ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಮರ್ಪಣೆ
"ಸಬ್ಕಾ ಪ್ರಯಾಸ್" ನೊಂದಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿದೆ"
"ಕರ್ನಾಟಕವು ಬಡವರ ಸೇವೆ ಮಾಡುವ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ವೈಭವಯುತ ಪರಂಪರೆಯನ್ನು ಹೊಂದಿದೆ"
ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಇದು ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣದ ಆಯ್ಕೆಯನ್ನು ಒದಗಿಸಿದೆ.
ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯಕ್ಕೆ ನಾವು ಆದ್ಯತೆ ನೀಡಿದ್ದೇವೆ.
ಆರೋಗ್ಯ ಸಂಬಂಧಿತ ನೀತಿಗಳಲ್ಲಿ ನಾವು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಎಸ್‌ ಎಂ ಎಸ್‌ ಐ ಎಂ ಎಸ್‌ ಆರ್‌ ಸಂಪೂರ್ಣ ಉಚಿತವಾಗಿ ಎಲ್ಲರಿಗೂ ವೈದ್ಯಕೀಯ ಶಿಕ್ಷಣ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುತ್ತದೆ. 2023 ರ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಚಿಕ್ಕಬಳ್ಳಾಪುರವು ಆಧುನಿಕ ಭಾರತದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದೆ ಎಂದರು. ಅವರ ಸಮಾಧಿಗೆ ಗೌರವ ಸಲ್ಲಿಸಲು ಮತ್ತು ಅವರನ್ನು ಕುರಿತ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಈ ಪುಣ್ಯಭೂಮಿಯ ಮುಂದೆ ನಾನು ತಲೆಬಾಗುತ್ತೇನೆ ಎಂದು ಪ್ರಧಾನಿ ಹೇಳಿರು. ಸರ್ ಎಂ. ವಿಶ್ವೇಶ್ವರಯ್ಯನವರು ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಹೊಸ ಆವಿಷ್ಕಾರಗಳನ್ನು ಮತ್ತು ಹೊಸ ಎಂಜಿನಿಯರಿಂಗ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸ್ಫೂರ್ತಿಯ ಮೂಲ ಚಿಕ್ಕಬಳ್ಳಾಪುರದ ನೆಲ ಎಂದು ಅವರು ಒತ್ತಿ ಹೇಳಿದರು.

ಸತ್ಯ ಸಾಯಿ ಗ್ರಾಮವು ಸೇವೆಗೆ ಒಂದು ಅದ್ಭುತ ಮಾದರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಶಿಕ್ಷಣ ಮತ್ತು ಆರೋಗ್ಯ ಉಪಕ್ರಮಗಳ ಮೂಲಕ ಸಂಸ್ಥೆಯು ಕೈಗೊಂಡಿರುವ ಅಭಿಯಾನವನ್ನು ಅವರು ಶ್ಲಾಘಿಸಿದರು. ಇಂದಿನ ವೈದ್ಯಕೀಯ ಕಾಲೇಜು ಉದ್ಘಾಟನೆಯು ಈ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.

ಅಮೃತ ಕಾಲದ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ರಾಷ್ಟ್ರದ ಸಂಕಲ್ಪವನ್ನು ಮತ್ತು ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಬೃಹತ್ ಸಂಕಲ್ಪವನ್ನು ಸಾಧಿಸುವ ಜನರ ಉತ್ಸಾಹವನ್ನು ಪ್ರಧಾನಿ ಉಲ್ಲೇಖಿಸಿದರು. “ಇದಕ್ಕೆ ಕೇವಲ ಒಂದು ಉತ್ತರವಿದೆ, ಬಲವಾದ, ದೃಢವಾದ ಆ ಉತ್ತರವೆಂದರೆ ಸಬ್ಕಾ ಪ್ರಯಾಸ್. ಪ್ರತಿಯೊಬ್ಬ ದೇಶವಾಸಿಗಳ ಪ್ರಯತ್ನದಿಂದ ಇದು ಖಂಡಿತವಾಗಿಯೂ ಸಾಕಾರಗೊಳ್ಳಲಿದೆ”ಎಂದು ಪ್ರಧಾನಮಂತ್ರಿ ಹೇಳಿದರು.

‘ವಿಕಸಿತ ಭಾರತʼವನ್ನು ಸಾಧಿಸುವ ಪ್ರಯಾಣದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಪಾತ್ರ ಮತ್ತು ಸಂತರು, ಆಶ್ರಮಗಳು ಮತ್ತು ಮಠಗಳ ಶ್ರೇಷ್ಠ ಪರಂಪರೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ನಂಬಿಕೆ ಮತ್ತು ಆಧ್ಯಾತ್ಮಿಕ ಆಯಾಮಗಳೊಂದಿಗೆ ಬಡವರು, ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳನ್ನು ಸಬಲೀಕರಣಗೊಳಿಸುತ್ತಿವೆ ಎಂದರು. ನಿಮ್ಮ ಸಂಸ್ಥೆಯು ಮಾಡಿರುವ ಕೆಲಸವು 'ಸಬ್ಕಾ ಪ್ರಯಾಸ್'ನ ಉತ್ಸಾಹವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿಯವರು ಶ್ರೀ ಸತ್ಯ ಸಾಯಿ ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯವಾದ ‘ಯೋಗಃ ಕರ್ಮಸು ಕೌಶಲಮ್ʼಅರ್ಥಾತ್ ಕ್ರಿಯೆಯಲ್ಲಿನ ಪರಿಣತಿಯೇ ಯೋಗ ಎಂದು ವಿವರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರದ ಪ್ರಯತ್ನಗಳನ್ನು ಶ್ರೀ ಮೋದಿ ಅದರೊಂದಿಗೆ ಸಮೀಕರಿಸಿದರು. 2014 ಕ್ಕೂ ಮೊದಲು ದೇಶದಲ್ಲಿ 380 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು ಆ ಸಂಖ್ಯೆ 650 ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಒಂದು ಕಾಲದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ದೇಶದ ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳಲ್ಲಿ 40 ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.

ಕಳೆದ 9 ವರ್ಷಗಳಲ್ಲಿ, ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ 10 ವರ್ಷಗಳಲ್ಲಿ ದೇಶವು ಸೃಷ್ಟಿಸುವ ವೈದ್ಯರ ಸಂಖ್ಯೆಯು ಸ್ವಾತಂತ್ರ್ಯದ ಸಮಯದಿಂದ ಭಾರತದಲ್ಲಿ ಸೃಷ್ಟಿಯಾಗಿರುವ ವೈದ್ಯರ ಸಂಖ್ಯೆಗೆ ಸಮಾನವಾಗಿರುತ್ತದೆ ಎಂದು ಅವರು ಹೇಳಿದರು. ದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಲಾಭವನ್ನು ಕರ್ನಾಟಕವೂ ಪಡೆಯುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ರಾಜ್ಯವು ಸುಮಾರು 70 ವೈದ್ಯಕೀಯ ಕಾಲೇಜುಗಳಿಗೆ ನೆಲೆಯಾಗಿದೆ ಮತ್ತು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಗೊಂಡಿರುವುದು ಡಬಲ್‌ ಎಂಜಿನ್ ಸರ್ಕಾರದ ಪ್ರಯತ್ನಕ್ಕೆ ಉದಾಹರಣೆಯಾಗಿದೆ ಎಂದರು. ಈ ಬಾರಿಯ ಬಜೆಟ್‌ನ ಭಾಗವಾಗಿ ದೇಶದ 150ಕ್ಕೂ ಹೆಚ್ಚು ನರ್ಸಿಂಗ್ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಅವರು, ಇದು ನರ್ಸಿಂಗ್ ವಲಯದಲ್ಲಿ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣದಲ್ಲಿ ಭಾಷೆಯ ಸವಾಲನ್ನು ಪ್ರಸ್ತಾಪಿಸಿದ ಪ್ರಧಾನಿ, ವೈದ್ಯಕೀಯ ಶಿಕ್ಷಣದಲ್ಲಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ಈ ಹಿಂದೆ ಸಾಕಷ್ಟು ಪ್ರಯತ್ನಗಳು ನಡೆದಿಲ್ಲ ಎಂದು ವಿಷಾದಿಸಿದರು. ಹಳ್ಳಿಗಳು ಮತ್ತು ಹಿಂದುಳಿದ ಪ್ರದೇಶಗಳ ಯುವಕರು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವೃತ್ತಿಗಳಲ್ಲಿ ಸ್ಥಾನ ಪಡೆಯುವುದನ್ನು ಈ ರಾಜಕೀಯ ಪಕ್ಷಗಳು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು. ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಇದು ಕನ್ನಡ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣದ ಆಯ್ಕೆಯನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು.

ದೇಶದ ರಾಜಕೀಯದಲ್ಲಿ ಹಿಂದಿನಿಂದಲೂ ಬಡವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಲಾಗಿದ್ದ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ನಮ್ಮ ಸರ್ಕಾರವು ಬಡವರ ಸೇವೆಯನ್ನು ತನ್ನ ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸಿದೆ. ನಾವು ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯಕ್ಕೆ ಆದ್ಯತೆ ನೀಡಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಜನೌಷಧಿ ಕೇಂದ್ರಗಳು ಅಥವಾ ಕಡಿಮೆ ಬೆಲೆಯ ಔಷಧಿಗಳ ಉದಾಹರಣೆ ನೀಡಿದ ಅವರು, ಇಂದು ದೇಶಾದ್ಯಂತ ಸುಮಾರು 10,000 ಜನೌಷಧಿ ಕೇಂದ್ರಗಳಿದ್ದು, ಅವುಗಳಲ್ಲಿ 1000 ಕ್ಕೂ ಹೆಚ್ಚು ಕರ್ನಾಟಕದಲ್ಲಿವೆ ಎಂದು ತಿಳಿಸಿದರು. ಇಂತಹ ಉಪಕ್ರಮದಿಂದ ಬಡವರು ಔಷಧಿಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಆಸ್ಪತ್ರೆಗಳಿಲ್ಲದೆ ಬಡವರು ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಿಂದಿನ ಘಟನೆಗಳ ಬಗ್ಗೆಯೂ ಪ್ರಧಾನಿ ಬೆಳಕು ಚೆಲ್ಲಿದರು. ಬಡವರ ಈ ಕಾಳಜಿಯ ಬಗ್ಗೆ ಈಗಿನ ಸರ್ಕಾರ ಗಮನ ಹರಿಸಿದೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಅದನ್ನು ಪರಿಹರಿಸಿ ಬಡ ಕುಟುಂಬಗಳಿಗೆ ಆಸ್ಪತ್ರೆಗಳ ಬಾಗಿಲು ತೆರೆದಿದೆ ಎಂದು ಅವರು ಹೇಳಿದರು. ಕರ್ನಾಟಕದ ಲಕ್ಷಾಂತರ ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಿ, ಸರ್ಕಾರವು ಬಡವರಿಗೆ 5 ಲಕ್ಷ ರೂ,ವರೆಗೆ ಉಚಿತ ಚಿಕಿತ್ಸೆಯನ್ನು ಖಾತರಿಪಡಿಸಿದೆ ಎಂದು ಹೇಳಿದರು. ಹೃದಯ ಶಸ್ತ್ರಚಿಕಿತ್ಸೆ, ಮಂಡಿಚಿಪ್ಪು ಬದಲಿ ಮತ್ತು ಡಯಾಲಿಸಿಸ್‌ನಂತಹ ದುಬಾರಿ ಶಸ್ತ್ರಚಿಕಿತ್ಸಾ ವಿಧಾನಗಳ ಉದಾಹರಣೆಗಳನ್ನು ನೀಡಿದ ಪ್ರಧಾನಿ, ದುಬಾರಿ ಶುಲ್ಕವನ್ನು ಕಡಿಮೆ ಮಾಡಲು ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.

ಆರೋಗ್ಯ ಸಂಬಂಧಿತ ನೀತಿಗಳಲ್ಲಿ ನಾವು ತಾಯಂದಿರು ಮತ್ತು ಸಹೋದರಿಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕಾಂಶ ಸುಧಾರಿಸಿದಾಗ ಇಡೀ ಪೀಳಿಗೆಯ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ ಪ್ರಧಾನಿ, ಸರ್ಕಾರವು ಈ ನಿಟ್ಟಿನಲ್ಲಿ ವಿಶೇಷ ಒತ್ತು ನೀಡುತ್ತಿದೆ ಎಂದರು. ಶೌಚಾಲಯಗಳನ್ನು ನಿರ್ಮಿಸುವ, ಉಚಿತ ಗ್ಯಾಸ್ ಸಂಪರ್ಕ ನೀಡುವ, ಪ್ರತಿ ಮನೆಗೆ ನಲ್ಲಿಯ ಮೂಲಕ ನೀರು ಒದಗಿಸುವ, ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ಮತ್ತು ಪೌಷ್ಟಿಕ ಆಹಾರಕ್ಕಾಗಿ ನೇರವಾಗಿ ಬ್ಯಾಂಕ್‌ಗೆ ಹಣವನ್ನು ಕಳುಹಿಸುವ ಯೋಜನೆಗಳ ಉದಾಹರಣೆಯನ್ನು ನೀಡಿದರು.  ಸ್ತನ ಕ್ಯಾನ್ಸರ್‌ಗೆ ಸರ್ಕಾರ ನೀಡಿರುವ ವಿಶೇಷ ಗಮನವನ್ನು ಒತ್ತಿ ಹೇಳಿದ ಅವರು, ಹಳ್ಳಿಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಮತ್ತು ಅಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪರೀಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 9,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿದ್ದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅವರ ತಂಡವನ್ನು ಪ್ರಧಾನಿ ಅಭಿನಂದಿಸಿದರು.

ಎಎನ್‌ಎಂ ಮತ್ತು ಆಶಾ ಕಾರ್ಯಕರ್ತರನ್ನು ಬಲಪಡಿಸಲು ಮತ್ತು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರ ಕೈಗೊಂಡ ಕ್ರಮವನ್ನು ಪ್ರಧಾನಿ ಶ್ಲಾಘಿಸಿದರು. ಕರ್ನಾಟಕದ 50 ಸಾವಿರ ಎಎನ್‌ಎಂ ಮತ್ತು ಆಶಾ ಕಾರ್ಯಕರ್ತೆಯರು ಹಾಗು ಸುಮಾರು 1 ಲಕ್ಷ ನೋಂದಾಯಿತ ಶುಶ್ರೂಷಕರು ಮತ್ತು ಆರೋಗ್ಯ ಕಾರ್ಯಕರ್ತರು ಆಧುನಿಕ ಗ್ಯಾಜೆಟ್‌ಗಳನ್ನು ಪಡೆದಿದ್ದಾರೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಡಬಲ್ ಇಂಜಿನ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಡಬಲ್ ಇಂಜಿನ್ ಸರ್ಕಾರವು ಮಹಿಳೆಯರ ಆರೋಗ್ಯದ ಜೊತೆಗೆ ಆರ್ಥಿಕ ಸಬಲೀಕರಣಕ್ಕೂ ಸಂಪೂರ್ಣ ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಕರ್ನಾಟಕವನ್ನು ಹಾಲು ಮತ್ತು ರೇಷ್ಮೆಯ ನಾಡು ಎಂದು ಕರೆದ ಪ್ರಧಾನಿ, ಜಾನುವಾರು ಸಾಕಣೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಾನುವಾರುಗಳಿಗೆ ಬೃಹತ್ ಲಸಿಕೆ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದರು. ಡೈರಿ ಸಹಕಾರಿ ಸಂಘಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಡಬಲ್ ಇಂಜಿನ್ ಸರ್ಕಾರ ಪ್ರಯತ್ನವಾಗಿದೆ. ಗ್ರಾಮಗಳಲ್ಲಿರುವ ಮಹಿಳೆಯರ ಸ್ವ-ಸಹಾಯ ಗುಂಪುಗಳನ್ನು ಸಹ ಸಬಲೀಕರಣಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶವು ಆರೋಗ್ಯಕರವಾಗಿದ್ದಾಗ ಮತ್ತು 'ಸಬ್ಕಾ ಪ್ರಯಾಸ್' ಅಭಿವೃದ್ಧಿಗೆ ಮೀಸಲಾದಾಗ, ನಾವು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ವೇಗವಾಗಿ ಸಾಧಿಸುತ್ತೇವೆ ಎಂದು ಅವರು ಹೇಳಿದರು.

ಭಗವಾನ್ ಸಾಯಿಬಾಬಾ ಮತ್ತು ಸಂಸ್ಥಾನದೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಪ್ರಧಾನಿ ಸ್ಮರಿಸಿದರು. “ನಾನು ಇಲ್ಲಿ ಅತಿಥಿಯಲ್ಲ, ನಾನು ಈ ಸ್ಥಳ ಮತ್ತು ನೆಲದ ಭಾಗವಾಗಿದ್ದೇನೆ. ಪ್ರತಿ ಬಾರಿ ನಾನು ನಿಮ್ಮ ನಡುವೆ ಬಂದಾಗ ಆ ಬಂಧವು ನವೀಕರಿಸಲ್ಪಡುತ್ತದೆ ಮತ್ತು ಬಲವಾದ ಸಂಬಂಧಗಳ ಬಯಕೆಯು ಹೃದಯದಲ್ಲಿ ಹೊರಹೊಮ್ಮುತ್ತದೆ," ಎಂದ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೀ ಸತ್ಯ ಸಾಯಿ ಸಂಜೀವಿನಿ ಮಕ್ಕಳ ಹೃದಯ ಆರೈಕೆ ಕೇಂದ್ರದ ಅಧ್ಯಕ್ಷ ಡಾ. ಸಿ ಶ್ರೀನಿವಾಸ್, ಸದ್ಗುರು ಶ್ರೀ ಮಧುಸೂದನ್ ಸಾಯಿ ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಈ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ನೀಡಲು ಮತ್ತು ಲಭ್ಯವಾಗಬಹುದಾದ ಹಾಗು ಕೈಗೆಟುಕುವ ಆರೋಗ್ಯವನ್ನು ಒದಗಿಸಲು ಸಹಾಯ ಮಾಡುವ ಉಪಕ್ರಮದಲ್ಲಿ, ಪ್ರಧಾನಮಂತ್ರಿಯವರು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ ಎಂ ಎಸ್‌ ಐ ಎಂ ಎಸ್‌ ಆರ್‌) ಯನ್ನು ಉದ್ಘಾಟಿಸಿದರು. ಇದನ್ನು ಶ್ರೀ ಸತ್ಯ ಸಾಯಿ ವಿಶ್ವವಿದ್ಯಾನಿಲಯವು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸ್ಥಾಪಿಸಿದೆ. ಇದು ಗ್ರಾಮೀಣ ಪ್ರದೇಶದಲ್ಲಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯವನ್ನು ವಾಣಿಜ್ಯೀಕರಣಗೊಳಿಸದ ದೃಷ್ಟಿಕೋನದಲ್ಲಿ ಸ್ಥಾಪಿಸಲಾಗಿದೆ, ಎಸ್‌ ಎಂ ಎಸ್‌ ಐ ಎಂ ಎಸ್‌ ಆರ್‌ ವೈದ್ಯಕೀಯ ಶಿಕ್ಷಣ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ಒದಗಿಸುತ್ತದೆ. 2023 ರ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Moving beyond Western paradigms: The geopolitical lesson of India’s multi-alignment

Media Coverage

Moving beyond Western paradigms: The geopolitical lesson of India’s multi-alignment
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Surat, Gujarat
June 02, 2026
PM announces ex-gratia from PMNRF

Prime Minister Shri Narendra Modi today expressed deep pain over the tragic mishap in Surat district, Gujarat. He extended his heartfelt condolences to those who have lost their loved ones and prayed for the earliest recovery of the injured. The Prime Minister noted that rescue operations are underway and authorities are providing all possible assistance at the accident site.

The Prime Minister has announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased. Shri Modi also noted that Rs. 50,000 would be provided to those who sustained injuries in the incident.

The Prime Minister posted on X:

"Deeply pained to hear about a mishap in Surat district, Gujarat. My condolences to those who have lost their loved ones. May the injured recover at the earliest. Rescue operations are underway and authorities are providing all possible assistance at the accident site.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM"