ಬಾಹ್ಯಾಕಾಶವು ಕೇವಲ ಗಮ್ಯಸ್ಥಾನವಲ್ಲ, ಅದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ: ಪ್ರಧಾನಮಂತ್ರಿ
ಭಾರತೀಯ ರಾಕೆಟ್ ಗಳು ಪೇಲೋಡ್ ಗಳಿಗಿಂತ ಹೆಚ್ಚಿನದನ್ನು ಸಾಗಿಸುತ್ತವೆ- ಅವು 1.4 ಶತಕೋಟಿ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ: ಪ್ರಧಾನಮಂತ್ರಿ
ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಮಿಷನ್ - ಗಗನಯಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ರಾಷ್ಟ್ರದ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ಭಾರತದ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಮಹಿಳಾ ವಿಜ್ಞಾನಿಗಳು ಮುನ್ನಡೆಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತದ ಬಾಹ್ಯಾಕಾಶ ದೃಷ್ಟಿಕೋನವು 'ವಸುದೈವ ಕುಟುಂಬಕಂ' ಎಂಬ ಪ್ರಾಚೀನ ತತ್ವಶಾಸ್ತ್ರದಲ್ಲಿ ಬೇರೂರಿದೆ: ಪ್ರಧಾನಮಂತ್ರಿ

ಗೌರವಾನ್ವಿತ ಪ್ರತಿನಿಧಿಗಳೆ, ಗೌರವಾನ್ವಿತ ವಿಜ್ಞಾನಿಗಳೆ, ಅನುಶೋಧಕರೆ, ಗಗನಯಾತ್ರಿಗಳೆ ಮತ್ತು ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಸ್ನೇಹಿತರೆ,

ನಮಸ್ಕಾರ!

2025ರ ಜಾಗತಿಕ ಬಾಹ್ಯಾಕಾಶ ಪರಿಶೋಧನಾ ಸಮ್ಮೇಳನದಲ್ಲಿ ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸಲು ನನಗೆ ತುಂಬಾ ಸಂತೋಷವಾಗಿದೆ. ಬಾಹ್ಯಾಕಾಶ ಕೇವಲ ಒಂದು ತಾಣವಲ್ಲ. ಇದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ. ಭಾರತದ ಬಾಹ್ಯಾಕಾಶ ಪ್ರಯಾಣವು ಈ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. 1963ರಲ್ಲಿ ಸಣ್ಣ ರಾಕೆಟ್ ಉಡಾಯಿಸುವುದರಿಂದ ಹಿಡಿದು, ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ರಾಷ್ಟ್ರವಾಗುವ ತನಕ ನಮ್ಮ ಪ್ರಯಾಣವು ಅತ್ಯಂತ ಗಮನಾರ್ಹವಾಗಿದೆ. ನಮ್ಮ ರಾಕೆಟ್‌ಗಳು ಪೇಲೋಡ್‌ಗಳಿಗಿಂತ ಹೆಚ್ಚಿನದನ್ನು ಹೊತ್ತೊಯ್ಯುತ್ತವೆ. ಅವು 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ. ಭಾರತದ ಸಾಧನೆಗಳು ಗಮನಾರ್ಹ ವೈಜ್ಞಾನಿಕ ಮೈಲಿಗಲ್ಲುಗಳಾಗಿವೆ. ಅದಕ್ಕೂ ಮೀರಿ, ಮಾನವ ಚೈತನ್ಯವು ಗುರುತ್ವಾಕರ್ಷಣೆಯನ್ನು ಧಿಕ್ಕರಿಸಬಲ್ಲದು ಎಂಬುದಕ್ಕೆ ಅವು ಪುರಾವೆಗಳಾಗಿವೆ. 2014ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹ ತಲುಪುವ ಮೂಲಕ ಭಾರತ ಇತಿಹಾಸ ನಿರ್ಮಿಸಿತು. ಚಂದ್ರಯಾನ-1 ಚಂದ್ರನ ಮೇಲೆ ನೀರನ್ನು ಕಂಡುಹಿಡಿಯಲು ಸಹಾಯ ಮಾಡಿತು. ಚಂದ್ರಯಾನ-2 ನಮಗೆ ಚಂದ್ರನ ಅತ್ಯುನ್ನತ ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ನೀಡಿತು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿತು. ನಾವು ದಾಖಲೆಯ ಸಮಯದಲ್ಲಿ ಕ್ರಯೋಜೆನಿಕ್ ಎಂಜಿನ್‌ಗಳನ್ನು ನಿರ್ಮಿಸಿದ್ದೇವೆ. ನಾವು ಒಂದೇ ಕಾರ್ಯಾಚರಣೆಯಲ್ಲಿ 100 ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ನಮ್ಮ ಉಡಾವಣಾ ವಾಹನಗಳಲ್ಲಿ 34 ರಾಷ್ಟ್ರಗಳಿಗೆ 400ಕ್ಕಿಂತ ಹೆಚ್ಚಿನ ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಈ ವರ್ಷ, ನಾವು 2 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಇಳಿಸಲಿದ್ದೇವೆ, ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.

 

ಸ್ನೇಹಿತರೆ,

ಭಾರತದ ಬಾಹ್ಯಾಕಾಶ ಪ್ರಯಾಣವು ಇತರರೊಂದಿಗೆ ಪೈಪೋಟಿ ನಡೆಸುತ್ತಿಲ್ಲ, ಅದರ ಬದಲಾಗಿ, ಇದು ಒಟ್ಟಿಗೆ ಎತ್ತರವನ್ನು ತಲುಪುತ್ತಿದೆ. ಒಟ್ಟಾಗಿ, ಮಾನವತೆಯ ಒಳಿತಿಗಾಗಿ ಬಾಹ್ಯಾಕಾಶವನ್ನು ಅನ್ವೇಷಿಸುವ ಸಾಮಾನ್ಯ ಗುರಿಯನ್ನು ನಾವು ಹಂಚಿಕೊಳ್ಳುತ್ತೇವೆ. ನಾವು ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಾಗಿ ಉಪಗ್ರಹವನ್ನು ಉಡಾಯಿಸಿದ್ದೇವೆ. ಈಗ, ನಮ್ಮ ಅಧ್ಯಕ್ಷತೆಯಲ್ಲಿ ಘೋಷಿಸಲಾದ ಜಿ-20 ಉಪಗ್ರಹ ಮಿಷನ್ ಜಾಗತಿಕ ದಕ್ಷಿಣಕ್ಕೆ ಉಡುಗೊರೆಯಾಗಲಿದೆ. ನಾವು ವೈಜ್ಞಾನಿಕ ಪರಿಶೋಧನೆಯ ಗಡಿಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಾ ನವೀಕೃತ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದೇವೆ. ನಮ್ಮ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಮಿಷನ್, 'ಗಗನಯಾನ', ನಮ್ಮ ರಾಷ್ಟ್ರದ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಎತ್ತಿ ತೋರಿಸುತ್ತದೆ. ಮುಂಬರುವ ವಾರಗಳಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿಯಾಗಿ ಇಸ್ರೋ-ನಾಸಾ ಮಿಷನ್‌ ಭಾಗವಾಗಿ ಭಾರತೀಯ ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಾರೆ. 2035ರ ಹೊತ್ತಿಗೆ, ಭಾರತೀಯ ಅಂತರಿಕ್ಷ ನಿಲ್ದಾಣವು ಸಂಶೋಧನೆ ಮತ್ತು ಜಾಗತಿಕ ಸಹಕಾರದಲ್ಲಿ ಹೊಸ ಎಲ್ಲೆಗಳನ್ನು ತೆರೆಯುತ್ತದೆ. 2040ರ ಹೊತ್ತಿಗೆ, ಭಾರತೀಯರ ಹೆಜ್ಜೆಗುರುತುಗಳು ಚಂದ್ರನ ಮೇಲೆ ಇರುತ್ತವೆ. ಮಂಗಳ ಮತ್ತು ಶುಕ್ರ ಕೂಡ ನಮ್ಮ ರಾಡಾರ್‌ನಲ್ಲಿವೆ.

ಭಾರತಕ್ಕೆ, ಬಾಹ್ಯಾಕಾಶ ಕ್ಷೇತ್ರವು ಪರಿಶೋಧನೆಗಾಗಿ ಮತ್ತು ಸಬಲೀಕರಣಕ್ಕಾಗಿ ಇದೆ.  ಇದು ಆಡಳಿತವನ್ನು ಸಬಲೀಕರಣಗೊಳಿಸುತ್ತದೆ, ಜೀವನೋಪಾಯವನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಮೀನುಗಾರರಿಗೆ ಎಚ್ಚರಿಕೆ ನೀಡುವುದರಿಂದ ಹಿಡಿದು ಗತಿಶಕ್ತಿ ವೇದಿಕೆಯವರೆಗೆ, ರೈಲ್ವೆ ಸುರಕ್ಷತೆಯಿಂದ ಹವಾಮಾನ ಮುನ್ಸೂಚನೆಯವರೆಗೆ, ನಮ್ಮ ಉಪಗ್ರಹಗಳು ಪ್ರತಿಯೊಬ್ಬ ಭಾರತೀಯನ ಕಲ್ಯಾಣವನ್ನು ನೋಡಿಕೊಳ್ಳುತ್ತವೆ. ನಾವು ನಮ್ಮ ಬಾಹ್ಯಾಕಾಶ ವಲಯವನ್ನು ನವೋದ್ಯಮಗಳು, ಉದ್ಯಮಿಗಳು ಮತ್ತು ಯುವ ಮನಸ್ಸುಗಳಿಗೆ ತೆರೆದಿಟ್ಟಿದ್ದೇವೆ. ಇಂದು ಭಾರತದಲ್ಲಿ 250ಕ್ಕೂ ಹೆಚ್ಚು ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳಿವೆ. ಅವು ಉಪಗ್ರಹ ತಂತ್ರಜ್ಞಾನ, ಪ್ರೊಪಲ್ಷನ್ ವ್ಯವಸ್ಥೆಗಳು, ಇಮೇಜಿಂಗ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಅತ್ಯಾಧುನಿಕ ಪ್ರಗತಿಗೆ ಕೊಡುಗೆ ನೀಡುತ್ತಿವೆ. ನಿಮಗೆ ತಿಳಿದಿರುವಂತೆ, ನಮ್ಮ ಅನೇಕ ಕಾರ್ಯಾಚರಣೆಗಳನ್ನು ಮಹಿಳಾ ವಿಜ್ಞಾನಿಗಳು ಮುನ್ನಡೆಸುತ್ತಿದ್ದಾರೆ ಎಂಬುದು ಇನ್ನಷ್ಟು ಸ್ಫೂರ್ತಿದಾಯಕ ವಿಷಯವಾಗಿದೆ.

 

ಸ್ನೇಹಿತರೆ,

ಭಾರತದ ಬಾಹ್ಯಾಕಾಶ ದೃಷ್ಟಿಕೋನವು 'ವಸುಧೈವ ಕುಟುಂಬಕಂ' ಎಂಬ ಪ್ರಾಚೀನ ಜ್ಞಾನದಲ್ಲಿ ನೆಲೆಗೊಂಡಿದೆ. ಅಂದರೆ, ಜಗತ್ತೇ ಒಂದೇ ಕುಟುಂಬವಿದ್ದಂತೆ. ನಾವು ನಮ್ಮ ಸ್ವಂತ ಬೆಳವಣಿಗೆಗಾಗಿ ಮಾತ್ರವಲ್ಲದೆ, ಜಾಗತಿಕ ಜ್ಞಾನವನ್ನು ಉತ್ಕೃಷ್ಟಗೊಳಿಸಲು, ಸಾಮಾನ್ಯ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲು ಶ್ರಮಿಸುತ್ತಿದ್ದೇವೆ. ಭಾರತವು ಒಟ್ಟಾಗಿ ಕನಸು ಕಾಣುವುದು, ಒಟ್ಟಾಗಿ ನಿರ್ಮಿಸುವುದು ಮತ್ತು ಒಟ್ಟಾಗಿ ನಕ್ಷತ್ರಗಳನ್ನು ತಲುಪುವುದನ್ನು ಇದು ಪ್ರತಿನಿಧಿಸುತ್ತದೆ. ಉತ್ತಮ ನಾಳೆಗಾಗಿ ವಿಜ್ಞಾನ ಮತ್ತು ಹಂಚಿಕೆಯ ಕನಸುಗಳಿಂದ ಮಾರ್ಗದರ್ಶನ ಪಡೆದು, ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯ ಬರೆಯೋಣ. ನಿಮ್ಮೆಲ್ಲರಿಗೂ ಭಾರತದಲ್ಲಿ ತುಂಬಾ ಆಹ್ಲಾದಕರ ಮತ್ತು ಉತ್ಪಾದಕ ಎನಿಸುವ ವಾಸ್ತವ್ಯ ಸಿಗಲಿ ಎಂದು ನಾನು ಬಯಸುತ್ತೇನೆ.

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India stands tall in shaky world economy as Fitch lifts FY26 growth view to 7.5%

Media Coverage

India stands tall in shaky world economy as Fitch lifts FY26 growth view to 7.5%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮಾರ್ಚ್ 2026
March 14, 2026

Heartening Resolve Meets Bold Action: PM Modi's Transformative Push for a Developed Assam.