ಕೇಂದ್ರ ಮತ್ತು ರಾಜ್ಯದಲ್ಲಿರುವ ನಮ್ಮ ಸರ್ಕಾರ ಒಡಿಶಾದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬದ್ಧವಾಗಿದೆ: ಪ್ರಧಾನಮಂತ್ರಿ
ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ: ಪ್ರಧಾನಮಂತ್ರಿ
ಕೇಂದ್ರ ಸರ್ಕಾರ ಇತ್ತೀಚೆಗೆ ಒಡಿಶಾಗೆ ಎರಡು ಸೆಮಿಕಂಡಕ್ಟರ್ ಘಟಕಗಳನ್ನು ಅನುಮೋದಿಸಿದೆ: ಪ್ರಧಾನಮಂತ್ರಿ
ಸ್ವಾವಲಂಬನೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ, ಬಿಎಸ್ಎನ್ಎಲ್ ಸಂಪೂರ್ಣವಾಗಿ ದೇಶೀಯ 4ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, 4ಜಿ ಸೇವೆಗಳನ್ನು ಪ್ರಾರಂಭಿಸಲು ಸಂಪೂರ್ಣ ದೇಶೀಯ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಅಗ್ರ ಐದು ದೇಶಗಳಲ್ಲಿ ಭಾರತ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ

ಜೈ ಜಗನ್ನಾಥ, ಜೈ ಮಾ ಸಮೇಲಿ, ಜೈ ಮಾ ರಮಾ ಚಂಡಿ!

ಇಲ್ಲಿ ಕೆಲವು ಯುವ ಸ್ನೇಹಿತರು ಅನೇಕ ಕಲಾಕೃತಿಗಳನ್ನು ತಂದಿದ್ದಾರೆ. ಒಡಿಶಾದ ಕಲೆಯ ಮೇಲಿನ ಪ್ರೀತಿ ವಿಶ್ವಪ್ರಸಿದ್ಧವಾಗಿದೆ. ನಾನು ನಿಮ್ಮೆಲ್ಲರಿಂದ ಈ ಉಡುಗೊರೆಗಳನ್ನು ಸ್ವೀಕರಿಸುತ್ತೇನೆ, ನನ್ನ ಎಸ್‌ಪಿಜಿ ಸಹೋದ್ಯೋಗಿಗಳನ್ನು ಈ ಎಲ್ಲಾ ವಸ್ತುಗಳನ್ನು ನಿಮ್ಮಿಂದ ಸಂಗ್ರಹಿಸಲು ವಿನಂತಿಸುತ್ತೇನೆ. ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ಖಂಡಿತವಾಗಿಯೂ ನನ್ನಿಂದ ನಿಮಗೆ ಪತ್ರ ಬರುತ್ತದೆ. ಅಲ್ಲಿ ಹಿಂಭಾಗದಲ್ಲಿ, ಆ ಮಗು ಬಹಳ ಹೊತ್ತಿನಿಂದ  ಏನನ್ನೋ ಕೈಯಲ್ಲಿ ಹಿಡಿದಿರುವುದನ್ನು ನಾನು ನೋಡುತ್ತಿದ್ದೇನೆ. ಅವನ ಕೈಗಳು ನೋಯುತ್ತಿರಬೇಕು. ದಯವಿಟ್ಟು ಅವನಿಗೆ ಸಹಾಯ ಮಾಡಿ ಮತ್ತು ಅದನ್ನೂ ಪಡೆಯಿರಿ. ನೀವು ನಿಮ್ಮ ಹೆಸರನ್ನು ಹಿಂಭಾಗದಲ್ಲಿ ಬರೆದಿದ್ದರೆ, ನಾನು ಖಂಡಿತವಾಗಿಯೂ ನಿಮಗೆ ಪತ್ರ ಬರೆಯುತ್ತೇನೆ. ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಕ್ಕಾಗಿ ನಿಮ್ಮ ಈ ಪ್ರೀತಿಗಾಗಿ ಎಲ್ಲಾ ಯುವಕರು, ಯುವತಿಯರು ಮತ್ತು ಪುಟ್ಟ ಮಕ್ಕಳಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಒಡಿಶಾದ ರಾಜ್ಯಪಾಲರಾದ ಶ್ರೀ ಹರಿಬಾಬು ಜಿ; ಜನಪ್ರಿಯ ಮತ್ತು ಸಮರ್ಪಿತ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಜುವಾಲ್ ಓರಾಮ್ ಜಿ, ಉಪಮುಖ್ಯಮಂತ್ರಿಗಳಾದ ಪ್ರವತಿ ಪರಿದಾ ಜಿ ಮತ್ತು ಕನಕ್ ವರ್ಧನ್ ಸಿಂಗ್ ದಿಯೋ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಬೈಜಯಂತ್ ಪಾಂಡಾ ಜಿ ಮತ್ತು ಪ್ರದೀಪ್ ಪುರೋಹಿತ್ ಜಿ, ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಲ್ ಜಿ ಮತ್ತು ವೇದಿಕೆಯಲ್ಲಿ ಕುಳಿತಿರುವ ಇತರೆ ಗಣ್ಯರೆ.

ಇಂದಿನ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರೊಂದಿಗೆ ದೇಶಾದ್ಯಂತದ ಹಲವಾರು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ವಿವಿಧ ಸ್ಥಳಗಳಿಂದ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರಿಗೂ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಜಾರ್ಸುಗುಡಾದ ನನ್ನ ಸಹೋದರ ಸಹೋದರಿಯರಿಗೆ ನಾನು ಗೌರವದಿಂದ ನಮಸ್ಕರಿಸುತ್ತೇನೆ. ನಿಮ್ಮ ಪ್ರೀತಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇಲ್ಲಿ ಉಪಸ್ಥಿತರಿರುವ ಎಲ್ಲಾ ಗೌರವಾನ್ವಿತ ಗಣ್ಯರಿಗೆ ನಮಸ್ಕಾರಗಳು.

 

ಸ್ನೇಹಿತರೆ,

ಪ್ರಸ್ತುತ, ನವರಾತ್ರಿ ಹಬ್ಬ ಬರುತ್ತಿದೆ, ಈ ಪವಿತ್ರ ದಿನಗಳಲ್ಲಿ, ಮಾತೆ ಸಮಲೈ ಮತ್ತು ಮಾತೆ ರಾಮ ಚಂಡಿಯ ಭೂಮಿಯಲ್ಲಿ ನಿಮ್ಮೆಲ್ಲರ 'ದರ್ಶನ' ಪಡೆಯುವ ಅದೃಷ್ಟ ನನಗೆ ಸಿಕ್ಕಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಸೇರಿದ್ದಾರೆ. ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ, ನಾನು ಎಲ್ಲರಿಗೆ ನಮಸ್ಕರಿಸುತ್ತೇನೆ.

ಸಹೋದರ ಸಹೋದರಿಯರೆ,

ಒಂದೂವರೆ ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಒಡಿಶಾದ ಜನರು ಹೊಸ ಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿದ್ದರು. ಆ ಸಂಕಲ್ಪ 'ವಿಕಸಿತ ಒಡಿಶಾ' (ಅಭಿವೃದ್ಧಿ ಹೊಂದಿದ ಒಡಿಶಾ) ಆಗಿತ್ತು. ಇಂದು ನಾವು ಒಡಿಶಾ ಡಬಲ್-ಎಂಜಿನ್ ಸರ್ಕಾರದ ವೇಗದಲ್ಲಿ ಮುಂದುವರಿಯಲು ಪ್ರಾರಂಭಿಸಿರುವುದನ್ನು ನೋಡಬಹುದು. ಇಂದು ಮತ್ತೊಮ್ಮೆ, ಒಡಿಶಾದ ಅಭಿವೃದ್ಧಿಗಾಗಿ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇಂದಿನಿಂದ, ಬಿಎಸ್ಎನ್ಎಲ್ ನ ಹೊಸ ಅವತಾರವೂ ಮುಂದೆ ಬಂದಿದೆ. ಬಿಎಸ್ಎನ್ಎಲ್ ನ ಸ್ಥಳೀಯ 4ಜಿ ಸೇವೆಗಳನ್ನು ಪ್ರಾರಂಭಿಸಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಐಐಟಿಗಳ ವಿಸ್ತರಣೆಯೂ ಇಂದು ಪ್ರಾರಂಭವಾಗಿದೆ. ಇದರ ಜತೆಗೆ, ಒಡಿಶಾದಲ್ಲಿ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸ್ವಲ್ಪ ಸಮಯದ ಹಿಂದೆ, ಬೆರ್ಹಾಂಪುರದಿಂದ ಸೂರತ್‌ಗೆ ಆಧುನಿಕ ಅಮೃತ್ ಭಾರತ್ ರೈಲಿಗೆ ಚಾಲನೆ ನೀಡಲಾಯಿತು. ಸೂರತ್‌ನೊಂದಿಗಿನ ಸಂಪರ್ಕ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿದಿದೆ. ಈ ಪ್ರದೇಶದ ಜನರೆಲ್ಲರೂ ಸೂರತ್‌ನಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. ಪಶ್ಚಿಮ ಬಂಗಾಳದ ನಂತರ, ಒಡಿಶಾದ ಹೊರಗಿನ ಅತಿದೊಡ್ಡ ಒಡಿಯಾ ಜನಸಂಖ್ಯೆಯು ಗುಜರಾತ್‌ನಲ್ಲಿ, ವಿಶೇಷವಾಗಿ ಸೂರತ್‌ನಲ್ಲಿ ವಾಸಿಸುತ್ತಿದೆ ಎಂದು ಕೆಲವರು ಹೇಳುತ್ತಾರೆ. ಇಂದು ಅವರಿಗೆ ಈ ನೇರ ರೈಲು ಸೇವೆ ಪ್ರಾರಂಭವಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ನಿಮ್ಮೆಲ್ಲರಿಗೂ, ಒಡಿಶಾದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದು ನಮ್ಮ ರೈಲ್ವೆ ಸಚಿವರು ಸೂರತ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಅಲ್ಲಿ ಎಲ್ಲಾ ಒಡಿಯಾ ಸಹೋದರ ಸಹೋದರಿಯರು ಒಟ್ಟುಗೂಡಿದ್ದಾರೆ.

ಸ್ನೇಹಿತರೆ,

ಬಿಜೆಪಿ ಸರ್ಕಾರವು ಬಡವರಿಗೆ ಸೇವೆ ಸಲ್ಲಿಸುವ ಸರ್ಕಾರವಾಗಿದೆ, ಬಡವರಿಗೆ ಸಬಲೀಕರಣ ನೀಡುವ ಸರ್ಕಾರವಾಗಿದೆ. ಬಡವರು, ದಲಿತರು, ಹಿಂದುಳಿದ ಸಮುದಾಯಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲೂ ನಾವು ಆ ಬದ್ಧತೆಯನ್ನು ನೋಡುತ್ತಿದ್ದೇವೆ. ಅಂತ್ಯೋದಯ ಗೃಹ ಯೋಜನೆ (ವಸತಿ ಯೋಜನೆ) ಫಲಾನುಭವಿಗಳಿಗೆ ಅನುಮೋದನೆ ಪತ್ರಗಳನ್ನು ಹಸ್ತಾಂತರಿಸುವ ಅವಕಾಶ ನನಗೆ ಸಿಕ್ಕಿತು. ಬಡ ಕುಟುಂಬವು ಪಕ್ಕಾ ಮನೆಯನ್ನು ಪಡೆದಾಗ, ಅದು ಅವರ ವರ್ತಮಾನವನ್ನು ಸುಲಭಗೊಳಿಸುವುದಲ್ಲದೆ, ಭವಿಷ್ಯದ ಪೀಳಿಗೆಯ ಜೀವನವನ್ನು ಸಹ ಸುರಕ್ಷಿತಗೊಳಿಸುತ್ತದೆ. ಇಲ್ಲಿಯವರೆಗೆ, ನಮ್ಮ ಸರ್ಕಾರವು ದೇಶಾದ್ಯಂತ 4 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಒದಗಿಸಿದೆ. ಒಡಿಶಾದಲ್ಲಿಯೂ ಸಹ, ಸಾವಿರಾರು ಮನೆಗಳನ್ನು ತ್ವರಿತ ಗತಿಯಲ್ಲಿ ನಿರ್ಮಿಸಲಾಗುತ್ತಿದೆ. ನಮ್ಮ ಮುಖ್ಯಮಂತ್ರಿ ಮೋಹನ್ ಜಿ ಮತ್ತು ಅವರ ತಂಡವು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಇಂದಿಗೂ ಸುಮಾರು 50 ಸಾವಿರ ಕುಟುಂಬಗಳಿಗೆ ಹೊಸ ಮನೆಗಳಿಗೆ ಅನುಮೋದನೆ ದೊರೆತಿದೆ. ಪ್ರಧಾನ ಮಂತ್ರಿ ಜನ್ಮನ್ ಯೋಜನೆಯಡಿ, ಬುಡಕಟ್ಟು ಕುಟುಂಬಗಳಿಗೆ ಒಡಿಶಾದಲ್ಲಿ 40,000ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ಅಂದರೆ ಅತ್ಯಂತ ವಂಚಿತ ಬುಡಕಟ್ಟು ಸಮುದಾಯಗಳಿಗೆ ಇಂದು ಒಂದು ದೊಡ್ಡ ಕನಸು ನನಸಾಗುತ್ತಿದೆ. ನನ್ನ ಎಲ್ಲಾ ಫಲಾನುಭವಿ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.

 

ಸ್ನೇಹಿತರೆ,

ಒಡಿಶಾದ ಸಾಮರ್ಥ್ಯ ಮತ್ತು ಅದರ ಜನರ ಪ್ರತಿಭೆಯ ಬಗ್ಗೆ ನನಗೆ ಯಾವಾಗಲೂ ಅಪಾರ ನಂಬಿಕೆ ಇದೆ. ಪ್ರಕೃತಿ ಒಡಿಶಾವನ್ನು ಹೇರಳವಾಗಿ ಆಶೀರ್ವದಿಸಿದೆ. ಒಡಿಶಾ ದಶಕಗಳ ಬಡತನವನ್ನು ಕಂಡಿದೆ, ಆದರೆ ಈಗ ಈ ದಶಕವು ನಿಮ್ಮನ್ನು ಸಮೃದ್ಧಿಯತ್ತ ಕೊಂಡೊಯ್ಯಲಿದೆ. ಈ ದಶಕವು ಒಡಿಶಾದ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಸರ್ಕಾರವು ಒಡಿಶಾಗೆ ಪ್ರಮುಖ ಯೋಜನೆಗಳನ್ನು ತರುತ್ತಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಒಡಿಶಾಗೆ 2 ಸೆಮಿಕಂಡಕ್ಟರ್ ಘಟಕಗಳನ್ನು ಅನುಮೋದಿಸಿದೆ. ಇದಕ್ಕೂ ಮೊದಲು, ಅಸ್ಸಾಂ ಅಥವಾ ಒಡಿಶಾದಲ್ಲಿ ಸೆಮಿಕಂಡಕ್ಟರ್‌ಗಳಂತಹ ಅತ್ಯಾಧುನಿಕ ಉದ್ಯಮವನ್ನು ಸ್ಥಾಪಿಸಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ಇಲ್ಲಿನ ಯುವಕರ ಸಾಮರ್ಥ್ಯದಿಂದಾಗಿ ಅಂತಹ ಕೈಗಾರಿಕೆಗಳು ಈಗ ನಿಮ್ಮ ಭೂಮಿಗೆ ಬರುತ್ತಿವೆ. ಚಿಪ್‌ಗಳನ್ನು ತಯಾರಿಸಲು ಒಡಿಶಾದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಸಹ ಸ್ಥಾಪಿಸಲಾಗುವುದು. ನಿಮ್ಮ ಫೋನ್, ಟಿವಿ, ಫ್ರಿಡ್ಜ್, ಕಂಪ್ಯೂಟರ್, ಕಾರು ಮತ್ತು ಇತರೆ ಹಲವು ಸಾಧನಗಳಿಗೆ ಶಕ್ತಿ ತುಂಬುವ ಮತ್ತು ಯಾವುದೇ ಉಪಕರಣವಿಲ್ಲದೆ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸಣ್ಣ ಚಿಪ್ ಅನ್ನು ಒಡಿಶಾದಲ್ಲಿಯೇ ತಯಾರಿಸುವ ದಿನ ದೂರವಿಲ್ಲ. ಈಗ ಅದನ್ನು ಜೋರಾಗಿ ಹೇಳಿ: ಜೈ ಜಗನ್ನಾಥ್!

ಸ್ನೇಹಿತರೆ,

ಚಿಪ್ಸ್‌ನಿಂದ ಹಡಗುಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸ್ವಾವಲಂಬಿಯಾಗಬೇಕು ಎಂಬುದು ನಮ್ಮ ಸಂಕಲ್ಪ. ನಾನು ನಿಮ್ಮನ್ನು ಏನಾದರೂ ಕೇಳುತ್ತೇನೆ. ನೀವು ಪ್ರತಿಕ್ರಿಯಿಸುತ್ತೀರಾ? ನಾನು ಕೇಳಿದರೆ, ನೀವು ಉತ್ತರಿಸುತ್ತೀರಾ? ನೀವು ಪೂರ್ಣ ಶಕ್ತಿಯಿಂದ ಉತ್ತರಿಸುತ್ತೀರಾ? ಹೇಳಿ, ಭಾರತ ಸ್ವಾವಲಂಬಿಯಾಗಬೇಕೇ ಅಥವಾ ಬೇಡವೇ? ಭಾರತ ಸ್ವಾವಲಂಬಿಯಾಗಬೇಕೇ ಅಥವಾ ಬೇಡವೇ? ಭಾರತ ಸ್ವಾವಲಂಬಿಯಾಗಬೇಕೇ ಅಥವಾ ಬೇಡವೇ? ನೋಡಿ, ಈ ದೇಶದ ಪ್ರತಿಯೊಬ್ಬ ನಾಗರಿಕನು ನಮ್ಮ ರಾಷ್ಟ್ರವು ಈಗ ಯಾರ ಮೇಲೂ ಅವಲಂಬಿತವಾಗಿರಬಾರದು ಎಂದು ಬಯಸುತ್ತಾನೆ. ಭಾರತವು ಪ್ರತಿಯೊಂದು ವಿಷಯದಲ್ಲೂ ಸ್ವಾವಲಂಬಿಯಾಗಿರಬೇಕು. ಅದಕ್ಕಾಗಿಯೇ, ಪ್ಯಾರಾದೀಪ್‌ನಿಂದ ಜಾರ್ಸುಗುಡದವರೆಗೆ ವಿಶಾಲವಾದ ಕೈಗಾರಿಕಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಹೋದರ ಸಹೋದರಿಯರೆ,

ಆರ್ಥಿಕವಾಗಿ ಬಲಶಾಲಿಯಾಗಲು ಬಯಸುವ ಯಾವುದೇ ದೇಶವು ಹಡಗು ನಿರ್ಮಾಣ, ದೊಡ್ಡ ಹಡಗುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಹಡಗು ನಿರ್ಮಾಣವು ಪ್ರತಿಯೊಂದು ವಲಯಕ್ಕೂ ಪ್ರಯೋಜನ ನೀಡುತ್ತದೆ. ಅದು ವ್ಯಾಪಾರ, ತಂತ್ರಜ್ಞಾನ ಅಥವಾ ರಾಷ್ಟ್ರೀಯ ಭದ್ರತೆಯಾಗಿರಬಹುದು. ನಾವು ನಮ್ಮದೇ ಆದ ಹಡಗುಗಳನ್ನು ಹೊಂದಿರುವಾಗ, ಬಿಕ್ಕಟ್ಟಿನ ಸಮಯದಲ್ಲೂ ಸಹ, ಪ್ರಪಂಚದೊಂದಿಗೆ ಆಮದು ಮತ್ತು ರಫ್ತುಗಳಿಗೆ ಅಡ್ಡಿಯಾಗುವುದಿಲ್ಲ. ಅದಕ್ಕಾಗಿಯೇ ನಮ್ಮ ಬಿಜೆಪಿ ಸರ್ಕಾರವು ಬಹುದೊಡ್ಡ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಹಡಗು ನಿರ್ಮಾಣಕ್ಕಾಗಿ ನಾವು 70,000 ಕೋಟಿ ರೂಪಾಯಿ ಪ್ಯಾಕೇಜ್ ಅನುಮೋದಿಸಿದ್ದೇವೆ. ಇದು ಭಾರತಕ್ಕೆ ಸುಮಾರು 4.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ತರುತ್ತದೆ. ಈ ಹಣವು ಉಕ್ಕು, ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಸಣ್ಣ ಮತ್ತು ಗುಡಿಸಲಿನ ಉತ್ಪಾದನಾ ಉದ್ಯಮಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ತಲುಪುತ್ತದೆ. ಅತಿದೊಡ್ಡ ಪ್ರಯೋಜನವು ನನ್ನ ಯುವಕರಿಗೆ, ಈ ದೇಶದ ಪುತ್ರರು ಮತ್ತು ಪುತ್ರಿಯರಿಗೆ ಹೋಗುತ್ತದೆ. ಇದು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಒಡಿಶಾ ಕೂಡ ಇದರಿಂದ ಹೆಚ್ಚಿನ ಲಾಭ ಪಡೆಯುತ್ತದೆ, ಏಕೆಂದರೆ ಇಲ್ಲಿನ ಕೈಗಾರಿಕೆಗಳು ಮತ್ತು ಯುವಕರು ಈ ಉದ್ಯೋಗದ ಅಲೆಯಿಂದ ಪ್ರಯೋಜನ ಪಡೆಯುತ್ತಾರೆ.

 

ಸ್ನೇಹಿತರೆ,

ಇಂದು ದೇಶವು ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಟೆಲಿಕಾಂ ಜಗತ್ತಿನಲ್ಲಿ 2ಜಿ, 3ಜಿ ಮತ್ತು 4ಜಿ ಸೇವೆಗಳನ್ನು ಪರಿಚಯಿಸಿದಾಗ, ಭಾರತವು ತುಂಬಾ ಹಿಂದುಳಿದಿತ್ತು. ಆಗ ಏನು ನಡೆಯುತ್ತಿತ್ತು ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. 2ಜಿ ಮತ್ತು 3ಜಿ ಬಗ್ಗೆ ಹಾಸ್ಯಗಳು, ಭ್ರಷ್ಟಾಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಹರಡುತ್ತಿದ್ದವು.

ಆದರೆ ಸಹೋದರ ಸಹೋದರಿಯರೆ,

ಭಾರತವು 2ಜಿ, 3ಜಿ ಮತ್ತು 4ಜಿ ಸೇವೆಗಳ ತಂತ್ರಜ್ಞಾನಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಅಂತಹ ಪರಿಸ್ಥಿತಿ ನಮ್ಮ ರಾಷ್ಟ್ರಕ್ಕೆ ಒಳ್ಳೆಯದಲ್ಲ. ಅದಕ್ಕಾಗಿಯೇ ಈ ಅಗತ್ಯ ಟೆಲಿಕಾಂ ತಂತ್ರಜ್ಞಾನಗಳನ್ನು ಭಾರತದೊಳಗೆ ಅಭಿವೃದ್ಧಿಪಡಿಸಬೇಕು ಎಂದು ದೇಶವು ನಿರ್ಧರಿಸಿತು. ಬಿ.ಎಸ್.ಎನ್.ಎಲ್ ನಮ್ಮ ಸ್ವಂತ ದೇಶದಲ್ಲಿ ಸಂಪೂರ್ಣವಾಗಿ ಸ್ಥಳೀಯ 4ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ಬಿ.ಎಸ್.ಎನ್.ಎಲ್ ತನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಣತಿಯಿಂದ ಇತಿಹಾಸ ಸೃಷ್ಟಿಸಿದೆ. ಈ ಸಾಧನೆಗೆ ಕಾರಣರಾದ ನಮ್ಮ ದೇಶದ ಯುವಕರನ್ನು, ಅವರ ಪ್ರತಿಭೆಯನ್ನು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಅವರು ಮಾಡಿದ ಮಹತ್ತರ ಸೇವೆಗಾಗಿ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು ಭಾರತೀಯ ಕಂಪನಿಗಳು ಭಾರತವನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದೊಂದಿಗೆ 4ಜಿ ಸೇವೆಗಳನ್ನು ಪ್ರಾರಂಭಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ 5 ದೇಶಗಳಲ್ಲಿ ಸ್ಥಾನ ಪಡೆದಿವೆ. ಈಗ ನಾವು 4ಜಿ ಸೇವೆಗಳನ್ನು ಪ್ರಾರಂಭಿಸಲು 'ಸ್ವದೇಶಿ'(ಸ್ಥಳೀಯ) ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ 5 ದೇಶಗಳಲ್ಲಿ ಒಂದಾಗಿದ್ದೇವೆ.

ಸ್ನೇಹಿತರೆ,

ಇಂದು ಬಿ.ಎಸ್.ಎನ್.ಎಲ್ ತನ್ನ 25ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವುದು ಸಂತೋಷದ ಕಾಕತಾಳೀಯ. ಈ ಐತಿಹಾಸಿಕ ದಿನದಂದು, ಬಿ.ಎಸ್.ಎನ್.ಎಲ್ ಮತ್ತು ಅದರ ಪಾಲುದಾರರ ಕಠಿಣ ಪರಿಶ್ರಮದ ಮೂಲಕ ಭಾರತವು ಜಾಗತಿಕ ಟೆಲಿಕಾಂ ಉತ್ಪಾದನಾ ಕೇಂದ್ರವಾಗುವತ್ತ ಮುನ್ನಡೆಯುತ್ತಿದೆ. ಇಂದು ಬಿ.ಎಸ್.ಎನ್.ಎಲ್.ನ ಸ್ಥಳೀಯ 4ಜಿ ಜಾಲದ ಅನಾವರಣವು ಜಾರ್ಸುಗುಡದಿಂದ ನಡೆಯುತ್ತಿರುವುದು ಒಡಿಶಾಗೆ ಹೆಮ್ಮೆಯ ವಿಷಯವಾಗಿದೆ. ಇದರಲ್ಲಿ ಸುಮಾರು ಒಂದು ಲಕ್ಷ 4ಜಿ ಟವರ್‌ಗಳು ಸೇರಿವೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ. ಈ ಟವರ್‌ಗಳು ದೇಶದ ದೂರದ ಮೂಲೆಗಳಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿ ತರಲಿವೆ. ಈ 4ಜಿ ತಂತ್ರಜ್ಞಾನದ ವಿಸ್ತರಣೆಯೊಂದಿಗೆ, ದೇಶಾದ್ಯಂತ 2 ಕೋಟಿಗೂ ಹೆಚ್ಚು ಜನರು ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವಿಲ್ಲದ ಸುಮಾರು 30,000 ಹಳ್ಳಿಗಳು ಈಗ ಸಂಪರ್ಕಗೊಳ್ಳಲಿವೆ.

 

ಸ್ನೇಹಿತರೆ,

ಈ ಐತಿಹಾಸಿಕ ಸಂದರ್ಭ ವೀಕ್ಷಿಸಲು ಈ ಸಾವಿರಾರು ಹಳ್ಳಿಗಳ ಜನರು ಇಂದು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ದೂರದ ಗಡಿಗಳಲ್ಲಿರುವ ಹಳ್ಳಿಗಳಿಂದಲೂ, ಈ ಹೊಸ ಹೈ-ಸ್ಪೀಡ್ ಇಂಟರ್ನೆಟ್ ತಂತ್ರಜ್ಞಾನದ ಮೂಲಕ ಅವರು ಈಗ ನಮ್ಮನ್ನು ಕೇಳುತ್ತಿದ್ದಾರೆ, ವೀಕ್ಷಿಸುತ್ತಿದ್ದಾರೆ. ಈ ಇಲಾಖೆಯ ಮೇಲ್ವಿಚಾರಣೆ ವಹಿಸುವ ನಮ್ಮ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಜಿ ಅವರು ಇಂದು ಅಸ್ಸಾಂನಿಂದ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ.

ಸ್ನೇಹಿತರೆ,

ಬಿ.ಎಸ್.ಎನ್.ಎಲ್.ನ ಸ್ಥಳೀಯ 4ಜಿ ಸೇವೆಗಳ ದೊಡ್ಡ ಪ್ರಯೋಜನವೆಂದರೆ ನನ್ನ ಬುಡಕಟ್ಟು ಪ್ರದೇಶಗಳಿಗೆ, ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ, ದೂರದ ಹಳ್ಳಿಗಳಿಗೆ, ದೂರದ ಗುಡ್ಡಗಾಡು ಪ್ರದೇಶಗಳಿಗೆ. ಈಗ, ಅಲ್ಲಿ ವಾಸಿಸುವ ಜನರು ಸಹ ಅತ್ಯುತ್ತಮ ಡಿಜಿಟಲ್ ಸೇವೆಗಳನ್ನು ಪಡೆಯುತ್ತಾರೆ. ಗ್ರಾಮೀಣ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ. ದೂರದ ಪ್ರದೇಶದ ರೈತರು ತಮ್ಮ ಬೆಳೆಗಳ ಬೆಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ; ರೋಗಿಗಳು ಟೆಲಿಮೆಡಿಸಿನ್ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಗಳ ಮೂಲಕ ದೇಶದ ಅತ್ಯುತ್ತಮ ವೈದ್ಯರಿಂದ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುತ್ತದೆ. ಇದು ಗಡಿಗಳಲ್ಲಿ, ಹಿಮಾಲಯದ ಶಿಖರಗಳ ಮೇಲೆ ಮತ್ತು ಮರುಭೂಮಿಗಳಲ್ಲಿ ನಿಂತಿರುವ ನಮ್ಮ ಸೈನಿಕರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಅವರೂ ಈಗ ಸುರಕ್ಷಿತ ಸಂಪರ್ಕದ ಮೂಲಕ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಭಾರತವು ಈಗಾಗಲೇ ಅತ್ಯಂತ ವೇಗದ 5ಜಿ ಸೇವೆಗಳನ್ನು ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾಗುತ್ತಿರುವ ಬಿ.ಎಸ್.ಎನ್.ಎಲ್ ಟವರ್‌ಗಳನ್ನು 5ಜಿ ಸೇವೆಗಳಿಗೆ ಸುಲಭವಾಗಿ ನವೀಕರಿಸಲಾಗುತ್ತದೆ. ಈ ಐತಿಹಾಸಿಕ ದಿನದಂದು ಬಿ.ಎಸ್.ಎನ್.ಎಲ್ ಮತ್ತು ದೇಶದ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

‘ಆತ್ಮನಿರ್ಭರ ಭಾರತ’(ಸ್ವಾವಲಂಬಿ ಭಾರತ) ನಿರ್ಮಿಸಲು ಕೌಶಲ್ಯಪೂರ್ಣ ಯುವಕರು ಮತ್ತು ಸಂಶೋಧನೆಗೆ ಬಲವಾದ ವಾತಾವರಣವೂ ಅತ್ಯಗತ್ಯ. ಅದಕ್ಕಾಗಿಯೇ ಇದು ಬಿಜೆಪಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇಂದು ಒಡಿಶಾ ಸೇರಿದಂತೆ ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ನಾವು ದೇಶದ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳನ್ನು ಸಹ ಆಧುನೀಕರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದು ಮೆರಿಟ್ ಎಂಬ ಹೊಸ ಯೋಜನೆ  ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ತಾಂತ್ರಿಕ ಶಿಕ್ಷಣ ಒದಗಿಸುವ ಸಂಸ್ಥೆಗಳ ಮೇಲೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಪರಿಣಾಮವಾಗಿ, ನಮ್ಮ ಯುವಕರು ಇನ್ನು ಮುಂದೆ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕಾಗಿ ದೊಡ್ಡ ನಗರಗಳಿಗೆ ಹೋಗಬೇಕಾಗಿಲ್ಲ. ಅವರು ಆಧುನಿಕ ಪ್ರಯೋಗಾಲಯಗಳನ್ನು ಪ್ರವೇಶಿಸಲು, ಜಾಗತಿಕ ಮಟ್ಟದ ಕೌಶಲ್ಯಗಳನ್ನು ಕಲಿಯಲು ಮತ್ತು ತಮ್ಮದೇ ಆದ ಪಟ್ಟಣಗಳಲ್ಲಿ ತಮ್ಮದೇ ಆದ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸಲು ಅವಕಾಶಗಳನ್ನು ಪಡೆಯುತ್ತಾರೆ.

ಸ್ನೇಹಿತರೆ,

ಇಂದು ದೇಶದ ಪ್ರತಿಯೊಂದು ಪ್ರದೇಶ, ಪ್ರತಿಯೊಂದು ವಿಭಾಗ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಲು ಬಹಳಷ್ಟು ಕೆಲಸ ಮಾಡಲಾಗುತ್ತಿದೆ. ದಾಖಲೆಯ ಪ್ರಮಾಣದ ಹಣ ಖರ್ಚು ಮಾಡಲಾಗುತ್ತಿದೆ. ಇಲ್ಲದಿದ್ದರೆ, ಹಿಂದಿನ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮ್ಮನ್ನು ಲೂಟಿ ಮಾಡುವ ಅವಕಾಶವನ್ನು ಕಾಂಗ್ರೆಸ್ ಎಂದಿಗೂ ತಪ್ಪಿಸಲಿಲ್ಲ.

ಸ್ನೇಹಿತರೆ,

2014ರಲ್ಲಿ, ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾವು ದೇಶವನ್ನು ಕಾಂಗ್ರೆಸ್‌ನ ಈ ಲೂಟಿ ವ್ಯವಸ್ಥೆಯಿಂದ ಮುಕ್ತಗೊಳಿಸಿದ್ದೇವೆ. ಬಿಜೆಪಿ ಸರ್ಕಾರದಲ್ಲಿ, ಡಬಲ್ ಉಳಿತಾಯ ಮತ್ತು ಡಬಲ್ ಗಳಿಕೆಯ ಯುಗ ಪ್ರಾರಂಭವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಒಬ್ಬ ಉದ್ಯೋಗಿ, ವ್ಯಾಪಾರಿ ಅಥವಾ ಉದ್ಯಮಿ ವರ್ಷಕ್ಕೆ ಕೇವಲ 2 ಲಕ್ಷ ರೂಪಾಯಿ ಗಳಿಸಿದರೂ ಸಹ, ಅವರು ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಕಾಂಗ್ರೆಸ್ ಈ ವ್ಯವಸ್ಥೆಯನ್ನು 2014ರ ವರೆಗೆ ನಡೆಸುತ್ತಲೇ ಇತ್ತು. ಆದರೆ ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ನಂತರ, ವರ್ಷಕ್ಕೆ 12 ಲಕ್ಷ ರೂಪಾಯಿವರೆಗಿನ ಆದಾಯವು ಈಗ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.

 

ಸ್ನೇಹಿತರೆ,

ಸೆಪ್ಟೆಂಬರ್ 22ರಿಂದ ಒಡಿಶಾ ಸೇರಿದಂತೆ ದೇಶದಲ್ಲಿ ಹೊಸ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಈ ಸುಧಾರಣೆಗಳು ನಿಮಗೆಲ್ಲರಿಗೂ ಜಿಎಸ್ಟಿ ಬಚತ್ ಉತ್ಸವ (ಉಳಿತಾಯ ಉತ್ಸವ)ದ ಉಡುಗೊರೆ ನೀಡಿವೆ. ಈಗ ತಾಯಂದಿರು ಮತ್ತು ಸಹೋದರಿಯರಿಗೆ ಅಡುಗೆ  ಮನೆ ನಡೆಸುವುದು ಸುಲಭವಾಗಿದೆ. ಹೆಚ್ಚಿನ ಅಗತ್ಯ ವಸ್ತುಗಳ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ನಾನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ಒಡಿಶಾದಲ್ಲಿ ಒಂದು ಕುಟುಂಬವು ಮನೆಯ ಅಗತ್ಯಗಳಿಗಾಗಿ ವರ್ಷಕ್ಕೆ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ ಎಂದು ಭಾವಿಸೋಣ, ಅದು ತಿಂಗಳಿಗೆ ಸುಮಾರು 12–15 ಸಾವಿರ ರೂಪಾಯಿ. 2014ರ ಮೊದಲು, ನೀವು 1 ಲಕ್ಷ ರೂಪಾಯಿ ಖರ್ಚು ಮಾಡಿದರೆ, ಕಾಂಗ್ರೆಸ್ ಸರ್ಕಾರವು 20,000–25,000 ರೂಪಾಯಿ ತೆರಿಗೆ ತೆಗೆದುಕೊಳ್ಳುತ್ತಿತ್ತು. ಅಂದರೆ 1 ಲಕ್ಷ ರೂಪಾಯಿ ಖರ್ಚು ಮಾಡಲು, ನೀವು ವಾಸ್ತವವಾಗಿ 1.25 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ನಾವು 2017ರಲ್ಲಿ ಮೊದಲು ಜಿಎಸ್ಟಿ ಪರಿಚಯಿಸಿದಾಗ, ನಾವು ನಿಮ್ಮ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದೇವೆ ಮತ್ತು ತೆರಿಗೆಗಳನ್ನು ಕಡಿತಗೊಳಿಸಿದ್ದೇವೆ. ಈಗ, ಈ ಹೊಸ ಜಿಎಸ್ಟಿ ಸುಧಾರಣೆಗಳೊಂದಿಗೆ, ಬಿಜೆಪಿ ಸರ್ಕಾರವು ಅದನ್ನು ಇನ್ನಷ್ಟು ಕಡಿಮೆ ಮಾಡಿದೆ. ಇಂದು, ವಾರ್ಷಿಕ 1 ಲಕ್ಷ ರೂಪಾಯಿ ಮನೆಯ ವೆಚ್ಚಕ್ಕೆ, ಒಂದು ಕುಟುಂಬವು ಕೇವಲ 5,000–6,000 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಈಗ ಹೇಳಿ, ಮೊದಲು ಅದು 25,000 ರೂಪಾಯಿಗಳಷ್ಟಿತ್ತು, ಈಗ ಅದು ಕೇವಲ 5,000–6,000 ರೂಪಾಯಿಗೆ ಇಳಿದಿದೆ.  ಕಾಂಗ್ರೆಸ್ ಯುಗಕ್ಕೆ ಹೋಲಿಸಿದರೆ, ಇಂದು ಬಡ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪ್ರತಿ ವರ್ಷ 1 ಲಕ್ಷ ರೂಪಾಯಿ ಖರ್ಚಿನಲ್ಲಿ 20,000–25,000 ರೂಪಾಯಿ ಉಳಿಸುತ್ತಿವೆ.

ಸ್ನೇಹಿತರೆ,

ನಮ್ಮ ಒಡಿಶಾ ರೈತರ ಭೂಮಿಗೆ  ಈ ಜಿಎಸ್ಟಿ ಬಚತ್ ಉತ್ಸವವು ರೈತರಿಗೆ ಸಹ ಬಹಳ ಶುಭವಾಗಿದೆ. ಕಾಂಗ್ರೆಸ್ ಯುಗದಲ್ಲಿ, ಒಬ್ಬ ರೈತ ಟ್ರ್ಯಾಕ್ಟರ್ ಖರೀದಿಸಿದರೆ, ಅವನು ಒಂದೇ ಟ್ರ್ಯಾಕ್ಟರ್ ಮೇಲೆ 70,000 ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು. ಜಿಎಸ್ಟಿ ಪರಿಚಯಿಸಿದ ನಂತರ ನಾವು ತೆರಿಗೆ ಕಡಿಮೆ ಮಾಡಿದ್ದೇವೆ. ಈಗ ಹೊಸ ಜಿಎಸ್ಟಿ ರಚನೆಯೊಂದಿಗೆ, ಒಬ್ಬ ರೈತ ಅದೇ ಟ್ರ್ಯಾಕ್ಟರ್ ಮೇಲೆ ನೇರವಾಗಿ ಸುಮಾರು 40,000 ರೂಪಾಯಿ ಉಳಿಸುತ್ತಾನೆ. ಟ್ರ್ಯಾಕ್ಟರ್ ಮೇಲೆ 40,000 ರೂಪಾಯಿ ನಿವ್ವಳ ಉಳಿತಾಯ. ರೈತರು ಭತ್ತ ನಾಟಿ ಮಾಡಲು ಬಳಸುವ ಯಂತ್ರದಿಂದ ಈಗ 15,000 ರೂಪಾಯಿ ಉಳಿಸುತ್ತಾರೆ. ಅದೇ ರೀತಿ, ಅವರು ಪವರ್ ಟಿಲ್ಲರ್‌ನಲ್ಲಿ 10,000 ರೂಪಾಯಿ ಮತ್ತು ಥ್ರೆಷರ್‌ನಲ್ಲಿ 25,000 ರೂಪಾಯಿ ಉಳಿಸುತ್ತಾರೆ. ಬಿಜೆಪಿ ಸರ್ಕಾರವು ಅಂತಹ ಅನೇಕ ಕೃಷಿ ಉಪಕರಣಗಳ ಮೇಲಿನ ತೆರಿಗೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.

ಸ್ನೇಹಿತರೆ,

ನಮ್ಮ ಬುಡಕಟ್ಟು ಸಮುದಾಯದ ಒಂದು ದೊಡ್ಡ ಭಾಗವು ಒಡಿಶಾದಲ್ಲಿ ವಾಸಿಸುತ್ತಿದೆ. ಈ ಬುಡಕಟ್ಟು ಸಮಾಜವು ತಮ್ಮ ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನವನ್ನು ಅವಲಂಬಿಸಿದೆ. ನಮ್ಮ ಸರ್ಕಾರ ಈಗಾಗಲೇ ಟೆಂಡು ಎಲೆ ಸಂಗ್ರಹಕರಿಗಾಗಿ ಕೆಲಸ ಮಾಡುತ್ತಿದೆ, ಈಗ ಅದರ ಮೇಲಿನ ಜಿಎಸ್‌ಟಿಯನ್ನು ಸಹ ಬಹಳವಾಗಿ ಕಡಿಮೆ ಮಾಡಲಾಗಿದೆ. ಇದು ಸಂಗ್ರಹಕರು ಖಂಡಿತವಾಗಿಯೂ ಟೆಂಡು ಎಲೆಗಳಿಗೆ ಹೆಚ್ಚಿನ ಬೆಲೆ ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ.

 

ಸ್ನೇಹಿತರೆ,

ಬಿಜೆಪಿ ಸರ್ಕಾರವು ನಿಮಗೆ ನಿರಂತರವಾಗಿ ತೆರಿಗೆ ವಿನಾಯಿತಿ ನೀಡುತ್ತಿದೆ, ನಿಮ್ಮ ಉಳಿತಾಯ ಹೆಚ್ಚಿಸುತ್ತಿದೆ. ಆದರೆ ಕಾಂಗ್ರೆಸ್ ಈಗಲೂ ತನ್ನ ಹಳೆಯ ವಿಧಾನಗಳನ್ನು ಬಿಡುತ್ತಿಲ್ಲ. ಕಾಂಗ್ರೆಸ್ ಸರ್ಕಾರಗಳು ಇನ್ನೂ ನಿಮ್ಮನ್ನು ಲೂಟಿ ಮಾಡುವಲ್ಲಿ ನಿರತವಾಗಿವೆ.

ನಾನು ಇದನ್ನು ಕಾರಣವಿಲ್ಲದೆ ಹೇಳುತ್ತಿಲ್ಲ. ದೇಶಾದ್ಯಂತ ಜನರು ತುಂಬಾ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ. ನಾವು ಹೊಸ ಜಿಎಸ್‌ಟಿ ದರಗಳನ್ನು ಜಾರಿಗೆ ತಂದಾಗ, ನಾವು ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಿದ್ದೇವೆ. ಜನರು ತಮ್ಮ ಮನೆಗಳನ್ನು ಕಟ್ಟಲು ಅಥವಾ ದುರಸ್ತಿ ಮಾಡಲು ಕಡಿಮೆ ಹಣ ಖರ್ಚು ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಏಕೆಂದರೆ ಸಿಮೆಂಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಆದರೆ ಹೇಳಿಕೆಗಳನ್ನು ಮಾತ್ರ ನೀಡುವವರು ನಿಜವಾಗಿ ಏನು ಮಾಡುತ್ತಿದ್ದಾರೆಂದು ನೋಡಿ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ ನಮ್ಮನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನಿಂದಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದೆ. ಆದರೆ ನಾವು ಸಿಮೆಂಟ್ ಮೇಲಿನ ಜಿಎಸ್‌ಟಿ ದರ ಕಡಿಮೆ ಮಾಡಿದಾಗ, ದೇಶಾದ್ಯಂತ ಬೆಲೆಗಳು ಕಡಿಮೆಯಾದವು. ಆದರೆ, ಸಾಮಾನ್ಯ ಜನರಿಗೆ ಈ ಪರಿಹಾರ ನೀಡಲು ಕಾಂಗ್ರೆಸ್ ಬಯಸಲಿಲ್ಲ. ಈ ಹಿಂದೆ, ನಾವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಿದಾಗ, ಕಾಂಗ್ರೆಸ್ ಸರ್ಕಾರಗಳು ಎಲ್ಲೆಲ್ಲಿ ಇದ್ದವೋ ಅಲ್ಲೆಲ್ಲಾ ಅವರು ಅದರ ಮೇಲೆ ಮತ್ತೊಂದು ತೆರಿಗೆ ವಿಧಿಸಿದರು. ಪರಿಣಾಮವಾಗಿ, ಬೆಲೆಗಳು ಒಂದೇ ಆಗಿದ್ದವು, ಆದರೆ ಅವರು ತಮ್ಮದೇ ಆದ ಖಜಾನೆಗಳನ್ನು ತುಂಬಿಸಿ ಲೂಟಿ ಮಾಡಲು ಬಾಗಿಲು ತೆರೆದರು. ಹಿಮಾಚಲ ಪ್ರದೇಶದಲ್ಲಿಯೂ ಅದೇ ಸಂಭವಿಸಿತು. ನಮ್ಮ ಸರ್ಕಾರ ಸಿಮೆಂಟ್ ಬೆಲೆ ಕಡಿಮೆ ಮಾಡಿದಾಗ, ಅವರು ತಮ್ಮದೇ ಆದ ಹೊಸ ತೆರಿಗೆ ವಿಧಿಸಿದರು. ಆದ್ದರಿಂದ, ಭಾರತ ಸರ್ಕಾರವು ಹಿಮಾಚಲದ ಜನರಿಗೆ ನೀಡಲು ಬಯಸಿದ ಪ್ರಯೋಜನವನ್ನು ಈ ಲೂಟಿಕೋರ ಕಾಂಗ್ರೆಸ್ ಸರ್ಕಾರ ತಡೆಯಿತು. ಅದಕ್ಕಾಗಿಯೇ ನಾನು ಹೇಳುತ್ತೇನೆ, ಕಾಂಗ್ರೆಸ್ ಸರ್ಕಾರ ಎಲ್ಲಿದೆಯೋ ಅಲ್ಲೆಲ್ಲಾ ಅದು ಜನರನ್ನು ಲೂಟಿ ಮಾಡುತ್ತದೆ. ಅದಕ್ಕಾಗಿಯೇ ದೇಶದ ಜನರು ಕಾಂಗ್ರೆಸ್ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅದರ ಮಿತ್ರರಾಷ್ಟ್ರಗಳ ಬಗ್ಗೆಯೂ ಜಾಗರೂಕರಾಗಿರಬೇಕು.

ಸ್ನೇಹಿತರೆ,

ಜಿಎಸ್ಟಿ ಬಚತ್ ಉತ್ಸವವು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅತ್ಯಂತ ಸಂತೋಷ ತಂದಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸೇವೆ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನಾವು ತಾಯಂದಿರು ಮತ್ತು ಸಹೋದರಿಯರ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದ್ದೇವೆ.

ಸ್ನೇಹಿತರೆ,

ತನ್ನ ಕುಟುಂಬದ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡುವವರಲ್ಲಿ ತಾಯಿಯೇ ಮೊದಲಿಗರು. ನಾವೆಲ್ಲರೂ ತಾಯಿಯ ತ್ಯಾಗಗಳನ್ನು ನೋಡಿದ್ದೇವೆ. ತನ್ನ ಮಕ್ಕಳಿಗೆ ಹೊರೆಯಾಗದಂತೆ ಅವಳು ಪ್ರತಿಯೊಂದು ಕಷ್ಟವನ್ನೂ ತಾನೇ ಹೊತ್ತುಕೊಳ್ಳುತ್ತಾಳೆ. ತನ್ನ ಚಿಕಿತ್ಸೆಯು ಕುಟುಂಬದ ಮೇಲೆ ಆರ್ಥಿಕ ಹೊರೆಯಾಗದಂತೆ ತಾಯಿ ತನ್ನ ಅನಾರೋಗ್ಯವನ್ನು ಸಹ ಮರೆಮಾಡುತ್ತಾಳೆ. ಅದಕ್ಕಾಗಿಯೇ, ನಾವು ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭಿಸಿದಾಗ, ಅದು ನಮ್ಮ ತಾಯಂದಿರು, ಸಹೋದರಿಯರು ಮತ್ತು ದೇಶದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನ ನೀಡಿತು. ಅವರು 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ  ಪಡೆದರು.

 

ಸ್ನೇಹಿತರೆ,

ತಾಯಿ ಆರೋಗ್ಯವಾಗಿದ್ದಾಗ, ಕುಟುಂಬವು ಬಲಗೊಳ್ಳುತ್ತದೆ. ಅದಕ್ಕಾಗಿಯೇ, ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿಯಂದು, ಪ್ರತಿಯೊಬ್ಬ ತಾಯಿಯ ಉತ್ತಮ ಆರೋಗ್ಯಕ್ಕಾಗಿ ದೇಶಾದ್ಯಂತ 'ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ'(ಆರೋಗ್ಯವಂತ ಮಹಿಳೆ, ಬಲಿಷ್ಠ ಕುಟುಂಬ ಅಭಿಯಾನ) ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ, ದೇಶಾದ್ಯಂತ 8 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಶಿಬಿರಗಳಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರು ಈಗಾಗಲೇ ತಪಾಸಣೆಗೆ ಒಳಗಾಗಿದ್ದಾರೆ. ಮಧುಮೇಹ, ಸ್ತನ ಕ್ಯಾನ್ಸರ್, ಟಿಬಿ, ಕುಡಗೋಲು ಕೋಶ ರಕ್ತಹೀನತೆ ಮತ್ತು ಇತರ ಹಲವು ಕಾಯಿಲೆಗಳಿಗೆ ತಪಾಸಣೆ ನಡೆಸಲಾಗುತ್ತಿದೆ. ಒಡಿಶಾದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಖಂಡಿತವಾಗಿಯೂ ನಿಮ್ಮ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ.

ಸ್ನೇಹಿತರೆ,

ರಾಷ್ಟ್ರ ಮತ್ತು ಅದರ ನಾಗರಿಕರನ್ನು ಬಲಪಡಿಸಲು ಬಿಜೆಪಿ ಸರ್ಕಾರ ನಿರಂತರವಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದೆ. ಅದು ತೆರಿಗೆ ಕಡಿತವಾಗಲಿ ಅಥವಾ ಆಧುನಿಕ ಸಂಪರ್ಕವಾಗಲಿ, ನಾವು ಅನುಕೂಲತೆ ಮತ್ತು ಸಮೃದ್ಧಿಯ ಮಾರ್ಗಗಳನ್ನು ರೂಪಿಸುತ್ತಿದ್ದೇವೆ. ಒಡಿಶಾ ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದೆ. ಇಂದು, ಒಡಿಶಾದಲ್ಲಿ 6 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಸುಮಾರು 60 ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಜಾರ್ಸುಗುಡಾದಲ್ಲಿರುವ ವೀರ್ ಸುರೇಂದ್ರ ಸಾಯಿ ವಿಮಾನ ನಿಲ್ದಾಣವು ಈಗ ದೇಶದ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದೆ. ಒಡಿಶಾ ಈಗ ಖನಿಜಗಳು ಮತ್ತು ಗಣಿಗಾರಿಕೆಯಿಂದ ಹೆಚ್ಚಿನ ಆದಾಯ ಪಡೆಯುತ್ತಿದೆ. ಒಡಿಶಾದ ತಾಯಂದಿರು ಮತ್ತು ಸಹೋದರಿಯರು ಸುಭದ್ರಾ ಯೋಜನೆಯ ಮೂಲಕ ನಿರಂತರವಾಗಿ ಬೆಂಬಲ ಪಡೆಯುತ್ತಿದ್ದಾರೆ. ನಮ್ಮ ಒಡಿಶಾ ಈಗಾಗಲೇ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಅಭಿವೃದ್ಧಿಯ ಈ ಪ್ರಯಾಣವು ಇನ್ನೂ ವೇಗವಾಗಿ ಮುಂದುವರಿಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಈಗ, ನನ್ನೊಂದಿಗೆ, ಪೂರ್ಣ ಶಕ್ತಿಯಿಂದ ಹೇಳಿ –

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕೀ ಜೈ!

ಜೈ ಜಗನ್ನಾಥ!

ಜೈ ಜಗನ್ನಾಥ!

ಜೈ ಜಗನ್ನಾಥ!

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi hails India’s ‘Mission Drishti’ launch as ‘world’s first OptoSAR satellite’ enters orbit

Media Coverage

PM Modi hails India’s ‘Mission Drishti’ launch as ‘world’s first OptoSAR satellite’ enters orbit
NM on the go

Nm on the go

Always be the first to hear from the PM. Get the App Now!
...
Prime Minister extends birthday greetings to Vice President Thiru CP Radhakrishnan Ji
May 04, 2026

Prime Minister Shri Narendra Modi today extended warm birthday greetings to Vice President Thiru CP Radhakrishnan Ji.

The Prime Minister noted that the Vice President is making numerous efforts to strengthen the collective dream of building a Viksit Bharat. Shri Modi highlighted that his consistent efforts to enhance the productivity and effectiveness of Parliamentary proceedings reflect his deep commitment to democratic values.

The Prime Minister further stated that the Vice President's unwavering passion for all-round development, with a concern for the poor and marginalised, is equally inspiring. Emphasising that his public life continues to be guided by dedication, discipline, and a clear sense of purpose, Shri Modi prayed for his good health, happiness, and a long life in the service of the nation.

The Prime Minister posted on X:

"Warm birthday greetings to Vice President Thiru CP Radhakrishnan Ji. He is making numerous efforts to strengthen our collective dream of building a Viksit Bharat. His consistent efforts to enhance the productivity and effectiveness of our Parliamentary proceedings reflect his deep commitment to democratic values. Equally inspiring is his unwavering passion for all-round development, with a concern for the poor and marginalised. His public life continues to be guided by dedication, discipline and a clear sense of purpose. I pray for his good health, happiness and a long life in the service of the nation."