ಘನವೆತ್ತ ಪ್ರಧಾನಮಂತ್ರಿಗಳಾದ ಬೆಂಜಮಿನ್ ನೆತನ್ಯಾಹು ಅವರೇ,

ಘನವೆತ್ತ ನೆಸ್ಸೆಟ್ ನ ಸ್ಪೀಕರ್ ಆದ ಶ್ರೀ ಅಮೀರ್ ಒಹಾನಾ ಅವರೇ,

ಘನವೆತ್ತ ವಿರೋಧ ಪಕ್ಷದ ನಾಯಕರಾದ ಶ್ರೀ ಯಾಯಿರ್ ಲ್ಯಾಪಿಡ್ ಅವರೇ,

ನೆಸ್ಸೆಟ್ ನ ಗೌರವಾನ್ವಿತ ಸದಸ್ಯರೇ,

ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಶಾಲೋಮ್!

ನಮಸ್ತೆ!

ಗೌರವಾನ್ವಿತ ಸದಸ್ಯರೇ,

ಈ ಗೌರವಾನ್ವಿತ ಸದನದ ಮುಂದೆ ನಿಂತಿರುವುದು ನನಗೆ ಸಂದ ಗೌರವ ಮತ್ತು ಸೌಭಾಗ್ಯವಾಗಿದೆ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ಪ್ರಾಚೀನ ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಬಳಿಗೆ 140 ಕೋಟಿ ಭಾರತೀಯರ ಶುಭಾಶಯಗಳು ಹಾಗೂ ಸ್ನೇಹ, ಗೌರವ ಮತ್ತು ಸಹಭಾಗಿತ್ವದ ಸಂದೇಶವನ್ನು ಹೊತ್ತು ತಂದಿದ್ದೇನೆ.

 

ಗೌರವಾನ್ವಿತ ಸ್ಪೀಕರ್ ಅವರೇ, ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಅಲ್ಲದೆ, ನೆಸ್ಸೆಟ್ ಅನ್ನು ಭಾರತದ ತ್ರಿವರ್ಣಗಳಿಂದ ಬೆಳಗಿಸಿದ ನಿಮ್ಮ ಅದ್ಭುತ ನಡೆಯನ್ನು ನಾನು ಸ್ಮರಿಸುತ್ತೇನೆ. ಮೂರು ವರ್ಷಗಳ ಹಿಂದೆ ನೀವು ಭಾರತಕ್ಕೆ ನೀಡಿದ ಭೇಟಿಯು, ನೆಸ್ಸೆಟ್ ನ ಸ್ಪೀಕರ್ ಒಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿತ್ತು. ನಿಮ್ಮ ಪ್ರಯತ್ನದಿಂದಾಗಿ, ಈ ಪವಿತ್ರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಭಾರತದ ಮೊದಲ ಪ್ರಧಾನ ಮಂತ್ರಿ ನಾನಾಗಿದ್ದೇನೆ.

ಒಂಬತ್ತು ವರ್ಷಗಳ ಹಿಂದೆ, ಇಸ್ರೇಲ್‌ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಮಂತ್ರಿಯಾಗುವ ಸೌಭಾಗ್ಯ ನನಗಿತ್ತು. ನನಗೆ ಯಾವಾಗಲೂ ಆಪ್ತವೆನಿಸುವ ಈ ಭೂಮಿಗೆ ಮತ್ತೆ ಮರಳಿ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ. ಅಂದಹಾಗೆ, ಭಾರತವು ಇಸ್ರೇಲ್ ಅನ್ನು ಅಧಿಕೃತವಾಗಿ ಗುರುತಿಸಿದ ದಿನದಂದೇ ಅಂದರೆ ಸೆಪ್ಟೆಂಬರ್ 17, 1950 ರಂದೇ ನಾನು ಜನಿಸಿದ್ದು ವಿಶೇಷ!

ಗೌರವಾನ್ವಿತ ಸದಸ್ಯರೇ,

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಬರ್ಬರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರಿಗಾಗಿ ಮತ್ತು ಜೀವನವೇ ಅಸ್ತವ್ಯಸ್ತಗೊಂಡ ಪ್ರತಿಯೊಂದು ಕುಟುಂಬಕ್ಕಾಗಿ ನಾನು ಭಾರತದ ಜನರ ಪರವಾಗಿ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನಿಮ್ಮ ನೋವನ್ನು ನಾವು ಅನುಭವಿಸುತ್ತಿದ್ದೇವೆ. ನಿಮ್ಮ ದುಃಖದಲ್ಲಿ ನಾವೂ ಪಾಲುದಾರರು. ಈ ಸಂಕಷ್ಟದ ಸಮಯದಲ್ಲಿ ಮತ್ತು ಮುಂದೆಯೂ ಭಾರತವು ಇಸ್ರೇಲ್ ಜೊತೆಗೆ ದೃಢವಾಗಿ, ಸಂಪೂರ್ಣ ವಿಶ್ವಾಸದೊಂದಿಗೆ ನಿಲ್ಲುತ್ತದೆ.

 

 

ಯಾವುದೇ ಕಾರಣವೂ ನಾಗರಿಕರ ಕೊಲೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಯಾವುದೂ ಭಯೋತ್ಪಾದನೆಯನ್ನು ಸಮರ್ಥಿಸಲಾರದು.

ಭಾರತ ಕೂಡ ದೀರ್ಘಕಾಲದಿಂದ ಭಯೋತ್ಪಾದನೆಯ ನೋವನ್ನು ಅನುಭವಿಸಿದೆ. 26/11 ಮುಂಬೈ ದಾಳಿ ಮತ್ತು ಅದರಲ್ಲಿ ಇಸ್ರೇಲಿ ಪ್ರಜೆಗಳು ಸೇರಿದಂತೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ನಿಮ್ಮಂತೆಯೇ, ನಾವು ಕೂಡ ಭಯೋತ್ಪಾದನೆಯ ವಿರುದ್ಧ ಯಾವುದೇ ರಾಜಿ ಇಲ್ಲದ 'ಶೂನ್ಯ ಸಹನೆ' (Zero Tolerance) ನೀತಿಯನ್ನು ಹೊಂದಿದ್ದೇವೆ.

ಸಮಾಜಗಳನ್ನು ಅಸ್ಥಿರಗೊಳಿಸುವುದು, ಅಭಿವೃದ್ಧಿಯನ್ನು ತಡೆಯುವುದು ಮತ್ತು ನಂಬಿಕೆಯನ್ನು ಕುಂದಿಸುವುದು ಭಯೋತ್ಪಾದನೆಯ ಗುರಿಯಾಗಿದೆ. ಭಯೋತ್ಪಾದನೆಯನ್ನು ಎದುರಿಸಲು ನಿರಂತರ ಮತ್ತು ಸಂಘಟಿತ ಜಾಗತಿಕ ಕ್ರಮದ ಅಗತ್ಯವಿದೆ, ಏಕೆಂದರೆ ಎಲ್ಲಿಯ ಭಯೋತ್ಪಾದನೆಯಾದರೂ ಅದು ಎಲ್ಲಡೆಯ ಶಾಂತಿಗೆ ಸಂಚಕಾರ ತರುತ್ತದೆ. ಆ ಕಾರಣಕ್ಕಾಗಿಯೇ, ಪ್ರಾದೇಶಿಕ ಸ್ಥಿರತೆ ಮತ್ತು ಸುಸ್ಥಿರ ಶಾಂತಿಗೆ ಪೂರಕವಾದ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ.

ಕೆಲವು ವರ್ಷಗಳ ಹಿಂದೆ ನೀವು 'ಅಬ್ರಹಾಂ ಒಪ್ಪಂದ'ಗಳನ್ನು (Abraham Accords) ಮಾಡಿಕೊಂಡಾಗ, ನಾವು ನಿಮ್ಮ ಧೈರ್ಯ ಮತ್ತು ದೂರದೃಷ್ಟಿಯನ್ನು ಶ್ಲಾಘಿಸಿದ್ದೆವು. ದೀರ್ಘಕಾಲದಿಂದ ಸಂಘರ್ಷಕ್ಕೀಡಾಗಿದ್ದ ಈ ಪ್ರದೇಶಕ್ಕೆ ಅದು ಹೊಸ ಭರವಸೆಯ ಕ್ಷಣವಾಗಿತ್ತು. ಅಂದಿನಿಂದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಹಾದಿ ಈಗ ಮತ್ತಷ್ಟು ಸವಾಲಿನಿಂದ ಕೂಡಿದೆ. ಆದರೂ ಆ ಭರವಸೆಯನ್ನು ಜೀವಂತವಾಗಿಡುವುದು ಮುಖ್ಯವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅನುಮೋದಿಸಿದ 'ಗಾಜಾ ಶಾಂತಿ ಉಪಕ್ರಮ' (Gaza Peace Initiative) ಒಂದು ಮಾರ್ಗವನ್ನು ತೋರಿಸಿಕೊಡುತ್ತದೆ. ಈ ಉಪಕ್ರಮಕ್ಕೆ ಭಾರತ ತನ್ನ ದೃಢ ಬೆಂಬಲವನ್ನು ವ್ಯಕ್ತಪಡಿಸಿದೆ. ಪ್ಯಾಲೇಸ್ತೀನ್ ಸಮಸ್ಯೆಯನ್ನು ಬಗೆಹರಿಸುವುದು ಸೇರಿದಂತೆ, ಈ ಪ್ರದೇಶದ ಎಲ್ಲಾ ಜನರಿಗೆ ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯನ್ನು ನೀಡುವ ಭರವಸೆ ಇದರಲ್ಲಿದೆ ಎಂದು ನಾವು ನಂಬುತ್ತೇವೆ.

ನಮ್ಮ ಎಲ್ಲಾ ಪ್ರಯತ್ನಗಳು ವಿವೇಕ, ಧೈರ್ಯ ಮತ್ತು ಮಾನವೀಯತೆಯಿಂದ ಕೂಡಿರಲಿ. ಶಾಂತಿಯ ಹಾದಿ ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಈ ಪ್ರದೇಶದಲ್ಲಿ ಸಂವಾದ, ಶಾಂತಿ ಮತ್ತು ಸ್ಥಿರತೆಗಾಗಿ ಭಾರತವು ನಿಮ್ಮೊಂದಿಗೆ ಮತ್ತು ಜಗತ್ತಿನೊಂದಿಗೆ ಕೈಜೋಡಿಸುತ್ತದೆ.

 

ಗೌರವಾನ್ವಿತ ಸದಸ್ಯರೇ,

ಭಾರತದಲ್ಲಿ ಇಸ್ರೇಲ್‌ ನ ಸಂಕಲ್ಪ, ಧೈರ್ಯ ಮತ್ತು ಸಾಧನೆಗಳ ಬಗ್ಗೆ ಅಪಾರ ಮೆಚ್ಚುಗೆಯಿದೆ. ನಾವು ಆಧುನಿಕ ರಾಷ್ಟ್ರಗಳಾಗಿ ಪರಸ್ಪರ ಸಂಬಂಧ ಹೊಂದುವ ಬಹಳ ಹಿಂದೆಯೇ, ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಸಂಬಂಧಗಳಿಂದ ನಾವು ಬೆಸೆದುಕೊಂಡಿದ್ದೇವೆ. 'ಬುಕ್ ಆಫ್ ಎಸ್ತರ್' (Book of Esther) ಭಾರತವನ್ನು 'ಹೋಡು' (Hodu) ಎಂದು ಉಲ್ಲೇಖಿಸುತ್ತದೆ. ಪ್ರಾಚೀನ ಕಾಲದಲ್ಲಿ ಭಾರತದೊಂದಿಗೆ ನಡೆದ ವ್ಯಾಪಾರ ವಹಿವಾಟುಗಳನ್ನು 'ಟಾಲ್ಮಡ್' (Talmud) ದಾಖಲಿಸಿದೆ.

ಯಹೂದಿ ವರ್ತಕರು ಮೆಡಿಟರೇನಿಯನ್ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಸಮುದ್ರ ಮಾರ್ಗಗಳ ಮೂಲಕ ಪ್ರಯಾಣಿಸಿದರು. ಅವರು ಅವಕಾಶ ಮತ್ತು ಘನತೆಯನ್ನು ಹುಡುಕುತ್ತಾ ಬಂದರು. ಮತ್ತು ಭಾರತದಲ್ಲಿ, ಅವರು ನಮ್ಮವರಲ್ಲಿ ಒಬ್ಬರಾದರು.

ಯಹೂದಿ ಸಮುದಾಯಗಳು ಯಾವುದೇ ಕಿರುಕುಳ ಅಥವಾ ತಾರತಮ್ಯದ ಭಯವಿಲ್ಲದೆ ಭಾರತದಲ್ಲಿ ವಾಸಿಸುತ್ತಿವೆ. ಅವರು ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಮತ್ತು ಸಮಾಜದ ಎಲ್ಲಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ. ಈ ಇತಿಹಾಸವು ನಮಗೆ ಹೆಮ್ಮೆಯ ವಿಷಯವಾಗಿದೆ.

ಗೌರವಾನ್ವಿತ ಸದಸ್ಯರೇ,

ಮಹಾರಾಷ್ಟ್ರದ ಬೆನೆ ಇಸ್ರೇಲಿಗಳು, ಕೇರಳದ ಕೊಚ್ಚಿನಿ ಯಹೂದಿಗಳು, ಕೋಲ್ಕತ್ತಾ ಮತ್ತು ಮುಂಬೈನ ಬಾಗ್ದಾದಿ ಯಹೂದಿಗಳು ಹಾಗೂ ಈಶಾನ್ಯ ಭಾರತದ ಬ್ನೈ ಮೆನಾಶೆ ಸಮುದಾಯದವರು ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ನನ್ನ ತವರು ರಾಜ್ಯವಾದ ಗುಜರಾತ್‌ನಲ್ಲಿ ಬೆನೆ ಇಸ್ರೇಲಿ ಕುಟುಂಬವೊಂದು -ಮಿಸ್ಟರ್ ಮತ್ತು ಮಿಸಸ್ ಬೆಸ್ಟ್ ಸ್ಥಾಪಿಸಿದ ಶಾಲೆಯಿದೆ. ಅದೊಂದು ಅತ್ಯುತ್ತಮ ಶಾಲೆಯಾಗಿದ್ದು, ಸಹಜವಾಗಿಯೇ ಅದನ್ನು 'ಬೆಸ್ಟ್ ಸ್ಕೂಲ್' ಎಂದು ಕರೆಯಲಾಗುತ್ತದೆ!

ಎಡ್ವಿನ್ ಮೈಯರ್ಸ್ ಭಾರತದ 'ಫಿಲ್ಮ್ಸ್ ಡಿವಿಷನ್'ಗೆ ಒಂದು ರೂಪ ನೀಡಿದರು ಮತ್ತು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು. ಡಾಕ್ಟರ್ ರೂಬೆನ್ ಡೇವಿಡ್ ಅಹಮದಾಬಾದ್‌ ನ ಕಂಕರಿಯಾ ಮೃಗಾಲಯದ ಸ್ಥಾಪಕರಾಗಿದ್ದರು. ನಟ ಡೇವಿಡ್ ಅಬ್ರಹಾಂ ಚೆಯುಲ್ಕರ್ ಅಥವಾ 'ಅಂಕಲ್ ಡೇವಿಡ್', ದೇಶದಾದ್ಯಂತ ಮನೆಮಾತಾದರು. ವಾಲ್ಟರ್ ಕಾಫ್‌ ಮನ್ ಅವರು ಆಲ್ ಇಂಡಿಯಾ ರೇಡಿಯೊದ ಸಿಗ್ನೇಚರ್ ಟ್ಯೂನ್ ಅನ್ನು ಸಂಯೋಜಿಸಿದರು. ಡೇವಿಡ್ ಸಸೂನ್ ಅವರು ಇಂದಿಗೂ ಭಾರತೀಯ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅನೇಕ ಸಂಸ್ಥೆಗಳನ್ನು ನಿರ್ಮಿಸಿದರು.

 

ಮತ್ತು ಖಂಡಿತವಾಗಿಯೂ, 1971ರ ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ ಲೆಫ್ಟಿನೆಂಟ್ ಜನರಲ್ ಜೆ.ಎಫ್.ಆರ್. ಜಾಕೋಬ್ ಅವರ ವೀರಾವೇಶದ ಕೊಡುಗೆ ಎಲ್ಲರಿಗೂ ತಿಳಿದಿದೆ. ಅವರು ನಿವೃತ್ತರಾದ ನಂತರ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಗೌರವ ನನಗೆ ಲಭಿಸಿತ್ತು. ನಾವು ಅನೇಕ ಕಪ್ ಚಹಾದೊಂದಿಗೆ ಭಾರತ-ಇಸ್ರೇಲ್ ಸಂಬಂಧಗಳು ಸೇರಿದಂತೆ ಇತರ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೆವು. ಇವರಲ್ಲದೆ ಇನ್ನೂ ಅಸಂಖ್ಯಾತ ವ್ಯಕ್ತಿಗಳ ಕೊಡುಗೆಗಳು ಭಾರತದ ಸಮೃದ್ಧ ಜೀವನದ ಭಾಗವಾಗಿ ಬೆಸೆದುಕೊಂಡಿವೆ.

ಗೌರವಾನ್ವಿತ ಸದಸ್ಯರೇ,

ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಅನೇಕ ಭಾರತೀಯ ಯಹೂದಿಗಳು ಇಸ್ರೇಲ್‌ ಗೆ ವಲಸೆ ಬಂದಾಗ ಭಾರತದಿಂದ ಇಸ್ರೇಲ್‌ಗೆ  ಜನ ಸಂಚಾರವೂ ನಡೆಯಿತು. ಇಂದು, ಭಾರತೀಯ ಮೂಲದ ಉತ್ಸಾಹಭರಿತ ಯಹೂದಿ ಸಮುದಾಯವು ಇಲ್ಲಿ ವಾಸಿಸುತ್ತಿದೆ. ಅವರು ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳಲ್ಲಿ, ತರಗತಿಗಳಲ್ಲಿ ಮತ್ತು ಯುದ್ಧಭೂಮಿಯಲ್ಲಿಯೂ ಸಹ ಆಧುನಿಕ ಇಸ್ರೇಲ್‌ ನ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಅವರು ಇಸ್ರೇಲ್ ತಮ್ಮ ಪಿತೃಭೂಮಿ ಮತ್ತು ಭಾರತ ತಮ್ಮ ಮಾತೃಭೂಮಿ ಎಂದು ದೃಢವಾಗಿ ನಂಬಿದ್ದಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ.

ಗೌರವಾನ್ವಿತ ಸದಸ್ಯರೇ,

ಈ ಭೂಮಿಯೊಂದಿಗಿನ ಭಾರತದ ಸಂಬಂಧವು ರಕ್ತ ಮತ್ತು ತ್ಯಾಗದಿಂದ ಬರೆಯಲ್ಪಟ್ಟಿದೆ. ಮೊದಲ ಮಹಾಯುದ್ಧದ ಸಮಯದಲ್ಲಿ, ಈ ಪ್ರದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಭಾರತೀಯ ಸೈನಿಕರು ತಮ್ಮ ಪ್ರಾಣ ಅರ್ಪಿಸಿದರು. ಸೆಪ್ಟೆಂಬರ್ 1918 ರಲ್ಲಿ ಹೈಫಾದಲ್ಲಿ ನಡೆದ ಅಶ್ವದಳದ ದಾಳಿಯು ಮಿಲಿಟರಿ ಇತಿಹಾಸದಲ್ಲಿ ಇಂದಿಗೂ ಒಂದು ಮಹತ್ವದ ಅಧ್ಯಾಯವಾಗಿ ಉಳಿದಿದೆ.

'ಹೈಫಾದ ಹೀರೊ' ಎಂದು ಸ್ಮರಿಸಲ್ಪಡುವ ಮೇಜರ್ ಠಾಕೂರ್ ದಲ್ಪತ್ ಸಿಂಗ್ ಅವರು ಈ ಹಂಚಿಕೆಯ ಇತಿಹಾಸದ ಸಂಕೇತವಾಗಿದ್ದಾರೆ. ನನ್ನ ಕಳೆದ ಭೇಟಿಯ ಸಂದರ್ಭದಲ್ಲಿ, ಹೈಫಾದಲ್ಲಿರುವ ಭಾರತೀಯ ಸೈನಿಕರ ಸ್ಮಾರಕಕ್ಕೆ ಗೌರವ ಸಲ್ಲಿಸಿದಾಗ ನಾನು ಭಾವಪರವಶನಾಗಿದ್ದೆ.

ಗೌರವಾನ್ವಿತ ಸದಸ್ಯರೇ,

ಕಳೆದ ತಿಂಗಳು ಜಗತ್ತು 'ಅಂತರಾಷ್ಟ್ರೀಯ ಹತ್ಯಾಕಾಂಡ ಸ್ಮರಣ ದಿನ'ವನ್ನು (International Holocaust Remembrance Day) ಆಚರಿಸಿತು. ಹತ್ಯಾಕಾಂಡವು (Holocaust) ಮಾನವಕುಲದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಆದರೂ, ಆ ಅಸ್ತವ್ಯಸ್ತತೆಯ ವರ್ಷಗಳಲ್ಲಿಯೂ ಕೆಲವು ಮಾನವೀಯ ಕಾರ್ಯಗಳು ಎದ್ದು ಕಾಣುತ್ತವೆ. ಗುಜರಾತ್‌ ನ ನವನಗರದ ಮಹಾರಾಜರಾದ 'ಜಾಮ್ ಸಾಹೇಬ್' ಅವರು, ಆಶ್ರಯವಿಲ್ಲದೆ ಕಂಗಾಲಾಗಿದ್ದ ಯಹೂದಿ ಮಕ್ಕಳು ಸೇರಿದಂತೆ ಪೋಲಿಷ್ ಮಕ್ಕಳಿಗೆ ಆಶ್ರಯ ನೀಡಿದ್ದರು. ಇತ್ತೀಚೆಗೆ 'ಮೋಶಾವ್ ನೆವಾಟಿಮ್'ನಲ್ಲಿ ಜಾಮ್ ಸಾಹೇಬರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ನನಗೆ ತಿಳಿದುಬಂದಿದೆ.

 

ಧನ್ಯವಾದಗಳು. ಈ ಗೌರವ ಮತ್ತು ಸ್ಮರಣೆಗಾಗಿ ನಿಮಗೆ ಧನ್ಯವಾದಗಳು.

ಗೌರವಾನ್ವಿತ ಸದಸ್ಯರೇ,

ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಭಾರತೀಯ ನಾಯಕರು ಇಸ್ರೇಲ್ ಜನರೊಂದಿಗೆ ಒಂದು ಬಾಂಧವ್ಯವನ್ನು ಅನುಭವಿಸಿದರು. ಮರುಭೂಮಿಯಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ನಡೆಸಿದ ಪ್ರಯತ್ನಗಳ ಬಗ್ಗೆ 1950ರ ದಶಕದ ಭಾರತದ ಸಂಸದೀಯ ಚರ್ಚೆಗಳು ಸಾಕ್ಷಿಯಾಗಿವೆ. ಇಸ್ರೇಲ್‌ನ 'ಕಿಬ್ಬುಟ್ಜ್' (Kibbutz) ಚಳುವಳಿಯು ಆಚಾರ್ಯ ವಿನೋಬಾ ಭಾವೆ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಂತಹ ನಮ್ಮ ನಾಯಕರಿಗೆ ಪ್ರೇರಣೆ ನೀಡಿತು. ಮೊದಲು ನನ್ನ ತವರು ರಾಜ್ಯವಾದ ಗುಜರಾತ್‌ ನಲ್ಲಿ ಮತ್ತು ಈಗ ಭಾರತದಾದ್ಯಂತ, "ಪ್ರತಿ ಹನಿ, ಹೆಚ್ಚು ಬೆಳೆ" (Per Drop, More Crop) ಎಂಬ ವಿಧಾನವು ಕೃಷಿಯಲ್ಲಿ ಅದ್ಭುತಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ.

ನನ್ನ ಮೊದಲ ಇಸ್ರೇಲ್ ಭೇಟಿಯು 2006ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ನಡೆದಿತ್ತು. ನಂತರ, 2017ರಲ್ಲಿ ಪ್ರಧಾನಮಂತ್ರಿಯಾಗಿ ನಾನು ಇಸ್ರೇಲ್‌ಗೆ ಭೇಟಿ ನೀಡಿದಾಗ, ನಮ್ಮ ಎರಡು ದೇಶಗಳು ತಮ್ಮ ಸಂಬಂಧವನ್ನು 'ಕಾರ್ಯತಂತ್ರದ ಪಾಲುದಾರಿಕೆ'ಗೆ ಏರಿಸಿದವು. ಅಂದಿನಿಂದ, ನಮ್ಮ ಸಹಭಾಗಿತ್ವವು ಪ್ರಮಾಣ ಮತ್ತು ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಮತ್ತು ಅನೇಕ ಕ್ಷೇತ್ರಗಳಲ್ಲಿ ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಬದ್ಧರಾಗಿದ್ದೇವೆ.

ಗೌರವಾನ್ವಿತ ಸದಸ್ಯರೇ,

ಕಳೆದ ಕೆಲವು ವರ್ಷಗಳಿಂದ, ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ, ನಾವು ಜಾಗತಿಕವಾಗಿ ಮೊದಲ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದ್ದೇವೆ. ಅದೇ ಸಮಯದಲ್ಲಿ, ಇಸ್ರೇಲ್ ನಾವೀನ್ಯತೆ ಮತ್ತು ತಾಂತ್ರಿಕ ನಾಯಕತ್ವದ ಶಕ್ತಿ ಕೇಂದ್ರವಾಗಿದೆ. ಇದು ಭವಿಷ್ಯದ ದೃಷ್ಟಿಕೋನ ಹೊಂದಿರುವ ಪಾಲುದಾರಿಕೆಗೆ ನೈಸರ್ಗಿಕವಾದ ಬುನಾದಿಯನ್ನು ಸೃಷ್ಟಿಸುತ್ತದೆ.

ನಾವು ವ್ಯಾಪಾರವನ್ನು ವಿಸ್ತರಿಸಲು, ಹೂಡಿಕೆಯ ಹರಿವನ್ನು ಬಲಪಡಿಸಲು ಮತ್ತು ಜಂಟಿ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ. ಕಳೆದ ವರ್ಷ ಸಹಿ ಹಾಕಲಾದ 'ದ್ವಿಪಕ್ಷೀಯ ಹೂಡಿಕೆ ಒಪ್ಪಂದ'ವು (Bilateral Investment Treaty) ನಮ್ಮ ವ್ಯವಹಾರಗಳಿಗೆ ವಿಶ್ವಾಸ ಮತ್ತು ಭರವಸೆಯನ್ನು ನೀಡುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ, ಭಾರತವು ಇತರ ರಾಷ್ಟ್ರಗಳೊಂದಿಗೆ ಹಲವಾರು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ನಿಮ್ಮ ಪಶ್ಚಿಮಕ್ಕೆ ಯುರೋಪಿಯನ್ ಯೂನಿಯನ್ ಮತ್ತು ಯುಕೆ ಜೊತೆ; ನಿಮ್ಮ ಪೂರ್ವಕ್ಕೆ ಯುಎಇ ಮತ್ತು ಓಮನ್ ಜೊತೆ ಒಪ್ಪಂದಗಳಾಗಿವೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ಸರಕು ವ್ಯಾಪಾರವು ಹಲವು ಪಟ್ಟು ಬೆಳೆದಿದೆ. ಆದರೆ, ಇದು ಲಭ್ಯವಿರುವ ಅವಕಾಶಗಳ ಸಂಪೂರ್ಣ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತಿಲ್ಲ. ಆ ಕಾರಣಕ್ಕಾಗಿಯೇ ನಮ್ಮ ತಂಡಗಳು ಮಹತ್ವಾಕಾಂಕ್ಷೆಯ 'ಮುಕ್ತ ವ್ಯಾಪಾರ ಒಪ್ಪಂದ'ದ (Free Trade Agreement) ಬಗ್ಗೆ ಮಾತುಕತೆ ನಡೆಸಲು ಶ್ರಮಿಸುತ್ತಿವೆ. ಇದು ನಮ್ಮ ವ್ಯಾಪಾರ ಸಂಬಂಧದಲ್ಲಿ ಅಡಗಿರುವ ಅಗಾಧ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ.

ನಾವು 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (IMEC) ಮತ್ತು ಭಾರತ, ಇಸ್ರೇಲ್, ಯುಎಇ ಮತ್ತು ಅಮೆರಿಕ ನಡುವಿನ 'I2U2' ಚೌಕಟ್ಟಿನಂತಹ ವಿವಿಧ ವೇದಿಕೆಗಳಲ್ಲಿಯೂ ನಿಕಟವಾಗಿ ಕೆಲಸ ಮಾಡುತ್ತೇವೆ. ರಕ್ಷಣೆ ಮತ್ತು ಭದ್ರತೆಯು ನಮ್ಮ ಪಾಲುದಾರಿಕೆಯ ಮತ್ತೊಂದು ಪ್ರಮುಖ ಸ್ತಂಭವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಾವು ರಕ್ಷಣಾ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದಕ್ಕೆ (MOU) ಸಹಿ ಹಾಕಿದ್ದೇವೆ. ಇಂದಿನ ಅನಿಶ್ಚಿತ ಜಗತ್ತಿನಲ್ಲಿ, ಭಾರತ ಮತ್ತು ಇಸ್ರೇಲ್‌ನಂತಹ ವಿಶ್ವಾಸಾರ್ಹ ಪಾಲುದಾರರ ನಡುವಿನ ಬಲವಾದ ರಕ್ಷಣಾ ಪಾಲುದಾರಿಕೆಯು ಅತ್ಯಂತ ಮಹತ್ವದ್ದಾಗಿದೆ.

ಗೌರವಾನ್ವಿತ ಸದಸ್ಯರೇ,

ಇಸ್ರೇಲ್ ಅನ್ನು ಹೆಚ್ಚಾಗಿ "ಸ್ಟಾರ್ಟ್-ಅಪ್ ರಾಷ್ಟ್ರ" ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, ನಮ್ಮ ಯುವಜನತೆಯ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಹೊರತರಲು ನಾವು ಶ್ರಮಿಸುತ್ತಿದ್ದೇವೆ. 2018 ರಲ್ಲಿ, ಪ್ರಧಾನಿ ನೆತನ್ಯಾಹು ಮತ್ತು ನಾನು ಭಾರತದಲ್ಲಿ 'iCreate' ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ ಅನ್ನು ಉದ್ಘಾಟಿಸಿದ್ದನ್ನು ನಾನು ಸ್ಮರಿಸುತ್ತೇನೆ. ಅಂದಿನಿಂದ, ಇದು ಸುಮಾರು 900 ಸ್ಟಾರ್ಟ್-ಅಪ್‌ಗಳಿಗೆ ಬೆಂಬಲ ನೀಡಿದೆ.

ಕಳೆದ ವಾರ, ನಾವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಜಾಪ್ರಭುತ್ವವಾದಿ 'AI ಇಂಪ್ಯಾಕ್ಟ್ ಸಮ್ಮಿಟ್' ಅನ್ನು ಆಯೋಜಿಸಿದ್ದೆವು, ಇದರಲ್ಲಿ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನಮ್ಮ ಆಶೋತ್ತರಗಳು ಇಸ್ರೇಲ್‌ ನ ನಾವೀನ್ಯತೆ ವ್ಯವಸ್ಥೆಯೊಂದಿಗೆ ನೈಸರ್ಗಿಕವಾಗಿ ಹೊಂದಿಕೊಳ್ಳುತ್ತವೆ. ಕ್ವಾಂಟಮ್ ತಂತ್ರಜ್ಞಾನಗಳು, ಸೆಮಿಕಂಡಕ್ಟರ್‌ ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ. ನಮ್ಮ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ವನ್ನು (DPI) ಬಳಸಿಕೊಂಡು ಗಡಿಯಾಚೆಗಿನ ಹಣಕಾಸು ಸಂಪರ್ಕಗಳನ್ನು ರಚಿಸಲು ನಾವು ಇಸ್ರೇಲ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಗೌರವಾನ್ವಿತ ಸದಸ್ಯರೇ,

ಮರುಭೂಮಿಯಲ್ಲಿ ಇಸ್ರೇಲ್ ಮಾಡಿದ ಕೃಷಿ ಪವಾಡ ನಮಗೆ ಎಷ್ಟು ಸ್ಪೂರ್ತಿದಾಯಕವಾಗಿದೆ ಎಂಬುದನ್ನು ನಾನು ಈ ಮೊದಲೇ ಪ್ರಸ್ತಾಪಿಸಿದ್ದೇನೆ. ನಿಖರ ನೀರಾವರಿ ಮತ್ತು ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ಹೊಂದಿರುವ ಪರಿಣತಿಯು ಈಗಾಗಲೇ ಭಾರತದಲ್ಲಿ ಕೃಷಿ ಪದ್ಧತಿಗಳನ್ನು ಬದಲಾಯಿಸಿದೆ.

ನಾವು ಒಟ್ಟಾಗಿ ಭಾರತದಾದ್ಯಂತ 43 'ಉತ್ಕೃಷ್ಟತಾ ಕೇಂದ್ರ'ಗಳನ್ನು ಸ್ಥಾಪಿಸಿದ್ದು, ಅವುಗಳು ಐದು ಲಕ್ಷಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಿವೆ. ಲಕ್ಷಾಂತರ ರೈತರು ಮತ್ತು ಮೀನುಗಾರರ ಅನುಕೂಲಕ್ಕಾಗಿ ನಾವು ಈಗ ಈ ಕೇಂದ್ರಗಳನ್ನು 100 ಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಬೇಕು.

ಗೌರವಾನ್ವಿತ ಸದಸ್ಯರೇ,

ಭಾರತ-ಇಸ್ರೇಲ್ ಪಾಲುದಾರಿಕೆಯ ಆತ್ಮವು ನಮ್ಮ ಜನರ ನಡುವಿನ ಸಂಬಂಧದಲ್ಲಿದೆ. ನಾನು 2006ರಲ್ಲಿ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದಾಗ, ಇಲ್ಲಿ ಬೆರಳೆಣಿಕೆಯಷ್ಟು ಯೋಗ ಕೇಂದ್ರಗಳಿದ್ದವು. ಇಂದು, ಇಸ್ರೇಲ್‌ನ ಪ್ರತಿಯೊಂದು ಬಡಾವಣೆಯಲ್ಲೂ ಯೋಗಾಭ್ಯಾಸ ನಡೆಯುತ್ತಿರುವಂತೆ ಕಾಣುತ್ತಿದೆ!

ಇಸ್ರೇಲ್‌ ನಲ್ಲಿ ಆಯುರ್ವೇದದ ಬಗ್ಗೆಯೂ ಆಸಕ್ತಿ ಹೆಚ್ಚುತ್ತಿದೆ ಎಂದು ನನಗೆ ತಿಳಿದುಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿ ಯುವಕರು ಭಾರತಕ್ಕೆ ಭೇಟಿ ನೀಡುವಂತೆ ನಾನು ಆಹ್ವಾನಿಸುತ್ತೇನೆ. ಅವರು ನಮ್ಮ ಸಮಾಜದ ಚೈತನ್ಯವನ್ನು ವೀಕ್ಷಿಸಬಹುದು ಮತ್ತು ಸಮಗ್ರ ಕ್ಷೇಮವು ದೇಹ ಮತ್ತು ಮನಸ್ಸಿಗೆ ಏನು ಮಾಡಬಲ್ಲದು ಎಂಬುದನ್ನು ಅನುಭವಿಸಬಹುದು.

ಭಾರತೀಯ ಸಂಸತ್ತು ಇಸ್ರೇಲ್‌ಗಾಗಿ 'ಸಂಸದೀಯ ಸೌಹಾರ್ದ ಗುಂಪು' ರಚಿಸಿದೆ ಎಂದು ಈ ಪವಿತ್ರ ಸದನಕ್ಕೆ ತಿಳಿಸಲು ನನಗೆ ಸಂತೋಷವಾಗುತ್ತಿದೆ. ನಾನು ನಿಮ್ಮೆಲ್ಲರನ್ನೂ ಭಾರತಕ್ಕೆ ಆಹ್ವಾನಿಸುತ್ತೇನೆ ಮತ್ತು ನಮ್ಮ ಸಂಸದರ ನಡುವೆ ಹೆಚ್ಚಿನ ವಿನಿಮಯವನ್ನು ನಿರೀಕ್ಷಿಸುತ್ತೇನೆ.

ಇಸ್ರೇಲ್‌ ನಲ್ಲಿರುವ ಭಾರತೀಯ ಆರೈಕೆದಾರರು ಮತ್ತು ನುರಿತ ಕಾರ್ಮಿಕರು ಇಲ್ಲಿನ ಕುಟುಂಬಗಳಿಗೆ ಮತ್ತು ಸಮುದಾಯಗಳಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಅವರು ಅಕ್ಟೋಬರ್ 7 ರ ಸಂಕಷ್ಟದ ಸಮಯದಲ್ಲಿಯೂ ಗಮನಾರ್ಹ ಧೈರ್ಯ ಮತ್ತು ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ.

ಯಹೂದಿ ಬೋಧನೆಯು ನಮಗೆ ನೆನಪಿಸುವಂತೆ, "ಯಾರು ಒಂದು ಜೀವವನ್ನು ಉಳಿಸುತ್ತಾರೋ, ಅವರು ಇಡೀ ಜಗತ್ತನ್ನೇ ಉಳಿಸಿದಂತೆ." ಅವರ ಸೇವೆಯು ನಮ್ಮ ಸಹಕಾರದ ಹಿಂದಿರುವ ಮಾನವ ಸಂಬಂಧಗಳ ಬಲವನ್ನು ಪ್ರತಿಫಲಿಸುತ್ತದೆ. ಎರಡೂ ರಾಷ್ಟ್ರಗಳಿಗೆ ಪ್ರಯೋಜನವಾಗುವಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ಮತ್ತು ವೃತ್ತಿಪರರ ಸಂಚಾರಕ್ಕೆ ನಾವು ಅನುಕೂಲ ಮಾಡಿಕೊಡುವುದನ್ನು ಮುಂದುವರಿಸುತ್ತೇವೆ.

ಗೌರವಾನ್ವಿತ ಸದಸ್ಯರೇ,

ನಾವಿಬ್ಬರೂ ಪುರಾತನ ನಾಗರಿಕತೆಯವರು. ನಮ್ಮ ನಾಗರಿಕ ಸಂಪ್ರದಾಯಗಳು ತಾತ್ವಿಕ ಸಾಮ್ಯತೆಗಳನ್ನು ಹೊಂದಿರುವುದು ಆಶ್ಚರ್ಯದ ವಿಷಯವೇನಲ್ಲ. ಇಸ್ರೇಲ್‌ನಲ್ಲಿ 'ಟಿಕ್ಕುನ್ ಓಲಂ' (Tikkun Olam) ಎಂಬ ತತ್ವವು ಜಗತ್ತನ್ನು ಸುಧಾರಿಸುವ ಬಗ್ಗೆ ಮಾತನಾಡುತ್ತದೆ. ಭಾರತದಲ್ಲಿ 'ವಸುಧೈವ ಕುಟುಂಬಕಂ' ಎಂಬ ತತ್ವವು ಇಡೀ ಜಗತ್ತೇ ಒಂದು ಕುಟುಂಬ ಎಂದು ಪ್ರತಿಪಾದಿಸುತ್ತದೆ. ಈ ಎರಡೂ ಆಲೋಚನೆಗಳು ಜವಾಬ್ದಾರಿಯನ್ನು ಗಡಿಯಾಚೆಗೂ ವಿಸ್ತರಿಸುತ್ತವೆ. ಅವು ಸಮಾಜಗಳು ಸಹಾನುಭೂತಿ ಮತ್ತು ನೈತಿಕ ಧೈರ್ಯದಿಂದ ಕಾರ್ಯನಿರ್ವಹಿಸಲು ಕರೆ ನೀಡುತ್ತವೆ.

ಯಹೂದಿ ಧರ್ಮವು 'ಹಲಾಖಾ'ಗೆ (Halakha) ಒತ್ತು ನೀಡುತ್ತದೆ, ಇದು ಕಾನೂನು ಮತ್ತು ಆಚರಣೆಯ ಮೂಲಕ ದೈನಂದಿನ ನಡವಳಿಕೆಯನ್ನು ಮಾರ್ಗದರ್ಶಿಸುತ್ತದೆ. ಹಿಂದೂ ತತ್ವಶಾಸ್ತ್ರವು 'ಧರ್ಮ'ದ ಬಗ್ಗೆ ಮಾತನಾಡುತ್ತದೆ, ಇದು ಕರ್ತವ್ಯ ಮತ್ತು ಸರಿಯಾದ ಕಾರ್ಯವನ್ನು ರೂಪಿಸುವ ನೈತಿಕ ಕ್ರಮವಾಗಿದೆ. ಎರಡೂ ಸಂಪ್ರದಾಯಗಳಲ್ಲಿ, ನೈತಿಕ ಜೀವನವು ಕ್ರಿಯೆಯ ಮೂಲಕ ಬಾಳಲ್ಪಡುತ್ತದೆ ಮತ್ತು ನಂಬಿಕೆಯು ನಡವಳಿಕೆಯ ಮೂಲಕ ವ್ಯಕ್ತವಾಗುತ್ತದೆ.

ನಮ್ಮ ಹಬ್ಬಗಳಲ್ಲೂ ಒಂದು ಸುಂದರವಾದ ಸಾಮ್ಯತೆಯಿದೆ. ನೀವು ಮೇಣದಬತ್ತಿಗಳ ಬೆಚ್ಚಗಿನ ಬೆಳಕಿನೊಂದಿಗೆ 'ಹನುಕ್ಕಾ' (Hanukkah) ಆಚರಿಸುತ್ತೀರಿ. ಸುಮಾರು ಅದೇ ಸಮಯದಲ್ಲಿ, ನಾವು ದೀಪಗಳ ಹಬ್ಬವಾದ 'ದೀಪಾವಳಿ'ಯನ್ನು ದೀಪಗಳ ಮೃದುವಾದ ಕಾಂತಿಯೊಂದಿಗೆ ಆಚರಿಸುತ್ತೇವೆ. ಶೀಘ್ರದಲ್ಲೇ, ಭಾರತವು ಸಂತೋಷ ಮತ್ತು ಬಣ್ಣಗಳಿಂದ ಕೂಡಿದ 'ಹೋಳಿ' ಹಬ್ಬವನ್ನು ಆಚರಿಸಲಿದೆ. ಅದೇ ಸಮಯದಲ್ಲಿ ಇಸ್ರೇಲ್ ಕೂಡ 'ಪುರಿಮ್' (Purim) ಹಬ್ಬವನ್ನು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಿದೆ.

ಗೌರವಾನ್ವಿತ ಸದಸ್ಯರೇ,

ನಮ್ಮ ಹಂಚಿಕೆಯ ಆದರ್ಶಗಳು ನಮ್ಮ ಆಧುನಿಕ ಪಾಲುದಾರಿಕೆಗೆ ಬಲ ನೀಡುವ ಆಳವಾದ ಅಡಿಪಾಯಗಳಾಗಿವೆ. ನಾವು ಇತಿಹಾಸದಿಂದ ರೂಪುಗೊಂಡ ಮತ್ತು ಭವಿಷ್ಯದತ್ತ ಗಮನ ಹರಿಸಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದೇವೆ. ನಮ್ಮ ಪಾಲುದಾರಿಕೆಯು ಹಂಚಿಕೆಯ ಅನುಭವ ಮತ್ತು ಆಕಾಂಕ್ಷೆಗಳ ಮೇಲೆ ನಿಂತಿದೆ. ನಮ್ಮ ಬಲವಾದ ಪಾಲುದಾರಿಕೆಯು ರಾಷ್ಟ್ರೀಯ ಹಿತಾಸಕ್ತಿಗಳನ್ನು ಮಾತ್ರವಲ್ಲದೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೂ ಕೊಡುಗೆ ನೀಡುತ್ತದೆ.

ಈ ಅನಿಶ್ಚಿತ ಜಗತ್ತಿನಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹವು ಶಕ್ತಿಯ ಆಧಾರವಾಗಿ ಉಳಿಯುವಂತೆ ನಾವು ನೋಡಿಕೊಳ್ಳೋಣ.

ಆಮ್ ಇಸ್ರೇಲ್ ಚಾಯ್ (Am Yisrael Chai).

ಜೈ ಹಿಂದ್.

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI completes 10 years, clocks nearly 13,000-fold rise in transaction volume

Media Coverage

UPI completes 10 years, clocks nearly 13,000-fold rise in transaction volume
NM on the go

Nm on the go

Always be the first to hear from the PM. Get the App Now!
...
Prime Minister invites citizens to share their UPI experiences as UPI completes a decade
August 25, 2026

The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.

Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.

The Prime Minister posted on X:

A decade ago, UPI was rolled out, marking a major turning point in India’s digital payments journey.

The sheer scale and reach of UPI are something every Indian must be proud of.

Tell me about your UPI experience and how it impacted your life...

#10YearsOfUPI