ನನ್ನ ಪ್ರಿಯ ದೇಶವಾಸಿಗಳೇ,

ನಮಸ್ಕಾರ!

ನವೆಂಬರ್ 26 ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ದಿನ. 1949ರ ಇದೇ ದಿನದಂದು, ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಇದು ರಾಷ್ಟ್ರದ ಪ್ರಗತಿಗೆ ಸ್ಪಷ್ಟತೆ ಮತ್ತು ದೃಢತೆಯೊಂದಿಗೆ ಮಾರ್ಗದರ್ಶನ ನೀಡುತ್ತಿರುವ ಒಂದು ಪವಿತ್ರ ಗ್ರಂಥವಾಗಿದೆ. ಆದುದರಿಂದಲೇ, ಸುಮಾರು ಒಂದು ದಶಕದ ಹಿಂದೆ, ಅಂದರೆ 2015ರಲ್ಲಿ, ಎನ್ಡಿಎ ಸರ್ಕಾರವು ನವೆಂಬರ್ 26 ಅನ್ನು 'ಸಂವಿಧಾನ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿತು.

ನನ್ನಂತಹ ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ವ್ಯಕ್ತಿ, ಕಳೆದ 24 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು ನಮ್ಮ ಸಂವಿಧಾನದ ಶಕ್ತಿಯಿಂದಲೇ. 2014ರಲ್ಲಿ ನಾನು ಮೊದಲ ಬಾರಿಗೆ ಸಂಸತ್ತಿಗೆ ಬಂದಾಗ, ಪ್ರಜಾಪ್ರಭುತ್ವದ ಅತಿದೊಡ್ಡ ದೇಗುಲದ ಮೆಟ್ಟಿಲುಗಳನ್ನು ಮುಟ್ಟಿ, ಶಿರಬಾಗಿ ನಮಸ್ಕರಿಸಿದ ಆ ಕ್ಷಣಗಳು ನನಗಿನ್ನೂ ನೆನಪಿವೆ. ಮತ್ತೆ 2019ರಲ್ಲಿ, ಚುನಾವಣಾ ಫಲಿತಾಂಶಗಳ ನಂತರ, ನಾನು ಸಂವಿಧಾನ ಸದನದ ಸೆಂಟ್ರಲ್ ಹಾಲ್ ಪ್ರವೇಶಿಸಿದಾಗ, ಸಂವಿಧಾನಕ್ಕೆ ತಲೆಬಾಗಿ, ಅಪಾರ ಗೌರವದ ಸಂಕೇತವಾಗಿ ಅದನ್ನು ನನ್ನ ಹಣೆಗೆ ಒತ್ತಿಕೊಂಡು ನಮಸ್ಕರಿಸಿದೆ. ಈ ಸಂವಿಧಾನವು ನನ್ನಂತಹ ಹಲವಾರು ಜನರಿಗೆ ಕನಸು ಕಾಣುವ ಶಕ್ತಿಯನ್ನು ಮತ್ತು ಅದನ್ನು ನನಸಾಗಿಸಲು ಶ್ರಮಿಸುವ ಬಲ ನೀಡಿದೆ.

ಸಂವಿಧಾನ ದಿನದಂದು, ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನ ರಚನಾ ಸಭೆಯಲ್ಲಿದ್ದು, ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಎಲ್ಲ ಸ್ಫೂರ್ತಿದಾಯಕ ಸದಸ್ಯರನ್ನು ನಾವು ಸ್ಮರಿಸುತ್ತೇವೆ. ಕರಡು ಸಮಿತಿಯ ಅಧ್ಯಕ್ಷತೆ ವಹಿಸಿ, ತಮ್ಮ ಅದ್ಭುತ ದೂರದೃಷ್ಟಿಯಿಂದ ಮಾರ್ಗದರ್ಶನ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಶ್ರಮವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಸಂವಿಧಾನ ರಚನಾ ಸಭೆಯಲ್ಲಿದ್ದ ಹಲವಾರು ಗಣ್ಯ ಮಹಿಳಾ ಸದಸ್ಯರು ಸಹ, ತಮ್ಮ ವಿಚಾರಪೂರ್ಣ ಸಲಹೆಗಳು ಮತ್ತು ಭವಿಷ್ಯದ ದೃಷ್ಟಿಕೋನಗಳ ಮೂಲಕ ಸಂವಿಧಾನವನ್ನು ಶ್ರೀಮಂತಗೊಳಿಸಿದ್ದಾರೆ.

ನನ್ನ ಮನಸ್ಸು 2010ನೇ ವರ್ಷವನ್ನು ನೆನಪಿಸಿಕೊಳ್ಳುತ್ತಿದೆ. ಅದು ಭಾರತದ ಸಂವಿಧಾನವು 60 ವರ್ಷಗಳನ್ನು ಪೂರೈಸಿದ ಸಮಯ. ವಿಷಾದದ ಸಂಗತಿಯೆಂದರೆ, ಆ ಸಂದರ್ಭಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಆದರೆ, ಸಂವಿಧಾನದ ಬಗೆಗಿನ ನಮ್ಮ ಸಾಮೂಹಿಕ ಕೃತಜ್ಞತೆ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಲು, ನಾವು ಗುಜರಾತ್ ನಲ್ಲಿ 'ಸಂವಿಧಾನ ಗೌರವ ಯಾತ್ರೆ'ಯನ್ನು ಆಯೋಜಿಸಿದ್ದೆವು. ನಮ್ಮ ಸಂವಿಧಾನವನ್ನು ಆನೆಯ ಮೇಲೆ ಇರಿಸಿ ಮೆರವಣಿಗೆ ಮಾಡಲಾಯಿತು ಮತ್ತು ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ನಾನೂ ಕೂಡ ಆ ಮೆರವಣಿಗೆಯಲ್ಲಿ ಭಾಗವಹಿಸುವ ಭಾಗ್ಯ ಪಡೆದಿದ್ದೆ.

ಸಂವಿಧಾನಕ್ಕೆ 75 ವರ್ಷಗಳು ತುಂಬಿದಾಗ, ಇದು ಭಾರತದ ಜನತೆಯ ಪಾಲಿಗೆ ಒಂದು ಅಭೂತಪೂರ್ವ ಮೈಲಿಗಲ್ಲಾಗಬೇಕೆಂದು ನಾವು ಸಂಕಲ್ಪ ಮಾಡಿದ್ದೆವು. ಈ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ನಡೆಸಿ, ರಾಷ್ಟ್ರಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸೌಭಾಗ್ಯ ನಮಗೆ ಒಲಿಯಿತು. ಈ ಕಾರ್ಯಕ್ರಮಗಳು ದಾಖಲೆಯ ಮಟ್ಟದ ಸಾರ್ವಜನಿಕರ ಭಾಗವಹಿಸುವಿಕೆಗೆ ಸಾಕ್ಷಿಯಾದವು.

ಈ ಬಾರಿಯ ಸಂವಿಧಾನ ದಿನವು ಅನೇಕ ಕಾರಣಗಳಿಂದ ವಿಶೇಷವಾಗಿದೆ.

ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರಂತಹ ಇಬ್ಬರು ಮಹಾನ್ ಚೇತನಗಳ 150ನೇ ಜಯಂತಿಯ ವರ್ಷವಾಗಿದೆ. ಇವರಿಬ್ಬರೂ ನಮ್ಮ ರಾಷ್ಟ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸರ್ದಾರ್ ಪಟೇಲರ ದೂರದೃಷ್ಟಿಯ ನಾಯಕತ್ವವು ಭಾರತದ ರಾಜಕೀಯ ಏಕೀಕರಣವನ್ನು ಸಾಧ್ಯವಾಗಿಸಿತ್ತು. 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನಾವು ದಿಟ್ಟ ಹೆಜ್ಜೆ ಇಡಲು ಅವರ ಸ್ಫೂರ್ತಿ ಮತ್ತು ದೃಢ ನಿಲುವುಗಳು ನಮಗೆ ಮಾರ್ಗದರ್ಶನ ನೀಡಿತು. ಭಾರತದ ಸಂವಿಧಾನವು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಜಾರಿಯಲ್ಲಿದ್ದು, ಅಲ್ಲಿನ ಜನರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳಿಗೆ ಎಲ್ಲ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುತ್ತಿದೆ. ಹಾಗೆಯೇ, ನಮ್ಮ ಬುಡಕಟ್ಟು ಸಮುದಾಯಗಳಿಗೆ ನ್ಯಾಯ, ಘನತೆ ಮತ್ತು ಸಬಲೀಕರಣವನ್ನು ಒದಗಿಸುವ ಭಾರತದ ಸಂಕಲ್ಪಕ್ಕೆ, ಭಗವಾನ್ ಬಿರ್ಸಾ ಮುಂಡಾ ಅವರ ಜೀವನವು ಸದಾ ಸ್ಫೂರ್ತಿ ನೀಡುತ್ತಲೇ ಇದೆ.

ಈ ವರ್ಷ ನಾವು, ಒಂದುವರೆ ಶತಮಾನದಿಂದಲೂ ಭಾರತೀಯರ ಸಾಮೂಹಿಕ ಸಂಕಲ್ಪವನ್ನು ಪ್ರತಿಧ್ವನಿಸುತ್ತಿರುವ 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವವನ್ನೂ ಆಚರಿಸುತ್ತಿದ್ದೇವೆ. ಅದೇ ಸಮಯದಲ್ಲಿ, ತಮ್ಮ ಜೀವನ ಮತ್ತು ತ್ಯಾಗದ ಮೂಲಕ ನಮಗೆ ಧೈರ್ಯ, ಕರುಣೆ ಮತ್ತು ಶಕ್ತಿಯ ಬೆಳಕನ್ನು ನೀಡುತ್ತಲೇ ಇರುವ ಶ್ರೀ ಗುರು ತೇಗ್ ಬಹದ್ದೂರ್ ಅವರ 350ನೇ ಬಲಿದಾನ ದಿನವನ್ನೂ ನಾವಿಂದು ಸ್ಮರಿಸುತ್ತಿದ್ದೇವೆ.

ಈ ಎಲ್ಲಾ ಮಹಾನ್ ವ್ಯಕ್ತಿಗಳು ಮತ್ತು ಐತಿಹಾಸಿಕ ಮೈಲಿಗಲ್ಲುಗಳು ನಮಗೆ ನಮ್ಮ ಕರ್ತವ್ಯಗಳ ಪ್ರಾಮುಖ್ಯತೆಯನ್ನು ನೆನಪಿಸುತ್ತವೆ. ನಮ್ಮ ಸಂವಿಧಾನ ಕೂಡ 51ಎ ವಿಧಿ ಅಡಿಯಲ್ಲಿ 'ಮೂಲಭೂತ ಕರ್ತವ್ಯ'ಗಳ ಕುರಿತ ಪ್ರತ್ಯೇಕ ಅಧ್ಯಾಯದ ಮೂಲಕ ಇದಕ್ಕೇ ಒತ್ತು ನೀಡಿದೆ. ನಾವು ಸಾಮೂಹಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಈ ಕರ್ತವ್ಯಗಳು ನಮಗೆ ದಾರಿ ತೋರಿಸುತ್ತವೆ. ಮಹಾತ್ಮ ಗಾಂಧೀಜಿಯವರು ಯಾವಾಗಲೂ ನಾಗರಿಕರ ಕರ್ತವ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ನಾವು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಅದಕ್ಕನುಗುಣವಾಗಿ ಹಕ್ಕು ಸೃಷ್ಟಿಯಾಗುತ್ತದೆ ಮತ್ತು ನಿಜವಾದ ಹಕ್ಕುಗಳು ಕರ್ತವ್ಯ ಪರಿಪಾಲನೆಯ ಫಲವಾಗಿಯೇ ದೊರೆಯುತ್ತವೆ ಎಂದು ಅವರು ನಂಬಿದ್ದರು.

ಈ ಶತಮಾನ ಪ್ರಾರಂಭವಾಗಿ ಈಗಾಗಲೇ 25 ವರ್ಷಗಳು ಕಳೆದಿವೆ. ಇನ್ನು ಕೇವಲ ಎರಡು ದಶಕಗಳ ನಂತರ, ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಲಭಿಸಿ 100 ವರ್ಷಗಳ ಸಂಭ್ರಮವನ್ನು ನಾವು ಆಚರಿಸಲಿದ್ದೇವೆ. 2049ಕ್ಕೆ, ನಮ್ಮ ಸಂವಿಧಾನವನ್ನು ಅಂಗೀಕರಿಸಿ ಶತಮಾನವೇ ಪೂರೈಸಲಿದೆ. ಇಂದು ನಾವು ರೂಪಿಸುವ ನೀತಿಗಳು, ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸಲಿವೆ.

ಈ ಮಹತ್ತರ ಗುರಿಯಿಂದ ಪ್ರೇರಿತರಾಗಿ, 'ವಿಕಸಿತ ಭಾರತ'ದ ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಮುನ್ನಡೆಯುವಾಗ, ದೇಶದ ಬಗೆಗಿನ ನಮ್ಮ ಕರ್ತವ್ಯಗಳಿಗೆ ನಾವು ಸದಾ ಅಗ್ರಸ್ಥಾನ ನೀಡಬೇಕು.
ನಮ್ಮ ದೇಶ ನಮಗೆ ಅಪಾರವಾದುದ್ದನ್ನು ನೀಡಿದೆ, ಇದು ನಮ್ಮ ಅಂತರಾಳದಲ್ಲಿ ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ನಾವು ಈ ಕೃತಜ್ಞತಾ ಭಾವನೆಯೊಂದಿಗೆ ಬದುಕಿದಾಗ, ಕರ್ತವ್ಯ ನಿರ್ವಹಣೆಯು ನಮ್ಮ ಸಹಜ ಸ್ವಭಾವವೇ ಆಗಿಬಿಡುತ್ತದೆ. ನಮ್ಮ ಕರ್ತವ್ಯಗಳನ್ನು ಪರಿಪಾಲಿಸಲು, ಪ್ರತಿಯೊಂದು ಕೆಲಸದಲ್ಲೂ ನಮ್ಮ ಪೂರ್ಣ ಸಾಮರ್ಥ್ಯ ಮತ್ತು ಸಮರ್ಪಣಾ ಮನೋಭಾವವನ್ನು ಧಾರೆ ಎರೆಯುವುದು ಅತ್ಯಗತ್ಯ. ನಮ್ಮ ಪ್ರತಿಯೊಂದು ನಡೆಯೂ ಸಂವಿಧಾನಕ್ಕೆ ಬಲ ತುಂಬುವಂತಿರಬೇಕು ಹಾಗೂ ರಾಷ್ಟ್ರದ ಗುರಿ ಮತ್ತು ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವಂತಿರಬೇಕು. ನಮ್ಮ ಸಂವಿಧಾನದ ಶಿಲ್ಪಿಗಳು ಕಂಡ ಕನಸುಗಳನ್ನು ನನಸಾಗಿಸುವುದು ಅಂತಿಮವಾಗಿ ನಮ್ಮದೇ ಹೊಣೆಗಾರಿಕೆ. ಯಾವಾಗ ನಾವು ಇಂತಹ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತೇವೆಯೋ, ಆಗ ನಮ್ಮ ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಹಲವು ಪಟ್ಟು ಹೆಚ್ಚುತ್ತದೆ.

ನಮ್ಮ ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದೆ. ನಾಗರಿಕರಾಗಿ, ನಾವು ನೋಂದಾಯಿಸಿಕೊಂಡಿರುವ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಮತ ಚಲಾಯಿಸುವ ಅವಕಾಶವನ್ನು ಎಂದಿಗೂ ತಪ್ಪಿಸಿಕೊಳ್ಳಬಾರದು ಎಂಬುದು ನಮ್ಮ ಕರ್ತವ್ಯ. ಇತರರಿಗೂ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ, 18 ವರ್ಷ ತುಂಬುತ್ತಿರುವ ಯುವಜನರನ್ನು ಅಭಿನಂದಿಸಲು, ಪ್ರತಿ ವರ್ಷ ನವೆಂಬರ್ 26ರಂದು ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಾವು ಆಲೋಚಿಸಬಹುದು. ಈ ಮೂಲಕ, ತಾವು ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ರಾಷ್ಟ್ರ ನಿರ್ಮಾಣ ಕಾರ್ಯದ ಸಕ್ರಿಯ ಪಾಲುದಾರರು ಎಂಬ ಭಾವನೆ ನಮ್ಮ ನವ ಮತದಾರರಲ್ಲಿ ಮೂಡುತ್ತದೆ.

ನಾವು ನಮ್ಮ ಯುವಜನರಲ್ಲಿ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆಯನ್ನು ತುಂಬಿ ಸ್ಫೂರ್ತಿ ನೀಡಿದಾಗ, ಅವರು ತಮ್ಮ ಜೀವನಪರ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿ ಉಳಿಯುತ್ತಾರೆ. ಈ ಬದ್ಧತೆಯೇ ಒಂದು ಬಲಿಷ್ಠ ರಾಷ್ಟ್ರದ ಭದ್ರ ಬುನಾದಿಯಾಗಿದೆ.

ಬನ್ನಿ, ಈ ಸಂವಿಧಾನ ದಿನದಂದು, ಈ ಮಹಾನ್ ರಾಷ್ಟ್ರದ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ. ಹೀಗೆ ಮಾಡುವುದರಿಂದ, ಅಭಿವೃದ್ಧಿ ಹೊಂದಿದ ಮತ್ತು ಸಶಕ್ತವಾದ ವಿಕಸಿತ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದು.

ನಿಮ್ಮ,

ನರೇಂದ್ರ ಮೋದಿ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The entrepreneurs building a self-reliant India

Media Coverage

The entrepreneurs building a self-reliant India
NM on the go

Nm on the go

Always be the first to hear from the PM. Get the App Now!
...
ಭಾರತದ ಏಕತೆ ಮತ್ತು ಪ್ರಗತಿಗೆ ಮೀಸಲಾದ ಜೀವನ
July 06, 2026

ಇಂದು, ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಅವರ ಜೀವನವು ಮಾ ಭಾರತಿಯ ಬಗೆಗಿನ ಧೈರ್ಯ ಮತ್ತು ಅಚಲ ಬದ್ಧತೆಗೆ ಎಂದೆಂದಿಗೂ ಮಾದರಿಯಾಗಿದೆ. ಆಧುನಿಕ ಭಾರತದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರಷ್ಟು ಆಳವಾಗಿ ಬುದ್ಧಿವಂತಿಕೆ, ಸಾರ್ವಜನಿಕ ಸೇವೆ ಮತ್ತು ನೈತಿಕ ದೃಢತೆಯ ಸಂಗಮವನ್ನು ಹೊಂದಿದ್ದ ನಾಯಕರು ಬಹಳ ಕಡಿಮೆ.

ಯುವ ಶ್ಯಾಮ ಪ್ರಸಾದ್ ರವರು ತಮಗೆ ಸುಲಭವಾಗಿ, ಸಂರಕ್ಷಿತ ಮತ್ತು ಸುಖಮಯ ಜೀವನವನ್ನು ನೀಡಬಲ್ಲಂತಹ ಪರಿಸರದಲ್ಲಿ ಜನಿಸಿದ್ದರು. ಅವರ ತಂದೆ ಸರ್ ಅಶುತೋಷ್ ಮುಖರ್ಜಿಯವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಆದರೆ, ವಿಧಿಯು ಅವರ ಮುಂದೆ ಸೌಲಭ್ಯಗಳ ಹಾದಿಯನ್ನು ಇರಿಸಿದ್ದರೂ, ಅವರ ಆತ್ಮಸಾಕ್ಷಿಯು ಅವರನ್ನು ತ್ಯಾಗ ಮತ್ತು ರಾಷ್ಟ್ರ ಸೇವೆಯ ಹಾದಿಯತ್ತ ಕೊಂಡೊಯ್ಯಿತು. ವಸಾಹತುಶಾಹಿ, ಕೋಮುವಾದ, ಮಾನವೀಯ ಸವಾಲುಗಳು ಹೀಗೆ ಆ ಕಾಲದ ಯಾವುದೇ ಪ್ರಕ್ಷುಬ್ಧತೆಯ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಅವರಿಗೆ ಸಾಧ್ಯವಿರಲಿಲ್ಲ. ಈ ಹಾದಿಯಲ್ಲಿ ಅವರು ತಮ್ಮ ಶಿಶುವಿನ ಮರಣ ಮತ್ತು ನಂತರ ಪತ್ನಿಯ ಅಗಲಿಕೆಯಂತಹ ಆಳವಾದ ವೈಯಕ್ತಿಕ ದುರಂತಗಳನ್ನು ಅನುಭವಿಸಿದರು. ಆದರೂ, ಈ ದುರಂತಗಳು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದವು ಮತ್ತು ಸೇವೆಯ ಬಗೆಗಿನ ಅವರ ಬದ್ಧತೆಯನ್ನು ಹೆಚ್ಚಿಸಿದವು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಸಾರ್ವಜನಿಕ ಜೀವನವನ್ನು ವ್ಯಾಖ್ಯಾನಿಸುವ ಒಂದು ಆದರ್ಶವಿದ್ದರೆ, ಅದು ಭಾರತದ ಅವಿಭಾಜ್ಯತೆ. ದೇಶ ವಿಭಜನೆಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ದೃಢವಾಗಿ ನಿಂತರು. ಕೆಲವು ವರ್ಷಗಳ ನಂತರ, ಅದೇ ದೃಢ ನಂಬಿಕೆ ಅವರನ್ನು ಜಮ್ಮು ಮತ್ತು ಕಾಶ್ಮೀರದತ್ತ ಸೆಳೆಯಿತು. ಸೆರೆವಾಸ ಅವರನ್ನು ನಿರುತ್ಸಾಹಗೊಳಿಸಲಿಲ್ಲ ಮತ್ತು ಏಕಾಂತತೆ ಅವರನ್ನು ಕುಗ್ಗಿಸಲಿಲ್ಲ. ತಾವು ಯಾರ ಹಿತಕ್ಕಾಗಿ ಹೋರಾಡಿದ್ದರೋ, ಅಂತಹ ಅಸಂಖ್ಯಾತ ಜನರಿಂದ ದೂರವಿದ್ದಾಗಲೇ ಬಂಧನದಲ್ಲಿ ಅವರ ಜೀವನವು ಅಕಾಲಿಕವಾಗಿ ಕೊನೆಗೊಂಡಿತು. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಅಂತಿಮ ತ್ಯಾಗವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಸ್ಮರಣೆಯ ಭಾಗವಾಗುವ ಕೆಲವು ಕ್ಷಣಗಳು ಬರುತ್ತವೆ. ಡಾ. ಮುಖರ್ಜಿಯವರ ಕೊನೆಯ ಪಯಣ ಅಂತಹ ಒಂದು ಕ್ಷಣವಾಗಿದೆ. ಆಚಾರ್ಯ ವಿನೋಬಾ ಭಾವೆಯವರು, "ಡಾ. ಮುಖರ್ಜಿಯವರು ತಮಗೆ ನಂಬಿಕೆಯಿದ್ದ ಉದ್ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿಕೊಂಡರು" ಎಂದು ಹೇಳಿದ್ದರು. ಹಲವು ವರ್ಷಗಳ ನಂತರ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35(ಎ) ವಿಧಿಗಳ ರದ್ದು ಅವರ ಹುತಾತ್ಮತೆಗೆ ನೀಡಿದ ಅತ್ಯಂತ ಸೂಕ್ತ ಗೌರವವಾಗಿದೆ.

ಡಾ. ಮುಖರ್ಜಿಯವರು ಭಾರತಕ್ಕೆ ಮತ್ತು ಭಾರತೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದರು. ಆ ಕಾಲದ ಸಾಂಪ್ರದಾಯಿಕ ಮನಸ್ಥಿತಿಯನ್ನು ವಿರೋಧಿಸುವ ಸಂಸ್ಥೆಗಳನ್ನು ನಿರ್ಮಿಸುವ ಮತ್ತು ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅವರು ಇದನ್ನು ಸಾಧಿಸಿದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಅತಿಕಿರಿಯ ಉಪಕುಲಪತಿಯಾದರು. ತಮ್ಮ ವಿಶಿಷ್ಟ ಶೈಲಿಯಲ್ಲಿ, ದೇಶಭಕ್ತಿಯುತ ಮತ್ತು ಭವಿಷ್ಯದ ದೃಷ್ಟಿಯುಳ್ಳ ಸಕಾರಾತ್ಮಕ ಬದಲಾವಣೆಗಳನ್ನು ಅವರು ತಂದರು. ಶಿಕ್ಷಣ ತಜ್ಞರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು, "ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗುಮಾಸ್ತರು ಮತ್ತು ಕಡಿಮೆ ಸಂಬಳ ಪಡೆಯುವ ಸಿಬ್ಬಂದಿಯನ್ನು ಸಿದ್ಧಪಡಿಸುವ ಕಾರ್ಖಾನೆಗಳೆಂದು ನೋಡುವುದು ತಪ್ಪು. ನಾವು ಪುರಸಭೆಗಳು, ಪ್ರಾಂತೀಯ ಮತ್ತು ಕೇಂದ್ರ ಶಾಸನಸಭೆಗಳಂತಹ ನಮ್ಮ ಸ್ವಯಂ-ಆಡಳಿತ ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಬಲ್ಲ ಹಾಗೂ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಂತಹ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಿರ್ವಹಿಸಬಲ್ಲ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು" ಎಂದು ಅವರು ಅದ್ಭುತವಾಗಿ ಹೇಳಿದ್ದರು.

ಅವರ ನೇತೃತ್ವದಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಗ್ರಂಥಾಲಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಕಲಾಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಮತ್ತು ಕೃಷಿಯಲ್ಲಿ ಕೋರ್ಸ್‌ಗಳನ್ನು ಸ್ಥಾಪಿಸುವಂತಹ ವಿಶಿಷ್ಟ ಪ್ರಯತ್ನಗಳನ್ನು ಕೈಗೊಂಡಿತು. ಕ್ರೀಡೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿ ಕಲ್ಯಾಣದಂತಹ ಕ್ಷೇತ್ರಗಳತ್ತ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಲು, ಅವರು ಜನವರಿ 24 ಅನ್ನು ವಿಶ್ವವಿದ್ಯಾನಿಲಯದ ಸ್ಥಾಪನಾ ದಿನವನ್ನಾಗಿ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ವಿಶ್ವವಿದ್ಯಾನಿಲಯಕ್ಕಾಗಿ ಗೀತೆ ರಚಿಸಲು ಅವರು ಸ್ವತಃ ಗುರುದೇವ ಟ್ಯಾಗೋರ್ ಅವರನ್ನೇ ಕೋರಿದ್ದರು.

ಈ ಮನೋಭಾವದ ಮತ್ತೊಂದು ಉದಾಹರಣೆಯನ್ನು ಅವರ ಜೀವನದ ನಂತರದ ಭಾಗದಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಲು ನಿರ್ಧರಿಸಿದಾಗ ಕಾಣಬಹುದು. ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಹೊಂದಿರುವಂತೆಯೇ ಭಾರತದ ಪ್ರಗತಿಗಾಗಿ ಧ್ವನಿ ಎತ್ತಲು ಪರ್ಯಾಯ ವೇದಿಕೆಯ ಅಗತ್ಯವಿದೆ ಎಂದು ಅವರು ಭಾವಿಸಿದರು. ಪಕ್ಷದ ಚಿಹ್ನೆಯು ಮಣ್ಣಿನ ದೀಪವಾಗಿದ್ದುದು ಬಹಳ ಅರ್ಥಪೂರ್ಣವಾಗಿತ್ತು. ಒಂದು ದೀಪವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ತನ್ನ ಸುತ್ತಲಿನ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಜನಸಂಘವು ಸಕ್ರಿಯವಾಗಿದ್ದ ವರ್ಷಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಡಿದ್ದು ಕೂಡ ಇದನ್ನೇ.

ಭಾರತದ ಕೈಗಾರಿಕಾ ಮತ್ತು ಪೂರೈಕೆ ಸಚಿವರಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಧಿಕಾರಾವಧಿಯು, ಅಭಿವೃದ್ಧಿಯ ಕುರಿತಾದ ಅವರ ಸಮಗ್ರ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದಿದ್ದ ಒಬ್ಬ ರಾಜನೀತಿಜ್ಞರನ್ನು ಅನಾವರಣಗೊಳಿಸುತ್ತದೆ. ಅವರು ಕೈಗಾರಿಕೆಯನ್ನು ನವತಂತ್ರದ ಭಾರತಕ್ಕೆ ಘನತೆ, ಅವಕಾಶ ಮತ್ತು ಆತ್ಮವಿಶ್ವಾಸವನ್ನು ಮರಳಿ ತರುವ ಸಾಧನವಾಗಿ ನೋಡಿದರು. ಅವರು ಸಂಪತ್ತಿನ ಸೃಷ್ಟಿ ಮತ್ತು ಮೌಲ್ಯವರ್ಧನೆಯನ್ನು ಗೌರವಿಸಿದರು. ದಾಮೋದರ ವ್ಯಾಲಿ ಕಾರ್ಪೊರೇಷನ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮತ್ತು ಬಲಿಷ್ಠ ಕೈಗಾರಿಕಾ ನೀತಿಯಂತಹ ಪ್ರವರ್ತಕ ಉಪಕ್ರಮಗಳ ಮೂಲಕ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯವನ್ನು ಹಾಕುವಾಗ, ಅವರು ಭಾರತದ ಸಾಂಪ್ರದಾಯಿಕ ಶಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಏಕಕಾಲದಲ್ಲಿ ನೋಡಿಕೊಂಡರು. ಕೈಮಗ್ಗ, ಕುಟೀರ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಜವಳಿ ಕಾರ್ಮಿಕರು ಅವರಲ್ಲಿ ಸಮಾನವಾದ ಬದ್ಧತೆಯುಳ್ಳ ಚಾಂಪಿಯನ್ ಅನ್ನು ಕಂಡುಕೊಂಡರು.

ಇಲ್ಲಿ, ನಾನು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸ್ವಾವಲಂಬನೆಯ ಸ್ಪಷ್ಟ ದೃಷ್ಟಿಯೊಂದಿಗೆ ಡಾ. ಮುಖರ್ಜಿಯವರು ಸ್ಥಾಪಿಸಲು ಶ್ರಮಿಸಿದ ಸಿಂಧ್ರಿ ಕಾರ್ಖಾನೆಯನ್ನು, ಹಲವು ದಶಕಗಳ ಕಾಲ ದೇಶವನ್ನು ಆಳಿದವರು ನಿರ್ಲಕ್ಷಿಸಿದ್ದರು. ನಮ್ಮ ಸರ್ಕಾರಕ್ಕೆ ಅದರ ಪುನರುಜ್ಜೀವನಕ್ಕೆ ಕೊಡುಗೆ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ.

ಭಾರತದ ನಾಗರಿಕತೆಯ ಪರಂಪರೆಯು ದೀರ್ಘಕಾಲದಿಂದಲೂ ಸಂವಾದ ಮತ್ತು ಚರ್ಚೆಗಳನ್ನು ಸಂಭ್ರಮಿಸಿದೆ. ಡಾ. ಮುಖರ್ಜಿಯವರು ಈ ಪ್ರಜಾಸಾಮಾಜಿಕ ಮನೋಭಾವವನ್ನು ಸಾಕಾರಗೊಳಿಸಿದ್ದರು. ದೇಶ ನಿರ್ಮಾಣದ ಕಾರ್ಯವು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿ, ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ, ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು ಮತ್ತು ರಾಷ್ಟ್ರಕ್ಕೆ ಅಗತ್ಯವೆಂದು ಅವರು ನಂಬಿದ್ದ ರಾಜಕೀಯ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

75 ವರ್ಷಗಳ ಹಿಂದೆ, ಪಂಡಿತ್ ನೆಹರು ಅವರು ಮೊದಲ ತಿದ್ದುಪಡಿಯನ್ನು ತಂದರು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಡಾ. ಮುಖರ್ಜಿಯವರು ಇದನ್ನು ತೀವ್ರವಾಗಿ ಟೀಕಿಸಿದವರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಏನು ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು. ಮತ್ತು ಅವರು ಹೇಳಿದ್ದು ನಿಜವಾಯಿತು. 75 ವರ್ಷಗಳ ಹಿಂದೆ ಮೊದಲ ತಿದ್ದುಪಡಿಯನ್ನು ತಂದವರು, 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 50 ವರ್ಷಗಳ ಹಿಂದೆ 42ನೇ ತಿದ್ದುಪಡಿ ಕಾಯಿದೆಯನ್ನು ತಂದರು, ಇದು ಮತ್ತೊಮ್ಮೆ ಉದಾರವಾದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲದ ಮೇಲೆ ದಾಳಿ ಮಾಡಿತು.

ಡಾ. ಮುಖರ್ಜಿಯವರು ತಮ್ಮ ಮಾನವೀಯ ಪ್ರಯತ್ನಗಳಿಗಾಗಿಯೂ ಜನಪ್ರಿಯರಾಗಿದ್ದರು. 1943 ರಲ್ಲಿ ಬಂಗಾಳದಲ್ಲಿ ಅತಿ ಭೀಕರ ಬರಗಾಲ ಉಂಟಾದಾಗ, ಡಾ. ಮುಖರ್ಜಿಯವರು ಸಂತ್ರಸ್ತರಿಗೆ ಸೇವೆ ಸಲ್ಲಿಸುವುದರಲ್ಲಿ ಮಗ್ನರಾದರು. ಜನರಿಗೆ ಆಹಾರ ಒದಗಿಸಲು ಹಲವಾರು ಕ್ಯಾಂಟೀನ್‌ಗಳು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯುವುದನ್ನು ಅವರು ಖಚಿತಪಡಿಸಿದರು. ಒಂದು ಕಡೆ, ಅವರು ತಮ್ಮ ಜನರ ಸಂಕಷ್ಟದಿಂದ ತೀವ್ರವಾಗಿ ನೊಂದಿದ್ದರೆ, ಇನ್ನೊಂದೆಡೆ ವಸಾಹತುಶಾಹಿ ಆಡಳಿತಗಾರರ ಸಂವೇದನಾಹೀನತೆಯು ಅವರನ್ನು ಅಸಹ್ಯಪಡುವಂತೆ ಮಾಡಿತ್ತು. ಅವರು 'ಪಂಚಶೇರ್ ಮನ್ವಾಂತರ್' (ಐವತ್ತರ ಕ್ಷಾಮ) ಎಂಬ ಪುಸ್ತಕವನ್ನೂ ಬರೆದರು, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. 1942 ರಲ್ಲಿ ಮಿಡ್ನಾಪುರದಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸಿದಾಗ, ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಅವರು ಮಾಡಿದ ಪ್ರಯತ್ನಗಳು ವ್ಯಾಪಕವಾಗಿ ಶ್ಲಾಘನೆಗೆ ಒಳಗಾದವು.

ಕೋಲ್ಕತ್ತಾದ ಕಾಲೇಜೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು "ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ; ಅದನ್ನು ಅರ್ಧಕ್ಕೆ ಬಿಡಬೇಡಿ ಅಥವಾ ಅಪೂರ್ಣವಾಗಿ ಬಿಡಬೇಡಿ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವವರೆಗೂ ಎಂದಿಗೂ ತೃಪ್ತರಾಗಬೇಡಿ." ಎಂದು ಅವರು ಯುವಕರಿಗೆ ಕರೆ ನೀಡಿದರು. ಭಾರತವು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಯುತ್ತಿರುವಾಗ, ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ಅವರು ಆಳವಾಗಿ ನಂಬಿದ್ದ ಬಲಿಷ್ಠ, ಸಂಘಟಿತ, ಆತ್ಮವಿಶ್ವಾಸವುಳ್ಳ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ನಿರ್ಮಿಸಲು ಪ್ರತಿದಿನ ಶ್ರಮಿಸುವುದು. ಮತ್ತು ಇಂದಿನ ಯುವಕರನ್ನು ನೋಡಿದಾಗ, ಅವರು ಸಂದರ್ಭಕ್ಕೆ ತಕ್ಕಂತೆ ಮುಂದೆ ಬಂದು, ನಿಖರವಾಗಿ ಅದನ್ನೇ ಮಾಡುತ್ತಾರೆ ಎಂಬ ದೃಢವಾದ ನಂಬಿಕೆ ನನಗಿದೆ.

- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ