ಕಳೆದ ದಶಕದಲ್ಲಿ, ಪಂಚಾಯತ್ ಗಳನ್ನು ಸಬಲೀಕರಣಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ತಂತ್ರಜ್ಞಾನದ ಮೂಲಕ ಪಂಚಾಯತ್ ಗಳನ್ನು ಬಲಪಡಿಸಲಾಗಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ಗ್ರಾಮೀಣ ಆರ್ಥಿಕತೆಯು ಹೊಸ ಆವೇಗವನ್ನು ಪಡೆದುಕೊಂಡಿದೆ: ಪ್ರಧಾನಮಂತ್ರಿ
ಕಳೆದ ದಶಕವು ಭಾರತದ ಮೂಲಸೌಕರ್ಯದ ದಶಕವಾಗಿದೆ: ಪ್ರಧಾನಮಂತ್ರಿ
ಮಖಾನಾ ಇಂದು ದೇಶ ಮತ್ತು ಜಗತ್ತಿಗೆ ಸೂಪರ್ ಫುಡ್ ಆಗಿದೆ, ಆದರೆ ಮಿಥಿಲಾದಲ್ಲಿ ಇದು ಸಂಸ್ಕೃತಿಯ ಭಾಗವಾಗಿದೆ, ಇಲ್ಲಿ ಸಮೃದ್ಧಿಯ ಮೂಲವಾಗಿದೆ: ಪ್ರಧಾನಮಂತ್ರಿ
140 ಕೋಟಿ ಭಾರತೀಯರ ಇಚ್ಛಾಶಕ್ತಿಯು ಈಗ ಭಯೋತ್ಪಾದಕರ ಬೆನ್ನುಮೂಳೆ ಮುರಿಯಲಿದೆ: ಪ್ರಧಾನಮಂತ್ರಿ
ಭಯೋತ್ಪಾದನೆಗೆ ಶಿಕ್ಷೆಯಾಗುವವರಗೆ ಬಿಡುವುದಿಲ್ಲ, ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು, ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ: ಪ್ರಧಾನಮಂತ್ರಿ

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಇಂದು ಬಿಹಾರದ ಮಧುಬನಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13,480 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. 2025 ರ ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಆಚರಿಸಿ ಪ್ರಾರ್ಥಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಧಾನಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಚಾಯತ್ ರಾಜ್ ದಿನದ ಅಂಗವಾಗಿ ಇಡೀ ರಾಷ್ಟ್ರವು ಮಿಥಿಲಾ ಮತ್ತು ಬಿಹಾರದೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದರು. ಬಿಹಾರದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಅಡಿಪಾಯ ಹಾಕಲಾಗಿದೆ ಎಂದು ಅವರು ಹೇಳಿದರು, ವಿದ್ಯುತ್, ರೈಲ್ವೆ ಮತ್ತು ಮೂಲಸೌಕರ್ಯದಲ್ಲಿನ ಈ ಉಪಕ್ರಮಗಳು ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಒತ್ತಿ ಹೇಳಿದರು. ಮಹಾನ್ ಕವಿ ಮತ್ತು ರಾಷ್ಟ್ರೀಯ ಐಕಾನ್ ರಾಮಧಾರಿ ಸಿಂಗ್ ದಿನಕರ್ ಅವರ ಪುಣ್ಯತಿಥಿಯಂದು ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು.

ಮಹಾತ್ಮಾ ಗಾಂಧಿಯವರ ಸತ್ಯಾಗ್ರಹದ ಮಂತ್ರವನ್ನು ಹರಡಿದ ಭೂಮಿ ಬಿಹಾರ ಎಂದು ಹೇಳಿದ ಶ್ರೀ ಮೋದಿ, ಭಾರತದ ಹಳ್ಳಿಗಳು ಬಲಿಷ್ಠವಾಗಿದ್ದರೆ ಮಾತ್ರ ಭಾರತದ ತ್ವರಿತ ಅಭಿವೃದ್ಧಿ ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ದೃಢ ನಂಬಿಕೆಯನ್ನು ಎತ್ತಿ ತೋರಿಸಿದರು. ಪಂಚಾಯತ್ ರಾಜ್ ಪರಿಕಲ್ಪನೆಯು ಈ ಭಾವನೆಯಲ್ಲಿ ಬೇರೂರಿದೆ ಎಂದು ಅವರು ಒತ್ತಿ ಹೇಳಿದರು. "ಕಳೆದ ದಶಕದಲ್ಲಿ, ಪಂಚಾಯತ್ ಗಳನ್ನು ಸಬಲೀಕರಣಗೊಳಿಸಲು ನಿರಂತರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಂಚಾಯತ್ ಗಳನ್ನು ಬಲಪಡಿಸುವಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರ ವಹಿಸಿದೆ, ಕಳೆದ ದಶಕದಲ್ಲಿ 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳು ಅಂತರ್ಜಾಲ ಸಂಪರ್ಕ ಪಡೆದಿವೆ" ಎಂದು ಅವರು ಹೇಳಿದರು. ಹಳ್ಳಿಗಳಲ್ಲಿ 5.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು, ಪಂಚಾಯತ್ ಗಳ ಡಿಜಿಟಲೀಕರಣವು ಜನನ ಮತ್ತು ಮರಣ ಪ್ರಮಾಣಪತ್ರಗಳು ಮತ್ತು ಭೂಮಾಲೀಕತ್ವ ಪ್ರಮಾಣಪತ್ರಗಳಂತಹ ದಾಖಲೆಗಳಿಗೆ ಸುಲಭ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡಿದೆ ಎಂದು ಒತ್ತಿ ಹೇಳಿದರು. ಸ್ವಾತಂತ್ರ್ಯದ ದಶಕಗಳ ನಂತರ ರಾಷ್ಟ್ರವು ಹೊಸ ಸಂಸತ್ತಿನ ಕಟ್ಟಡವನ್ನು ಪಡೆದುಕೊಂಡಿದೆ, ಜೊತೆಗೆ ದೇಶಾದ್ಯಂತ 30,000 ಹೊಸ ಪಂಚಾಯತ್ ಭವನಗಳನ್ನು ಸಹ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಪಂಚಾಯತ್ ಗಳಿಗೆ ಸಾಕಷ್ಟು ಹಣವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರಕ್ಕೆ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ಪಂಚಾಯತ್ ಗಳು ₹2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಪಡೆದಿವೆ, ಇವೆಲ್ಲವನ್ನೂ ಹಳ್ಳಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

 

ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಭೂ ವಿವಾದಗಳು ಒಂದು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಯಾವ ಭೂಮಿ ವಸತಿ, ಕೃಷಿ, ಪಂಚಾಯತ್ ಒಡೆತನ ಅಥವಾ ಸರ್ಕಾರಿ ಸ್ವಾಮ್ಯದಲ್ಲಿದೆ ಎಂಬುದರ ಕುರಿತು ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ ಎಂದು ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು, ಭೂ ದಾಖಲೆಗಳ ಡಿಜಿಟಲೀಕರಣವನ್ನು ಕೈಗೊಳ್ಳಲಾಗುತ್ತಿದೆ, ಇದು ಅನಗತ್ಯ ವಿವಾದಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಪಂಚಾಯತ್ ಗಳು ಸಾಮಾಜಿಕ ಭಾಗವಹಿಸುವಿಕೆಯನ್ನು ಬಲಪಡಿಸಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು, ಪಂಚಾಯತ್ ಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಬಿಹಾರ ಎಂದು ಅವರು ಹೇಳಿದರು. ಇಂದು, ಆರ್ಥಿಕವಾಗಿ ದುರ್ಬಲ ವರ್ಗಗಳು, ದಲಿತರು, ಮಹಾದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳ ಗಮನಾರ್ಹ ಸಂಖ್ಯೆಯ ಮಹಿಳೆಯರು ಬಿಹಾರದಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು, ಇದು ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಸಾಮಾಜಿಕ ಭಾಗವಹಿಸುವಿಕೆ ಎಂದು ಬಣ್ಣಿಸಿದರು. ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಕಾನೂನನ್ನು ಸಹ ಜಾರಿಗೆ ತರಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಇದು ಎಲ್ಲಾ ರಾಜ್ಯಗಳಾದ್ಯಂತ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಮಹಿಳೆಯರ ಆದಾಯವನ್ನು ಹೆಚ್ಚಿಸಲು ಮತ್ತು ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರವು ಮಿಷನ್ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಬಿಹಾರದಲ್ಲಿ 'ಜೀವಿಕಾ ದೀದಿ' ಕಾರ್ಯಕ್ರಮದ ಪರಿವರ್ತನಾತ್ಮಕ ಪರಿಣಾಮವನ್ನು ಉಲ್ಲೇಖಿಸಿದರು, ಇದು ಅನೇಕ ಮಹಿಳೆಯರ ಜೀವನವನ್ನು ಬದಲಾಯಿಸಿದೆ ಎಂದು ಹೇಳಿದರು. ಇಂದು, ಬಿಹಾರದ ಮಹಿಳೆಯರ ಸ್ವ-ಸಹಾಯ ಗುಂಪುಗಳಿಗೆ ಸುಮಾರು ₹1,000 ಕೋಟಿ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ಹೇಳಿದರು, ಇದು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ದೇಶಾದ್ಯಂತ 3 ಕೋಟಿ ಲಕ್ಷಾಧಿಪತಿ ದೀದಿಗಳನ್ನು ಸೃಷ್ಟಿಸುವ ಗುರಿಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ  ಗ್ರಾಮೀಣ ಆರ್ಥಿಕತೆಯು ಹೊಸ ಆವೇಗವನ್ನು ಪಡೆದುಕೊಂಡಿದೆ ಎಂದು ಅವರು ಎತ್ತಿ ತೋರಿಸಿದರು. ಹಳ್ಳಿಗಳಲ್ಲಿ ಬಡವರಿಗಾಗಿ ಮನೆಗಳು, ರಸ್ತೆಗಳು, ಅನಿಲ ಸಂಪರ್ಕಗಳು, ನೀರಿನ ಸಂಪರ್ಕಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಇದು ಗ್ರಾಮೀಣ ಪ್ರದೇಶಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ತರುತ್ತಿದೆ ಎಂದು ಅವರು ಹೇಳಿದರು. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ, ಇದು ಕಾರ್ಮಿಕರು, ರೈತರು, ವಾಹನ ಚಾಲಕರು ಮತ್ತು ಅಂಗಡಿಯವರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರಿಗೆ ಆದಾಯಕ್ಕಾಗಿ ಹೊಸ ಮಾರ್ಗಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು. ವಿಶೇಷವಾಗಿ ತಲೆಮಾರುಗಳಿಂದ ವಂಚಿತರಾಗಿರುವ ಸಮುದಾಯಗಳಿಗೆ ಇದು ಪ್ರಯೋಜನವನ್ನು ನೀಡಿದೆ ಎಂದು ಅವರು ಒತ್ತಿ ಹೇಳಿದರು. ದೇಶದಲ್ಲಿ ಯಾವುದೇ ಕುಟುಂಬವು ನಿರಾಶ್ರಿತರಾಗಿ ಉಳಿಯಬಾರದು ಮತ್ತು ಪ್ರತಿಯೊಬ್ಬರಿಗೂ ಶಾಶ್ವತ ಸೂರು ಇರಬೇಕೆಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಕಳೆದ ದಶಕದಲ್ಲಿ, ಈ ಯೋಜನೆಯಡಿಯಲ್ಲಿ 4 ಕೋಟಿಗೂ ಹೆಚ್ಚು ಶಾಶ್ವತ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಬಿಹಾರವೊಂದರಲ್ಲಿಯೇ 57 ಲಕ್ಷ ಬಡ ಕುಟುಂಬಗಳು ಶಾಶ್ವತ ಮನೆಗಳನ್ನು ಪಡೆದಿವೆ ಎಂದು ಅವರು ಎತ್ತಿ ತೋರಿಸಿದರು. ಆರ್ಥಿಕವಾಗಿ ದುರ್ಬಲ ವರ್ಗಗಳು, ದಲಿತರು ಮತ್ತು ಪಸ್ಮಾಂಡಾ ಕುಟುಂಬಗಳಂತಹ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳ ಕುಟುಂಬಗಳಿಗೆ ಈ ಮನೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ, ಬಡವರಿಗೆ 3 ಕೋಟಿ ಹೆಚ್ಚು ಶಾಶ್ವತ ಮನೆಗಳನ್ನು ಒದಗಿಸಲಾಗುವುದು ಎಂದು ಶ್ರೀ ಮೋದಿ ಘೋಷಿಸಿದರು. ಇಂದು, ಬಿಹಾರದಲ್ಲಿ ಸುಮಾರು 1.5 ಲಕ್ಷ ಕುಟುಂಬಗಳು ತಮ್ಮ ಹೊಸ ಶಾಶ್ವತ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಿವೆ ಎಂದು ಅವರು ಹೇಳಿದರು. ದೇಶಾದ್ಯಂತ, 15 ಲಕ್ಷ ಬಡ ಕುಟುಂಬಗಳಿಗೆ ಹೊಸ ಮನೆಗಳ ನಿರ್ಮಾಣಕ್ಕಾಗಿ ಅನುಮೋದನೆ ಪತ್ರಗಳನ್ನು ನೀಡಲಾಗಿದೆ, ಇದರಲ್ಲಿ ಬಿಹಾರದ 3.5 ಲಕ್ಷ ಫಲಾನುಭವಿಗಳು ಸೇರಿದ್ದಾರೆ ಎಂದು ಅವರು ಹೇಳಿದರು. ಇಂದು, 80,000 ಗ್ರಾಮೀಣ ಕುಟುಂಬಗಳು ಮತ್ತು ಬಿಹಾರದ 1 ಲಕ್ಷ ನಗರ ಕುಟುಂಬಗಳು ಸೇರಿದಂತೆ ಸುಮಾರು 10 ಲಕ್ಷ ಬಡ ಕುಟುಂಬಗಳಿಗೆ ಅವರ ಶಾಶ್ವತ ಮನೆಗಳಿಗಾಗಿ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು.

 

"ಕಳೆದ ದಶಕವು ಭಾರತಕ್ಕೆ ಮೂಲಸೌಕರ್ಯ ಅಭಿವೃದ್ಧಿಯ ದಶಕವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು, ಈ ಆಧುನಿಕ ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಮೊದಲ ಬಾರಿಗೆ, 12 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಪಡೆದಿವೆ ಎಂದು ಅವರು ಗಮನಿಸಿದರು, 2.5 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಮತ್ತು ಗ್ಯಾಸ್ ಸ್ಟೌವ್ ಮೇಲೆ ಅಡುಗೆ ಮಾಡುವುದನ್ನು ಎಂದಿಗೂ ಊಹಿಸದವರು ಈಗ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಕಷ್ಟಕರವಾಗಿರುವ ಲಡಾಖ್ ಮತ್ತು ಸಿಯಾಚಿನ್ ನಂತಹ ಸವಾಲಿನ ಪ್ರದೇಶಗಳಲ್ಲಿಯೂ ಸಹ, 4ಜಿ ಮತ್ತು 5ಜಿ ಮೊಬೈಲ್ ಸಂಪರ್ಕಗಳನ್ನು ಈಗ ಸ್ಥಾಪಿಸಲಾಗಿದೆ, ಇದು ದೇಶದ ಪ್ರಸ್ತುತ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಆರೋಗ್ಯ ಸೇವೆಯಲ್ಲಿನ ಪ್ರಗತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಏಮ್ಸ್ ನಂತಹ ಸಂಸ್ಥೆಗಳು ಒಂದು ಕಾಲದಲ್ಲಿ ದೆಹಲಿಯಂತಹ ಪ್ರಮುಖ ನಗರಗಳಿಗೆ ಸೀಮಿತವಾಗಿದ್ದವು. ಈಗ ದರ್ಭಾಂಗದಲ್ಲಿ ಏಮ್ಸ್ ಸ್ಥಾಪನೆಯಾಗುತ್ತಿದೆ ಮತ್ತು ಕಳೆದ ದಶಕದಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು ಮತ್ತು ಝಂಝಾರಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದರು. ಹಳ್ಳಿಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು, ಬಿಹಾರದಲ್ಲಿ 10,000 ಸೇರಿದಂತೆ ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಜನೌಷಧಿ ಕೇಂದ್ರಗಳು ಬಡವರು ಮತ್ತು ಮಧ್ಯಮ ವರ್ಗದವರಿಗೆ ದೊಡ್ಡ ಪರಿಹಾರವಾಗಿದ್ದು ಶೇ. 80 ರಷ್ಟು ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡುತ್ತಿವೆ ಎಂದು ಅವರು ಹೇಳಿದರು. ಬಿಹಾರದಲ್ಲಿ ಈಗ 800 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ, ಇದರಿಂದಾಗಿ ಅದರ ಜನರಿಗೆ 2,000 ಕೋಟಿ ರೂ. ವೈದ್ಯಕೀಯ ವೆಚ್ಚ ಉಳಿತಾಯವಾಗಿದೆ ಎಂದು ಅವರು ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಹಾರದಲ್ಲಿ ಲಕ್ಷಾಂತರ ಕುಟುಂಬಗಳು ಉಚಿತ ಚಿಕಿತ್ಸೆಯನ್ನು ಪಡೆದಿವೆ, ಇದರಿಂದಾಗಿ ಈ ಕುಟುಂಬಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಉಳಿತಾಯವಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ರೈಲು ಮಾರ್ಗಗಳು, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳಂತಹ ಮೂಲಸೌಕರ್ಯಗಳ ಮೂಲಕ ತನ್ನ ಸಂಪರ್ಕವನ್ನು ವೇಗವಾಗಿ ವಿಸ್ತರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.  ಪಾಟ್ನಾದಲ್ಲಿ ಮೆಟ್ರೋ ಯೋಜನೆಗಳು ನಡೆಯುತ್ತಿವೆ ಮತ್ತು ದೇಶಾದ್ಯಂತ ಎರಡು ಡಜನ್ ಗೂ ಹೆಚ್ಚು ನಗರಗಳು ಈಗ ಮೆಟ್ರೋ ಸೌಲಭ್ಯಗಳೊಂದಿಗೆ ಸಂಪರ್ಕ ಹೊಂದಿವೆ ಎಂದರು. ಪಾಟ್ನಾ ಮತ್ತು ಜಯನಗರ ನಡುವೆ 'ನಮೋ ಭಾರತ್ ಕ್ಷಿಪ್ರ ರೈಲು' ಸೇವೆಯನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು, ಇದು ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸಮಷ್ಟಿಪುರ, ದರ್ಭಂಗಾ, ಮಧುಬನಿ ಮತ್ತು ಬೇಗುಸರಾಯ್ ನ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು.

ಬಿಹಾರದಲ್ಲಿ ಹಲವು ಹೊಸ ರೈಲು ಮಾರ್ಗಗಳ ಉದ್ಘಾಟನೆ ಮತ್ತು ಚಾಲನೆಯನ್ನು ಪ್ರಧಾನಿ ಪ್ರಸ್ತಾಪಿಸಿದರು, ಸಹರ್ಸಾ ಮತ್ತು ಮುಂಬೈ ನಡುವಿನ ಆಧುನಿಕ ಅಮೃತ್ ಭಾರತ್ ರೈಲು ಸೇವೆಯ ಆರಂಭವನ್ನು ಪ್ರಸ್ತಾಪಿಸಿದರು. ಇದು ಕಾರ್ಮಿಕ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದರು. ಸರ್ಕಾರವು ಮಧುಬನಿ ಮತ್ತು ಝಂಝಾರ್ಪುರ್ ಸೇರಿದಂತೆ ಬಿಹಾರದ ಹಲವಾರು ರೈಲು ನಿಲ್ದಾಣಗಳನ್ನು ಆಧುನೀಕರಿಸುತ್ತಿದೆ ಎಂದು ಅವರು ಹೇಳಿದರು. ದರ್ಭಾಂಗ ವಿಮಾನ ನಿಲ್ದಾಣವು ಮಿಥಿಲಾ ಮತ್ತು ಬಿಹಾರದಲ್ಲಿ ವಿಮಾನ ಸಂಪರ್ಕವು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಪಾಟ್ನಾ ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಅಭಿವೃದ್ಧಿ ಯೋಜನೆಗಳು ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

 

"ರೈತರು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು, ಈ ಬೆನ್ನೆಲುಬು ಬಲವಾಗಿದ್ದಷ್ಟೂ, ಹಳ್ಳಿಗಳು ಬಲವಾಗಿರುತ್ತವೆ ಮತ್ತು ಪರಿಣಾಮವಾಗಿ ರಾಷ್ಟ್ರವು ಬಲವಾಗಿರುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಮಿಥಿಲಾ ಮತ್ತು ಕೋಸಿ ಪ್ರದೇಶಗಳಲ್ಲಿನ ಪ್ರವಾಹದ ಸವಾಲುಗಳನ್ನು ಅವರು ಎತ್ತಿ ತೋರಿಸಿದರು, ಬಿಹಾರದಲ್ಲಿ ಪ್ರವಾಹದ ಪರಿಣಾಮವನ್ನು ತಗ್ಗಿಸಲು ಸರ್ಕಾರ ₹11,000 ಕೋಟಿ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ಹೇಳಿದರು. ಈ ಹೂಡಿಕೆಯು ಬಾಗ್ಮತಿ, ಧಾರ್, ಬುಧಿ ಗಂಡಕ್ ಮತ್ತು ಕೋಸಿಯಂತಹ ನದಿಗಳಿಗೆ ಅಣೆಕಟ್ಟುಗಳ ನಿರ್ಮಾಣವನ್ನು ಸುಗಮಗೊಳಿಸುತ್ತದೆ ಮತ್ತು ನದಿ ನೀರಿನ ಮೂಲಕ ನೀರಾವರಿಗಾಗಿ ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು. ಈ ಉಪಕ್ರಮವು ಪ್ರವಾಹ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುವುದಲ್ಲದೆ, ಪ್ರತಿಯೊಬ್ಬ ರೈತರ ಜಮೀನಿಗೂ ಸಾಕಷ್ಟು ನೀರು ಸರಬರಾಜಾಗುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

"ಮಿಥಿಲಾದ ಸಾಂಸ್ಕೃತಿಕ ಪ್ರಧಾನ ಆಹಾರವಾದ ಮಖಾನಾ ಈಗ ಸೂಪರ್ ಫುಡ್ ಆಗಿ ಜಾಗತಿಕ ಮನ್ನಣೆಯನ್ನು ಗಳಿಸಿದೆ" ಎಂದು ಶ್ರೀ ಮೋದಿ ಹೇಳಿದರು. ಮಖಾನಾಗೆ ಜಿಐ ಟ್ಯಾಗ್ ನೀಡಲಾಗಿದೆ, ಈ ಪ್ರದೇಶದ ಉತ್ಪನ್ನವೆಂದು ಅಧಿಕೃತವಾಗಿ ಪ್ರಮಾಣೀಕರಿಸಲಾಗಿದೆ ಎಂದು ಅವರು ಹೇಳಿದರು. ಮಖಾನಾ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಮಖಾನಾ ರೈತರ ಭವಿಷ್ಯವನ್ನು ಬದಲಾಯಿಸುವ ನಿರೀಕ್ಷೆಯಿರುವ ಮಖಾನಾ ಮಂಡಳಿಯ ಬಜೆಟ್ ಘೋಷಣೆಯನ್ನು ಅವರು ಎತ್ತಿ ತೋರಿಸಿದರು, ಬಿಹಾರದ ಮಖಾನಾ ಈಗ ಸೂಪರ್ಫುಡ್ ಆಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲಿದೆ ಎಂದು ಒತ್ತಿ ಹೇಳಿದರು. ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಸಣ್ಣ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಯುವಜನರಿಗೆ ಬೆಂಬಲ ನೀಡುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯನ್ನು ಬಿಹಾರದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಬಿಹಾರವು ಕೃಷಿಯ ಜೊತೆಗೆ ಮೀನುಗಾರಿಕೆಯಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು, ಮೀನುಗಾರರು ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ, ಇದು ಮೀನುಗಾರಿಕೆಯಲ್ಲಿ ತೊಡಗಿರುವ ಹಲವಾರು ಕುಟುಂಬಗಳಿಗೆ ಅನುಕೂಲಗಳನ್ನು ಒದಗಿಸುತ್ತದೆ ಎಂದು ಅವರು ಎತ್ತಿ ತೋರಿಸಿದರು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ, ಬಿಹಾರದಲ್ಲಿ ನೂರಾರು ಕೋಟಿ ಮೌಲ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.

 

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕ್ರೂರವಾಗಿ ಕೊಂದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಶ್ರೀ ಮೋದಿ, ಇಡೀ ರಾಷ್ಟ್ರವು ದುಃಖಿತವಾಗಿದೆ ಮತ್ತು ದುಃಖಿತ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಹೇಳಿದರು. ಚಿಕಿತ್ಸೆ ಪಡೆಯುತ್ತಿರುವವರ ತ್ವರಿತ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಭರವಸೆ ನೀಡಿದರು. ಕುಟುಂಬಗಳು ಅನುಭವಿಸಿದ ಅಪಾರ ನಷ್ಟವನ್ನು ಅವರು ಎತ್ತಿ ತೋರಿಸಿದರು, ಕೆಲವರು ತಮ್ಮ ಪುತ್ರರು, ಸಹೋದರರು ಅಥವಾ ಜೀವನ ಸಂಗಾತಿಗಳನ್ನು ಕಳೆದುಕೊಂಡರು, ಮಡಿದವರು ವಿಭಿನ್ನ ಭಾಷೆ ಮತ್ತು ಪ್ರಾದೇಶಿಕ ಹಿನ್ನೆಲೆಯಿಂದ ಬಂದವರು - ಕೆಲವರು ಬಂಗಾಳಿ, ಕನ್ನಡ, ಮರಾಠಿ, ಒಡಿಯಾ, ಗುಜರಾತಿ ಮಾತನಾಡುತ್ತಿದ್ದರು ಮತ್ತು ಕೆಲವರು ಬಿಹಾರದವರು ಎಂದು ಹೇಳಿದರು. ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ, ಈ ದಾಳಿಯ ಬಗ್ಗೆ ದೇಶಾದ್ಯಂತ ಸಮಾನ ದುಃಖ ಮತ್ತು ಆಕ್ರೋಶವಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇದು ಕೇವಲ ನಿರಾಯುಧ ಪ್ರವಾಸಿಗರ ಮೇಲಿನ ದಾಳಿಯಲ್ಲ, ಬದಲಾಗಿ ಭಾರತದ ಆತ್ಮದ ಮೇಲಿನ ಸ್ಪಷ್ಟ ದಾಳಿಯಾಗಿದೆ ಎಂದು ಹೇಳಿದರು. ಈ ದಾಳಿಗೆ ಕಾರಣರಾದ ಭಯೋತ್ಪಾದಕರು ಮತ್ತು ಅದರ ಸಂಚು ರೂಪಿಸಿದವರನ್ನು ಅವರ ಕಲ್ಪನೆಗೂ ಮೀರಿ ಶಿಕ್ಷಿಸಲಾಗುವುದು ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಘೋಷಿಸಿದರು, ಉಳಿದಿರುವ ಭಯೋತ್ಪಾದನೆಯ ಭದ್ರಕೋಟೆಗಳನ್ನು ನಿರ್ಮೂಲನೆ ಮಾಡುವ ಸಮಯ ಬಂದಿದೆ ಎಂದು ಒತ್ತಿ ಹೇಳಿದರು. 140 ಕೋಟಿ ಭಾರತೀಯರ ಇಚ್ಛಾಶಕ್ತಿಯು ಈಗ ಭಯೋತ್ಪಾದಕರ ಬೆನ್ನುಮೂಳೆಯನ್ನು ಮುರಿಯಲಿದೆ ಎಂದು ಅವರು ಒತ್ತಿ ಹೇಳಿದರು.

ಭಾರತವು ಪ್ರತಿಯೊಬ್ಬ ಭಯೋತ್ಪಾದಕ, ಅವನ ಯಜಮಾನ ಮತ್ತು ಅವನ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ ಎಂದು ಪ್ರಧಾನಿ ಬಿಹಾರದ ಮಣ್ಣಿನಿಂದ ಘೋಷಿಸಿದರು. ಭಾರತವು ಅವರನ್ನು ಭೂಮಿಯ ಮೂಲೆಯವರೆಗೂ ಹಿಂಬಾಲಿಸುತ್ತದೆ  ಎಂದು ಅವರು ಒತ್ತಿ ಹೇಳಿದರು. ಭಯೋತ್ಪಾದನೆಯಿಂದ ಭಾರತದ ಚೈತನ್ಯ ಎಂದಿಗೂ ಮುರಿಯುವುದಿಲ್ಲ ಮತ್ತು ಭಯೋತ್ಪಾದನೆಗೆ ಶಿಕ್ಷೆಯಾಗದೆ ಇರುವುದಿಲ್ಲ. ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಭಯೋತ್ಪಾದನೆಯ ವಿರುದ್ಧದ ಈ ಸಂಕಲ್ಪದಲ್ಲಿ ಇಡೀ ರಾಷ್ಟ್ರ ದೃಢವಾಗಿದೆ ಎಂದು ಅವರು ಹೇಳಿದರು. ಮಾನವೀಯತೆಯಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ವ್ಯಕ್ತಿಯು ಈ ಕಷ್ಟದ ಸಮಯದಲ್ಲಿ ಭಾರತದ ಜೊತೆ ನಿಲ್ಲುತ್ತಾನೆ ಎಂದು ಅವರು ಹೇಳಿದರು. ಈ ಕಷ್ಟದ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ ವಿವಿಧ ದೇಶಗಳ ಜನರು ಮತ್ತು ನಾಯಕರಿಗೆ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

"ಶಾಂತಿ ಮತ್ತು ಭದ್ರತೆಯು ತ್ವರಿತ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಪರಿಸ್ಥಿತಿಗಳು" ಎಂದು ಶ್ರೀ ಮೋದಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಬಿಹಾರ ಅತ್ಯಗತ್ಯ ಎಂದು ಅವರು ಹೇಳಿದರು. ಬಿಹಾರದಲ್ಲಿ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯದ ಪ್ರತಿಯೊಂದು ವಿಭಾಗ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಪ್ರಗತಿಯ ಪ್ರಯೋಜನಗಳನ್ನು ವಿಸ್ತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಪಂಚಾಯತ್ ರಾಜ್ ದಿನದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ನಿತ್ಯಾನಂದ ರೈ, ಶ್ರೀ ರಾಮನಾಥ್ ಠಾಕೂರ್, ಡಾ. ರಾಜಭೂಷಣ್ ಚೌಧರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಬಿಹಾರದ ಮಧುಬನಿಯಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪಂಚಾಯತ್ ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಹಥುವಾದಲ್ಲಿ ಸುಮಾರು 340 ಕೋಟಿ ರೂ. ಮೌಲ್ಯದ ರೈಲು ಅನ್ಲೋಡಿಂಗ್ ಸೌಲಭ್ಯದೊಂದಿಗೆ ಎಲ್ ಪಿ ಜಿ ಬಾಟ್ಲಿಂಗ್ ಘಟಕಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದು ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಮತ್ತು ಬೃಹತ್ ಎಲ್ ಪಿ ಜಿ ಸಾಗಣೆಯ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಉತ್ತೇಜಿಸುವ ಸಲುವಾಗಿ, ಪ್ರಧಾನಮಂತ್ರಿಯವರು 1,170 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಬಿಹಾರದಲ್ಲಿ ಪರಿಷ್ಕೃತ ವಿತರಣಾ ವಲಯ ಯೋಜನೆಯಡಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ 5,030 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು.

 

ದೇಶಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಸಹರ್ಸಾ ಮತ್ತು ಮುಂಬೈ ನಡುವಿನ ಅಮೃತ್ ಭಾರತ್ ಎಕ್ಸ್  ಪ್ರೆಸ್ , ಜಯನಗರ ಮತ್ತು ಪಾಟ್ನಾ ನಡುವಿನ ನಮೋ ಭಾರತ್ ಕ್ಷಿಪ್ರ ರೈಲು ಮತ್ತು ಪಿಪ್ರಾ ಮತ್ತು ಸಹರ್ಸಾ ಮತ್ತು ಸಹರ್ಸಾ ಮತ್ತು ಸಮಸ್ತಿಪುರ ನಡುವಿನ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅವರು ಸುಪೌಲ್ ಪಿಪ್ರಾ ರೈಲು ಮಾರ್ಗ, ಹಸನಪುರ್ ಬಿಥಾನ್ ರೈಲು ಮಾರ್ಗ ಮತ್ತು ಚಪ್ರಾ ಮತ್ತು ಬಾಗಹಾದಲ್ಲಿ ಎರಡು ದ್ವಿಪಥ ರೈಲು ಮೇಲ್ಸೇತುವೆಗಳನ್ನು ಉದ್ಘಾಟಿಸಿದರು. ಖಗೇರಿಯಾ-ಅಲೌಲಿ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಈ ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತವೆ.

ಪ್ರಧಾನಮಂತ್ರಿಯವರು ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಬಿಹಾರದ 2 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಸಮುದಾಯ ಹೂಡಿಕೆ ನಿಧಿಯಡಿಯಲ್ಲಿ ಸುಮಾರು 930 ಕೋಟಿ ರೂ.ಗಳ ಪ್ರಯೋಜನಗಳನ್ನು ವಿತರಿಸಿದರು.

ಪ್ರಧಾನಮಂತ್ರಿಯವರು ಪಿಎಂಎವೈ-ಗ್ರಾಮೀಣದ 15 ಲಕ್ಷ ಹೊಸ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು ಮತ್ತು ದೇಶಾದ್ಯಂತದ 10 ಲಕ್ಷ ಪಿಎಂಎವೈ-ಗ್ರಾಮೀಣದ ಫಲಾನುಭವಿಗಳಿಗೆ ಕಂತುಗಳನ್ನು ಬಿಡುಗಡೆ ಮಾಡಿದರು. ಬಿಹಾರದಲ್ಲಿ 1 ಲಕ್ಷ ಪಿಎಂಎವೈ-ಗ್ರಾಮೀಣ ಮತ್ತು 54,000 ಪಿಎಂಎವೈ-ನಗರ ಮನೆಗಳ ಗೃಹ ಪ್ರವೇಶದ ಅಂಗವಾಗಿ ಅವರು ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Number of Indian women with digital access doubled since 2021: Survey

Media Coverage

Number of Indian women with digital access doubled since 2021: Survey
NM on the go

Nm on the go

Always be the first to hear from the PM. Get the App Now!
...
Prime Minister greets people of Goa on Goa Statehood Day
May 30, 2026

The Prime Minister, Shri Narendra Modi, today extended his greetings to the people of Goa on the occasion of Goa Statehood Day.

The Prime Minister said that Goa is widely known for its vibrant culture, rich heritage, natural beauty and warm-hearted people.

The Prime Minister noted that the occasion is an opportunity to remember with gratitude all those who worked tirelessly for the progress and identity of Goa.

The Prime Minister expressed hope that Goa will continue to prosper and play an important role in building a Viksit Bharat.

Shri Modi also prayed for the good health and prosperity of every Goan.

The Prime Minister wrote on X;

“Greetings to the people of Goa on the special occasion of Goa Statehood Day. Goa’s vibrant culture, rich heritage, natural beauty and warm-hearted people are widely known. This day is also an opportunity to remember with gratitude all those who worked tirelessly for its progress and identity. May Goa continue to prosper and play an important role in building a Viksit Bharat. Praying for the good health and prosperity of every Goan.”