ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್‌ ಲಸಿಕೆ ನೀಡಿಕೆ ಸಂಪೂರ್ಣಗೊಳಿಸಿದ ಭಾರತದ ಮೊದಲ ರಾಜ್ಯವಾಗಿ ಹಿಮಾಚಲ ಪ್ರದೇಶ ಹೊರಹೊಮ್ಮಿದೆ
ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೆ ಅಭಿಯಾನವನ್ನು ದೇಶದ ಗ್ರಾಮೀಣ ಸಮಾಜವು ಹೇಗೆ ಸಶಕ್ತಗೊಳಿಸುತ್ತಿದೆ ಎಂಬುದಕ್ಕೆ ಹಿಮಾಚಲ ಪ್ರದೇಶವೇ ಸಾಕ್ಷಿ: ಪ್ರಧಾನಿ
ಹೊಸ ಡ್ರೋನ್ ನಿಯಮಗಳು ಆರೋಗ್ಯ ಮತ್ತು ಕೃಷಿಯಂತಹ ಅನೇಕ ವಲಯಗಳಿಗೆ ಸಹಾಯ ಮಾಡುತ್ತವೆ: ಪ್ರಧಾನಿ
ಮಹಿಳಾ ಸ್ವ-ಸಹಾಯ ಗುಂಪುಗಳಿಗಾಗಿ ಮುಂಬರುವ ವಿಶೇಷ ಆನ್‌ಲೈನ್ ವೇದಿಕೆಯು ನಮ್ಮ ಸಹೋದರಿಯರಿಗೆ ದೇಶ ಮತ್ತು ವಿದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ: ಪ್ರಧಾನಿ
ಹಿಮಾಚಲದ ಮಣ್ಣನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಲು, ಹಿಮಾಚಲವನ್ನು 'ಅಮೃತ್ ಕಾಲ'ದಲ್ಲಿ ಸಾವಯವ ಕೃಷಿಯತ್ತ ಕೊಂಡೊಯ್ಯಲು ರಾಜ್ಯದ ರೈತರು ಮತ್ತು ತೋಟಗಾರರಿಗೆ ಕರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದ ಕೋವಿಡ್ ಲಸಿಕೆ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಶ್ರೀ ಅನುರಾಗ್ ಸಿಂಗ್ ಠಾಕೂರ್; ಸಂಸದರು, ಶಾಸಕರು, ಪಂಚಾಯತ್ ನಾಯಕರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾರ್ಯಕ್ರಮದ ವೇಳೆ, ಶಿಮ್ಲಾದ ದಾದ್ರಾ ಕ್ವಾರ್‌ನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ರಾಹುಲ್ ಅವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಈ ವೇಳೆ, ಲಸಿಕೆ ವ್ಯರ್ಥವಾಗುವುದನ್ನು ಕಡಿಮೆ ಮಾಡಿದ್ದಕ್ಕಾಗಿ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ದುರ್ಗಮ ಪ್ರದೇಶದಲ್ಲಿ ಲಸಿಕೆ ನೀಡುವಾಗ ಆದ ಅನುಭವದ ಬಗ್ಗೆ ಚರ್ಚಿಸಿದರು. ಮಂಡಿ ಜಿಲ್ಲೆಯ ತುನಾಗ್‌ ಪಟ್ಟಣದ ಲಸಿಕೆ ಫಲಾನುಭವಿ ಶ್ರೀ ದಯಾಳ್ ಸಿಂಗ್ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ಲಸಿಕೆಯ ಸೌಲಭ್ಯಗಳು ಮತ್ತು ಲಸಿಕೆಗೆ ಸಂಬಂಧಿಸಿದ ವದಂತಿಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬುದರ ಬಗ್ಗೆ ವಿಚಾರಿಸಿದರು. ಪ್ರಧಾನಮಂತ್ರಿಯವರ ನಾಯಕತ್ವಕ್ಕೆ ಫಲಾನುಭವಿ ಧನ್ಯವಾದ ಅರ್ಪಿಸಿದರು. ಹಿಮಾಚಲ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತಂಡದ ಸ್ಫೂರ್ತಿ ಮತ್ತು ಪ್ರಯತ್ನಗಳ ಬಗ್ಗೆ ಪ್ರಧಾನಿ ಶ್ಲಾಘಿಸಿದರು. ಕುಲ್ಲುವಿನ ಆಶಾ ಕಾರ್ಯಕರ್ತೆ ನಿರ್ಮಾ ದೇವಿ ಅವರೊಂದಿ ಸಂವಾದ ನಡೆಸಿದ ಪ್ರಧಾನಿ, ಲಸಿಕೆ ಅಭಿಯಾನದೊಂದಿಗೆ ಅವರ ಅನುಭವದ ಬಗ್ಗೆ ವಿಚಾರಿಸಿದರು. ಲಸಿಕೆ ಅಭಿಯಾನಕ್ಕೆ ಸಹಾಯ ಮಾಡುವಲ್ಲಿ ಸ್ಥಳೀಯ ಸಂಪ್ರದಾಯಗಳ ಬಳಕೆಯ ಬಗ್ಗೆ ಪ್ರಧಾನಿ ಮಾತನಾಡಿದರು. ತಂಡವು ಅಭಿವೃದ್ಧಿಪಡಿಸಿದ ಸಂವಾದ ಮತ್ತು ಸಹಯೋಗದ ಮಾದರಿಯನ್ನು ಅವರು ಶ್ಲಾಘಿಸಿದರು. ಲಸಿಕೆಗಳನ್ನು ನೀಡಲು ಆಶಾ ಕಾರ್ಯಕರ್ತೆಯ ತಂಡವು ಹೇಗೆ ದೂರದ ಊರುಗಳಿಗೆ ಪ್ರಯಾಣಿಸಿತು ಎಂದು ಪ್ರಧಾನಿ ವಿಚಾರಿಸಿದರು.

ಹಮೀರ್‌ಪುರದ ಶ್ರೀ ನಿರ್ಮಲಾ ದೇವಿ ಅವರೊಂದಿಗೆ ಪ್ರಧಾನಮಂತ್ರಿಯವರು ಲಸಿಕೆ ಪಡೆಯುವಲ್ಲಿ ಹಿರಿಯ ನಾಗರಿಕರ ಅನುಭವದ ಬಗ್ಗೆ ಚರ್ಚಿಸಿದರು. ಈ ವೇಳೆ ನಿರ್ಮಲಾ ದೇವಿ ಅವರು ಲಸಿಕೆಯ ಸಮರ್ಪಕ ಪೂರೈಕೆಗಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು ಮತ್ತು ಅಭಿಯಾನಕ್ಕೆ ಶುಭ ಹಾರೈಸಿದರು. ಹಿಮಾಚಲ ಪ್ರದೇಶದಲ್ಲಿ ಜಾರಿಗೊಳಿಸಲಾಗಿರುವ ಆರೋಗ್ಯ ಯೋಜನೆಗಳನ್ನು ಪ್ರಧಾನಿ ಶ್ಲಾಘಿಸಿದರು. ಉನಾದ ಕರ್ಮೋ ದೇವಿ ಜೀ ಅವರು 22500 ಜನರಿಗೆ ಲಸಿಕೆ ಹಾಕಿದ ಹಿರಿಮೆಯನ್ನು ಹೊಂದಿದ್ದಾರೆ. ಕಾಲಿನ ಮೂಳೆ  ಮುರಿದಿದ್ದರೂ ಕರ್ಮೋ ದೇವಿ ಜೀ ಅವರು ತೋರಿದ ಸೇವಾ ಸ್ಫೂರ್ತಿ ಹಾಗೂ ಉತ್ಸಾಹವನ್ನು ಪ್ರಧಾನಿ ಕೊಂಡಾಡಿದರು. ಕರ್ಮೋ ದೇವಿ ಅವರಂತಹ ಜನರ ಪ್ರಯತ್ನದಿಂದಾಗಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮ ಮುಂದುವರಿದಿದೆ ಎಂದು ಪ್ರಧಾನಿ ಹೇಳಿದರು.  ಲಹೌಲ್ ಮತ್ತು ಸ್ಪಿತಿ ಜಿಲ್ಲೆಯ ಆಧ್ಯಾತ್ಮಿಕ ಗುರು ಶ್ರೀ ನವಾಂಗ್ ಉಪಾಸಕ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಅವರು, ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಮನವೊಲಿಸಲು ಆಧ್ಯಾತ್ಮಿಕ ಮುಖಂಡರಾಗಿ ತಮ್ಮ ಸ್ಥಾನವನ್ನು ಹೇಗೆ ಬಳಸಿದರು ಎಂದು ವಿಚಾರಿಸಿದರು. ಅಟಲ್ ಸುರಂಗವು ಈ ಪ್ರದೇಶದ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಶ್ರೀ ಮೋದಿ ಮಾತನಾಡಿದರು. ಶ್ರೀ ಉಪಾಸಕ್ ಅವರು ಈ ಸುರಂಗದಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗಿರುವ ಬಗ್ಗೆ ಮತ್ತು ಸಂಪರ್ಕ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು. ಲಹೌಲ್‌ ಮತ್ತು ಸ್ಪಿತಿ ಜಿಲ್ಲೆಯು ಲಸಿಕೆ ಅಭಿಯಾನವನ್ನು ವೇಗವಾಗಿ ಅಳವಡಿಸಿಕೊಳ್ಳುವಲ್ಲಿ ಸಹಾಯ ಮಾಡಿದ್ದಕ್ಕಾಗಿ ಬೌದ್ಧ ಮುಖಂಡರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಪ್ರಧಾನಿಯವರು ಸಂವಾದದ ವೇಳೆ ವ್ಯಕ್ತಿಗತ ಚರ್ಚೆ ಮತ್ತು ಅನೌಪಚಾರಿಕ ವಿಧಾನದಿಂದ ಗಮನ ಸೆಳೆದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿಮಾಚಲ ಪ್ರದೇಶವು 100 ವರ್ಷಗಳಲ್ಲಿ  ವೈರಾಣು ಸೋಂಕಿನ ವಿರುದ್ಧದ ಹೋರಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದರು. ಹಿಮಾಚಲವು ತನ್ನ ಸಂಪೂರ್ಣ ಅರ್ಹ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆಯನ್ನು ನೀಡಿದ ಭಾರತದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಅವರು ಶ್ಲಾಘಿಸಿದರು. ಈ ಯಶಸ್ಸು ಆತ್ಮವಿಶ್ವಾಸ್ ಮತ್ತು ಆತ್ಮನಿರ್ಭರತಾದ ಮಹತ್ವವನ್ನು ಒತ್ತಿ ಹೇಳಿದೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಲಸಿಕೆಯ ಯಶಸ್ಸು ಅದರ ನಾಗರಿಕರ ಉತ್ಸಾಹ ಮತ್ತು ಕಠಿಣ ಪರಿಶ್ರಮದ ಫಲವಾಗಿದೆ ಎಂದು ಅವರು ಹೇಳಿದರು. ಭಾರತವು ದಿನಕ್ಕೆ 1.25 ಕೋಟಿ ಲಸಿಕೆಗಳ ದಾಖಲೆಯ ವೇಗದಲ್ಲಿ ಲಸಿಕೆ ಹಾಕುತ್ತಿದೆ. ಅಂದರೆ ಭಾರತದಲ್ಲಿ ಒಂದು ದಿನದಲ್ಲಿ ನೀಡಲಾಗುತ್ತಿರುವ ಲಸಿಕೆಗಳ ಸಂಖ್ಯೆ ಅನೇಕ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ ಎಂದರು. ಲಸಿಕೆ ಅಭಿಯಾನಕ್ಕೆ ವೈದ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು ಮತ್ತು ಮಹಿಳೆಯರು ನೀಡಿದ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು.  ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 'ಸಬ್ ಕಾ ಪ್ರಯಾಸ್‌' ಬಗ್ಗೆ ಮಾತನಾಡಿದ ಪ್ರಧಾನಿ, ಈ ಯಶಸ್ಸು ಅದರ ಮೂರ್ತಿರೂಪ ಎಂದು ಹೇಳಿದರು. ಹಿಮಾಚಲ ಪ್ರದೇಶವು ದೇವತೆಗಳ ಭೂಮಿಯಾಗಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದರು ಮತ್ತು ಈ ನಿಟ್ಟಿನಲ್ಲಿ ಮಾತುಕತೆ ಮತ್ತು ಸಹಯೋಗ ಮಾದರಿಯನ್ನು ಶ್ಲಾಘಿಸಿದರು.

ಲಹೌಲ್-ಸ್ಪಿತಿಯಂತಹ ದೂರದ ಜಿಲ್ಲೆಯಲ್ಲೂ ಹಿಮಾಚಲ ಪ್ರದೇಶವು 100% ಮೊದಲ ಡೋಸ್ ಸಾಧನೆ ಮಾಡಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ಅಟಲ್ ಸುರಂಗವನ್ನು ನಿರ್ಮಿಸುವ ಮೊದಲು ಈ ಪ್ರದೇಶಕ್ಕೆ ದೇಶದ ಇತರ ಭಾಗಗಳಿಂದ ತಿಂಗಳುಗಳ ಕಾಲ ಸಂಪರ್ಕ ಇಲ್ಲದಂತಾಗುತ್ತಿತ್ತು ಎಂದರು. ಲಸಿಕೆ ನೀಡಿಕೆ ಪ್ರಯತ್ನಗಳ ಕುರಿತಾಗಿ ಯಾವುದೇ ವದಂತಿ ಅಥವಾ ತಪ್ಪು ಮಾಹಿತಿಗೆ ಅವಕಾಶ ನೀಡದ ರಾಜ್ಯದ  ಜನರನ್ನು ಅವರು ಶ್ಲಾಘಿಸಿದರು. ದೇಶದ ಗ್ರಾಮೀಣ ಸಮಾಜವು ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೆ ಅಭಿಯಾನವನ್ನು ಹೇಗೆ ಸಶಕ್ತಗೊಳಿಸುತ್ತಿದೆ ಎಂಬುದಕ್ಕೆ ಹಿಮಾಚಲ ಪ್ರದೇಶವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮವು ಸುಧಾರಿತ ಸಂಪರ್ಕದ ನೇರ ಪ್ರಯೋಜನವನ್ನು ಪಡೆಯುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುವ ರೈತರು ಹಾಗೂ ತೋಟಗಾರರು ಸಹ ಇದರ ಲಾಭ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಹಳ್ಳಿಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಬಳಸುವ ಮೂಲಕ, ಹಿಮಾಚಲ ಪ್ರದೇಶದ ಯುವ ಪ್ರತಿಭೆಗಳು ತಮ್ಮ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಹೊಸ ಸಾಧ್ಯತೆಗಳನ್ನು ದೇಶ ಮತ್ತು ವಿದೇಶಗಳಿಗೆ ವಿಸ್ತರಿಸಬಹುದು ಎಂದರು.

ಇತ್ತೀಚೆಗೆ ಪ್ರಕಟಿಸಲಾದ ನೂತನ ಡ್ರೋನ್ ನಿಯಮಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ನಿಯಮಗಳು ಆರೋಗ್ಯ ಮತ್ತು ಕೃಷಿಯಂತಹ ಅನೇಕ ವಲಯಗಳಿಗೆ ಸಹಾಯ ಮಾಡುತ್ತವೆ ಎಂದು ಹೇಳಿದರು. ಇದು ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತದೆ ಎಂದರು. ಪ್ರಧಾನಮಂತ್ರಿಯವರು ತಮ್ಮ ಸ್ವಾತಂತ್ರ್ಯ ದಿನದ ಮತ್ತೊಂದು ಘೋಷಣೆಯ ಬಗ್ಗೆ ಉಲ್ಲೇಖಿಸಿದರು. ಕೇಂದ್ರ ಸರಕಾರವು ಈಗ ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿಶೇಷ ಆನ್‌ಲೈನ್ ವೇದಿಕೆಯನ್ನು ಕಲ್ಪಿಸಲು ಹೊರಟಿದೆ ಎಂದು ಅವರು ಹೇಳಿದರು. ಈ ಆನ್‌ಲೈನ್‌ ಮಾಧ್ಯಮದ ಮೂಲಕ ನಮ್ಮ ಸಹೋದರಿಯರು ತಮ್ಮ ಉತ್ಪನ್ನಗಳನ್ನು ದೇಶ ಮತ್ತು ವಿಶ್ವದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ತಾವು ಬೆಳೆದ ಸೇಬು, ಕಿತ್ತಳೆ, ಕಿನ್ನೌ, ಅಣಬೆ, ಟೊಮೆಟೊ ಮುಂತಾದ ಅನೇಕ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.

ʻಆಜಾ಼ದಿ ಕಾ ಅಮೃತ್ ಮಹೋತ್ಸವʼದ ಅಂಗವಾಗಿ, ಮುಂದಿನ 25 ವರ್ಷಗಳಲ್ಲಿ ಹಿಮಾಚಲ ಪ್ರದೇಶವನ್ನು ಸಾವಯವ ಕೃಷಿ ರಾಜ್ಯವನ್ನಾಗಿ ಮಾಡುವಂತೆ ಅಲ್ಲಿನ ರೈತರು ಮತ್ತು ತೋಟಗಾರರನ್ನು ಪ್ರಧಾನಿ ಒತ್ತಾಯಿಸಿದರು. ಕ್ರಮೇಣ ನಾವು ನಮ್ಮ ಮಣ್ಣನ್ನು ರಾಸಾಯನಿಕಗಳಿಂದ ಮುಕ್ತಮಾಡಬೇಕು ಎಂದು ಕರೆ ನೀಡಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-UK free trade deal to take effect on July 15, opening 99% of exports to tariff-free access

Media Coverage

India-UK free trade deal to take effect on July 15, opening 99% of exports to tariff-free access
NM on the go

Nm on the go

Always be the first to hear from the PM. Get the App Now!
...
Prime Minister highlights efforts to preserve and promote India’s cultural heritage
June 18, 2026

The Prime Minister, Shri Narendra Modi has highlighted efforts to preserve and promote India’s cultural heritage and said that India’s cultural heritage is being preserved, celebrated and carried forward with renewed vigour.

The Prime Minister stated that guided by the vision of ‘Virasat Bhi, Vikas Bhi’, efforts ranging from the repatriation of antiquities to strengthening spiritual and pilgrimage infrastructure are reconnecting people with India’s timeless traditions.

In a post on X, he said;

“India’s cultural heritage is being preserved, celebrated and carried forward with renewed vigour.

Guided by the vision of ‘Virasat Bhi, Vikas Bhi’, efforts ranging from the repatriation of antiquities to strengthening spiritual and pilgrimage infrastructure are reconnecting people with India’s timeless traditions.

#12YearsOfVikasBhiVirasatBhi”