ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಮತ್ತು ಅಮೆರಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನಿಗದಿಯಾಗಿತ್ತು. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಅಮೆರಿಕಕ್ಕೆ ಬೇಗನೆ ಹಿಂತಿರುಗಬೇಕಾದ ಹಿನ್ನೆಲೆಯಲ್ಲಿ ಈ ಸಭೆ ಸಾಧ್ಯವಾಗಲಿಲ್ಲ.

ಇದಾದ ನಂತರ, ಅಧ್ಯಕ್ಷ ಟ್ರಂಪ್ ಅವರ ಕೋರಿಕೆಯ ಮೇರೆಗೆ, ಇಬ್ಬರೂ ನಾಯಕರು ಇಂದು ಫೋನ್ ಕರೆಯಲ್ಲಿ ಮಾತನಾಡಿದರು. ಸಂಭಾಷಣೆ ಸುಮಾರು 35 ನಿಮಿಷಗಳ ಕಾಲ ನಡೆಯಿತು.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಅಧ್ಯಕ್ಷ ಟ್ರಂಪ್ ಅವರು ಪ್ರಧಾನ ಮಂತ್ರಿ ಮೋದಿ ಅವರಿಗೆ ದೂರವಾಣಿ ಕರೆಯಲ್ಲಿ ಸಂತಾಪ ಸೂಚಿಸಿದ್ದರು. ಅವರು ಭಯೋತ್ಪಾದನೆ ವಿರುದ್ಧ ತಮ್ಮ ಬೆಂಬಲವನ್ನು ಸಹ ವ್ಯಕ್ತಪಡಿಸಿದ್ದರು. ಆನಂತರ ಇಬ್ಬರು ನಾಯಕರ ನಡುವಿನ ಮೊದಲ ಸಂಭಾಷಣೆ ಇದಾಗಿತ್ತು.

ಹಾಗಾಗಿ, ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಆಪರೇಷನ್ ಸಿಂಧೂರ್ ಬಗ್ಗೆ ವಿವರವಾಗಿ ಮಾತನಾಡಿದರು.

ಏಪ್ರಿಲ್ 22ರ ನಂತರ ಭಾರತವು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವ ತನ್ನ ದೃಢ ನಿರ್ಧಾರವನ್ನು ಇಡೀ ಜಗತ್ತಿಗೆ ತಿಳಿಸಿದೆ ಎಂದು ಪ್ರಧಾನ ಮಂತ್ರಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು. ಮೇ 6-7ರ ರಾತ್ರಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳು ಮತ್ತು ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು. ಭಾರತದ ಸೇನಾ ಕ್ರಮಗಳು ಬಹಳ ಲೆಕ್ಕಾಚಾರದಿಂದ ಮತ್ತು ನಿಖರತೆಯಿಂದ ಕೂಡಿದ್ದವು, ಆದರೆ ಅವು ಉಲ್ಬಣ ಸ್ವರೂಪ ಹೊಂದಿರಲಿಲ್ಲ.  ಪಾಕಿಸ್ತಾನದಿಂದ ಯಾವುದೇ ಆಕ್ರಮಣಕಾರಿ ಕೃತ್ಯಕ್ಕೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತ ಸ್ಪಷ್ಟಪಡಿಸಿತು..

ಮೇ 9ರ ರಾತ್ರಿ, ಉಪಾಧ್ಯಕ್ಷ ವ್ಯಾನ್ಸ್ ಅವರು ಪ್ರಧಾನ ಮಂತ್ರಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಪಾಕಿಸ್ತಾನವು ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು ಎಂದು ಉಪಾಧ್ಯಕ್ಷ ವ್ಯಾನ್ಸ್ ತಿಳಿಸಿದ್ದರು. ಅಂತಹ ಕ್ರಮ ನಡೆದರೆ, ಭಾರತವು ಇನ್ನೂ ಬಲವಾದ ಉತ್ತರ ನೀಡುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು.

ಮೇ 9-10ರ ರಾತ್ರಿ, ಭಾರತವು ಪಾಕಿಸ್ತಾನದ ದಾಳಿಗೆ ಬಲವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಿತು, ಪಾಕಿಸ್ತಾನದ ಮಿಲಿಟರಿಗೆ ಗಮನಾರ್ಹ ಹಾನಿ ಉಂಟುಮಾಡಿತು. ಅವರ ಮಿಲಿಟರಿ ವಾಯುನೆಲೆಗಳು ನಿಷ್ಕ್ರಿಯಗೊಂಡವು. ಭಾರತದ ದೃಢ ಕ್ರಮದಿಂದಾಗಿ, ಪಾಕಿಸ್ತಾನವು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಮನವಿ ಮಾಡಿತು.

ಈ ಸಂಪೂರ್ಣ ಘಟನೆಗಳ ಸರಣಿಯ ಸಮಯದಲ್ಲಿ ಯಾವುದೇ ಹಂತದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆಯ ಯಾವುದೇ ಪ್ರಸ್ತಾಪ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು. ಮಿಲಿಟರಿ ಕ್ರಮವನ್ನು ನಿಲ್ಲಿಸುವ ಚರ್ಚೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಎರಡೂ ಸಶಸ್ತ್ರ ಪಡೆಗಳ ನಡುವಿನ ಸಂವಹನ ಮಾರ್ಗಗಳ ಮೂಲಕ ನಡೆಯಿತು, ಪಾಕಿಸ್ತಾನದ ಕೋರಿಕೆಯ ಮೇರೆಗೆ ಇದನ್ನು ಪ್ರಾರಂಭಿಸಲಾಯಿತು. ಭಾರತವು ಮಧ್ಯಸ್ಥಿಕೆ ಒಪ್ಪುವುದಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನ ಮಂತ್ರಿ  ಮೋದಿ ದೃಢವಾಗಿ ಹೇಳಿದರು. ಈ ವಿಷಯದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ ಎಂದರು.

ಪ್ರಧಾನಿ ಅವರು ತಿಳಿಸಿದ ವಿಚಾರಗಳನ್ನು ಅಧ್ಯಕ್ಷ ಟ್ರಂಪ್ ಸೂಕ್ಷ್ಮವಾಗಿ ಆಲಿಸಿದರು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪರೋಕ್ಷ(ಪ್ರಾಕ್ಸಿ) ಯುದ್ಧವೆಂದು ನೋಡುವುದಿಲ್ಲ, ಬದಲಿಗೆ ಯುದ್ಧವೆಂದು ನೋಡುತ್ತದೆ ಮತ್ತು ಭಾರತದ ಆಪರೇಷನ್ ಸಿಂದೂರ್ ಇನ್ನೂ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೆನಡಾದಿಂದ ಹಿಂತಿರುಗುವಾಗ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಬಹುದೆ ಎಂದು ಅಧ್ಯಕ್ಷ ಟ್ರಂಪ್ ವಿಚಾರಿಸಿದರು. ಪೂರ್ವ ಬದ್ಧತೆಗಳಿಂದಾಗಿ, ಹಾಗೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ತಮ್ಮ ಅಸಾಮರ್ಥ್ಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಭೇಟಿಯಾಗಲು ಪ್ರಯತ್ನಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚಿಸಿದರು. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ, ಎರಡೂ ಪಕ್ಷಗಳ ನಡುವೆ ನೇರ ಸಂವಾದ ಅತ್ಯಗತ್ಯ, ಇದನ್ನು ಸುಗಮಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.

ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ, ಇಬ್ಬರೂ ನಾಯಕರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು, ಈ ಪ್ರದೇಶದಲ್ಲಿ ಕ್ವಾಡ್(QUAD)ನ ಮಹತ್ವದ ಪಾತ್ರದ ಬಗ್ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮುಂದಿನ ಕ್ವಾಡ್(QUAD) ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರಿಗೆ ಆಹ್ವಾನ ನೀಡಿದರು. ಅಧ್ಯಕ್ಷ ಟ್ರಂಪ್ ಆಹ್ವಾನವನ್ನು ಸ್ವೀಕರಿಸಿದ್ದು, ಭಾರತಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Odisha’s Dhenkanal farmers export 3 tonne of mango to London

Media Coverage

Odisha’s Dhenkanal farmers export 3 tonne of mango to London
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2026
May 14, 2026

Kisan Kalyan to Viksit Bharat: PM Modi Delivers Jobs, Markets & Dignity Across Rural and Industrial India