The presidency of G-20 has come as a big opportunity for us. We have to make full use of this opportunity and focus on global good: PM
The theme we have for G20 is 'One Earth, One Family, One Future'. It shows our commitment to 'Vasudhaiva Kutumbakam': PM Modi
After the space sector was opened for the private sector, dreams of the youth are coming true. They are saying - Sky is not the limit: PM Modi
In the last 8 years, the export of musical instruments from India has increased three and a half times. Talking about Electrical Musical Instruments, their export has increased 60 times: PM
Lifestyle of the Naga community in Nagaland, their art-culture and music attracts everyone. It is an important part of the glorious heritage of our country: PM Modi

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. 'ಮನದ ಮಾತಿಗೆ' ನಿಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ. ಈ ಕಾರ್ಯಕ್ರಮವು 95 ನೇ ಸಂಚಿಕೆಯಾಗಿದೆ. ನಾವು 'ಮನದ ಮಾತಿನ’ ಶತಕದತ್ತ ಬಹು ವೇಗವಾಗಿ ಸಾಗುತ್ತಿದ್ದೇವೆ. ಈ ಕಾರ್ಯಕ್ರಮವು 130 ಕೋಟಿ ದೇಶವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಮತ್ತೊಂದು ಮಾಧ್ಯಮವಾಗಿದೆ. ಪ್ರತಿ ಸಂಚಿಕೆಗೂ ಮುನ್ನ ಗ್ರಾಮಗಳು-ನಗರಗಳಿಂದ ಬರುವ ಸಾಕಷ್ಟು ಪತ್ರಗಳನ್ನು ಓದುವುದು, ಮಕ್ಕಳಿಂದ ಹಿರಿಯರವರೆಗೆ ಆಡಿಯೋ ಸಂದೇಶಗಳನ್ನು ಕೇಳುವುದು ನನಗೆ ಒಂದು ಆಧ್ಯಾತ್ಮಿಕ ಅನುಭವದಂತಿದೆ.

ಸ್ನೇಹಿತರೇ, ನಾನು ಇಂದಿನ ಕಾರ್ಯಕ್ರಮವನ್ನು ಒಂದು ಅನನ್ಯವಾದ  ಉಡುಗೊರೆಯ ಕುರಿತ ಚರ್ಚೆಯೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಯೆಲ್ದಿ ಹರಿಪ್ರಸಾದ್ ಎಂಬ ಒಬ್ಬ ನೇಕಾರ ಸೋದರನಿದ್ದಾನೆ. ಅವರು ತಮ್ಮ ಕೈಯಿಂದಲೇ ನೇಯ್ದ  G-20 ಲೋಗೋವನ್ನು ನನಗೆ ಕಳುಹಿಸಿದ್ದಾರೆ. ಈ ಅದ್ಭುತ ಉಡುಗೊರೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಹರಿಪ್ರಸಾದ್ ಜಿ ತಮ್ಮ ಕಲೆಯಲ್ಲಿ ಎಷ್ಟು ನಿಪುಣರಾಗಿದ್ದಾರೆಂದರೆ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಹರಿಪ್ರಸಾದ್ ಜಿ ಅವರು ಕೈಯಿಂದ ನೇಯ್ದ ಜಿ-20 ಲೋಗೋದ ಜೊತೆಗೆ ನನಗೆ ಪತ್ರವೊಂದನ್ನೂ ಕಳುಹಿಸಿದ್ದಾರೆ. ಇದರಲ್ಲಿ ಅವರು ಮುಂದಿನ ವರ್ಷ ಜಿ-20 ಶೃಂಗಸಭೆಯನ್ನು ಆಯೋಜಿಸುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ಬರೆದಿದ್ದಾರೆ. ದೇಶ ಈ ಸಾಧನೆಗೈಯ್ದ ಖುಷಿಯಲ್ಲಿ ತಮ್ಮ ಕೈಯಿಂದಲೇ ಜಿ-20  ಲೋಗೋ ಸಿದ್ಧಪಡಿಸಿದ್ದಾರೆ. ನೇಯ್ಗೆಯ ಈ ಅದ್ಭುತ ಪ್ರತಿಭೆ ಅವರಿಗೆ ತಂದೆಯಿಂದ ಪರಂಪರಾಗತ ಕೊಡುಗೆಯ ರೂಪದಲ್ಲಿ ದೊರೆತಿದೆ. ಇಂದು ಅವರು ಸಂಪೂರ್ಣ ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 

ಸ್ನೇಹಿತರೇ, ಕೆಲ ದಿನಗಳ ಹಿಂದೆಯಷ್ಟೇ ನನಗೆ G-20 ಲಾಂಛನ ಮತ್ತು ಭಾರತದ ಪ್ರೆಸಿಡೆನ್ಸಿಯ ವೆಬ್ಸೈಟ್ ಅನ್ನು ಬಿಡುಗಡೆ ಮಾಡುವ ಸದವಕಾಶ ಲಭಿಸಿತ್ತು. ಈ ಲೋಗೋವನ್ನು ಸಾರ್ವಜನಿಕ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ. ಹರಿಪ್ರಸಾದ್ ಅವರಿಂದ ನನಗೆ ಈ ಉಡುಗೊರೆ ಲಭಿಸಿದಾಗ ನನ್ನ ಮನಸ್ಸಿನಲ್ಲಿ ಮತ್ತೊಂದು ಆಲೋಚನೆ ಮೂಡಿತು. ತೆಲಂಗಾಣದ ಜಿಲ್ಲೆಯಲ್ಲಿ ಕುಳಿತ ಒಬ್ಬ ವ್ಯಕ್ತಿಯು ಜಿ-20 ಶೃಂಗಸಭೆಯೊಂದಿಗೆ ತನ್ನನ್ನು  ತಾನು ಹೇಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಇಂದು ಹರಿಪ್ರಸಾದ್ ಅವರಂತಹ ಅನೇಕರು ನನಗೆ ಪತ್ರ ಬರೆದು ದೇಶ ಇಷ್ಟು ಬೃಹತ್ ಶೃಂಗಸಭೆಯನ್ನು ಆಯೋಜಿಸಿತ್ತಿರುವುದು ತಮಗೆ ಬಹಳ ಹೆಮ್ಮೆಯ ವಿಷಯವೆನಿಸಿದೆ ಎಂದು ಹೇಳಿದ್ದಾರೆ. ಪುಣೆಯ ಸುಬ್ಬರಾವ್ ಚಿಲ್ಲಾರಾ ಅವರು ಮತ್ತು ಕೋಲ್ಕತ್ತಾದಿಂದ ತುಷಾರ್ ಜಗಮೋಹನ್ ಅವರ ಸಂದೇಶಗಳ ಬಗ್ಗೆಯೂ ನಿಮ್ಮೊಂದಿಗೆ ಪ್ರಸ್ತಾಪಿಸಲಿದ್ದೇನೆ. G-20 ಗೆ ಸಂಬಂಧಿಸಿದಂತೆ ಭಾರತದ ಸಕ್ರಿಯ ಪ್ರಯತ್ನಗಳನ್ನು ಅವರು ಬಹಳ  ಶ್ಲಾಘಿಸಿದ್ದಾರೆ.

ಸ್ನೇಹಿತರೇ, G-20 ವಿಶ್ವ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ, ವಿಶ್ವ ವ್ಯಾಪಾರದಲ್ಲಿ ನಾಲ್ಕನೇ- ಮುಕ್ಕಾಲು ಪಾಲು ಮತ್ತು ವಿಶ್ವ ಜಿಡಿಪಿಯಲ್ಲಿ ಶೇ.85 ರಷ್ಟು ಪಾಲುದಾರಿಕೆಯನ್ನು ಹೊಂದಿದೆ. ಭಾರತವು ಇಂದಿನಿಂದ 3 ದಿನಗಳ ನಂತರ ಅಂದರೆ ಡಿಸೆಂಬರ್ 1 ರಿಂದ ಅಂತಹ ಬೃಹತ್ ಸಮೂಹದ, ಅಂತಹ ಸಮರ್ಥ ತಂಡದ ಅಧ್ಯಕ್ಷತೆ ವಹಿಸಲಿದೆ ಎಂದು ನೀವು ಊಹಿಸಬಹುದು. ಭಾರತಕ್ಕೆ, ಪ್ರತಿಯೊಬ್ಬ ಭಾರತೀಯನಿಗೆ ಇದು ಎಂತಹ ಅದ್ಭುತ ಅವಕಾಶವಲ್ಲವೇ. ಆಜಾದಿ ಕೆ  ಅಮೃತ ಮಹೋತ್ಸವದಲ್ಲಿ ಭಾರತಕ್ಕೆ ಈ ಜವಾಬ್ದಾರಿ ದೊರೆತಿರುವುದು ಮತ್ತಷ್ಟು ವಿಶೇಷವೆನ್ನಿಸುತ್ತದೆ. 
ಸ್ನೇಹಿತರೇ, ಜಿ-20 ಅಧ್ಯಕ್ಷತೆ ನಮಗೆ ಉತ್ತಮ ಅವಕಾಶವಾಗಿದೆ. ನಾವು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಮತ್ತು ಜಾಗತಿಕ ಒಳಿತಿಗಾಗಿ, ವಿಶ್ವ ಕಲ್ಯಾಣದತ್ತ ಗಮನ ಹರಿಸಬೇಕು. ಅದು ಶಾಂತಿಯಾಗಿರಲಿ ಅಥವಾ ಏಕತೆಯಾಗಿರಲಿ, ಪರಿಸರದ ಕುರಿತು ಸಂವೇದನಶೀಲತೆಯಾಗಿರಲಿ ಅಥವಾ ಸುಸ್ಥಿರ ಅಭಿವೃದ್ಧಿಯಾಗಿರಲಿ, ಇವುಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಹೊಂದಿದೆ. ನಾವು ನೀಡಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ವಿಷಯ ವಸ್ತು ವಸುಧೈವ ಕುಟುಂಬಕಂ ಕುರಿತ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಾವು ಯಾವಾಗಲೂ ಹೇಳುತ್ತೇವೆ -

ಓಂ ಸರ್ವೇಶಾಂ ಸ್ವಸ್ಥಿರ್ ಭವತು

ಸರ್ವೇಶಾಂ ಶಾಂತಿರ್ ಭವತು

ಸರ್ವೇಶಾಂ ಪೂರ್ಣಮ್ ಭವತು

ಸರ್ವೇಶಾಂ ಮಂಗಳಂ ಭವತು

ಓಂ ಶಾಂತಿಃ ಶಾಂತಿಃ ಶಾಂತಿಃ

ಅಂದರೆ ಎಲ್ಲರ ಕಲ್ಯಾಣವಾಗಲಿ, ಎಲ್ಲರಿಗೂ ಶಾಂತಿ ದೊರೆಯಲಿ, ಎಲ್ಲರಿಗೂ ಪರಿಪೂರ್ಣತೆ ದೊರೆಯಲಿ ಮತ್ತು ಎಲ್ಲರಿಗೂ ಶುಭವಾಗಲಿ. ಮುಂದಿನ ದಿನಗಳಲ್ಲಿ ಜಿ-20 ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆ ಆಯೋಜಿಸಲಾಗುವುದು. ಈ ಸಮಯದಲ್ಲಿ, ಪ್ರಪಂಚದ ವಿವಿಧ ಭಾಗಗಳ ಜನರು ನಿಮ್ಮ ರಾಜ್ಯಗಳಿಗೆ ಭೇಟಿ ನೀಡುವ ಅವಕಾಶವಿದೆ. ನಿಮ್ಮ ಸಂಸ್ಕೃತಿಯ ವೈವಿಧ್ಯಮಯ ಮತ್ತು ವಿಶಿಷ್ಟ ರೂಪಗಳನ್ನು ನೀವು ಜಗತ್ತಿಗೆ ಪ್ರದರ್ಶಿಸುತ್ತೀರಿ  ಎಂದು ನನಗೆ ಭರವಸೆಯಿದೆ ಮತ್ತು ಈಗ ಜಿ -20 ಗೆ ಬರುವ ಜನರು ಒಬ್ಬ ಪ್ರತಿನಿಧಿಯಂತೆ ಬರಬಹುದು, ಆದರೆ  ಅವರು ಭವಿಷ್ಯದ ಪ್ರವಾಸಿಗಳು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮೆಲ್ಲರಲ್ಲಿ ನನ್ನ ಒಂದು ವಿನಂತಿ. ಅದರಲ್ಲೂ  ನನ್ನ ಯುವ ಸ್ನೇಹಿತರಲ್ಲಿ ವಿನಂತಿಸುವುದೇನೆಂದರೆ ಹರಿಪ್ರಸಾದ್ ಅವರಂತೆ ನೀವೂ ಒಂದಲ್ಲ ಒಂದು ರೀತಿಯಲ್ಲಿ ಜಿ-20 ಯೊಂದಿಗೆ ಜೋಡಿಸಿಕೊಳ್ಳಿ. G-20  ಭಾರತೀಯ ಲೋಗೋವನ್ನು ಬಟ್ಟೆಗಳ ಮೇಲೆ ತುಂಬಾ ಸುಂದರವಾಗಿ, ಸೊಗಸಾದ ರೀತಿಯಲ್ಲಿ ವಿನ್ಯಾಸಿಸಬಹುದು ಮತ್ತು   ಮುದ್ರಿಸಬಹುದು. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲೂ  ತಮ್ಮ ಆವರಣಗಳಲ್ಲಿ G-20 ಗೆ ಸಂಬಂಧಿಸಿದ ಚರ್ಚೆಗಳು ಮತ್ತು ಸ್ಪರ್ಧೆಗಳಿಗೆ ಅವಕಾಶಗಳನ್ನು ಸೃಷ್ಟಿಸುವಂತೆ ನಾನು ಆಗ್ರಹಿಸುತ್ತೇನೆ. ನೀವು G20.in ವೆಬ್ಸೈಟ್ಗೆ ಹೋದರೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಅನೇಕ ವಿಷಯಗಳು ಕಾಣಬಹುದು.

ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ 18 ರಂದು ಇಡೀ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಕ್ಕೆ ಸಾಕ್ಷಿಯಾಗಿದೆ. ಈ ದಿನ, ಭಾರತವು ತನ್ನ ಮೊದಲ ಭಾರತದ ಖಾಸಗಿ ವಲಯದಿಂದ ವಿನ್ಯಾಸಗೊಳಿಸಿ ಸಿದ್ಧಪಡಿಸಲಾದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಈ ರಾಕೆಟ್ನ ಹೆಸರು - 'ವಿಕ್ರಮ್-ಎಸ್'. ಸ್ವದೇಶಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ನ ಈ ಮೊದಲ ರಾಕೆಟ್ ಶ್ರೀಹರಿಕೋಟಾದಿಂದ ಐತಿಹಾಸಿಕ ಹಾರಾಟವನ್ನು ಮಾಡಿದ ತಕ್ಷಣ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗಿದನು.

ಸ್ನೇಹಿತರೇ, 'ವಿಕ್ರಮ್-ಎಸ್' ರಾಕೆಟ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಇತರ ರಾಕೆಟ್ಗಳಿಗಿಂತ ಹಗುರವಾಗಿದೆ ಮತ್ತು ಅಗ್ಗವಾಗಿದೆ. ಇದರ ಅಭಿವೃದ್ಧಿ ವೆಚ್ಚವು ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ದೇಶಗಳ ವೆಚ್ಚಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಕಡಿಮೆ ವೆಚ್ಚದಲ್ಲಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವ ದರ್ಜೆಯ ಗುಣಮಟ್ಟ ಎಂಬುದು ಭಾರತದ ಹೆಗ್ಗುರುತಾಗಿದೆ. ಈ ರಾಕೆಟ್ ತಯಾರಿಕೆಯಲ್ಲಿ ಮತ್ತೊಂದು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ರಾಕೆಟ್ ನ ಕೆಲವು ಪ್ರಮುಖ ಭಾಗಗಳನ್ನು 3D ಪ್ರಿಂಟಿಂಗ್ ಮೂಲಕ ತಯಾರಿಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ವಾಸ್ತವವಾಗಿ, 'ವಿಕ್ರಮ್-ಎಸ್' ಉಡಾವಣಾ ಮಿಷನ್ ಗೆ ನೀಡಲಾದ 'ಪ್ರಾರಂಭ' ಎಂಬ ಹೆಸರು ಅತ್ಯಂತ ಸೂಕ್ತವೆನ್ನಿಸುತ್ತದೆ. ಇದು ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಯುಗದ ಉದಯಕ್ಕೆ ಪ್ರತೀಕದಂತಿದೆ. ಇದು ದೇಶದಲ್ಲಿ ಆತ್ಮವಿಶ್ವಾಸದಿಂದ ತುಂಬಿದ ಹೊಸ ಯುಗಕ್ಕೆ ನಾಂದಿಯಾಗಿದೆ. ಒಂದು ಕಾಲದಲ್ಲಿ ಕಾಗದದ ವಿಮಾನವನ್ನು ಕೈಯಿಂದ ಹಾರಿಸುತ್ತಿದ್ದ ಮಕ್ಕಳು ಈಗ ಭಾರತದಲ್ಲಿಯೇ ವಿಮಾನಗಳನ್ನು ತಯಾರಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ನೀವು ಊಹಿಸಬಹುದೇ? ಒಂದು ಕಾಲದಲ್ಲಿ ಚಂದ್ರ, ನಕ್ಷತ್ರಗಳನ್ನು ನೋಡುತ್ತಾ ಆಕಾಶದಲ್ಲಿ ಆಕೃತಿಗಳನ್ನು ಬಿಡಿಸುತ್ತಿದ್ದ ಮಕ್ಕಳಿಗೆ ಈಗ ಭಾರತದಲ್ಲಿಯೇ ರಾಕೆಟ್ ತಯಾರಿಸುವ ಅವಕಾಶ ಲಭಿಸುತ್ತಿದೆ ಎಂದು ನೀವು ಕಲ್ಪಿಸಬಹುದು! ಬಾಹ್ಯಾಕಾಶವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ  ಯುವಕರ ಈ ಕನಸುಗಳೂ ನನಸಾಗುತ್ತಿವೆ. ರಾಕೆಟ್ ತಯಾರಿಸುವ ಈ ಯುವಕರು – ‘ಸ್ಕೈ ಈಸ್ ನಾಟ್ ದಿ ಲಿಮಿಟ್’ ಎಂದು ಹೇಳುತ್ತಿದ್ದಾರೆ.

ಸ್ನೇಹಿತರೇ, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಯಶಸ್ಸನ್ನು ತನ್ನ ನೆರೆಯ ರಾಷ್ಟ್ರಗಳೊಂದಿಗೂ ಹಂಚಿಕೊಳ್ಳುತ್ತಿದೆ. ನಿನ್ನೆಯಷ್ಟೇ ಭಾರತ ಒಂದು ಉಪಗ್ರಹವನ್ನು ಉಡಾವಣೆ ಮಾಡಿದ್ದು, ಇದನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಉಪಗ್ರಹವು ಉತ್ತಮ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸುತ್ತದೆ, ಇದು ಭೂತಾನ್ ಗೆ ತನ್ನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಈ ಉಪಗ್ರಹದ ಉಡಾವಣೆಯು ಬಲವಾದ ಭಾರತ-ಭೂತಾನ್ ನ ಬಲವಾದ ಸಂಬಂಧದ ಪ್ರತಿಬಿಂಬವಾಗಿದೆ.
 
ಸ್ನೇಹಿತರೇ, ಕಳೆದ ಕೆಲವು 'ಮನದ ಮಾತಿ' ನಲ್ಲಿ ನಾವು ಬಾಹ್ಯಾಕಾಶ, ತಂತ್ರಜ್ಞಾನ, ನಾವೀನ್ಯಗಳ ಬಗ್ಗೆ ಬಹಳಷ್ಟು ಮಾತನಾಡಿರುವುದನ್ನು ನೀವು ಗಮನಿಸಿರಬೇಕು. ಇದಕ್ಕೆ ಎರಡು ವಿಶೇಷ ಕಾರಣಗಳಿವೆ, ಒಂದು ನಮ್ಮ ಯುವಕರು ಈ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. They are thinking big and achieving big. ಈಗ ಅವರು ಸಣ್ಣ ಸಣ್ಣ ಸಾಧನೆಗಳಿಂದ ತೃಪ್ತರಾಗುವುದಿಲ್ಲ. ಎರಡನೆಯದಾಗಿ, ನಾವೀನ್ಯತೆ ಮತ್ತು ಮೌಲ್ಯ ಸೃಷ್ಟಿಯ ಈ ರೋಮಾಂಚಕಾರಿ ಪಯಣದಲ್ಲಿ, ಅವರು ತಮ್ಮ ಇತರ ಯುವ ಸಹೋದ್ಯೋಗಿಗಳು ಮತ್ತು ಸ್ಟಾರ್ಟ್-ಅಪ್ಗಳನ್ನು ಸಹ ಪ್ರೋತ್ಸಾಹಿಸುತ್ತಿದ್ದಾರೆ.

ಸ್ನೇಹಿತರೇ, ನಾವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವಿಷ್ಕಾರಗಳ ಬಗ್ಗೆ ಮಾತನಾಡುವಾಗ, ನಾವು ಡ್ರೋನ್ಗಳನ್ನು ಮರೆಯಲಾಗದು. ಡ್ರೋನ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುಂದುವರಿಯುತ್ತಿದೆ. ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಡ್ರೋನ್ಗಳ ಮೂಲಕ ಸೇಬುಗಳನ್ನು ಹೇಗೆ ಸಾಗಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಕಿನ್ನೌರ್ ಹಿಮಾಚಲದ ದೂರದ ಜಿಲ್ಲೆಯಾಗಿದೆ ಮತ್ತು ಅಲ್ಲಿ ಈ ಋತುವಿನಲ್ಲಿ ಭಾರೀ ಹಿಮಪಾತವಾಗುತ್ತಿರುತ್ತದೆ. ಈ ಅತಿಯಾದ ಹಿಮಪಾತದಿಂದ, ರಾಜ್ಯದ ಇತರ ಭಾಗಗಳೊಂದಿಗೆ ಕಿನ್ನೌರ್ನ ಸಂಪರ್ಕವು ವಾರಗಟ್ಟಲೆ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿಂದ ಸೇಬುಗಳ ಸಾಗಣೆಯು ಅಷ್ಟೇ ಕಷ್ಟಕರವಾಗಿದೆ. ಈಗ ಡ್ರೋನ್ ತಂತ್ರಜ್ಞಾನದ ಸಹಾಯದಿಂದ, ಹಿಮಾಚಲದ ರುಚಿಕರವಾದ ಕಿನ್ನೌರಿ ಸೇಬುಗಳು ಮತ್ತಷ್ಟು  ಬೇಗ ಜನರನ್ನು ತಲುಪಲಾರಂಭಿಸಿವೆ. ಇದು ನಮ್ಮ ರೈತ ಸಹೋದರ ಸಹೋದರಿಯರ ವೆಚ್ಚವನ್ನು ಕಡಿಮೆ ಮಾಡುತ್ತದೆ - ಸೇಬುಗಳು ಸರಿಯಾದ ಸಮಯಕ್ಕೆ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತದೆ, ಸೇಬುಗಳು ಹಾಳಾಗುವುದೂ ಕಡಿಮೆಯಾಗುತ್ತದೆ.

ಸ್ನೇಹಿತರೇ, ಇಂದು ನಮ್ಮ ದೇಶವಾಸಿಗಳು ತಮ್ಮ ಆವಿಷ್ಕಾರಗಳಿಂದ ಈ ಹಿಂದೆ ಊಹಿಸಲೂ ಸಾಧ್ಯವಾಗದಂತಹ ವಿಷಯಗಳನ್ನು ಸಾಧ್ಯವಾಗಿಸುತ್ತಿದ್ದಾರೆ. ಇದನ್ನು ನೋಡಿ ಯಾರಿಗೆ ಸಂತೋಷವಾಗುವುದಿಲ್ಲ? ಇತ್ತೀಚಿನ ವರ್ಷಗಳಲ್ಲಿ, ನಮ್ಮ ದೇಶವು ಸಾಕಷ್ಟು ಸಾಧನೆಗಳನ್ನು ಮಾಡಿದೆ. ನಾವು ಭಾರತೀಯರು ಮತ್ತು ವಿಶೇಷವಾಗಿ ನಮ್ಮ ಯುವ ಪೀಳಿಗೆಯು ಇಷ್ಟಕ್ಕೇ  ನಿಲ್ಲುವುದಿಲ್ಲ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.
ಆತ್ಮೀಯ ದೇಶವಾಸಿಗಳೇ, ನಾನು ನಿಮಗಾಗಿ ಒಂದು ಚಿಕ್ಕ ಕ್ಲಿಪ್ ಪ್ಲೇ ಮಾಡಲಿದ್ದೇನೆ..

##(Song)##

ನೀವೆಲ್ಲರೂ ಈ ಹಾಡನ್ನು ಎಂದಾದರೂ ಕೇಳಿರಬಹುದು. ಅಷ್ಟಕ್ಕೂ ಇದು ಬಾಪು ಅವರ ಅಚ್ಚುಮೆಚ್ಚಿನ ಹಾಡು ಆದರೆ ಇದನ್ನು ಹಾಡಿರುವ ಗಾಯಕರು ಗ್ರೀಸ್ ದೇಶದವರು ಎಂದು ಹೇಳಿದರೆ ಖಂಡಿತಾ ಆಶ್ಚರ್ಯಪಡುತ್ತೀರಿ! ಮತ್ತು ಈ ವಿಷಯವು ನಿಮಗೆ ಹೆಮ್ಮೆಯನ್ನು ತರುತ್ತದೆ. ಈ ಹಾಡನ್ನು ಗ್ರೀಸ್ ಗಾಯಕ - 'ಕಾನ್ ಸ್ಟಾಂಟಿನೋಸ್ ಕಲೈಟ್ಜಿಸ್' ಹಾಡಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರು ಇದನ್ನು ಹಾಡಿದ್ದರು. ಆದರೆ ಇಂದು ನಾನು ಬೇರೆ ಯಾವುದೋ ಕಾರಣಕ್ಕಾಗಿ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರು ಭಾರತ ಮತ್ತು ಭಾರತೀಯ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. ಭಾರತದ ಬಗ್ಗೆ ಅವರು ಅದೆಷ್ಟು  ಪ್ರೀತಿಯನ್ನು ಹೊಂದಿದ್ದಾರೆಂದರೆ, ಕಳೆದ 42 ವರ್ಷಗಳಲ್ಲಿ ಅವರು ಬಹುತೇಕ ಪ್ರತಿ ವರ್ಷ ಭಾರತಕ್ಕೆ ಬಂದಿದ್ದಾರೆ. ಅವರು ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗಗಳು, ತಾಳಗಳು ಮತ್ತು ರಸಗಳು ಮತ್ತು ವಿವಿಧ ಘರಾನಾಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಭಾರತೀಯ ಸಂಗೀತದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಧ್ಯಯನ ಮಾಡಿದ್ದಾರೆ, ಅವರು ಭಾರತದ ಶಾಸ್ತ್ರೀಯ ನೃತ್ಯಗಳ ವಿವಿಧ ಮಗ್ಗುಲುಗಳನ್ನು ಸಹ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದಾರೆ. ಈಗ ಅವರು ಭಾರತಕ್ಕೆ ಸಂಬಂಧಿಸಿದ ಈ ಎಲ್ಲ ಅನುಭವಗಳನ್ನು ಪುಸ್ತಕದಲ್ಲಿ ಬಹಳ ಸುಂದರವಾಗಿ ಜೋಡಿಸಿದ್ದಾರೆ. ಭಾರತೀಯ ಸಂಗೀತ ಎಂಬ ಅವರ ಪುಸ್ತಕದಲ್ಲಿ ಸುಮಾರು 760 ಚಿತ್ರಗಳಿವೆ. ಈ ಹೆಚ್ಚಿನ ಛಾಯಾಚಿತ್ರಗಳನ್ನು ಅವರೇ ತೆಗೆದಿದ್ದಾರೆ. ಇತರ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ಇಂತಹ ಉತ್ಸಾಹ ಮತ್ತು ಆಕರ್ಷಣೆ ನಿಜವಾಗಿಯೂ ಹೃದಯ ತುಂಬುವಂತದ್ದಾಗಿದೆ.
ಸ್ನೇಹಿತರೇ, ಕೆಲವು ವಾರಗಳ ಹಿಂದೆ ಮತ್ತೊಂದು ಸುದ್ದಿ ಬಂದಿತ್ತು ಅದು ಕೂಡ ನಮಗೆ ಹೆಮ್ಮೆಯನ್ನು ತುಂಬುವಂಥದ್ದು. ಕಳೆದ 8 ವರ್ಷಗಳಲ್ಲಿ ಭಾರತದಿಂದ ಸಂಗೀತ ಉಪಕರಣಗಳ ರಫ್ತು ಮೂರೂವರೆ ಪಟ್ಟು ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಎಲೆಕ್ಟ್ರಿಕಲ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ಗಳ ಬಗ್ಗೆ ಮಾತನಾಡುವುದಾದರೆ, ಅವುಗಳ ರಫ್ತು 60 ಪಟ್ಟು ಹೆಚ್ಚಾಗಿದೆ. ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ವ್ಯಾಮೋಹ ಹೆಚ್ಚುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ಸಂಗೀತ ವಾದ್ಯಗಳ ದೊಡ್ಡ ಖರೀದಿದಾರರು ಅಮೇರಿಕ, ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಬ್ರಿಟನ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ . ನಮ್ಮ ದೇಶವು ಸಂಗೀತ, ನೃತ್ಯ ಮತ್ತು ಕಲೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವುದು ನಮ್ಮೆಲ್ಲರ ಸೌಭಾಗ್ಯ.
ಸ್ನೇಹಿತರೇ, ಮಹಾನ್ ಕವಿ ಭರ್ತೃಹರಿ ಅವರು ರಚಿಸಿರುವ ‘ನೀತಿ ಶತಕ’ದಿಂದಾಗಿ ನಮಗೆ ಚಿರಪರಿಚಿತರು. ಒಂದು ಶ್ಲೋಕದಲ್ಲಿ ಅವರು ಹೀಗೆನ್ನುತ್ತಾರೆ, ಕಲೆ, ಸಂಗೀತ ಮತ್ತು ಸಾಹಿತ್ಯದೊಂದಿಗೆ ನಮ್ಮ ಬಾಂಧವ್ಯವೇ ಮಾನವೀಯತೆಯ ನಿಜವಾದ ಗುರುತು ಎಂದು. ವಾಸ್ತವದಲ್ಲಿ, ನಮ್ಮ ಸಂಸ್ಕೃತಿ ಇದನ್ನು ಮಾನವೀಯತೆಗಿಂತ ಎತ್ತರಕ್ಕೆ ದೈವತ್ವಕ್ಕೆ ಕರೆದೊಯ್ಯುತ್ತದೆ.  ವೇದಗಳಲ್ಲಿ ಸಾಮವೇದವನ್ನಂತೂ ನಮ್ಮ ವಿವಿಧ ಸಂಗೀತಗಳ ಮೂಲ ಎಂದೇ ಕರೆಯಲಾಗುತ್ತದೆ. ತಾಯಿ ಸರಸ್ವತಿಯ ವೀಣೆಯಾಗಿರಲಿ, ಭಗವಂತ ಶ್ರೀಕೃಷ್ಣನ ಕೊಳಲೇ ಆಗಿರಲಿ, ಅಥವಾ ಭೋಲೇನಾಥ ಶಿವನ ಢಮರುಗವೇ ಆಗಲಿ, ನಮ್ಮ ದೇವರು, ದೇವತೆಗಳು ಕೂಡಾ ಸಂಗೀತಕ್ಕಿಂತ ಭಿನ್ನವಾಗಿಲ್ಲ. ಭಾರತೀಯರಾದ ನಾವು, ಪ್ರತಿಯೊಂದರಲ್ಲೂ ಸಂಗೀತವನ್ನು ಕಾಣುತ್ತೇವೆ. ಅದು ನದಿಯ ಹರಿವಿನ ಕಲರವವಾಗಿರಲಿ, ಮಳೆ ನೀರಿನ ಹನಿ ಬೀಳುವ ಶಬ್ದವಾಗಿರಲಿ,  ಪಕ್ಷಿಗಳ ಇಂಚರವಾಗಿರಲಿ, ಅಥವಾ ಬೀಸುವ ಗಾಳಿಯ ಧ್ವನಿಯೇ ಆಗಿರಲಿ, ನಮ್ಮ ನಾಗರಿಕತೆಯಲ್ಲಿ ಸಂಗೀತ ಎಲ್ಲೆಡೆ ಮಿಳಿತವಾಗಿದೆ. ಈ ಸಂಗೀತ ಕೇವಲ ನಮ್ಮ ಶರೀರಕ್ಕೆ ವಿಶ್ರಾಂತಿ ನೀಡುವುದು ಮಾತ್ರವಲ್ಲ, ಮನಸ್ಸಿಗೆ ಸಂತೋಷವನ್ನೂ ನೀಡುತ್ತದೆ. ಸಂಗೀತ ನಮ್ಮ ಸಮಾಜವನ್ನೂ ಬೆಸೆಯುತ್ತದೆ. ಭಾಂಗ್ಡಾ ಮತ್ತು ಲಾವಣಿ ಉತ್ಸಾಹ ಮತ್ತು ಸಂತೋಷ ನೀಡಿದರೆ ರವೀಂದ್ರ ಸಂಗೀತವು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ದೇಶಾದ್ಯಂತ ಇರುವ ಬುಡಕಟ್ಟು ಜನಾಂಗದ ಆದಿವಾಸಿಗಳು ವಿಭಿನ್ನ ಸಂಗೀತ ಪರಂಪರೆಯನ್ನು ಹೊಂದಿದ್ದಾರೆ. ಪರಸ್ಪರ ಸಹಕಾರ ಮತ್ತು ಸಾಮರಸ್ಯದಿಂದ ಪ್ರಕೃತಿಯೊಂದಿಗೆ ಬಾಳುವ ಪ್ರೇರಣೆಯನ್ನು ಇವು ನಮಗೆ ನೀಡುತ್ತವೆ. 
ಸ್ನೇಹಿತರೇ, ಸಂಗೀತದ ನಮ್ಮ ಪ್ರಕಾರಗಳು ಕೇವಲ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವುದು ಮಾತ್ರವಲ್ಲದೇ, ವಿಶ್ವಾದ್ಯಂತ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಭಾರತೀಯ ಸಂಗೀತ ಖ್ಯಾತಿಯು ವಿಶ್ವದ ಮೂಲೆ ಮೂಲೆಗೂ ವ್ಯಾಪಿಸಿದೆ. ನಾನು ನಿಮಗೆ ಮತ್ತೊಂದು ಆಡಿಯೋ ಕ್ಲಿಪ್ ಕೇಳಿಸುತ್ತೇನೆ. 
 

 ##(ಹಾಡು)##

ಮನೆಯ ಸಮೀಪ ಯಾವುದೋ ದೇವಾಲಯದಲ್ಲಿ ಭಜನೆ ಕೀರ್ತನೆ ನಡೆಯುತ್ತಿರಬಹುದೆಂದು ನೀವು ಯೋಚಿಸುತ್ತಿರಬಹುದು. ಆದರೆ ಈ ಸ್ವರ ಕೂಡಾ ಭಾರತದಿಂದ ಸಾವಿರಾರು ಕಿಲೋಮೀಟರ್ ದೂರವಿರುವ ದಕ್ಷಿಣ ಅಮೆರಿಕಾ ದೇಶದ ಗಯಾನದಿಂದ ಬಂದಿರುವುದಾಗಿದೆ. 19ನೇ ಮತ್ತು 20ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮದೇಶದವರು ಗಯಾನ ದೇಶಕ್ಕೆ ಹೋದರು. ಅವರು ತಮ್ಮೊಂದಿಗೆ ಭಾರತದ ಅನೇಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋದರು. ಉದಾಹರಣೆಗೆ ನಾವು ಭಾರತದಲ್ಲಿ ಯಾವರೀತಿ ಹೋಳಿ ಹಬ್ಬ ಆಚರಿಸುತ್ತೇವೆಯೋ, ಗಯಾನದಲ್ಲಿ ಕೂಡಾ ಹೋಳಿ ಹಬ್ಬದ ರಂಗಿನಾಚರಣೆ ನಡೆಯುತ್ತದೆ. ಎಲ್ಲಿ ಹೋಳಿ ಹಬ್ಬದ ಆಚರಣೆಯ ಸಂಭ್ರಮವಿರುತ್ತದೋ ಅಲ್ಲಿ ಫಗವಾ ಅಂದರೆ, ಫಗುವಾ ಸಂಗೀತವೂ ಇರುತ್ತದೆ. ಗಯಾನಾದ ಫಗುವಾದಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ವಿವಾಹದ ಹಾಡುಗಳನ್ನು ಹಾಡುವ ಒಂದು ವಿಶೇಷ ಸಂಪ್ರದಾಯವಿದೆ. ಈ ಹಾಡುಗಳನ್ನು ಚೌತಾಲ ಎಂದು ಕರೆಯುತ್ತಾರೆ. ನಮ್ಮಲ್ಲಿ ಹಾಡುವ ರಾಗ ಮತ್ತು ಎತ್ತರದ ಸ್ವರದಲ್ಲಿ ಅಲ್ಲಿ ಕೂಡಾ ಹಾಡಲಾಗುತ್ತದೆ. ಅಷ್ಟೇ ಅಲ್ಲದೆ, ಗಯಾನಾದಲ್ಲಿ ಚೌತಾಲ್ ಸ್ಪರ್ಧೆ ಕೂಡಾ ನಡೆಯುತ್ತದೆ. ಇದೇ ರೀತಿ ಅನೇಕ ಭಾರತೀಯರು, ವಿಶೇಷವಾಗಿ ಪೂರ್ವ ಉತ್ತರಪ್ರದೇಶದ ಮತ್ತು ಬಿಹಾರದ ಜನರು ಫಿಜಿ ದೇಶಕ್ಕೆ ಕೂಡಾ ಹೋಗಿದ್ದಾರೆ. ಅವರು ಸಾಂಪ್ರದಾಯಿಕ ಭಜನೆ-ಕೀರ್ತನೆಗಳನ್ನು ಹಾಡುತ್ತಿದ್ದರು, ಇವುಗಳಲ್ಲಿ ಮುಖ್ಯವಾಗಿ ರಾಮಚರಿತ ಮಾನಸದ ದ್ವಿಪದಿಗಳು ಇರುತ್ತಿದ್ದವು. ಅವರುಗಳ ಫಿಜಿ ದೇಶದಲ್ಲಿ ಕೂಡಾ ಭಜನೆ-ಕೀರ್ತನೆಗಳಿಗೆ ಸಂಬಂಧಿಸಿದ ಅನೇಕ ಮಂಡಳಿಗಳನ್ನು ಕೂಡಾ ಸ್ಥಾಪಿಸಿದರು. ಇಂದಿಗೂ ಫಿಜಿಯಲ್ಲಿ ರಾಮಾಯಣ ಮಂಡಳಿ ಹೆಸರಿನ ಎರಡು ಸಾವಿರಕ್ಕೂ ಅಧಿಕ ಭಜನೆ-ಕೀರ್ತನೆ ಮಂಡಳಿಗಳಿವೆ. ಇಂದು ಪ್ರತಿ ಗ್ರಾಮ-ಮೊಹಲ್ಲಾಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ. ನಾನು ಇಲ್ಲಿ ಕೇವಲ ಕೆಲವೇ ಉದಾಹರಣೆಗಳನ್ನು ಕೊಟ್ಟಿದ್ದೇನೆ. ನೀವು ಇಡೀ ವಿಶ್ವದಲ್ಲಿ ನೋಡಿದರೆ, ಈ ಭಾರತೀಯ ಸಂಗೀತವನ್ನು ಇಷ್ಟಪಡುವವರ ಪಟ್ಟಿ ಬಹಳಷ್ಟು ದೊಡ್ಡದಾಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ನಮ್ಮ ದೇಶ ಪ್ರಪಂಚದಲ್ಲಿ ಎಲ್ಲಕ್ಕಿಂತ ಪ್ರಾಚೀನ ಸಂಪ್ರದಾಯಗಳ ನಿಲಯವಾಗಿದೆ  ಎಂದು ಯಾವಾಗಲೂ ಹೆಮ್ಮೆ ಪಡುತ್ತೇವೆ. ಆದ್ದರಿಂದಲೇ, ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಉತ್ತೇಜಿಸುವುದು ಹಾಗೂ ಸಾಧ್ಯವಾದಷ್ಟೂ ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಒಂದು ಪ್ರಶಂಸನೀಯ ಪ್ರಯತ್ನವನ್ನು ನಮ್ಮ ಈಶಾನ್ಯ ರಾಜ್ಯ ನಾಗಾಲ್ಯಾಂಡಿನ ಕೆಲವು ಸ್ನೇಹಿತರು ಮಾಡುತ್ತಿದ್ದಾರೆ. ಈ ಪ್ರಯತ್ನ ನನಗೆ ಬಹಳ ಇಷ್ಟವಾಯಿತು, ಹೀಗಾಗಿ ಈ ವಿಷಯವನ್ನು ಮನದ ಮಾತಿನ ಶ್ರೋತೃಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೊಂಡೆ. 

ಸ್ನೇಹಿತರೆ, ನಾಗಾಲ್ಯಾಂಡ್ ನಲ್ಲಿ ನಾಗಾ ಸಮಾಜದ ಜೀವನಶೈಲಿ, ಅವರ ಕಲೆ-ಸಂಸ್ಕೃತಿ ಮತ್ತು ಸಂಗೀತ, ಇವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಇದು ನಮ್ಮ ದೇಶದ ಭವ್ಯ ಪರಂಪರೆಯ ಪ್ರಮುಖ ಭಾಗವಾಗಿದೆ. ನಾಗಾಲ್ಯಾಂಡ್ ನ ಜನರ ಜೀವನ ಮತ್ತು ಅವರ ನಿಪುಣತೆಗಳು, ಸುಸ್ಥಿರ ಜೀವನಶೈಲಿಗೆ ಕೂಡಾ ಬಹಳ ಮಹತ್ವವೆನಿಸಿವೆ. ಈ ಸಂಪ್ರದಾಯಗಳು ಮತ್ತು ನೈಪುಣ್ಯಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದಕ್ಕಾಗಿ ಅಲ್ಲಿನ ಜನರು ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಹೆಸರು -‘ಲಿಡಿ-ಕ್ರೋ-ಯೂ’ ಎಂದಾಗಿದೆ. ಕ್ರಮೇಣ ಕಣ್ಮರೆಯಾಗುತ್ತಿರುವ ಸುಂದರ ನಾಗಾ ಸಂಸ್ಕೃತಿಯನ್ನು ‘ಲಿಡಿ-ಕ್ರೋ-ಯೂ’ ಸಂಸ್ಥೆ ಪುನಃಶ್ಚೇತನಗೊಳಿಸುವ ಕೆಲಸ ಮಾಡಿದೆ. ಉದಾಹರಣೆಗೆ, ನಾಗಾ ಜಾನಪದ ಸಂಗೀತವು ಅತ್ಯಂತ ಶ್ರೀಮಂತ ಪ್ರಕಾರವಾಗಿದೆ. ಈ ಸಂಸ್ಥೆಯು ನಾಗ ಸಂಗೀತದ Albums launch ಮಾಡುವ ಕೆಲಸ ಆರಂಭಿಸಿದೆ. ಈವರೆಗೂ ಇಂತಹ ಮೂರು albums launch ಮಾಡಲಾಗಿದೆ. ಇವರು ಜಾನಪದ-ಸಂಗೀತ, ಜಾನಪದ ನೃತ್ಯ ಸಂಬಂಧಿತ ಕಾರ್ಯಾಗಾರಗಳನ್ನು ಕೂಡಾ ಆಯೋಜಿಸುತ್ತಾರೆ. ಯುವಜನತೆಗೆ ಇವುಗಳೆಲ್ಲದರ ಕುರಿತ ತರಬೇತಿಯನ್ನು ಕೂಡಾ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶೈಲಿಯ ಉಡುಪು ತಯಾರಿಕೆ, ಹೊಲಿಗೆ, ಕಸೂತಿಯಂತಹ ಕೆಲಸಗಳ ಬಗ್ಗೆ ಕೂಡಾ ಯುವಜನತೆಗೆ ತರಬೇತಿ ನೀಡಲಾಗುತ್ತದೆ. ಈಶಾನ್ಯದಲ್ಲಿ ಬಿದಿರಿನಿಂದ ಅದೆಷ್ಟೋ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೊಸ ಪೀಳಿಗೆಯ ಯುವಜನತೆಗೆ ಬಿದಿರಿನ ಉತ್ಪನ್ನಗಳ ತಯಾರಿಕೆ ಬಗ್ಗೆ ಕೂಡಾ ಕಲಿಸಲಾಗುತ್ತದೆ. ಇವುಗಳಿಂದಾಗಿ ಈ ಯುವಜನತೆಗೆ ತಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಬರುವುದರೊಂದಿಗೆ, ಅವರುಗಳಿಗೆ ಉದ್ಯೋಗಕ್ಕಾಗಿ ಹೊಸ ಹೊಸ ಅವಕಾಶಗಳು ಕೂಡಾ ತೆರೆದುಕೊಳ್ಳುತ್ತವೆ. ನಾಗಾ ಜಾನಪದ ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಯುವಂತೆ ಮಾಡಲು ಕೂಡಾ ‘ಲಿಡಿ-ಕ್ರೋ-ಯೂ’  ಸಂಸ್ಥೆಯ ಜನರು ಪ್ರಯತ್ನಿಸುತ್ತಿದ್ದಾರೆ. 

ಸ್ನೇಹಿತರೇ, ನೀವಿರುವ ಪ್ರದೇಶದಲ್ಲಿ ಕೂಡಾ ಇಂತಹ ಸಾಂಸ್ಕೃತಿಕ ಪ್ರಕಾರಗಳು ಮತ್ತು ಸಂಪ್ರದಾಯಗಳು ಇರಬಹುದು. ನೀವು ಕೂಡಾ ನಿಮ್ಮ ನಿಮ್ಮ ಪ್ರದೇಶಗಳಲ್ಲಿ ಇಂತಹ ಪ್ರಯತ್ನಗಳನ್ನು ಮಾಡಬಹುದು. ಇಂತಹ ವಿಶಿಷ್ಠ ಪ್ರಯತ್ನ ನಡೆದಿರುವ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಅಂತಹ ಪ್ರಯತ್ನದ ಬಗ್ಗೆ ನನ್ನೊಂದಿಗೆ ಖಂಡಿತಾ ಹಂಚಿಕೊಳ್ಳಿ. 

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆಂದು ಹೇಳಲಾಗುತ್ತದೆ -
 ವಿದ್ಯಾದಾನಂ ಸರ್ವಧನಪ್ರಧಾನಂ
(विद्याधनं सर्वधनप्रधानम् )
ಅಂದರೆ, ಯಾರಾದರೂ ವಿದ್ಯಾದಾನ ಮಾಡುತ್ತಿದ್ದಾರೆಂದರೆ, ಅವರು ಸಮಾಜದ ಹಿತಾಸಕ್ತಿಯಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿದ್ದಾರೆಂದರ್ಥ. ಶಿಕ್ಷಣ ಕ್ಷೇತ್ರದಲ್ಲಿ ಬೆಳಗಿಸಲಾದ ಒಂದು ಚಿಕ್ಕ ದೀಪ ಕೂಡಾ ಇಡೀ ಸಮಾಜವನ್ನು ಬೆಳಕಾಗಿಸಬಲ್ಲದು. ದೇಶಾದ್ಯಂತ ಇಂತಹ ಅನೇಕ ಪ್ರಯತ್ನಗಳು ನಡೆಯುತ್ತಿರುವುದನ್ನು ಕಂಡು ನನಗೆ ಬಹಳ ಸಂತೋಷವಾಗುತ್ತಿದೆ. ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 70-80 ಕಿಲೋಮೀಟರ್ ದೂರದಲ್ಲಿ ಹರ್ದೋಯಿಯಲ್ಲಿರುವ ಒಂದು ಗ್ರಾಮ ಬಾಂಸಾ. ಶಿಕ್ಷಣದ ಬೆಳಕನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿರುವ ಈ ಗ್ರಾಮದ ಜತಿನ್ ಲಲಿತ್ ಸಿಂಗ್ ಅವರ ಬಗ್ಗೆ ನನಗೆ ತಿಳಿದುಬಂತು.  ಜತಿನ್ ಅವರು ಎರಡು ವರ್ಷಗಳ ಹಿಂದೆ ಇಲ್ಲಿ ‘ಸಮುದಾಯ ಗ್ರಂಥಾಲಯ ಮತ್ತು ಸಂಪನ್ಮೂಲ ಕೇಂದ್ರ’ (‘Community Library and Resource Centre’) ಪ್ರಾರಂಭಿಸಿದರು. ಅವರ ಈ ಕೇಂದ್ರದಲ್ಲಿ ಹಿಂದಿ ಮತ್ತು ಆಂಗ್ಲ ಸಾಹಿತ್ಯ, ಕಂಪ್ಯೂಟರ್, ಕಾನೂನು ಮತ್ತು ಅನೇಕ ಸರ್ಕಾರಿ ಪರೀಕ್ಷೆಗಳ ಸಿದ್ಧತೆಗೆ ಸಂಬಂಧಿಸಿದ 3000 ಕ್ಕಿಂತಲೂ ಹೆಚ್ಚು ಪುಸ್ತಕಗಳಿವೆ. ಈ ಗ್ರಂಥಾಲಯಲ್ಲಿ ಮಕ್ಕಳ ಇಷ್ಟಗಳ ಬಗ್ಗೆ ಕೂಡಾ ಗಮನ ಹರಿಸಲಾಗಿದೆ. ಇಲ್ಲಿ ಲಭ್ಯವಿರುವ ಕಾಮಿಕ್ಸ್ ಪುಸ್ತಕಗಳೇ ಆಗಲಿ ಅಥವಾ ಶಿಕ್ಷಣ ಸಂಬಂಧಿತ ಆಟಿಕೆಗಳೇ ಆಗಲಿ, ಮಕ್ಕಳು ಬಹಳ ಇಷ್ಟಪಡುತ್ತಾರೆ. ಸಣ್ಣ ಮಕ್ಕಳು ಆಟವಾಡುತ್ತಲೇ ಹೊಸ ಹೊಸ ವಿಷಯಗಳನ್ನು ಕಲಿಯಲು ಇಲ್ಲಿಗೆ ಬರುತ್ತಾರೆ. ಶಿಕ್ಷಣ Offline ಆಗಿರಲಿ ಅಥವಾ Online ಆಗಿರಲಿ, ಸುಮಾರು 40 ಸ್ವಯಂಸೇವಕರು ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ತೊಡಗಿಕೊಂಡಿರುತ್ತಾರೆ. ಪ್ರತಿದಿನ ಗ್ರಾಮದ ಸುಮಾರು 80 ವಿದ್ಯಾರ್ಥಿಗಳು ಓದುವುದಕ್ಕಾಗಿ ಈ ಗ್ರಂಥಾಲಯಕ್ಕೆ ಬರುತ್ತಾರೆ. 

ಸ್ನೇಹಿತರೇ, ಝಾರ್ಖಂಡ್ ನಿವಾಸಿ ಸಂಜಯ್ ಕಶ್ಯಪ್ ಅವರು ಕೂಡಾ ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆಗಳನ್ನು ನೀಡುತ್ತಿದ್ದಾರೆ. ಸಂಜಯ್ ಅವರು ತಮ್ಮ ವಿದ್ಯಾರ್ಥಿ ಜೀವನಕಾಲದಲ್ಲಿ ಉತ್ತಮ ಪುಸ್ತಕಗಳ ಕೊರತೆಯನ್ನು ಎದುರಿಸಿದ್ದರು. ಪುಸ್ತಕಗಳ ಕೊರತೆಯಿಂದಾಗಿ ತಮ್ಮ ಪ್ರದೇಶದ ಮಕ್ಕಳ ಭವಿಷ್ಯ ಅಂಧಕಾರಮಯವಾಗಲು ಬಿಡುವುದಿಲ್ಲವೆಂದು ನಿರ್ಧರಿಸಿದ ಅವರು, ಈಗ ಝಾರ್ಖಂಡ್ ನಲ್ಲಿ ‘Library Man’ ಆಗಿಬಿಟ್ಟಿದ್ದಾರೆ. ಸಂಜಯ್ ಅವರು ತಮ್ಮ ವೃತ್ತಿಜೀವನ ಆರಂಭಿಸಿದಾಗ, ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ತಮ್ಮ ಮೊದಲ ಗ್ರಂಥಾಲಯವನ್ನು ಸ್ಥಾಪಿಸಿದರು.  ಉದ್ಯೋಗದ ನಿಮಿತ್ತ ಅವರಿಗೆ ಯಾವುದೇ ಸ್ಥಳಕ್ಕೆ ವರ್ಗಾವಣೆಯಾದರೂ, ಅಲ್ಲಿ ಅವರು ಬಡ ಮತ್ತು ಆದಿವಾಸಿ ಮಕ್ಕಳ ಓದಿಗಾಗಿ, ಗ್ರಂಥಾಲಯ ತೆರೆಯುವ ಅಭಿಯಾನದೊಂದಿಗೆ ಸೇರಿಕೊಳ್ಳುತ್ತಿದ್ದರು. ಈ ರೀತಿ ಮಾಡುತ್ತಾ ಅವರು ಝಾರ್ಖಂಡ್ ನ ಅನೇಕ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಗ್ರಂಥಾಲಯ ತೆರೆದಿದ್ದಾರೆ. ಗ್ರಂಥಾಲಯ ಸ್ಥಾಪಿಸುವ ಅವರ ಈ ಅಭಿಯಾನ  ಇಂದು ಒಂದು ಸಾಮಾಜಿಕ ಆಂದೋಲನದ ರೂಪ ತಾಳುತ್ತಿದೆ.  ಸಂಜಯ್, ಜತಿನ್ ಅವರಂತಹ ಇಂತಹ ಪ್ರಯತ್ನಗಳಿಗಾಗಿ ಅವರನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ವೈದ್ಯಕೀಯ ವಿಜ್ಞಾನ (Medical science) ಪ್ರಪಂಚವು ಸಂಶೋಧನೆ ಮತ್ತು ಆವಿಷ್ಕಾರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಸಾಕಷ್ಟು ಪ್ರಗತಿ ಸಾಧಿಸಿದೆ ಆದರೆ, ಕೆಲವು ರೋಗಗಳು ಇಂದಿಗೂ ನಮಗೆ ಬಹು ದೊಡ್ಡ ಸವಾಲಾಗಿ ಉಳಿದಿದೆ. ಇಂತಹ ಒಂದು ರೋಗವೇ Muscular Dystrophy! ಇದು ಮುಖ್ಯವಾಗಿ ಒಂದು ಅನುವಂಶೀಯ ರೋಗವಾಗಿದ್ದು, ಯಾವುದೇ ವಯಸ್ಸಿನಲ್ಲಾದರೂ ಉಂಟಾಗಬಹುದು, ಇದರಲ್ಲಿ ಶರೀರದ ಸ್ನಾಯುಗಳು ದುರ್ಬಲವಾಗತೊಡಗುತ್ತವೆ. ರೋಗಿಗೆ ದಿನನಿತ್ಯದ ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ಕೂಡಾ ಕಷ್ಟವಾಗಿಬಿಡುತ್ತದೆ, ಇಂತಹ ರೋಗಿಗಳ ಚಿಕಿತ್ಸೆ ಮತ್ತು ಅವರಿಗೆ ಆರೈಕೆ ಮಾಡಲು ಸೇವಾ ಭಾವನೆ ಮುಖ್ಯವಾಗಿ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಇಂತಹ ಒಂದು ಕೇಂದ್ರವಿದೆ, ಈ ಕೇಂದ್ರವು Muscular Dystrophy ರೋಗಿಗಳಿಗೆ ಒಂದು ಭರವಸೆಯ ಕಿರಣವಾಗಿ ಹೊರಹೊಮ್ಮಿದೆ. ಈ ಕೇಂದ್ರದ ಹೆಸರು – ಮಾನವ್ ಮಂದಿರ್ ಎಂದಾಗಿದೆ, ಇದನ್ನು Indian Association Of Muscular Dystrophy ನಡೆಸುತ್ತಿದೆ. ಮಾನವ್ ಮಂದಿರ್ ಎನ್ನುವುದು ಹೆಸರಿನಂತೆಯೇ ಮಾನವ ಸೇವೆಯ ಒಂದು ಅದ್ಭುತ ಉದಾಹರಣೆಯಾಗಿದೆ. ಇಲ್ಲಿ ರೋಗಿಗಳಿಗಾಗಿ ಹೊರರೋಗಿ ವಿಭಾಗ (OPD) ಮತ್ತು ದಾಖಲಾತಿ (admission) ಸೇವೆಗಳು ಮೂರ್ನಾಲ್ಕು ವರ್ಷಗಳ ಹಿಂದೆಯೇ ಆರಂಭವಾಗಿದೆ. ಮಾನವ್ ಮಂದಿರ್ ನಲ್ಲಿ ಸುಮಾರು 50 ರೋಗಿಗಳಿಗಾಗಿ ಹಾಸಿಗೆಗಳ ಸೌಲಭ್ಯವೂ ಇದೆ. Physiotherapy, Electrotherapy, ಮತ್ತು Hydrotherapy ಮಾತ್ರವಲ್ಲದೇ, ಯೋಗ-ಪ್ರಾಣಾಯಾಮದ ನೆರವಿನಿಂದ ಕೂಡಾ ಇಲ್ಲಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. 
  ಸ್ನೇಹಿತರೆ, ಪ್ರತಿಯೊಂದು ರೀತಿಯ ಹೈ ಟೆಕ್ ಸೌಲಭ್ಯಗಳ ಮೂಲಕ ಈ ಕೇಂದ್ರದಲ್ಲಿ ರೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವೂ ನಡೆಯುತ್ತದೆ. Muscular Dystrophy ಯೊಂದಿಗೆ ಇರುವ ಒಂದು ಸವಾಲೆಂದರೆ ಅದರ ಕುರಿತಾಗಿನ ತಿಳುವಳಿಕೆಯ ಅಭಾವ. ಆದ್ದರಿಂದಲೇ ಈ ಕೇಂದ್ರವು ಕೇವಲ ಹಿಮಾಚಲ ಪ್ರದೇಶ ಮಾತ್ರವಲ್ಲದೇ, ದೇಶಾದ್ಯಂತ ರೋಗಿಗಳಿಗಾಗಿ ಜಾಗೃತಿ ಶಿಬಿರಗಳನ್ನು ಕೂಡಾ ಆಯೋಜಿಸುತ್ತದೆ. ಅತ್ಯಂತ ಪ್ರೋತ್ಸಾಹದಾಯಕ ವಿಷಯವೆಂದರೆ, ಈ ಸಂಸ್ಥೆಯನ್ನು ಮುಖ್ಯವಾಗಿ ರೋಗಪೀಡಿತ ವ್ಯಕ್ತಿಗಳೇ ನಿರ್ವಹಿಸುತ್ತಿದ್ದಾರೆ, ಸಾಮಾಜಿಕ ಕಾರ್ಯಕರ್ತೆ ಊರ್ಮಿಳಾ ಬಾಲ್ದೀ ಅವರು, Indian Association Of Muscular Dystrophy ಸಂಘಟನೆಯ ಅಧ್ಯಕ್ಷರಾದ  ಸಂಜನಾ ಗೋಯಲ್ ಮತ್ತು ಈ Association ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಸಿರುವ  ಶ್ರೀ ವಿಪುಲ್ ಗೋಯಲ್ ಅವರುಗಳು ಈ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾನವ್ ಮಂದಿರವನ್ನು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ. ಇದರಿಂದಾಗಿ ಇಲ್ಲಿ ರೋಗಿಗಳಿಗೆ ಮತ್ತಷ್ಟು ಉತ್ತಮವಾದ ಚಿಕಿತ್ಸೆ ದೊರೆಯಬಹುದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಹಾಗೆಯೇ Muscular Dystrophy ಎದುರಿಸುತ್ತಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತಿನಲ್ಲಿ ನಾವು ದೇಶವಾಸಿಗಳ ಕುರಿತು ಯಾವ ಸೃಜನಾತ್ಮಕ ಮತ್ತು ಸಾಮಾಜಿಕ ಕೆಲಸಕಾರ್ಯಗಳ ಬಗ್ಗೆ ಮಾತನಾಡಿದೆವೋ, ಅವುಗಳೆಲ್ಲವೂ ದೇಶದ ಶಕ್ತಿ ಮತ್ತು ಉತ್ಸಾಹದ ಉದಾಹರಣೆಗಳಾಗಿವೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ, ಪ್ರತಿಯೊಂದು ಹಂತದಲ್ಲಿ, ದೇಶಕ್ಕಾಗಿ ಏನಾದರೊಂದು ವಿಭಿನ್ನರೀತಿಯ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.  ಇಂದಿನ ಮಾತುಕತೆಯಲ್ಲಿ, ಜಿ-20 ಶೃಂಗಸಭೆಯಂತಹ ಉದ್ದೇಶದಲ್ಲಿ ನಮ್ಮ ಓರ್ವ ನೇಕಾರ ಸೋದರರೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು, ಅದನ್ನು ನಿಭಾಯಿಸಲು ಮುಂದೆ ಬಂದಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಇದೇ ರೀತಿ, ಪರಿಸರಕ್ಕಾಗಿ ಪ್ರಯತ್ನ ಪಡುತ್ತಿರುವುದು ಕೆಲವರಾದರೆ, ನೀರಿಗಾಗಿ ಮತ್ತೆ ಕೆಲವರು ಕೆಲಸ ನಿರ್ವಹಿಸುತ್ತಿದ್ದಾರೆ, ಎಷ್ಟೊಂದು ಜನರು ಶಿಕ್ಷಣ, ಚಿಕಿತ್ಸೆ, ಮತ್ತು ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು, ಸಂಸ್ಕೃತಿ-ಪರಂಪರೆಯವರೆಗೂ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಇಂದು ನಮ್ಮ ಪ್ರತಿಯೊಬ್ಬ ನಾಗರಿಕನೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಇಂತಹ ಕರ್ತವ್ಯ ನಿರ್ವಹಣೆಯ ಭಾವನೆ ದೇಶದ ಯಾವುದೇ ನಾಗರಿಕನ ಮನಸ್ಸಿನಲ್ಲಿ ಮೂಡಿದಾಗ, ಆ ದೇಶದ ಸುವರ್ಣ ಭವಿಷ್ಯ ತಾನಾಗಿಯೇ ನಿರ್ಧಾರವಾಗಿಬಿಡುತ್ತದೆ ಮತ್ತು ದೇಶದ ಸುವರ್ಣ ಭವಿಷ್ಯದಲ್ಲಿಯೇ ನಮ್ಮೆಲ್ಲರ ಸುವರ್ಣ ಭವಿಷ್ಯವೂ ಅಡಗಿದೆ. 

ನಾನು, ಮತ್ತೊಮ್ಮೆ ದೇಶವಾಸಿಗಳಿಗೆ ಅವರ ಪ್ರಯತ್ನಗಳಿಗಾಗಿ ನಮಿಸುತ್ತೇನೆ. ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾಗೋಣ ಮತ್ತು ಇಂತಹ ಅನೇಕ ಉತ್ಸಾಹ ಹೆಚ್ಚಿಸುವ ವಿಷಯಗಳ ಬಗ್ಗೆ ಖಂಡಿತವಾಗಿಯೂ ಮಾತನಾಡೋಣ. ನಿಮ್ಮ ಸಲಹೆ ಮತ್ತು ಚಿಂತನೆಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ. ನಿಮಗೆಲ್ಲರಿಗೂ ಅನೇಕಾನೇಕ ಧನ್ಯವಾದಗಳು. 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
With HPV vaccine rollout, AIIMS oncologist says it’s the beginning of the end for cervical cancer in India

Media Coverage

With HPV vaccine rollout, AIIMS oncologist says it’s the beginning of the end for cervical cancer in India
NM on the go

Nm on the go

Always be the first to hear from the PM. Get the App Now!
...
Prime Minister congratulates Jammu and Kashmir team on their first-ever Ranji Trophy victory
February 28, 2026

The Prime Minister has congratulated the Jammu and Kashmir team for their first-ever Ranji Trophy win.

The Prime Minister stated that this historic triumph reflects the remarkable grit, discipline, and passion of the team. Highlighting that it is a proud moment for the people of Jammu and Kashmir, he noted that the victory underscores the growing sporting passion and talent in the region.

The Prime Minister expressed hope that this feat will inspire many young athletes to dream big and play more.

The Prime Minister shared on X post;

"Congratulations to the Jammu and Kashmir team for their first ever Ranji Trophy win! This historic triumph reflects remarkable grit, discipline and passion of the team. It is a proud moment for the people of Jammu and Kashmir and it highlights the growing sporting passion and talent there. May this feat inspire many young athletes to dream big and play more."