ನಮ್ಮ ವೈವಿಧ್ಯಮಯ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಪ್ರದೇಶವೆಂದರೆ ಈಶಾನ್ಯ: ಪ್ರಧಾನಮಂತ್ರಿ
ನಮಗೆ, EAST ಎಂದರೆ - ಸಬಲೀಕರಣ (Empower), ಕಾರ್ಯನಿರ್ವಹಣೆ (Act), ಬಲಪಡಿಸುವುದು (Strengthen) ಮತ್ತು ಪರಿವರ್ತನೆ (Transform): ಪ್ರಧಾನಮಂತ್ರಿ
ಒಂದು ಕಾಲದಲ್ಲಿ ಈಶಾನ್ಯವನ್ನು ಕೇವಲ ಗಡಿ ಪ್ರದೇಶ ಎಂದು ಕರೆಯಲಾಗುತ್ತಿತ್ತು.. ಇಂದು, ಇದು 'ಬೆಳವಣಿಗೆಯ ಮುಂಚೂಣಿಯಲ್ಲಿದೆ': ಪ್ರಧಾನಮಂತ್ರಿ
ಪ್ರವಾಸೋದ್ಯಮಕ್ಕೆ ಈಶಾನ್ಯವು ಸಂಪೂರ್ಣ ಪ್ಯಾಕೇಜ್ ಆಗಿದೆ: ಪ್ರಧಾನಮಂತ್ರಿ
ಭಯೋತ್ಪಾದನೆ ಅಥವಾ ಅಶಾಂತಿ ಹರಡುವ ಮಾವೋವಾದಿ ಅಂಶಗಳೇ ಆಗಿರಲಿ, ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತದೆ: ಪ್ರಧಾನಮಂತ್ರಿ
ಇಂಧನ ಮತ್ತು ಸೆಮಿಕಂಡಕ್ಟರ್ ಗಳಂತಹ ವಲಯಗಳಿಗೆ ಈಶಾನ್ಯವು ಪ್ರಮುಖ ತಾಣವಾಗುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ "ರೈಸಿಂಗ್ ನಾರ್ತ್ ಈಸ್ಟ್ ಹೂಡಿಕೆದಾರರ ಶೃಂಗಸಭೆ 2025" ಅನ್ನು ಉದ್ಘಾಟಿಸಿದರು. ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಮಂತ್ರಿಯವರು, ಈಶಾನ್ಯ ಪ್ರದೇಶದ ಭವಿಷ್ಯದ ಬಗ್ಗೆ ಹೆಮ್ಮೆ, ಆತ್ಮೀಯತೆ ಮತ್ತು ಅಪಾರ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಭಾರತ ಮಂಟಪದಲ್ಲಿ ನಡೆದ "ಅಷ್ಟಲಕ್ಷ್ಮಿ ಮಹೋತ್ಸವ"ವನ್ನು ಸ್ಮರಿಸಿದ ಅವರು, ಇಂದಿನ ಕಾರ್ಯಕ್ರಮವು ಈಶಾನ್ಯ ವಲಯದಲ್ಲಿ ಹೂಡಿಕೆಯ ಸಂಭ್ರಮಾಚರಣೆಯಾಗಿದೆ ಎಂದು ಒತ್ತಿ ಹೇಳಿದರು. ಈ ಶೃಂಗಸಭೆಯಲ್ಲಿ ಪ್ರಮುಖ ಉದ್ಯಮ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿ, ಈ ವಲಯದಲ್ಲಿನ ಅವಕಾಶಗಳ ಬಗೆಗಿನ ಉತ್ಸಾಹವನ್ನು ಇದು ಎತ್ತಿ ತೋರಿಸುತ್ತದೆ ಎಂದರು. ಹೂಡಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವಲ್ಲಿ ಶ್ರಮಿಸಿದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಅವರು ಅಭಿನಂದನೆ ಸಲ್ಲಿಸಿದರು. ತಮ್ಮ ಶುಭಾಶಯಗಳನ್ನು ತಿಳಿಸುತ್ತಾ, ಪ್ರಧಾನಮಂತ್ರಿಯವರು "ನಾರ್ತ್ ಈಸ್ಟ್ ರೈಸಿಂಗ್" ಶೃಂಗಸಭೆಯನ್ನು ಶ್ಲಾಘಿಸಿದರು ಮತ್ತು ಈ ವಲಯದ ನಿರಂತರ ಬೆಳವಣಿಗೆ ಹಾಗೂ ಸಮೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಭಾರತವನ್ನು ವಿಶ್ವದ ಅತ್ಯಂತ ವೈವಿಧ್ಯಮಯ ರಾಷ್ಟ್ರ ಎಂದು ಬಣ್ಣಿಸಿದ ಶ್ರೀ ಮೋದಿಯವರು, "ಈಶಾನ್ಯವು ನಮ್ಮ ವೈವಿಧ್ಯಮಯ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಪ್ರದೇಶವಾಗಿದೆ" ಎಂದು ಹೇಳಿದರು. ವ್ಯಾಪಾರ, ಸಂಪ್ರದಾಯ, ಜವಳಿ ಮತ್ತು ಪ್ರವಾಸೋದ್ಯಮದ ಕ್ಷೇತ್ರಗಳಲ್ಲಿ ಅಪಾರವಾದ ಸಾಮರ್ಥ್ಯವಿದೆ ಎಂದು ಅವರು ಒತ್ತಿಹೇಳುತ್ತಾ, ಈ ಪ್ರದೇಶದ ವೈವಿಧ್ಯತೆಯೇ ಅದರ ದೊಡ್ಡ ಶಕ್ತಿ ಎಂದರು. "ಈಶಾನ್ಯವು ಪ್ರವರ್ಧಮಾನಕ್ಕೆ ಬರುತ್ತಿರುವ ಜೈವಿಕ ಆರ್ಥಿಕತೆ ಮತ್ತು ಬಿದಿರು ಉದ್ಯಮ, ಚಹಾ ಉತ್ಪಾದನೆ ಮತ್ತು ಪೆಟ್ರೋಲಿಯಂ, ಕ್ರೀಡೆ ಮತ್ತು ಕೌಶಲ್ಯ ಹಾಗೂ ಪರಿಸರ-ಸ್ನೇಹಿ ಪ್ರವಾಸೋದ್ಯಮದ ಉದಯೋನ್ಮುಖ ಕೇಂದ್ರವಾಗಿದೆ" ಎಂದು ಅವರು ನುಡಿದರು. ಮುಂದುವರೆದು, ಈ ಪ್ರದೇಶವು ಸಾವಯವ ಉತ್ಪನ್ನಗಳಿಗೆ  ದಾರಿ ಮಾಡಿಕೊಡುತ್ತಿದ್ದು, ಶಕ್ತಿಯ ಶಕ್ತಿಕೇಂದ್ರ ಆಗಿದೆ ಎಂದು ಅವರು ಹೇಳಿದರು. "ಈಶಾನ್ಯವು ಅಷ್ಟಲಕ್ಷ್ಮಿಯ ತತ್ವವನ್ನು ಒಳಗೊಂಡಿದ್ದು, ಸಮೃದ್ಧಿ ಮತ್ತು ಅವಕಾಶಗಳನ್ನು ತರುತ್ತದೆ" ಎಂದು ಅವರು ದೃಢೀಕರಿಸಿದರು. ಈ ಶಕ್ತಿಯಿಂದಾಗಿ, ಪ್ರತಿಯೊಂದು ಈಶಾನ್ಯ ರಾಜ್ಯವೂ ಹೂಡಿಕೆ ಮತ್ತು ನಾಯಕತ್ವಕ್ಕಾಗಿ ಸಿದ್ಧ ಎಂದು ಘೋಷಿಸುತ್ತಿದೆ ಎಂದು ಅವರು ಹೇಳಿದರು.

 

ವಿಕಸಿತ ಭಾರತವನ್ನು  ಸಾಧಿಸುವಲ್ಲಿ ಪೂರ್ವ ಭಾರತದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಈಶಾನ್ಯವು ಅದರ ಅತ್ಯಂತ ಪ್ರಮುಖವಾದ ಅಂಗವಾಗಿದೆ ಎಂದು ವಿಶೇಷವಾಗಿ ಉಲ್ಲೇಖಿಸಿದರು. "ನಮಗೆ, 'EAST' (ಈಸ್ಟ್) ಎಂದರೆ ಕೇವಲ ಒಂದು ದಿಕ್ಕಲ್ಲ, ಅದೊಂದು ದೃಷ್ಟಿಕೋನ – Empower (ಸಬಲೀಕರಣ), Act (ಕಾರ್ಯಪ್ರವೃತ್ತಗೊಳಿಸುವಿಕೆ), Strengthen (ಬಲವರ್ಧನೆ), ಮತ್ತು Transform (ಪರಿವರ್ತನೆ) – ಇದು ಈ ವಲಯದ ನೀತಿ ಚೌಕಟ್ಟನ್ನು ವ್ಯಾಖ್ಯಾನಿಸುತ್ತದೆ" ಎಂದು ಅವರು ಹೇಳಿದರು. ಈ ದೃಷ್ಟಿಕೋನವು ಪೂರ್ವ ಭಾರತವನ್ನು, ಅದರಲ್ಲೂ ವಿಶೇಷವಾಗಿ ಈಶಾನ್ಯವನ್ನು, ಭಾರತದ ಪ್ರಗತಿ ಪಥದಲ್ಲಿ ಕೇಂದ್ರ ಸ್ಥಾನಕ್ಕೆ ತಂದಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಕಳೆದ 11 ವರ್ಷಗಳಲ್ಲಿ ಈಶಾನ್ಯ ವಲಯವು ಕಂಡಿರುವ ಪರಿವರ್ತನಾಶೀಲ ಬದಲಾವಣೆಗಳನ್ನು ಪ್ರಧಾನಮಂತ್ರಿಯವರು ಒತ್ತಿಹೇಳುತ್ತಾ, ಈ ಪ್ರಗತಿಯು ಕೇವಲ ಅಂಕಿಅಂಶಗಳಲ್ಲಿ ಪ್ರತಿಫಲಿಸದೆ, ವಾಸ್ತವದಲ್ಲಿ ನೆಲಮಟ್ಟದಲ್ಲಿ ಕಣ್ಣಿಗೆ ಕಾಣುವಂತಿದೆ ಎಂದು ಮನದಟ್ಟು ಮಾಡಿಕೊಟ್ಟರು. "ಈ ಪ್ರದೇಶದೊಂದಿಗೆ ಸರ್ಕಾರದ ಬಾಂಧವ್ಯವು ಕೇವಲ ಆಡಳಿತಾತ್ಮಕ ನೀತಿ-ನಿರ್ಧಾರಗಳಿಗೆ ಮಾತ್ರ ಸೀಮಿತವಾಗಿಲ್ಲದೆ, ಅಲ್ಲಿನ ಜನರೊಂದಿಗೆ ಆತ್ಮೀಯವಾದ, ಹೃದಯಸ್ಪರ್ಶಿ ಸಂಬಂಧವನ್ನು ನಿರ್ಮಿಸಿದೆ" ಎಂದು ಅವರು ನುಡಿದರು. ಕೇಂದ್ರ ಸಚಿವರು 700ಕ್ಕೂ ಹೆಚ್ಚು ಬಾರಿ ಈಶಾನ್ಯಕ್ಕೆ ಭೇಟಿ ನೀಡಿರುವುದನ್ನು ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿ, ಇದು ಆ ಭೂಮಿಯನ್ನು ಅರಿಯಲು, ಜನರ ಕಣ್ಣುಗಳಲ್ಲಿನ ಆಶೋತ್ತರಗಳನ್ನು ಕಾಣಲು ಮತ್ತು ಆ ನಂಬಿಕೆಯನ್ನು ಅಭಿವೃದ್ಧಿ ನೀತಿಗಳಾಗಿ ರೂಪಾಂತರಿಸಲು ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು. ಮೂಲಸೌಕರ್ಯ ಯೋಜನೆಗಳು ಕೇವಲ ಇಟ್ಟಿಗೆ-ಸಿಮೆಂಟಿನ ನಿರ್ಮಾಣಗಳಲ್ಲ, ಅವು ಭಾವನಾತ್ಮಕ ಸಂಪರ್ಕವನ್ನು ಬೆಸೆಯುವ ಸೇತುವೆಗಳು ಎಂದು ಅವರು ಪ್ರತಿಪಾದಿಸಿದರು. 'ಲುಕ್ ಈಸ್ಟ್' (Look East) ನೀತಿಯಿಂದ 'ಆಕ್ಟ್ ಈಸ್ಟ್' (Act East) ನೀತಿಗೆ ಆದ ಬದಲಾವಣೆಯನ್ನು ಪುನರುಚ್ಚರಿಸಿದ ಅವರು, ಈ ಕ್ರಿಯಾಶೀಲ ಧೋರಣೆಯು ಸ್ಪಷ್ಟವಾದ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಹೇಳಿದರು. "ಒಂದು ಕಾಲದಲ್ಲಿ ಈಶಾನ್ಯವನ್ನು ಕೇವಲ ಗಡಿ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂದು ಅದು ಭಾರತದ ಅಭಿವೃದ್ಧಿ ಪಯಣದಲ್ಲಿ ಮುಂಚೂಣಿಯಲ್ಲಿರುವ ಪ್ರಾಂತ್ಯವಾಗಿ ಹೊರಹೊಮ್ಮುತ್ತಿದೆ" ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರವನ್ನು ಆಕರ್ಷಕಗೊಳಿಸುವಲ್ಲಿ ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮೂಡಿಸುವಲ್ಲಿ ಬಲಿಷ್ಠ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿಯವರು, ಸುಸಜ್ಜಿತ ರಸ್ತೆಗಳು, ವಿದ್ಯುತ್ ಮೂಲಸೌಕರ್ಯ ಮತ್ತು ಸರಕು-ಸಾಗಾಟ ಜಾಲಗಳು ಯಾವುದೇ ಉದ್ಯಮದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ, ಹಾಗೂ ತಡೆರಹಿತ ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತವೆ ಎಂದು ವಿಶೇಷವಾಗಿ ಪ್ರಸ್ತಾಪಿಸಿದರು. "ಮೂಲಸೌಕರ್ಯವು ಅಭಿವೃದ್ಧಿಯ ಅಡಿಪಾಯವಾಗಿದೆ ಮತ್ತು ಸರ್ಕಾರವು ಈಶಾನ್ಯದಲ್ಲಿ 'ಮೂಲಸೌಕರ್ಯ ಕ್ರಾಂತಿ'ಯನ್ನೇ ಆರಂಭಿಸಿದೆ" ಎಂದು ಅವರು ನುಡಿದರು. ಈ ವಲಯವು ಹಿಂದೆ ಎದುರಿಸಿದ ಸವಾಲುಗಳನ್ನು ಉಲ್ಲೇಖಿಸಿದ ಅವರು, ಈಗ ಇದು 'ಅಪಾರ ಅವಕಾಶಗಳ ತಾಣ'ವಾಗಿ ರೂಪುಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು. ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಹೇಳಿದ ಅವರು, ಅರುಣಾಚಲ ಪ್ರದೇಶದ ಸೇಲಾ ಸುರಂಗ ಮತ್ತು ಅಸ್ಸಾಂನ ಭೂಪೇನ್ ಹಜಾರಿಕಾ ಸೇತುವೆಯಂತಹ ಯೋಜನೆಗಳನ್ನು ಉದಾಹರಿಸಿದರು. ಕಳೆದ ದಶಕದಲ್ಲಿ ಸಾಧಿಸಲಾದ ಪ್ರಮುಖ ಪ್ರಗತಿಗಳ ಕುರಿತು ಬೆಳಕು ಚೆಲ್ಲಿದ ಶ್ರೀ ಮೋದಿಯವರು, 11,000 ಕಿಲೋಮೀಟರ್ಗಳಷ್ಟು ಹೆದ್ದಾರಿಗಳ ನಿರ್ಮಾಣ, ವ್ಯಾಪಕವಾದ ಹೊಸ ರೈಲು ಮಾರ್ಗಗಳ ಸ್ಥಾಪನೆ, ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿರುವುದು, ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳಲ್ಲಿ ಜಲಮಾರ್ಗಗಳ ಅಭಿವೃದ್ಧಿ, ಹಾಗೂ ನೂರಾರು ಮೊಬೈಲ್ ಟವರ್ಗಳ ಅಳವಡಿಕೆಯಂತಹ ಕಾರ್ಯಗಳನ್ನು ಉಲ್ಲೇಖಿಸಿದರು. ಕೈಗಾರಿಕೆಗಳಿಗೆ ವಿಶ್ವಾಸಾರ್ಹ ಇಂಧನ ಪೂರೈಕೆಯನ್ನು ಖಾತ್ರಿಪಡಿಸುವ 1,600 ಕಿಲೋಮೀಟರ್ ಉದ್ದದ ಈಶಾನ್ಯ ಅನಿಲ ಗ್ರಿಡ್ ಸ್ಥಾಪನೆಯಾಗಿರುವುದನ್ನೂ ಅವರು ಗಮನಸೆಳೆದರು. ಹೆದ್ದಾರಿಗಳು, ರೈಲು ಮಾರ್ಗಗಳು, ಜಲಮಾರ್ಗಗಳು ಮತ್ತು ಡಿಜಿಟಲ್ ಸಂಪರ್ಕ ವ್ಯವಸ್ಥೆಗಳು ಒಟ್ಟಾಗಿ ಈಶಾನ್ಯದ ಮೂಲಸೌಕರ್ಯವನ್ನು ಬಲಪಡಿಸುತ್ತಿದ್ದು, ಕೈಗಾರಿಕೆಗಳು 'ಪ್ರಥಮ ಪ್ರವರ್ತಕನ ಪ್ರಯೋಜನವನ್ನು' ಪಡೆದುಕೊಳ್ಳಲು ಸಶಕ್ತವಾದ ನೆಲೆಗಟ್ಟನ್ನು ಸೃಷ್ಟಿಸುತ್ತಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಮುಂದಿನ ದಶಕದಲ್ಲಿ, ಈ ವಲಯದ ವ್ಯಾಪಾರ ಸಾಮರ್ಥ್ಯವು ಅನೇಕ ಪಟ್ಟು ವೃದ್ಧಿಸಲಿದೆ" ಎಂದು ಅವರು ದೃಢವಾಗಿ ನುಡಿದರು. "ಪ್ರಸ್ತುತ, ಆಸಿಯಾನ್ (ASEAN) ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ವಹಿವಾಟಿನ ಪ್ರಮಾಣವು ಸುಮಾರು 125 ಬಿಲಿಯನ್ ಡಾಲರ್ಗಳಷ್ಟಿದ್ದು, ಮುಂಬರುವ ವರ್ಷಗಳಲ್ಲಿ ಇದು 200 ಬಿಲಿಯನ್ ಡಾಲರ್ ಗಳನ್ನು ಮೀರುವ ನಿರೀಕ್ಷೆಯಿದೆ. ಇದು ಈಶಾನ್ಯವನ್ನು ಆಸಿಯಾನ್ ಮಾರುಕಟ್ಟೆಗಳಿಗೆ ಆಯಕಟ್ಟಿನ ವ್ಯಾಪಾರ ಸೇತುವೆ ಮತ್ತು ಪ್ರಮುಖ ಹೆಬ್ಬಾಗಿಲಾಗಿ ಸ್ಥಾನೀಕರಿಸಲಿದೆ" ಎಂದು ಅವರು ವಿವರಿಸಿದರು. ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಮಯನ್ಮಾರ್ ನಿಂದ ಥೈಲ್ಯಾಂಡ್ಗೆ ಸುಗಮ ನೇರ ಸಂಪರ್ಕವನ್ನು ಒದಗಿಸಿ, ಥೈಲ್ಯಾಂಡ್, ವಿಯೆಟ್ನಾಂ ಹಾಗೂ ಲಾವೋಸ್ನೊಂದಿಗೆ ಭಾರತದ ಬಾಂಧವ್ಯವನ್ನು ಇನ್ನಷ್ಟು ದೃಢಗೊಳಿಸಲಿರುವ ಭಾರತ-ಮಯನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿಯ ಅನನ್ಯ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಶ್ರೀ ಮೋದಿಯವರು, ಕೋಲ್ಕತ್ತಾ ಬಂದರನ್ನು ಮಯನ್ಮಾರ್ನ ಸಿಟ್ವೆ ಬಂದರಿಗೆ ಜೋಡಿಸಿ, ಮಿಜೋರಾಂ ಮೂಲಕ ಒಂದು ಆಯಕಟ್ಟಿನ ವಾಣಿಜ್ಯ ಪಥವನ್ನು ಕಲ್ಪಿಸಲಿರುವ ಕಲಾದಾನ್ ಬಹು-ಮಾದರಿ ಸಾರಿಗೆ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸಲು ಸರ್ಕಾರವು ವಹಿಸುತ್ತಿರುವ ವಿಶೇಷ ಕಾಳಜಿ ಮತ್ತು ತೀವ್ರ ಪ್ರಯತ್ನಗಳ ಕುರಿತು ಬೆಳಕು ಚೆಲ್ಲಿದರು. "ಈ ಮಹತ್ವಾಕಾಂಕ್ಷಿ ಯೋಜನೆಯು ಪಶ್ಚಿಮ ಬಂಗಾಳ ಮತ್ತು ಮಿಜೋರಾಂ ನಡುವಿನ ಪ್ರಯಾಣಾವಧಿಯನ್ನೂ ಹಾಗೂ ದೂರವನ್ನೂ ಗಣನೀಯವಾಗಿ ತಗ್ಗಿಸಿ, ವಾಣಿಜ್ಯ ವಹಿವಾಟು ಹಾಗೂ ಕೈಗಾರಿಕಾ ಪ್ರಗತಿಗೆ ಮತ್ತಷ್ಟು ಚೈತನ್ಯ ನೀಡಲಿದೆ" ಎಂದು ಅವರು ವಿವರಿಸಿದರು.

 

ಗುವಾಹಟಿ, ಇಂಫಾಲ್ ಮತ್ತು ಅಗರ್ತಲಾಗಳನ್ನು ಬಹು-ಮಾದರಿ ಸರಕು-ಸಾಗಾಟ ಕೇಂದ್ರಗಳಾಗಿ  ಅಭಿವೃದ್ಧಿಪಡಿಸುತ್ತಿರುವ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಮೇಘಾಲಯ ಮತ್ತು ಮಿಜೋರಾಂನಲ್ಲಿ ಭೂ ಗಡಿ ಸುಂಕದ ಠಾಣೆಗಳ ಸ್ಥಾಪನೆಯು ಅಂತರರಾಷ್ಟ್ರೀಯ ವ್ಯಾಪಾರ ಅವಕಾಶಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ ಎಂದು ಗಮನಸೆಳೆದರು. "ಈ ಮಹತ್ವದ ಬೆಳವಣಿಗೆಗಳು ಈಶಾನ್ಯವನ್ನು ಇಂಡೋ-ಪೆಸಿಫಿಕ್ ರಾಷ್ಟ್ರಗಳೊಂದಿಗಿನ ವ್ಯಾಪಾರದಲ್ಲಿ ಪ್ರಬಲವಾಗಿ ಉದಯಿಸುತ್ತಿರುವ ಶಕ್ತಿಯಾಗಿ ಪ್ರತಿಷ್ಠಾಪಿಸುತ್ತಿದ್ದು, ಹೂಡಿಕೆ ಮತ್ತು ಆರ್ಥಿಕ ಪ್ರಗತಿಗೆ ನವೀನ ಪಥಗಳನ್ನು ತೆರೆದಿಡುತ್ತಿವೆ" ಎಂದು ಅವರು ಒತ್ತಿ ಹೇಳಿದರು.

ಭಾರತವನ್ನು "ವಿಶ್ವದ ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳ ಪ್ರಮುಖ ಪೂರೈಕೆದಾರ ರಾಷ್ಟ್ರ"ವನ್ನಾಗಿಸುವ ದೃಷ್ಟಿಕೋನವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, 'ಹೀಲ್ ಇನ್ ಇಂಡಿಯಾ' ಉಪಕ್ರಮವನ್ನು ಒಂದು ವಿಶ್ವವ್ಯಾಪಿ ಆಂದೋಲನವಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು. ಈಶಾನ್ಯ ವಲಯದ ಶ್ರೀಮಂತ ಜೀವವೈವಿಧ್ಯ, ನೈಸರ್ಗಿಕ ಸೌಂದರ್ಯ ಮತ್ತು ಸಾವಯವ ಜೀವನಶೈಲಿಯನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಈ ಪ್ರದೇಶವು ಸ್ವಾಸ್ಥ್ಯ ಮತ್ತು ಕ್ಷೇಮಕ್ಕೆ ಒಂದು ಪರಿಪೂರ್ಣ ತಾಣವಾಗಿದೆ ಎಂದು ಬಣ್ಣಿಸಿದರು. "ಭಾರತದ 'ಹೀಲ್ ಇನ್ ಇಂಡಿಯಾ' ಅಭಿಯಾನದ ಒಂದು ನಿರ್ಣಾಯಕ ಅಂಗವಾಗಿ ಈಶಾನ್ಯವನ್ನು ಪರಿಗಣಿಸಿ, ಇಲ್ಲಿನ ಅವಕಾಶಗಳನ್ನು ಅನ್ವೇಷಿಸಿ" ಎಂದು ಹೂಡಿಕೆದಾರರನ್ನು ಪ್ರಧಾನಮಂತ್ರಿಯವರು ಆಗ್ರಹಿಸಿದರು. ಈ ವಲಯದ ವಿಶಿಷ್ಟ ಹವಾಮಾನ ಮತ್ತು ಪರಿಸರ ವೈವಿಧ್ಯತೆಯು ಸ್ವಾಸ್ಥ್ಯ-ಆಧಾರಿತ ಕೈಗಾರಿಕೆಗಳಿಗೆ ಅಪಾರವಾದ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.

ಈಶಾನ್ಯ ವಲಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದ ಶ್ರೀ ಮೋದಿಯವರು, ಈ ಪ್ರದೇಶವು ಸಂಗೀತ, ನೃತ್ಯ ಮತ್ತು ವೈವಿಧ್ಯಮಯ ಸಂಭ್ರಮಾಚರಣೆಗಳೊಂದಿಗೆ ಆಳವಾಗಿ ಬೇರೂರಿರುವ ಸಂಬಂಧವನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಈ ವಲಯವು ಜಾಗತಿಕ ಸಮ್ಮೇಳನಗಳು, ವೈಭವದ ಸಂಗೀತ ಕಛೇರಿಗಳು ಮತ್ತು ಗಮ್ಯಸ್ಥಾನ ವಿವಾಹಗಳಿಗೆ (destination weddings) ಅತ್ಯಂತ ಸೂಕ್ತವಾದ ತಾಣವಾಗಿದ್ದು, ಒಂದು ಪರಿಪೂರ್ಣ ಪ್ರವಾಸೋದ್ಯಮ ಪ್ಯಾಕೇಜ್ ಆಗಿ ರೂಪುಗೊಂಡಿದೆ ಎಂದು ಅವರು ಬಣ್ಣಿಸಿದರು. "ಅಭಿವೃದ್ಧಿಯು ಈಶಾನ್ಯದ ಮೂಲೆಮೂಲೆಗೂ ತಲುಪುತ್ತಿದ್ದಂತೆ, ಪ್ರವಾಸೋದ್ಯಮದ ಮೇಲೆ ಅದರ ಸಕಾರಾತ್ಮಕ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತಿದೆ, ಪ್ರವಾಸಿಗರ ಸಂಖ್ಯೆಯು ದ್ವಿಗುಣಗೊಂಡಿದೆ" ಎಂದು ಅವರು ಹೇಳಿದರು. ಇವು ಕೇವಲ ಅಂಕಿಅಂಶಗಳಲ್ಲ – ಈ ಅಭೂತಪೂರ್ವ ಏರಿಕೆಯು ಗ್ರಾಮಗಳಲ್ಲಿ ಹೋಂಸ್ಟೇಗಳ ಹೆಚ್ಚಳಕ್ಕೆ, ಯುವ ಮಾರ್ಗದರ್ಶಕರಿಗೆ ನೂತನ ಉದ್ಯೋಗಾವಕಾಶಗಳ ಸೃಷ್ಟಿಗೆ, ಹಾಗೂ ಪ್ರವಾಸ ಮತ್ತು ಪ್ರಯಾಣದ ಸಂಪೂರ್ಣ ಪರಿಸರ ವ್ಯವಸ್ಥೆಯ  ವಿಸ್ತರಣೆಗೆ ಕಾರಣವಾಗಿದೆ  ಎಂದು ಅವರು ಅಭಿಪ್ರಾಯಪಟ್ಟರು. ಈಶಾನ್ಯ ಪ್ರವಾಸೋದ್ಯಮವನ್ನು ಇನ್ನಷ್ಟು ಉನ್ನತೀಕರಿಸುವ ಅವಶ್ಯಕತೆಯನ್ನು ಒತ್ತಿಹೇಳಿದ ಅವರು, ಪರಿಸರ-ಸ್ನೇಹಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಲ್ಲಿ ಅಪಾರವಾದ ಹೂಡಿಕೆಯ ಸಾಮರ್ಥ್ಯವಿದೆ ಎಂದು ಸೂಚಿಸಿದರು. ಯಾವುದೇ ಪ್ರದೇಶದ ಅಭಿವೃದ್ಧಿಗೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯೇ ಅತ್ಯಂತ ನಿರ್ಣಾಯಕವಾದ ಅಂಶಗಳು ಎಂಬುದನ್ನು ಪುನರುಚ್ಚರಿಸಿದ ಶ್ರೀ ಮೋದಿಯವರು, "ನಮ್ಮ ಸರ್ಕಾರವು ಭಯೋತ್ಪಾದನೆ ಮತ್ತು ಬಂಡುಕೋರತನದ ವಿರುದ್ಧ 'ಶೂನ್ಯ ಸಹಿಷ್ಣುತಾ ನೀತಿ'ಯನ್ನು ಹೊಂದಿದೆ" ಎಂದು ದೃಢವಾಗಿ ನುಡಿದರು. ಒಂದು ಕಾಲದಲ್ಲಿ ಈಶಾನ್ಯವು ನಿರಂತರ ದಿಗ್ಬಂಧನಗಳು ಮತ್ತು ಸಂಘರ್ಷಗಳ ತಾಣವಾಗಿತ್ತು, ಇದು ಅಲ್ಲಿನ ಯುವಜನರ ಭವಿಷ್ಯದ ಅವಕಾಶಗಳ ಮೇಲೆ ಗಂಭೀರವಾದ ಪರಿಣಾಮ ಬೀರಿತ್ತು ಎಂದು ಅವರು ನೆನಪಿಸಿಕೊಂಡರು. ಶಾಂತಿ ಒಪ್ಪಂದಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದ ನಿರಂತರ ಪ್ರಯತ್ನಗಳನ್ನು ವಿವರಿಸಿದ ಅವರು, ಕಳೆದ 10-11 ವರ್ಷಗಳಲ್ಲಿ, 10,000ಕ್ಕೂ ಹೆಚ್ಚು ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶಾಂತಿಯ ಮಾರ್ಗವನ್ನು ಅಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಈ ಮಹತ್ವದ ಪರಿವರ್ತನೆಯು ಈ ವಲಯದಲ್ಲಿ ಹೊಸ ಉದ್ಯೋಗ ಮತ್ತು ಉದ್ಯಮಶೀಲತೆಯ ಅನಾವರಣಕ್ಕೆ ಕಾರಣವಾಗಿದೆ ಎಂದು ಅವರು ಒತ್ತಿ ಹೇಳಿದರು.  ಮುದ್ರಾ  ಯೋಜನೆಯು ಈಶಾನ್ಯದ ಲಕ್ಷಾಂತರ ಯುವಕರಿಗೆ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲವನ್ನು ಒದಗಿಸಿದೆ ಎಂದು ಶ್ರೀ ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಹಲವಾರು ನೂತನ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿದ್ದು, ಯುವಜನರು ಭವಿಷ್ಯಕ್ಕೆ ಬೇಕಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಇವು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು. ಈಶಾನ್ಯದ ಯುವಕರು ಕೇವಲ ಅಂತರ್ಜಾಲ ಬಳಕೆದಾರರಾಗಿ ಉಳಿದಿಲ್ಲ, ಬದಲಾಗಿ ಅವರು ಉದಯೋನ್ಮುಖ ಡಿಜಿಟಲ್ ಆವಿಷ್ಕಾರಕರಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಅವರು ಬಣ್ಣಿಸಿದರು. 13,000 ಕಿಲೋಮೀಟರ್ ಗಳಿಗೂ ಹೆಚ್ಚಿನ ಆಪ್ಟಿಕಲ್ ಫೈಬರ್ ನೆಟ್ವರ್ಕ್ ವಿಸ್ತರಣೆ, 4ಜಿ ಮತ್ತು 5ಜಿ ತಂತ್ರಜ್ಞಾನದ ವ್ಯಾಪ್ತಿ, ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವರ್ಧಿಸುತ್ತಿರುವ ಅವಕಾಶಗಳಂತಹ ಪ್ರಗತಿಗಳನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಯುವ ಉದ್ಯಮಿಗಳು ಈಗ ಈ ಪ್ರಾಂತ್ಯದಲ್ಲೇ ಮಹತ್ವದ ಸ್ಟಾರ್ಟ್ಅಪ್ ಗಳನ್ನು  ಪ್ರಾರಂಭಿಸುತ್ತಿದ್ದು, ಇದು ಭಾರತದ ಡಿಜಿಟಲ್ ಪ್ರವೇಶದ್ವಾರವಾಗಿ ಈಶಾನ್ಯದ ಸ್ಥಾನಮಾನವನ್ನು ಇನ್ನಷ್ಟು ಸಶಕ್ತಗೊಳಿಸುತ್ತಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

ಬೆಳವಣಿಗೆಯನ್ನು ಹೆಚ್ಚಿಸಿ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಕೌಶಲ್ಯಗಳ ಅಭಿವೃದ್ಧಿ ಬಹಳ ಮುಖ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ಕೆ ಈಶಾನ್ಯ ಭಾರತವು ಉತ್ತಮ ವಾತಾವರಣವನ್ನು ಹೊಂದಿದೆ ಎಂದರು. ಕೇಂದ್ರ ಸರ್ಕಾರವು ಶಿಕ್ಷಣ ಮತ್ತು ಕೌಶಲ್ಯ ಹೆಚ್ಚಿಸುವ ಯೋಜನೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಅವರು ತಿಳಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಈಶಾನ್ಯದ ಶಿಕ್ಷಣಕ್ಕಾಗಿ ₹21,000 ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 800 ಕ್ಕೂ ಹೆಚ್ಚು ಹೊಸ ಶಾಲೆಗಳು, ಈ ಪ್ರದೇಶದ ಮೊದಲ AIIMS, ಒಂಬತ್ತು ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಎರಡು ಹೊಸ IIITಗಳನ್ನು ಸ್ಥಾಪಿಸಿರುವುದನ್ನು ಅವರು ಮುಖ್ಯವಾಗಿ ಉಲ್ಲೇಖಿಸಿದರು. ಇದಲ್ಲದೆ, ಮಿಜೋರಾಂನಲ್ಲಿ ಭಾರತೀಯ ಸಮೂಹ ಮಾಧ್ಯಮ ಸಂಸ್ಥೆಯ ಕ್ಯಾಂಪಸ್ ಮತ್ತು ಈ ಪ್ರದೇಶದಾದ್ಯಂತ ಸುಮಾರು 200 ಹೊಸ ಕೌಶಲ್ಯಾಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಭಾರತದ ಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನು ಈಶಾನ್ಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಎಂಟು ಖೇಲೋ ಇಂಡಿಯಾ ಉತ್ಕೃಷ್ಟತಾ ಕೇಂದ್ರಗಳು ಮತ್ತು 250 ಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದು ಈ ಪ್ರದೇಶದಾದ್ಯಂತ ಕ್ರೀಡಾ ಪ್ರತಿಭೆಗಳನ್ನು ಬೆಳೆಸುತ್ತಿದೆ ಎಂದು ಅವರು ತಿಳಿಸಿದರು. ಈಶಾನ್ಯವು ಈಗ ವಿವಿಧ ಕ್ಷೇತ್ರಗಳಲ್ಲಿ ಉನ್ನತ ದರ್ಜೆಯ ಪ್ರತಿಭೆಗಳನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿಯವರು ಭರವಸೆ ನೀಡಿದರು, ಕೈಗಾರಿಕೆಗಳು ಮತ್ತು ಹೂಡಿಕೆದಾರರು ಈ ಪ್ರದೇಶದ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ಸಾವಯವ ಆಹಾರಕ್ಕೆ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಶ್ರೀ ಮೋದಿ ಒತ್ತಿ ಹೇಳುತ್ತಾ, ಪ್ರಪಂಚದ ಪ್ರತಿ ಊಟದ ತಟ್ಟೆಯಲ್ಲೂ ಭಾರತೀಯ ಆಹಾರದ ಬ್ರ್ಯಾಂಡ್ ಇರಬೇಕು ಎಂಬುದು ತಮ್ಮ ಕನಸು ಎಂದು ತಿಳಿಸಿದರು. ಈ ಕನಸನ್ನು ನನಸು ಮಾಡುವಲ್ಲಿ ಈಶಾನ್ಯ ಭಾರತದ ಪಾತ್ರ ಮಹತ್ವದ್ದು ಎಂದರು. ಕಳೆದ ಹತ್ತು ವರ್ಷಗಳಲ್ಲಿ ಈಶಾನ್ಯದಲ್ಲಿ ಸಾವಯವ ಕೃಷಿಯ ವ್ಯಾಪ್ತಿ ದುಪ್ಪಟ್ಟಾಗಿದೆ. ಈ ಪ್ರದೇಶವು ಉತ್ತಮ ಗುಣಮಟ್ಟದ ಚಹಾ, ಅನಾನಸ್, ಕಿತ್ತಳೆ, ನಿಂಬೆ, ಅರಿಶಿನ ಮತ್ತು ಶುಂಠಿಯನ್ನು ಬೆಳೆಯುತ್ತಿದೆ ಎಂದು ಅವರು ವಿವರಿಸಿದರು. ಈ ಉತ್ಪನ್ನಗಳ ವಿಶೇಷ ರುಚಿ ಮತ್ತು ಅತ್ಯುತ್ತಮ ಗುಣಮಟ್ಟದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಖಚಿತಪಡಿಸಿದರು. ಬೆಳೆಯುತ್ತಿರುವ ಈ ಮಾರುಕಟ್ಟೆಯ ಲಾಭ ಪಡೆಯಲು ಅವರು ಸಂಬಂಧಪಟ್ಟವರನ್ನು ಪ್ರೋತ್ಸಾಹಿಸಿದರು. ಭಾರತದ ಸಾವಯವ ಆಹಾರ ರಫ್ತಿನಲ್ಲಿ ಈಶಾನ್ಯವು ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.

ಈಶಾನ್ಯ ಭಾರತದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈಗಾಗಲೇ ಉತ್ತಮ ಸಂಪರ್ಕ ವ್ಯವಸ್ಥೆಯು ಈ ಉಪಕ್ರಮಕ್ಕೆ ಬೆಂಬಲ ನೀಡುತ್ತಿದ್ದು, ಮೆಗಾ ಫುಡ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು, ಶೀತಲೀಕರಣ ಸೌಲಭ್ಯಗಳ ಜಾಲವನ್ನು ವಿಸ್ತರಿಸಲು ಮತ್ತು ಪರೀಕ್ಷಾ ಪ್ರಯೋಗಾಲಯಗಳ ಸೌಲಭ್ಯಗಳನ್ನು ಒದಗಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈಶಾನ್ಯದ ಮಣ್ಣು ಮತ್ತು ಹವಾಮಾನವು ಪಾಮ್ ಎಣ್ಣೆ ಕೃಷಿಗೆ ಹೆಚ್ಚು ಸೂಕ್ತವಾಗಿದೆ ಎಂದು ಗುರುತಿಸಿ, ಆಯಿಲ್ ಪಾಮ್ ಮಿಷನ್ ಅನ್ನು ಪ್ರಾರಂಭಿಸಿರುವುದನ್ನು ಅವರು ಉಲ್ಲೇಖಿಸಿದರು. ಈ ಉಪಕ್ರಮವು ರೈತರಿಗೆ ಬಲವಾದ ಆದಾಯದ ಅವಕಾಶವನ್ನು ಒದಗಿಸುತ್ತದೆ ಮತ್ತು ಭಾರತದ ಅಡುಗೆ ಎಣ್ಣೆ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. ಪಾಮ್ ಎಣ್ಣೆ ಕೃಷಿಯು ಕೈಗಾರಿಕೆಗಳಿಗೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಸೇರಿಸಿದರು, ಈ ಪ್ರದೇಶದ ಕೃಷಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪಾಲುದಾರರನ್ನು ಪ್ರೋತ್ಸಾಹಿಸಿದರು.

 

"ಈಶಾನ್ಯ ಭಾರತವು ಶಕ್ತಿ ಮತ್ತು ಸೆಮಿಕಂಡಕ್ಟರ್ ಗಳಂತಹ ಎರಡು ಕಾರ್ಯತಂತ್ರದ ವಲಯಗಳಿಗೆ ಮುಖ್ಯ ತಾಣವಾಗಿ ಬೆಳೆಯುತ್ತಿದೆ" ಎಂದು ಶ್ರೀ ಮೋದಿ ಅವರು ಒತ್ತಿ ನುಡಿದರು. ಈಶಾನ್ಯದ ಎಲ್ಲ ರಾಜ್ಯಗಳಲ್ಲೂ ಜಲವಿದ್ಯುತ್ ಮತ್ತು ಸೌರಶಕ್ತಿಗಾಗಿ ಸರ್ಕಾರವು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಿದೆ, ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು. ವಿದ್ಯುತ್ ಸ್ಥಾವರಗಳು ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಅವಕಾಶಗಳಿರುವುದರ ಜೊತೆಗೆ, ಸೌರ ಫಲಕಗಳು, ಬ್ಯಾಟರಿ ಸೆಲ್ ಗಳು, ಶೇಖರಣಾ ವ್ಯವಸ್ಥೆಗಳು ಮತ್ತು ಸಂಶೋಧನೆಯಂತಹ ಉತ್ಪಾದನಾ ಕ್ಷೇತ್ರದಲ್ಲೂ ಹೆಚ್ಚಿನ ಅವಕಾಶಗಳಿವೆ ಎಂದು ಅವರು ತಿಳಿಸಿದರು. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವುದು ಬಹಳ ಮುಖ್ಯ. ಇಂದು ನಾವು ಸ್ವಾವಲಂಬಿಗಳಾದರೆ, ಭವಿಷ್ಯದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು ಎಂದು ಅವರು ಪ್ರತಿಪಾದಿಸಿದರು. ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅಸ್ಸಾಂನ ಪಾತ್ರ ಹೆಚ್ಚಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈಶಾನ್ಯದಲ್ಲಿರುವ ಅರೆವಾಹಕ ಕಾರ್ಖಾನೆಯಿಂದ ತಯಾರಾದ ಮೊದಲ 'ಮೇಡ್ ಇನ್ ಇಂಡಿಯಾ' ಚಿಪ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಘೋಷಿಸಿದರು. ಇದು ಈ ಪ್ರದೇಶಕ್ಕೆ ಒಂದು ದೊಡ್ಡ ಸಾಧನೆಯಾಗಿದೆ ಎಂದರು. ಈ ಬೆಳವಣಿಗೆಯಿಂದ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೊಸ ದಾರಿಗಳು ತೆರೆದುಕೊಳ್ಳುತ್ತಿವೆ ಮತ್ತು ಭಾರತದ ಉನ್ನತ ತಂತ್ರಜ್ಞಾನದ ಕೈಗಾರಿಕಾ ಬೆಳವಣಿಗೆಯಲ್ಲಿ ಈಶಾನ್ಯದ ಸ್ಥಾನ ಭದ್ರವಾಗುತ್ತಿದೆ ಎಂದು ಅವರು ತಿಳಿಸಿದರು.

"ರೈಸಿಂಗ್ ನಾರ್ತ್ಈಸ್ಟ್ ಕೇವಲ ಹೂಡಿಕೆದಾರರ ಸಮಾವೇಶವಲ್ಲ - ಇದೊಂದು ಚಳುವಳಿ ಮತ್ತು ಕ್ರಿಯೆಗೆ ಕರೆ" ಎಂದು ಪ್ರಧಾನಮಂತ್ರಿಗಳು ಒತ್ತಿಹೇಳಿದರು. "ಈಶಾನ್ಯದ ಪ್ರಗತಿ ಮತ್ತು ಸಮೃದ್ಧಿಯ ಮೂಲಕ ಭಾರತದ ಭವಿಷ್ಯವು ಹೊಸ ಎತ್ತರವನ್ನು ತಲುಪಲಿದೆ" ಎಂದು ಅವರು ಪ್ರತಿಪಾದಿಸಿದರು. ಪ್ರಧಾನಮಂತ್ರಿಯವರು ಉಪಸ್ಥಿತರಿದ್ದ ಬಿಸಿನೆಸ್ ನಾಯಕರ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿ, ಬೆಳವಣಿಗೆಯನ್ನು ಮುನ್ನಡೆಸಲು ಒಂದಾಗುವಂತೆ ಒತ್ತಾಯಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಈಶಾನ್ಯದ ಸಾಮರ್ಥ್ಯದ ಸಂಕೇತವಾದ 'ಅಷ್ಟಲಕ್ಷ್ಮಿ'ಯನ್ನು 'ವಿಕಸಿತ ಭಾರತ' ನಿರ್ಮಾಣಕ್ಕೆ ಮಾರ್ಗದರ್ಶಿ ಶಕ್ತಿಯಾಗಿ ಪರಿವರ್ತಿಸಲು ಎಲ್ಲ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು. "ಮುಂದಿನ ರೈಸಿಂಗ್ ನಾರ್ತ್ಈಸ್ಟ್ ವೇಳೆಗೆ ಭಾರತವು ಬಹಳಷ್ಟು ಮುಂದಕ್ಕೆ ಸಾಗಿರುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಅವರು ಹೇಳಿದರು.

 

ಈ ಕಾರ್ಯಕ್ರಮದಲ್ಲಿ ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ಮಣಿಪುರದ ರಾಜ್ಯಪಾಲರಾದ ಶ್ರೀ ಅಜಯ್ ಕುಮಾರ್ ಭಲ್ಲಾ, ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ಹಿಮಂತ ಬಿಸ್ವಾ ಶರ್ಮಾ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಪೆಮಾ ಖಂಡು, ಮೇಘಾಲಯ ಮುಖ್ಯಮಂತ್ರಿಗಳಾದ ಶ್ರೀ ಕಾನ್ರಾಡ್ ಸಂಗ್ಮಾ, ಮಿಝೋರಾಂ ಮುಖ್ಯಮಂತ್ರಿಗಳಾದ ಶ್ರೀ ಲಾಲ್ದುಹೋಮ, ನಾಗಾಲ್ಯಾಂಡ್ ಮುಖ್ಯಮಂತ್ರಿಗಳಾದ ಶ್ರೀ ನೈಫಿಯು ರಿಯೊ, ಸಿಕ್ಕಿಂ ಮುಖ್ಯಮಂತ್ರಿಗಳಾದ ಶ್ರೀ ಪ್ರೇಮ್ ಸಿಂಗ್ ತಮಾಂಗ್, ತ್ರಿಪುರಾ ಮುಖ್ಯಮಂತ್ರಿಗಳಾದ ಶ್ರೀ ಮಾಣಿಕ್ ಸಹಾ, ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಡಾ. ಸುಕಾಂತ ಮಜುಂದಾರ್ ಅವರುಗಳು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಈಶಾನ್ಯ ವಲಯವನ್ನು ಅವಕಾಶಗಳ ನಾಡಾಗಿ ಬಿಂಬಿಸುವ, ಜಾಗತಿಕ ಮತ್ತು ದೇಶೀಯ ಹೂಡಿಕೆಯನ್ನು ಆಕರ್ಷಿಸುವ ಮತ್ತು ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಗೆ ತರುವ ಗುರಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಶೃಂಗಸಭೆಯನ್ನು ಉದ್ಘಾಟಿಸಿದರು.

 

ಮೇ 23-24 ರವರೆಗೆ ನಡೆಯುವ ಈ ಎರಡು ದಿನಗಳ "ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಸಮಿಟ್", ಕೇಂದ್ರ ಸರ್ಕಾರವು ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳ ಸಕ್ರಿಯ ಬೆಂಬಲದೊಂದಿಗೆ ಆಯೋಜಿಸಿದ್ದ ರಸ್ತೆ ಪ್ರದರ್ಶನಗಳು, ರಾಜ್ಯಗಳ ದುಂಡು ಮೇಜಿನ ಸಭೆಗಳು, ರಾಯಭಾರಿಗಳ ಭೇಟಿ ಮತ್ತು ದ್ವಿಪಕ್ಷೀಯ ವಾಣಿಜ್ಯ ಮಂಡಳಿಗಳ ಸಭೆಗಳಂತಹ ಪೂರ್ವ-ಸಮ್ಮೇಳನದ ಚಟುವಟಿಕೆಗಳ ಸರಣಿಯ ಫಲಿತಾಂಶವಾಗಿದೆ. ಈ ಶೃಂಗಸಭೆಯಲ್ಲಿ ಮಂತ್ರಿಗಳ ಅಧಿವೇಶನಗಳು, ಸರ್ಕಾರ-ವ್ಯಾಪಾರ ಸಭೆಗಳು, ವ್ಯಾಪಾರ-ವ್ಯಾಪಾರ ಸಭೆಗಳು, ಸ್ಟಾರ್ಟ್ಅಪ್ಗಳು ಮತ್ತು ಹೂಡಿಕೆ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವಾಲಯಗಳು ಕೈಗೊಂಡಿರುವ ನೀತಿ ಮತ್ತು ಸಂಬಂಧಿತ ಉಪಕ್ರಮಗಳ ಪ್ರದರ್ಶನಗಳು ಸೇರಿವೆ.

ಹೂಡಿಕೆ ಉತ್ತೇಜನಕ್ಕಾಗಿ ಪ್ರಮುಖವಾಗಿ ಗಮನಹರಿಸಲಾಗುವ ವಲಯಗಳೆಂದರೆ: ಪ್ರವಾಸೋದ್ಯಮ ಮತ್ತು ಆತಿಥ್ಯ; ಕೃಷಿ-ಆಹಾರ ಸಂಸ್ಕರಣೆ ಮತ್ತು ಪೂರಕ ವಲಯಗಳು; ಜವಳಿ, ಕೈಮಗ್ಗ, ಮತ್ತು ಕರಕುಶಲ ಉತ್ಪನ್ನಗಳು; ಆರೋಗ್ಯ ಸೇವೆ; ಶಿಕ್ಷಣ ಮತ್ತು ಕೌಶಲ್ಯವರ್ಧನೆ; ಮಾಹಿತಿ ತಂತ್ರಜ್ಞಾನ ಅಥವಾ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು; ಮೂಲಸೌಕರ್ಯ ಮತ್ತು ಸರಕು-ಸಾಗಣೆ ; ಇಂಧನ; ಹಾಗೂ ಮನರಂಜನೆ ಮತ್ತು ಕ್ರೀಡಾ ವಲಯಗಳು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
On Puri’s Grand Road, a devotee’s submission

Media Coverage

On Puri’s Grand Road, a devotee’s submission
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.