"ರಾಷ್ಟ್ರೀಯ ರಕ್ಷಣೆ ಮತ್ತು ಶ್ರದ್ಧೆಯ ಈ ನೆಲದಲ್ಲಿ ನಿಮ್ಮೊಂದಿಗೆ ಇರಲು ನಾನು ಅದೃಷ್ಟ ಮಾಡಿದ್ದೇನೆ"
"ಉತ್ತರಾಖಂಡದ ಪ್ರಗತಿ ಮತ್ತು ಅದರ ನಾಗರಿಕರ ಯೋಗಕ್ಷೇಮವು ನಮ್ಮ ಸರ್ಕಾರದ ಧ್ಯೇಯೋದ್ದೇಶದ ತಿರುಳಾಗಿದೆ"
"ಈ ದಶಕವು ಉತ್ತರಾಖಂಡದ ದಶಕವಾಗಲಿದೆ"
“ಉತ್ತರಾಖಂಡದ ಪ್ರತಿಯೊಂದು ಹಳ್ಳಿಯಲ್ಲೂ ದೇಶದ ರಕ್ಷಕರಿದ್ದಾರೆ”
“ಹಳ್ಳಿಗಳನ್ನು ತೊರೆದಿರುವ ಜನರನ್ನು ಮರಳಿ ಕರೆತರುವುದು ನಮ್ಮ ಪ್ರಯತ್ನವಾಗಿದೆ. ಈ ಗ್ರಾಮಗಳಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಸಲು ನಾವು ಬಯಸುತ್ತೇವೆ”
"ನಮ್ಮ ಸರ್ಕಾರವು ತಾಯಂದಿರು ಮತ್ತು ಸಹೋದರಿಯರ ಪ್ರತಿಯೊಂದು ತೊಂದರೆ ಮತ್ತು ಅಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ"
"ಉತ್ತರಾಖಂಡದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳು ಈಗ ಫಲ ನೀಡುತ್ತಿವೆ"
"ಉತ್ತರಾಖಂಡದ ಸಂಪರ್ಕದ ವಿಸ್ತರಣೆಯು ರಾಜ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ"
"ಅಮೃತ ಕಾಲವು ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವರ್ಗವನ್ನು ಸೌಲಭ್ಯಗಳು, ಗೌರವ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕಿಸುವ ಸಮಯವಾಗಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಪಿಥೋರಗಢದಲ್ಲಿ ಗ್ರಾಮೀಣಾಭಿವೃದ್ಧಿ, ರಸ್ತೆ, ವಿದ್ಯುತ್, ನೀರಾವರಿ, ಕುಡಿಯುವ ನೀರು, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳ ಸುಮಾರು 4200 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರ ಸಮರ್ಪಣೆ ನೆರವೇರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ಭೇಟಿಯ ಸಂದರ್ಭದಲ್ಲಿ ಉತ್ತರಾಖಂಡದ ಜನರು ತೋರಿದ ಅಭೂತಪೂರ್ವ ಪ್ರೀತಿ ಮತ್ತು ವಾತ್ಸಲ್ಯ ಮತ್ತು ಅಸಂಖ್ಯಾತ ಆಶೀರ್ವಾದಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. "ಇದು ವಾತ್ಸಲ್ಯದ ಗಂಗೆಯಂತೆ ಹರಿಯಿತು" ಎಂದು ಅವರು ಹೇಳಿದರು. ಶ್ರೀ ಮೋದಿಯವರು ಆಧ್ಯಾತ್ಮ ಮತ್ತು ಶೌರ್ಯದ ಭೂಮಿಗೆ, ವಿಶೇಷವಾಗಿ ಕೆಚ್ಚೆದೆಯ ತಾಯಂದಿರಿಗೆ ತಲೆಬಾಗಿ ನಮಿಸಿದರು. ಬೈದ್ಯನಾಥ ಧಾಮದಲ್ಲಿ ಜೈ ಬದ್ರಿ ವಿಶಾಲ್ ಘೋಷಣೆಯೊಂದಿಗೆ ಗಂಗೊಳ್ಳಿಹಾತ್‌ ನಲ್ಲಿರುವ ಕಾಳಿ ಮಂದಿರದಲ್ಲಿ ಗಂಟೆ ಬಾರಿಸುವುದರೊಂದಿಗೆ ಗರ್ವಾಲ್ ರೈಫಲ್ಸ್ ಸೈನಿಕರ ಉತ್ಸಾಹ ಮತ್ತು ಸಂಭ್ರಮವು ಕುಮಾವೂ ರೆಜಿಮೆಂಟ್‌ ನ ಸೈನಿಕರಲ್ಲಿ ಹೊಸ ಕೆಚ್ಚನ್ನು ತುಂಬುತ್ತದೆ ಎಂದು ಅವರು ಒತ್ತಿ ಹೇಳಿದರು. ಮಾನಸಖಂಡದಲ್ಲಿ, ಬೈದ್ಯನಾಥ, ನಂದಾದೇವಿ, ಪೂರಂಗಿರಿ, ಕಾಸರದೇವಿ, ಕೈಂಚಿಧಾಮ್, ಕತರ್ಮಾಲ್, ನಾನಕಮಟ್ಟಾ, ರೀತಾ ಸಾಹಿಬ್ ಮತ್ತು ಇತರ ಅಸಂಖ್ಯಾತ ಪುಣ್ಯಕ್ಷೇತ್ರಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. "ನಾನು ನಿಮ್ಮ ನಡುವೆ ಉತ್ತರಾಖಂಡದಲ್ಲಿ ಇದ್ದಾಗ ಸದಾ ಅದೃಷ್ಟ ಮಾಡಿದ ಭಾವನೆಯುಂಟಾಗುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

 

ಇದಕ್ಕೂ ಮುನ್ನ ಪ್ರಧಾನಿ ಪಾರ್ವತಿ ಕುಂಡದಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆದರು. “ಪ್ರತಿಯೊಬ್ಬ ಭಾರತೀಯನ ಉತ್ತಮ ಆರೋಗ್ಯಕ್ಕಾಗಿ ಮತ್ತು ವಿಕಸಿತ ಭಾರತದ ಸಂಕಲ್ಪವನ್ನು ಬಲಪಡಿಸಲು ನಾನು ಪ್ರಾರ್ಥಿಸಿದೆ. ಉತ್ತರಾಖಂಡದ ಜನರ ಎಲ್ಲಾ ಆಕಾಂಕ್ಷೆಗಳು ಈಡೇರುವಂತೆ ಬೇಡಿಕೊಂಡಿದ್ದೇನೆ” ಎಂದು ಅವರು ಹೇಳಿದರು.

ಸೈನಿಕರು, ಕಲಾವಿದರು ಮತ್ತು ಸ್ವಸಹಾಯ ಗುಂಪುಗಳೊಂದಿಗಿನ ತಮ್ಮ ಸಭೆಗಳನ್ನು ಪ್ರಧಾನಿಯವರು ಪ್ರಸ್ತಾಪಿಸಿದರು ಮತ್ತು ಭದ್ರತೆ, ಸಮೃದ್ಧಿ ಮತ್ತು ಸಂಸ್ಕೃತಿಯ ಆಧಾರ ಸ್ತಂಭಗಳನ್ನು ಭೇಟಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ದಶಕವು ಉತ್ತರಾಖಂಡದ ದಶಕವಾಗಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. "ನಮ್ಮ ಸರ್ಕಾರವು ಉತ್ತರಾಖಂಡದ ಜನರ ಪ್ರಗತಿ ಮತ್ತು ಸುಲಭ ಜೀವನಕ್ಕಾಗಿ ಕೆಲಸ ಮಾಡಲು ಸಂಪೂರ್ಣ ಸಮರ್ಪಣೆ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದೆ" ಎಂದು ಅವರು ಹೇಳಿದರು. ಉತ್ತರಾಖಂಡದೊಂದಿಗಿನ ಸುದೀರ್ಘ ಒಡನಾಟ ಮತ್ತು ನಿಕಟತೆಯನ್ನು ಪ್ರಧಾನಿ ಸ್ಮರಿಸಿದರು. ನಾರಿಶಕ್ತಿ ವಂದನಾ ಅಧಿನಿಯಮ ಕುರಿತು ಮಾತನಾಡಿದ ಪ್ರಧಾನಿ, ರಾಜ್ಯದಿಂದ ತಮಗೆ ದೊರೆತ ಬೆಂಬಲ ಮತ್ತು ಪ್ರತಿಕ್ರಿಯೆಯನ್ನು ಪ್ರಸ್ತಾಪಿಸಿದರು.

ಪ್ರಧಾನಮಂತ್ರಿಯವರು ಭಾರತದ ಅಭಿವೃದ್ಧಿಯ ದಾಪುಗಾಲುಗಳ ಬಗ್ಗೆ ವಿವರಿಸಿದರು. "ಜಗತ್ತು ಭಾರತ ಮತ್ತು ಭಾರತೀಯರ ಕೊಡುಗೆಯನ್ನು ಗುರುತಿಸುತ್ತಿದೆ" ಎಂದು ಅವರು ಹೇಳಿದರು. ಹಿಂದಿನ ಹತಾಶ ಪರಿಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ ಸವಾಲುಗಳಿಂದ ಕೂಡಿರುವ ಭಾರತದ ಬಲವಾದ ಧ್ವನಿಯ ಬಗ್ಗೆ ಪ್ರಸ್ತಾಪಿಸಿದರು. ಜಿ20 ಅಧ್ಯಕ್ಷ ಸ್ಥಾನ ಮತ್ತು ಶೃಂಗಸಭೆಯ ಆಯೋಜನೆಗೆ ಭಾರತಕ್ಕೆ ಸಿಕ್ಕ ಜಾಗತಿಕ ಮೆಚ್ಚುಗೆಯನ್ನು ಅವರು ಪ್ರಸ್ತಾಪಿಸಿದರು. ಸುದೀರ್ಘ ಅಂತರದ ನಂತರ ಕೇಂದ್ರದಲ್ಲಿ ಸ್ಥಿರ ಮತ್ತು ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡಿದ ಜನರಿಗೆ ದೇಶದ ಯಶಸ್ಸಿನ ಶ್ರೇಯವನ್ನು ಪ್ರಧಾನಿ ನೀಡಿದರು. ತಾವು 140 ಕೋಟಿ ಭಾರತೀಯರ ನಂಬಿಕೆ ಮತ್ತು ವಿಶ್ವಾಸವನ್ನು ಜಾಗತಿಕವಾಗಿ ಕೊಂಡೊಯ್ಯುತ್ತಿರುವುದಾಗಿ ಅವರು ಹೇಳಿದರು.

 

ಕಳೆದ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದ ಪ್ರಧಾನಿಯವರು ಹೇಳಿದರು. ದೂರದ ಸ್ಥಳಗಳಲ್ಲಿರುವವರು ಸಹ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವುದರ ಶ್ರೇಯ ಸರ್ಕಾರದ ಎಲ್ಲರನ್ನು ಒಳಗೊಂಡ ವಿಧಾನಕ್ಕೆ ಸಲ್ಲಬೇಕು ಎಂದು ಪ್ರಧಾನಿ ತಿಳಿಸಿದರು. 13.5 ಕೋಟಿ ಜನರಲ್ಲಿ ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರೂ ಇದ್ದಾರೆ ಎಂದು ವಿವರಿಸಿದ ಶ್ರೀ ಮೋದಿ, "ಜಗತ್ತು ಬೆರಗಾಗಿದೆ" ಎಂದು ಒತ್ತಿ ಹೇಳಿದರು. ಈ 13.5 ಕೋಟಿ ಜನರು ಭಾರತವು ತನ್ನ ಬಡತನವನ್ನು ಸ್ವತಃ ತಾನೇ ಬೇರುಸಹಿತ ಕಿತ್ತೊಗೆಯಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಹಿಂದಿನ ಸರ್ಕಾರಗಳು ‘ಗರೀಬಿ ಹಠಾವೋ’ಘೋಷಣೆಗಳನ್ನು ಮಾಡಿದರೂ, ಮಾಲೀಕತ್ವ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಬಡತನವನ್ನು ಬೇರುಸಹಿತ ಕಿತ್ತೊಗೆಯಬಹುದು ಎಂದು ಹೇಳುತ್ತಿರುವವರು ‘ಮೋದಿ’ಎಂದು ಪ್ರಧಾನಿ ತಿಳಿಸಿದರು. ಒಟ್ಟಾಗಿ ನಾವು ಬಡತನವನ್ನು ನಿರ್ಮೂಲನೆ ಮಾಡಬಹುದು ಎಂದು ಅವರು ಒತ್ತಿ ಹೇಳಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಭಾರತದ ಚಂದ್ರಯಾನವನ್ನು ಅವರು ಉಲ್ಲೇಖಿಸಿದರು ಮತ್ತು ಇಲ್ಲಿಯವರೆಗೆ ಯಾವುದೇ ರಾಷ್ಟ್ರಕ್ಕೂ ಅದನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದರು. "ಚಂದ್ರಯಾನ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಸಲಾಗಿದೆ ಮತ್ತು ಉತ್ತರಾಖಂಡದ ಗುರುತು ಈಗ ಚಂದ್ರನ ಮೇಲಿದೆ" ಎಂದು ಪ್ರಧಾನಿ ಹೇಳಿದರು. ಉತ್ತರಕಾಂಡದಲ್ಲಿ ಪ್ರತಿ ಹೆಜ್ಜೆಯಲ್ಲೂ ಶಿವಶಕ್ತಿ ಯೋಗದ ದರ್ಶನವಾಗುತ್ತದೆ ಎಂದು ಅವರು ಹೇಳಿದರು.

ಪ್ರಧಾನಿಯವರು ಭಾರತದ ಕ್ರೀಡಾ ಪಾರಮ್ಯವನ್ನು ಒತ್ತಿಹೇಳಿದರು ಮತ್ತು ದೇಶವು ಸಾರ್ವಕಾಲಿಕ ಗರಿಷ್ಠ ಪದಕಗಳನ್ನು ಗೆದ್ದಿರುವ ಸಂತೋಷದ ಬಗ್ಗೆ ಮಾತನಾಡಿದರು. ದೇಶದ ತಂಡದಲ್ಲಿ ಉತ್ತರಾಖಂಡವು 8 ಕ್ರೀಡಾಪಟುಗಳನ್ನು ಕಳುಹಿಸಿತ್ತು ಮತ್ತು ಲಕ್ಷ್ಯ ಸೇನ್ ಮತ್ತು ವಂದನಾ ಕಟಾರಿಯಾ ತಂಡಗಳು ಪದಕಗಳನ್ನು ಗೆದ್ದವು ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರ ಕರೆಗೆ ಸಭಿಕರು ತಮ್ಮ ಮೊಬೈಲ್ ಫೋನ್‌ಗಳ ಫ್ಲ್ಯಾಷ್‌ ಲೈಟ್‌ ಗಳ ಮೂಲಕ ಸಾಧನೆಯನ್ನು ಹುರಿದುಂಬಿಸಿದರು. ಕ್ರೀಡಾಪಟುಗಳ ತರಬೇತಿ ಮತ್ತು ಮೂಲಸೌಕರ್ಯಕ್ಕಾಗಿ ಸರ್ಕಾರವು ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇಂದು ಹಲ್ದ್ವಾನಿಯಲ್ಲಿ ಹಾಕಿ ಮೈದಾನ ಮತ್ತು ರುದ್ರಪುರದಲ್ಲಿ ವೆಲೋಡ್ರೋಮ್‌ ಗೆ ಶಂಕುಸ್ಥಾಪನೆ ಮಾಡಲಾಯಿತು. ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪೂರ್ಣಮನಸ್ಸಿನ ಸಿದ್ಧತೆಗಾಗಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯವರಿಗೆ ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

 

"ಉತ್ತರಾಖಂಡದ ಪ್ರತಿಯೊಂದು ಹಳ್ಳಿಯೂ ಭಾರತದ ಗಡಿಯನ್ನು ರಕ್ಷಿಸುವವರಿಗೆ ಜನ್ಮ ನೀಡಿದೆ" ಎಂದು ಪ್ರಧಾನಿ ಹೇಳಿದರು. ಒಂದು ಶ್ರೇಣಿ ಒಂದು ಪಿಂಚಣಿ ಎಂಬ ಸೈನಿಕರ ದಶಕದಷ್ಟು ಹಳೆಯ ಹಿಂದಿನ ಬೇಡಿಕೆಯನ್ನು ಈಡೇರಿಸಿರುವುದು ಪ್ರಸ್ತುತ ಸರ್ಕಾರವಾಗಿದೆ ಎಂದು ಪ್ರಧಾನಿ ಹೇಳಿದರು. ಇಲ್ಲಿಯವರೆಗೆ, ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯಡಿಯಲ್ಲಿ ಮಾಜಿ ಸೈನಿಕರಿಗೆ 70,000 ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ. ಇದು ಮಾಜಿ ಸೈನಿಕರ 75,000 ಕ್ಕೂ ಹೆಚ್ಚು ಕುಟುಂಬಗಳಿಗೆ ಭಾರಿ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸರಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದು ಗಡಿ ಪ್ರದೇಶಗಳ ಅಭಿವೃದ್ಧಿಯೂ ಒಂದಾಗಿದೆ" ಎಂದ ಅವರು ಹೊಸ ಸೇವೆಗಳ ಅಭಿವೃದ್ಧಿ ಇಲ್ಲಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಗಡಿ ಪ್ರದೇಶಗಳ ಅಭಿವೃದ್ಧಿಯ ಕೊರತೆಯನ್ನು ಎತ್ತಿ ತೋರಿಸಿದ ಪ್ರಧಾನಿ, ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ನೆರೆಯ ರಾಷ್ಟ್ರಗಳು ಭೂಮಿಯನ್ನು ಕಬಳಿಸುವ ಭಯದ ಬಗ್ಗೆ ಮಾತನಾಡಿದರು. "ನವ ಭಾರತವು ಯಾವುದಕ್ಕೂ ಹೆದರುವುದಿಲ್ಲ ಅಥವಾ ಇತರರಲ್ಲಿ ಭಯವನ್ನು ಉಂಟುಮಾಡುವುದಿಲ್ಲ" ಎಂದು ಅವರು ಹೇಳಿದರು. ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಕಳೆದ 9 ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ 4,200 ಕಿ.ಮೀ.ಗೂ ಹೆಚ್ಚು ರಸ್ತೆ, 250 ಸೇತುವೆ, 22 ಸುರಂಗಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಇಂದಿನ ಯೋಜನೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಗಡಿ ಪ್ರದೇಶಗಳಿಗೆ ರೈಲುಮಾರ್ಗವನ್ನು ತರುವ ಯೋಜನೆಯಿದೆ ಎಂದು ತಿಳಿಸಿದರು.

ವೈಬ್ರೆಂಟ್ ವಿಲೇಜ್ ಯೋಜನೆಯು ಕೊನೆಯ ಹಳ್ಳಿಗಳನ್ನು ದೇಶದ ಮೊದಲ ಗ್ರಾಮಗಳನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಈ ಗ್ರಾಮಗಳನ್ನು ತೊರೆದಿರುವ ಜನರನ್ನು ಮರಳಿ ಕರೆತರುವುದು ನಮ್ಮ ಪ್ರಯತ್ನವಾಗಿದೆ. ಈ ಗ್ರಾಮಗಳಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಸಲು ನಾವು ಬಯಸುತ್ತೇವೆ” ಎಂದು ಪ್ರಧಾನಿ ಹೇಳಿದರು. ನೀರು, ಔಷಧ, ರಸ್ತೆ, ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಿಂದಿನ ತಪ್ಪು ನೀತಿಗಳಿಂದಾಗಿ ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು ಎಂದು ಅವರು ಹೇಳಿದರು. ಉತ್ತರಾಖಂಡದ ಈ ಪ್ರದೇಶಗಳಲ್ಲಿ ಹೊಸ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಬರಲಿವೆ ಎಂದು ಅವರು ಹೇಳಿದರು. ಇಂದು ಆರಂಭಿಸಿರುವ ಪಾಲಿಹೌಸ್ ಯೋಜನೆ ಹಾಗೂ ರಸ್ತೆ, ನೀರಾವರಿ ಸೌಲಭ್ಯಗಳಿಂದ ಸೇಬು ಕೃಷಿಗೆ ಅನುಕೂಲವಾಗಲಿದೆ ಎಂದರು. ಈ ಯೋಜನೆಗಳಿಗೆ 1100 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಅವರು ಹೇಳಿದರು. “ಉತ್ತರಾಖಂಡದ ನಮ್ಮ ಸಣ್ಣ ರೈತರ ಜೀವನವನ್ನು ಸುಧಾರಿಸಲು ತುಂಬಾ ಹಣವನ್ನು ಖರ್ಚು ಮಾಡಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಉತ್ತರಾಖಂಡದ ರೈತರು ಇದುವರೆಗೆ 2200 ಕೋಟಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ” ಎಂದು ಅವರು ಹೇಳಿದರು.

ಉತ್ತರಾಖಂಡದಲ್ಲಿ ಹಲವು ತಲೆಮಾರುಗಳಿಂದ ಇರುವ ಶ್ರೀ ಅನ್ನದ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಅದನ್ನು ಪ್ರಪಂಚದಾದ್ಯಂತ ಕೊಂಡೊಯ್ಯುವ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಉತ್ತರಾಖಂಡದ ಸಣ್ಣ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುವ ಅಭಿಯಾನವನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

 

ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಕ್ರಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ನಮ್ಮ ಸರ್ಕಾರವು ತಾಯಂದಿರು ಮತ್ತು ಸಹೋದರಿಯರ ಪ್ರತಿಯೊಂದು ತೊಂದರೆ ಮತ್ತು ಪ್ರತಿ ಅಸೌಕರ್ಯವನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಬಡ ಸಹೋದರಿಯರಿಗೆ ಶಾಶ್ವತ ಮನೆಗಳನ್ನು ನೀಡಿದೆ. ನಾವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಿಸಿದ್ದೇವೆ, ಅವರಿಗೆ ಗ್ಯಾಸ್ ಸಂಪರ್ಕವನ್ನು ನೀಡಿದ್ದೇವೆ, ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಉಚಿತ ಚಿಕಿತ್ಸೆ ಮತ್ತು ಉಚಿತ ಪಡಿತರ ವ್ಯವಸ್ಥೆ ಮಾಡಿದ್ದೇವೆ. ಹರ್ ಘರ್ ಜಲ ಯೋಜನೆಯಡಿ ಉತ್ತರಾಖಂಡದ 11 ಲಕ್ಷ ಕುಟುಂಬಗಳ ಸಹೋದರಿಯರು ಕೊಳವೆ ನೀರಿನ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಕೆಂಪುಕೋಟೆಯ ಪ್ರಾಂಗಣದಿಂದ ತಾವು ಘೋಷಿಸಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ ಗಳನ್ನು ಒದಗಿಸುವ ಯೋಜನೆಯನ್ನು ಸಹ ಪ್ರಧಾನಿ ಪ್ರಸ್ತಾಪಿಸಿದರು. ಈ ಡ್ರೋನ್‌ ಗಳು ಕೃಷಿಗೆ ಮತ್ತು ಕೃಷಿ ಉತ್ಪನ್ನಗಳ ಸಾಗಣೆಗೆ ಸಹಾಯ ಮಾಡುತ್ತವೆ. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಒದಗಿಸಲಾದ ಡ್ರೋನ್‌ ಗಳು ಉತ್ತರಾಖಂಡವನ್ನು ಆಧುನಿಕತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.

“ಉತ್ತರಾಖಂಡದಲ್ಲಿ ಪ್ರತಿ ಹಳ್ಳಿಯಲ್ಲೂ ಗಂಗಾ ಮತ್ತು ಗಂಗೋತ್ರಿ ಇದೆ. ಇಲ್ಲಿಯ ಹಿಮ ಶಿಖರಗಳ ಮೇಲೆ ಶಿವ ಮತ್ತು ನಂದ ನೆಲೆಸಿದ್ದಾರೆ”ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರಾಖಂಡದ ಜಾತ್ರೆಗಳು, ಕೌತಿಗ್, ತಾವುಲ್, ಹಾಡು, ಸಂಗೀತ ಮತ್ತು ಆಹಾರವು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ ಮತ್ತು ಪಾಂಡವರ ನೃತ್ಯ, ಛೋಲಿಯಾ ನೃತ್ಯ, ಮಂಗಲ್ ಗೀತ್, ಫುಲ್ದೇಯಿ, ಹರೇಲ, ಬಾಗ್ವಾಲ್ ಮತ್ತು ರಮ್ಮನ್‌‌ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಈ ನೆಲವನ್ನು ಶ್ರೀಮಂತಗೊಳಿಸಲಾಗಿದೆ ಎಂದು ಹೇಳಿದರು. ಈ ನೆಲದ ವಿವಿಧ ಭಕ್ಷ್ಯಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಆರ್ಸೆ, ಜಂಗೋರ್ ಕಿ ಖೀರ್, ಕಾಫುಲಿ, ಪಕೋಡಾ, ರಾಯತ, ಅಲ್ಮೋರಾದ ಬಾಲ್ ಮಿಠಾಯಿ ಮತ್ತು ಸಿಂಗೋರಿಗಳನ್ನು ಅವರು ಪ್ರಸ್ತಾಪಿಸಿದರು. ಕಾಳಿ ಗಂಗೆ ಮತ್ತು ಚಂಪಾವತ್‌ ನಲ್ಲಿರುವ ಅದ್ವೈತ ಆಶ್ರಮದೊಂದಿಗೆ ತಮ್ಮ ಜೀವಮಾನದ ಸಂಪರ್ಕವನ್ನು ಪ್ರಧಾನಿ ನೆನಪಿಸಿಕೊಂಡರು. ಶೀಘ್ರದಲ್ಲೇ ಚಂಪಾವತ್‌ ನಲ್ಲಿರುವ ಅದ್ವೈತ ಆಶ್ರಮದಲ್ಲಿ ಸಮಯ ಕಳೆಯುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು.

 

ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳು ಈಗ ಫಲ ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು. ಈ ವರ್ಷ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಗೆ ಬರುವ ಭಕ್ತರ ಸಂಖ್ಯೆ ಸುಮಾರು 50 ಲಕ್ಷ ತಲುಪುತ್ತಿದೆ. ಬಾಬಾ ಕೇದಾರರ ಆಶೀರ್ವಾದದೊಂದಿಗೆ, ಕೇದಾರನಾಥ ಧಾಮದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ಮೊದಲ ಹಂತವು ಪೂರ್ಣಗೊಂಡಿದೆ. ಶ್ರೀ ಬದರಿನಾಥ ಧಾಮದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಕೇದಾರನಾಥ ಧಾಮ ಮತ್ತು ಹೇಮಕುಂಟ್ ಸಾಹಿಬ್‌ ನಲ್ಲಿ ರೋಪ್‌ ವೇಗಳು ಪೂರ್ಣಗೊಂಡ ನಂತರ ಆಗುವ ಸುಲಭತೆಯನ್ನು ಅವರು ಪ್ರಸ್ತಾಪಿಸಿದರು. ಕೇದಾರನಾಥ ಮತ್ತು ಮಾನಸಖಂಡ ನಡುವಿನ ಸಂಪರ್ಕದ ಮೇಲೆ ಗಮನ ಕೇಂದ್ರೀಕರಿಸಿದ ಪ್ರಧಾನಮಂತ್ರಿಯವರು, ಇಂದು ಆರಂಭವಾದ ಮಾನಸಖಂಡ ಮಂದಿರ ಮಾಲಾ ಮಿಷನ್ ಕುಮಾವೂ ಪ್ರದೇಶದ ಅನೇಕ ದೇವಾಲಯಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ಈ ದೇವಾಲಯಗಳಿಗೆ ಬರಲು ಭಕ್ತರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.

ಉತ್ತರಾಖಂಡದ ಸಂಪರ್ಕ ವಿಸ್ತರಣೆಯು ರಾಜ್ಯದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅವರು ಚಾರ್ ಧಾಮ ಮೆಗಾ ಪ್ರಾಜೆಕ್ಟ್ ಮತ್ತು ಸರ್ವಋತು ರಸ್ತೆ ಮತ್ತು ರಿಷಿಕೇಶ್-ಕರ್ಣಪ್ರಯಾಗ್ ರೈಲು ಯೋಜನೆಯನ್ನು ಪ್ರಸ್ತಾಪಿಸಿದರು. ಉಡಾನ್ ಯೋಜನೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈ ಇಡೀ ಪ್ರದೇಶಕ್ಕೆ ಕೈಗೆಟಕುವ ದರದಲ್ಲಿ ವಿಮಾನ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು. ಬಾಗೇಶ್ವರದಿಂದ ಕನಲಿಚಿನವರೆಗೆ, ಗಂಗೊಳ್ಳಿಹಾಟ್‌ ನಿಂದ ಅಲ್ಮೋರಾ ಮತ್ತು ತನಕ್‌ ಪುರ ಘಾಟ್‌ನಿಂದ ಪಿಥೋರಗಢದವರೆಗಿನ ರಸ್ತೆಗಳು ಸೇರಿದಂತೆ ಇಂದಿನ ಯೋಜನೆಗಳನ್ನು ಅವರು ಪ್ರಸ್ತಾಪಿಸಿದರು ಮತ್ತು ಇದು ಸಾಮಾನ್ಯ ಜನರಿಗೆ ಅನುಕೂಲವಾಗುವುದಲ್ಲದೆ ಪ್ರವಾಸೋದ್ಯಮದ ಆದಾಯದ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಪ್ರವಾಸೋದ್ಯಮ ಕ್ಷೇತ್ರವನ್ನು ಗರಿಷ್ಠ ಉದ್ಯೋಗದ ಕ್ಷೇತ್ರವೆಂದು ಉಲ್ಲೇಖಿಸಿದ ಶ್ರೀ ಮೋದಿ, ಸರ್ಕಾರವು ಹೋಂಸ್ಟೇಗಳನ್ನು ಪ್ರೋತ್ಸಾಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. 'ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ ಸಾಕಷ್ಟು ವಿಸ್ತರಣೆಯಾಗಲಿದೆ. ಏಕೆಂದರೆ ಇಡೀ ಜಗತ್ತು ಇಂದು ಭಾರತಕ್ಕೆ ಬರಲು ಬಯಸುತ್ತಿದೆ ಮತ್ತು ಭಾರತವನ್ನು ನೋಡಲು ಬಯಸುವ ಯಾರಾದರೂ ಖಂಡಿತವಾಗಿಯೂ ಉತ್ತರಾಖಂಡಕ್ಕೆ ಬರಲು ಬಯಸುತ್ತಾರೆ ಎಂದು ಅವರು ಹೇಳಿದರು.

ಉತ್ತರಾಖಂಡದ ವಿಪತ್ತು ಪೀಡಿತ ಸ್ವರೂಪವನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು ಮುಂಬರುವ 4-5 ವರ್ಷಗಳಲ್ಲಿ 4000 ಕೋಟಿ ರೂಪಾಯಿಗಳನ್ನು ನೈಸರ್ಗಿಕ ವಿಕೋಪಗಳನ್ನು ಎದುರಿಸುವ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದು ಹೇಳಿದರು. ವಿಪತ್ತಿನ ಸಂದರ್ಭದಲ್ಲಿ, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಮಾಡಬಹುದಾದ ಸೌಲಭ್ಯಗಳನ್ನು ಉತ್ತರಾಖಂಡದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಇದು ಭಾರತದ ಅಮೃತ ಕಾಲ ಎಂದು ಪ್ರಧಾನಿ ಹೇಳಿದರು. ಇದು ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವರ್ಗವನ್ನು ಸೌಲಭ್ಯಗಳು, ಗೌರವ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕಿಸುವ ಸಮಯವಾಗಿದೆ. ಬಾಬಾ ಕೇದಾರ ಮತ್ತು ಬದ್ರಿ ವಿಶಾಲ್ ಅವರ ಆಶೀರ್ವಾದದಿಂದ ರಾಷ್ಟ್ರವು ತನ್ನ ಸಂಕಲ್ಪಗಳನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಸರ್ಕಾರದ ಅನೇಕ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಇಂದು ಉದ್ಘಾಟಿಸಿದ, ರಾಷ್ಟ್ರಕ್ಕೆ ಸಮರ್ಪಿಸಿದ ಯೋಜನೆಗಳಲ್ಲಿ ಇವುಗಳು ಸೇರಿವೆ: ಪಿ ಎಂ ಜಿ ಎಸ್‌ ವೈ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ 76 ಗ್ರಾಮೀಣ ರಸ್ತೆಗಳು ಮತ್ತು 25 ಸೇತುವೆಗಳು; 9 ಜಿಲ್ಲೆಗಳಲ್ಲಿ ಬಿಡಿಒ ಕಚೇರಿಗಳ 15 ಕಟ್ಟಡಗಳು; ಕೇಂದ್ರೀಯ ರಸ್ತೆ ನಿಧಿಯಡಿ ನಿರ್ಮಿಸಲಾದ ಕೌಸಾನಿ ಬಾಗೇಶ್ವರ ರಸ್ತೆ, ಧರಿ-ದೌಬಾ-ಗಿರಿಚೀನ ರಸ್ತೆ ಮತ್ತು ನಾಗಲಾ-ಕಿಚ್ಚ ರಸ್ತೆಗಳ ಮೇಲ್ದರ್ಜೆ; ಅಲ್ಮೋರಾ ಪೆಟ್ಶಾಲ್ - ಪನುವಾನೌಲಾ - ದನ್ಯಾ (ಎನ್‌ ಎಚ್ 309B) ಮತ್ತು ತನಕ್‌ ಪುರ - ಚಲ್ತಿ (ಎನ್‌ ಎಚ್ 125) ರಸ್ತೆಗಳ ಉನ್ನತೀಕರಣ; ಕುಡಿಯುವ ನೀರಿಗೆ ಸಂಬಂಧಿಸಿದ ಮೂರು ಯೋಜನೆಗಳು ಅಂದರೆ 38 ಪಂಪಿಂಗ್ ಕುಡಿಯುವ ನೀರಿನ ಯೋಜನೆಗಳು, 419 ಗುರುತ್ವಾಕರ್ಷಣೆ ಆಧಾರಿತ ನೀರು ಸರಬರಾಜು ಯೋಜನೆಗಳು ಮತ್ತು ಮೂರು ಕೊಳವೆ ಬಾವಿ ಆಧಾರಿತ ನೀರು ಸರಬರಾಜು ಯೋಜನೆಗಳು; ಪಿಥೋರಗಢದಲ್ಲಿ ಥಾರ್ಕೋಟ್ ಕೃತಕ ಸರೋವರ; 132 ಕೆವಿ ಪಿಥೋರಗಢ-ಲೋಹಘಾಟ್ (ಚಂಪಾವತ್) ವಿದ್ಯುತ್ ಪ್ರಸರಣ ಮಾರ್ಗ; ಉತ್ತರಾಖಂಡದಾದ್ಯಂತ 39 ಸೇತುವೆಗಳು ಮತ್ತು ವಿಶ್ವಬ್ಯಾಂಕ್ ಅನುದಾನಿತ ಉತ್ತರಾಖಂಡ ವಿಪತ್ತು ಚೇತರಿಕೆ ಯೋಜನೆಯಡಿ ಡೆಹ್ರಾಡೂನ್‌ ನಲ್ಲಿ ನಿರ್ಮಿಸಲಾದ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯು ಎಸ್‌ ಡಿ ಎಂ ಎ) ಕಟ್ಟಡ.

 

ಪ್ರಧಾನಿಯವರು ಇಂದು ಶಂಕುಸ್ಥಾಪನೆ ಮಾಡಿದ ಯೋಜನೆಗಳು: 21,398 ಪಾಲಿ-ಹೌಸ್ ನಿರ್ಮಾಣ ಯೋಜನೆ, ಇದು ಹೂವು ಮತ್ತು ತರಕಾರಿಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ; ಹೆಚ್ಚಿನ ಸಾಂದ್ರತೆಯ ತೀವ್ರವಾದ ಸೇಬು ತೋಟಗಳ ಕೃಷಿಗಾಗಿ ಯೋಜನೆ; ಎನ್‌ ಎಚ್‌ ರಸ್ತೆ ನವೀಕರಣದ ಐದು ಯೋಜನೆಗಳು; ರಾಜ್ಯದಲ್ಲಿ ವಿಪತ್ತು ಸನ್ನದ್ಧತೆ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಸೇತುವೆಗಳ ನಿರ್ಮಾಣ, ಡೆಹ್ರಾಡೂನ್‌ನಲ್ಲಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಉನ್ನತೀಕರಣ, ಬಲಿಯಾನಲ, ನೈನಿತಾಲ್‌ ನಲ್ಲಿ ಭೂಕುಸಿತವನ್ನು ತಡೆಗಟ್ಟುವ ಕ್ರಮಗಳು ಮತ್ತು ಬೆಂಕಿ, ಆರೋಗ್ಯ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಇತರ ಮೂಲಸೌಕರ್ಯಗಳಲ್ಲಿ ಸುಧಾರಣೆ; ರಾಜ್ಯಾದ್ಯಂತ 20 ಮಾದರಿ ಪದವಿ ಕಾಲೇಜುಗಳಲ್ಲಿ  ಹಾಸ್ಟೆಲ್‌ ಗಳು ಮತ್ತು ಕಂಪ್ಯೂಟರ್ ಲ್ಯಾಬ್‌ ಗಳ ಅಭಿವೃದ್ಧಿ; ಅಲ್ಮೋರಾದ ಸೋಮೇಶ್ವರದಲ್ಲಿ 100 ಹಾಸಿಗೆಗಳ ಉಪ ಜಿಲ್ಲಾ ಆಸ್ಪತ್ರೆ; ಚಂಪಾವತ್‌ ನಲ್ಲಿ 50 ಹಾಸಿಗೆಗಳ ಆಸ್ಪತ್ರೆ; ನೈನಿತಾಲ್‌ ನ ಹಲ್ದ್ವಾನಿ ಕ್ರೀಡಾಂಗಣದಲ್ಲಿ ಆಸ್ಟ್ರೋಟರ್ಫ್ ಹಾಕಿ ಮೈದಾನ; ರುದ್ರಪುರದಲ್ಲಿ ವೆಲೋಡ್ರೋಮ್ ಕ್ರೀಡಾಂಗಣ; ಜಾಗೇಶ್ವರ್ ಧಾಮ್ (ಅಲ್ಮೋರಾ), ಹಾತ್ ಕಾಳಿಕಾ (ಪಿಥೋರಘರ್) ಮತ್ತು ನೈನಾ ದೇವಿ (ನೈನಿತಾಲ್) ದೇವಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾನಸಖಂಡ ಮಂದಿರ ಮಾಲಾ ಮಿಷನ್ ಯೋಜನೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre hikes non-urea fertiliser subsidy 10-21% amid West Asia crisis

Media Coverage

Centre hikes non-urea fertiliser subsidy 10-21% amid West Asia crisis
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting the importance of inner wisdom
April 09, 2026

Prime Minister Shri Narendra Modi shared a Sanskrit Subhashitam today highlighting the importance of inner wisdom as the true essence of the universe.

The Prime Minister remarked that India's heritage and culture have consistently taught that true knowledge and its rightful application are the foundation of a nation's progress. Shri Modi observed that by following this path, the youth of the country are actively engaged in building a prosperous and empowered India. He further noted that this wisdom, which resides within us and transcends ordinary knowledge, is worshipped by great and wise men.

The Prime Minister wrote on X:

"हमारी विरासत और संस्कृति हमें यही सिखाती आई है कि सच्चा ज्ञान और उसका सदुपयोग ही राष्ट्र की प्रगति का आधार है। इसी मार्ग पर चलकर आज हमारे देश के युवा समृद्ध और सशक्त भारत को गढ़ने में जुटे हैं।

अन्तःस्थमेव यज्ज्ञानं ज्ञानादपि च यत्परम्।
तदेव सर्वसंसारसारं सद्भिरुपास्यते॥"

The wisdom that resides within us, which transcends ordinary or external knowledge, is the true essence of this entire universe. It is this inner wisdom that is worshipped by great men and wise men.