ಕೇಂದ್ರ ಮತ್ತು ರಾಜ್ಯದಲ್ಲಿರುವ ನಮ್ಮ ಸರ್ಕಾರ ಒಡಿಶಾದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬದ್ಧವಾಗಿದೆ: ಪ್ರಧಾನಮಂತ್ರಿ
ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ: ಪ್ರಧಾನಮಂತ್ರಿ
ಕೇಂದ್ರ ಸರ್ಕಾರ ಇತ್ತೀಚೆಗೆ ಒಡಿಶಾಗೆ ಎರಡು ಸೆಮಿಕಂಡಕ್ಟರ್ ಘಟಕಗಳನ್ನು ಅನುಮೋದಿಸಿದೆ: ಪ್ರಧಾನಮಂತ್ರಿ
ಸ್ವಾವಲಂಬನೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ, ಬಿಎಸ್ಎನ್ಎಲ್ ಸಂಪೂರ್ಣವಾಗಿ ದೇಶೀಯ 4ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, 4ಜಿ ಸೇವೆಗಳನ್ನು ಪ್ರಾರಂಭಿಸಲು ಸಂಪೂರ್ಣ ದೇಶೀಯ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಅಗ್ರ ಐದು ದೇಶಗಳಲ್ಲಿ ಭಾರತ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಗಣ್ಯರಿಗೆ ಗೌರವಯುತ ಶುಭಾಶಯಗಳನ್ನು ಸಲ್ಲಿಸಿದರು. ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿರುವುದನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಈ ಶುಭ ದಿನಗಳಲ್ಲಿ ಮಾ ಸಮಲೈ ಮತ್ತು ಮಾ ರಾಮಚಂಡಿಯ ಪವಿತ್ರ ಭೂಮಿಗೆ ಭೇಟಿ ನೀಡಿ ಅಲ್ಲಿ ನೆರೆದಿದ್ದ ಜನರನ್ನು ಭೇಟಿ ಮಾಡುವ ಅದೃಷ್ಟ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಇರುವುದನ್ನು ಗಮನಿಸಿದ ಪ್ರಧಾನಮಂತ್ರಿ, ಅವರ ಆಶೀರ್ವಾದವೇ ನಿಜವಾದ ಶಕ್ತಿಯ ಮೂಲ ಎಂದು ಹೇಳಿದರು, ಜನರಿಗೆ ನಮನಗಳನ್ನು ಅರ್ಪಿಸಿದರು.

ಒಂದೂವರೆ ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಒಡಿಶಾದ ಜನರು ಅಭಿವೃದ್ಧಿ ಹೊಂದಿದ ಒಡಿಶಾ ಕಡೆಗೆ ಹೊಸ ಬದ್ಧತೆಯೊಂದಿಗೆ ಮುಂದುವರಿಯಲು ಸಂಕಲ್ಪ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, ಇಂದು ಒಡಿಶಾ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳ ವೇಗದೊಂದಿಗೆ ತ್ವರಿತವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಗಮನಿಸಿದರು. ಒಡಿಶಾ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು. ಶ್ರೀ ಮೋದಿ ಬಿಎಸ್‌ಎನ್‌ಎಲ್‌ನ ಹೊಸ ಅವತಾರವನ್ನು ಅನಾವರಣಗೊಳಿಸಿದರು, ಇದು ಅದರ ಸ್ಥಳೀಯ 4G ಸೇವೆಗಳ ಪ್ರಾರಂಭವನ್ನು ಗುರುತಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಐಐಟಿಗಳ ವಿಸ್ತರಣೆಯೂ ಇಂದು ಪ್ರಾರಂಭವಾಗುತ್ತಿದೆ ಎಂದು ಅವರು ಹೇಳಿದರು. ಇದಲ್ಲದೆ, ಅವರು ಒಡಿಶಾದಲ್ಲಿ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಎತ್ತಿ ತೋರಿಸಿದರು. ಜನರಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತಿರುವುದನ್ನು ಒತ್ತಿ ಹೇಳುತ್ತಾ, ಬೆರ್ಹಾಂಪುರದಿಂದ ಸೂರತ್‌ಗೆ ಆಧುನಿಕ ಅಮೃತ್ ಭಾರತ್ ರೈಲಿಗೆ ಅವರು ಹಸಿರು ನಿಶಾನೆ ತೋರಿದರು. ಗುಜರಾತ್‌ನ ಸೂರತ್‌ನಿಂದ ವರ್ಚುವಲ್ ಆಗಿ ಸಂಪರ್ಕ ಸಾಧಿಸಿದ್ದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಯನ್ನು ಶ್ರೀ ಮೋದಿ ಗುರುತಿಸಿದರು. ಈ ಎಲ್ಲಾ ಅಭಿವೃದ್ಧಿ ಉಪಕ್ರಮಗಳಿಗಾಗಿ ಅವರು ಒಡಿಶಾದ ಜನರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

 

"ನಮ್ಮ ಸರ್ಕಾರ ಬಡವರಿಗೆ ಸೇವೆ ಸಲ್ಲಿಸಲು ಮತ್ತು ಸಬಲೀಕರಣಗೊಳಿಸಲು ಬದ್ಧವಾಗಿದೆ, ಮತ್ತು ದಲಿತರು, ಹಿಂದುಳಿದ ವರ್ಗಗಳು ಹಾಗು ಬುಡಕಟ್ಟು ಸಮುದಾಯಗಳು ಸೇರಿದಂತೆ ಹಿಂದುಳಿದವರಿಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸುವತ್ತ ನಮ್ಮ ಗಮನವಿದೆ" ಎಂದು ಪ್ರಧಾನಿ ಹೇಳಿದರು. ಇಂದಿನ ಕಾರ್ಯಕ್ರಮವು ಈ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಗಮನಿಸಿದರು. ಅಂತ್ಯೋದಯ ಗೃಹ ಯೋಜನೆಯಡಿ ಫಲಾನುಭವಿಗಳಿಗೆ ಅನುಮೋದನೆ ಪತ್ರಗಳನ್ನು ಹಸ್ತಾಂತರಿಸುವ ಅವಕಾಶ ಸಿಕ್ಕಿದೆ ಎಂದು ಶ್ರೀ ಮೋದಿ ಮಾಹಿತಿ ಹಂಚಿಕೊಂಡರು. ಬಡ ಕುಟುಂಬವೊಂದು ಪಕ್ಕಾ ಮನೆಯನ್ನು ಪಡೆದಾಗ, ಅದು ಅವರ ವರ್ತಮಾನವನ್ನು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನೂ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಈಗಾಗಲೇ ದೇಶಾದ್ಯಂತ ಬಡ ಕುಟುಂಬಗಳಿಗೆ ನಾಲ್ಕು ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ಒದಗಿಸಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಒಡಿಶಾದಲ್ಲಿ ಸಾವಿರಾರು ಮನೆಗಳನ್ನು ತ್ವರಿತಗತಿಯಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಮುಖ್ಯಮಂತ್ರಿ ಶ್ರೀ ಮೋಹನ್ ಮಾಝಿ ಮತ್ತು ಅವರ ತಂಡವನ್ನು ಅವರ ಶ್ಲಾಘನೀಯ ಪ್ರಯತ್ನಗಳಿಗಾಗಿ ಕೊಂಡಾಡಿದರು. ಇಂದು ಸುಮಾರು ಐವತ್ತು ಸಾವಿರ ಕುಟುಂಬಗಳಿಗೆ ಹೊಸ ಮನೆಗಳಿಗೆ ಅನುಮೋದನೆ ದೊರೆತಿದೆ ಎಂದು ಪ್ರಧಾನಿ ಘೋಷಿಸಿದರು. ಪ್ರಧಾನಮಂತ್ರಿ ಜನಮಾನ್ ಯೋಜನೆಯಡಿಯಲ್ಲಿ, ಒಡಿಶಾದಲ್ಲಿ ಬುಡಕಟ್ಟು ಕುಟುಂಬಗಳಿಗೆ ನಲವತ್ತು ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ, ಇದು ಅವರಲ್ಲಿ ಅತ್ಯಂತ ಹಿಂದುಳಿದವರ ಪ್ರಮುಖ ಆಕಾಂಕ್ಷೆಯನ್ನು ಈಡೇರಿಸುತ್ತದೆ ಎಂದರು. ಅವರು ಎಲ್ಲಾ ಫಲಾನುಭವಿ ಕುಟುಂಬಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಒಡಿಶಾದ ಜನರ ಸಾಮರ್ಥ್ಯ ಮತ್ತು ಪ್ರತಿಭೆಯ ಬಗ್ಗೆ ತಮ್ಮ ನಿರಂತರ ನಂಬಿಕೆಯನ್ನು ವ್ಯಕ್ತಪಡಿಸಿದ ಪ್ರಧಾನಿ, ಪ್ರಕೃತಿಯು ಒಡಿಶಾವನ್ನು ಹೇರಳವಾಗಿ ಆಶೀರ್ವದಿಸಿದೆ ಎಂದು ಹೇಳಿದರು. ಒಡಿಶಾ ದಶಕಗಳ ಬಡತನವನ್ನು ಸಹಿಸಿಕೊಂಡಿದೆ ಎಂದು ಒಪ್ಪಿಕೊಂಡ ಅವರು, ಮುಂಬರುವ ದಶಕವು ಜನರಿಗೆ ಸಮೃದ್ಧಿಯನ್ನು ತರುತ್ತದೆ ಎಂದು ದೃಢಪಡಿಸಿದರು. ಇದನ್ನು ಸಾಧಿಸಲು, ಸರ್ಕಾರವು ರಾಜ್ಯಕ್ಕೆ ಪ್ರಮುಖ ಯೋಜನೆಗಳನ್ನು ತರುತ್ತಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಒಡಿಶಾಗೆ ಎರಡು ಸೆಮಿಕಂಡಕ್ಟರ್ ಘಟಕಗಳನ್ನು ಅನುಮೋದಿಸಿದೆ ಮತ್ತು ಒಡಿಶಾದ ಯುವಜನರ ಶಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸಿ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲಾಗುವುದು ಎಂದೂ ಅವರು ಘೋಷಿಸಿದರು. ಫೋನ್‌ಗಳು, ಟೆಲಿವಿಷನ್‌ಗಳು, ರೆಫ್ರಿಜರೇಟರ್‌ಗಳು, ಕಂಪ್ಯೂಟರ್‌ಗಳು, ಕಾರುಗಳು ಮತ್ತು ಇತರ ಹಲವು ಸಾಧನಗಳಲ್ಲಿ ಬಳಸುವ ಸಣ್ಣ ಚಿಪ್ ಅನ್ನು ಒಡಿಶಾದಲ್ಲಿ ತಯಾರಿಸುವ ಭವಿಷ್ಯವನ್ನು ಶ್ರೀ ಮೋದಿ ಕಲ್ಪಿಸಿಕೊಂಡರು.

ಚಿಪ್ ಗಳಿಂದ ಹಡಗುಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು. ಪಾರಾದೀಪ್ ನಿಂದ ಜಾರ್ಸುಗುಡದವರೆಗೆ ವಿಶಾಲವಾದ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಹಡಗು ನಿರ್ಮಾಣದ ವ್ಯೂಹಾತ್ಮಕ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳಿದ ಅವರು, ಆರ್ಥಿಕ ಬಲವನ್ನು ಬಯಸುವ ಯಾವುದೇ ರಾಷ್ಟ್ರವು ಈ ವಲಯದಲ್ಲಿ ಹೂಡಿಕೆ ಮಾಡಬೇಕು, ಏಕೆಂದರೆ ಇದು ವ್ಯಾಪಾರ, ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ನುಡಿದರು. ದೇಶೀಯ ಹಡಗುಗಳನ್ನು ಹೊಂದಿರುವುದರಿಂದ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲೂ ಸಹ ನಿರಂತರ ಆಮದು-ರಫ್ತು ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಿದೆ ಎಂದು ಶ್ರೀ ಮೋದಿ ವಿವರಿಸಿದರು. ಪ್ರಧಾನ ಮಂತ್ರಿಗಳು ತಮ್ಮ ಸರ್ಕಾರದಿಂದ ಒಂದು ಪ್ರಮುಖ ಉಪಕ್ರಮವನ್ನು ಘೋಷಿಸಿದರು – ಅದು ಭಾರತದಲ್ಲಿ ಹಡಗು ನಿರ್ಮಾಣಕ್ಕಾಗಿ ₹70,000 ಕೋಟಿ ಪ್ಯಾಕೇಜ್. ಇದು ₹4.5 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುತ್ತದೆ, ಉಕ್ಕು, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳನ್ನು ತಲುಪುತ್ತದೆ, ವಿಶೇಷವಾಗಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಅಂದಾಜಿಸಿದರು. ಇದು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಒಡಿಶಾದ ಕೈಗಾರಿಕೆಗಳು ಮತ್ತು ಯುವಜನರಿಗೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ ಎಂದು ಅವರು ಎತ್ತಿ ತೋರಿಸಿದರು.

 

"ಭಾರತ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ" ಎಂದು ಶ್ರೀ ಮೋದಿ ಅವರು ಉದ್ಗರಿಸಿದರು, 2G, 3G, ಮತ್ತು 4G ನಂತಹ ದೂರಸಂಪರ್ಕ ಸೇವೆಗಳನ್ನು ಜಾಗತಿಕವಾಗಿ ಪರಿಚಯಿಸಿದಾಗ, ಭಾರತ ಹಿಂದುಳಿದಿತ್ತು ಮತ್ತು ಈ ಸೇವೆಗಳಿಗಾಗಿ ವಿದೇಶಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿತ್ತು ಎಂದು ನೆನಪಿಸಿಕೊಂಡರು. ಅಂತಹ ಪರಿಸ್ಥಿತಿ ದೇಶಕ್ಕೆ ಸೂಕ್ತವಲ್ಲ ಎಂದು ಅವರು ಒತ್ತಿ ಹೇಳಿದರು, ಇದು ಅಗತ್ಯ ದೂರಸಂಪರ್ಕ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ರಾಷ್ಟ್ರೀಯ ಸಂಕಲ್ಪಕ್ಕೆ ಕಾರಣವಾಯಿತು. ಭಾರತದೊಳಗೆ ಬಿಎಸ್ಎನ್ಎಲ್ ಸಂಪೂರ್ಣವಾಗಿ ದೇಶೀಯ 4G ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು. ಈ ಮೈಲಿಗಲ್ಲನ್ನು ಸೃಷ್ಟಿಸುವಲ್ಲಿ ಬಿಎಸ್ಎನ್ಎಲ್ ನ ಸಮರ್ಪಣೆ, ಪರಿಶ್ರಮ ಮತ್ತು ಪರಿಣತಿಯನ್ನು ಅವರು ಶ್ಲಾಘಿಸಿದರು. 4G ಸೇವೆಗಳನ್ನು ಪ್ರಾರಂಭಿಸಲು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಆಯ್ದ ಐದು ದೇಶಗಳಲ್ಲಿ ಈಗ ಭಾರತವು  ಸ್ಥಾನ ಪಡೆಯುವಂತೆ ಭಾರತೀಯ ಕಂಪೆನಿಗಳು ಮಾಡಿವೆ  ಎಂದು ಅವರು ಮತ್ತಷ್ಟು ವಿವರಿಸಿದರು.

ಬಿಎಸ್ಎನ್ಎಲ್ ಇಂದು ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಕಾಕತಾಳೀಯ ಸಂಗತಿಯನ್ನು ಪ್ರಧಾನಿ ಗಮನಿಸಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಬಿಎಸ್ಎನ್ಎಲ್ ಮತ್ತು ಅದರ ಪಾಲುದಾರರ ಸಮರ್ಪಿತ ಪ್ರಯತ್ನಗಳ ಮೂಲಕ ಭಾರತವು ಜಾಗತಿಕ ದೂರಸಂಪರ್ಕ ಉತ್ಪಾದನಾ ಕೇಂದ್ರವಾಗುವತ್ತ ಮುನ್ನಡೆಯುತ್ತಿದೆ ಎಂದು ಅವರು ಎತ್ತಿ ತೋರಿಸಿದರು. ಸುಮಾರು ಒಂದು ಲಕ್ಷ 4G ಟವರ್‌ಗಳನ್ನು ಒಳಗೊಂಡಿರುವ ಬಿಎಸ್ಎನ್ಎಲ್  ದೇಶೀಯ 4G ನೆಟ್‌ವರ್ಕ್ ಅನ್ನು ಜರ್ಸುಗುಡದಿಂದ ಪ್ರಾರಂಭಿಸಲಾಗುತ್ತಿರುವುದು ಒಡಿಶಾಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಈ ಗೋಪುರಗಳು ದೇಶದ ದೂರದ ಪ್ರದೇಶಗಳಲ್ಲಿ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಲಿವೆ. 4G ತಂತ್ರಜ್ಞಾನದ ವಿಸ್ತರಣೆಯು ದೇಶಾದ್ಯಂತ ಎರಡು ಕೋಟಿಗೂ ಹೆಚ್ಚು ಜನರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈಗ ಈ ಉಪಕ್ರಮದ ಮೂಲಕ ಈ ಹಿಂದೆ ಹೆಚ್ಚಿನ ವೇಗದ ಇಂಟರ್ನೆಟ್ ಲಭ್ಯ ಇರದ ಸುಮಾರು ಮೂವತ್ತು ಸಾವಿರ ಹಳ್ಳಿಗಳನ್ನು ಜೋಡಿಸಲಾಗುವುದು ಎಂದು ಅವರು ಹೇಳಿದರು.

ಈ ಐತಿಹಾಸಿಕ ದಿನವನ್ನು ವೀಕ್ಷಿಸಲು ಸಾವಿರಾರು ಹಳ್ಳಿಗಳು ವರ್ಚುವಲ್ ಆಗಿ ಸಂಪರ್ಕ ಹೊಂದಿವೆ, ಹೈಸ್ಪೀಡ್ ಇಂಟರ್ನೆಟ್ ಮೂಲಕ ಕೇಳುತ್ತಿವೆ ಮತ್ತು ವೀಕ್ಷಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ಸಂಪರ್ಕ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಅಸ್ಸಾಂನಿಂದ ಸೇರುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು.

 

ಬಿಎಸ್‌ಎನ್‌ಎಲ್‌ನ ಸ್ಥಳೀಯ 4G ಸೇವೆಗಳು ಬುಡಕಟ್ಟು ಪ್ರದೇಶಗಳು, ದೂರದ ಹಳ್ಳಿಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಪ್ರದೇಶಗಳ ಜನರು ಈಗ ಗುಣಮಟ್ಟದ ಡಿಜಿಟಲ್ ಸೇವೆಗಳನ್ನು ಪಡೆಯುತ್ತಾರೆ ಎಂದು ದೃಢಪಡಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ, ದೂರದ ಸ್ಥಳಗಳ ರೈತರು ಬೆಳೆ ಬೆಲೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಮತ್ತು ರೋಗಿಗಳು ಟೆಲಿಮೆಡಿಸಿನ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಸುಲಭವಾಗುತ್ತದೆ. ಈ ಉಪಕ್ರಮವು ನಮ್ಮ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಹ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ವರ್ಧಿತ ಸಂಪರ್ಕದ ಮೂಲಕ ಸುರಕ್ಷಿತವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.

ಭಾರತವು ಈಗಾಗಲೇ ಅತ್ಯಂತ ವೇಗದ 5G ಸೇವೆಗಳನ್ನು ಪರಿಚಯಿಸಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇಂದು ಉದ್ಘಾಟಿಸಲಾದ ಬಿ.ಎಸ್.ಎನ್.ಎಲ್. ಟವರ್‌ಗಳು 5G ಸೇವೆಗಳನ್ನು ಬೆಂಬಲಿಸಲು ಸಜ್ಜಾಗಿವೆ ಎಂದು ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಅವರು ಬಿ.ಎಸ್.ಎನ್.ಎಲ್. ಮತ್ತು ದೇಶದ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಕೌಶಲ್ಯಪೂರ್ಣ ಯುವಜನರು ಮತ್ತು ಬಲಿಷ್ಠ ಸಂಶೋಧನಾ ಪರಿಸರ ವ್ಯವಸ್ಥೆ ಅತ್ಯಗತ್ಯ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು. ಒಡಿಶಾ ಸೇರಿದಂತೆ ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿರುವುದನ್ನು ಅವರು ಎತ್ತಿ ತೋರಿಸಿದರು. ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳನ್ನು ಆಧುನೀಕರಿಸಲಾಗುತ್ತಿದೆ ಎಂದು ಪ್ರಧಾನಿ ಘೋಷಿಸಿದರು ಮತ್ತು ಈ ಪ್ರಯತ್ನವನ್ನು ಬೆಂಬಲಿಸಲು ಮೆರೈಟ್ (MERITE) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿಯಲ್ಲಿ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಲಾಗುವುದು. ಇದು ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕಾಗಿ ಯುವಜನರು ದೊಡ್ಡ ನಗರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆಯನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು. ಬದಲಾಗಿ, ಅವರು ತಮ್ಮದೇ ಆದ ಪಟ್ಟಣಗಳಲ್ಲಿ ಆಧುನಿಕ ಪ್ರಯೋಗಾಲಯಗಳು, ಜಾಗತಿಕ ಕೌಶಲ್ಯ ತರಬೇತಿ ಮತ್ತು ಆರಂಭಿಕ ಅವಕಾಶಗಳನ್ನು ಪಡೆಯುತ್ತಾರೆ ಎಂದರು.

 

ದೇಶದ ಪ್ರತಿಯೊಂದು ವಲಯ, ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಲು ಅಭೂತಪೂರ್ವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಇದನ್ನು ಸಾಧಿಸಲು ದಾಖಲೆ ಮಟ್ಟದ ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ಎತ್ತಿ ತೋರಿಸಿದರು. ಹಿಂದಿನದನ್ನು ನೆನಪಿಸಿಕೊಂಡ ಅವರು, ಹಿಂದಿನ ಪರಿಸ್ಥಿತಿಯ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ ಎಂದೂ ಹೇಳಿದರು, ವಿರೋಧ ಪಕ್ಷವು ಸಾರ್ವಜನಿಕರನ್ನು ಶೋಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ ಎಂದು ನುಡಿದರು.

2014 ರಲ್ಲಿ, ಜನರು ಸರ್ಕಾರಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ವಹಿಸಿದಾಗ, ತಮ್ಮ ಆಡಳಿತವು ದೇಶವನ್ನು ವಿರೋಧ ಪಕ್ಷದ ಶೋಷಣಾ ವ್ಯವಸ್ಥೆಯಿಂದ ಯಶಸ್ವಿಯಾಗಿ ಮುಕ್ತಗೊಳಿಸಿತು ಎಂದು ಶ್ರೀ ಮೋದಿ ಹೇಳಿದರು. ತಮ್ಮ ಸರ್ಕಾರದ ಅಡಿಯಲ್ಲಿ, ಡಬಲ್ ಉಳಿತಾಯ ಮತ್ತು ಡಬಲ್ ಗಳಿಕೆಯ ಹೊಸ ಯುಗ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಹಿಂದಿನ ವಿತ್ತೀಯ ಆಡಳಿತದಲ್ಲಿ, ಉದ್ಯೋಗಿಗಳು ಮತ್ತು ಉದ್ಯಮಿಗಳು ₹2 ಲಕ್ಷದವರೆಗಿನ ಆದಾಯದ ಮೇಲೂ ತೆರಿಗೆ ಪಾವತಿಸಬೇಕಾಗಿತ್ತು ಎಂದು ಅವರು ಹಿಂದಿನದನ್ನು ಹೋಲಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಇಂದು, ವಾರ್ಷಿಕವಾಗಿ ₹12 ಲಕ್ಷದವರೆಗೆ ಗಳಿಸುವ ವ್ಯಕ್ತಿಗಳು ಒಂದು ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ ಎಂದು ಅವರು ಎತ್ತಿ ತೋರಿಸಿದರು.

2025ರ ಸೆಪ್ಟೆಂಬರ್ 22 ರಿಂದ ಒಡಿಶಾ ಸೇರಿದಂತೆ ದೇಶಾದ್ಯಂತ ಹೊಸ ಜಿ ಎಸ್ ಟಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಸ್ತಾಪಿಸಿದ ಪ್ರಧಾನಿ, ಈ ಸುಧಾರಣೆಗಳನ್ನು ಎಲ್ಲರಿಗೂ ಉಳಿತಾಯದ ಉಡುಗೊರೆ ಎಂದು ಬಣ್ಣಿಸಿದರು, ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರಿಗೆ ಅಡುಗೆ ವೆಚ್ಚವನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಗಿದೆ. ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ ಎಂದು ಅವರು ಹೇಳಿದರು. ಉದಾಹರಣೆಯೊಂದಿಗೆ ವಿವರಿಸಿದ ಪ್ರಧಾನಿ, ಒಡಿಶಾದಲ್ಲಿ ಒಂದು ಕುಟುಂಬವು ದಿನಸಿ ಮತ್ತು ಇತರ ಅಗತ್ಯ ವಸ್ತುಗಳಿಗೆ ವಾರ್ಷಿಕವಾಗಿ ₹1 ಲಕ್ಷ ಖರ್ಚು ಮಾಡುತ್ತಿದ್ದರೆ, 2014 ರ ಮೊದಲು ಅಂದಿನ ಆಡಳಿತ ಸರ್ಕಾರದ ಅಡಿಯಲ್ಲಿ ₹20,000–₹25,000 ತೆರಿಗೆಯನ್ನು ಪಾವತಿಸುತ್ತಿತ್ತು ಎಂದು ಅವರು ವಿವರಿಸಿದರು. 2017 ರಲ್ಲಿ ತಮ್ಮ ಸರ್ಕಾರವು ಜಿಎಸ್ಟಿಯನ್ನು ಪರಿಚಯಿಸಿದ ನಂತರ, ಈ ತೆರಿಗೆ ಮೊತ್ತವನ್ನು ಕಡಿಮೆ ಮಾಡಲಾಯಿತು ಮತ್ತು ಈಗ, ತೆರಿಗೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ, ಕುಟುಂಬಗಳು ವಾರ್ಷಿಕವಾಗಿ ₹5,000–₹6,000 ಮಾತ್ರ ಪಾವತಿಸುವಂತಾಗಿದೆ. ವಿರೋಧ ಪಕ್ಷದ ಯುಗಕ್ಕೆ ಹೋಲಿಸಿದರೆ, ಕುಟುಂಬಗಳು ಈಗ ಅಂತಹ ವೆಚ್ಚಗಳ ಮೇಲೆ ವರ್ಷಕ್ಕೆ ₹15,000–₹20,000 ಉಳಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

 

ಒಡಿಶಾ ರೈತರ ನಾಡು ಎಂಬುದನ್ನು ದೃಢಪಡಿಸಿದ ಪ್ರಧಾನಿ, ಜಿಎಸ್‌ಟಿ ಉಳಿತಾಯ ಉತ್ಸವವು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಒತ್ತಿ ಹೇಳಿದರು. ವಿರೋಧ ಪಕ್ಷದ ಕಾಲದಲ್ಲಿ ರೈತರು ಟ್ರ್ಯಾಕ್ಟರ್ ಖರೀದಿಸುವಾಗ ₹70,000 ತೆರಿಗೆ ಪಾವತಿಸಬೇಕಾಗಿತ್ತು ಎಂದು ನೆನಪಿಸಿಕೊಂಡರು. ಜಿಎಸ್‌ಟಿ ಜಾರಿಗೆ ಬಂದ ನಂತರ, ತೆರಿಗೆ ಕಡಿಮೆಯಾಯಿತು ಮತ್ತು ಹೊಸ ಜಿಎಸ್‌ಟಿ ರಚನೆಯಡಿಯಲ್ಲಿ, ರೈತರು ಈಗ ಅದೇ ಟ್ರ್ಯಾಕ್ಟರ್‌ನಲ್ಲಿ ಸುಮಾರು ₹40,000 ಉಳಿಸುತ್ತಾರೆ. ಭತ್ತ ನಾಟಿ ಮಾಡಲು ಬಳಸುವ ಯಂತ್ರಗಳು ಈಗ ₹15,000, ಪವರ್ ಟಿಲ್ಲರ್‌ಗಳು ₹10,000 ಮತ್ತು ಒಕ್ಕಣೆ ಯಂತ್ರಗಳು ₹25,000 ವರೆಗೆ ಉಳಿತಾಯವನ್ನು ನೀಡುತ್ತವೆ ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಹಲವಾರು ಕೃಷಿ ಉಪಕರಣಗಳು ಮತ್ತು ಸಲಕರಣೆಗಳ ಮೇಲಿನ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಒಡಿಶಾ ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿರುವ ದೊಡ್ಡ ಬುಡಕಟ್ಟು ಜನಸಂಖ್ಯೆಗೆ ನೆಲೆಯಾಗಿದೆ ಎಂದು ಹೇಳಿದ ಪ್ರಧಾನಿ, ಸರ್ಕಾರವು ಈಗಾಗಲೇ ಕೆಂಡು ಎಲೆ ಸಂಗ್ರಹಕಾರರಿಗಾಗಿ ಕೆಲಸ ಮಾಡುತ್ತಿದೆ ಮತ್ತು ಈಗ ಆ ವಸ್ತುವಿನ ಮೇಲೆ ಜಿಎಸ್‌ಟಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಇದು ಸಂಗ್ರಹಕಾರರಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ತಮ್ಮ ಸರ್ಕಾರವು ನಿರಂತರವಾಗಿ ತೆರಿಗೆ ಪರಿಹಾರವನ್ನು ನೀಡುತ್ತಿದೆ ಮತ್ತು ನಾಗರಿಕರಿಗೆ ಉಳಿತಾಯವನ್ನು ಹೆಚ್ಚಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು, ಆದರೆ ವಿರೋಧ ಪಕ್ಷಗಳು ಶೋಷಣೆಯ ಅಭ್ಯಾಸಗಳನ್ನು ಮುಂದುವರಿಸುತ್ತಿವೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನೇತೃತ್ವದ ಸರ್ಕಾರಗಳು ಇನ್ನೂ ಸಾರ್ವಜನಿಕರನ್ನು ಲೂಟಿ ಮಾಡುವಲ್ಲಿ ನಿರತವಾಗಿವೆ ಎಂದು ಶ್ರೀ ಮೋದಿ ದೂರಿದರು. ಹೊಸ ಜಿಎಸ್‌ಟಿ ದರಗಳನ್ನು ಜಾರಿಗೆ ತಂದಾಗ, ಮನೆ ನಿರ್ಮಾಣ ಮತ್ತು ದುರಸ್ತಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸಿಮೆಂಟ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಎತ್ತಿ ತೋರಿಸಿದರು. ಸೆಪ್ಟೆಂಬರ್ 22 ರ ನಂತರ, ಹಿಮಾಚಲ ಪ್ರದೇಶದಲ್ಲಿಯೂ ಸಹ ಸಿಮೆಂಟ್ ಬೆಲೆಗಳು ಕುಸಿದಿವೆ ಎಂಬುದರತ್ತ ಅವರು ಗಮನಸೆಳೆದರು. ಆದಾಗ್ಯೂ, ಹಿಮಾಚಲದಲ್ಲಿ ಆಡಳಿತ ನಡೆಸುವ ಸರ್ಕಾರವು ಸಿಮೆಂಟ್ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ, ಇದರಿಂದಾಗಿ ಜನರು ಪ್ರಯೋಜನ ಪಡೆಯುತ್ತಿಲ್ಲ ಎಂದು ಅವರು ಹೇಳಿದರು. ವಿರೋಧ ಪಕ್ಷವು ಎಲ್ಲೆಲ್ಲಿ ಆಡಳಿತ ನಡೆಸುತ್ತದೆಯೋ ಅಲ್ಲೆಲ್ಲಾ ಶೋಷಣೆ ನಡೆಯುತ್ತದೆ ಎಂದು ಪ್ರಧಾನಿ ಹೇಳಿದರು ಮತ್ತು ನಾಗರಿಕರು ಪಕ್ಷದ ಬಗ್ಗೆ ಜಾಗರೂಕರಾಗಿರಬೇಕೆಂದು ಆಗ್ರಹಿಸಿದರು.

ಜಿಎಸ್‌ಟಿ ಉಳಿತಾಯ ಉತ್ಸವವು ತಾಯಂದಿರು ಮತ್ತು ಸಹೋದರಿಯರಿಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದು ಶ್ರೀ ಮೋದಿ ಹೇಳಿದರು. ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಸೇವೆ ಸಲ್ಲಿಸುವುದು ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ, ಅವರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಮಕ್ಕಳನ್ನು ರಕ್ಷಿಸಲು ತಾಯಂದಿರು ಮಾಡುವ ತ್ಯಾಗಗಳನ್ನು ಅವರು ಗುರುತಿಸಿದರು, ಅವರು ತಮ್ಮ ಮಕ್ಕಳನ್ನು ರಕ್ಷಿಸಲು ಪ್ರತಿಯೊಂದು ಕಷ್ಟವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಮತ್ತು ವೈದ್ಯಕೀಯ ವೆಚ್ಚಗಳಿಂದ ಮನೆಯ ಮೇಲೆ ಹೊರೆಯಾಗುವುದನ್ನು ತಪ್ಪಿಸಲು ತಮ್ಮ ಸ್ವಂತ ಕಾಯಿಲೆಗಳನ್ನು ಹೇಗೆ ಮರೆಮಾಡುತ್ತಾರೆ ಎಂಬುದರತ್ತ  ಗಮನ ಸೆಳೆದರು. ಇದಕ್ಕಾಗಿಯೇ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಪ್ರಧಾನಿ ಎತ್ತಿ ತೋರಿಸಿದರು, ಇದು ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಮೂಲಕ ಮಹಿಳೆಯರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ ಎಂದರು.

 

ಆರೋಗ್ಯವಂತ ತಾಯಿ ಬಲಿಷ್ಟ ಕುಟುಂಬಕ್ಕೆ ಕಾರಣವಾಗುತ್ತಾರೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, 2025 ರ ಸೆಪ್ಟೆಂಬರ್ 17ರಿಂದ "ಸ್ವಸ್ಥ ನಾರಿ, ಸಶಕ್ತ ಪರಿವಾರ್" ಅಭಿಯಾನದ ರಾಷ್ಟ್ರವ್ಯಾಪಿ ಪ್ರಾರಂಭವನ್ನು ಎತ್ತಿ ತೋರಿಸಿದರು. ಈ ಉಪಕ್ರಮದಡಿಯಲ್ಲಿ ದೇಶಾದ್ಯಂತ ಎಂಟು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ, ಮೂರು ಕೋಟಿಗೂ ಹೆಚ್ಚು ಮಹಿಳೆಯರು ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಶಿಬಿರಗಳು ಮಧುಮೇಹ, ಸ್ತನ ಕ್ಯಾನ್ಸರ್, ಕ್ಷಯ ಮತ್ತು ಕಾಂಡ ಕೋಶ/ಕುಡಗೋಲು ಕೋಶ ರಕ್ತಹೀನತೆಯಂತಹ ರೋಗಗಳ ರೋಗನಿರ್ಣಯವನ್ನು ಸುಗಮಗೊಳಿಸುತ್ತಿವೆ. ಒಡಿಶಾದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ತೆರಿಗೆ ವಿನಾಯಿತಿ ಅಥವಾ ಆಧುನಿಕ ಸಂಪರ್ಕದ ಮೂಲಕ - ಅನುಕೂಲತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುವ ಮೂಲಕ ರಾಷ್ಟ್ರ ಮತ್ತು ಅದರ ನಾಗರಿಕರ ಶಕ್ತಿಯನ್ನು ಹೆಚ್ಚಿಸಲು ತಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಈ ಪ್ರಯತ್ನಗಳಿಂದ ಒಡಿಶಾ ಗಮನಾರ್ಹ ಪ್ರಯೋಜನಗಳನ್ನು ಪಡೆಯುತ್ತಿದೆ ಎಂದು ಅವರು ಗಮನಿಸಿದರು, ಪ್ರಸ್ತುತ ರಾಜ್ಯದಲ್ಲಿ ಆರು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಸುಮಾರು ಅರವತ್ತು ರೈಲು ನಿಲ್ದಾಣಗಳಲ್ಲಿ ಆಧುನೀಕರಣ ನಡೆಯುತ್ತಿದೆ. ಜಾರ್ಸುಗುಡದಲ್ಲಿರುವ ವೀರ್ ಸುರೇಂದ್ರ ಸಾಯಿ ವಿಮಾನ ನಿಲ್ದಾಣವು ಈಗ ಭಾರತದಾದ್ಯಂತ ಹಲವಾರು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಒಡಿಶಾ ಖನಿಜಗಳು ಮತ್ತು ಗಣಿಗಾರಿಕೆಯಿಂದ ಗಣನೀಯವಾಗಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದೆ. ಸುಭದ್ರಾ ಯೋಜನೆಯು ಒಡಿಶಾದ ಮಹಿಳೆಯರನ್ನು ನಿರಂತರವಾಗಿ ಬೆಂಬಲಿಸುತ್ತಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಒಡಿಶಾ ಪ್ರಗತಿಯ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಅವರು ನುಡಿದರು ಮತ್ತು ಅಭಿವೃದ್ಧಿಯ ವೇಗ ಮತ್ತಷ್ಟು ವೇಗಗೊಳ್ಳುತ್ತದೆ ಎಂದು ಭರವಸೆ ನೀಡಿದರು. ಎಲ್ಲರಿಗೂ ಶುಭ ಹಾರೈಸುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಒಡಿಶಾದ ರಾಜ್ಯಪಾಲ ಡಾ. ಹರಿ ಬಾಬು ಕಂಭಂಪತಿ, ಒಡಿಶಾದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವ ಶ್ರೀ ಜುವಾಲ್ ಓರಾಮ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೇಶಾದ್ಯಂತದ ಹಲವಾರು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಇಂದಿನ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕ ಹೊಂದಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಸುಗುಡದಲ್ಲಿ ರೂ.60,000 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಯೋಜನೆಗಳು ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳನ್ನು ವ್ಯಾಪಿಸಿವೆ.

 

ಟೆಲಿಕಾಂ ಸಂಪರ್ಕ ಕ್ಷೇತ್ರದಲ್ಲಿ, ಪ್ರಧಾನಿಯವರು ಸ್ವದೇಶಿ ತಂತ್ರಜ್ಞಾನದೊಂದಿಗೆ ಸುಮಾರು ರೂ.37,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 97,500 ಕ್ಕೂ ಹೆಚ್ಚು ಮೊಬೈಲ್ 4G ಟವರ್‌ಗಳನ್ನು ಕಾರ್ಯಾರಂಭ ಮಾಡಿದರು. ಇದರಲ್ಲಿ ಬಿಎಸ್‌ಎನ್‌ಎಲ್ ನಿಯೋಜಿಸಿದ 92,600 ಕ್ಕೂ ಹೆಚ್ಚು 4G ತಂತ್ರಜ್ಞಾನ ತಾಣಗಳು ಸೇರಿವೆ. ಡಿಜಿಟಲ್ ಭಾರತ್ ನಿಧಿಯಡಿಯಲ್ಲಿ 18,900 ಕ್ಕೂ ಹೆಚ್ಚು 4G ತಾಣಗಳಿಗೆ ಹಣಕಾಸು ಒದಗಿಸಲಾಗಿದೆ, ಇದು ದೂರದ, ಗಡಿ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಸುಮಾರು 26,700 ಸಂಪರ್ಕವಿಲ್ಲದ ಹಳ್ಳಿಗಳನ್ನು ಸಂಪರ್ಕಿಸುತ್ತದೆ ಮತ್ತು 20 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರಿಗೆ ಸೇವೆ ಸಲ್ಲಿಸುತ್ತದೆ. ಈ ಗೋಪುರಗಳು ಸೌರಶಕ್ತಿ ಚಾಲಿತವಾಗಿದ್ದು, ಅವುಗಳು  ಭಾರತವನ್ನು ಅತಿದೊಡ್ಡ ಹಸಿರು ದೂರಸಂಪರ್ಕ ತಾಣಗಳ ಸಮೂಹವನ್ನಾಗಿಸುತ್ತವೆ  ಮತ್ತು ಸುಸ್ಥಿರ ಮೂಲಸೌಕರ್ಯದಲ್ಲಿ ಒಂದು ಹೆಜ್ಜೆ ಮುಂದಿಡುವಂತೆ ಮಾಡುತ್ತವೆ.

ಸಂಪರ್ಕ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಮುಖ ರೈಲ್ವೆ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿ, ದೇಶಕ್ಕೆ ಸಮರ್ಪಿಸಿದರು. ಇವುಗಳಲ್ಲಿ ಸಂಬಲ್ಪುರ-ಸರ್ಲಾದಲ್ಲಿ ರೈಲು ಮೇಲ್ಸೇತುವೆಗೆ ಶಿಲಾನ್ಯಾಸ, ಕೊರಾಪುಟ್-ಬೈಗುಡ ಮಾರ್ಗದ ದ್ವಿಗುಣಗೊಳಿಸುವಿಕೆ, ಮತ್ತು ಮನಬಾರ್-ಕೊರಾಪುಟ್-ಗೋರಾಪುರ ಮಾರ್ಗ ದೇಶಕ್ಕೆ ಸಮರ್ಪಣೆ ಸೇರಿವೆ. ಈ ಯೋಜನೆಗಳು ಒಡಿಶಾ ಮತ್ತು ನೆರೆಯ ರಾಜ್ಯಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಂಚಾರವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ, ಸ್ಥಳೀಯ ಕೈಗಾರಿಕೆಗಳು ಮತ್ತು ವ್ಯಾಪಾರವನ್ನು ಬಲಪಡಿಸುತ್ತವೆ. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಗಳು ಬೆರ್ಹಾಂಪುರ ಮತ್ತು ಉಧ್ನಾ (ಸೂರತ್) ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ  ಸಹ ಹಸಿರು ನಿಶಾನೆ ತೋರಲಿದ್ದಾರೆ, ಇದು ರಾಜ್ಯಗಳಾದ್ಯಂತ ಕೈಗೆಟುಕುವ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುತ್ತದೆ, ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರಮುಖ ಆರ್ಥಿಕ ಜಿಲ್ಲೆಗಳನ್ನು ಜೋಡಿಸುತ್ತದೆ.

ತಿರುಪತಿ, ಪಾಲಕ್ಕಾಡ್, ಭಿಲಾಯಿ, ಜಮ್ಮು, ಧಾರವಾಡ, ಜೋಧ್‌ಪುರ, ಪಾಟ್ನಾ ಮತ್ತು ಇಂದೋರ್ ಎಂಬ ಎಂಟು ಐಐಟಿಗಳ ವಿಸ್ತರಣೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ವಿಸ್ತರಣೆಯು ಮುಂದಿನ ನಾಲ್ಕು ವರ್ಷಗಳಲ್ಲಿ 10,000 ಹೊಸ ವಿದ್ಯಾರ್ಥಿಗಳಿಗೆ ಅವಕಾಶ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಮತ್ತು ಎಂಟು ಅತ್ಯಾಧುನಿಕ ಸಂಶೋಧನಾ ಉದ್ಯಾನವನಗಳನ್ನು ಸ್ಥಾಪಿಸುತ್ತದೆ, ಇದರಿಂದಾಗಿ ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಗೊಳ್ಳುತ್ತದೆ ಮತ್ತು ಸಂಶೋಧನೆ ಹಾಗು  ಅಭಿವೃದ್ಧಿಗೆ ಬಲವಾದ ಉತ್ತೇಜನವನ್ನು ನೀಡುತ್ತದೆ.

 

ದೇಶಾದ್ಯಂತ 275 ರಾಜ್ಯ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಗುಣಮಟ್ಟ ಉನ್ನತೀಕರಣ, ಸಮಾನತೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಮೆರೈಟ್ ಯೋಜನೆಯನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು.

ಒಡಿಶಾ ಕೌಶಲ್ಯ ಅಭಿವೃದ್ಧಿ ಯೋಜನೆ ಹಂತ II ಅನ್ನು ಸಹ ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು, ಇದು ಸಂಬಲ್ಪುರ ಮತ್ತು ಬೆರ್ಹಾಂಪುರದಲ್ಲಿ ವಿಶ್ವ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುತ್ತದೆ, ಇದು ಕೃಷಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಚಿಲ್ಲರೆ ವ್ಯಾಪಾರ, ಸಾಗರ ಮತ್ತು ಆತಿಥ್ಯದಂತಹ ಉದಯೋನ್ಮುಖ ವಲಯಗಳನ್ನು ಒಳಗೊಂಡಿದೆ. ಇದಲ್ಲದೆ, ಐದು ಐಟಿಐಗಳನ್ನು ಉತ್ಕರ್ಷ್ ಐಟಿಐಗಳಾಗಿ ಮೇಲ್ದರ್ಜೆಗೇರಿಸಲಾಗುವುದು, 25 ಐಟಿಐಗಳನ್ನು ಶ್ರೇಷ್ಠತೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ಹೊಸ ಪ್ರೆಶಿಷನ್ ಎಂಜಿನಿಯರಿಂಗ್ ಕಟ್ಟಡವು ಸುಧಾರಿತ ತಾಂತ್ರಿಕ ತರಬೇತಿಯನ್ನು ಒದಗಿಸುತ್ತದೆ.

ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣವನ್ನು ಹೆಚ್ಚಿಸಲು, ಪ್ರಧಾನಮಂತ್ರಿಯವರು 130 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈ-ಫೈ ಸೌಲಭ್ಯಗಳನ್ನು ಸಮರ್ಪಿಸಿದರು, ಇದು 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ಇದು ಉಚಿತ ದೈನಂದಿನ ಡೇಟಾ ಪ್ರವೇಶವನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರ ಭೇಟಿಯ ಸಮಯದಲ್ಲಿ ಒಡಿಶಾದಲ್ಲಿ ಆರೋಗ್ಯ ರಕ್ಷಣಾ ಮೂಲಸೌಕರ್ಯವು ಗಮನಾರ್ಹ ಉತ್ತೇಜನವನ್ನು ಪಡೆಯಲಿದೆ. ಬೆರ್ಹಾಂಪುರ್‌ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಸಂಭಾಲ್‌ಪುರದ ವಿಐಎಂಎಸ್‌ಎಆರ್ ಅನ್ನು ವಿಶ್ವ ದರ್ಜೆಯ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು ಅವರು ಅಡಿಪಾಯ ಹಾಕಿದರು. ನವೀಕರಿಸಿದ ಸೌಲಭ್ಯಗಳಲ್ಲಿ ಹೆಚ್ಚಿದ ಹಾಸಿಗೆ ಸಾಮರ್ಥ್ಯ, ಅಪಘಾತ/ ಆಘಾತ ಆರೈಕೆ ಘಟಕಗಳು, ದಂತ ಕಾಲೇಜುಗಳು, ತಾಯಿ ಮತ್ತು ಮಕ್ಕಳ ಆರೈಕೆ ಸೇವೆಗಳು ಮತ್ತು ವಿಸ್ತೃತ ಶೈಕ್ಷಣಿಕ ಮೂಲಸೌಕರ್ಯಗಳು ಸೇರಿವೆ, ಇದು ಒಡಿಶಾದ ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಖಚಿತಪಡಿಸುತ್ತದೆ.

ಇದರ ಜೊತೆಗೆ, ಪ್ರಧಾನಮಂತ್ರಿಗಳು ಅಂತ್ಯೋದಯ ಗೃಹ ಯೋಜನೆಯಡಿ 50,000 ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಿದರು. ಈ ಯೋಜನೆಯು ಅಂಗವಿಕಲರು, ವಿಧವೆಯರು, ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ನೈಸರ್ಗಿಕ ವಿಕೋಪಗಳ ಬಲಿಪಶುಗಳು ಸೇರಿದಂತೆ ದುರ್ಬಲ ಗ್ರಾಮೀಣ ಕುಟುಂಬಗಳಿಗೆ ಪಕ್ಕಾ ಮನೆಗಳು ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಉಪಕ್ರಮವು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಕಲ್ಯಾಣ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will walk shoulder to shoulder': PM Modi pushes 'Make in India, Partner with India' at Russia-India forum

Media Coverage

'Will walk shoulder to shoulder': PM Modi pushes 'Make in India, Partner with India' at Russia-India forum
NM on the go

Nm on the go

Always be the first to hear from the PM. Get the App Now!
...
Prime Minister pays tribute to Dr. Babasaheb Ambedkar on Mahaparinirvan Diwas
December 06, 2025

The Prime Minister today paid tributes to Dr. Babasaheb Ambedkar on Mahaparinirvan Diwas.

The Prime Minister said that Dr. Ambedkar’s unwavering commitment to justice, equality and constitutionalism continues to guide India’s national journey. He noted that generations have drawn inspiration from Dr. Ambedkar’s dedication to upholding human dignity and strengthening democratic values.

The Prime Minister expressed confidence that Dr. Ambedkar’s ideals will continue to illuminate the nation’s path as the country works towards building a Viksit Bharat.

The Prime Minister wrote on X;

“Remembering Dr. Babasaheb Ambedkar on Mahaparinirvan Diwas. His visionary leadership and unwavering commitment to justice, equality and constitutionalism continue to guide our national journey. He inspired generations to uphold human dignity and strengthen democratic values. May his ideals keep lighting our path as we work towards building a Viksit Bharat.”