ಶಾಲೆಯಲ್ಲಿ ವಿವಿಧೋದ್ದೇಶ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
ಸಿಂಧಿಯಾ ಶಾಲೆಯ 125ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು
ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು
"ಮಹಾರಾಜ ಮಾಧೋ ರಾವ್ ಸಿಂಧಿಯಾ-1 ಅವರು ದೂರದೃಷ್ಟಿಯುಳ್ಳವರಾಗಿದ್ದರು, ಅವರು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ಕನಸನ್ನು ಹೊಂದಿದ್ದರು"
"ಕಳೆದ ದಶಕದಲ್ಲಿ, ರಾಷ್ಟ್ರದ ಅಭೂತಪೂರ್ವ ದೀರ್ಘಕಾಲೀನ ಯೋಜನೆಗಳು ಅದ್ಭುತ ನಿರ್ಧಾರಗಳಿಗೆ ಕಾರಣವಾಗಿವೆ"
"ಇಂದಿನ ಯುವಕರು ಏಳಿಗೆ ಹೊಂದಲು ದೇಶದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ"
" ಅದು ವೃತ್ತಿಪರ ಜಗತ್ತಿನಲ್ಲಿರಲಿ ಅಥವಾ ಇನ್ನಾವುದೇ ಕ್ಷೇತ್ರದಲ್ಲಾಗಲಿ ಸಿಂಧಿಯಾ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತವನ್ನು ʻವಿಕಸಿತ ಭಾರತʼವನ್ನಾಗಿ ಮಾಡಲು ಶ್ರಮಿಸಬೇಕು"
"ಭಾರತ ಇಂದು ಏನನ್ನೇ ಮಾಡಿದರೂ, ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ"
"ನಿಮ್ಮ ಕನಸು ನನ್ನ ಸಂಕಲ್ಪ"

ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲ ಶ್ರೀ ಮಂಗುಭಾಯ್ ಪಟೇಲ್ ಅವರೇ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹಾಗೂ ಸಿಂಧಿಯಾ ಶಾಲಾ ಮಂಡಳಿಯ ನಿರ್ದೇಶಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮತ್ತು ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀ ನರೇಂದ್ರ ಸಿಂಗ್ ತೋಮರ್, ಡಾ. ಜಿತೇಂದ್ರ ಸಿಂಗ್ ಅವರೇ, ಶಾಲಾ ಆಡಳಿತ ಮಂಡಳಿಯ ಸಹೋದ್ಯೋಗಿಗಳೇ, ಎಲ್ಲಾ ಸಿಬ್ಬಂದಿ, ಶಿಕ್ಷಕರು, ಪೋಷಕರು ಮತ್ತು ಆತ್ಮೀಯ ಯುವ ಸ್ನೇಹಿತರೇ!

ಸಿಂಧಿಯಾ ಶಾಲೆಯ 125ನೇ ವಾರ್ಷಿಕೋತ್ಸವದಂದು ನಿಮ್ಮೆಲ್ಲರಿಗೂ ಅಭಿನಂದನೆಗಳು. ಇಂದು ʻಆಜಾದ್ ಹಿಂದ್ʼ ಸರ್ಕಾರದ ಸಂಸ್ಥಾಪನಾ ದಿನವೂ ಹೌದು. ನಾನು ದೇಶದ ಎಲ್ಲ ನಾಗರಿಕರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಅದ್ಭುತ ಇತಿಹಾಸದೊಂದಿಗೆ ನಂಟು ಹೊಂದಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಇತಿಹಾಸವು ಸಿಂಧಿಯಾ ಶಾಲೆ ಮತ್ತು ಐತಿಹಾಸಿಕ ನಗರ ಗ್ವಾಲಿಯರ್‌ಗೆ ಸೇರಿದ್ದು. ಋಷಿ ಗ್ವಾಲಿಪಾದಿಂದ ಹಿಡಿದು ಸಂಗೀತ ಮಾಂತ್ರಿಕ ತಾನ್ಸೇನ್, ಶ್ರೀಮಂತ್ ಮಹದ್‌ಜಿ ಸಿಂಧಿಯಾ ಜೀ, ರಾಜಮಾತಾ ವಿಜಯರಾಜೆ, ಅಟಲ್ ಬಿಹಾರಿ ವಾಜಪೇಯಿ ಮತ್ತು ಉಸ್ತಾದ್ ಅಮ್ಜದ್ ಅಲಿ ಖಾನ್ ಅವರವರೆಗೆ ಗ್ವಾಲಿಯರ್‌ನ ಈ ಭೂಮಿ ತಲೆಮಾರುಗಳಿಂದ ಸ್ಫೂರ್ತಿ ನೀಡುತ್ತಲೇ ಇದೆ.

 

ಈ ಭೂಮಿಯು 'ನಾರಿ ಶಕ್ತಿ' (ಮಹಿಳಾ ಶಕ್ತಿ) ಮತ್ತು ವೀರ ವನಿತೆಯರ ನೆಲೆಯಾಗಿದೆ. ಮಹಾರಾಣಿ ಗಂಗಾಬಾಯಿ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಸೈನ್ಯಕ್ಕೆ ಧನಸಹಾಯ ನೀಡಲು ತಮ್ಮ ಆಭರಣಗಳನ್ನೇ ಮಾರಾಟ ಮಾಡಿದರು. ಆದ್ದರಿಂದ, ಗ್ವಾಲಿಯರ್‌ಗೆ ಭೇಟಿ ಂನೀಡುವುದು ತುಂಬಾ ಆಹ್ಲಾದಕರವಾದ ಅನುಭವ. ಗ್ವಾಲಿಯರ್‌ನೊಂದಿಗೆ ನನಗೆ ಎರಡು ವಿಶೇಷ ಸಂಪರ್ಕಗಳಿವೆ. ಮೊದಲನೆಯದಾಗಿ, ನಾನು ವಾರಣಾಸಿಯ ಸಂಸತ್ ಸದಸ್ಯ. ಮತ್ತು ಸಿಂಧಿಯಾ ಕುಟುಂಬವು ವಾರಣಾಸಿಗೆ ಸೇವೆ ಸಲ್ಲಿಸುವಲ್ಲಿ ಮತ್ತು ನಮ್ಮ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಿಂಧಿಯಾ ಕುಟುಂಬವು ಗಂಗಾ ದಡದಲ್ಲಿ ಹಲವಾರು ಘಾಟ್‌ಗಳನ್ನು ನಿರ್ಮಿಸಿದೆ ಮತ್ತು ʻಬನಾರಸ್‌ ಹಿಂದೂ ವಿಶ್ವವಿದಾಲಯʼ (ಬಿಎಚ್‌ಯು) ಸ್ಥಾಪನೆಗೆ ಆರ್ಥಿಕ ನೆರವು ನೀಡಿದೆ. ಇಂದು ವಾರಣಾಸಿಯ ಅಭಿವೃದ್ಧಿಯನ್ನು ನೋಡಿದರೆ, ಮಹಾರಾಣಿ ಬೈಜಾಬಾಯಿ ಮತ್ತು ಮಹಾರಾಜ್ ಮಾಧವ್ ರಾವ್ ಅವರ ಆತ್ಮಗಳು ಎಲ್ಲೇ ಇದ್ದರು ತೃಪ್ತಿ ಕಾಣುತ್ತವೆಂದು ನಾವು ಭಾವಿಸಬಹುದು.

ನಾನು ಆಗಲೇ ಹೇಳಿದಂತೆ ಎರಡು ಕಾರಣಗಳಿವೆ, ಮತ್ತೊಂದು ಕಾರಣವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಗ್ವಾಲಿಯರ್‌ನೊಂದಿಗೆ ನನಗೆ ಮತ್ತೊಂದು ನಂಟಿದೆ. ಅದೆಂದರೆ, ನಮ್ಮ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಜರಾತ್‌ನ ಅಳಿಯ. ಆದ್ದರಿಂದ, ನಾನು ಗ್ವಾಲಿಯರ್‌ನೊಂದಿಗೆ ಈ ರೀತಿಯಾಗಿ ಕೌಟುಂಬಿಕ ಸಂಬಂಧವನ್ನೂ ಹೊಂದಿದ್ದೇನೆ. ನನಗೆ ಈ ನಗರದೊಂದಿಗೆ ಮತ್ತೂ ಒಂದು ಸಂಪರ್ಕವಿದೆ. ಅದೆಂದರೆ, ನನ್ನ ಗ್ರಾಮವು ಗಾಯಕ್ವಾಡ್ ಎಸ್ಟೇಟ್‌ಗೆ ಸೇರಿದ್ದು. ನನ್ನ ಹಳ್ಳಿಯಲ್ಲಿ ಸ್ಥಾಪಿಸಲಾದ ಮೊದಲ ಪ್ರಾಥಮಿಕ ಶಾಲೆಯನ್ನು ಗಾಯಕ್ವಾಡ್ ಕುಟುಂಬವು ನಿರ್ಮಿಸಿತು. ಗಾಯಕ್ವಾಡ್ ಜೀ ಅವರು ನಿರ್ಮಿಸಿದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಅದೃಷ್ಟ ನನ್ನದಾಗಿತ್ತು.

ಸ್ನೇಹಿತರೇ,

ನಮ್ಮ ದೇಶದಲ್ಲಿ ಹೀಗೆ ಹೇಳಲಾಗಿದೆ: "मनस्येकं वचस्येकं कर्मण्येकं महात्मानाम्।"

ಇದರರ್ಥ ಸದ್ಗುಣಶೀಲ ವ್ಯಕ್ತಿಯು ಸಾಮರಸ್ಯದಿಂದ ಯೋಚಿಸುತ್ತಾನೆ, ಮಾತನಾಡುತ್ತಾನೆ ಮತ್ತು ವರ್ತಿಸುತ್ತಾನೆ. ಇದು ಆತ್ಮಸಾಕ್ಷಿಯ ವ್ಯಕ್ತಿತ್ವದ ಗುರುತಿಸುವಿಕೆ. ಆತ್ಮಸಾಕ್ಷಿಯ ವ್ಯಕ್ತಿಯು ಕೇವಲ ತಕ್ಷಣದ ಪ್ರಯೋಜನಗಳಿಗಾಗಿ ಮಾತ್ರವಲ್ಲ, ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಲು ಕೆಲಸ ಮಾಡುತ್ತಾನೆ. ಒಂದು ಹಳೆಯ ಮಾತೂ ಇದೆ: ʻʻನೀವು ಒಂದು ವರ್ಷದ ಬಗ್ಗೆ ಯೋಚಿಸುತ್ತಿದ್ದರೆ ಬೀಜಗಳನ್ನು ಬಿತ್ತಿ, ನೀವು ಒಂದು ದಶಕದ ಬಗ್ಗೆ ಯೋಚಿಸುತ್ತಿದ್ದರೆ ಮರಗಳನ್ನು ನೆಡಿ ಮತ್ತು ನೀವು ಒಂದು ಶತಮಾನದತ್ತ ಯೋಚಿಸುತ್ತಿದ್ದರೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ.”

ಮಹಾರಾಜ ಮಾಧೋ ರಾವ್ ಸಿಂಧಿಯಾ ಅವರು ಕೇವಲ ತಕ್ಷಣದ ಪ್ರಯೋಜನಗಳಿಗಾಗಿ ಮಾತ್ರವಲ್ಲದೆ, ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಲು ಈ ದೃಷ್ಟಿಕೋನವನ್ನು ಹೊಂದಿದ್ದರು. ಸಿಂಧಿಯಾ ಶಾಲೆ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿದೆ. ಅವರು ಮಾನವ ಸಂಪನ್ಮೂಲದ ಶಕ್ತಿಯನ್ನು ತಿಳಿದಿದ್ದರು. ಮಾಧೋ ರಾವ್ ಅವರು ಸ್ಥಾಪಿಸಿದ ʻಭಾರತೀಯ ಸಾರಿಗೆ ಕಂಪನಿʼಯು ಇನ್ನೂ ದೆಹಲಿಯಲ್ಲಿ ʻಡಿಟಿಸಿʼಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವಿಷಯ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಭವಿಷ್ಯದ ಪೀಳಿಗೆಗಾಗಿ ನೀರಿನ ಸಂರಕ್ಷಣೆಯ ಬಗ್ಗೆಯೂ ಅವರು ಗಮನ ಹರಿಸಿದರು. ಆ ಯುಗದಲ್ಲಿ, ಅವರು ನೀರು ಮತ್ತು ನೀರಾವರಿಗಾಗಿ ಮಹತ್ವದ ವ್ಯವಸ್ಥೆಯನ್ನು ಸ್ಥಾಪಿಸಿದರು. 150 ವರ್ಷಗಳ ನಂತರವೂ, 'ಹರ್ಸಿ ಅಣೆಕಟ್ಟು' ಏಷ್ಯಾದ ಅತಿದೊಡ್ಡ ಮಣ್ಣಿನ ಅಣೆಕಟ್ಟಾಗಿ ಉಳಿದಿದೆ. ಈ ಅಣೆಕಟ್ಟು ಇನ್ನೂ ಜನರಿಗೆ ಸೇವೆ ಸಲ್ಲಿಸುತ್ತಿದೆ. ಮಾಧೋ ರಾವ್ ಅವರ ವ್ಯಕ್ತಿತ್ವವು ನಮಗೆಲ್ಲರಿಗೂ ಒಳನೋಟದ ಪಾಠಗಳನ್ನು ಒದಗಿಸುತ್ತದೆ. ಅದು ಶಿಕ್ಷಣವಾಗಿರಲಿ, ವೃತ್ತಿನವಾಗಿರಲಿ, ಜೀವನ ಅಥವಾ ರಾಜಕೀಯವಾಗಿರಲೀ, ದೀರ್ಘಕಾಲೀನ ದೃಷ್ಟಿಕೋನದಿಂದ ಕೆಲಸ ಮಾಡುವುದು ಬಹಳ ಮುಖ್ಯ. ಅಡ್ಡದಾರಿಗಳು ನಿಮಗೆ ತಕ್ಷಣದ ಲಾಭವನ್ನು ನೀಡಬಹುದು. ಆದರೆ ಸಮಾಜ ಅಥವಾ ರಾಜಕೀಯದಲ್ಲಿ ತಕ್ಷಣದ ಸ್ವಾರ್ಥಕ್ಕಾಗಿ ಕೆಲಸ ಮಾಡುವವರು ಸಮಾಜ ಮತ್ತು ರಾಷ್ಟ್ರಕ್ಕೆ ಹಾನಿ ಮಾಡುತ್ತಾರೆ.

 

ಸ್ನೇಹಿತರೇ,

2014ರಲ್ಲಿ, ದೇಶವು ನನಗೆ ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು ವಹಿಸಿದಾಗ, ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದೋ ತಕ್ಷಣದ ಲಾಭಕ್ಕಾಗಿ ಮಾತ್ರ ಕೆಲಸ ಮಾಡುವುದು ಅಥವಾ ದೀರ್ಘಕಾಲೀನ ವಿಧಾನವನ್ನು ಅಳವಡಿಸಿಕೊಳ್ಳುವುದು. ನಾವು 2 ವರ್ಷಗಳು, 5 ವರ್ಷಗಳು, 8 ವರ್ಷಗಳು, 10 ವರ್ಷಗಳು, 15 ವರ್ಷಗಳು ಮತ್ತು 20 ವರ್ಷಗಳು ಎಂಬ ವಿಭಿನ್ನ ಮಿತಿಗಳೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಇಂದು, ನಮ್ಮ ಸರ್ಕಾರ 10 ವರ್ಷಗಳಿಂದ ಅಧಿಕಾರದಲ್ಲಿದೆ. ಈ 10 ವರ್ಷಗಳಲ್ಲಿ, ದೀರ್ಘಕಾಲೀನ ಯೋಜನೆಯೊಂದಿಗೆ ದೇಶವು ತೆಗೆದುಕೊಂಡ ನಿರ್ಧಾರಗಳು ಅಭೂತಪೂರ್ವವಾಗಿವೆ. ಬಾಕಿ ಇರುವ ಅನೇಕ ನಿರ್ಧಾರಗಳ ಹೊರೆಯಿಂದ ನಾವು ದೇಶವನ್ನು ಮುಕ್ತಗೊಳಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಬೇಕೆಂದು 60 ವರ್ಷಗಳಿಂದ ಬೇಡಿಕೆ ಇತ್ತು. ನಮ್ಮ ಸರ್ಕಾರ ಇದನ್ನು ಮಾಡಿದೆ. ಮಾಜಿ ಸೈನಿಕರಿಗೆ 'ಸಮಾನ ಶ್ರೇಣಿ, ಸಮಾನ ಪಿಂಚಣಿʼ ನೀಡಬೇಕು ಎಂಬ ಬೇಡಿಕೆ 40 ವರ್ಷಗಳಿಂದ ಇತ್ತು. ನಮ್ಮ ಸರ್ಕಾರ ಈ ಬೇಡಿಕೆಯನ್ನೂ ಈಡೇರಿಸಿದೆ. 40 ವರ್ಷಗಳಿಂದ ʻಜಿಎಸ್‌ಟಿʼಯನ್ನು ಜಾರಿಗೆ ತರಬೇಕೆಂಬ ಬೇಡಿಕೆ ಇತ್ತು. ನಮ್ಮ ಸರ್ಕಾರವೂ ಅದನ್ನು ನೆರವೇರಿಸಿದೆ.

ದಶಕಗಳಿಂದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ ವಿರುದ್ಧ ಕಾನೂನಿಗಾಗಿ ಒತ್ತಾಯಿಸುತ್ತಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ʻತ್ರಿವಳಿ ತಲಾಕ್‌ʼ ವಿರುದ್ಧದ ಕಾನೂನನ್ನು ಜಾರಿಗೆ ತರಲಾಯಿತು. ಕೆಲವು ವಾರಗಳ ಹಿಂದೆ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಳಕ್ಕೆ ಕಾನೂನು ಮಾಡಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇದು ಕೂಡ ದಶಕಗಳಿಂದ ಬಾಕಿ ಉಳಿದಿತ್ತು. ʻನಾರಿ ಶಕ್ತಿ ವಂದನಾ ಅಧಿನಿಯಮ್ʼ ಅನ್ನು ಸಹ ನಮ್ಮ ಸರ್ಕಾರ ಜಾರಿಗೆ ತಂದಿದೆ.

ನನ್ನ ಬಳಿ ಇಂತಹ ಸಾಧನೆಗಳ ದೊಡ್ಡ ಪಟ್ಟಿಯೇ ಇದೆ, ಅದನ್ನು ಮುಗಿಸಲು ಇಡೀ ರಾತ್ರಿ ಹಿಡಿಯಬಹುದು. ನಾನು ಈ ಮಹತ್ವದ ನಿರ್ಧಾರಗಳನ್ನು ಉಲ್ಲೇಖಿಸಿದ್ದೇನೆ ಏಕೆಂದರೆ ನಮ್ಮ ಸರ್ಕಾರವು ಈ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ಯಾರು ತೊಂದರೆ ಅನುಭವಿಸುತ್ತಿದ್ದರು? ನಾವು ಇದನ್ನು ಮಾಡದಿದ್ದರೆ, ಯಾರು ತೊಂದರೆ ಅನುಭವಿಸುತ್ತಿದ್ದರು? ಅದು ನಿಮ್ಮ ಪೀಳಿಗೆಯೇ. ಆದ್ದರಿಂದ, ನಾನು ನಿಮ್ಮ ಪೀಳಿಗೆಯ ಹೊರೆಯನ್ನು ಕಡಿಮೆ ಮಾಡಿದ್ದೇನೆ. ಇಂದಿನ ಯುವ ಪೀಳಿಗೆಗೆ ದೇಶದಲ್ಲಿ ಅತ್ಯಂತ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ನನ್ನ ಪ್ರಯತ್ನವಾಗಿದೆ - ನಿಮ್ಮ ಪೀಳಿಗೆಗೆ ಅವಕಾಶಗಳ ಕೊರತೆಯಿಲ್ಲದ ವಾತಾವರಣ, ಭಾರತದ ಯುವಕರು ದೊಡ್ಡ ಕನಸುಗಳನ್ನು ಕಾಣುವ ಮತ್ತು ಆ ಕನಸುಗಳನ್ನು ಸಾಧಿಸುವ ವಾತಾವರಣ ಸೃಷ್ಟಿಸುವುದು ನನ್ನ ಪ್ರಯತ್ನವಾಗಿದೆ. ದೊಡ್ಡ ಕನಸು ಕಾಣಿರಿ ಮತ್ತು ದೊಡ್ಡದನ್ನು ಸಾಧಿಸಿ. ನಾನು ಇದನ್ನು ನಿಮಗೆ ಏಕೆ ಹೇಳುತ್ತಿದ್ದೇನೆಂದರೆ ಸಿಂಧಿಯಾ ಶಾಲೆ ತನ್ನ 150 ವರ್ಷಗಳನ್ನು ಪೂರ್ಣಗೊಳಿಸಿದಾಗ, ದೇಶವು ಮಹತ್ವದ ಮೈಲಿಗಲ್ಲನ್ನು ತಲುಪಲಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬಲಿವೆ.

ಮುಂದಿನ 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸಲು ನಾವು ಸಂಕಲ್ಪ ಮಾಡಿದ್ದೇವೆ. ಮತ್ತು ಇದನ್ನು ನೀವು ಮಾಡಬೇಕು, ಭಾರತದ ಯುವ ಪೀಳಿಗೆ ಇದನ್ನು ಮಾಡಬೇಕು. ಈ ವಿಚಾರದಲ್ಲಿ ನನಗೆ ನಿಮ್ಮ ಮೇಲೆ ವಿಶ್ವಾಸವಿದೆ. ಯುವಶಕ್ತಿಯ ಮೇಲೆ, ಯುವಕರ ಸಾಮರ್ಥ್ಯಗಳ ಮೇಲೆ ನನಗೆ ನಂಬಿಕೆಯಿದೆ. ನೀವು ಈ ಕನಸುಗಳನ್ನು ಬೆಳೆಸಿ, ಅವುಗಳನ್ನು ಸಂಕಲ್ಪಗಳಾಗಿ ಪರಿವರ್ತಿಸಿ, ಆ ಸಂಕಲ್ಪವನ್ನು ಸಾಧಿಸುವವರೆಗೆ ನಿಲ್ಲದೆ ಕೆಲಸ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ.

ಮುಂದಿನ 25 ವರ್ಷಗಳಲ್ಲಿ, ನಿಮ್ಮ ಜೀವನಕ್ಕೆ ಯಾವುದು ಅವಶ್ಯಕವೋ ಅದು ಭಾರತದ ಅಂದರೆ, ದೇಶದ ಪಾಲಿಗೂ ಅಷ್ಟೇ ನಿರ್ಣಾಯಕವಾಗಿದೆ. ಸಿಂಧಿಯಾ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ - ನಾನು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇನೆ ಎಂಬ ಬದ್ಧತೆಯನ್ನು ಹೊಂದಿರಬೇಕು. ಸ್ನೇಹಿತರೇ, ನೀವು ಅದನ್ನು ಮಾಡುತ್ತೀರಿ ತಾನೆ? ನಾನು ಪ್ರತಿಯೊಂದು ಪ್ರಯತ್ನದಲ್ಲೂ ರಾಷ್ಟ್ರ ಮೊದಲು ಎಂಬ ತತ್ವದೊಂದಿಗೆ ಕೆಲಸ ಮಾಡುತ್ತೇನೆ. ನಾನು ಸಂಶೋಧನೆ, ಆವಿಷ್ಕಾರ, ವೃತ್ತಿಪರ ಜಗತ್ತು ಹೀಗೆ ಯಾವುದರಲ್ಲೇ ಇರಲಿ ಅಥವಾ ಯಾವುದೇ ಸ್ಥಳದಲ್ಲೇ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂಬ ಬದ್ಧತೆಯನ್ನು ವಿದ್ಯಾರ್ಥಿಗಳು ತೋರಬೇಕು.

ಮತ್ತು ಸ್ನೇಹಿತರೇ,

ಸಿಂಧಿಯಾ ಶಾಲೆಯ ಮೇಲೆ ನನಗೆ ಏಕೆ ಇಷ್ಟೊಂದು ವಿಶ್ವಾಸ ಮೂಡಲು ಕಾರಣ ಏನೆಂದು ನಿಮಗೆ ಗೊತ್ತೇ? ಏಕೆಂದರೆ ನಿಮ್ಮ ಶಾಲೆಯ ಕೆಲವು ಹಳೆಯ ವಿದ್ಯಾರ್ಥಿಗಳನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಪ್ರಧಾನಿ ಕಾರ್ಯಾಲಯದಲ್ಲಿ ಸಹಾಯಕ ಸಚಿವರಾಗಿರುವ ಜಿತೇಂದ್ರ ಸಿಂಗ್ ಅವರು ವೇದಿಕೆಯ ಮೇಲೆ ಕುಳಿತಿದ್ದಾರೆ. ಅವರು ನಿಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯೂ ಹೌದು. ರೇಡಿಯೋದಲ್ಲಿ ನಮ್ಮನ್ನು ಮೋಡಿ ಮಾಡುತ್ತಿದ್ದ ಧ್ವನಿ ಅಮೀನ್ ಸಯಾನಿ ಜೀ, ಲೆಫ್ಟಿನೆಂಟ್ ಜನರಲ್ ಮೋತಿ ದಾರ್ ಜೀ, ಇಲ್ಲಿ ಅದ್ಭುತ ಪ್ರಸ್ತುತಿಯನ್ನು ನೀಡಿದ ಮೀಟ್ ಬ್ರದರ್ಸ್ ಮತ್ತು ನಿರ್ಭೀತ ಸಲ್ಮಾನ್ ಖಾನ್ ಹಾಗೂ ನನ್ನ ಸ್ನೇಹಿತ ನಿತಿನ್ ಮುಖೇಶ್ ಜೀ ಇಲ್ಲಿ ಕುಳಿತಿದ್ದಾರೆ. ಸಿಂಧಿಯಾ ಶಾಲೆಯ ವಿದ್ಯಾರ್ಥಿಗಳ ಚಿತ್ರಪಟ ಎಷ್ಟು ವಿಶಾಲವಾಗಿದೆಯೆಂದರೆ ಅದರಲ್ಲಿ ನಾವು ಎಲ್ಲಾ ರೀತಿಯ ಬಣ್ಣಗಳನ್ನು ನೋಡಬಹುದು.

 

ನನ್ನ ಯುವ ಸ್ನೇಹಿತರೇ, ವಿಷ್ಣು ಪುರಾಣದಲ್ಲಿ ಹೀಗೆ ಬರೆಯಲಾಗಿದೆ:

गायन्ति देवाः किल गीतकानि, धन्यास्तु ते भारतभूमिभागे।

ಇದರರ್ಥ ದೇವತೆಗಳು ಸಹ ಈ ಭರತ ಭೂಮಿಯಲ್ಲಿ ಜನಿಸಿದವರನ್ನು ಸ್ತುತಿಸುತ್ತಾರೆ. ಅವರು ಸ್ವತಃ ದೇವತೆಗಳಿಗಿಂತಲೂ ಅದೃಷ್ಟವಂತರು. ಇಂದು, ಭಾರತದ ಯಶಸ್ಸು ಅಭೂತಪೂರ್ವ ಎತ್ತರದಲ್ಲಿದೆ. ಭಾರತದ ಧ್ವಜ ವಿಶ್ವದಾದ್ಯಂತ ಎತ್ತರದಲ್ಲಿ ರಾರಾಜಿಸುತ್ತಿದೆ. ಆಗಸ್ಟ್ 23 ರಂದು, ಭಾರತವು ಇದುವರೆಗೂ ಬೇರೆ ಯಾವುದೇ ದೇಶವು ತಲುಪಲು ಸಾಧ್ಯವಾಗದ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿತು. ʻಜಿ-20ʼ ಶೃಂಗಸಭೆಯಲ್ಲಿ ಭಾರತದ ಯಶಸ್ಸನ್ನು ನೀವು ನೋಡಿದ್ದೀರಿ. ಇಂದು, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕ ʻಫಿನ್‌ಟೆಕ್‌ʼ ಅಳವಡಿಕೆ ದರದಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ನೈಜ-ಸಮಯದ ಡಿಜಿಟಲ್ ವಹಿವಾಟುಗಳನ್ನು ನಡೆಸುವಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸ್ಮಾರ್ಟ್‌ಫೋನ್ ಡೇಟಾ ಬಳಕೆ ವಿಷಯದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಇಂದು, ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಬಳಕೆದಾರ ರಾಷ್ಟ್ರವಾಗಿದೆ. ಇಂದು, ಭಾರತವು ಬಾಹ್ಯಾಕಾಶದಲ್ಲಿ ತನ್ನ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿದೆ. ಇಂದು ಬೆಳಗ್ಗೆ, ನೀವು ಗಗನಯಾನದ ಯಶಸ್ವಿ ಪರೀಕ್ಷಾ ಹಾರಾಟ ಮತ್ತು 'ಕ್ರೂ ಎಸ್ಕೇಪ್ ಸಿಸ್ಟಮ್'ನ ಯಶಸ್ವಿ ಪರೀಕ್ಷೆಯನ್ನು ನೋಡಿದ್ದೀರಿ. ಗ್ವಾಲಿಯರ್ ಇಷ್ಟು ದೊಡ್ಡ ವಾಯುಪಡೆಯ ನೆಲೆಯನ್ನು ಹೊಂದಿದೆ... ಆಕಾಶದಲ್ಲಿ ʻತೇಜಸ್ʼ ಯುದ್ಧ ವಿಮಾನಗಳು ಹಾರಾಟ ನಡೆಸುವುದನ್ನು ನೀವು ನೋಡಿಲ್ಲವೇ? ಸಮುದ್ರದಲ್ಲಿ ʻಐಎನ್ಎಸ್ ವಿಕ್ರಾಂತ್‌ʼ ಘರ್ಜನೆಯನ್ನು ನೀವು ಕೇಳಿಲ್ಲವೇ? ಇಂದು ಭಾರತಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ.

ಇದರ ಬಗ್ಗೆ ಸ್ವಲ್ಪ ಯೋಚಿಸಿ, 2014ಕ್ಕಿಂತ ಮೊದಲು ನಮ್ಮ ದೇಶದಲ್ಲಿ ಕೆಲವು ನೂರು ನವೋದ್ಯಮಗಳು ಇದ್ದವು. ಇಂದು, ಭಾರತದಲ್ಲಿ ನವೋದ್ಯಮಗಳ ಸಂಖ್ಯೆ ಸುಮಾರು ಒಂದು ಲಕ್ಷ ತಲುಪುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತವು 100ಕ್ಕೂ ಹೆಚ್ಚು ʻಯುನಿಕಾರ್ನ್‌ʼಗಳನ್ನು ಸ್ಥಾಪಿಸಿದೆ. ʻಯುನಿಕಾರ್ನ್ʼ ಎಂದರೇನೆಂದು ನಿಮಗೆ ತಿಳಿದಿದೆಯಲ್ಲವೇ? ಇದರರ್ಥ ಕನಿಷ್ಠ 8 ಶತಕೋಟಿ ರೂಪಾಯಿಗಳ ಕಂಪನಿ. ಸಿಂಧಿಯಾ ಶಾಲೆಯ ವಿದ್ಯಾರ್ಥಿಗಳು ಸಹ ಇಲ್ಲಿಂದ ಪದವಿ ಪಡೆದ ನಂತರ ತಮ್ಮ ಶಾಲೆ ಮತ್ತು ದೇಶದ ಹೆಸರನ್ನು ಬೆಳಗಿಸಲು ʻಯುನಿಕಾರ್ನ್‌ʼಗಳನ್ನು ಸ್ಥಾಪಿಸಬೇಕಿದೆ.

'ಜಗತ್ತೇ ನಿಮ್ಮ ಕಾಮ್ಯ ಸಂಪುಟ!!!ʼ ಒಂದು ಸರ್ಕಾರವಾಗಿ, ನಾವು ನಿಮಗಾಗಿ ಹೊಸ ಕ್ಷೇತ್ರಗಳನ್ನು ತೆರೆದಿಟ್ಟಿದ್ದೇವೆ. ಈ ಮೊದಲು, ಸರ್ಕಾರ ಮಾತ್ರ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿತ್ತು ಅಥವಾ ಅವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಯುವಜನರೇ, ನಾವು ನಿಮಗಾಗಿ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದಿದ್ದೇವೆ. ಈ ಮೊದಲು, ರಕ್ಷಣಾ ಉಪಕರಣಗಳನ್ನು ಸರ್ಕಾರ ಮಾತ್ರ ತಯಾರಿಸುತ್ತಿತ್ತು ಅಥವಾ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಾವು ನಿಮಗಾಗಿ, ಯುವಕರಿಗಾಗಿ ರಕ್ಷಣಾ ವಲಯವನ್ನು ಮುಕ್ತಗೊಳಿಸಿದ್ದೇವೆ. ನಿಮಗಾಗಿ ಈಗ ಭಾರತದಲ್ಲಿ ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನೀವು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಮುನ್ನಡೆಸಬೇಕಾಗಿದೆ. ನೀವು 'ಆತ್ಮನಿರ್ಭರ ಭಾರತ'ದ ಸಂಕಲ್ಪವನ್ನು ಮುನ್ನಡೆಸಬೇಕಾಗಿದೆ. ನನ್ನ ಮತ್ತೊಂದು ಮಂತ್ರವನ್ನು ನೆನಪಿಡಿ – ʻಸದಾ ಚೌಕಟ್ಟಿನಿಂದ ಹೊರಗೆ ಯೋಚಿಸಿʼ. ಜ್ಯೋತಿರಾದಿತ್ಯ ಸಿಂಗ್ ಜೀ ಅವರ ತಂದೆ, ನಮ್ಮ ಮಾಧವರಾವ್ ಸಿಂಧಿಯಾ ಜೀ ಅವರಂತೆ. ಅವರು ರೈಲ್ವೆ ಸಚಿವರಾಗಿದ್ದಾಗ, ಶತಾಬ್ದಿ ರೈಲುಗಳಿಗೆ ಚಾಲನೆ ಅವರು ನೀಡಿದರು. ಮುಂದಿನ ಮೂರು ದಶಕಗಳವರೆಗೆ ಭಾರತದಲ್ಲಿ ಅಂತಹ ಯಾವುದೇ ಆಧುನಿಕ ರೈಲುಗಳನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈಗ, ʻವಂದೇ ಭಾರತ್ʼ ಕೂಡ ದೇಶದಲ್ಲಿ ತನ್ನ ಛಾಪು ಮೂಡಿಸಿದೆ, ಮತ್ತು ನಿನ್ನೆಯಷ್ಟೇ ನೀವು ʻನಮೋ ಭಾರತ್ʼ ನ ವೇಗವನ್ನು ನೋಡಿದ್ದೀರಿ.

 

ಸ್ನೇಹಿತರೇ,

ಇಲ್ಲಿಗೆ ಬರುವ ಮೊದಲು, ನಾನು ಸಿಂಧಿಯಾ ಶಾಲೆಯ ವಿವಿಧ ಸದನಗಳ ಹೆಸರುಗಳನ್ನು ನೋಡುತ್ತಿದ್ದೆ ಮತ್ತು ಜ್ಯೋತಿರಾದಿತ್ಯ ಅವರು ಅವುಗಳ ಬಗ್ಗೆ ನನಗೆ ವಿವರಿಸುತ್ತಿದ್ದರು. ಸ್ವಯಮಾಡಳಿತದ ಸಂಕಲ್ಪಕ್ಕೆ ಸಂಬಂಧಿಸಿದ ಈ ಹೆಸರುಗಳು ನಿಮಗೆ ದೊಡ್ಡ ಸ್ಫೂರ್ತಿಯಾಗಿವೆ. ʻಶಿವಾಜಿ ಸದನ... ʻಮಹದ್‌ ಜೀ ಸದನʼ, ʻರಾನೋಜಿ ಸದನ, ದತ್ತಾ ಜೀ ಸದನ, ಕನೇರ್ಖೇಡ್ ಸದನ, ನಿಮಾ ಜೀ ಹೌಸ್, ಮಾಧವ್ ಸದನಗಳನ್ನು ಪರಿಚಯಿಸಲಾಯಿತು. ಇವುಗಳ ಮೂಲಕ  ಒಂದು ರೀತಿಯಲ್ಲಿ ನೀವು ಸಪ್ತ ಋಷಿಗಳ ಶಕ್ತಿಯನ್ನು ಹೊಂದಿದ್ದೀರಿ. ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಾನು ನಿಮಗೆ ಒಂಬತ್ತು ಕಾರ್ಯಗಳನ್ನು ನೀಡಬೇಕು ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಇದು ಶಾಲಾ ಕಾರ್ಯಕ್ರಮವಾಗಿರುವುದರಿಂದ ನಿಮಗೆ ʻಹೋಮ್‌ವರ್ಕ್‌ʼ ನೀಡದಿದ್ದರೆ, ಅದು ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ಇಂದು, ನಾನು ನಿಮಗೆ ಒಂಬತ್ತು ಕಾರ್ಯಗಳನ್ನು ನೀಡಲು ಬಯಸುತ್ತೇನೆ, ನಿಮಗೆ ನೆನಪಿದೆಯೇ? ಸಹೋದರರೇ, ನಿಮ್ಮ ಧ್ವನಿ ಏಕೆ ದುರ್ಬಲವಾಗಿದೆ? ನೀವು ಅದನ್ನು ನೆನಪಿಸಿಕೊಳ್ಳುತ್ತೀರಾ? ನೀವು ಅದಕ್ಕಾಗಿ ನಿರ್ಣಯವನ್ನು ಮಾಡುವಿರಾ? ಅದನ್ನು ಪೂರೈಸಲು ನೀವು ನಿಮ್ಮ ಜೀವನದುದ್ದಕ್ಕೂ ಕೆಲಸ ಮಾಡುವಿರಾ?

ಮೊದಲನೆಯದು - ನೀವೆಲ್ಲರೂ ಇಲ್ಲಿ ನೀರಿನ ಸಂರಕ್ಷಣೆಗಾಗಿ ತುಂಬಾ ಕೆಲಸ ಮಾಡಬೇಕು. ನೀರಿನ ಸುರಕ್ಷತೆಯು 21ನೇ ಶತಮಾನದ ಅತಿ ದೊಡ್ಡ ಸವಾಲಾಗಿದೆ. ಅದರ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ನಡೆಸಿ.

ಎರಡನೆಯದು - ಸಿಂಧಿಯಾ ಶಾಲೆಯಲ್ಲಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯವಿದೆ. ನೀವು ಹಳ್ಳಿಗಳಿಗೆ ಹೋಗಿ ಡಿಜಿಟಲ್ ವಹಿವಾಟಿನ ಬಗ್ಗೆ ಜನರಿಗೆ ತಿಳಿಸಬೇಕು.

ಮೂರನೆಯದು - ಸ್ವಚ್ಛತೆಯ ಧ್ಯೇಯ. ಮಧ್ಯಪ್ರದೇಶದ ಇಂದೋರ್ ಸ್ವಚ್ಛತೆಯಲ್ಲಿ ನಂಬರ್ ಒನ್ ಆಗಬಹುದಾದರೆ, ಗ್ವಾಲಿಯರ್ ಅನ್ನೂ ಏಕೆ ಹಾಗೆ ಮಾಡಬಾರದು? ಸ್ವಚ್ಛತೆಯಲ್ಲಿ ನಿಮ್ಮ ನಗರವನ್ನು ನಂಬರ್ ಒನ್ ಮಾಡುವ ಸವಾಲನ್ನು ತೆಗೆದುಕೊಳ್ಳಿ.

ನಾಲ್ಕನೆಯದು - ʻವೋಕಲ್ ಫಾರ್ ಲೋಕಲ್ʼ... ಸಾಧ್ಯವಾದಷ್ಟು, ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಿ, ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ಬಳಸಿ.

ಐದನೆಯದು - ಮೊದಲು ಭಾರತದಲ್ಲಿ ಸುತ್ತಾಡಿ... ಸಾಧ್ಯವಾದಷ್ಟು, ಮೊದಲು ನಿಮ್ಮ ಸ್ವಂತ ದೇಶವನ್ನು ನೋಡಿ, ನಿಮ್ಮ ದೇಶದಲ್ಲಿ ಪ್ರಯಾಣಿಸಿ, ನಂತರ ವಿದೇಶಗಳ ಕಡೆಗೆ ತಿರುಗಿ.

ಆರನೆಯದು - ನೈಸರ್ಗಿಕ ಕೃಷಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು. ಭೂಮಿ ತಾಯಿಯನ್ನು ಉಳಿಸಲು ಇದು ಬಹಳ ಅಗತ್ಯವಾದ ಅಭಿಯಾನವಾಗಿದೆ.

ಏಳನೆಯದು - ನಿಮ್ಮ ಜೀವನದಲ್ಲಿ ಸಿರಿಧಾನ್ಯಗಳನ್ನು - 'ಶ್ರೀ ಅನ್ನ'ವನ್ನು ಸೇರ್ಪಡೆಗೊಳಿಸಿ ಮತ್ತು ಅವುಗಳ ಬಳಕೆಯನ್ನು ಗಟ್ಟಿಯಾಗಿ ಉತ್ತೇಜಿಸಿ. ನಿಮಗೆ ಗೊತ್ತಾ, ಇದೊಂದು ʻಸೂಪರ್‌ ಫುಡ್‌ʼ.

ಎಂಟನೇಯದು – ಫಿಟ್ನೆಸ್. ಅದು ಯೋಗವಾಗಿರಲಿ ಅಥವಾ ಕ್ರೀಡೆಯಾಗಿರಲಿ, ಅದನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಿ. ಇಂದು, ಇಲ್ಲಿ ವಿವಿಧೋದ್ದೇಶದ ಕ್ರೀಡಾ ಸಂಕೀರ್ಣದ ಅಡಿಪಾಯವನ್ನೂ ಹಾಕಲಾಯಿತು. ಅದರ ಸಂಪೂರ್ಣ ಲಾಭವನ್ನು ಸಹ ಪಡೆಯಿರಿ.

 

ಮತ್ತು ಒಂಬತ್ತನೆಯದು - ಕನಿಷ್ಠ ಒಂದು ಬಡ ಕುಟುಂಬವನ್ನು ಕೈಹಿಡಿಯಿರಿ. ದೇಶದಲ್ಲಿ ಎಲ್‌ಪಿಜಿ ಸಂಪರ್ಕ, ಬ್ಯಾಂಕ್ ಖಾತೆ, ಶಾಶ್ವತ ಮನೆ ಅಥವಾ ʻಆಯುಷ್ಮಾನ್ ಕಾರ್ಡ್ʼ ಹೊಂದಿರದ ಒಬ್ಬ ವ್ಯಕ್ತಿಯೂ ಇಲ್ಲದಂತೆ ಮಾಡುವವರೆಗೂ ನಾವು ವಿರಮಿಸುವುದಿಲ್ಲ. ಭಾರತದಿಂದ ಬಡತನವನ್ನು ನಿರ್ಮೂಲನೆ ಮಾಡುವುದು ಬಹಳ ಅವಶ್ಯಕ. ಈ ಮಾರ್ಗವನ್ನು ಅನುಸರಿಸಿ, ಕೇವಲ ಐದು ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಈ ಹಾದಿಯಲ್ಲಿ ನಡೆದರೆ ಭಾರತವು ಬಡತನವನ್ನು ನಿರ್ಮೂಲನೆ ಮಾಡಬಲ್ಲದು ಮತ್ತು ಅಭಿವೃದ್ಧಿ ಹೊಂದಬಲ್ಲದು.

ಸ್ನೇಹಿತರೇ,

ಇಂದಿನ ಭಾರತವು ಏನನ್ನೇ ಮಾಡಿದರೂ ಎಲ್ಲವನ್ನೂ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಆದ್ದರಿಂದ, ನಿಮ್ಮ ಭವಿಷ್ಯದ ಬಗ್ಗೆ ನೀವು ಸಣ್ಣದಾಗಿ ಯೋಚಿಸಬಾರದು. ನಿಮ್ಮ ಕನಸುಗಳು ಮತ್ತು ಸಂಕಲ್ಪಗಳು ಎರಡೂ ದೊಡ್ಡದಾಗಿರಬೇಕು. ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ನಿಮ್ಮ ಕನಸೇ ನನ್ನ ಸಂಕಲ್ಪವಾಗಿದೆ. ನೀವು ನಿಮ್ಮ ಆಲೋಚನೆಗಳನ್ನು, ನಿಮ್ಮ ಆಲೋಚನೆಗಳನ್ನು ʻನಮೋ ಅಪ್ಲಿಕೇಶನ್ʼ ನಲ್ಲಿಯೂ ಹಂಚಿಕೊಳ್ಳಬಹುದು. ಮತ್ತು ಈಗ ನಾನು ʻವಾಟ್ಸ್‌ಆಪ್‌ʼನಲ್ಲೂ ಲಭ್ಯವಿದ್ದೇನೆ. ಹಾಗಾಗಿ, ನೀವು ಅಲ್ಲಿಯೂ ನನ್ನನ್ನು ಸಂಪರ್ಕಿಸಬಹುದು. ನೀವು ಬಯಸಿದರೆ, ನೀವು ನಿಮ್ಮ ರಹಸ್ಯಗಳನ್ನು ಸಹ ಹಂಚಿಕೊಳ್ಳಬಹುದು, ಅದನ್ನು ನಾನು ಯಾರಿಗೂ ಹೇಳುವುದಿಲ್ಲ ಎಂದು ಈ ಮೂಲಕ ಭರವಸೆ ನೀಡುತ್ತೇನೆ.

 

ಸ್ನೇಹಿತರೇ,

ಜೀವನವು ನಗು ಮತ್ತು ಹಾಸ್ಯದೊಂದಿಗೆ ಮುಂದುವರಿಯಬೇಕು. ಸಂತೋಷವಾಗಿರಿ ಮತ್ತು ಆರೋಗ್ಯವಾಗಿರಿ. ನಿಮ್ಮೆಲ್ಲರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನೆನಪಿಡಿ, ಸಿಂಧಿಯಾ ಶಾಲೆ ಕೇವಲ ಒಂದು ಸಂಸ್ಥೆಯಲ್ಲ, ಅದೊಂದು ಪರಂಪರೆ. ಇದು ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲದೆ ಸ್ವಾತಂತ್ರ್ಯದ ನಂತರವೂ ಮಹಾರಾಜ ಮಾಧೋ ರಾವ್ ಅವರ ಸಂಕಲ್ಪಗಳನ್ನು ಮುಂದಕ್ಕೆ ಕೊಂಡೊಯ್ದಿದೆ. ಈಗ, ಅದರ ಧ್ವಜ ನಿಮ್ಮ ಕೈಯಲ್ಲಿದೆ. ಸ್ವಲ್ಪ ಸಮಯದ ಹಿಂದೆ ಗೌರವಿಸಲ್ಪಟ್ಟ ಯುವಕರನ್ನು ನಾನು ಅಭಿನಂದಿಸುತ್ತೇನೆ. ಮತ್ತೊಮ್ಮೆ, ಸಿಂಧಿಯಾ ಶಾಲೆ ಮತ್ತು ಎಲ್ಲಾ ಯುವ ಸ್ನೇಹಿತರ ಉತ್ತಮ ಭವಿಷ್ಯಕ್ಕಾಗಿ ನನ್ನ ಅನೇಕಾನೇಕ ಶುಭ ಹಾರೈಕೆಗಳು.

ಎಲ್ಲರಿಗೂ ಧನ್ಯವಾದ. ನಮಸ್ಕಾರ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From Suzuki to Volkswagen, global auto giants bet big on India as sales slow elsewhere

Media Coverage

From Suzuki to Volkswagen, global auto giants bet big on India as sales slow elsewhere
NM on the go

Nm on the go

Always be the first to hear from the PM. Get the App Now!
...
PM Modi reaffirms resolve to harness Science & Tech for National Development and Global Good on National Science Day
February 28, 2026

The Prime Minister highlighted that, on National Science Day, we celebrate the spirit of research, innovation, and scientific curiosity that drives our nation forward.

PM Modi stated that, “This day commemorates the groundbreaking discovery of the Raman Effect by Sir CV Raman”. The Prime Minister noted that this discovery placed Indian research firmly on the global map.

The Prime Minister reaffirmed that our resolve to empower our youth, strengthen research ecosystems, and harness science and technology for national development and global good.

The Prime Minister wrote on X;

Today, on National Science Day, we celebrate the spirit of research, innovation and scientific curiosity that drives our nation forward.

This day commemorates the groundbreaking discovery of the Raman Effect by Sir CV Raman. This discovery placed Indian research firmly on the global map.

We reaffirm our resolve to empower our youth, strengthen research ecosystems and harness science and technology for national development and global good.