ನಮಸ್ಕಾರಗಳು,

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೀ, ಶ್ರೀ ಸಂಜಯ್ ಧೋತ್ರೇ ಜೀ, ಐ.ಐ.ಟಿ. ಖರಗ್ ಪುರ್ ನ ಅಧ್ಯಕ್ಷರಾದ ಶ್ರೀ ಸಂಜೀವ್ ಗೋಯೆಂಕಾ ಜೀ, ನಿರ್ದೇಶಕರಾದ ಶ್ರೀ ವಿ.ಕೆ. ತಿವಾರಿ ಜೀ, ಮತ್ತು ಇತರ ಬೋಧಕ ವರ್ಗದ ಸದಸ್ಯರೇ, ಎಲ್ಲ ಸಿಬ್ಬಂದಿ, ಪೋಷಕರೇ ಮತ್ತು ನನ್ನ ಯುವ ಸಹೋದ್ಯೋಗಿಗಳೇ!!.

ಇಂದಿನ ದಿನ ಪದವಿ ಪಡೆಯುತ್ತಿರುವ ಖರಗ್ ಪುರ ಐ.ಐ.ಟಿ.ಯ ವಿದ್ಯಾರ್ಥಿಗಳಿಗೆ ಬಹಳ ಪ್ರಮುಖ ದಿನ ಮಾತ್ರವಲ್ಲ, ಇಂದಿನ ದಿನವು ನವ ಭಾರತ ನಿರ್ಮಾಣ ಮಾಡುವುದಕ್ಕೂ ಅಷ್ಟೇ ಮಹತ್ವದ ದಿನ. ನಿಮ್ಮಿಂದ ನಿರೀಕ್ಷೆಗಳನ್ನು ಮಾಡುತ್ತಿರುವವರು ನಿಮ್ಮ ಪೋಷಕರು ಮತ್ತು ನಿಮ್ಮ ಪ್ರಾಧ್ಯಾಪಕರು ಮಾತ್ರವಲ್ಲ, ನೀವು ಭಾರತದ ೧೩೦ ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತಿದ್ದೀರಿ. ಆದುದರಿಂದ, 21ನೇ ಶತಮಾನದ ಸ್ವಾವಲಂಬಿ ಭಾರತ ಈ ಸಂಸ್ಥೆಯಿಂದ ಹೊಸ ಪರಿಸರ ವ್ಯವಸ್ಥೆಗಾಗಿ ಹೊಸ ನಾಯಕತ್ವವನ್ನು ನಿರೀಕ್ಷಿಸುತ್ತಿದೆ. ಭಾರತವು ನಮ್ಮ ನವೋದ್ಯಮಗಳ ಹೊಸ ಪರಿಸರ ವ್ಯವಸ್ಥೆ, ನಮ್ಮ ಅನ್ವೇಷಣಾ ಸಂಶೋಧನೆಯ ಜಗತ್ತಿನಲ್ಲಿ ಹೊಸ ಪರಿಸರ ವ್ಯವಸ್ಥೆ, ನಮ್ಮ ಸಾಂಸ್ಥಿಕ ಜಗತ್ತಿನಲ್ಲಿ ಹೊಸ ಪರಿಸರ ವ್ಯವಸ್ಥೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಪರಿಸರ ವ್ಯವಸ್ಥೆಯನ್ನು ನಿರೀಕ್ಷಿಸುತ್ತಿದೆ.

ಈ ಕ್ಯಾಂಪಸ್ಸಿನಿಂದ ಪದವಿ ಪಡೆದ ಬಳಿಕ ನೀವು ನಿಮಗಾಗಿ ಹೊಸ ಜೀವನವನ್ನು ಆರಂಭಿಸುತ್ತಿರುವುದು ಮಾತ್ರವಲ್ಲ ನೀವು ನಿಮ್ಮಲ್ಲೇ ನವೋದ್ಯಮವಾಗಬೇಕು ಮತ್ತು ಅದು ದೇಶದ ಮಿಲಿಯಾಂತರ ಜನರ ಬದುಕನ್ನು ಬದಲಾಯಿಸಲಿದೆ. ಆದುದರಿಂದ ಈ ಪದವಿ, ನಿಮ್ಮ ಕೈಗಳಲ್ಲಿರುವ ಪದಕ, ನೀವು ಈಡೇರಿಸಬೇಕಾಗಿರುವ ಮಿಲಿಯಾಂತರ ಜನರ ಆಶೋತ್ತರಗಳ ಪತ್ರದಂತಿದೆ. ನೀವು ವರ್ತಮಾನದ ಮೇಲೆ ಕಣ್ಣು ನೆಟ್ಟು ಭವಿಷ್ಯವನ್ನು ಊಹಿಸುವಂತಾಗಬೇಕು. ನಾವು ಇಂದು ನಮ್ಮ ಈಗಿನ ಆವಶ್ಯಕತೆಗಳ ನಿಟ್ಟಿನಲ್ಲಿ ಮತ್ತು ಇನ್ನು ಹತ್ತು ವರ್ಷಗಳ ಬಳಿಕದ ಆವಶ್ಯಕತೆಗಳ ನಿಟ್ಟಿನಲ್ಲಿ ಕೆಲಸ ಮಾಡಲು ಆರಂಭಿಸಿದರೆ ಆಗ ಭಾರತವು ನಾಳಿನ ಅನುಶೋಧನೆಗಳನ್ನು ಇಂದು ಮಾಡಲು ಶಕ್ತವಾಗುತ್ತದೆ.

ಸ್ನೇಹಿತರೇ,

ಇಂಜಿನಿಯರ್ ಆಗಿ ನಿಮ್ಮಲ್ಲಿ ಅಂತರ್ಗತವಾದಂತಹ ಸಾಮರ್ಥ್ಯವಿದೆ ಮತ್ತು ಅದು ಮಾದರಿಯಿಂದ ಪೇಟೆಂಟ್ ವರೆಗೆ ಸಂಗತಿಗಳನ್ನು ಅಭಿವೃದ್ಧಿ ಮಾಡುವ ಸಾಮರ್ಥ್ಯ. ಈ ರೀತಿಯಲ್ಲಿ, ನೀವು ವಿಷಯಗಳ ಬಗ್ಗೆ ನಿರ್ದಿಷ್ಟ ರೀತಿಯಲ್ಲಿ ಗಮನಿಸುವ ಸಾಮರ್ಥ್ಯವನ್ನೂ ಹೊಂದಿದ್ದೀರಿ. ಮತ್ತು ಅದನ್ನು ಹೊಸ ದೃಷ್ಟಿಕೋನದಿಂದ ನೋಡಲು ನಿಮಗೆ ಸಾಧ್ಯವಿದೆ. ಆದುದರಿಂದ, ನೀವು ಸಮಸ್ಯೆಗಳು ಮತ್ತು ಅದರ ರೀತಿ ರಿವಾಜುಗಳನ್ನು, ನಮ್ಮ ಸುತ್ತ ಇರುವ ಇರುವ ಮಾಹಿತಿಗಳ ಗಾಳಿಯಿಂದಲೇ ಅರಿಯುವಷ್ಟು ಸಮರ್ಥರಾಗಿರುತ್ತೀರಿ. ಸಮಸ್ಯೆಗಳನ್ನು ಅರಿಯುವಾಗ ಅವುಗಳು ಯಾವ ರೀತಿಯಲ್ಲಿ ಎದುರಾಗುತ್ತವೆ ಎಂಬುದನ್ನು ಅರಿತುಕೊಂಡರೆ ಅವುಗಳಿಗೆ ಧೀರ್ಘಕಾಲೀನ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಈ ತಿಳಿವಳಿಕೆ ಹೊಸ ಹುಡುಕಾಟಗಳಿಗೆ ಮತ್ತು ಭವಿಷ್ಯದಲ್ಲಿ ಪ್ರಮುಖ ಶೋಧನೆಗಳಿಗೆ ಮೈಲಿಗಲ್ಲಾಗುತ್ತದೆ. ಕಲ್ಪಿಸಿಕೊಳ್ಳಿ, ನೀವು ಎಷ್ಟು ಜೀವಗಳನ್ನು ಬದಲಾಯಿಸಬಹುದು ಎಂಬುದನ್ನು. ನೀವು ಎಷ್ಟು ಜೀವಗಳನ್ನು ಉಳಿಸಬಹುದು, ದೇಶದ ಸಂಪನ್ಮೂಲಗಳನ್ನು ಉಳಿಸಬಹುದು ಎಂಬುದನ್ನು ಗಮನಿಸಿ. ನೀವು ಸಮಸ್ಯೆಗಳ ರೀತಿ, ಮಾದರಿಗಳನ್ನು ಅರಿತುಕೊಂಡು ಪರಿಹಾರಗಳನ್ನು ರೂಪಿಸಿದರೆ ದೇಶದ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯವಿದೆ. ಮತ್ತು ಅದೇ ಪರಿಹಾರ ನಿಮಗೆ ಭವಿಷ್ಯದಲ್ಲಿ ವಾಣಿಜ್ಯಿಕ ಯಶಸ್ಸನ್ನು ನೀಡಲೂಬಹುದು.

ಸ್ನೇಹಿತರೇ,

ಸಂಶಯವೇ ಬೇಡ, ನೀವು ನಿಮ್ಮ ಜೀವನದ ಪ್ರಯಾಣವನ್ನು ಆರಂಭಿಸುವಾಗ ನೀವು ಹಲವಾರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದು ಸರಿ ಇರುತ್ತದೋ, ಅಥವಾ ತಪ್ಪು ಇರುತ್ತದೋ, ಅದು ಮುನ್ನಡೆ ಒದಗಿಸುತ್ತದೋ ಅಥವಾ ಹಿನ್ನಡೆ ತರುತ್ತದೋ, ಅಥವಾ ಸಮಯ ಹಾಳು ಮಾಡುತ್ತದೋ-ಇಂತಹ ಹಲವು ಪ್ರಶ್ನೆಗಳು, ಸಂಶಯಗಳು ನಿಮ್ಮ ತಲೆಯಲ್ಲಿ ಸುತ್ತು ಹೊಡೆಯುತ್ತಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸ್ವಂತದ ಮೂರು. ನಾನು ಇಲ್ಲಿ ಸೆಲ್ಫೀ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸ್ವಯಂ ಮೂರರ ಬಗ್ಗೆ ಮಾತನಾಡುತ್ತಿದ್ದೇನೆ. ಅವುಗಳೆಂದರೆ ಸ್ವ-ಜಾಗೃತಿ, ಆತ್ಮ ವಿಶ್ವಾಸ ಮತ್ತು ಬಹಳ ಮುಖ್ಯವಾದುದು ಸ್ವಾರ್ಥರಹಿತವಾದದ್ದು. ನೀವು ನಿಮ್ಮ ಬಲವನ್ನು ಗುರುತಿಸಿಕೊಳ್ಳಬೇಕು ಮತ್ತು ವಿಶ್ವಾಸದಿಂದ ಹಾಗು ಸ್ವಾರ್ಥರಹಿತವಾಗಿ ಮುನ್ನಡೆಯಬೇಕು. ನಮಗೆ ಹೇಳಲಾಗುತ್ತಿತ್ತು: शनैः पन्थाः शनैः कन्था शनैः पर्वतलंघनम । शनैर्विद्या शनैर्वित्तं पञ्चतानि शनैः शनैः ಅಂದರೆ ದಾರಿ ಬಹಳ ಧೀರ್ಘವಾಗಿರುವಾಗ ತಾಳ್ಮೆಯಿಂದಿರಬೇಕು. ಪುಟಗಳನ್ನು ಜೋಡಿಸಲಿಕ್ಕಿದೆ, ಪರ್ವತಗಳನ್ನು ಏರಲಿಕ್ಕಿದೆ. ಕಲಿಕೆ ಮಾಡಲಿಕ್ಕಿದೆ, ಜೀವನಕ್ಕಾಗಿ ಗಳಿಕೆಯನ್ನು ಮಾಡಲಿಕ್ಕಿದೆ. ನೂರಾರು ವರ್ಷಗಳ ಈ ಹಿಂದಿನ ಸಮಸ್ಯೆಯನ್ನು ವಿಜ್ಞಾನ ಇಂದು ಸರಳ ಮಾಡಿದೆ. ಆದರೆ ಜ್ಞಾನ ಮತ್ತು ವಿಜ್ಞಾನದಲ್ಲಿ ಮಾಡಲಾದ ಪ್ರಯೋಗಗಳನ್ನು ಪರಿಗಣಿಸಿದರೆ ತಾಳ್ಮೆಯಿಂದಿರಬೇಕು ಎಂಬುದು ಶಾಶ್ವತವಾದ ಸಂಗತಿ. ವಿಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ ಮತ್ತು ಅನುಶೋಧನೆಯಲ್ಲಿ ತ್ವರಿತಗತಿಗೆ ಅವಕಾಶ ಇಲ್ಲ. ನಿಮ್ಮ ಉದ್ದೇಶಿತ ಅನುಶೋಧನೆಯಲ್ಲಿ ನಿಮಗೆ ಪೂರ್ಣ ಯಶಸ್ಸು ಸಿಗದೇ ಇರಬಹುದು. ಆದರೆ ಆ ವೈಫಲ್ಯವನ್ನು ಕೂಡಾ ಯಶಸ್ಸು ಎಂದು ಪರಿಗಣಿಸಬೇಕಾಗುತ್ತದೆ, ಯಾಕೆಂದರೆ ವೈಫಲ್ಯ ಕೂಡಾ ನಿಮಗೆ ಕೆಲವಂಶಗಳನ್ನು ಕಲಿಸುತ್ತದೆ. ನೀವು ನೆನಪಿಡಬೇಕು ಏನೆಂದರೆ ಪ್ರತೀ ವೈಜ್ಞಾನಿಕ ಮತ್ತು ತಾಂತ್ರಿಕ ವೈಫಲ್ಯ ಹೊಸ ಶೋಧನೆಗೆ ದಾರಿ ಮಾಡಿಕೊಡುತ್ತದೆ, ಮತ್ತು ನೀವು ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವುದನ್ನು ನಾನು ನೋಡಲು ಇಚ್ಛಿಸುತ್ತೇನೆ. ವೈಫಲ್ಯ ಕೂಡಾ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು.

ಸ್ನೇಹಿತರೇ,

21 ನೇ ಶತಮಾನದ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. ಆವಶ್ಯಕತೆಗಳು ಕೂಡಾ ಬದಲಾಗಿವೆ. ಅದೇ ರೀತಿ ಆಶೋತ್ತರಗಳು ಕೂಡಾ. ಈಗ ಐ.ಐ.ಟಿ.ಗಳನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಮಟ್ಟದಿಂದ ಮುಂದಿನ ಹಂತವಾದ ದೇಶೀಯ ತಂತ್ರಜ್ಞಾನದ ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಭಾರತದ ಸವಾಲುಗಳನ್ನು ಎದುರಿಸಲು ನಮ್ಮ ಐ.ಐ.ಟಿ. ಗಳು ಸಂಶೋಧನೆಗಳನ್ನು ಮಾಡಿದಷ್ಟೂ ಅವುಗಳು ಭಾರತಕ್ಕೆ ಪರಿಹಾರಗಳನ್ನು ನಿರ್ಮಾಣ ಮಾಡುತ್ತವೆ. ಮತ್ತು ಅವು ಹೆಚ್ಚು ಹೆಚ್ಚು ಜಾಗತಿಕವಾಗಿ ಅನ್ವಯಿಸುವಿಕೆಯ ಮಾಧ್ಯಮಗಳಾಗುತ್ತವೆ. ಇಷ್ಟೊಂದು ಬೃಹತ್ ಜನಸಂಖ್ಯೆಯಲ್ಲಿ ನಿಮ್ಮ ಯಶಸ್ವೀ ಪ್ರಯೋಗಗಳು ಜಗತ್ತಿನ ಯಾವ ಭಾಗದಲ್ಲಿಯೂ ವಿಫಲ ಆಗಲಾರವು.

ಸ್ನೇಹಿತರೇ,

ಜಗತ್ತು ವಾತಾವರಣ ಬದಲಾವಣೆಯ ಸವಾಲನ್ನು ಎದುರಿಸುತ್ತಿರುವಾಗ, ನಿಮಗೆ ತಿಳಿದಿದೆ, ಭಾರತವು ಅಂತಾರಾಷ್ಟ್ರೀಯ ಸೌರ ಮಿತ್ರಕೂಟ (ಐ.ಎಸ್.ಎ.) ಯನ್ನು ಜಗತ್ತಿನೆದುರು ಇಟ್ಟಿತು. ಮತ್ತು ಅದನ್ನು ವಾಸ್ತವಕ್ಕೆ ತಂದಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಭಾರತ ಆರಂಭಿಸಿದ ಆಂದೋಲನದಲ್ಲಿ ಸೇರ್ಪಡೆಯಾಗುತ್ತಿವೆ. ನಾವೀಗ ಈ ಜವಾಬ್ದಾರಿಯನ್ನು ಇನ್ನಷ್ಟು ಮುಂದೆ ಕೊಂಡೊಯ್ಯುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ಭಾರತದ ಉಪಕ್ರಮವನ್ನು ಹೆಚ್ಚು ವಿಸ್ತಾರಗೊಳಿಸಲು ಮತ್ತು ಭಾರತದ ಗುರುತಿಸುವಿಕೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ನಾವು ಕಡಿಮೆ ಖರ್ಚಿನ, ಕೈಗೆಟಕುವ ದರದಲ್ಲಿ, ಪರಿಸರ ಸ್ನೇಹೀ ತಂತ್ರಜ್ಞಾನವನ್ನು ಜಗತ್ತಿಗೆ ಒದಗಿಸಬಹುದೇ?. ಇಂದು ಸೌರ ವಿದ್ಯುತ್ತಿಗೆ ಯೂನಿಟೊಂದಕ್ಕೆ ಅತ್ಯಂತ ಕಡಿಮೆ ದರ ವಿಧಿಸುತ್ತಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಆದರೆ ಮನೆ ಮನೆಗೆ ಸೌರ ವಿದ್ಯುತ್ ಒದಗಿಸುವಲ್ಲಿ ಬಹಳಷ್ಟು ಸವಾಲುಗಳಿವೆ. ನಾನೊಮ್ಮೆ ಹೇಳಿದ್ದೆ, “ನಾನು ಐ.ಐ.ಟಿ. ವಿದ್ಯಾರ್ಥಿಗಳಿಗೆ ಹೇಳುತ್ತೇನೆ ನಾವು ಸ್ವಚ್ಚ ಅಡುಗೆ ಆಂದೋಲನವನ್ನು ಆರಂಭಿಸಿದರೆ ಮತ್ತು ಸೌರ ಶಕ್ತಿ ಆಧಾರಿತ ಸ್ಟೌವ್ ಅಭಿವೃದ್ಧಿ ಮಾಡಿದರೆ ಮತ್ತು ಮನೆಗೆ ಅವಶ್ಯವಾದ ಸೌರ ಶಕ್ತಿ ಸಂಗ್ರಾಹಕ ದಾಸ್ತಾನು ಬ್ಯಾಟರಿಯನ್ನು ನಿರ್ಮಾಣ ಮಾಡಿದರೆ” ಎಂದು. ನೀವು ನೋಡಿ, ದೇಶದಲ್ಲಿ 25 ಕೋಟಿ ಸ್ಟೌವ್ ಗಳಿವೆ. ಅಲ್ಲಿ 25 ಕೋಟಿಯ ಮಾರುಕಟ್ಟೆ ಇದೆ. ಇದು ಯಶಸ್ವಿಯಾದರೆ, ಇಲೆಕ್ಟ್ರಾನಿಕ್ ವಾಹನಗಳಿಗಾಗಿ ಅಭಿವೃದ್ಧಿ ಮಾಡಲಾಗುತ್ತಿರುವ ಕಡಿಮೆ ಖರ್ಚಿನ ಬ್ಯಾಟರಿ ಇದಕ್ಕೆ ಪೂರಕವಾಗಬಲ್ಲದು. ಈಗ ಇದನ್ನು ಮಾಡಲು ಐ.ಐ.ಟಿ.ಯ ಯುವಜನತೆಯಲ್ಲದೆ ಬೇರೆ ಯಾರು ಉತ್ತಮ ವ್ಯಕ್ತಿಗಳಿದ್ದಾರೆ?. ಪರಿಸರಕ್ಕೆ ಅತ್ಯಂತ ಕಡಿಮೆ ಹಾನಿ ಮಾಡುವಂತಹ ತಂತ್ರಜ್ಞಾನ ಭಾರತಕ್ಕೆ ಅವಶ್ಯವಿದೆ. ಅದು ಬಾಳಿಕೆ ಬರಬೇಕು ಮತ್ತು ಜನತೆ ಅದನ್ನು ಸುಲಭದಲ್ಲಿ ಬಳಸುವಂತಿರಬೇಕು.

 

 

ಸ್ನೇಹಿತರೇ,

ವಿಪತ್ತು ನಿರ್ವಹಣೆ ವಿಷಯದಲ್ಲಿ ಭಾರತವು ವಿಶ್ವದ ಗಮನವನ್ನು ಸೆಳೆದಿದೆ. ದೊಡ್ಡ ವಿಪತ್ತುಗಳು ಜೀವಗಳನ್ನು ಬಲಿತೆಗೆದುಕೊಳ್ಳುವುದಲ್ಲದೆ ಮೂಲಸೌಕರ್ಯಗಳಿಗೂ ಭಾರೀ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತವೆ. ಇದನ್ನು ಮನಗಂಡ ಭಾರತವು ಎರಡು ವರ್ಷಗಳ ಹಿಂದೆ ವಿಶ್ವ ಸಂಸ್ಥೆಯಲ್ಲಿ ವಿಪತ್ತು ಪುನಶ್ಚೇತನ ಮೂಲಸೌಕರ್ಯಕ್ಕಾಗಿರುವ ಮಿತ್ರಕೂಟದ (ಸಿ.ಡಿ.ಆರ್.ಐ.) ರಚನೆಗೆ ಆಗ್ರಹ ಮಂಡಿಸಿತು. ವಿಪತ್ತು ನಿರ್ವಹಣೆಯಲ್ಲಿ ಭಾರತದ ಕಳವಳವನ್ನು ಮತ್ತು ಉಪಕ್ರಮವನ್ನು ಅರಿತುಕೊಂಡು ಜಗತ್ತಿನ ಹಲವು ದೇಶಗಳು ಅದರೊಂದಿಗೆ ಸೇರುತ್ತಿವೆ. ಮತ್ತು ವಿಶ್ವವು ಈ ಉಪಕ್ರಮವನ್ನು ಸ್ವಾಗತಿಸುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ತಜ್ಞರು ವಿಶ್ವಕ್ಕೆ ಯಾವ ರೀತಿಯ ವಿಪತ್ತು ಪುನಶ್ಚೇತನ ಮೂಲಸೌಕರ್ಯವನ್ನು ಒದಗಿಸುತ್ತಾರೆ ಎಂಬ ಕುತೂಹಲ ಇರುವುದು ಸಹಜ. ನಾವು ಹೇಗೆ ವಿಪತ್ತನ್ನು ತಡೆಯಬಲ್ಲಂತಹ ಮನೆಗಳನ್ನು ಮತ್ತು ಕಟ್ಟಡಗಳನ್ನು ತಂತ್ರಜ್ಞಾನ ಬಳಸಿ ದೇಶದಲ್ಲಿ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಯೋಚಿಸಬೇಕಾಗಿದೆ. ಬೃಹತ್ ಸೇತುವೆಗಳು ಚಂಡಮಾರುತದಲ್ಲಿ ನಿರ್ನಾಮವಾಗುತ್ತಿವೆ. ಉತ್ತರಾಖಂಡದಲ್ಲಿ ಏನಾಯಿತು ಎಂಬುದನ್ನು ನಾವು ಈಗಷ್ಟೇ ನೋಡಿದ್ದೇವೆ. ನಾವು ಇಂತಹ ವ್ಯವಸ್ಥೆಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು?.

ಸ್ನೇಹಿತರೇ,

ಗುರುದೇವ್ ಠಾಗೋರ್ ಅವರೊಮ್ಮೆ ಹೇಳಿದ್ದರು: “ ನಿಮ್ಮ ರಾಷ್ಟ್ರವನ್ನು ಹೊಂದುವುದೆಂದರೆ, ವಿಸ್ತರಿತ ರೀತಿಯಲ್ಲಿ ನಿಮ್ಮ ಆತ್ಮವನ್ನು ಕಂಡುಕೊಳ್ಳುವುದು. ನಾವು ನಮ್ಮ ರಾಷ್ಟ್ರವನ್ನು ಚಿಂತನೆಗಳು, ಕೆಲಸ ಮತ್ತು ಸೇವೆಯ ಮೂಲಕ ಮರುರೂಪಿಸಲು ಆರಂಭಿಸಿದಾಗ, ಆಗ ಮಾತ್ರ ನಮ್ಮ ರಾಷ್ಟ್ರದಲ್ಲಿ ನಾವು ನಮ್ಮದೇ ಆತ್ಮವನ್ನು ಕಾಣಬಲ್ಲೆವು”. ಇಂದು ದೇಶವು ಖರಗ್ ಪುರ ಸಹಿತ ಇಡೀ ಐ.ಐ.ಟಿ. ಜಾಲವು ಅದರ ಪಾತ್ರವನ್ನು ವಿಸ್ತರಿಸಿಕೊಳ್ಳಬೇಕು ಎಂದು ನಿರೀಕ್ಷೆ ಮಾಡುತ್ತಿದೆ. ನೀವು ಇದಕ್ಕಾಗಿ ಈಗಾಗಲೇ ಶ್ರೀಮಂತ ಪರಿಸರ ವ್ಯವಸ್ಥೆಯನ್ನು ಹೊದಿದ್ದೀರಿ. ಇಲ್ಲಿ ಕೈಗಾರಿಕೆ 4.0 ಗೆ ಅವಶ್ಯವಾದ ಪ್ರಮುಖ ಅನ್ವೇಷಣೆಗಳಿಗೆ ಈಗಾಗಲೇ ಒತ್ತು ದೊರೆತಿದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಗೆ ಸಂಬಂಧಿಸಿದ ಅಕಾಡೆಮಿಕ್ ಸಂಶೋಧನೆಯನ್ನು ಕೈಗಾರಿಕಾ ಮಟ್ಟಕ್ಕೆ ಕೊಂಡೊಯ್ಯಲು ನೀವು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ಐ.ಐ.ಟಿ. ಖರಗ್ ಪುರ ಇಂಟರ್ ನೆಟ್ ಆಫ್ ಥಿಂಗ್ಸ್ ಮತ್ತು ಆಧುನಿಕ ನಿರ್ಮಾಣ ತಂತ್ರಜ್ಞಾನದಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಿಮ್ಮ ಸಾಫ್ಟ್ ವೇರ್ ಪರಿಹಾರಗಳು ದೇಶಕ್ಕೆ ಬಹು ಉಪಯುಕ್ತವಾಗಿರುವುದನ್ನು ಸಾಬೀತು ಮಾಡಿವೆ. ನೀವು ಇನ್ನು ಆರೋಗ್ಯ ತಂತ್ರಜ್ಞಾನದ ಭವಿಷ್ಯದ ಪರಿಹಾರಗಳಿಗಾಗಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಾನು ಆರೋಗ್ಯ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ದತ್ತಾಂಶ, ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ , ಉಪಕರಣಗಳ ಬಗ್ಗೆ ಮಾತ್ರ ಮಾತನಾಡುತ್ತಿರುವುದಲ್ಲ, ಬದಲು ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೇನೆ. ದೇಶಕ್ಕೆ ನಾವು ರೋಗ ಪ್ರತಿಬಂಧಕದಿಂದ ಹಿಡಿದು ಗುಣ ಪಡಿಸುವವರೆಗಿನ ಪರಿಹಾರಗಳನ್ನು ಒದಗಿಸಬೇಕಾಗಿದೆ. ಕೊರೊನಾದ ಈ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯ ರಕ್ಷಣಾ ಸಲಕರಣೆಗಳು ಹೇಗೆ ಬೃಹತ್ ಮಾರುಕಟ್ಟೆಯಾಗಿ ಮೂಡಿ ಬಂದವು ಎಂಬುದನ್ನು ನಾವು ನೋಡಿದ್ದೇವೆ. ಈ ಮೊದಲು ಜನರು ಥರ್ಮಾಮೀಟರು ಮತ್ತು ಅವಶ್ಯ ಔಷಧಿಗಳನ್ನು ಮನೆಯಲ್ಲಿ ಇಟ್ಟಿರುತ್ತಿದ್ದರು. ಆದರೆ ಈಗ ಅವರು ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಅಂಶ, ರಕ್ತದಲ್ಲಿ ಆಮ್ಲಜನಕದ ಅಂಶಗಳನ್ನು ಪತ್ತೆ ಮಾಡುವ ಉಪಕರಣ ಇತ್ಯಾದಿಗಳನ್ನು ಮನೆಗಳಲ್ಲಿ ಇಡುತ್ತಿದ್ದಾರೆ. ಆರೋಗ್ಯ ಮತ್ತು ದೈಹಿಕ ಕ್ಷಮತೆ ಕಾಪಾಡುವ ಉಪಕರಣಗಳಿಗೂ ಮನೆಗಳಲ್ಲಿ ಭಾರೀ ಬೇಡಿಕೆ ಇದೆ. ವೈಯಕ್ತಿಕ ಆರೋಗ್ಯ ರಕ್ಷಣಾ ಉಪಕರಣಗಳನ್ನು ಒದಗಿಸುವಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಹೊಸ ಪರಿಹಾರಗಳನ್ನು ಅಭಿವೃದ್ಧಿ ಮಾಡುವ ಅಗತ್ಯ ಇದೆ. ಅವುಗಳು ಕೈಗೆಟಕುವ ದರದಲ್ಲಿರಬೇಕು ಮತ್ತು ಖಚಿತ ಮಾಹಿತಿ ಒದಗಿಸುವಂತಿರಬೇಕು.

ಸ್ನೇಹಿತರೇ,

ಕೊರೊನಾ ಬಳಿಕದ ಜಾಗತಿಕ ಪರಿಸರದಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಅನುಶೋಧನೆಯಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಮೂಡಿಬರಬಲ್ಲದು. ಈ ಚಿಂತನೆಯೊಂದಿಗೆ, ಈ ವರ್ಷದ ಆಯವ್ಯಯದಲ್ಲಿ ವಿಜ್ಞಾನ ಮತು ತಂತ್ರಜ್ಞಾನ ಹಾಗು ಸಂಶೋಧನೆಗೆ ಮೊತ್ತವನ್ನು ಗಮನೀಯವಾಗಿ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಸಂಶೋಧನಾ ಫೆಲೋ ಯೋಜನೆಯು ನಿಮ್ಮಂತಹ ಪ್ರತಿಭಾ ಸಂಪನ್ನರಿಗೆ ಸಂಶೋಧನೆಗೆ ಹೊಸ ಮಾಧ್ಯಮವಾಗಿ ಒದಗಿ ಬಂದಿದೆ. ನಿಮ್ಮ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ನವೋದ್ಯಮ ಭಾರತ ಆಂದೋಲನವು ನಿಮಗೆ ಸಹಾಯ ಮಾಡಲಿದೆ. ಕೆಲವು ದಿನಗಳ ಹಿಂದೆ ಪ್ರಮುಖ ನೀತಿ ಸುಧಾರಣೆಯನ್ನು ಮಾಡಲಾಗಿದೆ, ಅದನ್ನು ನಿರ್ದಿಷ್ಟವಾಗಿ ನಿಮಗೆ ನಾನು ಹೇಳಲಿಚ್ಛಿಸುತ್ತೇನೆ. ಸರಕಾರವು ಮ್ಯಾಪ್ ಮತ್ತು ಭೂ ವ್ಯೋಮ ದತ್ತಾಂಶವನ್ನು ನಿಯಂತ್ರಣದಿಂದ ಮುಕ್ತ ಮಾಡಿದೆ. ಇದು ನಮ್ಮ ತಂತ್ರಜ್ಞಾನ ಆಧಾರಿತ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಹಳಷ್ಟು ಬಲಿಷ್ಟಪಡಿಸಲಿದೆ. ಈ ಕ್ರಮ ಆತ್ಮನಿರ್ಭರ ಭಾರತದ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಹಾಗು ಇದು ದೇಶದ ಯುವ ನವೋದ್ಯಮಗಳಿಗೆ ಮತ್ತು ಅನ್ವೇಷಕರಿಗೆ ಹೊಸ ಸ್ವಾತಂತ್ರ್ಯವನ್ನು ಒದಗಿಸಲಿದೆ.

ಸ್ನೇಹಿತರೇ,

ನೀವು ಜಿಮ್ಕಾನದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಇತರ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಿ ಎಂದು ನನಗೆ ತಿಳಿಸಲಾಗಿದೆ. ಇದು ಬಹಳ ಮುಖ್ಯ. ನಮ್ಮ ಆದ್ಯತೆ ನಮ್ಮ ತಜ್ಞತೆಗಷ್ಟೇ ಮಿತಿಗೊಂಡಿರಬಾರದು. ನಮ್ಮ ಜ್ಞಾನ ಮತ್ತು ಧೋರಣೆಯು ಸಮಗ್ರವಾಗಿ ವಿಸ್ತಾರಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ಬಹು ಶಿಸ್ತೀಯ ಧೋರಣೆಯ ಚಿಂತನೆಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಐ.ಐ.ಟಿ. ಖರಗ್ ಪುರ ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವುದಕ್ಕೆ ನಾನು ಸಂತೋಷಗೊಂಡಿದ್ದೇನೆ. ನಾನು ಖರಗ್ ಪುರ ಐ.ಐ.ಟಿ.ಗೆ ಇನ್ನೊಂದು ಕಾರಣಕ್ಕಾಗಿ ಅಭಿನಂದಿಸುತ್ತೇನೆ. ನೀವು ನಿಮ್ಮ ಭೂತಕಾಲವನ್ನು ಅನ್ವೇಷಣೆ ಮಾಡುತ್ತಿರುವ ರೀತಿ, ನಿಮ್ಮ ಪ್ರಾಚೀನ ಜ್ಞಾನ ವಿಜ್ಞಾನ ನಿಮ್ಮ ಭವಿಷ್ಯದ ಅನ್ವೇಷಣೆಗಳ ಶಕ್ತಿ. ಅದು ನಿಜವಾಗಿಯೂ ಶ್ಲಾಘನೀಯವಾದುದು. ನೀವು ವೇದಗಳಿಂದ ಹಿಡಿದು ಉಪನಿಷದ್ ಗಳವರೆಗೆ ಮತ್ತು ಇತರ ಸಂಕೇತಗಳ ಬಗೆಗಿನ ಜ್ಞಾನ ಭಂಡಾರದ ಬಗ್ಗೆ ಅಧ್ಯಯನ ಕೈಗೊಳ್ಳುವ ಮೂಲಕ ಅದಕ್ಕೆ ಉತ್ತೇಜನ ನೀಡುತ್ತಿರುವಿರಿ. ಅದನ್ನು ನಾನು ಬಹಳ ಮೆಚ್ಚುತ್ತೇನೆ.

ಸ್ನೇಹಿತರೇ,

ಈ ವರ್ಷ, ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿದೆ. ಐ.ಐ.ಟಿ. ಖರಗ್ ಪುರಕ್ಕೆ ಈ ವರ್ಷ ಬಹಳ ವಿಶೇಷವಾದುದಾಗಿದೆ, ಯಾಕೆಂದರೆ ಈ ಸ್ಥಳ, ನೀವು ಜೀವನಕ್ಕೆ ಹೊಸ ಆಯಾಮ ಕೊಟ್ಟಂತಹ, ನೀವು ಕಾರ್ಯಚಟುವಟಿಕೆ ನಿರತರಾದಂತಹ ಸ್ಥಳವು ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಸಂಬಂಧಿಸಿದುದಾಗಿದೆ. ಈ ಚಳವಳಿಯಲ್ಲಿ ಹುತಾತ್ಮರಾದ ಯುವಜನತೆಯ ನೈತಿಕ ಶಕ್ತಿಯನ್ನು ಈ ಭೂಮಿ ಸಾಕ್ಷೀಕರಿಸಿದೆ. ಠಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಾರ್ಯನಿರ್ವಹಿಸಿದ ಭೂಮಿ ಇದು. ಹಿಂದೆ ಖರಗ್ ಪುರ ಐ.ಐ.ಟಿ ಮಾಡಿರುವ 75 ದೊಡ್ಡ ಅನ್ವೇಷಣೆಗಳನ್ನು ಮತ್ತು ಅಭಿವೃದ್ಧಿ ಮಾಡಿದ ಪರಿಹಾರಗಳನ್ನು ಸಂಕಲಿಸಬೇಕು ಎಂದು ನಾನು ನಿಮ್ಮನ್ನು ಕೋರುತ್ತೇನೆ. ಅವುಗಳನ್ನು ದೇಶದೆದುರು ಮತ್ತು ಜಗತ್ತಿನೆದುರು ಮಂಡಿಸಿ. ಹಿಂದಿನ ಕಾಲದ ಈ ಪ್ರೇರಣೆಯು ಬರಲಿರುವ ವರ್ಷಗಳಲ್ಲಿ ದೇಶಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ಯುವಜನತೆಗೆ ಹೊಸ ವಿಶ್ವಾಸವನ್ನು ಒದಗಿಸುತ್ತದೆ. ನೀವು ದೇಶದ ನಿರೀಕ್ಷೆಗಳನ್ನು ಮರೆಯದೆ ವಿಶ್ವಾಸದೊಂದಿಗೆ ಮುನ್ನಡೆಯಲು ನಿಮಗೆ ಇದರಿಂದ ಸಾಧ್ಯವಾಗುತ್ತದೆ. ಈ ಪ್ರಮಾಣಪತ್ರಗಳನ್ನು ಗೋಡೆಯ ಮೇಲೆ ನೇತು ಹಾಕುವುದಕ್ಕೆ ಅಥವಾ ನಿಮ್ಮ ಸ್ವ-ವಿವರದ ಭಾಗವಾಗಿಯಷ್ಟೇ ಸೀಮಿತಗೊಳ್ಳಬಾರದು. ಇಂದು ನೀವು ಪಡೆಯುತ್ತಿರುವ ಪ್ರಮಾಣಪತ್ರವು ದೇಶದ 130 ಕೋಟಿ ಜನರ ಆಶೋತ್ತರಗಳ ಬೇಡಿಕೆಯ ಪಟ್ಟಿ. ಇದು ಆತ್ಮವಿಶ್ವಾಸದ ಪತ್ರ ಮತ್ತು ಭರವಸೆಯ ಪತ್ರ. ಈ ಪವಿತ್ರ ಸಂದರ್ಭದಲ್ಲಿ ಇಂದು ನಾನು ನಿಮಗೆ ಶುಭಾಶಯಗಳನ್ನು ಹೇಳುತ್ತೇನೆ. ನಿಮ್ಮ ಪೋಷಕರು, ನಿಮ್ಮ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ನಿಮ್ಮ ಶಿಕ್ಷಕರು ನಿಮಗಾಗಿ ಕಠಿಣ ಪರಿಶ್ರಮ ಮಾಡಿದ್ದಾರೆ, ಅವರು ನಿಮ್ಮ ಪ್ರಯತ್ನಗಳಿಂದ, ಕನಸುಗಳಿಂದ, ನಿರ್ಧಾರಗಳಿಂದ ಮತ್ತು ನಿಮ್ಮ ಮುನ್ನಡೆಯ ಪ್ರಯಾಣದಿಂದ ತೃಪ್ತಿಯನ್ನು ಅನುಭವಿಸುತ್ತಾರೆ. ಈ ನಿರೀಕ್ಷೆಗಳೊಂದಿಗೆ ನಿಮಗೆ ಶುಭವಾಗಲಿ, ಬಹಳ ಧನ್ಯವಾದಗಳು ನಿಮಗೆ!!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of knowledge, wisdom and foresight
June 19, 2026

The Prime Minister, Shri Narendra Modi has said that virtues such as knowledge, wisdom and foresight are the foundation of success in life. He noted that a person enriched with these qualities is able to overcome even the most difficult challenges and emerge victorious.

The Prime Minister shared a Sanskrit Subhashitam-

“शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।

कालानुरोधः प्रतिभानवत्त्वमेते गुणाः कामदुघाः क्रियासु ॥”

The Subhashitam conveys that authentic knowledge of the subject, natural prudence, fearless self-confidence, powerful speech refined through practice, foresight to recognize the demands of the time and ever-new wisdom, these six qualities prove to be like 'kamadhenu' in every endeavor of a human being, which helps in achieving every goal.

The Prime Minister wrote on X;

“ज्ञान, विवेक और दूरदर्शिता जैसे सद्गुण जीवन में सफलता का प्रमुख आधार हैं। इनसे समृद्ध व्यक्ति कठिन से कठिन चुनौतियों में भी विजयी होता है।

शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।

कालानुरोधः प्रतिभानवत्त्वमेते गुणाः कामदुघाः क्रियासु ॥”