ಸದಸ್ಯರ ಪಾಲಿಗೆ ಹೆಮ್ಮೆಯ ಕ್ಷಣ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಸಭಾಧ್ಯಕ್ಷರಿಗೆ ಆತ್ಮೀಯ ಸ್ವಾಗತ ಕೋರಿದ ಶ್ರೀ ಮೋದಿ, "ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ನನ್ನ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಈ ಮೇಲ್ಮನೆಯ ಎಲ್ಲಾ ಗೌರವಾನ್ವಿತ ಸದಸ್ಯರು ಸದಾ ಈ ಗೌರವಾನ್ವಿತ ಸಂಸ್ಥೆಯ ಘನತೆಯನ್ನು ಉಲ್ಲೇಖಿಸುತ್ತಾರೆ ಮತ್ತು ನಿಮ್ಮ ಘನತೆಯನ್ನು ಕಾಪಾಡುವ ಬಗ್ಗೆಯೂ ಸದಾ ಎಚ್ಚರಿಕೆಯಿಂದ ಇರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ನಿಮಗೆ ನನ್ನ ದೃಢವಾದ ಭರವಸೆಯಾಗಿದೆ.

ಮಹತ್ವದ ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು ಚಳಿಗಾಲದ ಅಧಿವೇಶನವು ಸಜ್ಜಾಗಿದೆ. ಇಂತಹ ಸಮಯದಲ್ಲಿ ಸಭಾಧ್ಯಕ್ಷರ ನಾಯಕತ್ವವು ರಾಜ್ಯಸಭೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರೈತ ಕುಟುಂಬದಿಂದ ಬಂದವರಾದ ಸಭಾಧ್ಯಕ್ಷ ರಾಧಾಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. "ಸಮಾಜ ಸೇವೆಯು ಸದಾ ಅವರ ಅಸ್ಮಿತೆಯಾಗಿದೆ. ಸೇವಾ ಮನೋಭಾವವು ಅವರ ಜೀವನದ ಕೆಲಸಗಳ ತಿರುಳಾಗಿತ್ತು, ಅಲ್ಲಿ ರಾಜಕೀಯ ಕೇವಲ ಒಂದು ಸಣ್ಣ ಭಾಗವಾಗಿತ್ತು, " ಎಂದು ಶ್ರೀ ಮೋದಿ ಹೇಳಿದರು. ಸಾರ್ವಜನಿಕ ಕಲ್ಯಾಣಕ್ಕಾಗಿ ರಾಧಾಕೃಷ್ಣನ್‌ ಅವರ ಸುದೀರ್ಘ ಬದ್ಧತೆಯು ಸಮಾಜ ಸೇವೆಯನ್ನು ಗೌರವಿಸುವಂತಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಾರ್ವಜನಿಕ ವಲಯದಲ್ಲಿ ರಾಧಾಕೃಷ್ಣನ್‌ ಅವರ ಸುದೀರ್ಘ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ʻನಾರು ಮಂಡಳಿʼಯನ್ನು ಐತಿಹಾಸಿಕವಾಗಿ ಉನ್ನತ ಕಾರ್ಯಕ್ಷಮತೆಯ ಸಂಸ್ಥೆಯಾಗಿ ಪರಿವರ್ತಿಸುವಲ್ಲಿ ಅವರ ಸಾಧನೆಗಳನ್ನು ತಿಳಿಸಿದರು. ಜಾರ್ಖಂಡ್, ಮಹಾರಾಷ್ಟ್ರ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ರಾಜ್ಯಪಾಲರಾಗಿ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿ ಅವರ ಸಮರ್ಪಿತ ಸೇವೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಜಾರ್ಖಂಡ್‌ನ ಬುಡಕಟ್ಟು ಸಮುದಾಯಗಳ ಜೊತೆ ರಾಧಾಕೃಷ್ಣನ್‌ ಅವರ ಆಳವಾದ ಒಡನಾಟವನ್ನು ಪ್ರಧಾನಮಂತ್ರಿ ಅವರು ವಿಶೇಷವಾಗಿ ಶ್ಲಾಘಿಸಿದರು. ರಾಧಾಕೃಷ್ಣನ್‌ ಅವರು ಆಗಾಗ್ಗೆ ದೂರದ ಹಳ್ಳಿಗಳಿಗೆ ಪ್ರಯಾಣಿಸುತ್ತಿದ್ದರು ಮತ್ತು ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಕುಗ್ರಾಮಗಳಲ್ಲಿ ರಾತ್ರಿ ತಂಗುತ್ತಿದ್ದರು ಎಂದು ಮಾಹಿತಿ ನೀಡಿದರು. "ರಾಜ್ಯಪಾಲರ ಹುದ್ದೆಯಲ್ಲಿದ್ದಾಗ ನಿಮ್ಮ ಸೇವಾ ಮನೋಭಾವ ಮತ್ತಷ್ಟು ಬೆಳೆಯಿತು," ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. 

ರಾಧಾಕೃಷ್ಣನ್‌ ಅವರೊಂದಿಗಿನ ತಮ್ಮ ಹಲವು ವರ್ಷಗಳ ಒಡನಾಟದಿಂದ ಮೂಡಿದ ಕೆಲವೊಂದು ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಶ್ರೀ ರಾಧಾಕೃಷ್ಣನ್ ಅವರು ಶಿಷ್ಟಾಚಾರದ ನಿರ್ಬಂಧಗಳನ್ನು ಮೀರುವ ಮೂಲಕ ತಮ್ಮನ್ನು ವಿಶಿಷ್ಟವಾಗಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು. "ಸಾರ್ವಜನಿಕ ಜೀವನದಲ್ಲಿ, ಶಿಷ್ಟಾಚಾರವನ್ನು ಮೀರಿ ಬದುಕಲು ವಿಶೇಷ ಶಕ್ತಿ ಬೇಕು, ಮತ್ತು ನಾವು ಸದಾ ನಿಮ್ಮಲ್ಲಿ ಆ ಶಕ್ತಿಯನ್ನು ನೋಡಿದ್ದೇವೆ," ಎಂದು ಶ್ರೀ ಮೋದಿ ತಿಳಿಸಿದರು. ಸಭಾಧ್ಯಕ್ಷರಾದ ರಾಧಾಕೃಷ್ಣನ್ ಅವರು ತನ್ನದೇ ಬಲಿಷ್ಠ ಹೆಗ್ಗುರುತನ್ನು ಹೊಂದಿರುವ ಸ್ಥಳವಾದ ʻಡಾಲರ್ ಸಿಟಿʼಯಲ್ಲಿ ಜನಿಸಿದರಾದರೂ, ಅವರು ʻಡಾಲರ್ ಸಿಟಿʼಯಲ್ಲಿನ ದಮನಿತರು, ಸಮಾಜದ ಅಂಚಿನಲ್ಲಿರುವವರು ಅಥವಾ ಹಿಂದುಳಿದ ಸಮುದಾಯಗಳಿಗೆ ಸೇರಿದವರ ಕಲ್ಯಾಣದ ಬಗ್ಗೆ ಗಮನ ಹರಿಸಿದ್ದರು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಬಾಲ್ಯದಲ್ಲಿ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರು ಅವಿನಾಶಿ ದೇವಾಲಯದ ಕೆರೆಯಲ್ಲಿ ಮುಳುಗಿ ಸಾವಿನ ದವಡೆಯಿಂದ ಪಾರಾಗಿದ್ದರು ಎಂದು ಪ್ರಧಾನಮಂತ್ರಿ ಮಾಹಿತಿ ಹಂಚಿಕೊಂಡರು. ರಾಧಾಕೃಷ್ಣನ್‌ ಅವರು ಬದುಕುಳಿದಿದ್ದನ್ನು ಸಭಾಧ್ಯಕ್ಷರು ಮತ್ತು ಅವರ ಕುಟುಂಬವು ಸದಾ ದೈವಿಕ ಅನುಗ್ರಹದ ಎಂದೇ ಪರಿಗಣಿಸುತ್ತಾರೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಇಂಥದ್ದೇ ಮತ್ತೊಂದು ಆಘಾತಕಾರಿ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರ ನಿಗದಿತ ಯಾತ್ರೆಗೆ ಕೊಂಚ ಮೊದಲು ಕೊಯಮತ್ತೂರಿನಲ್ಲಿ ಸಂಭವಿಸಿದ ವಿಧ್ವಂಸಕಾರಿ ಬಾಂಬ್ ಸ್ಫೋಟವನ್ನು ಸ್ಮರಿಸಿದರು. ಈ ಸ್ಫೋಟದಲ್ಲಿ ಸುಮಾರು 60 ರಿಂದ 70 ಜನರು ಸಾವನ್ನಪ್ಪಿದರು, ಮತ್ತು ಸಭಾಧ್ಯಕ್ಷರು ಸ್ವಲ್ಪದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಪ್ರಧಾನಮಂತ್ರಿ ಮಾಹಿತಿ ಹಂಚಿಕೊಂಡರು.

"ದೈವಿಕ ಅನುಗ್ರಹದ ಸಂಕೇತಗಳು ಎಂದು ಅವರು ವ್ಯಾಖ್ಯಾನಿಸುವ ಈ ಘಟನೆಗಳು, ಸಮಾಜದ ಸೇವೆಗೆ ತಮ್ಮನ್ನು ಹೆಚ್ಚು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ರಾಧಾಕೃಷ್ಣನ್‌ ಅವರ ಸಂಕಲ್ಪವನ್ನು ಬಲಪಡಿಸಿವೆ" ಎಂದು ಶ್ರೀ ಮೋದಿ ಹೇಳಿದರು. ಅಂತಹ ಜೀವನದ ಅನುಭವಗಳನ್ನು ಹೆಚ್ಚಿನ ಸಕಾರಾತ್ಮಕತೆ ಮತ್ತು ಬದ್ಧತೆಯಾಗಿ ಪರಿವರ್ತಿಸುವುದು ಸಭಾಧ್ಯಕ್ಷರ ವಿಶೇಷ ಗುಣವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸಭಾಧ್ಯಕ್ಷ ರಾಧಾಕೃಷ್ಣನ್ ಅವರು ತಮ್ಮ ಮೊದಲ ಕಾಶಿ ಭೇಟಿಯ ವೇಳೆ ಗಂಗಾ ಮಾತೆಯ ಆಶೀರ್ವಾದದಿಂದ ಬಹಳವಾಗಿ ಪ್ರೇರಿತರಾಗಿದ್ದರು ಮತ್ತು ಮಾಂಸಾಹಾರಿ ಆಹಾರವನ್ನು ತ್ಯಜಿಸುವ ಸಂಕಲ್ಪವನ್ನು ಮಾಡಿದ್ದರು ಎಂದು ಪ್ರಧಾನಮಂತ್ರಿ ಮಾಹಿತಿ ಹಂಚಿಕೊಂಡರು. ಅವರ ಈ ನಿರ್ಧಾರವು ಆಹಾರದ ಆಯ್ಕೆಗಳ ಬಗ್ಗೆ ಯಾವುದೇ ನಿರ್ದಿಷ್ಟತೆಯನ್ನು ಮೀರಿ ರಾಧಾಕೃಷ್ಣನ್‌ ಅವರ ಆಧ್ಯಾತ್ಮಿಕ ಸಂವೇದನೆ ಮತ್ತು ಅವರು ಅನುಭವಿಸಿದ ಆಂತರಿಕ ಸ್ಫೂರ್ತಿಯನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದರು. "ನಿಮ್ಮ ನಾಯಕತ್ವದ ಗುಣಗಳು ನಿಮ್ಮ ವಿದ್ಯಾರ್ಥಿ ಜೀವನದಿಂದಲೂ ಸ್ಪಷ್ಟವಾಗಿ ಗೋಚರಿಸುತ್ತವೆ. ಇಂದು, ರಾಷ್ಟ್ರೀಯ ನಾಯಕತ್ವದ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಲು ನೀವು ಇಲ್ಲಿದ್ದೀರಿ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ", ಎಂದು ಶ್ರೀ ಮೋದಿ ಉದ್ಗರಿಸಿದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ತಮಗಿದ್ದ ಸೀಮಿತ ಸಂಪನ್ಮೂಲಗಳ ನಡುವೆಯೂ ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ ಸಭಾಧ್ಯಕ್ಷರ ಕೆಚ್ಚೆದೆಯ ನಿಲುವನ್ನು ಶ್ರೀ ಮೋದಿ ಸ್ಮರಿಸಿದರು. ಆ ಸಮಯದಲ್ಲಿ ರಾಧಾಕೃಷ್ಣನ್‌ ಅವರು ತೋರಿದ ಅಚಲ ಮನೋಭಾವ ಮತ್ತು ಬದ್ಧತೆಯನ್ನು ಪ್ರದರ್ಶನದ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. "ಪ್ರಜಾಪ್ರಭುತ್ವಕ್ಕಾಗಿ ನಿಮ್ಮ ಹೋರಾಟದಲ್ಲಿ ವಿವಿಧ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನವೂ ಸೇರಿದೆ. ನೀವು ಜನರಿಗೆ ಸ್ಫೂರ್ತಿ ನೀಡಿದ ರೀತಿಯು ಎಲ್ಲಾ ಪ್ರಜಾಪ್ರಭುತ್ವ ಉತ್ಸಾಹಿಗಳಿಗೆ ಪ್ರೇರಣೆಯ ಸೆಲೆಯಾಗಿ ಉಳಿದಿದೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ," ಎಂದು ಶ್ರೀ ಮೋದಿ ಹೇಳಿದರು.

ರಾಧಾಕೃಷ್ಣನ್‌ ಅವರ ಸಂಘಟನಾತ್ಮಕ ಚಾಣಾಕ್ಷತೆಯನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ತಮಗೆ ವಹಿಸಲಾದ ಪ್ರತಿಯೊಂದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಕ್ಕಾಗಿ, ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ, ಏಕತೆಯನ್ನು ಪೋಷಿಸಿದ್ದಕ್ಕಾಗಿ ಮತ್ತು ಯುವ ನಾಯಕರಿಗೆ ಅವಕಾಶಗಳನ್ನು ಒದಗಿಸಿದ್ದಕ್ಕಾಗಿ ಸಭಾಧ್ಯಕ್ಷರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. "ಕೊಯಮತ್ತೂರಿನ ಜನರು ನಿಮ್ಮನ್ನು ಸಂಸತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ ಮತ್ತು ಸದನದಲ್ಲಿಯೂ ಸಹ, ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಅಗತ್ಯಗಳನ್ನು ನಿರಂತರವಾಗಿ ಉಲ್ಲೇಖಿಸಿದ್ದೀರಿ. ಸಾರ್ವಜನಿಕರು ಮತ್ತು ಸಂಸತ್ತಿನ ಮುಂದೆ ಅವುಗಳಿಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಿದ್ದೀರಿ," ಎಂದು ಶ್ರೀ ಮೋದಿ ಹೇಳಿದರು.

ರಾಧಾಕೃಷ್ಣನ್ ಅವರಿಗೆ ಸಂಸದರಾಗಿ, ರಾಜ್ಯಸಭೆಯ ಸಭಾಧ್ಯಕ್ಷರಾಗಿ ಮತ್ತು ಈಗ ಉಪರಾಷ್ಟ್ರಪತಿಯಾಗಿ ಇರುವ ಅಪಾರ ಅನುಭವವು ಸದನ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶಕ ಪ್ರೇರಣೆಯಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jumbo Indian contingent comprising 768 athletes, support staff and officials for Asian Games

Media Coverage

Jumbo Indian contingent comprising 768 athletes, support staff and officials for Asian Games
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಸೆಪ್ಟೆಂಬರ್ 2026
September 04, 2026

Make in India, Power India, Play for India: Multi-Sector Momentum Under PM Modi’s Leadership