ಜಿಲ್ಲಾ ಮಟ್ಟದಲ್ಲಿ ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರೆ ರಾಜ್ಯಗಳ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು
ವರ್ಷಾಂತ್ಯದೊಳಗೆ ದೇಶವು ತನ್ನ ಲಸಿಕೆ ವ್ಯಾಪ್ತಿಯನ್ನು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವುದನ್ನು ಖಾತರಿಪಡಿಸುವಂತೆ ಮತ್ತು ಹೊಸ ಆತ್ಮವಿಶ್ವಾಸ ಹಾಗೂ ನಂಬಿಕೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಡುವುದನ್ನು ಖಚಿತಪಡಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸಲಹೆ ನೀಡಿದರು
"ಈಗ ನಾವು ಲಸಿಕೆ ಅಭಿಯಾನವನ್ನು ಪ್ರತಿ ಮನೆಗೆ ಕೊಂಡೊಯ್ಯಲು ತಯಾರಿ ನಡೆಸುತ್ತಿದ್ದೇವೆ. 'ಹರ್ ಘರ್ ದಸ್ತಕ್' ಮಂತ್ರದೊಂದಿಗೆ ಪ್ರತಿ ಮನೆಯ ಬಾಗಿಲನ್ನು ತಟ್ಟಿರಿ, ಎರಡು ಡೋಸ್ ಲಸಿಕೆಯ ಸುರಕ್ಷತೆ ಪಡೆಯದ ಪ್ರತಿಯೊಂದು ಮನೆಯನ್ನೂ ಸಂಪರ್ಕಿಸಿರಿ"
"ಸ್ಥಳೀಯ ಮಟ್ಟದಲ್ಲಿನ ಅಂತರಗಳನ್ನು ಪರಿಹರಿಸುವ ಮೂಲಕ ಲಸಿಕೆಯ ಪೂರ್ಣ ಮಟ್ಟ ಸಾಧನೆಗಾಗಿ ಇದುವರೆಗೂ ಪಡೆದ ಅನುಭವವನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಿ"
"ನಿಮ್ಮ ಜಿಲ್ಲೆಗಳನ್ನು ರಾಷ್ಟ್ರೀಯ ಸರಾಸರಿ ಸನಿಹಕ್ಕೆ ಕೊಂಡೊಯ್ಯಲು ನೀವು ನಿಮ್ಮ ಕೈಲಾದ ಗರಿಷ್ಠ ಪ್ರಯತ್ನಗಳನ್ನು ಮಾಡಬೇಕು"
ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ
"ನೀವು ಸ್ಥಳೀಯ ಧಾರ್ಮಿಕ ಮುಖಂಡರಿಂದ ಹೆಚ್ಚಿನ ಸಹಾಯವನ್ನು ಪಡೆಯ

ನೀವು ಮುಂದಿಟ್ಟಿರುವ ವಿಷಯಗಳು ಮತ್ತು ನೀವು ಹಂಚಿಕೊಂಡಿರುವ ಅನುಭವಗಳು ಬಹಳ ಮುಖ್ಯವಾದವುಗಳು. ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಪ್ರದೇಶಗಳು ಈ ಬಿಕ್ಕಟ್ಟಿನಿಂದ ಆದಷ್ಟು ಬೇಗ ಮುಕ್ತವಾಗಬೇಕು ಎಂಬ ಸ್ಫೂರ್ತಿ, ಉತ್ಸಾಹ ನಿಮ್ಮಲ್ಲೂ ಇರುವುದನ್ನು ನಾನು ಕಾಣಬಲ್ಲೆ. ಇದು ದೀಪಾವಳಿ ಹಬ್ಬದ ಕಾಲ ಮತ್ತು ಮುಖ್ಯಮಂತ್ರಿಗಳ ಬಿಡುವಿಲ್ಲದ ಕಾರ್ಯಕ್ರಮ ವೇಳಾಪಟ್ಟಿಯ ಬಗ್ಗೆಯೂ ನಾನು ಅರ್ಥೈಸಿಕೊಳ್ಳಬಲ್ಲೆ. ನಮ್ಮೊಂದಿಗೆ ಇರಲು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಬಿಡುವು ಮಾಡಿಕೊಂಡು ಪಾಲ್ಗೊಂಡಿರುವ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಜಿಲ್ಲೆಯ ಜನರ ಜೊತೆ ಮಾತನಾಡಬೇಕೆಂದಿದ್ದೆ ಎಂಬುದು ನಿಜ. ಮತ್ತು ಮುಖ್ಯಮಂತ್ರಿಗಳಿಗೆ ತೊಂದರೆ ಕೊಡುವುದೂ ನನಗೆ ಇಷ್ಟವಿರಲಿಲ್ಲ. ಆದರೆ ಅವರ ರಾಜ್ಯಗಳಲ್ಲಿ ಶೇಖಡಾ ನೂರು ಲಸಿಕೆ ನಿಡಿಕೆಯ ಗುರಿ ಸಾಧನೆ ಮತ್ತು ಅದಕ್ಕಾಗಿ ಇರುವ ಬದ್ಧತೆಯ ಕಾರಣದಿಂದ ಮುಖ್ಯಮಂತ್ರಿಗಳು ಇಲ್ಲಿದ್ದಾರೆ. ಮತ್ತು ಅವರ ಹಾಜರಾತಿ ನಮ್ಮ ಜಿಲ್ಲೆಗಳ ಅಧಿಕಾರಿಗಳಿಗೆ ಹೊಸ ಆತ್ಮವಿಶ್ವಾಸ ಮತ್ತು ಬಲವನ್ನು ನೀಡಲಿದೆ. ಇದು ನನಗೆ ಬಹಳ ಸಂತೋಷದ ಸಂಗತಿ ಮತ್ತು ಈ ಸಭೆಗೆ ಇಷ್ಟೊಂದು ಮಹತ್ವ ಕೊಟ್ಟಿರುವುದಕ್ಕೆ ಮತ್ತು ಹಬ್ಬದ ಈ ಸಮಯದಲ್ಲಿಯೂ ನಮ್ಮೊಂದಿಗೆ ಕುಳಿತುಕೊಳ್ಳಲು ಸಮಯಾವಕಾಶ ಮಾಡಿಕೊಂಡುದಕ್ಕಾಗಿ ಮುಖ್ಯಮಂತ್ರಿಗಳಿಗೆ ನಾನು ನನ್ನ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳುತ್ತೇನೆ. ಮತ್ತು ಇಂದಿನ ಚರ್ಚೆ, ಸಮಾಲೋಚನೆಗಳು ಅವರ ಆಶೀರ್ವಾದದಿಂದ ಉತ್ತಮ ಫಲಿತಾಂಶ ತರುತ್ತವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತು ಈ ದಿನದವರೆಗೆ ನಾವು ಮಾಡಿರುವ ಪ್ರಗತಿಗೆ ನಿಮ್ಮ ಕಠಿಣ ಪರಿಶ್ರಮ ಕಾರಣ ಎಂಬುದನ್ನೂ ನಾನು ನಿಮಗೆ ಹೇಳಲಿಚ್ಛಿಸುತ್ತೇನೆ. ಜಿಲ್ಲೆಯ, ಗ್ರಾಮದ ಪ್ರತಿಯೊಬ್ಬ ಸಿಬ್ಬಂದಿಯೂ ಮತ್ತು ನಮ್ಮ ಆಶಾ ಕಾರ್ಯಕರ್ತೆಯರೂ ಬಹಳ ಕಠಿಣ ಪರಿಶ್ರಮ ಹಾಕಿದ್ದಾರೆ. ಅವರು ಕಾಲ್ನಡೆಯಲ್ಲಿ ಬಹು ದೂರದ ದುರ್ಗಮ ಪ್ರದೇಶಗಳನ್ನು ಕ್ರಮಿಸಿ ಲಸಿಕೆಗಳನ್ನು ಸರಬರಾಜು ಮಾಡಿದ್ದಾರೆ. ನಾವು ಒಂದು ಬಿಲಿಯನ್ ಡೋಸ್ ಸಾಧನೆಯ ಬಳಿಕ ನಿಧಾನ ಮಾಡಿದರೆ ಅಲ್ಲಿ ಹೊಸ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ಇದೆ. ಆದುದರಿಂದ ನಮ್ಮ ದೇಶದಲ್ಲಿ ಒಂದು ಹೇಳಿಕೆ ಇದೆ, ರೋಗಗಳನ್ನು ಮತ್ತು ವೈರಿಗಳನ್ನು ಎಂದೆಂದೂ ಕೀಳಂದಾಜು ಮಾಡಬಾರದು ಎಂಬುದಾಗಿ. ನಾವು ಕೊನೆಯವರೆಗೂ ಹೋರಾಡಬೇಕು ಮತ್ತು ಆದುದರಿಂದ ನಾವು ನಮ್ಮ ರಕ್ಷಣಾ ವ್ಯವಸ್ಥೆ ಕುಸಿದು ಬೀಳಲು ಬಿಡಬಾರದು ಎಂಬುದು ನನ್ನ ಇರಾದೆ.

ಸ್ನೇಹಿತರೇ,

ನೂರು ವರ್ಷಗಳಲ್ಲೇ ಅತ್ಯಂತ ದೊಡ್ಡದಾದ ಈ ಜಾಗತಿಕ ಸಾಂಕ್ರಾಮಿಕದಲ್ಲಿ ದೇಶವು ಹಲವು ಸವಾಲುಗಳನ್ನು ಎದುರಿಸಿದೆ. ಕೊರೊನಾ ವಿರುದ್ಧ ದೇಶವು ನಡೆಸಿದ ಯುದ್ಧದಲ್ಲಿ ಹೊಸ ಪರಿಹಾರಗಳನ್ನು ಹುಡುಕುವಲ್ಲಿ ಮತ್ತು ನವೀನ ಹಾದಿಗಳ ಅನ್ವೇಷಣೆಯಲ್ಲಿ ಕೆಲವು ವಿಶೇಷಗಳು, ವೈಶಿಷ್ಟ್ಯಗಳು ಇವೆ. ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಸಂಗತಿಗಳನ್ನು ಅನ್ವೇಷಣೆ ಮಾಡಿದರು. ನೀವು ಕೂಡಾ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಲಸಿಕಾಕರಣವನ್ನು ಹೆಚ್ಚಿಸಲು ನವೀನ ಹಾದಿಗಳ ಮೂಲಕ ಹೆಚ್ಚು ಪ್ರಯತ್ನಗಳನ್ನು ಮಾಡಬೇಕು. ಹೊಸ ವಿಧಾನಗಳು, ಹೊಸ ಹುರುಪು ಮತ್ತು ಹೊಸ ತಂತ್ರಜ್ಞಾನ ಈ ಆಂದೋಲನಕ್ಕೆ ಚೈತನ್ಯ ತರಬಲ್ಲದು. 100% ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಿದ ರಾಜ್ಯಗಳು ಕೂಡಾ ವಿವಿಧ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿದ್ದವು ಎಂಬುದನ್ನು ನೀವು ಮನಸ್ಸಿನಲ್ಲಿಡಬೇಕು. ಭೌಗೋಳಿಕ ಕಾರಣಗಳು ಮತ್ತು ಸಂಪನ್ಮೂಲಗಳ ಕಾರಣದಿಂದಾಗಿ ಅಲ್ಲಿ ಸಮಸ್ಯೆಗಳಿದ್ದವು. ಆದರೆ ಈ ಜಿಲ್ಲೆಗಳು ಈ ಸವಾಲುಗಳನ್ನು ಎದುರಿಸಿ ಪರಿಹರಿಸಿದವು. ಲಸಿಕಾಕರಣಕ್ಕೆ ಸಂಬಂಧಿಸಿ ನಾವೆಲ್ಲರೂ ಕೆಲವು ತಿಂಗಳ ಅನುಭವವನ್ನು ಹೊಂದಿದ್ದೇವೆ. ನಾವು ಬಹಳಷ್ಟನ್ನು ಕಲಿತಿದ್ದೇವೆ ಮತ್ತು ನಮ್ಮ ಆಶಾ ಕಾರ್ಯಕರ್ತೆಯರು ಕೂಡಾ ಅಪರಿಚಿತ ವೈರಿಯ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಕಲಿತುಕೊಂಡಿದ್ದಾರೆ. ನೀವೀಗ ಸಣ್ಣ ಮಟ್ಟದಲ್ಲಿಯೂ ಕಾರ್ಯಾಚರಿಸುವಂತಹ ತಂತ್ರಗಳನ್ನು ರೂಪಿಸಿಕೊಂಡು ಮುಂದುವರಿಯಬೇಕಾಗಿದೆ. ರಾಜ್ಯ ಅಥವಾ ಜಿಲ್ಲೆಗಳ ವಿವರಣೆಯನ್ನು ಬದಿಗಿಟ್ಟು, ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಲಸಿಕಾಕರಣದಿಂದ ಹೊರಗಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಮುಂದುವರಿಯೋಣ. ಅಲ್ಲಿರುವ ಕೊರತೆ, ತೊಂದರೆಗಳನ್ನು ನಾವು ನಿವಾರಿಸಬೇಕು. ನೀವು ಹೇಳಿದಂತೆ ವಿಶೇಷ ಶಿಬಿರಗಳನ್ನು ನಡೆಸುವುದು ಒಂದು ಉತ್ತಮ ಚಿಂತನೆ. ನಿಮ್ಮ ಜಿಲ್ಲೆಯ ಪ್ರತೀ ಹಳ್ಳಿಗೂ ಮತ್ತು ಪ್ರತೀ ನಗರಕ್ಕೂ ನಿಮಗೆ ಪ್ರತ್ಯೇಕ ತಂತ್ರಗಳನ್ನು ಮಾಡಬೇಕಿದ್ದರೆ, ಆಗ ಆ ನಿಟ್ಟಿನಲ್ಲಿಯೂ ಮುಂದಡಿ ಇಡಿ. ವಲಯಗಳನ್ನು ಆಧರಿಸಿ 20-25 ಜನರ ತಂಡವನ್ನು ಕಟ್ಟುವ ಮೂಲಕ ನೀವಿದನ್ನು ಮಾಡಬಹುದು. ನೀವು ರಚಿಸಿದ ತಂಡಗಳ ನಡುವೆ ಆರೋಗ್ಯಪೂರ್ಣ ಸ್ಪರ್ಧೆ ಏರ್ಪಡುವ ಬಗ್ಗೆಯೂ ನೀವು ಪ್ರಯತ್ನಿಸಬಹುದು. ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಯ ನಮ್ಮ ಯುವ ಸ್ನೇಹಿತರಿಂದಲೂ ನೀವು ಗರಿಷ್ಟ ಸಹಾಯ ಪಡೆಯಬಹುದು. ನೀವು ನಿಮ್ಮ ನಿಮ್ಮ ಜಿಲ್ಲೆಗಳ ವಲಯವಾರು ವೇಳಾಪಟ್ಟಿಯನ್ನು ತಯಾರಿಸಿ ನಿಮ್ಮ ಗುರಿಯನು ನಿಗದಿ ಮಾಡಿಕೊಳ್ಳಬಹುದು. ನಾನು ತಳಮಟ್ಟದಲ್ಲಿರುವ ನಮ್ಮ ಸರಕಾರದ ಸಹೋದ್ಯೋಗಿಗಳ ಜೊತೆ ಸಂವಾದ ನಡೆಸುತ್ತಿರುತ್ತೇನೆ. ಲಸಿಕಾಕರಣದಲ್ಲಿ ತೊಡಗಿಕೊಂಡಿರುವ ಮಹಿಳಾ ಅಧಿಕಾರಿಗಳು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಉತ್ತಮ ಫಲಿತಾಂಶಗಳನ್ನೂ ಕೊಟ್ಟಿದ್ದಾರೆ. ಸರಕಾರದಲ್ಲಿರುವ ನಮ್ಮ ಮಹಿಳಾ ಸಿಬ್ಬಂದಿಗಳ ಸಹಾಯವನ್ನು ಪಡೆದುಕೊಳ್ಳಿ ಮತ್ತು 5-7 ದಿನಗಳಿಗೆ ಪೊಲೀಸ್ ಪಡೆಯಲ್ಲಿರುವ ಮಹಿಳಾ ಸಿಬ್ಬಂದಿಗಳ ಸಹಾಯವನ್ನೂ ಪಡೆದುಕೊಳ್ಳಿ. ಫಲಿತಾಂಶಗಳು ಬಹಳ ಅದ್ಭುತವಾಗಿರುತ್ತವೆ. ಆದಷ್ಟು ಬೇಗ ನಿಮ್ಮ ಜಿಲ್ಲೆಗಳನ್ನು ರಾಷ್ಟ್ರೀಯ ಸರಾಸರಿಯ ಸನಿಹ ಕೊಂಡೊಯ್ಯಲು ನೀವು ನಿಮ್ಮ ಗರಿಷ್ಟ ಪ್ರಯತ್ನಗಳನ್ನು ಮಾಡಬೇಕು. ವಾಸ್ತವದ ಸಂಗತಿ ಎಂದರೆ ನೀವು ಅದನ್ನು ದಾಟಿದ ಸಾಧನೆ ಮಾಡಬೇಕು ಎಂದು ನಾನು ಆಶಿಸುತ್ತೇನೆ. ನನಗೆ ಗೊತ್ತಿದೆ, ನೀವು ಜನರಲ್ಲಿ ಗಾಳಿ ಸುದ್ದಿಗಳ ಸವಾಲುಗಳನ್ನು ಎದುರಿಸುತ್ತಿರುವಿರಿ, ಮತ್ತು ಅವರಲ್ಲಿ ಗೊಂದಲದ ಮನಸ್ಥಿತಿ ಇದೆ ಎಂಬುದು. ಮತ್ತು ನಾವು ಮುನ್ನಡೆ ಸಾಧಿಸಿದಂತೆ, ನಾವು ಈ ಸವಾಲುಗಳನ್ನು ಜನ ಕೇಂದ್ರೀಕೃತ ಪ್ರದೇಶಗಳಲ್ಲಿ ಎದುರಿಸಬೇಕಾಗಬಹುದು. ಸಂವಾದದಲ್ಲಿ ಬಹಳಷ್ಟು ಮಂದಿ ಈ ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಇದಕ್ಕೆ ಬಹಳ ಪ್ರಮುಖ ಪರಿಹಾರವೆಂದರೆ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವುದು. ಈ ಪ್ರಯತ್ನದಲ್ಲಿ ನೀವು ಸ್ಥಳೀಯ ಧಾರ್ಮಿಕ ನಾಯಕರನ್ನು ಸಂಪರ್ಕಿಸಬೇಕು. ಅವರ ಸಹಾಯ ಪಡೆದುಕೊಳ್ಳಿ, ಅವರ 2-3 ನಿಮಿಷಗಳ ಕಿರು ವೀಡಿಯೋಗಳನ್ನು ತಯಾರಿಸಿ ಮತ್ತು ಅವುಗಳನ್ನು ಜನಪ್ರಿಯಗೊಳಿಸಿ. ಈ ವೀಡಿಯೋಗಳಲ್ಲಿ ಧಾರ್ಮಿಕ ನಾಯಕರು ಜನರಿಗೆ ವಿವರಿಸುವಂತಿರಬೇಕು ಮತ್ತು ಅದು ಪ್ರತೀ ಮನೆಗೂ ತಲುಪುವಂತಿರಬೇಕು. ನಾನು ವಿವಿಧ ಪಂಥಗಳ ಗುರುಗಳನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ನಾನು ಮೊದಲೇ ಆರಂಭದ ಹಂತದಲ್ಲಿ ಹಲವು ಧಾರ್ಮಿಕ ಗುರುಗಳ ಜೊತೆ ಮಾತನಾಡಿ ಈ ಕೆಲಸದಲ್ಲಿ ಅವರ ಸಹಾಯಕ್ಕಾಗಿ ಮನವಿ ಮಾಡಿದ್ದೆ. ಲಸಿಕಾಕರಣಕ್ಕೆ ಅವರು ಬಹಳ ಬೆಂಬಲ ನೀಡಿದರು ಮತ್ತು ಯಾರೊಬ್ಬರೂ ಅದಕ್ಕೆ ವಿರೋಧ ಮಾಡಿದ್ದಿಲ್ಲ. ಬರೇ ಎರಡು ದಿನಗಳ ಹಿಂದೆ, ನಾನು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ನಲ್ಲಿ ಭೇಟಿಯಾಗಿದ್ದೆ. ಲಸಿಕಾಕರಣದ ಬಗ್ಗೆ ಜನ ಸಮೂಹದಲ್ಲಿ ಧಾರ್ಮಿಕ ನಾಯಕರ ಸಂದೇಶವನ್ನು ಹರಡಲು ವಿಶೇಷ ಒತ್ತು ನೀಡಬೇಕು.

 

 

ಸ್ನೇಹಿತರೇ,

ನಿಮ್ಮ ಜಿಲ್ಲೆಗಳ ಜನರನ್ನು ಪ್ರೇರೇಪಿಸಲು ಮತ್ತು ಅವರಿಗೆ ಸಹಾಯ ಮಾಡಲು ಲಸಿಕಾ ಆಂದೋಲನವನ್ನು ಪ್ರತೀ ಮನೆಗೂ ಕೊಂಡೊಯ್ಯುವ ಕ್ರಮವನ್ನೀಗ ಕೈಗೆತ್ತಿಕೊಳ್ಳಬೇಕಾಗಿದೆ. “ಹರ್ ಘರ್ ದಸ್ತಕ್” (ಪ್ರತೀ ಮನೆಯ ಬಾಗಿಲಿನತ್ತ) ಮಂತ್ರವನ್ನು ಎರಡು ದೋಸ್ ಗಳ ಲಸಿಕೆಯ ಸುರಕ್ಷಾ ಜಾಲವನ್ನು ಹೊಂದಿಲ್ಲದ ಪ್ರತೀ ಮನೆಗಳಿಗೂ ಅನ್ವಯಿಸಬೇಕು. ಇದುವರೆಗೆ ನೀವು ಜನರನ್ನು ಲಸಿಕಾ ಕೇಂದ್ರಗಳತ್ತ ಕೊಂಡೊಯ್ಯುವ ವ್ಯವಸ್ಥೆಗಳನ್ನು ಮಾಡಿರುವಿರಿ ಮತ್ತು ಅಲ್ಲಿ ಸುರಕ್ಷಿತವಾಗಿ ಲಸಿಕೆ ಹಾಕಿಸಿದ್ದೀರಿ. ಈಗ ನಾವು ’ಹರ್ ಘರ್ ಟಿಕಾ, ಘರ್ ಘರ್ ಟಿಕಾ” (ಮನೆ ಬಾಗಿಲಿನಲ್ಲಿ ಲಸಿಕಾಕರಣ) ಎಂಬ ಉತ್ಸಾಹ, ಸ್ಪೂರ್ತಿಯೊಂದಿಗೆ ಪ್ರತೀ ಮನೆಯನ್ನೂ ತಲುಪಬೇಕು.

ಸ್ನೇಹಿತರೇ,

ಈ ಆಂದೋಲನವನ್ನು ಯಶಸ್ವಿಗೊಳಿಸಲು ನಾವು ಸಾಮಾಜಿಕ ಮೂಲಸೌಕರ್ಯವನ್ನು ತಂತ್ರಜ್ಞಾನದಿಂದ ಹಿಡಿದು ಸಂಪರ್ಕದವರೆಗೆ ಪೂರ್ಣವಾಗಿ ಬಳಸಿಕೊಳ್ಳಬೇಕು. ದುರ್ಗಮ ಪ್ರದೇಶದಲ್ಲಿರುವ ಗ್ರಾಮಗಳಿಂದ ಹಿಡಿದು ನಗರಗಳವರೆಗೆ 100% ಲಸಿಕಾಕರಣಕ್ಕಾಗಿ ನಮ್ಮ ದೇಶದ ರಾಜ್ಯಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ನಮಗೆ ಹಲವಾರು ಇಂತಹ ಮಾದರಿಗಳು ಲಭ್ಯ ಇವೆ. ನೀವು ನಿಮಗೆ ಸೂಕ್ತವಾದಂತಹ ಅಥವಾ ಆಯಾ ಸಾಮಾಜಿಕ, ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾದಂತಹ ಹೊಂದಾಣಿಕೆಯಾಗುವಂತಹ ಯಾವುದೇ ಮಾದರಿಯನ್ನು ಅಳವಡಿಸಿಕೊಳ್ಳಬಹುದು. ನೀವು ಇನ್ನೊಂದು ಕೆಲಸವನ್ನೂ ಮಾಡಬಹುದು. ನಿಮ್ಮ ಅನೇಕ ಸಹೋದ್ಯೋಗಿಗಳು ಅವರ ಜಿಲ್ಲೆಗಳಲ್ಲಿ ಲಸಿಕಾಕರಣವನ್ನು ತ್ವರಿತಗತಿಯಲ್ಲಿ ಮಾಡಿದ್ದಾರೆ. ಅವರು ಕೂಡಾ ನೀವು ಎದುರಿಸುತ್ತಿದ್ದಂತಹದೇ ಸವಾಲುಗಳನ್ನು ಎದುರಿಸಿರಬಹುದಾದ ಸಾಧ್ಯತೆ ಇದೆ. ನೀವು ಅವರು ಲಸಿಕಾಕರಣದ ವೇಗವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಕಂಡುಕೊಳ್ಳುವುದು ಅವಶ್ಯ. ಮತ್ತು ಅವರು ಸಮಸ್ಯೆಯನ್ನು ಹೇಗೆ ಪರಿಹರಿಸಿದರು ಎಂಬುದನ್ನೂ ಅರಿತುಕೊಳ್ಳಬೇಕು. ನೀವು ಅವರಿಗೆ ಮಾಡುವ ಒಂದು ದೂರವಾಣಿ ಕರೆ ನಿಮ್ಮ ಜಿಲ್ಲೆಯಲ್ಲಿ ಪರಿವರ್ತನೆಯನ್ನು ತರಬಲ್ಲದು. ನೀವು ಅವರ ನವೀನ ತಂತ್ರಗಳನ್ನು ಹಾಗೆಯೇ ನಕಲು ಮಾಡಬಹುದು ಅಥವಾ ಅವರ ಕೆಲವು ಉತ್ತಮ ಪದ್ಧತಿಗಳನ್ನು ನಿಮ್ಮ ಜಿಲ್ಲೆಗಳಲ್ಲಿ ಜಾರಿಗೆ ತರಬಹುದು. ನಾವು ನಮ್ಮ ಅರಣ್ಯವಾಸಿಗಳನ್ನು ಮತ್ತು ಬುಡಕಟ್ಟು ಸಮುದಾಯಗಳ ಜನರನ್ನು ಲಸಿಕಾಕರಣಕ್ಕೆ ಒಳಪಡಿಸಲು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು. ಇದುವರೆಗಿನ ನಮ್ಮ ಅನುಭವ ಸ್ಥಳೀಯ ನಾಯಕತ್ವ ಮತ್ತು ಸಮಾಜದ ಆಢ್ಯ ಮಹನೀಯರ ಬೆಂಬಲ ಮತ್ತು ಸಹಕಾರ ದೊರೆತರೆ ಲಸಿಕಾಕರಣ ಆಂದೋಲನದ ಯಶಸ್ಸಿನಲ್ಲಿ ಅದು ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎಂದು ಹೇಳುತ್ತದೆ. ನಾವು ಕೆಲವು ದಿನಗಳನ್ನು ಅದಕ್ಕೆ ಮೀಸಲಾಗಿಡಬೇಕು. ಉದಾಹರಣೆಗೆ ಬಿರ್ಸಾ ಮುಂಡಾ ಜೀ ಅವರ ಜನ್ಮವರ್ಷಾಚರಣೆ ಹತ್ತಿರ ಬರುತ್ತಿದೆ. ಇಡೀ ಬುಡಕಟ್ಟು ಪ್ರದೇಶಗಳಲ್ಲಿ ಬಿರ್ಸಾ ಮುಂಡಾ ಜೀ ಅವರ ಜನ್ಮ ವರ್ಷಾಚರಣೆಗೆ ಮೊದಲು ಲಸಿಕಾಕರಣ ಅವರಿಗೆ ನೈಜ ಶ್ರದ್ಧಾಂಜಲಿ ಎಂಬಂತಹ ವಾತಾವರಣವನ್ನು ನಿರ್ಮಾಣ ಮಾಡಿ. ಅದೇ ರೀತಿ ನಾವು ಇಂತಹ ಭಾವನಾತ್ಮ ನೆಲೆಗಳಲ್ಲಿಯೂ ಚಿಂತಿಸಬೇಕು. ಈ ರೀತಿಯ ಧೋರಣೆ ಈ ಬುಡಕಟ್ತು ಸಮುದಾಯದಲ್ಲಿ ಸಂಪೂರ್ಣ ಲಸಿಕಾಕರಣಕ್ಕೆ ಬಹಳ ಸಹಕಾರಿ ಎಂದು ನಾನು ಭಾವಿಸುತ್ತೇನೆ. ಲಸಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಸರಳವಾಗಿ ತಿಳಿಸಿದಷ್ಟೂ ಮತ್ತು ಅದನ್ನು ಅವರ ಸ್ಥಳೀಯ ಭಾಷೆಗಳಲ್ಲಿ ತಿಳಿಸಿದಷ್ಟೂ ಉತ್ತಮ ಫಲಿತಾಂಶಗಳು ಲಭಿಸುತ್ತವೆ. ಕೆಲವರು ಲಸಿಕಾಕರಣಕ್ಕೆ ಸಂಬಂಧಿಸಿ ಸ್ಥಳೀಯ ಜನಭಾಷೆಯಲ್ಲಿ ಹಾಡುಗಳನ್ನು ಮಾಡಿರುವುದನ್ನು ನಾನು ಗಮನಿಸಿದ್ದೇನೆ.

 

ಸ್ನೇಹಿತರೇ,

ಪ್ರತೀ ಮನೆ ಬಾಗಿಲನ್ನು ತಟ್ಟುವಾಗ, ನೀವೆಲ್ಲರೂ ಮೊದಲ ಡೋಸಿನ ಜೊತೆ ಎರಡನೇ ಡೋಸಿಗೂ ಅಷ್ಟೇ ಮಹತ್ವವನ್ನು, ಗಮನವನ್ನು ನೀಡಬೇಕು. ಯಾಕೆಂದರೆ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಆರಂಭಿಸುತ್ತಿದ್ದಂತೆಯೇ ತುರ್ತಿನ ಭಾವನೆಯೂ ಕಡಿಮೆಯಾಗಲು ಆರಂಭಿಸುತ್ತದೆ. ಜನರು ಕೂಡಾ “ಅವಸರವೇನಿದೆ; ನಾವು ಲಸಿಕೆಯನ್ನು ನಂತರ ಪಡೆಯುವ” ಎಂಬ ಯೋಚನೆ ಮಾಡಲು ಆರಂಭ ಮಾಡುತ್ತಾರೆ. ನನಗೆ ನೆನಪಿದೆ ನಾವು ಒಂದು ಬಿಲಿಯನ್ ಡೋಸ್ ಗಡಿ ದಾಟಿದ ಸಂದರ್ಭದಲ್ಲಿ ಆಸ್ಪತ್ರ್ಗೆ ಹೋಗಿದ್ದಾಗ, ಅಲ್ಲಿ ನಾನೊಬ್ಬ ವ್ಯಕ್ತಿಯನ್ನು ಭೇಟಿಯಾದೆ. ಅಲ್ಲಿ ನಾನವರನ್ನು ನೀವೇಕೆ ಇಷ್ಟು ಕಾಲವಾದರೂ ಲಸಿಕೆಯನ್ನು ತೆಗಿದುಕೊಂಡಿಲ್ಲ ಎಂದು ಕೇಳಿದೆ. ಅವರು ಹೇಳಿದರು, ನಾನೊಬ್ಬ ದೇಹದಾರ್ಢ್ಯ ಪಟು ಮತ್ತು ಅದು ನನಗೆ ಅವಶ್ಯ ಎಂದು ಕಾಣಲಿಲ್ಲ. “ಈಗ ಒಂದು ಬಿಲಿಯನ್ ಡೋಸ್ ಗಳನ್ನು ಸಾಧಿಸಲಾಗಿದೆ, ನಾನಿಲ್ಲಿಗೆ ಲಸಿಕೆಗಾಗಿ ಬಂದಿದ್ದೇನೆ ಯಾಕೆಂದರೆ, ಅದಿಲ್ಲದಿದ್ದರೆ ನನ್ನನ್ನು ಅಸ್ಪೃಶ್ಯನನ್ನಾಗಿ ನೋಡುತ್ತಾರೆ, ನಾನು ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ.ಆದುದರಿಂದ ನಾನು ಲಸಿಕೆ ಪಡೆಯಲು ನಿರ್ಧರಿಸಿ ಇಲ್ಲಿಗೆ ಬಂದಿದ್ದೇನೆ” . ನಾನು ಮನವಿ ಮಾಡಿಕೊಳ್ಳುವುದೇನೆಂದರೆ ನಮ್ಮ ರಕ್ಷಣೆ ಕುಸಿದು ಬೀಳಲು ನಾವು ಬಿಡಬಾರದು. ಇಂತಹ ಧೋರಣೆಯಿಂದಾಗಿ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಳವಳಕ್ಕೀಡಾಗಿವೆ. ನಮ್ಮಂತಹ ದೇಶಕ್ಕೆ ನಾವಿದನ್ನು ಸಹಿಸಲು ಸಾಧ್ಯವಿಲ್ಲ. ಆದುದರಿಂದ ಲಸಿಕೆಯ ಎರಡು ಡೋಸ್ ಗಳನ್ನು ಕೂಡಾ ಸಕಾಲಕ್ಕೆ ಪಡೆದುಕೊಳ್ಳುವುದು ಅವಶ್ಯ. ಎರಡನೇ ಡೋಸ್ ಪಡೆಯದೇ ಇರುವ ನಿಮ್ಮ ಪ್ರದೇಶದ ಜನರನ್ನು ನೀವು ಆದ್ಯತೆಯಾಧಾರದಲ್ಲಿ ಸಂಪರ್ಕಿಸಬೇಕು, ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯದೇ ಇರುವವರಿಗೆ ಲಸಿಕೆ ಹಾಕಿಸಬೇಕು.

ಸ್ನೇಹಿತರೇ,

“ಎಲ್ಲರಿಗೂ ಉಚಿತ ಲಸಿಕೆ” ಆಂದೋಲನದಡಿಯಲ್ಲಿ, ನಾವು ದಿನವೊಂದಕ್ಕೆ 2.5 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಿದ್ದೇವೆ ಮತ್ತು ನಮ್ಮ ಸಾಮರ್ಥ್ಯಗಳನ್ನು ತೋರಿಸಿದ್ದೇವೆ. ಮನೆ ಬಾಗಿಲಿಗೆ ಲಸಿಕೆ ಪೂರೈಕೆ ಮಾಡುವ ಇಡೀ ಪೂರೈಕೆ ಸರಪಳಿ ಜಾಲ ಈಗ ಅಸ್ತಿತ್ವದಲ್ಲಿದೆ. ಈ ತಿಂಗಳು ಲಭ್ಯ ಇರುವ ಲಸಿಕೆಗಳ ಪ್ರಮಾಣದ ಬಗ್ಗೆ ಮಾಹಿತಿಯನ್ನು ವಿವರವಾಗಿ ಮುಂಚಿತವಾಗಿಯೇ ರಾಜ್ಯಗಳ ಜೊತೆ ಹಂಚಿಕೊಳ್ಳಲಾಗಿದೆ.ಆದುದರಿಂದ ನೀವು ಈ ತಿಂಗಳಿಗೆ ನಿಮ್ಮ ಗುರಿಯನ್ನು ನಿಮ್ಮ ಅನುಕೂಲತೆಗಳಿಗೆ ತಕ್ಕಂತೆ ಮುಂಚಿತವಾಗಿ ಯೋಜಿಸಿಕೊಳ್ಳಬಹುದು.ಒಂದು ಬಿಲಿಯನ್ ಡೋಸ್ ಲಸಿಕೆ ಗುರಿ ಸಾಧಿಸಿದ ಬಳಿಕ ಈಗ ದೀಪಾವಳಿ ಹಬ್ಬದ ಉತ್ಸಾಹವಿದೆ ಮತ್ತು ಕ್ರಿಸ್ಮಸ್ ಆಚರಣೆಗೆ ನಾವು ಹೊಸ ಗುರಿಗಳನ್ನು ಅದೇ ಉತ್ಸಾಹದಿಂದ ಈಡೇರಿಸುವಂತಾಗಬೇಕು. ನಾವು ಈ ಉತ್ಸಾಹದೊಂದಿಗೆ ಮುಂದುವರಿಯಬೇಕು.

ಸ್ನೇಹಿತರೇ,

ಕೊನೆಯಲ್ಲಿ, ಸ್ನೇಹಿತರೇ ನಾನೊಂದು ಸಂಗತಿಯನ್ನು ನಿಮಗೆ ನೆನಪು ಮಾಡಿಕೊಡಲು ಇಚ್ಛಿಸುತ್ತೇನೆ. ನೆನಪಿಸಿಕೊಳ್ಳಿ, ನಿಮ್ಮ ಸರಕಾರಿ ಸೇವೆಯ ಆ ಮೊದಲ ದಿನವನ್ನು. ನಾನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಅವರೊಂದಿಗೆ ಕುಳಿತಿರುವ ತಂಡಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ನೀವು ಮುಸ್ಸೋರಿಯಿಂದ ತರಬೇತಿ ಮುಗಿಸಿ ಪದವಿ ಪಡೆದು ನಿಮ್ಮ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಮೊದಲ ದಿನವನ್ನು ನೆನಪು ಮಾಡಿಕೊಳ್ಳಿ. ನಿಮ್ಮ ಭಾವನೆಗಳು ಏನಿದ್ದವು, ನಿಮ್ಮ ಕನಸುಗಳು ಏನಿದ್ದವು?. ನನಗೆ ಖಚಿತವಾಗಿ ಗೊತ್ತಿದೆ, ನೀವು ಸಮಾಜಕ್ಕೆ ಉತ್ತಮವಾದುದು ಏನಾದರೂ ಮಾಡಬೇಕು ಎಂಬ ಆಶಯವನ್ನು ಹೊಂದಿದ್ದಿರಿ. ಮತ್ತು ಈ ನಿಟ್ಟಿನಲ್ಲಿ ಪೂರ್ಣ ಹೃದಯದಿಂದ ಕಾರ್ಯತತ್ಪರರಾಗಿದ್ದಿರಿ. ಆ ಕನಸುಗಳನ್ನು ಮತ್ತು ದೃಢ ನಿರ್ಧಾರಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ ಮತ್ತು ಏನೆಂದರೆ ಸಮಾಜದಲ್ಲಿ ಹಿಂದುಳಿದವರಿಗೆ ಮತ್ತು ಅವಕಾಶವಂಚಿತರಿಗೆ ನಮ್ಮ ಬದುಕನ್ನು ಮುಡಿಪಾಗಿಡಲು ಇದಕ್ಕಿಂತ ದೊಡ್ಡ ಅವಕಾಶ ಇನ್ನೊಂದಿರಲಾರದು ಎಂಬುದನ್ನು ಅರ್ಥೈಸಿಕೊಳ್ಳಿ. ಅದೇ ಉತ್ಸಾಹ, ಸ್ಪೂರ್ತಿಯನ್ನು ನೆನಪು ಮಾಡಿಕೊಳ್ಳುವ ಮೂಲಕ ನಿಮ್ಮ ಬದ್ಧತೆಯನ್ನು ತೋರ್ಪಡಿಸಿಕೊಳ್ಳಿ. ನನಗೆ ಖಂಡಿತವಾಗಿಯೂ ಗೊತ್ತಿದೆ, ನಿಮ್ಮ ಜಿಲ್ಲೆಯ ಲಸಿಕಾಕರಣ ಪರಿಸ್ಥಿತಿ ಬಹಳ ಬೇಗ ಸಾಮೂಹಿಕ ಪ್ರಯತ್ನದಿಂದಾಗಿ ಸುಧಾರಿಸುತ್ತದೆ. ಪ್ರತೀ ಮನೆಗೆ ಭೇಟಿ ನೀಡುವ ಮೂಲಕ ನಾವೆಲ್ಲ “ಹರ್ ಘರ್ ದಸ್ತಕ್” ಆಂದೋಲನವನ್ನು ಯಶಸ್ವಿಗೊಳಿಸೋಣ. ಇಂದು ನನ್ನ ಮಾತುಗಳನ್ನು ಕೇಳುತ್ತಿರುವ ದೇಶದ ಜನತೆಗೆ ಮುಂದೆ ಬರಲು ನಾನು ಮನವಿ ಮಾಡುತ್ತೇನೆ. ನೀವು ಲಸಿಕೆ ಪಡೆದುಕೊಂಡಿದ್ದರೆ ಒಳಿತು, ಆದರೆ ನೀವು ಇತರರೂ ಲಸಿಕೆ ಪಡೆಯುವಂತೆ ಮಾಡಲು ಪರಿಶ್ರಮಪಡಿರಿ. ಈ ನಿಟ್ಟಿನಲ್ಲಿ ನೀವು ದಿನ ನಿತ್ಯ 2-5-10 ಜನರನ್ನು ಸಂಪರ್ಕಿಸುವ ಪ್ರಯತ್ನ ಮಾಡಿರಿ. ಇದು ಮಾನವತೆಗೆ ಮಾಡುವ ಸೇವೆ ಮತ್ತು ಭಾರತ ಮಾತೆಗೆ ಮಾಡುವ ಸೇವೆ. ಇದು 130 ಕೋಟಿ ಭಾರತೀಯರ ಕಲ್ಯಾಣ. ಅದರಲ್ಲಿ ಯಾವುದೇ ಹಿಂಜರಿಕೆ ಬೇಡ ಮತ್ತು ನಮ್ಮ ದೀಪಾವಳಿ ಆ ನಿರ್ಧಾರಗಳ ದೀಪಾವಳಿಯಾಗಲಿ. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯದ ಈ 75 ವರ್ಷಗಳ ಆಚರಣೆ ಸಂತೋಷ ಮತ್ತು ಪೂರ್ಣ ವಿಶ್ವಾಸದೊಂದಿಗೆ ನಡೆಯುವಂತೆ ನೋಡಿಕೊಳ್ಳಲು ನಮಗೆ ಬಹಳ ಕಡಿಮೆ ಅವಧಿ ಇದೆ ! ನಿಮ್ಮೆಲ್ಲರಲ್ಲೂ ನನಗೆ ವಿಶ್ವಾಸ, ನಂಬಿಕೆ ಇದೆ. ನಿಮ್ಮಂತಹ ಯುವ ತಂಡಗಳಲ್ಲಿ ನನಗೆ ನಂಬಿಕೆ ಇದೆ. ಮತ್ತು ಅದರಿಂದಾಗಿ ನಾನು ವಿದೇಶದಿಂದ ಬಂದ ಕೂಡಲೇ ನನ್ನ ದೇಶದ ಈ ಸ್ನೇಹಿತರನ್ನು ಭೇಟಿ ಮಾಡಲು ಇದ್ದಕ್ಕಿದ್ದಂತೆ ನಿರ್ಧರಿಸಿದೆ. ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದಾರೆ ಮತ್ತು ಅವರು ಈ ವಿಷಯದಲ್ಲಿ ತಮ್ಮ ಗಂಭೀರ ದೃಢ ನಿಲುವನ್ನು ತೋರ್ಪಸಿದ್ದಾರೆ. ಎಲ್ಲಾ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ನಾನು ಋಣಿಯಾಗಿದ್ದೇನೆ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಸ್ಕಾರ್!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will walk shoulder to shoulder': PM Modi pushes 'Make in India, Partner with India' at Russia-India forum

Media Coverage

'Will walk shoulder to shoulder': PM Modi pushes 'Make in India, Partner with India' at Russia-India forum
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in fire mishap in Arpora, Goa
December 07, 2025
Announces ex-gratia from PMNRF

The Prime Minister, Shri Narendra Modi has condoled the loss of lives in fire mishap in Arpora, Goa. Shri Modi also wished speedy recovery for those injured in the mishap.

The Prime Minister informed that he has spoken to Goa Chief Minister Dr. Pramod Sawant regarding the situation. He stated that the State Government is providing all possible assistance to those affected by the tragedy.

The Prime Minister posted on X;

“The fire mishap in Arpora, Goa is deeply saddening. My thoughts are with all those who have lost their loved ones. May the injured recover at the earliest. Spoke to Goa CM Dr. Pramod Sawant Ji about the situation. The State Government is providing all possible assistance to those affected.

@DrPramodPSawant”

The Prime Minister also announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister’s Office posted on X;

“An ex-gratia of Rs. 2 lakh from PMNRF will be given to the next of kin of each deceased in the mishap in Arpora, Goa. The injured would be given Rs. 50,000: PM @narendramodi”