ಡಿಜಿಟಲ್ ಸಶಕ್ತ ಯುವಕರು ಈ ದಶಕವನ್ನು 'ಭಾರತದ ಟೆಕೇಡ್‌ʼ ಆಗಿಸಲಿದ್ದಾರೆ: ಪ್ರಧಾನಿ
ಡಿಜಿಟಲ್ ಇಂಡಿಯಾವು ಆತ್ಮನಿರ್ಭರ ಭಾರತಕ್ಕೆ ಸಾಧನ: ಪ್ರಧಾನಿ
ಡಿಜಿಟಲ್ ಇಂಡಿಯಾ ಎಂದರೆ ಕ್ಷಿಪ್ರ ಲಾಭ, ಪೂರ್ಣ ಲಾಭ; ಡಿಜಿಟಲ್ ಇಂಡಿಯಾ ಎಂದರೆ ಕನಿಷ್ಠ ಸರಕಾರ, ಗರಿಷ್ಠ ಆಡಳಿತ: ಪ್ರಧಾನಿ
ಕೊರೊನಾ ಅವಧಿಯಲ್ಲಿ ಭಾರತದ ಡಿಜಿಟಲ್ ಪರಿಹಾರಗಳು ವಿಶ್ವದ ಗಮನ ಸೆಳೆದಿವೆ: ಪ್ರಧಾನಿ
10 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಖಾತೆಗೆ 1.35 ಲಕ್ಷ ಕೋಟಿ ರೂ. ಜಮೆ ಮಾಡಲಾಗಿದೆ: ಪ್ರಧಾನಿ
ಡಿಜಿಟಲ್ ಇಂಡಿಯಾವು ಒಂದು ರಾಷ್ಟ್ರ - ಒಂದು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಆಶಯವನ್ನು ಸಾಕಾರಗೊಳಿಸಿದೆ: ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇದ್ರ ಮೋದಿ ಅವರು ಇಂದು 'ಡಿಜಿಟಲ್ ಇಂಡಿಯಾ' ಅಭಿಯಾನವು ಆರು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ 'ಡಿಜಿಟಲ್ ಇಂಡಿಯಾ'ದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ರವಿ ಶಂಕರ್ ಪ್ರಸಾದ್ ಮತ್ತು ಶಿಕ್ಷಣ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್  ಶಾಮರಾವ್  ಧೋತ್ರೆ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಭಾರತವು ಆವಿಷ್ಕಾರ ಹಾಗೂ ಆ ಆವಿಷ್ಕಾರಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಎರಡರಲ್ಲೂ ಅತ್ಯುತ್ಸಾಹ ಪ್ರದರ್ಶಿಸಿದೆ ಎಂದರು. ಡಿಜಿಟಲ್ ಇಂಡಿಯಾ ಭಾರತದ ಸಂಕಲ್ಪವಾಗಿದೆ. ಡಿಜಿಟಲ್ ಇಂಡಿಯಾವು ʻಆತ್ಮನಿರ್ಭರ್ ಭಾರತʼಕ್ಕೆ ಸಾಧನವಾಗಿದೆ. ಡಿಜಿಟಲ್ ಇಂಡಿಯಾವು 21ನೇ ಶತಮಾನದಲ್ಲಿ ಹೊರಹೊಮ್ಮುತ್ತಿರುವ ಬಲಿಷ್ಠ ಭಾರತೀಯನ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿಯವರು ತಮ್ಮ ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಮಂತ್ರವನ್ನು ಪ್ರಸ್ತಾಪಿಸಿದರು. ಇದೇ ವೇಳೆ, ಡಿಜಿಟಲ್ ಇಂಡಿಯಾವು ಸರಕಾರ ಮತ್ತು ಜನರು, ವ್ಯವಸ್ಥೆ ಮತ್ತು ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ನಾಗರಿಕನನ್ನು ಹೇಗೆ ಸಶಕ್ತಗೊಳಿಸುತ್ತಿದೆ ಎಂದು ವಿವರಿಸಿದರು. ವಿಶೇಷವಾಗಿ ಸಾಂಕ್ರಾಮಿಕದ ಸಮಯದಲ್ಲಿ ʻಡಿಜಿಲಾಕರ್ʼ ಹೇಗೆ ಲಕ್ಷಾಂತರ ಜನರಿಗೆ ಸಹಾಯ ಮಾಡಿತು ಎಂಬುದನ್ನು ಅವರು ಉದಾಹರಣೆ ನೀಡಿದರು. ಶಾಲಾ ಪ್ರಮಾಣಪತ್ರಗಳು, ವೈದ್ಯಕೀಯ ದಾಖಲೆಗಳು ಮತ್ತು ಇತರ ಪ್ರಮುಖ ಪ್ರಮಾಣ ಪತ್ರಗಳನ್ನು ದೇಶಾದ್ಯಂತ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ. ಚಾಲನಾ ಪರವಾನಗಿ ಪಡೆಯುವುದು, ಜನನ ಪ್ರಮಾಣಪತ್ರ ಪಡೆಯುವುದು, ವಿದ್ಯುತ್ ಬಿಲ್ ಪಾವತಿಸುವುದು, ನೀರಿನ ಬಿಲ್ ಪಾವತಿಸುವುದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಮುಂತಾದ ಸೇವೆಗಳು ವೇಗವಾಗಿ ಮತ್ತು ಅನುಕೂಲಕರವಾಗಿ ಮಾರ್ಪಟ್ಟಿವೆ. ಇದೇ ವೇಳೆ, ಹಳ್ಳಿಗಳಲ್ಲಿ, ʻಇ-ಸಾಮಾನ್ಯ ಸೇವಾ ಕೇಂದ್ರʼಗಳು (ಸಿಎಸ್‌ಸಿಗಳು) ಜನರಿಗೆ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಈ ಡಿಜಿಟಲ್ ಇಂಡಿಯಾದ ಮೂಲಕವೇ, ʻಒಂದು ರಾಷ್ಟ್ರ- ಒಂದು ಪಡಿತರ ಕಾರ್ಡ್ʼನಂತಹ ಉಪಕ್ರಮಗಳು ಸಾಕಾರಗೊಳ್ಳುತ್ತಿವೆ ಎಂದ ಪ್ರಧಾನಿ, ಈ ಉಪಕ್ರಮವನ್ನು ಆಯಾ ರಾಜ್ಯಗಳಲ್ಲಿ ಜಾರಿಗೆ ತರುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಶ್ಲಾಘಿಸಿದರು.

ಡಿಜಿಟಲ್ ಇಂಡಿಯಾ ಅಭಿಯಾನವು ಫಲಾನುಭವಿಗಳ ಜೀವನವನ್ನು ಬದಲಾಯಿಸಿರುವ ಪರಿಯ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. ʻಸ್ವನಿಧಿʼ ಯೋಜನೆಯ ಪ್ರಯೋಜನಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಸ್ವಾಮಿತ್ವ ಯೋಜನೆಯ ಮೂಲಕ ಮಾಲೀಕತ್ವದ ಭದ್ರತೆಯ ಕೊರತೆಯ ಸಮಸ್ಯೆಯನ್ನು ಹೇಗೆ ಪರಿಹರಿಸಲಾಯಿತು ಎಂದು ವಿವರಿಸಿದರು. ದೂರ ಪ್ರದೇಶದಲ್ಲಿ ಔಷಧ ಲಭ್ಯತೆ ಕುರಿತಾದ ʻಇ-ಸಂಜೀವಿನಿʼ ಯೋಜನೆಯನ್ನು ಉಲ್ಲೇಖಿಸಿದ ಅವರು, ʻರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ʼ ಅಡಿಯಲ್ಲಿ ಪರಿಣಾಮಕಾರಿ ವೇದಿಕೆ ಕಲ್ಪಿಸಲು ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಅವಧಿಯಲ್ಲಿ ಭಾರತ ಸಿದ್ಧಪಡಿಸಿರುವ ಡಿಜಿಟಲ್ ಪರಿಹಾರಗಳು ಇಂದು ವಿಶ್ವದಾದ್ಯಂತ ಚರ್ಚೆ ಮತ್ತು ಆಕರ್ಷಣೆಯ ವಿಷಯವಾಗಿವೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತಿದೊಡ್ಡ ಡಿಜಿಟಲ್ ಸಂಪರ್ಕ ಪತ್ತೆ ತಂತ್ರಾಂಶಗಳಲ್ಲಿ ಗಳಲ್ಲಿ ಒಂದಾದ ʻಆರೋಗ್ಯ  ಸೇತುʼ, ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ಲಸಿಕೆಗಾಗಿ ಭಾರತ ರೂಪಿಸಿರುವ ʻಕೋವಿನ್‌ʼ ಆ್ಯಪ್ ಬಗ್ಗೆಯೂ ಅನೇಕ ದೇಶಗಳು ಆಸಕ್ತಿ ತೋರಿಸಿವೆ ಎಂದು ಅವರು ಹೇಳಿದರು. ಲಸಿಕೆಯ ಪ್ರಕ್ರಿಯೆಗೆ ಇಂತಹ ಮೇಲ್ವಿಚಾರಣಾ ಸಾಧನವನ್ನು ಹೊಂದಿರುವುದು ನಮ್ಮ ತಾಂತ್ರಿಕ ಪ್ರಾವೀಣ್ಯಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಡಿಜಿಟಲ್ ಇಂಡಿಯಾ ಎಂದರೆ ಎಲ್ಲರಿಗೂ ಅವಕಾಶ, ಎಲ್ಲರಿಗೂ ಸೌಲಭ್ಯ, ಎಲ್ಲರ ಪಾಲ್ಗೊಳ್ಳುವಿಕೆ ಎಂದು ಪ್ರಧಾನಿ ವ್ಯಾಖ್ಯಾನಿಸಿದರು. ಡಿಜಿಟಲ್ ಇಂಡಿಯಾ ಎಂದರೆ ಪ್ರತಿಯೊಬ್ಬರಿಗೂ ಸರಕಾರಿ ವ್ಯವಸ್ಥೆಯ ಲಭ್ಯತೆ. ಡಿಜಿಟಲ್ ಇಂಡಿಯಾ ಎಂದರೆ ಪಾರದರ್ಶಕ, ತಾರತಮ್ಯ ರಹಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಹಾರ. ಡಿಜಿಟಲ್ ಇಂಡಿಯಾ ಎಂದರೆ ಸಮಯ, ಶ್ರಮ ಮತ್ತು ಹಣವನ್ನು ಉಳಿಸುವುದು. ಡಿಜಿಟಲ್ ಇಂಡಿಯಾ ಎಂದರೆ ಕ್ಷಿಪ್ರ ಲಾಭ, ಪೂರ್ಣ ಲಾಭ. ಡಿಜಿಟಲ್ ಇಂಡಿಯಾ ಎಂದರೆ ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದು ಬಣ್ಣಿಸಿದರು.

ಡಿಜಿಟಲ್ ಇಂಡಿಯಾ ಅಭಿಯಾನವು ಕೊರೊನಾ ಅವಧಿಯಲ್ಲಿ ದೇಶಕ್ಕೆ ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೂ ತಮ್ಮ ನಾಗರಿಕರಿಗೆ ಹಣಕಾಸು ನೆರವನ್ನು ತಲುಪಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದವು. ಆದರೆ,  ಸಮಯದಲ್ಲಿ ಭಾರತವು ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿತು. ಡಿಜಿಟಲ್ ವಹಿವಾಟು ರೈತರ ಜೀವನದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಅಡಿಯಲ್ಲಿ, 10 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ 1.35 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಡಿಜಿಟಲ್ ಇಂಡಿಯಾವು ʻಒಂದು ರಾಷ್ಟ್ರ, ಒಂದು ಕನಿಷ್ಠ ಬೆಂಬಲ ಬೆಲೆʼ (ಎಂಎಸ್‌ಪಿ) ಆಶಯವನ್ನು ಸಾಕಾರಗೊಳಿಸಿದೆ ಎಂದರು.

ʻಡಿಜಿಟಲ್ ಇಂಡಿಯಾʼಗಾಗಿ ಒದಗಿಸಲಾಗುವ ಮೂಲಸೌಕರ್ಯದ ಪ್ರಮಾಣ ಮತ್ತು ವೇಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 2.5 ಲಕ್ಷ ʻಸಾಮಾನ್ಯ ಸೇವಾ ಕೇಂದ್ರಗಳʼ ಮೂಲಕ ದೂರದ ಪ್ರದೇಶಗಳಿಗೂ ಅಂತರ್ಜಾಲ ತಲುಪಿದೆ ಎಂದರು. ʻಭಾರತ್ ನೆಟ್ʼ ಯೋಜನೆಯಡಿ, ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ತರಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ʻಪಿಎಂ ವಾನಿʼ ಮೂಲಕ  ಗ್ರಾಮೀಣ ಯುವಕರು ಉತ್ತಮ ಸೇವೆಗಳು ಮತ್ತು ಶಿಕ್ಷಣಕ್ಕಾಗಿ ಹೈಸ್ಪೀಡ್ ಇಂಟರ್ನೆಟ್‌ನೊಂದಿಗೆ ಸಂಪರ್ಕ ಸಾಧಿಸುವಂತಾಗಲು ʻಪ್ರವೇಶ ಕೇಂದ್ರʼಗಳನ್ನು (ಆಕ್ಸಿಸ್‌ ಪಾಯಿಂಟ್ಸ್‌) ಸ್ಥಾಪಿಸಲಾಗುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಟ್ಯಾಬ್ಲೆಟ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ನೀಡಲಾಗುತ್ತಿದೆ. ಈ ಗುರಿಯನ್ನು ಸಾಕಾರಗೊಳಿಸಲು ಎಲೆಕ್ಟ್ರಾನಿಕ್ ಕಂಪನಿಗಳಿಗೆ ಉತ್ಪಾದನೆ ಆಧರಿತ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಡಿಜಿಟಲ್ ಇಂಡಿಯಾದಿಂದಾಗಿ ಕಳೆದ 6-7 ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 17 ಲಕ್ಷ ಕೋಟಿ  ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಈ ದಶಕವು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ, ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ಹೇಳಿದರು. 5ಜಿ ತಂತ್ರಜ್ಞಾನವು ವಿಶ್ವದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ ಮತ್ತು ಭಾರತ ಅದಕ್ಕಾಗಿ ತಯಾರಿ ನಡೆಸುತ್ತಿದೆ ಎಂದರು. ಡಿಜಿಟಲ್ ಸಬಲೀಕರಣದಿಂದಾಗಿ ಯುವಕರು ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇವು ಈ ದಶಕವನ್ನು 'ಭಾರತದ ಡೆಕೇಡ್‌' ಆಗಿಸಲು ಸಹಾಯಮಾಡುತ್ತವೆ ಎಂದರು.

ಪ್ರಧಾನಿ ಅವರೊಂದಿಗೆ ಸಂವಾದದ ವೇಳೆ ಉತ್ತರ ಪ್ರದೇಶದ ಬಲರಾಂಪುರದ ವಿದ್ಯಾರ್ಥಿ ಶ್ರೀಮತಿ ಸುಹಾನಿ ಸಾಹು ಅವರು ʻದೀಕ್ಷಾʼ ಆ್ಯಪ್‌ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಲಾಕ್‌ಡೌನ್ ಸಮಯದಲ್ಲಿ ಅವರ ಶಿಕ್ಷಣಕ್ಕೆ ಅದು ಹೇಗೆ ಉಪಯುಕ್ತವಾಯಿತು ಎಂಬುದನ್ನು ವಿವರಿಸಿದರು. ಮಹಾರಾಷ್ಟ್ರದ ಹಿಂಗೋಲಿಯ ಶ್ರೀ ಪ್ರಹ್ಲಾದ್  ಬೋರ್ಘಾಡ್  ಅವರು ʻಇ-ನ್ಯಾಮ್ʼ ಆ್ಯಪ್ ಮೂಲಕ ಉತ್ತಮ ಬೆಲೆ ಮತ್ತು ಸಾರಿಗೆ ವೆಚ್ಚವನ್ನು ಹೇಗೆ ಉಳಿಸಿದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡರು. ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ, ನೇಪಾಳ ಗಡಿಯ ಬಳಿಯ ಹಳ್ಳಿಯೊಂದರ ಶ್ರೀ ಶುಭಂ  ಕುಮಾರ್ ಅವರು ತಮ್ಮ ಅಜ್ಜಿ ಲಖನೌಗೆ ಹೋಗುವ ಅಗತ್ಯವೇ ಇಲ್ಲದೆ ʻಇ-ಸಂಜೀವಿನಿʼ ಆ್ಯಪ್‌ ಮೂಲಕವೇ ವೈದ್ಯರನ್ನು ಸಂಪರ್ಕಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಪ್ರಧಾನಿಯೊಂದಿಗೆ ತಮ್ಮ ಅನುಭವವನ್ನು  ಹಂಚಿಕೊಂಡರು. ಕುಟುಂಬಕ್ಕೆʻಇ-ಸಂಜೀವಿನಿʼ ಆ್ಯಪ್ ಮೂಲಕ ಸಮಾಲೋಚನೆಯನ್ನು ಒದಗಿಸಿದ ಲಖನೌದ ಡಾ. ಭೂಪೇಂದರ್ ಸಿಂಗ್ ಅವರು ಆ್ಯಪ್ ಮೂಲಕ ಸಮಾಲೋಚನೆ ಯನ್ನು ಒದಗಿಸುವುದು ಎಷ್ಟು ಸುಲಭ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.  ವೈದ್ಯರ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಅವರಿಗೆ ಶುಭ ಹಾರೈಸಿದರು ಮತ್ತು ʻಇ-ಸಂಜೀವಿನಿʼ ಆ್ಯಪ್ ಅನ್ನು ಉತ್ತಮ ಸೌಲಭ್ಯಗಳೊಂದಿಗೆ ಮತ್ತಷ್ಟು ಸುಧಾರಿಸುವ ಭರವಸೆಯನ್ನು ನೀಡಿದರು.

ಉತ್ತರ ಪ್ರದೇಶದ ವಾರಾಣಸಿಯ ಶ್ರೀಮತಿ ಅನುಪಮ ದುಬೆ ಅವರು ʻಮಹಿಳಾ  ಇ-ಹಾತ್ʼ ಮೂಲಕ ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವ ತಮ್ಮ ಅನುಭವಗಳನ್ನು ಹೇಳಿಕೊಂಡಿರು. ಇದೇ ವೇಳೆ, ರೇಷ್ಮೆ ಸೀರೆಗಳಿಗೆ ಹೊಸ ವಿನ್ಯಾಸಗಳನ್ನು ತಯಾರಿಸಲು ಡಿಜಿಟಲ್ ಪ್ಯಾಡ್ ಮತ್ತು ಸ್ಟೈಲಸ್ ನಂತಹ ಇತ್ತೀಚಿನ ತಂತ್ರಜ್ಞಾನವನ್ನು ಅವರು ಹೇಗೆ ಬಳಸುತ್ತಾರೆ ಎಂಬುದನ್ನು ವಿವರಿಸಿದರು. ಉತ್ತರಾಖಂಡದ ಡೆಹ್ರಾಡೂನ್‌ ನಿವಾಸಿಯಾದ ಶ್ರೀ ಹರಿ ರಾಮ್ ಎಂಬ ವಲಸಿಗರು, ʻಒಂದು ರಾಷ್ಟ್ರ-ಒಂದು ಪಡಿತರʼದ ಮೂಲಕ ಸುಲಭವಾಗಿ ಪಡಿತರವನ್ನು ಪಡೆದ ಅನುಭವವನ್ನು ಉತ್ಸಾಹದಿಂದ ಹೇಳಿಕೊಂಡರು. ಹಿಮಾಚಲ ಪ್ರದೇಶದ ಧರಂಪುರದ ಶ್ರೀ ಮೆಹರ್ ದತ್  ಶರ್ಮಾ ಅವರು ತಮ್ಮ ದೂರದ ಹಳ್ಳಿಯಿಂದ ಹತ್ತಿರದ ಪಟ್ಟಣಗಳಿಗೆ ಪ್ರಯಾಣಿಸದೆ ಉತ್ಪನ್ನಗಳನ್ನು ಖರೀದಿಸಲು ʻಸಾಮಾನ್ಯ ಸೇವಾ ಕೇಂದ್ರʼಗಳಲ್ಲಿನ ಇ-ಸ್ಟೋರ್‌ಗಳಿಂದ ಹೇಗೆ ನೆರವಾಯಿತು ಎಂಬ ಬಗ್ಗೆ ತಮ್ಮಾನುಭವವನ್ನು ಹಂಚಿಕೊಂಡರು. ಮಧ್ಯ ಪ್ರದೇಶದ ಉಜ್ಜಯಿನಿಯ ಬೀದಿ ವ್ಯಾಪಾರಿ ಶ್ರೀ ನಜ್ಮೀನ್ ಶಾ ಅವರು, ಸಾಂಕ್ರಾಮಿಕದ ನಂತರ ಆರ್ಥಿಕವಾಗಿ ಸಹಜ ಸ್ಥಿತಿಗೆ ಮರಳಲು ಪ್ರಧಾನಿ ಸ್ವಾನಿದಿ ಯೋಜನೆ ತಮಗೆ ಹೇಗೆ ಸಹಾಯ ಮಾಡಿತು ಎಂದು ವಿವರಿಸಿದರು.  ಮೇಘಾಲಯದ ಕೆಪಿಒ ಉದ್ಯೋಗಿ ಶ್ರೀ ವಾಂಡಾಮಾಫಿ ಸೈಮ್ಲಿಹ್ ಅವರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗಿದ್ದರಿಂದ ಭಾರತ ಬಿಪಿಒ ಯೋಜನೆಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's forex reserves hit all-time high of $729.33 billion after $12.42 billion jump

Media Coverage

India's forex reserves hit all-time high of $729.33 billion after $12.42 billion jump
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi