ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ನಮ್ಮ ಹೆಮ್ಮೆ, ನಮ್ಮ ಪರಂಪರೆ: ಪ್ರಧಾನಮಂತ್ರಿ
ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಹಲವಾರು ಯೋಜನೆಗಳಲ್ಲಿ ಸಂತೃಪ್ತ ಮಟ್ಟವನ್ನು ತಲುಪಿವೆ: ಪ್ರಧಾನಮಂತ್ರಿ
ಜನೌಷಧಿ ಎಂದರೆ ಕೈಗೆಟುಕುವ ಚಿಕಿತ್ಸೆಯ ಖಾತರಿ! ಜನೌಷಧಿಯ ಮಂತ್ರವೆಂದರೆ - ಕಡಿಮೆ ಬೆಲೆ, ಪರಿಣಾಮಕಾರಿ ಔಷಧಿಗಳು: ಪ್ರಧಾನಮಂತ್ರಿ
ನಾವೆಲ್ಲರೂ ನಮ್ಮ ಆಹಾರದಲ್ಲಿ 10% ಅಡುಗೆ ಎಣ್ಣೆಯನ್ನು ಕಡಿಮೆ ಮಾಡಬೇಕು, ಪ್ರತಿ ತಿಂಗಳು 10% ಕಡಿಮೆ ಎಣ್ಣೆಯೊಂದಿಗೆ ನಿರ್ವಹಿಸಬೇಕು, ಇದು ಬೊಜ್ಜು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಜನರೊಂದಿಗೆ ತಾವು ಹೊಂದಿರುವ ಆತ್ಮೀಯತೆ ಮತ್ತು ದೀರ್ಘಕಾಲದ ಸಂಪರ್ಕವನ್ನು ಅವರು ನೆನಪಿಸಿಕೊಂಡರು, ಈ ಪ್ರದೇಶದೊಂದಿಗಿನ ತಮ್ಮ ಬಂಧವು ದಶಕಗಳಷ್ಟು ಹಳೆಯದು ಎಂಬುದನ್ನವರು ಹಂಚಿಕೊಂಡರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರದೇಶವು ಸಾಧಿಸಿದ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಾಮರ್ಥ್ಯವನ್ನು ಆಧುನಿಕತೆ  ಮತ್ತು ಪ್ರಗತಿಯ  ಗುರುತಾಗಿ ಪರಿವರ್ತಿಸಿರುವುದನ್ನು ಅವರು ಪ್ರಸ್ತಾಪಿಸಿದರು.

"ಸಿಲ್ವಾಸ್ಸಾದ ನೈಸರ್ಗಿಕ ಸೌಂದರ್ಯ ಮತ್ತು ಅದರ ಜನರ ಪ್ರೀತಿ, ಹಾಗೆಯೇ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಜನತೆಯ ಪ್ರೀತಿ, ನಿಮ್ಮೊಂದಿಗೆ ನನ್ನ ಸಂಪರ್ಕ ಎಷ್ಟು ದೀರ್ಘವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ದಶಕಗಳಷ್ಟು ಹಳೆಯದಾದ ಈ ಬಂಧ, ನಾನು ಇಲ್ಲಿಗೆ ಬಂದಾಗ ನನಗೆ ಸಿಗುವ ಸಂತೋಷ, ನೀವು ಮತ್ತು ನಾನು ಮಾತ್ರ ಅದನ್ನು ಅರ್ಥಮಾಡಿಕೊಂಡಿರುವಂತಹದ್ದು", ಎಂದು ಶ್ರೀ ಮೋದಿ ಹೇಳಿದರು. ತಾವು ಮೊದಲ ಬಾರಿಗೆ ಭೇಟಿ ನೀಡಿದಾಗ, ಈ ಪ್ರದೇಶವು ಬಹಳ ಭಿನ್ನವಾಗಿತ್ತು, ಸಣ್ಣ ಆದರೆ, ತಮಗೆ  ಸದಾ ಈ ಸ್ಥಳದ ಜನರು ಮತ್ತು ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಇತ್ತು. ತಮ್ಮ ಸರ್ಕಾರದ ನಾಯಕತ್ವದಲ್ಲಿ, ಈ ನಂಬಿಕೆಯು ಪ್ರಗತಿಯಾಗಿ ರೂಪಾಂತರಗೊಂಡಿದೆ, ಸಿಲ್ವಾಸ್ಸಾವನ್ನು ಕಾಸ್ಮೋಪಾಲಿಟನ್ ನಗರವಾಗಿ ಪರಿವರ್ತಿಸಿದೆ, ಅದು ತನ್ನ ಎಲ್ಲಾ ನಿವಾಸಿಗಳಿಗೆ ಹೊಸ ಅವಕಾಶಗಳೊಂದಿಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದರತ್ತ ಪ್ರಧಾನಿ ಗಮನಸೆಳೆದರು.

 

ಆರಂಭಿಕ ದಿನಗಳಲ್ಲಿ ಸಣ್ಣ ಮೀನುಗಾರಿಕಾ ಗ್ರಾಮವಾಗಿದ್ದ ಸಿಂಗಾಪುರದ ಉದಾಹರಣೆಯನ್ನೂ ಶ್ರೀ ಮೋದಿ ಹಂಚಿಕೊಂಡರು. ಸಿಂಗಾಪುರದ ಪರಿವರ್ತನೆಯು ಅದರ ಜನರ ಬಲವಾದ ಇಚ್ಛಾಶಕ್ತಿಯಿಂದ ಸಂಭವಿಸಿದೆ ಎಂದು ಅವರು ಒತ್ತಿ ಹೇಳಿದರು. ಅಭಿವೃದ್ಧಿಗಾಗಿ ಇದೇ ರೀತಿಯ ಸಂಕಲ್ಪವನ್ನು ಅಳವಡಿಸಿಕೊಳ್ಳುವಂತೆ ಕೇಂದ್ರಾಡಳಿತ ಪ್ರದೇಶದ ನಾಗರಿಕರನ್ನು ಉತ್ತೇಜಿಸಿದ ಪ್ರಧಾನಮಂತ್ರಿಯವರು, ತಾವು ಅವರೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು, ಆದರೆ ಅವರು ಕೂಡಾ ಮುಂದೆ ಸಾಗಲು ಉಪಕ್ರಮಿಸಬೇಕು ಎಂದು ಪ್ರಧಾನ ಮಂತ್ರಿ  ಹೇಳಿದರು.

"ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಕೇವಲ ಕೇಂದ್ರಾಡಳಿತ ಪ್ರದೇಶವಲ್ಲ ಬದಲು ಅದು  ಹೆಮ್ಮೆ ಮತ್ತು ಪರಂಪರೆಯ ಮೂಲವಾಗಿದೆ. ಅದಕ್ಕಾಗಿಯೇ ನಾವು ಈ ಪ್ರದೇಶವನ್ನು ಸಮಗ್ರ ಅಭಿವೃದ್ಧಿಗೆ ಹೆಸರುವಾಸಿಯಾದ ಮಾದರಿ ರಾಜ್ಯವನ್ನಾಗಿ ಪರಿವರ್ತಿಸುತ್ತಿದ್ದೇವೆ", ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಹೈಟೆಕ್ ಮೂಲಸೌಕರ್ಯ, ಆಧುನಿಕ ಆರೋಗ್ಯ ಸೇವೆಗಳು, ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ, ನೀಲಿ ಆರ್ಥಿಕತೆ, ಕೈಗಾರಿಕಾ ಪ್ರಗತಿ, ಯುವಜನರಿಗೆ ಹೊಸ ಅವಕಾಶಗಳು ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಗಾಗಿ ಈ ಪ್ರದೇಶವನ್ನು ಗುರುತಿಸಬೇಕೆಂಬ  ಕನಸು ತಮ್ಮದಾಗಿದೆ ಎಂದೂ  ಪ್ರಧಾನಿ ಹೇಳಿದರು.

ಶ್ರೀ ಪ್ರಫುಲ್ ಪಟೇಲ್ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ, ಈ ಪ್ರದೇಶವು ಈ ಗುರಿಗಳತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂಬುದರತ್ತ  ಶ್ರೀ ಮೋದಿ ಬೆಟ್ಟು ಮಾಡಿದರು. ಕಳೆದ 10 ವರ್ಷಗಳಲ್ಲಿ, ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಈ ಪ್ರದೇಶವು ಈಗ ಅಭಿವೃದ್ಧಿಯ ದೃಷ್ಟಿಯಿಂದ ವಿಶಿಷ್ಟ ಗುರುತಿನೊಂದಿಗೆ ರಾಷ್ಟ್ರೀಯ ನಕ್ಷೆಯಲ್ಲಿ ಗುರುತಿಸಲ್ಪಡುತ್ತಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್, ಜಲ ಜೀವನ್ ಮಿಷನ್, ಭಾರತ್ ನೆಟ್, ಪಿಎಂ ಜನ್ ಧನ್ ಯೋಜನೆ, ಪಿಎಂ ಜೀವನ್ ಜ್ಯೋತಿ ಬಿಮಾ ಮತ್ತು ಪಿಎಂ ಸುರಕ್ಷಾ ಬಿಮಾದಂತಹ ವಿವಿಧ ಸರ್ಕಾರಿ ಯೋಜನೆಗಳು ಜನರಿಗೆ, ವಿಶೇಷವಾಗಿ ದೀನದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಗಣನೀಯ ಪ್ರಯೋಜನಗಳನ್ನು ತಂದಿವೆ ಎಂದರು.

 

ಸ್ಮಾರ್ಟ್ ಸಿಟಿ ಮಿಷನ್, ಸಮಗ್ರ ಶಿಕ್ಷಾ ಮತ್ತು ಪಿಎಂ ಮುದ್ರಾ ಯೋಜನೆಯಂತಹ ಉಪಕ್ರಮಗಳಲ್ಲಿ 100% ಪರಿಪೂರ್ಣತೆಯನ್ನು ಸಾಧಿಸುವುದು ಮುಂದಿನ ಗುರಿಯಾಗಿದೆ ಎಂದು ಪ್ರಧಾನಿ ಘೋಷಿಸಿದರು. ಮೊದಲ ಬಾರಿಗೆ, ಸರ್ಕಾರವು ಈ ಕಲ್ಯಾಣ ಯೋಜನೆಗಳೊಂದಿಗೆ ಜನರನ್ನು ನೇರವಾಗಿ ತಲುಪುತ್ತಿದೆ, ಪ್ರತಿಯೊಬ್ಬ ನಾಗರಿಕನು ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಮೂಲಸೌಕರ್ಯ, ಶಿಕ್ಷಣ, ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಪರಿವರ್ತನೆಯನ್ನು ಪ್ರಧಾನಿ ಎತ್ತಿ ತೋರಿಸಿದರು. ಈ ಹಿಂದೆ, ಈ ಪ್ರದೇಶದ ಯುವಜನರು ಉನ್ನತ ಶಿಕ್ಷಣಕ್ಕಾಗಿ ಹೊರಗೆ ಹೋಗಬೇಕಾಗಿತ್ತು, ಆದರೆ ಇಂದು, ಈ ಪ್ರದೇಶವು ಆರು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ನೆಲೆಯಾಗಿದೆ ಎಂಬುದರತ್ತ ಅವರು ಗಮನಸೆಳೆದರು. ಇವುಗಳಲ್ಲಿ ನಮೋ ವೈದ್ಯಕೀಯ ಕಾಲೇಜು, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಐಐಐಟಿ ದಿಯು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ದಮನ್ ಎಂಜಿನಿಯರಿಂಗ್ ಕಾಲೇಜು ಸೇರಿವೆ. ಈ ಸಂಸ್ಥೆಗಳು ಸಿಲ್ವಾಸ್ಸಾ ಮತ್ತು ಈ ಪ್ರದೇಶವನ್ನು ಹೊಸ ಶಿಕ್ಷಣ ಕೇಂದ್ರವನ್ನಾಗಿ ಮಾಡಿವೆ. "ಯುವಜನರಿಗೆ ಮತ್ತಷ್ಟು ಅನುಕೂಲವಾಗುವಂತೆ, ಈ ಸಂಸ್ಥೆಗಳಲ್ಲಿ ಅವರಿಗೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಈ ಮೊದಲು, ಈ ವಲಯದಲ್ಲಿ ಹಿಂದಿ, ಇಂಗ್ಲಿಷ್, ಗುಜರಾತಿ ಮತ್ತು ಮರಾಠಿ ಎಂಬ ನಾಲ್ಕು ವಿಭಿನ್ನ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಒದಗಿಸುವ ಪ್ರದೇಶವಾಗಿರುವುದನ್ನು ನೋಡಿ ನನಗೆ ಸಂತೋಷವಾಗಿತ್ತು. ಈಗ, ಇಲ್ಲಿನ ಪ್ರಾಥಮಿಕ ಮತ್ತು ಕಿರಿಯ ಶಾಲೆಗಳ ಮಕ್ಕಳು ಸ್ಮಾರ್ಟ್ ತರಗತಿಗಳಲ್ಲಿ ಓದುತ್ತಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ", ಎಂದೂ ಶ್ರೀ ಮೋದಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ, ಆಧುನಿಕ ಆರೋಗ್ಯ ಸೇವೆಗಳು ಈ ಪ್ರದೇಶದಲ್ಲಿ ಗಮನಾರ್ಹವಾಗಿ ವಿಸ್ತರಿಸಿವೆ ಎಂದು ಶ್ರೀ ಮೋದಿ ಹೇಳಿದರು. "2023 ರಲ್ಲಿ, ನಮೋ ವೈದ್ಯಕೀಯ ಕಾಲೇಜನ್ನು ಇಲ್ಲಿ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು. ಇದರೊಂದಿಗೆ, 450 ಹಾಸಿಗೆಗಳ ಸಾಮರ್ಥ್ಯದ ಹೊಸ ಆಸ್ಪತ್ರೆಯನ್ನು ಸೇರಿಸಲಾಗಿದೆ, ಇದನ್ನು ಇಂದು ಉದ್ಘಾಟಿಸಲಾಯಿತು. ಸಿಲ್ವಾಸ್ಸಾದಲ್ಲಿನ ಆರೋಗ್ಯ ಸೌಲಭ್ಯಗಳು ಈ ಪ್ರದೇಶದ ಬುಡಕಟ್ಟು ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಲಿವೆ", ಎಂದೂ  ಶ್ರೀ ಮೋದಿ ನುಡಿದರು.

 

ಜನೌಷಧಿ ದಿವಸದ ಸಂದರ್ಭದಲ್ಲಿ ಇಂದಿನ ಆರೋಗ್ಯ ಯೋಜನೆಗಳ ಮಹತ್ವವನ್ನು ಪ್ರಧಾನಿ ಉಲ್ಲೇಖಿಸಿದರು. ಜನೌಷಧಿ ಕೈಗೆಟುಕುವ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉಪಕ್ರಮದ ಅಡಿಯಲ್ಲಿ, ಸರ್ಕಾರವು ಗುಣಮಟ್ಟದ ಆಸ್ಪತ್ರೆಗಳು, ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ಮತ್ತು ಜನೌಷಧಿ ಕೇಂದ್ರಗಳ ಮೂಲಕ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದೆ. ದೇಶಾದ್ಯಂತ 15,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು 80%ನಷ್ಟು ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ನೀಡುತ್ತಿವೆ. ಸುಮಾರು 40 ಜನೌಷಧಿ ಕೇಂದ್ರಗಳು ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಜನರಿಗೆ ಪ್ರಯೋಜನವನ್ನು ಒದಗಿಸುತ್ತಿವೆ. ಭವಿಷ್ಯದಲ್ಲಿ ದೇಶಾದ್ಯಂತ 25,000 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ. "ಈ ಉಪಕ್ರಮವನ್ನು ಪ್ರಾರಂಭಿಸಿದಾಗಿನಿಂದ, ಸುಮಾರು 6,500 ಕೋಟಿ ಮೌಲ್ಯದ ಔಷಧಿಗಳನ್ನು ಕೈಗೆಟುಕುವ ದರದಲ್ಲಿ ಅಗತ್ಯವಿರುವವರಿಗೆ ಒದಗಿಸಲಾಗಿದೆ, ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ 30,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಉಳಿಸಿದೆ. ಈ ಉಪಕ್ರಮವು ಹಲವಾರು ನಿರ್ಣಾಯಕ ಕಾಯಿಲೆಗಳ ಚಿಕಿತ್ಸೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ, ಸಾಮಾನ್ಯ ನಾಗರಿಕರ ಅಗತ್ಯಗಳಿಗೆ ಸರ್ಕಾರದ ಸೂಕ್ಷ್ಮತೆಯನ್ನು ಇದು ಪ್ರದರ್ಶಿಸುತ್ತದೆ ", ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಜೀವನಶೈಲಿ ಕಾಯಿಲೆಗಳ ಬಗ್ಗೆ, ವಿಶೇಷವಾಗಿ ಆರೋಗ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಮಾರ್ಪಟ್ಟಿರುವ ಸ್ಥೂಲಕಾಯತೆಯ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರಧಾನಿ ಪ್ರಸ್ತಾಪಿಸಿದರು. 2050 ರ ವೇಳೆಗೆ 440 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಬೊಜ್ಜಿನಿಂದ ಬಳಲುತ್ತಾರೆ ಎಂದು ಭವಿಷ್ಯ ನುಡಿದ ಇತ್ತೀಚಿನ ವರದಿಯನ್ನು ಅವರು ಉಲ್ಲೇಖಿಸಿದರು. "ಈ ಆತಂಕಕಾರಿ ಅಂಕಿಅಂಶವು ಪ್ರತಿ ಮೂವರಲ್ಲಿ ಒಬ್ಬರು ಬೊಜ್ಜಿನಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬುದನ್ನು ಸೂಚಿಸುತ್ತದೆ, ಇದು ಮಾರಣಾಂತಿಕ ಸ್ಥಿತಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು.

ಇದನ್ನು ಎದುರಿಸಲು, ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಆಗ್ರಹಿಸಿದರು. ಪ್ರತಿ ತಿಂಗಳು ಅಡುಗೆ ಎಣ್ಣೆಯ ಬಳಕೆಯನ್ನು 10% ರಷ್ಟು ಕಡಿಮೆ ಮಾಡುವ ಮಹತ್ವವನ್ನು ಒತ್ತಿ ಹೇಳಿದ ಅವರು, ಜನರು ತಮ್ಮ ದೈನಂದಿನ ಅಡುಗೆಯಲ್ಲಿ 10% ಕಡಿಮೆ ಎಣ್ಣೆಯನ್ನು ಬಳಸಲು ಬದ್ಧರಾಗಿರಬೇಕು ಎಂದು ಹೇಳಿದರು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ಬೊಜ್ಜು ತಡೆಗಟ್ಟಲು ಪ್ರತಿದಿನ ಕೆಲವು ಕಿಲೋಮೀಟರ್ ನಡೆಯುವಂತಹ ನಿಯಮಿತ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳುವಂತೆ ಅವರು ಜನತೆಯನ್ನು ಪ್ರೋತ್ಸಾಹಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯನ್ನು ಸಾಧಿಸಲು ಭಾರತ ಬದ್ಧವಾಗಿದೆ. ಆರೋಗ್ಯವಂತ ರಾಷ್ಟ್ರ ಮಾತ್ರ ಇಂತಹ ಗುರಿಯನ್ನು ಸಾಧಿಸಲು ಸಾಧ್ಯ", ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಕಳೆದ ದಶಕದಲ್ಲಿ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳಲ್ಲಿನ ಕ್ಷಿಪ್ರ ಕೈಗಾರಿಕಾ ಬೆಳವಣಿಗೆ ಆಗಿರುವುದರತ್ತ ಶ್ರೀ ಮೋದಿ ಬೆಟ್ಟು ಮಾಡಿದರು. ಇತ್ತೀಚಿನ ಬಜೆಟ್ ನಲ್ಲಿ ಮಿಷನ್ ಉತ್ಪಾದನಾ ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ, ಈ ಪ್ರದೇಶವು ಗಮನಾರ್ಹವಾಗಿ ಪ್ರಯೋಜನ ಪಡೆಯಲು ಸಜ್ಜಾಗಿದೆ. ನೂರಾರು ಹೊಸ ಕೈಗಾರಿಕೆಗಳು ಪ್ರಾರಂಭವಾಗಿವೆ, ಮತ್ತು ಅಸ್ತಿತ್ವದಲ್ಲಿರುವ ಹಲವಾರು ಕೈಗಾರಿಕೆಗಳು ವಿಸ್ತರಿಸಲ್ಪಟ್ಟಿವೆ, ಸಾವಿರಾರು ಕೋಟಿ ಹೂಡಿಕೆಯನ್ನು ಆಕರ್ಷಿಸಿವೆ. ಈ ಕೈಗಾರಿಕೆಗಳು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ, ವಿಶೇಷವಾಗಿ ಬುಡಕಟ್ಟು ಸಮುದಾಯ, ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ. "ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಗಿರ್ ಆದರ್ಶ ಜೀವಿಕಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಸಣ್ಣ ಡೈರಿ ಫಾರ್ಮ್ ಗಳ ಸ್ಥಾಪನೆಯೊಂದಿಗೆ ಹೊಸ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ" ಎಂದೂ ಶ್ರೀ ಮೋದಿ ಹೇಳಿದರು.

 

ಪ್ರವಾಸೋದ್ಯಮವು ಉದ್ಯೋಗದ ಪ್ರಮುಖ ಮೂಲವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಪ್ರದೇಶದ ಕಡಲತೀರಗಳು ಮತ್ತು ಶ್ರೀಮಂತ ಪರಂಪರೆಯು ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಮ ಸೇತು, ನಮೋ ಪಥ್, ದಮನ್ ನ ಟೆಂಟ್ ಸಿಟಿ ಮತ್ತು ಜನಪ್ರಿಯ ನೈಟ್ ಮಾರ್ಕೆಟ್ ನಂತಹ ಬೆಳವಣಿಗೆಗಳು ಈ ಪ್ರದೇಶದ ಆಕರ್ಷಣೆಯನ್ನು ಹೆಚ್ಚಿಸುತ್ತಿವೆ. ದೊಡ್ಡ ಪಕ್ಷಿಧಾಮವನ್ನು ಸ್ಥಾಪಿಸಲಾಗಿದೆ ಮತ್ತು ದುಧಾನಿಯಲ್ಲಿ ಪರಿಸರ ರೆಸಾರ್ಟ್ ನ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಶ್ರೀ ಮೋದಿ ಹೇಳಿದರು. ದಿಯುವಿನಲ್ಲಿ ಕರಾವಳಿ ವಾಯುವಿಹಾರ ಮತ್ತು ಕಡಲತೀರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. "2024 ರಲ್ಲಿ ದಿಯು ಬೀಚ್ ಕ್ರೀಡಾಕೂಟವು ಬೀಚ್ ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಿತು, ಮತ್ತು ಬ್ಲೂ ಫ್ಲ್ಯಾಗ್ ಪ್ರಮಾಣೀಕರಣವು ದಿಯುವಿನ ಘೋಘ್ಲಾ ಬೀಚ್ ಅನ್ನು ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿದೆ. ಜೊತೆಯಲ್ಲಿ, ದಿಯುನಲ್ಲಿ ಕೇಬಲ್ ಕಾರ್ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಅರೇಬಿಯನ್ ಸಮುದ್ರದ ಅದ್ಭುತ ನೋಟಗಳನ್ನು ಒದಗಿಸುತ್ತದೆ, ಈ ಪ್ರದೇಶವನ್ನು ಭಾರತದ ಉನ್ನತ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡುತ್ತದೆ "ಎಂದು ಶ್ರೀ ಮೋದಿ ನುಡಿದರು.

ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳಲ್ಲಿನ ಗಮನಾರ್ಹ ಸಂಪರ್ಕ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದಾದ್ರಾ ಬಳಿ ಬುಲೆಟ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಮತ್ತು ಮುಂಬೈ-ದಿಲ್ಲಿ ಎಕ್ಸ್ ಪ್ರೆಸ್ ವೇ ಸಿಲ್ವಾಸ್ಸಾ ಮೂಲಕ ಹಾದುಹೋಗುತ್ತದೆ ಎಂದರು. ಕಳೆದ ಕೆಲವು ವರ್ಷಗಳಲ್ಲಿ, ಹಲವಾರು ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ, ಪ್ರಸ್ತುತ 500 ಕಿಲೋಮೀಟರ್ ರಸ್ತೆ ಕಾಮಗಾರಿ ನಡೆಯುತ್ತಿದೆ, ಇದರಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಯಾಗಿದೆ ಎಂದರು. "ಈ ಪ್ರದೇಶವು ಉಡಾನ್ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ಸ್ಥಳೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ", ಎಂದು ಶ್ರೀ ಮೋದಿ ಹೇಳಿದರು.

 

ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸುಗಮ ಜೀವನಕ್ಕೆ ಮಾದರಿಯಾಗುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಹಿಂದೆ, ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು, ಆದರೆ ಈಗ ಹೆಚ್ಚಿನ ಸರ್ಕಾರಿ ಸಂಬಂಧಿತ ಕಾರ್ಯಗಳನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಕೇವಲ ಒಂದು ಕ್ಲಿಕ್ನಲ್ಲಿ ಪೂರ್ಣಗೊಳಿಸಬಹುದು ಎಂಬುದರತ್ತ ಅವರು ಬೆಟ್ಟು ಮಾಡಿದರು. ಈ ಹೊಸ ವಿಧಾನವು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ಸ್ಥಳದಲ್ಲೇ ಪರಿಹರಿಸಲು ಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಪ್ರಯತ್ನಗಳಿಗಾಗಿ ಶ್ರೀ ಪ್ರಫುಲ್ ಪಟೇಲ್ ಮತ್ತು ಅವರ ತಂಡವನ್ನು ಪ್ರಧಾನಿ ಅಭಿನಂದಿಸಿದರು ಮತ್ತು ಈ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಜನರಿಗೆ ಭರವಸೆ ನೀಡಿದರು. ಇಂದು ಚಾಲನೆ ನೀಡಲಾದ ಯಶಸ್ವಿ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಜನರನ್ನು ಅಭಿನಂದಿಸುತ್ತೇನೆ. ಕೇಂದ್ರಾಡಳಿತ ಪ್ರದೇಶದ ನಾಗರಿಕರು ತೋರಿಸಿದ ಆತ್ಮೀಯ ಸ್ವಾಗತ, ವಾತ್ಸಲ್ಯ ಮತ್ತು ಗೌರವಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ", ಎಂದು ಪ್ರಧಾನಿ ನುಡಿದರು.

ಹಿನ್ನೆಲೆ

ದೇಶದ ಮೂಲೆ ಮೂಲೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಪ್ರಧಾನಮಂತ್ರಿಯವರ ಪ್ರಾಥಮಿಕ ಗಮನವಾಗಿದೆ. ಇದಕ್ಕೆ ಅನುಗುಣವಾಗಿ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು (ಹಂತ 1) ಉದ್ಘಾಟಿಸಿದರು. 460 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ 450 ಹಾಸಿಗೆಗಳ ಆಸ್ಪತ್ರೆ ಕೇಂದ್ರಾಡಳಿತ ಪ್ರದೇಶದಲ್ಲಿ ಆರೋಗ್ಯ ಸೇವೆಗಳನ್ನು ಗಮನಾರ್ಹವಾಗಿ ಬಲಪಡಿಸುತ್ತದೆ. ಇದು ಈ ಪ್ರದೇಶದ ಜನರಿಗೆ, ವಿಶೇಷವಾಗಿ ಬುಡಕಟ್ಟು ಸಮುದಾಯಗಳಿಗೆ ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.

 

ಸಿಲ್ವಾಸ್ಸಾದಲ್ಲಿ ಪ್ರಧಾನಮಂತ್ರಿಯವರು ಕೇಂದ್ರಾಡಳಿತ ಪ್ರದೇಶಕ್ಕೆ 2580 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ವಿವಿಧ ಗ್ರಾಮ ರಸ್ತೆಗಳು ಮತ್ತು ಇತರ ರಸ್ತೆ ಮೂಲಸೌಕರ್ಯಗಳು, ಶಾಲೆಗಳು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪಂಚಾಯತ್ ಮತ್ತು ಆಡಳಿತಾತ್ಮಕ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ನೀರು ಸರಬರಾಜು ಮತ್ತು ಒಳಚರಂಡಿ ಮೂಲಸೌಕರ್ಯಗಳು ಸೇರಿವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುವುದು, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಈ ಪ್ರದೇಶದಲ್ಲಿ ಸಾರ್ವಜನಿಕ ಕಲ್ಯಾಣ ಉಪಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಗಿರ್ ಆದರ್ಶ ಆಜೀವಿಕಾ ಯೋಜನೆಯು ಸಣ್ಣ ಡೈರಿ ಫಾರ್ಮ್ ಗಳ ಸ್ಥಾಪನೆಯ ಮೂಲಕ  ಈ ಪ್ರದೇಶದ ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ), ಇತರ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಮತ್ತು ದಿವ್ಯಾಂಗರು ಒಳಗೊಂಡಂತೆ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ಮತ್ತು ಅವರ ಜೀವನದಲ್ಲಿ ಸಾಮಾಜಿಕ ಹಾಗು ಆರ್ಥಿಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ. ಸಿಲ್ವನ್ ದೀದಿ ಯೋಜನೆಯು ಬೀದಿ ಬದಿಯ ಮಹಿಳಾ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯ ಧನಸಹಾಯದೊಂದಿಗೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಗಾಡಿಗಳನ್ನು ಒದಗಿಸುವ ಮೂಲಕ ಅವರನ್ನು ಮೇಲೆತ್ತುವ ಉಪಕ್ರಮವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi becomes first world leader to cross 100 million Instagram followers

Media Coverage

PM Modi becomes first world leader to cross 100 million Instagram followers
NM on the go

Nm on the go

Always be the first to hear from the PM. Get the App Now!
...
Prime Minister Condoles the Passing of Shri Maroof Raza Ji
February 26, 2026

Prime Minister Narendra Modi has expressed grief over the passing of Shri Maroof Raza Ji, honoring his legacy in the fields of journalism.

The Prime Minister stated that Shri Maroof Raza Ji made a rich contribution to the world of journalism. He noted that Shri Raza enriched public discourse through his nuanced understanding of defence, national security, and strategic affairs.

Expressing his sorrow, the Prime Minister said he is pained by his passing and extended his condolences to his family and friends.
The Prime Minister shared on X:

“Shri Maroof Raza Ji made a rich contribution to the world of journalism. He enriched public discourse with his nuanced understanding of defence, national security as well as strategic affairs. Pained by his passing. Condolences to his family and friends”