ಆರೋಗ್ಯ ಪೂರ್ಣ ಭಾರತಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಸರಕಾರ ನಾಲ್ಕು ಪ್ರಮುಖ ಕಾರ್ಯತಂತ್ರಗಳೊಂದಿಗೆ ಕೆಲಸ ಮಾಡುತ್ತಿದೆ
ಭಾರತದ ಆರೋಗ್ಯ ವಲಯವು ತೋರಿಸಿದ ಶಕ್ತಿ ಮತ್ತು ಸದೃಢತೆಯನ್ನು ಈಗ ವಿಶ್ವವೇ ಸ್ಪಷ್ಟವಾಗಿ ಶ್ಲಾಘಿಸುತ್ತಿದೆ
ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ತಯಾರಿಕೆಗಾಗಿ ಕಚ್ಚಾ ವಸ್ತುಗಳ ಆಮದನ್ನು ಕಡಿಮೆ ಮಾಡಲು ಭಾರತ ಕೆಲಸ ಮಾಡಬೇಕು: ಪ್ರಧಾನಿ

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಆರೋಗ್ಯ ವಲಯ ಕುರಿತ ಪ್ರಸ್ತಾವಗಳ ಪರಿಣಾಮಕಾರಿ ಅನುಷ್ಠಾನ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

ವೆಬಿನಾರ್‌ ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು ಈ ವರ್ಷದ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಅಭೂತಪೂರ್ವವಾದದ್ದು. ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಸರಕಾರದ ಬದ್ಧತೆಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷಎಷ್ಟು ಕಠಿಣ ಹಾಗೂ ಸವಾಲಿನಿಂದ ಕೂಡಿತ್ತು ಎಂದು ಸ್ಮರಿಸಿದ ಅವರು, ಈ ಸವಾಲನ್ನು ಮೆಟ್ಟಿ ಅನೇಕ ಜೀವಗಳನ್ನು ಉಳಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಸಾಧನೆಯಲ್ಲಿ ಸರಕಾರಿ ಮತ್ತು ಖಾಸಗಿ ವಲಯದ ಸಂಘಟಿತ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲವೇ ತಿಂಗಳಲ್ಲಿ ದೇಶವು 2500 ಪ್ರಯೋಗಾಲಯಗಳ ಜಾಲವನ್ನು ಹೇಗೆ ಸ್ಥಾಪಿಸಿತು ಮತ್ತು ಕೇವಲ 10-12 ಪರೀಕ್ಷೆಗಳ ಮಟ್ಟದಿಂದ 21 ಕೋಟಿ ಪರೀಕ್ಷೆಗಳ ಮೈಲಿಗಲ್ಲನ್ನು ತಲುಪಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಧಾನಿ ಸ್ಮರಿಸಿದರು.

ನಾವು ಇಂದು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಿಸಲು ದೇಶವನ್ನು ಸಜ್ಜುಗೊಳಿಸಬೇಕಾಗಿದೆ ಎಂಬ ಪಾಠವನ್ನು ಕರೊನಾ ನಮಗೆ ಕಲಿಸಿದೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದ, ಆರೋಗ್ಯ ಸೇವೆಗೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವನ್ನು ಬಲಪಡಿಸುವುದು ಅಷ್ಟೇ ಅಗತ್ಯ ಎಂದರು.

ವೈದ್ಯಕೀಯ ಉಪಕರಣಗಳಿಂದ ಹಿಡಿದು ಔಷಧಗಳವರೆಗೆ, ವೆಂಟಿಲೇಟರ್‌ಗಳಿಂದ ಹಿಡಿದು ಲಸಿಕೆಗಳವರೆಗೆ, ವೈಜ್ಞಾನಿಕ ಸಂಶೋಧನೆಯಿಂದ ಹಿಡಿದು ಕಣ್ಗಾವಲು ಮೂಲಸೌಕರ್ಯಗಳವರೆಗೆ, ವೈದ್ಯರಿಂದ ಹಿಡಿದು ಸಾಂಕ್ರಾಮಿಕ ರೋಗತಜ್ಞರವರೆಗೆ ಎಲ್ಲದರತ್ತಲೂ ಗಮನ ಹರಿಸಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸವಾಲುಗಳಿಗೆ ದೇಶವು ಸನ್ನದ್ಧವಾಗಿದೆ ಎಂದು ಅವರು ಹೇಳಿದರು.

ʻಪಿಎಂ ಅತ್ಮನಿರ್ಭರ್‌ ಸ್ವಸ್ಥ ಭಾರತ ಯೋಜನೆʼಯ ಹಿಂದಿನ ಪ್ರೇರಣೆ ಇದೇ ಆಗಿದೆ. ಈ ಯೋಜನೆಯಡಿ, ಸಂಶೋಧನೆಯಿಂದ ಹಿಡಿದು ಪರೀಕ್ಷೆ ಮತ್ತು ಚಿಕಿತ್ಸೆಗಳವರೆಗೆ ಆಧುನಿಕ ಪರಿಸರ ವ್ಯವಸ್ಥೆಯನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಬೇಕೆಂದು ನಿರ್ಧರಿಸಲಾಗಿದೆ. ಈ ಯೋಜನೆಯು ಪ್ರತಿಯೊಂದು ವಿಚಾರದಲ್ಲೂ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ, ಆರೋಗ್ಯ ಸೇವೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳಿಗೆ 70000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು. ಅಂದರೆ, ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಷ್ಟೇ ಅಲ್ಲದೆ, ದೇಶದ ದೂರದ ಪ್ರದೇಶಗಳಿಗೂ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಸರಕಾರ ಒತ್ತು ನೀಡಿದೆ. ಈ ಹೂಡಿಕೆಗಳು ಆರೋಗ್ಯ ಸೇವೆಗಳ ಸುಧಾರಣೆ ಮಾತ್ರವಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಅನುಭವ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಭಾರತದ ಆರೋಗ್ಯ ವಲಯವು ತೋರಿಸಿದ ಶಕ್ತಿ ಮತ್ತು ಸುದೃಢತೆಯನ್ನು ಇಡೀ ಜಗತ್ತು ಈಗ ಶ್ಲಾಘಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ದೇಶದ ಆರೋಗ್ಯ ಕ್ಷೇತ್ರದ ಬಗ್ಗೆ ಗೌರವ ಹಾಗೂ ವಿಶ್ವಾಸವು ವಿಶ್ವವ್ಯಾಪಿಯಾಗಿ ಸಾಕಷ್ಟು ಹೆಚ್ಚಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ದೇಶವು ಭವಿಷ್ಯದತ್ತ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಭಾರತೀಯ ವೈದ್ಯರು, ಭಾರತೀಯ ನರ್ಸ್‌ಗಳು, ಭಾರತೀಯ ಅರೆ ವೈದ್ಯಕೀಯ ಸಿಬ್ಬಂದಿ, ಭಾರತೀಯ ಔಷಧಗಳು ಮತ್ತು ಭಾರತೀಯ ಲಸಿಕೆಗಳ ಬೇಡಿಕೆ ವಿಶ್ವದಾದ್ಯಂತ ಹೆಚ್ಚಾಗಲಿದೆ ಎಂದು ಅವರು ಹೇಳಿದರು.

ಖಂಡಿತವಾಗಿಯೂ ವಿಶ್ವದ ಗಮನ ಭಾರತದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯತ್ತ ಹೊರಳಲಿದೆ. ಜೊತೆಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಮುಂದೆ ದೊಡ್ಡ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಆಗಮನವಾಗಲಿದೆ ಎಂದರು.

ಸಾಂಕ್ರಾಮಿಕದ ವೇಳೆ ವೆಂಟಿಲೇಟರ್ ಮತ್ತು ವೈದ್ಯಕೀಯ ಉಪಕರಣಗಳನ್ನು ತಯಾರಿಸುವಲ್ಲಿ ನಮ್ಮ ಸಾಧನೆ ಮಹತ್ತರವಾದದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಾವು ಈ ನಿಟ್ಟಿನಲ್ಲಿ ಮತ್ತಷ್ಟು ವೇಗವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ವಿಶ್ವಕ್ಕೆ ಅಗತ್ಯವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ಕನಸನ್ನು ಭಾರತ ಹೊಂದಬಹುದೇ? ಬಳಕೆದಾರ ಸ್ನೇಹಿ ತಂತ್ರಜ್ಞಾನದೊಂದಿಗೆ ಭಾರತವನ್ನು ಕಡಿಮೆ ವೆಚ್ಚದ ಹಾಗೂ ಸುಸ್ಥಿರ ಜಾಗತಿಕ ಪೂರೈಕೆದಾರನನ್ನಾಗಿ ಮಾಡುವುದು ಹೇಗೆ ಎಂಬುದರತ್ತ ನಾವು ಗಮನ ಹರಿಸಬಹುದೇ? ಎಂದು ಅವರು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದವರನ್ನು ಪ್ರಶ್ನಿಸಿದರು.

ಹಿಂದಿನ ಸರಕಾರಗಳಂತಲ್ಲದೆ, ಹಾಲಿ ಸರಕಾರವು ಆರೋಗ್ಯ ಸಮಸ್ಯೆಗಳನ್ನು ಸಮಗ್ರವಾಗಿ ಪರಿಗಣಿಸುತ್ತದೆ. ಅವುಗಳನ್ನು ಬಿಡಿಬಿಡಿಯಾಗಿ ನೋಡುವುದಿಲ್ಲ. ಹಾಗಾಗಿ ಕೇವಲ ಚಿಕಿತ್ಸೆಗೆ ಮಾತ್ರವಲ್ಲ, ಯೋಗಕ್ಷೇಮದ ಕಡೆ ಸರಕಾರ ಗಮನ ಹರಿಸುತ್ತದೆ ಎಂದರು.

ರೋಗ ತಡೆಯಿಂದ, ಉಪಶಮನದವರೆಗೂ ಸಮಗ್ರ ಮತ್ತು ಸಂಯೋಜಿತ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆರೋಗ್ಯಪೂರ್ಣ ಭಾರತಕ್ಕಾಗಿ ನಾಲ್ಕು ಕಾರ್ಯತಂತ್ರದೊಂದಿಗೆ ಭಾರತ ಸರಕಾರ ಕೆಲಸ ಮಾಡುತ್ತಿದೆ ಎಂದರು.

ಈ ಪೈಕಿ ಮೊದಲನೆಯದು "ರೋಗವನ್ನು ತಡೆಗಟ್ಟುವುದು ಮತ್ತು ಯೋಗಕ್ಷೇಮದ ಉತ್ತೇಜನ". ಸ್ವಚ್ಛ ಭಾರತ ಅಭಿಯಾನ, ಯೋಗ, ಗರ್ಭಿಣಿಯರು ಹಾಗೂ ಮಕ್ಕಳ ಸಕಾಲಿಕ ಆರೈಕೆ ಮತ್ತು ಚಿಕಿತ್ಸೆ ಮುಂತಾದ ಕ್ರಮಗಳು ಇದರ ಭಾಗವಾಗಿವೆ.

ಎರಡನೆಯದು "ಬಡವರಿಗೆ ಅಗ್ಗದ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುವುದು". ಆಯುಷ್ಮಾನ್ ಭಾರತ್ ಮತ್ತು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

ಮೂರನೆಯದು "ಆರೋಗ್ಯ ಮೂಲಸೌಕರ್ಯ ಹಾಗೂ ಆರೋಗ್ಯ ವೃತ್ತಿಪರರ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಿಸುವುದು". ಕಳೆದ 6 ವರ್ಷಗಳಿಂದ ಈ ನಿಟ್ಟಿನಲ್ಲಿ ʻಏಮ್ಸ್ʼನಂತಹ ಸಂಸ್ಥೆಗಳನ್ನು ವಿಸ್ತರಿಸುವುದು ಮತ್ತು ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ.

ನಾಲ್ಕನೆಯದು "ಅಡೆತಡೆಗಳನ್ನು ನಿವಾರಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವುದು". ʻಇಂದ್ರಧನುಷ್ ಅಭಿಯಾನʼವನ್ನು ದೇಶದ ಬುಡಕಟ್ಟು ಮತ್ತು ದೂರದ ಪ್ರದೇಶಗಳಿಗೆ ವಿಸ್ತರಿಸಲಾಗಿದೆ. 2030ರ ಒಳಗಾಗಿ ವಿಶ್ವವನ್ನು ಕ್ಷಯ ರೋಗದಿಂದ ಮುಕ್ತಗೊಳಿಸುವ ಗುರಿಯನ್ನು ಭಾರತ ಇನ್ನೂ ಐದು ವರ್ಷ ಮುಂಚಿತವಾಗಿಯೇ, ೨೦೨೫ರ ಒಳಗೇ ಸಾಧಿಸಲು ಸಂಕಲ್ಪಿಸಿದೆ. ಕ್ಷಯ ರೋಗವೂ ಸಹ ಸೋಂಕಿತ ಡ್ರಾಪ್‌ಲೆಟ್‌ಗಳ ಮೂಲಕ ಹರಡುವುದರಿಂದ ಕ್ಷಯ ರೋಗವನ್ನು ತಡೆಗಟ್ಟಲು ಸಹ ಕೊರೋನಾ ವೈರಸ್ ತಡೆಗಟ್ಟುವಲ್ಲಿ ಅನುಸರಿಸಲಾದ ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳಬಹುದು ಎಂದು ಪ್ರಧಾನಿ ಸಲಹೆ ನೀಡಿದರು. ಮಾಸ್ಕ್ ಧರಿಸುವುದು ಮತ್ತು ಮುಂಚಿತವಾಗಿ ರೋಗವನ್ನು ಗುರುತಿಸಿ ಚಿಕಿತ್ಸೆ ಪಡೆಯುವುದು ಸಹ ಕ್ಷಯ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ.

ಕೋವಿಡ್‌ ಅವಧಿಯಲ್ಲಿ ಆಯುಷ್ ವಲಯದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ರೋಗ ನಿರೋಧಕ ಶಕ್ತಿ ಹೆಚ್ಚಳ ಹಾಗೂ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದಂತೆ ನಮ್ಮ ಆಯುಷ್ ಒದಗಿಸಿದ ಮೂಲಸೌಕರ್ಯದಿಂದ ದೇಶಕ್ಕೆ ಬಹಳ ಸಹಾಯವಾಗಿದೆ ಎಂದು ಅವರು ಹೇಳಿದರು. ಕೋವಿಡ್‌-19 ನಿಯಂತ್ರಣಕ್ಕೆ ಲಸಿಕೆಯ ಜತೆ ಜತೆಗೆ, ಆರೋಗ್ಯ ಸುಧಾರಣೆಯಲ್ಲಿ ಸಾಂಪ್ರದಾಯಿಕ ಔಷಧ ಹಾಗೂ ಮಸಾಲೆಗಳ ಪದಾರ್ಥಗಳ ಪ್ರಭಾವ ಏನೆಂಬುದು ವಿಶ್ವದ ಅನುಭವಕ್ಕೆ ಬರುತ್ತಿದೆ ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ ʻವಿಶ್ವ ಪಾರಂಪರಿಕ ವೈದ್ಯಕೀಯ ಕೇಂದ್ರʼವನ್ನು ಸ್ಥಾಪಿಸಲಿದೆ ಎಂದು ಅವರು ಘೋಷಿಸಿದರು.

ಆರೋಗ್ಯ ಕ್ಷೇತ್ರದ ಸೇವೆಗಳು ಅಗ್ಗದ ದರದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಿ, ಈ ಕ್ಷೇತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಗುರಿಯನ್ನು ಸಾಧಿಸಲು ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿದರು. ʻಡಿಜಿಟಲ್ ಹೆಲ್ತ್ ಮಿಷನ್‌ʼನಿಂದ ಜನಸಾಮಾನ್ಯರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ನೆರವಾಗಲಿದೆ. ಈ ಬದಲಾವಣೆಗಳು ʻಅತ್ಮನಿರ್ಭರ್ ಭಾರತ್‌ʼ ಗುರಿ ಸಾಧನೆಗೆ ಬಹಳ ಮುಖ್ಯ ಎಂದು ಅವರು ಹೇಳಿದರು.

ಭಾರತ ಇಂದು ಜಗತ್ತಿನ ಔಷಧಾಲಯವಾಗಿ ಮಾರ್ಪಟ್ಟಿದ್ದರೂ, ಕಚ್ಚಾ ವಸ್ತುಗಳಿಗಾಗಿ ವಿದೇಶಗಳಿಂದ ಆಮದನ್ನು ಅವಲಂಬಿಸಿದೆ ಎಂದು ಮೋದಿ ಹೇಳಿದರು. ಇಂತಹ ಅವಲಂಬನೆ ನಮ್ಮ ಉದ್ಯಮಗಳಿಗೆ ಉತ್ತಮವಲ್ಲ, ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ, ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ಇದು ದೊಡ್ಡ ಅಡಚಣೆಯಾಗಿದೆ ಎಂದು ಅವರು ವಿಷಾದಿಸಿದರು.

ಸ್ವಾವಲಂಬನೆಗಾಗಿ ನಾಲ್ಕು ಯೋಜನೆಗಳನ್ನು ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಘೋಷಿಸಿದರು.

ಇದರ ಅಡಿಯಲ್ಲಿ, ದೇಶದಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗಾಗಿ ಉತ್ಪಾದನೆ ಆಧರಿತ ಉತ್ತೇಜಕಗಳನ್ನು ನೀಡಲಾಗುತ್ತದೆ. ಇದೇ ರೀತಿ, ಔಷಧ ಮತ್ತು ವೈದ್ಯಕೀಯ ಸಾಧನಗಳಿಗಾಗಿ ಮೆಗಾಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ದೇಶಕ್ಕೆ ʻಯೋಗಕ್ಷೇಮʼ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ, ತೀವ್ರ ನಿಗಾ ಘಟಕ, ಆರೋಗ್ಯ ಕಣ್ಗಾವಲು ಮೂಲಸೌಕರ್ಯ, ಆಧುನಿಕ ಪ್ರಯೋಗಾಲಯ, ಟೆಲಿಮೆಡಿಸಿನ್ ಸೌಲಭ್ಯಗಳ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರತಿ ಹಂತದಲ್ಲೂ ಕೆಲಸ ಮಾಡುವ ಮತ್ತು ಪ್ರತಿ ಹಂತವನ್ನು ಉತ್ತೇಜಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶದ ಜನರು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ, ಅವರು ಬಡವರಾದರೂ ಅವರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನಾವು ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು. ಇದು ಸಾಧ್ಯವಾಗಬೇಕಾದರೆ, ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ, ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹೇಳಿದರು.

ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಜಾಲವನ್ನು ಸೃಷ್ಟಿಸುವಲ್ಲಿ ಖಾಸಗಿ ವಲಯವು ʻಪಿಪಿಪಿʼ ಮಾದರಿಗಳನ್ನು ಬೆಂಬಲಿಸಬಹುದು ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲೂ (ಪಿಎಂಜೆಎವೈ) ಪಾಲುದಾರಿಕೆ ಹೊಂದಬಹುದು. ʻರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ʼ, ನಾಗರಿಕರ ಡಿಜಿಟಲ್ ಆರೋಗ್ಯ ದಾಖಲೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದಲ್ಲೂ ಪಾಲುದಾರಿಕೆ ಪಡೆಯಬಹುದು ಎಂದು ಪ್ರಧಾನಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
₹10,000-crore scheme puts container manufacturing at the centre of India’s maritime push

Media Coverage

₹10,000-crore scheme puts container manufacturing at the centre of India’s maritime push
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlighting determination, perseverance, and continuous effort in overcoming life's challenges
August 13, 2026

Prime Minister Shri Narendra Modi shared a Sanskrit Subhashitam today, highlighting the power of determination, perseverance, and courage in overcoming life's challenges and turning adverse circumstances into favorable ones.

The Prime Minister wrote on X;

"दैवं पुरुषकारेण यः समर्थः प्रबाधितुम्।

न दैवेन विपन्नार्थः पुरुषः सोऽवसीदति॥"

A person who possesses the determination, perseverance and courage to turn adverse circumstances into favorable ones is never defeated by the challenges of life. Instead, through continuous effort and unwavering resolve, he moves forward and ultimately achieves success.