ಗ್ರಾಮೀಣ ಆರ್ಥಿಕತೆ ಬಲಪಡಿಸುವ ಮತ್ತು ಕೃಷಿಕರಿಗೆ ನೆರವಾಗುವ ಪ್ರಯತ್ನಗಳಿಗೆ ಪೂರಕವಾಗಿ ‘ಬನಾಸ್ ಡೇರಿ ಕಾಶಿ ಸಂಕುಲ’ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನ ಮಂತ್ರಿ
ಉತ್ತರ ಪ್ರದೇಶದ 20 ಲಕ್ಷಕ್ಕಿಂತ ಅಧಿಕ ಬಡ ಫಲಾನುಭವಿಗಳಿಗೆ ಸೂರು ಒದಗಿಸುವ “ಘರೌನಿ ಹಕ್ಕುಪತ್ರ’ಗಳನ್ನು ವಿತರಿಸಲಿರುವ ಪ್ರಧಾನ ಮಂತ್ರಿ
ವಾರಾಣಸಿಯಲ್ಲಿ 870 ಕೋಟಿ ರೂ.ಗಿಂತ ಅಧಿಕ ವೆಚ್ಚದ 22 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಶ್ರೀ ನರೇಂದ್ರ ಮೋದಿ
ನಗರಾಭಿವೃದ್ಧಿ, ಆರೋಗ್ಯ, ಶಿಕ್ಷಣ, ರಸ್ತೆ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳ ಯೋಜನೆಗಳಿಗೆ ಚಾಲನೆ ಇಂದು
ವಾರಾಣಸಿಯ ಸಮಗ್ರ ಪರಿವರ್ತನೆಯನ್ನು ಮತ್ತಷ್ಟು ಬಲಪಡಿಸಲಿವೆ ಈ ಎಲ್ಲಾ ಯೋಜನೆಗಳು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಂತ ಸಂಸತ್ ಕ್ಷೇತ್ರ ವಾರಾಣಸಿಯ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಸ್ಥಿರ ಪ್ರಯತ್ನಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಅವರು, ವಾರಾಣಸಿಗೆ ಡಿಸೆಂಬರ್ 23ರಂದು ಭೇಟಿ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ನಾನಾ ಅಭಿವೃದ್ಧಿ ಯೋಜನೆಗಳಿಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ವಾರಾಣಸಿಯ ಕರ್ಖಿಯಾನ್ ನಲ್ಲಿರುವ ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಫುಡ್ ಪಾರ್ಕ್ ನಲ್ಲಿ ಪ್ರಧಾನ ಮಂತ್ರಿ ಅವರು ‘ಬನಾಸ್ ಡೇರಿ ಕಾಶಿ ಸಂಕುಲ’ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 30 ಎಕರೆ ವಿಶಾಲವಿರುವ ಭೂಪ್ರದೇಶದಲ್ಲಿ 475 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಡೇರಿ ಸಂಕೀರ್ಣ ನಿರ್ಮಾಣವಾಗಲಿದೆ. ಈ ಸಂಕೀರ್ಣದಲ್ಲಿ ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸೌಲಭ್ಯ ನಿರ್ಮಾಣವಾಗಲಿದೆ. ಈ ಯೋಜನೆಯು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಜತೆಗೆ, ಈ ಭಾಗದ ಹೈನುಗಾರರು ಮತ್ತು ಕೃಷಿಕರಿಗೆ ಹೊಸ ವಿಫುಲ ಅವಕಾಶಗಳನ್ನು ಸೃಷ್ಟಿಸಲಿದೆ. ಬನಾಸ್ ಡೇರಿಗೆ ಹಾಲು ಪೂರೈಸುವ 1.7 ಲಕ್ಷಕ್ಕಿಂತ ಹೆಚ್ಚಿನ ಹೈನುಗಾರರ ಬ್ಯಾಂಕ್ ಖಾತೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಮಾರು 35 ಕೋಟಿ ರೂ. ಬೋನಸ್ (ಲಾಭಾಂಶ) ಅನ್ನು ಡಿಜಿಟಲ್ ವರ್ಗಾವಣೆ ಮಾಡಲಿದ್ದಾರೆ.

ಅಲ್ಲದೆ, ಪ್ರಧಾನ ಮಂತ್ರಿ ಅವರು ವಾರಾಣಸಿಯ ರಾಮ್ ನಗರದಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಘಟಕದಲ್ಲಿ ಜೈವಿಕ ಅನಿಲದಿಂದ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಘಟಕದಲ್ಲಿ ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ.

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ(ಎನ್ ಡಿಡಿಬಿ) ಸಹಾಯದಿಂದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಭಿವೃದ್ಧಿಪಡಿಸಿರುವ ಹಾಲಿನ ಉತ್ಪನ್ನಗಳ ಗುಣಮಟ್ಟ ಮೌಲ್ಯಮಾಪನ ಯೋಜನೆಗೆ ಸಮರ್ಪಿತವಾದ ಪೋರ್ಟಲ್ ಮತ್ತು ಲೋಗೊವನ್ನು ಪ್ರಧಾನ ಮಂತ್ರಿ ಬಿಡುಗಡೆ ಮಾಡಲಿದ್ದಾರೆ.

ಬಿಐಎಸ್ ಮತ್ತು ಎನ್ ಡಿಡಿಬಿ ಗುಣಮಟ್ಟದ ಗುರುತುಗಳಿರುವ ಲೋಗೊಗಳನ್ನು ಒಳಗೊಂಡಿರುವ ಏಕೀಕೃತ ಲೋಗೊ, ಡೇರಿ ವಲಯದ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಅಲ್ಲದೆ, ಡೇರಿ ಉತ್ಪನ್ನದ ಗುಣಮಟ್ಟ ಕುರಿತು ಸಾರ್ವಜನಿಕರಿಗೆ ಭರವಸೆ ಮತ್ತು ಖಾತ್ರಿ ನೀಡುತ್ತದೆ.

ಉತ್ತರ ಪ್ರದೇಶದ ಕೆಳಹಂತ ಅಥವಾ ಬಡ ವರ್ಗದಲ್ಲಿರುವ ಭೂಮಿ ಮಾಲಿಕತ್ವ ವಿವಾದಗಳನ್ನು ತಗ್ಗಿಸುವ ಪ್ರಯತ್ನಗಳ ಭಾಗವಾಗಿ, ಪ್ರಧಾನ ಮಂತ್ರಿ ಅವರು ಕೇಂದ್ರ ಸರ್ಕಾರದ ಸ್ವಾಮಿತ್ರ ಯೋಜನೆ ಅಡಿ ಗ್ರಾಮೀಣ , ಫಲಾನುಭವಿಗಳಿಗೆ ಘರೌನಿ ವಸತಿ ಹಕ್ಕುಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಲಿದ್ದಾರೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದಿಂದ 20 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಈ ವಸತಿ ಹಕ್ಕುಪತ್ರಗಳು ಲಭಿಸಲಿವೆ.

ಇದಲ್ಲದೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 870 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಾರಾಣಸಿಯನ್ನು ಸಂಪೂರ್ಣ ಪರಿವರ್ತನೆ ಮಾಡಬೇಕೆಂಬ ಪ್ರಧಾನ ಮಂತ್ರಿ ಅವರ ಕನಸಿಗೆ ಈ ಎಲ್ಲಾ ಯೋಜನೆಗಳು ಬಲ ತುಂಬಲಿವೆ.

ಜತೆಗೆ, ಶ್ರೀ ನರೇಂದ್ರ ಮೋದಿ ಅವರು ನಾನಾ ನಗರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಹಳೆಯ ಕಾಶಿ ನೆಲೆಯಲ್ಲಿ ಆರು ಯೋಜನೆಗಳ ಮರುಅಭಿವೃದ್ಧಿ ಈ ಯೋಜನೆಗಳಲ್ಲಿ ಸೇರಿವೆ. ಬೆನಿಯಾಬಾಗ್ ನಲ್ಲಿ ನಿಲುಗಡೆ ತಾಣ, ಉದ್ಯಾನ, 2 ಕೊಳಗಳ ಮರುಅಭಿವೃದ್ಧಿ, ರಾಮ್ನಾ ಗ್ರಾಮದಲ್ಲಿ 1 ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಸ್ಮಾರ್ಟ್ ಸಿಟಿ ಮಿಷನ್ ಅಡಿ 720 ಸ್ಥಳಗಳಲ್ಲಿ ಸುಧಾರಿತ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದರಲ್ಲಿ ಸೇರಿವೆ.

ಪ್ರಧಾನಮಂತ್ರಿ ಅವರು ಉದ್ಘಾಟಿಸಲಿರುವ ಶಿಕ್ಷಣ ಕ್ಷೇತ್ರದ ಯೋಜನೆಗಳಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಸುಮಾರು 107 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ  ಶಿಕ್ಷಕರ ಶಿಕ್ಷಣದ ಅಂತರ್ ವಿಶ್ವವಿದ್ಯಾಲಯ ಕೇಂದ್ರ ಮತ್ತು 7 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್‌ನಲ್ಲಿ ನಿರ್ಮಿಸಿರುವ ಶಿಕ್ಷಕರ ಶಿಕ್ಷಣ ಕೇಂದ್ರವನ್ನು ಸಹ ಪ್ರಧಾನ ಮಂತ್ರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. 

ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಕರೌಂಡಿಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಿರ್ಮಿಸಿರುವ ವಸತಿ ಫ್ಲ್ಯಾಟ್ ಗಳು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿದ್ದಾರೆ.

ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಕ್ಯಾನ್ಸರ್ ಆಸ್ಪತ್ರೆ ಸಂಕೀರ್ಣದಲ್ಲಿ 130 ಕೋಟಿ ರೂಪಾಯಿ ವೆಚ್ಚದ ವೈದ್ಯರ ಹಾಸ್ಟೆಲ್, ದಾದಿಯರ ಹಾಸ್ಟೆಲ್ ಮತ್ತು ಆಶ್ರಯ ಗೃಹಗಳನ್ನು ಒಳಗೊಂಡಿರುವ ಬೃಹತ್ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅವರು ಭದ್ರಾಸಿಯಲ್ಲಿ 50 ಹಾಸಿಗೆಗಳ ಏಕೀಕೃತ(ಸಂಯೋಜಿತ) ಆಯುಷ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಆಯುಷ್ ಮಿಷನ್ ಅಡಿ ಪಿಂಡ್ರಾದಲ್ಲಿ 49 ಕೋಟಿ ರೂ. ವೆಚ್ಚದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪ್ರಧಾನ ಮಂತ್ರಿ ಅವರು  ಪ್ರಯಾಗ್‌ರಾಜ್ ಮತ್ತು ಭದೋಹಿಯಲ್ಲಿ ಚತುಷ್ಪಥ ರಸ್ತೆಯನ್ನು ಷಟ್ಪಥ  ರಸ್ತೆ (4 ಲೇನ್ ನಿಂದ 6 ಲೇನ್) ವಿಸ್ತರಣೆಯ 2 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ವಾರಣಾಸಿಯ ರಸ್ತೆ ಸಂಪರ್ಕವನ್ನು ಸುಧಾರಿಸುವ ಜತೆಗೆ, ನಗರಗಳ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸುವ ಒಂದು ದಿಟ್ಟ ಹೆಜ್ಜೆಯಾಗಿದೆ.

ಪ್ರಖ್ಯಾತ ಧಾರ್ಮಿಕ ತಾಣವಾಗಿ ಗುರುತಿಸಿಕೊಂಡಿರುವ ವಾರಾಣಸಿ ನಗರಕ್ಕೆ ಪ್ರವಾಸಿ ತಾಣದ ಸಾಮರ್ಥ್ಯ ತುಂಬುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಅವರು ಮೊದಲ ಹಂತದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅದೆಂದರೆ, ವಾರಾಣಸಿಯ ಶ್ರೀ ಗುರು ರವಿದಾಸ್ ಜಿ ದೇವಾಲಯ ಮತ್ತು ಗುರು ಗೋವರ್ಧನ್ ದೇವಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಅಲ್ಲದೆ, ವಾರಾಣಸಿಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರದಲ್ಲಿರುವ ‘ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ’ಯಲ್ಲಿ ‘ಸ್ಪೀಡ್ ಬ್ರೀಡಿಂಗ್ ಫೆಸಿಲಿಟಿ’, ಪಯಕ್‌ಪುರ ಗ್ರಾಮದಲ್ಲಿ ಪ್ರಾದೇಶಿಕ ಪರಾಮರ್ಶೆ ಪ್ರಮಾಣೀಕರಣ  ಪ್ರಯೋಗಾಲಯ(ರೀಜನಲ್ ರೆಫರೆನ್ಸ್ ಸ್ಟಾಂಡರ್ಡ್ಸ್ ಲ್ಯಾಬೊರೇಟರಿ) ಮತ್ತು ಪಿಂದ್ರಾದಲ್ಲಿ ವಕೀಲರ ಕಟ್ಟಡಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
99.92% villages in India covered with banking outlets within 5 km radius: Govt

Media Coverage

99.92% villages in India covered with banking outlets within 5 km radius: Govt
NM on the go

Nm on the go

Always be the first to hear from the PM. Get the App Now!
...
Prime Minister praises efforts by Acharya Shri Kailasasagarsuri Gyanmandir towards preserving manuscripts
March 31, 2026

Prime Minister Shri Narendra Modi, appreciated the work being done by Acharya Shri Kailasasagarsuri Gyanmandir towards preserving manuscripts. “I am proud that our nation has many such passionate teams that are at the forefront of this, ensuring that the coming generations remain connected to our rich history”, Shri Modi remarked.

The Prime Minister posted on X;

“Saw a glimpse of the work being done by Acharya Shri Kailasasagarsuri Gyanmandir towards preserving manuscripts. I am proud that our nation has many such passionate teams that are at the forefront of this, ensuring that the coming generations remain connected to our rich history.”