"ನಾವು - ಒಂದು ಭೂಮಿ, ಒಂದು ಆರೋಗ್ಯ - ದೃಷ್ಟಿಕೋನವನ್ನು ವಿಶ್ವದ ಮುಂದಿಟ್ಟಿದ್ದೇವೆ. ಇದು ಎಲ್ಲಾ ಜೀವಿಗಳಿಗೆ - ಮಾನವರಿಗೆ, ಪ್ರಾಣಿ ಅಥವಾ ಸಸ್ಯಗಳ ಸಮಗ್ರ ಆರೋಗ್ಯ ರಕ್ಷಣೆಯನ್ನು ಒಳಗೊಂಡಿದೆ"
"ವೈದ್ಯಕೀಯ ಚಿಕಿತ್ಸೆ ಕೈಗೆಟುಕುವಂತೆ ಮಾಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ"
"ಆಯುಷ್ಮಾನ್ ಭಾರತ್ ಮತ್ತು ಜನೌಷಧಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ರೋಗಿಗಳ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣ ಉಳಿಸಿವೆ"
"ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ ಹೊಸ ಆಸ್ಪತ್ರೆಗಳಿಗೆ ಕಾರಣವಾಗುತ್ತಿರುವುದು ಮಾತ್ರವಲ್ಲದೆ ಹೊಸ ಮತ್ತು ಸಂಪೂರ್ಣ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ"
"ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಗಮನ ಉದ್ಯಮಿಗಳಿಗೆ ಉತ್ತಮ ಅವಕಾಶವಾಗಿದೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ"
"ಇಂದು ಔಷಧ ವಲಯದ ಮಾರುಕಟ್ಟೆ ಗಾತ್ರವು 4 ಲಕ್ಷ ಕೋಟಿ ರೂ. ಆಗಿದ್ದು, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸರಿಯಾದ ಸಮನ್ವಯದಿಂದ ಇದು 10 ಲಕ್ಷ ಕೋಟಿ ರೂ. ಆಗಬಹುದು.

ನಮಸ್ಕಾರ!

ಸ್ನೇಹಿತರೆ,

ಕೋವಿಡ್ ಪೂರ್ವ ಮತ್ತು ಸಾಂಕ್ರಾಮಿಕ ನಂತರದ ಕಾಲಘಟ್ಟದಲ್ಲಿ ಆರೋಗ್ಯ ಸಂರಕ್ಷಣಾ ವಲಯವನ್ನು ಗಮನಿಸಿದರೆ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸಮೃದ್ಧ ದೇಶಗಳ ಅಭಿವೃದ್ಧಿ ಹೊಂದಿದ ಆರೋಗ್ಯ ವ್ಯವಸ್ಥೆಗಳು ಸಹ ಕುಸಿಯುತ್ತವೆ ಎಂಬುದನ್ನು ಕೊರೊನ ಜಗತ್ತಿಗೆ ತೋರಿಸಿದೆ ಮತ್ತು ಪಾಠ ಕಲಿಸಿದೆ ಎಂಬುದನ್ನು ಕಾಣಬಹುದು. ಹಾಗಾಗಿ, ಆರೋಗ್ಯ ಸಂರಕ್ಷಣೆಯ ಮೇಲೆ ಇಡೀ ವಿಶ್ವದ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ, ಆದರೆ ಭಾರತದ ವಿಧಾನವು ಆರೋಗ್ಯ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಒಟ್ಟಾರೆ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ, ನಾವು ಇಡೀ ವಿಶ್ವದ ಮುಂದೆ ಒಂದು ದೃಷ್ಟಿಯನ್ನು ಮುಂದಿಟ್ಟಿದ್ದೇವೆ. ಅದೇ 'ಒಂದು ಭೂಮಿ-ಒಂದು ಆರೋಗ್ಯ'. ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಾಗಿದ್ದರೂ ಸಕಲ ಜೀವರಾಶಿಗಳ ಸಮಗ್ರ ಆರೋಗ್ಯ ರಕ್ಷಣೆಗೆ ನಾವು ಒತ್ತು ನೀಡುತ್ತಿದ್ದೇವೆ ಎಂದರ್ಥ. ಕೊರೊನಾ ಜಾಗತಿಕ ಸಾಂಕ್ರಾಮಿಕವು ಪೂರೈಕೆ ಸರಪಳಿಯ ಪ್ರಾಮುಖ್ಯವನ್ನು ಸಹ ಒತ್ತಿಹೇಳಿದೆ. ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ, ಔಷಧಿಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳಂತಹ ಜೀವ ಉಳಿಸುವ ವಸ್ತುಗಳು ದುರದೃಷ್ಟವಶಾತ್ ಕೆಲವು ದೇಶಗಳಿಗೆ ಆಯುಧಗಳಾಗಿವೆ. ಕಳೆದ ಕೆಲವು ವರ್ಷಗಳ ಬಜೆಟ್‌ನಲ್ಲಿ ಭಾರತವು ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಿದೆ. ವಿದೇಶಗಳ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಈ ನಿಟ್ಟಿನಲ್ಲಿ ಎಲ್ಲ ಪಾಲುದಾರರು ಪ್ರಮುಖ ಪಾತ್ರವನ್ನು ವಹಿಸಬೇಕು.

ಸ್ನೇಹಿತರೆ,

ಸ್ವಾತಂತ್ರ್ಯದ ನಂತರ ಹಲವಾರು ದಶಕಗಳವರೆಗೆ, ಭಾರತದಲ್ಲಿ ಆರೋಗ್ಯದ ಬಗ್ಗೆ ಸಮಗ್ರ ವಿಧಾನ ಮತ್ತು ದೀರ್ಘಾವಧಿಯ ದೃಷ್ಟಿಕೋನದ ಕೊರತೆ ಇತ್ತು. ಈಗ ನಾವು ಆರೋಗ್ಯವನ್ನು ಕೇವಲ ಆರೋಗ್ಯ ಸಚಿವಾಲಯಕ್ಕೆ ಸೀಮಿತಗೊಳಿಸಿಲ್ಲ, ಆದರೆ 'ಇಡೀ ಸರ್ಕಾರದ' ಕಾರ್ಯರ್ವಿಧಾನವನ್ನು ಒತ್ತಿಹೇಳಿದ್ದೇವೆ. ಭಾರತದಲ್ಲಿ ಕೈಗೆಟಕುವ ದರದಲ್ಲಿ ಚಿಕಿತ್ಸೆ ಖಚಿತಪಡಿಸಿಕೊಳ್ಳುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಆಯುಷ್ಮಾನ್ ಭಾರತ್ ಅಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯದ ಹಿಂದಿನ ಸ್ಫೂರ್ತಿ ಇದು. ಇದು ಸುಮಾರು 80,000 ಕೋಟಿ ರೂಪಾಯಿ ಉಳಿಸಿದೆ, ಇಲ್ಲದಿದ್ದರೆ ದೇಶದಲ್ಲಿ ರೋಗಿಗಳ ಚಿಕಿತ್ಸೆಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿತ್ತು. ಮಾರ್ಚ್ 7ರಂದು ದೇಶವು ಜನೌಷಧಿ ದಿವಸ್ ಆಚರಿಸುತ್ತಿದೆ. ಇದೀಗ ದೇಶಾದ್ಯಂತ ಸುಮಾರು 9,000 ಜನೌಷಧಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಔಷಧಿಗಳು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸುವಾಗ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸುಮಾರು 20,000 ಕೋಟಿ ರೂಪಾಯಿ ಉಳಿಸಿವೆ. ಅಂದರೆ, ಈ 2 ಯೋಜನೆಗಳಿಂದ ಭಾರತದ ನಾಗರಿಕರು ಸುಮಾರು 1 ಲಕ್ಷ ಕೋಟಿ ರೂಪಾಯಿ ಉಳಿಸಿದ್ದಾರೆ.

ಸ್ನೇಹಿತರೆ,

ಗಂಭೀರ ಕಾಯಿಲೆಗಳಿಗೆ ದೇಶದಲ್ಲಿ ಉತ್ತಮ ಮತ್ತು ಆಧುನಿಕ ಆರೋಗ್ಯ ಮೂಲಸೌಕರ್ಯ ಹೊಂದಿರುವುದು ಅಷ್ಟೇ ಮುಖ್ಯ. ಸರ್ಕಾರದ ಪ್ರಮುಖ ಗಮನವೆಂದರೆ ಜನರು ತಮ್ಮ ಮನೆಗಳ ಬಳಿ ಪ್ರಥಮ ಚಿಕಿತ್ಸೆಗಾಗಿ ಪರೀಕ್ಷಾ ಸೌಲಭ್ಯಗಳನ್ನು ಮತ್ತು ಉತ್ತಮ ಸೌಲಭ್ಯಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳ ತಪಾಸಣೆ ಸೌಲಭ್ಯಗಳಿವೆ. ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ, ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ನಿರ್ಣಾಯಕ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಸಣ್ಣ ಪಟ್ಟಣಗಳಲ್ಲಿ ಕೇವಲ ಹೊಸ ಆಸ್ಪತ್ರೆಗಳನ್ನು ನಿರ್ಮಿಸದೆ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಉದ್ಯಮಿಗಳು, ಹೂಡಿಕೆದಾರರು ಮತ್ತು ವೃತ್ತಿಪರರಿಗೆ ಹಲವು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೆ,

ಆರೋಗ್ಯ ಮೂಲಸೌಕರ್ಯದೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯೂ ಸರ್ಕಾರದ ಆದ್ಯತೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, 260ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಇದರ ಪರಿಣಾಮವಾಗಿ, 2014ಕ್ಕೆ ಹೋಲಿಸಿದರೆ ಅಂದರೆ ನಾವು ಅಧಿಕಾರಕ್ಕೆ ಬಂದ ನಂತರ, ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. ವೈದ್ಯರ ಯಶಸ್ಸಿಗೆ ಯಶಸ್ವಿ ತಂತ್ರಜ್ಞ ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆ. ಹಾಗಾಗಿ ಈ ಬಾರಿಯ ಬಜೆಟ್ ನಲ್ಲಿ ನರ್ಸಿಂಗ್ ಕ್ಷೇತ್ರದ ವಿಸ್ತರಣೆಗೆ ಒತ್ತು ನೀಡಲಾಗಿದೆ. ವೈದ್ಯಕೀಯ ಕಾಲೇಜುಗಳ ಬಳಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ತೆರೆಯುವುದು ವೈದ್ಯಕೀಯ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಬೇಡಿಕೆಯನ್ನು ಪೂರೈಸಲು ಸಹ ಉಪಯುಕ್ತವಾಗಿದೆ.

ಸ್ನೇಹಿತರೆ,

ಆರೋಗ್ಯ ಸೇವೆಯನ್ನು ಸುಲಭವಾಗಿ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡುವಲ್ಲಿ ತಂತ್ರಜ್ಞಾನದ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ, ನಾವು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆಯತ್ತ ಗಮನ ಹರಿಸುತ್ತಿದ್ದೇವೆ. ಡಿಜಿಟಲ್ ಹೆಲ್ತ್ ಐಡಿ ಮೂಲಕ ದೇಶವಾಸಿಗಳಿಗೆ ಸಕಾಲಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಾವು ಬಯಸುತ್ತೇವೆ. ಸುಮಾರು 10 ಕೋಟಿ ಜನರು ಇ-ಸಂಜೀವನಿ ಬಳಕೆಯಿಂದ ಮನೆಯಲ್ಲಿ ಕುಳಿತು ವೈದ್ಯರಿಂದ ಆನ್‌ಲೈನ್ ಸಮಾಲೋಚನೆಯ ಪ್ರಯೋಜನ ಪಡೆದಿದ್ದಾರೆ. ಈಗ 5-ಜಿ ತಂತ್ರಜ್ಞಾನದ ಪರಿಚಯದಿಂದಾಗಿ ಈ ವಲಯದಲ್ಲಿ ಸ್ಟಾರ್ಟಪ್‌ಗಳಿಗೆ ಸಾಕಷ್ಟು ಸಾಧ್ಯತೆಗಳು ಹೊರಹೊಮ್ಮುತ್ತಿವೆ. ಡ್ರಗ್ ವಿತರಣೆ ಮತ್ತು ಪರೀಕ್ಷೆಯ ಲಾಜಿಸ್ಟಿಕ್ಸ್ ಅನ್ನು ಕ್ರಾಂತಿಕಾರಕಗೊಳಿಸಲು ಡ್ರೋನ್ ತಂತ್ರಜ್ಞಾನವನ್ನು ಹೊಂದಿಸಲಾಗಿದೆ. ಇದು ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ. ಇದು ನಮ್ಮ ಉದ್ಯಮಿಗಳಿಗೂ ಒಂದು ದೊಡ್ಡ ಅವಕಾಶ. ನಾವು ಯಾವುದೇ ತಂತ್ರಜ್ಞಾನ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬೇಕು, ನಾವು ಸ್ವಾವಲಂಬಿಗಳಾಗಬೇಕು ಎಂದು ನಮ್ಮ ಉದ್ಯಮಿಗಳು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಾಂಸ್ಥಿಕ ಸುಧಾರಣೆಗಳನ್ನೂ ಆರಂಭಿಸುತ್ತಿದ್ದೇವೆ. ಔಷಧ ಮತ್ತು ವೈದ್ಯಕೀಯ ಸಾಧನ ಕ್ಷೇತ್ರದಲ್ಲಿ ಇರುವ ಅಪಾರ ಸಾಧ್ಯತೆಗಳ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. 30,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ, ಅದು ಬಲ್ಕ್ ಡ್ರಗ್ ಪಾರ್ಕ್ ಆಗಿರಲಿ ಅಥವಾ ವೈದ್ಯಕೀಯ ಸಾಧನ ಪಾರ್ಕ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ.
ವೈದ್ಯಕೀಯ ಸಾಧನ ಕ್ಷೇತ್ರವೂ ಕಳೆದ ಕೆಲವು ವರ್ಷಗಳಲ್ಲಿ ಶೇ.12ರಿಂದ 14ರ ದರದಲ್ಲಿ ಬೆಳೆಯುತ್ತಿದೆ. ಮುಂದಿನ 2-3 ವರ್ಷಗಳಲ್ಲಿ ಈ ಮಾರುಕಟ್ಟೆ 4 ಲಕ್ಷ ಕೋಟಿ ರೂಪಾಯಿ ಮುಟ್ಟಲಿದೆ. ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ, ಉನ್ನತ ಮಟ್ಟದ ಉತ್ಪಾದನೆ ಮತ್ತು ಸಂಶೋಧನೆಗಾಗಿ ನಾವು ಈಗಾಗಲೇ ನುರಿತ ಮಾನವಶಕ್ತಿಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಐಐಟಿಗಳು ಮತ್ತು ಇತರ ಸಂಸ್ಥೆಗಳಲ್ಲಿ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ತರಬೇತಿಗಾಗಿ ಬಯೋಮೆಡಿಕಲ್ ಎಂಜಿನಿಯರಿಂಗ್ ಅಥವಾ ಅಂತಹುದೇ ಕೋರ್ಸ್‌ಗಳನ್ನು ಸಹ ಪರಿಚಯಿಸಲಾಗುತ್ತದೆ. ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆ, ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದ ನಡುವೆ ಗರಿಷ್ಠ ಸಮನ್ವಯ ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು.

ಸ್ನೇಹಿತರೆ,

ಕೆಲವೊಮ್ಮೆ ವಿಪತ್ತು ಸಹ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ನೀಡುತ್ತದೆ. ಇದು ಕೋವಿಡ್ ಅವಧಿಯಲ್ಲಿ ಔಷಧ ವಲಯದಿಂದ ಸಾಬೀತಾಗಿದೆ. ಕೋವಿಡ್ ಯುಗದಲ್ಲಿ ಭಾರತದ ಔಷಧ ವಲಯವು ಇಡೀ ಪ್ರಪಂಚದ ವಿಶ್ವಾಸವನ್ನು ಗಳಿಸಿದ ರೀತಿ ಅಭೂತಪೂರ್ವವಾಗಿದೆ, ಅದನ್ನೇ ನಾವು ಬಂಡವಾಳ ಮಾಡಿಕೊಳ್ಳಬೇಕು. ಈ ಖ್ಯಾತಿ, ಸಾಧನೆ ಮತ್ತು ನಮ್ಮ ಮೇಲಿನ ನಂಬಿಕೆಯನ್ನು ನೋಯಿಸಲು ಬಿಡಬಾರದು. ಬದಲಿಗೆ, ನಮ್ಮ ಮೇಲಿನ ಈ ನಂಬಿಕೆ ಮತ್ತಷ್ಟು ಬೆಳೆಯುವಂತೆ ನೋಡಿಕೊಳ್ಳಬೇಕು. ಶ್ರೇಷ್ಠತಾ ಕೇಂದ್ರಗಳ ಮೂಲಕ ಔಷಧ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಈ ಪ್ರಯತ್ನಗಳು ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತವೆ. ಇಂದು ಈ ಕ್ಷೇತ್ರದ ಮಾರುಕಟ್ಟೆ ಗಾತ್ರ ಸುಮಾರು 4 ಲಕ್ಷ ಕೋಟಿ ರೂಪಾಯಿಗೆ ಬೆಳೆದಿದೆ. ಖಾಸಗಿ ವಲಯ ಮತ್ತು ಶೈಕ್ಷಣಿಕ ವಲಯದ ನಡುವೆ ಉತ್ತಮ ಸಮನ್ವಯವಿದ್ದರೆ, ಈ ವಲಯವು 10 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದೆ. ಔಷಧ ಉದ್ಯಮವು ಈ ವಲಯದಲ್ಲಿ ಪ್ರಮುಖ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಬೇಕು ಮತ್ತು ಅವುಗಳಲ್ಲಿ ಹೂಡಿಕೆ ಮಾಡಬೇಕು ಎಂದು ನಾನು ಸಲಹೆ ನೀಡುತ್ತೇನೆ. ಸಂಶೋಧನೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಯುವ ಜನತೆ ಮತ್ತು ಸಂಶೋಧನಾ ಉದ್ಯಮಕ್ಕಾಗಿ ಹಲವಾರು ಐಸಿಎಂಆರ್ ಪ್ರಯೋಗಾಲಯಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಇದೇ ರೀತಿಯ ಇತರೆ ಮೂಲಸೌಕರ್ಯಗಳನ್ನು ತೆರೆಯಬಹುದು ಎಂಬುದನ್ನು ನಾವು ನೋಡಬೇಕು.

ಸ್ನೇಹಿತರೆ,

ತಡೆಗಟ್ಟಬಹುದಾದ ಕಾಯಿಲೆಗಳ ಆರೋಗ್ಯ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಯತ್ನಗಳು ಹೆಚ್ಚಿನ ಪರಿಣಾಮ ಬೀರಿವೆ. ಕಸಕ್ಕೆ ಸಂಬಂಧಿಸಿದ ರೋಗಗಳಿಂದ ರಕ್ಷಿಸಲು ಸ್ವಚ್ಛ ಭಾರತ ಅಭಿಯಾನ, ಹೊಗೆಯಿಂದ ಉಂಟಾಗುವ ರೋಗಗಳಿಂದ ರಕ್ಷಿಸಲು ಉಜ್ವಲ ಯೋಜನೆ, ಕಲುಷಿತ ನೀರಿನಿಂದ ಉಂಟಾಗುವ ರೋಗಗಳಿಂದ ರಕ್ಷಿಸಲು ಜಲಜೀವನ್ ಮಿಷನ್‌ನಂತಹ ಉಪಕ್ರಮಗಳು ದೇಶದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿವೆ. ಅಂತೆಯೇ, ಅಪೌಷ್ಟಿಕತೆ ಮತ್ತು ರಕ್ತಹೀನತೆ ಕೂಡ ನಮ್ಮ ದೇಶದ ಪ್ರಮುಖ ಸಮಸ್ಯೆಯಾಗಿದೆ. ಆದ್ದರಿಂದ, ನಾವು ರಾಷ್ಟ್ರೀಯ ಪೋಷಣೆ ಮಿಷನ್ ಪ್ರಾರಂಭಿಸಿದ್ದೇವೆ. ಈಗ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಸಂತೋಷದ ವಿಷಯವಾಗಿದೆ. ಶ್ರೀ ಅನ್ನವು ಪೌಷ್ಟಿಕಾಂಶಕ್ಕೆ ಪ್ರಮುಖವಾದ ಉತ್ಕೃಷ್ಟ ಆಹಾರವಾಗಿದೆ. ನಮ್ಮ ದೇಶದ ಪ್ರತಿಯೊಂದು ಮನೆಯವರಿಗೂ ಶ್ರೀ-ಅನ್ನ ಬಹಳ ಪರಿಚಿತವಾಗಿದೆ. ಭಾರತದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯು ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಮತ್ತು ಮಿಷನ್ ಇಂದ್ರಧನುಷ್‌ ಕಾರ್ಯಕ್ರಮಗಳೊಂದಿಗೆ ನಾವು ಆರೋಗ್ಯಕರ ತಾಯ್ತನ ಮತ್ತು ಬಾಲ್ಯವನ್ನು ಖಾತ್ರಿಪಡಿಸುತ್ತಿದ್ದೇವೆ.

ಯೋಗ, ಆಯುರ್ವೇದ ಮತ್ತು ಫಿಟ್ ಇಂಡಿಯಾ ಆಂದೋಲನವು ಜನರನ್ನು ರೋಗಗಳಿಂದ ರಕ್ಷಿಸುವಲ್ಲಿ ಹೆಚ್ಚು ಸಹಾಯ ಮಾಡಿದೆ. ಆಯುರ್ವೇದಕ್ಕೆ ಸಂಬಂಧಿಸಿದ ಭಾರತೀಯ ಉತ್ಪನ್ನಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಭಾರತದ ಪ್ರಯತ್ನದಿಂದ ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ಜಾಗತಿಕ ಕೇಂದ್ರವನ್ನು ಭಾರತದಲ್ಲಿಯೇ ಸ್ಥಾಪಿಸಲಾಗುತ್ತಿದೆ. ಆದ್ದರಿಂದ, ನಾನು ಆರೋಗ್ಯ ಕ್ಷೇತ್ರದ ಎಲ್ಲ ಪಾಲುದಾರರಿಗೆ ವಿಶೇಷವಾಗಿ ಆಯುರ್ವೇದ ವಲಯದ ಸ್ನೇಹಿತರಿಗೆ ಪುರಾವೆ ಆಧಾರಿತ ಸಂಶೋಧನೆ ಹೆಚ್ಚಿಸಲು ಒತ್ತಾಯಿಸುತ್ತೇನೆ. ಫಲಿತಾಂಶವು ಸಾಕಾಗುವುದಿಲ್ಲ, ಸಾಕ್ಷ್ಯವೂ ಅಷ್ಟೇ ಮುಖ್ಯ. ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯಮಶೀಲರು ಸಂಶೋಧನಾ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ.

ಸ್ನೇಹಿತರೆ,

ಆಧುನಿಕ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಾಗ ದೇಶದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳಿಗೆ ಮತ್ತೊಂದು ಅಂಶವಿದೆ. ದೇಶದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಹೊಸ ಸಾಮರ್ಥ್ಯಗಳ ಪ್ರಯೋಜನಗಳು ದೇಶವಾಸಿಗಳಿಗೆ ಮಾತ್ರ ಸೀಮಿತವಾಗಬಾರದು, ಈಗ ದೇಶಗಳು ಪರಸ್ಪರ ಸಂಪರ್ಕ ಹೊಂದಿವೆ. ಭಾರತವನ್ನು ವಿಶ್ವದ ಅತ್ಯಂತ ಆಕರ್ಷಕ ವೈದ್ಯಕೀಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಇದು ನಮ್ಮ ಮುಂದಿರುವ ದೊಡ್ಡ ಅವಕಾಶವಾಗಿದೆ. ವೈದ್ಯಕೀಯ ಪ್ರವಾಸೋದ್ಯಮವು ಭಾರತದಲ್ಲಿ ಒಂದು ಬೃಹತ್ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ಮಾಧ್ಯಮವಾಗುತ್ತಿದೆ.

ಸ್ನೇಹಿತರೆ,

'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ), ನಾವು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಅಭಿವೃದ್ಧಿ ಹೊಂದಿದ ಆರೋಗ್ಯ ಮತ್ತು ಸ್ವಾಸ್ಥ್ಯ ಪರಿಸರ ವ್ಯವಸ್ಥೆ ರೂಪಿಸಬಹುದು. ಈ ವೆಬಿನಾರ್‌ಗೆ ಹಾಜರಾಗಿರುವ ಎಲ್ಲ ಪಾಲುದಾರರು ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡುವಂತೆ ನಾನು ವಿನಂತಿಸುತ್ತೇನೆ. ನಿಗದಿತ ಗುರಿಗಳಿಗೆ ನಿರ್ದಿಷ್ಟ ಮಾರ್ಗಸೂಚಿಯೊಂದಿಗೆ ಬಜೆಟ್ ಪ್ರಸ್ತಾವಗಳನ್ನು ಕಾಲಮಿತಿಯಲ್ಲಿ ಕಾರ್ಯಗತಗೊಳಿಸೋಣ, ಎಲ್ಲ ಪಾಲುದಾರರನ್ನು ಮುಂದಕ್ಕೆ ಕೊಂಡೊಯ್ಯುತ್ತಾ ಮುಂದಿನ ವರ್ಷದ ಬಜೆಟ್‌ಗೆ ಮೊದಲು ಈ ಕನಸುಗಳನ್ನು ಸಾಕಾರಗೊಳಿಸೋಣ. ಬಜೆಟ್‌ನ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು ಮತ್ತು ಅನುಭವಗಳು ನಮಗೆ ಅಗತ್ಯವಿದೆ. ನಿಮ್ಮ ವೈಯಕ್ತಿಕ ಅಭಿವೃದ್ಧಿ ಗುರಿಗಳನ್ನು ದೇಶದ ನಿರ್ಣಯಗಳೊಂದಿಗೆ ಜೋಡಿಸುವ ಮೂಲಕ ನಾವು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೇವೆ ಎಂಬುದು ನನಗೆ ಖಾತ್ರಿಯಿದೆ. ನಿಮಗೆ ಶುಭವಾಗಲಿ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s PC exports double in a year, US among top buyers

Media Coverage

India’s PC exports double in a year, US among top buyers
NM on the go

Nm on the go

Always be the first to hear from the PM. Get the App Now!
...
PM Congratulates India’s Men’s Junior Hockey Team on Bronze Medal at FIH Hockey Men’s Junior World Cup 2025
December 11, 2025

The Prime Minister, Shri Narendra Modi, today congratulated India’s Men’s Junior Hockey Team on scripting history at the FIH Hockey Men’s Junior World Cup 2025.

The Prime Minister lauded the young and spirited team for securing India’s first‑ever Bronze medal at this prestigious global tournament. He noted that this remarkable achievement reflects the talent, determination and resilience of India’s youth.

In a post on X, Shri Modi wrote:

“Congratulations to our Men's Junior Hockey Team on scripting history at the FIH Hockey Men’s Junior World Cup 2025! Our young and spirited team has secured India’s first-ever Bronze medal at this prestigious tournament. This incredible achievement inspires countless youngsters across the nation.”