ಈ ಬಜೆಟ್ 2047ರ ವೇಳೆಗೆ ವಿಕಸಿತ ಭಾರತದತ್ತ ಸಾಗುವ ನಮ್ಮ ಪ್ರಯಾಣದ ಅಡಿಪಾಯವಾಗಿದೆ: ಪ್ರಧಾನಮಂತ್ರಿ
ಈ ವರ್ಷದ ಬಜೆಟ್ ಭಾರತದ 'ಸುಧಾರಣಾ ಎಕ್ಸ್‌ಪ್ರೆಸ್‌'ಗೆ ಹೊಸ ಶಕ್ತಿ ಮತ್ತು ಹೊಸ ವೇಗವನ್ನು ನೀಡುತ್ತದೆ: ಪ್ರಧಾನಮಂತ್ರಿ
ಭಾರತವು ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದಕ್ಕೆ ತೃಪ್ತಿಪಡುವುದಿಲ್ಲ; ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಬಯಸುತ್ತದೆ: ಪ್ರಧಾನಮಂತ್ರಿ
ಈ ವರ್ಷದ ಬಜೆಟ್ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಉಪಕ್ರಮಗಳಿಗೆ ಹೊಸ ವೇಗವನ್ನು ನೀಡಲು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಮಂತ್ರಿ
ಈ ವರ್ಷದ ಬಜೆಟ್‌ನಲ್ಲಿ ಎಂಎಸ್‌ಎಂಇಗಳು ಪಡೆದ ಬೆಂಬಲವು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಬೆಳೆಯಲು ಅವರಿಗೆ ಹೊಸ ಶಕ್ತಿಯನ್ನು ನೀಡುತ್ತದೆ: ಪ್ರಧಾನಮಂತ್ರಿ
ಈ ವರ್ಷದ ಬಜೆಟ್ 'ಯುವ ಶಕ್ತಿ'ಗಾಗಿ ಮೀಸಲಾಗಿದೆ, ಬಜೆಟ್‌ ನಲ್ಲಿ ಮಾಡಲಾದ ನಿಬಂಧನೆಗಳು ವಿವಿಧ ವಲಯಗಳಲ್ಲಿ ನಾಯಕರು, ನವೋದ್ಯಮಿಗಳು ಮತ್ತು ಕ್ರಿಯೇಟರ್‌ ಗಳನ್ನು ಪೋಷಿಸುತ್ತವೆ: ಪ್ರಧಾನಮಂತ್ರಿ
ಈ ವರ್ಷದ ಬಜೆಟ್ ಮಹಿಳೆಯರಿಂದ ಸೃಷ್ಟಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಸ್ವಸಹಾಯ ಸಂಘಗಳ ಆಧುನಿಕ ಪರಿಸರ ವ್ಯವಸ್ಥೆಗೆ ಆದ್ಯತೆ ನೀಡುತ್ತದೆ, ಪ್ರತಿ ಮನೆಗೂ ಸಮೃದ್ಧಿ ತಲುಪುವುದನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ: ಪ್ರಧಾನಮಂತ್ರಿ
ಈ ಬಜೆಟ್ ಮಹತ್ವಾಕಾಂಕ್ಷೆಯದ್ದಾಗಿದ್ದು ದೇಶದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 2026ರ ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದಿನ ಬಜೆಟ್ ಐತಿಹಾಸಿಕವಾಗಿದ್ದು, ದೇಶದ ಮಹಿಳೆಯರ ಸಬಲೀಕರಣದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಹಣಕಾಸು ಸಚಿವರಾಗಿ, ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದ್ದು, ವರ್ತಮಾನದ ಕನಸುಗಳನ್ನು ನನಸಾಗಿಸುವ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುವ ಕೆಲಸ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಉನ್ನತ ಮಟ್ಟದ ಹಾರಾಟ ನಡೆಸಲು ಈ ಬಜೆಟ್ ಅಡಿಪಾಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಭಾರತವು ಸಾಗುತ್ತಿರುವ ‘ಸುಧಾರಣಾ ಎಕ್ಸ್‌ಪ್ರೆಸ್’ ಈ ಬಜೆಟ್ ಮೂಲಕ ಹೊಸ ಶಕ್ತಿ ಮತ್ತು ಹೊಸ ವೇಗವನ್ನು ಪಡೆಯಲಿದೆ ಎಂದು ಶ್ರೀ ಮೋದಿಯವರು ತಿಳಿಸಿದರು. ಕೈಗೊಳ್ಳಲಾದ ಪಥ-ಪ್ರವರ್ತಕ ಸುಧಾರಣೆಗಳು ಭಾರತದ ಮಹತ್ವಾಕಾಂಕ್ಷಿ, ಧೈರ್ಯವಂತ ಮತ್ತು ಪ್ರತಿಭಾವಂತ ಯುವಜನತೆಗೆ ಹಾರಲು ಮುಕ್ತ ಆಕಾಶವನ್ನು ಒದಗಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಬಜೆಟ್ ನಂಬಿಕೆ ಆಧಾರಿತ ಆಡಳಿತ (Trust-based governance) ಮತ್ತು ಮಾನವ-ಕೇಂದ್ರಿತ ಆರ್ಥಿಕ ಚೌಕಟ್ಟಿನ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವತ್ತ ಗಮನಹರಿಸುವುದರ ಜೊತೆಗೆ, ಏಕಕಾಲದಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ಬೆಳವಣಿಗೆಯನ್ನು ಖಚಿತಪಡಿಸುತ್ತಿರುವ ಈ ಬಜೆಟ್ ಒಂದು ವಿಶಿಷ್ಟವಾದ ಬಜೆಟ್ ಆಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

 

ಈ ಬಜೆಟ್ ಭಾರತದ ಜಾಗತಿಕ ಪಾತ್ರವನ್ನು ಹೊಸದಾಗಿ ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಮೋದಿಯವರು ಅಭಿಪ್ರಾಯಪಟ್ಟರು. ಭಾರತದ 140 ಕೋಟಿ ನಾಗರಿಕರು ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದಕ್ಕೆ ತೃಪ್ತರಾಗಿಲ್ಲ ಮತ್ತು ದೇಶವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ದೃಢಸಂಕಲ್ಪ ಮಾಡಿದೆ ಎಂದು ಅವರು ಹೈಲೈಟ್ ಮಾಡಿದರು. ಇದು ಕೋಟ್ಯಂತರ ಭಾರತೀಯರ ಸಾಮೂಹಿಕ ಸಂಕಲ್ಪವಾಗಿದೆ ಎಂದು ಅವರು ಒತ್ತಿ ಹೇಳಿದರು. ವಿಶ್ವಾಸಾರ್ಹ ಪ್ರಜಾಪ್ರಭುತ್ವದ ಪಾಲುದಾರ ಮತ್ತು ವಿಶ್ವಾಸಾರ್ಹ ಗುಣಮಟ್ಟದ ಪೂರೈಕೆದಾರನಾಗಿ ಭಾರತದ ಪಾತ್ರವು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಭಾರತವು ಇತ್ತೀಚೆಗೆ ಮಾಡಿಕೊಂಡಿರುವ ಪ್ರಮುಖ ವ್ಯಾಪಾರ ಒಪ್ಪಂದಗಳು ದೇಶದ ಯುವಜನತೆಗೆ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಗರಿಷ್ಠ ಪ್ರಯೋಜನವನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ ಮತ್ತು ಆ ನಿಟ್ಟಿನಲ್ಲಿ ಈ ಬಜೆಟ್‌ ನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಒತ್ತಿ ಹೇಳಿದರು.

'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಅಭಿಯಾನವನ್ನು ವೇಗಗೊಳಿಸಲು ಈ ಬಜೆಟ್ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದೆ ಎಂದು ಒತ್ತಿಹೇಳಿದ ಶ್ರೀ ಮೋದಿಯವರು, ಬಯೋಫಾರ್ಮಾ ಶಕ್ತಿ ಮಿಷನ್, ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ, ಅಪರೂಪದ ಭೂಮಿಯ ಕಾರಿಡಾರ್ ನಿರ್ಮಾಣ, ನಿರ್ಣಾಯಕ ಖನಿಜಗಳ ವಲಯದ ಬಲವರ್ಧನೆ, ಜವಳಿ ಕ್ಷೇತ್ರದಲ್ಲಿನ ಹೊಸ ಯೋಜನೆಗಳು, ಹೈಟೆಕ್ ಟೂಲ್ ಉತ್ಪಾದನೆಯ ಉತ್ತೇಜನ ಮತ್ತು ಚಾಂಪಿಯನ್ ಎಂ ಎಸ್‌ ಎಂ ಇ ಗಳ ಸಿದ್ಧತೆಯಂತಹ ಉದಯೋನ್ಮುಖ ವಲಯಗಳಿಗೆ ನೀಡಲಾದ ಅಭೂತಪೂರ್ವ ಬೆಂಬಲವು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದ್ದು, ರಾಷ್ಟ್ರದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು. ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಸೇರಿದಂತೆ ಎಂಎಸ್‌ಎಂಇಗಳಿಗೆ ನೀಡಲಾದ ಬೆಂಬಲವು ಅವುಗಳನ್ನು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಬೆಳೆಯಲು ಸಬಲೀಕರಣಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.

ಸರಕು ಸಾಗಣೆ ಕಾರಿಡಾರ್, ದೇಶಾದ್ಯಂತ ಜಲಮಾರ್ಗಗಳ ವಿಸ್ತರಣೆ, ಹೈ-ಸ್ಪೀಡ್ ರೈಲು ಕಾರಿಡಾರ್, ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿಗೆ ವಿಶೇಷ ಗಮನ ಮತ್ತು ನಗರಗಳಿಗೆ ಬಲವಾದ ಆರ್ಥಿಕ ಅಡಿಪಾಯವನ್ನು ಒದಗಿಸಲು ಮುನ್ಸಿಪಲ್ ಬಾಂಡ್‌ಗಳ ಉತ್ತೇಜನ ಸೇರಿದಂತೆ ಮೂಲಸೌಕರ್ಯವನ್ನು ಬಲಪಡಿಸಲು ಈ ಬಜೆಟ್ ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಮೋದಿಯವರು ಹೈಲೈಟ್ ಮಾಡಿದರು. ಈ ಎಲ್ಲಾ ಕ್ರಮಗಳು ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರಯಾಣವನ್ನು ವೇಗಗೊಳಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

 

ಯಾವುದೇ ರಾಷ್ಟ್ರದ ಶ್ರೇಷ್ಠ ಬಂಡವಾಳವೆಂದರೆ ಅದರ ನಾಗರಿಕರು ಮತ್ತು ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಅಭೂತಪೂರ್ವ ಹೂಡಿಕೆಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ಕೌಶಲ್ಯ (Skill), ವ್ಯಾಪ್ತಿ (Scale) ಮತ್ತು ಸುಸ್ಥಿರತೆಯನ್ನು (Sustainability) ಬಲಪಡಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೈಲೈಟ್ ಮಾಡಿದರು. ಇದು ‘ಯುವಶಕ್ತಿ ಬಜೆಟ್’ ಎಂಬ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ಶ್ರೀ ಮೋದಿಯವರು, ಬಜೆಟ್‌ ನಲ್ಲಿ ಮಾಡಲಾದ ನಿಬಂಧನೆಗಳು ವಿವಿಧ ವಲಯಗಳಲ್ಲಿ ನಾಯಕರು, ನವೋದ್ಯಮಿಗಳು ಮತ್ತು ಸೃಷ್ಟಿಕರ್ತರನ್ನು ಸಿದ್ಧಪಡಿಸುತ್ತವೆ ಎಂದು ಒತ್ತಿ ಹೇಳಿದರು. ಮೆಡಿಕಲ್ ಹಬ್‌ ಗಳ ಸ್ಥಾಪನೆ, ಅಲೈಡ್ ಹೆಲ್ತ್ ಪ್ರೊಫೆಷನಲ್ಸ್, ಆಡಿಯೋ-ವಿಸುವಲ್ಸ್ ಸೇರಿದಂತೆ ಆರೆಂಜ್ ಎಕಾನಮಿ ಉತ್ತೇಜನ, ಗೇಮಿಂಗ್, ಪ್ರವಾಸೋದ್ಯಮ ಮತ್ತು ಖೇಲೋ ಇಂಡಿಯಾ ಮಿಷನ್ ಪ್ರೋತ್ಸಾಹದ ಮೂಲಕ ಯುವಜನತೆಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಅವರು ತಿಳಿಸಿದರು. ಭಾರತವನ್ನು ವಿಶ್ವದ ಡೇಟಾ ಸೆಂಟರ್ ಹಬ್ ಮಾಡಲು ಪ್ರಮುಖ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುವಜನತೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಈ ಬಜೆಟ್ ಉದ್ಯೋಗ ಸೃಷ್ಟಿಗೆ ಗಮನಾರ್ಹ ಉತ್ತೇಜನ ನೀಡಲಿದೆ ಎಂದರು. ಪ್ರವಾಸೋದ್ಯಮವನ್ನು ಉತ್ತೇಜಿಸಲು, ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಕಾಂಕ್ರೀಟ್ ಕ್ರಮಗಳನ್ನು ಕೈಗೊಂಡಿರುವುದು ಮತ್ತು ವಿವಿಧ ರಾಜ್ಯಗಳನ್ನು ಸಬಲೀಕರಣಗೊಳಿಸುವ ಮೂಲಕ ಸಮತೋಲಿತ ಅಭಿವೃದ್ಧಿಯ ಅಡಿಪಾಯವನ್ನು ಬಲಪಡಿಸಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಪ್ರತಿ ಮನೆಯಲ್ಲೂ ಸಮೃದ್ಧಿ ನೆಲೆಸುವಂತೆ ಮಾಡುವ ಗುರಿಯೊಂದಿಗೆ ಮಹಿಳಾ ನೇತೃತ್ವದ ಮತ್ತು ಮಹಿಳಾ ನಿರ್ವಹಣೆಯ ಸ್ವಸಹಾಯ ಸಂಘಗಳಿಗಾಗಿ ಆಧುನಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಈ ಬಜೆಟ್ ಆದ್ಯತೆ ನೀಡಿದೆ ಎಂದು ತಿಳಿಸಿದರು. ಪ್ರತಿಯೊಂದು ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗಾಗಿ ಹೊಸ ಹಾಸ್ಟೆಲ್‌ ಗಳನ್ನು ನಿರ್ಮಿಸುವ ಅಭಿಯಾನವು ಶಿಕ್ಷಣವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ ಎಂದು ಅವರು ಹೇಳಿದರು.

ಕೃಷಿ, ಡೈರಿ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಸರ್ಕಾರವು ಯಾವಾಗಲೂ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ಬಜೆಟ್‌ನಲ್ಲಿ ತೆಂಗು, ಗೋಡಂಬಿ, ಕೋಕೋ ಮತ್ತು ಶ್ರೀಗಂಧದ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗಾಗಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಬೆಟ್ಟು ಮಾಡಿದರು. 'ಭಾರತ ವಿಸ್ತಾರ್ ಎಐ' (Bharat Vistaar AI) ಉಪಕರಣವು ರೈತರಿಗೆ ಅವರದೇ ಭಾಷೆಯಲ್ಲಿ ಮಾಹಿತಿ ನೀಡುವ ಮೂಲಕ ಹೆಚ್ಚು ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಮೀನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದರಿಂದ ಹಳ್ಳಿಗಳಲ್ಲಿ ಹೆಚ್ಚಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು. ಈ ಬಜೆಟ್ ಮಹತ್ವಾಕಾಂಕ್ಷೆಯದಾಗಿದ್ದು, ದೇಶದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಕ್ತಾಯಗೊಳಿಸಿದರು. ಭವಿಷ್ಯದ ದೃಷ್ಟಿಕೋನ ಹೊಂದಿರುವ, ಸೂಕ್ಷ್ಮವಾದ ಮತ್ತು ಹಳ್ಳಿಗಳು, ಬಡವರು ಹಾಗೂ ರೈತರ ಕಲ್ಯಾಣಕ್ಕೆ ಸಮರ್ಪಿತವಾದ ಬಜೆಟ್ ಮಂಡಿಸಿದ್ದಕ್ಕಾಗಿ ಅವರು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಮತ್ತೊಮ್ಮೆ ಅಭಿನಂದಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Strengthening India’s path to power leadership: How India is energising a new growth story - By Shri Manohar Lal, Union Minister of Power

Media Coverage

Strengthening India’s path to power leadership: How India is energising a new growth story - By Shri Manohar Lal, Union Minister of Power
NM on the go

Nm on the go

Always be the first to hear from the PM. Get the App Now!
...
Governor of Madhya Pradesh meets Prime Minister
March 18, 2026

Governor of Madhya Pradesh, Shri Mangubhai Patel met Prime Minister, Shri Narendra Modi in New Delhi today.

The Prime Minister’s Office posted on X;

“Governor of Madhya Pradesh, Shri Mangubhai Patel met Prime Minister @narendramodi.

@GovernorMP”