1.25 ಲಕ್ಷಕ್ಕೂ ಅಧಿಕ ಪಿಎಂ ಕಿಸಾನ್ ಸಂಮೃದ್ಧಿ ಕೇಂದ್ರಗಳ ಲೋಕಾರ್ಪಣೆ
ಪಿಎಂ-ಕಿಸಾನ್ ಯೋಜನೆಯಡಿ 17,000 ಕೋಟಿ ರೂ. ಗಳ 14ನೇ ಕಂತು ಬಿಡುಗಡೆ
1600 ರೈತ ಉತ್ಪನ್ನಗಳ ಸಂಸ್ಥೆಗಳನ್ನು ಡಿಜಿಟಲ್ ವಹಿವಾಟಿನ ಮುಕ್ತ ಜಾಲ (ಒಎನ್ ಡಿಸಿ) ವೇದಿಕೆಗೆ ತರುವುದಕ್ಕೆ ಚಾಲನೆ
ಸಲ್ಫರ್ ಲೇಪಿತ ಯೂರಿಯಾ- ಯೂರಿಯಾ ಗೋಲ್ಡ್ ಬಿಡುಗಡೆ
5 ಹೊಸ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ ಮತ್ತು 7 ಹೊಸ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ
“ರೈತರ ನೋವು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಸರ್ಕಾರ ಕೇಂದ್ರದಲ್ಲಿದೆ’’
“ಯೂರಿಯಾ ಬೆಲೆಗಳಿಂದ ನಮ್ಮ ರೈತರಿಂದ ತೊಂದರೆಗಳಾಗಲು ಸರ್ಕಾರ ಬಿಡುವುದಿಲ್ಲ. ರೈತರು ಯೂರಿಯಾ ಖರೀದಿಗೆ ಹೋದರೆ ಮೋದಿ ಅವರ ಗ್ಯಾರಂಟಿ ಇದೆ ಎಂಬ ನಂಬಿಕೆ ಅವರಲ್ಲಿರಬೇಕು’’
“ಗ್ರಾಮಗಳು ವಿಕಾಸವಾದರೆ ಮಾತ್ರ ಭಾರತ ವಿಕಸಿತವಾಗುತ್ತದೆ’’
“ರಾಜಸ್ಥಾನದಲ್ಲಿ ಆಧುನಿಕ ಮೂಲಸೌಕರ್ಯ ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ’’
“ನಾವೆಲ್ಲರೂ ಸೇರಿ ರಾಜಸ್ಥಾನದ ಪರಂಪರೆ ಮತ್ತು ಹೆಮ್ಮೆಗೆ ಇಡೀ ವಿಶ್ವದಲ್ಲಿಯೇ ಹೊಸ ಹೆಗ್ಗುರುತು ನೀಡೋಣ’’

ರಾಜಸ್ಥಾನದ ರಾಜ್ಯಪಾಲ ಶ್ರೀ ಕಲ್ರಾಜ್ ಮಿಶ್ರಾ ಜೀ, ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ಜೀ ತೋಮರ್, ಇತರ ಎಲ್ಲ ಸಚಿವರು, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳು, ಶಾಸಕರು, ಇತರ ಎಲ್ಲಾ ಗಣ್ಯರು ಮತ್ತು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿಕೊಂಡ ದೇಶದ ವಿವಿಧ ಭಾಗಗಳ ಕೋಟ್ಯಂತರ ರೈತರು! ರಾಜಸ್ಥಾನದ ಭೂಮಿಯಿಂದ ದೇಶದ ಕೋಟ್ಯಂತರ ರೈತರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು, ರಾಜಸ್ಥಾನದ ನನ್ನ ಪ್ರೀತಿಯ ಸಹೋದರ ಸಹೋದರಿಯರು ಸಹ ಈ ಮಹತ್ವದ ಘಟನೆಯ ಭವ್ಯತೆಯನ್ನು ಹೆಚ್ಚಿಸುತ್ತಿದ್ದಾರೆ.

ಖಾತು ಶ್ಯಾಮ್ ಜಿ ಅವರ ಭೂಮಿ ದೇಶದಾದ್ಯಂತದ ಭಕ್ತರಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ತುಂಬುತ್ತದೆ. ಯೋಧರ ಭೂಮಿಯಾದ ಶೇಖಾವತಿಯಿಂದ ಇಂದು ರಾಷ್ಟ್ರಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವ ಅವಕಾಶ ನನಗೆ ದೊರೆತಿರುವುದು ನನ್ನ ಅದೃಷ್ಟ. ಇಂದು, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಭಾಗವಾಗಿ ಸುಮಾರು 18,000 ಕೋಟಿ ರೂಪಾಯಿಗಳನ್ನು ಇಲ್ಲಿಂದ ಲಕ್ಷಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಈ ಮೊತ್ತವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.

ಇಂದು ದೇಶದಲ್ಲಿ 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಸ್ಥಾಪಿಸಲಾದ ಈ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು ಕೋಟ್ಯಂತರ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿವೆ. ಇಂದು, 1,500 ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳು (ಎಫ್ ಪಿಒಗಳು) ಮತ್ತು ನಮ್ಮ ರೈತರಿಗಾಗಿ 'ಓಪನ್ ನೆಟ್ ವರ್ಕ್  ಫಾರ್ ಡಿಜಿಟಲ್ ಕಾಮರ್ಸ್ ' (ಒಎನ್ ಡಿಸಿ) ಅನ್ನು ಸಹ ಪ್ರಾರಂಭಿಸಲಾಗಿದೆ. ಇದು ದೇಶದ ಯಾವುದೇ ಮೂಲೆಯಲ್ಲಿ ಕುಳಿತಿರುವ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರುಕಟ್ಟೆಗಳಿಗೆ ಮಾರಾಟ ಮಾಡಲು ಸುಲಭಗೊಳಿಸುತ್ತದೆ.

ಇಂದು, ದೇಶದ ರೈತರಿಗಾಗಿ ಹೊಸ 'ಯೂರಿಯಾ ಗೋಲ್ಡ್' ಅನ್ನು ಸಹ ಪ್ರಾರಂಭಿಸಲಾಗಿದೆ. ಇದಲ್ಲದೆ, ರಾಜಸ್ಥಾನದ ವಿವಿಧ ನಗರಗಳು ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಏಕಲವ್ಯ ಮಾದರಿ ಶಾಲೆಗಳ ಉಡುಗೊರೆಯನ್ನು ಸ್ವೀಕರಿಸಿವೆ. ನಾನು ದೇಶದ ಜನರಿಗೆ, ರಾಜಸ್ಥಾನದ ಜನರಿಗೆ ಮತ್ತು ವಿಶೇಷವಾಗಿ ನನ್ನ ರೈತ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ರಾಜಸ್ಥಾನದ ಸಿಕಾರ್ ಮತ್ತು ಶೇಖಾವತಿ ಪ್ರದೇಶವು ನಿಜವಾಗಿಯೂ ರೈತರ ಭದ್ರಕೋಟೆಯಾಗಿದೆ. ಇಲ್ಲಿನ ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ಅಡ್ಡಿಯಾಗುವ ಯಾವುದೇ ಅಡೆತಡೆಗಳಿಲ್ಲ ಎಂದು ಸದಾ ಸಾಬೀತುಪಡಿಸಿದ್ದಾರೆ. ನೀರಿನ ಕೊರತೆಯ ಹೊರತಾಗಿಯೂ, ಇಲ್ಲಿನ ರೈತರು ಮಣ್ಣಿನಿಂದ ಸಮೃದ್ಧ ಬೆಳೆಗಳನ್ನು ಕೊಯ್ಲು ಮಾಡಿದ್ದಾರೆ. ರೈತರ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಮಣ್ಣಿನಿಂದ ಚಿನ್ನವನ್ನು ಹೊರತೆಗೆಯಬಹುದು. ಅದಕ್ಕಾಗಿಯೇ ನಮ್ಮ ಸರ್ಕಾರ ದೇಶದ ರೈತರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಹಲವು ದಶಕಗಳ ನಂತರ, ಇಂದು ನಾವು ದೇಶದಲ್ಲಿ ರೈತರ ನೋವು ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳುವ ಸರ್ಕಾರವನ್ನು ಹೊಂದಿದ್ದೇವೆ. ಆದ್ದರಿಂದ, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ಸರ್ಕಾರವು ರೈತರ ಹಿತದೃಷ್ಟಿಯಿಂದ ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ರೈತರಿಗೆ ಬೀಜಗಳಿಂದ ಮಾರುಕಟ್ಟೆಗಳವರೆಗೆ ಹೊಸ ವ್ಯವಸ್ಥೆಗಳನ್ನು ಸ್ಥಾಪಿಸಿದ್ದೇವೆ. ನಾವು 2015 ರಲ್ಲಿ ರಾಜಸ್ಥಾನದ ಸೂರತ್ ಘರ್ ನಿಂದ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ನನಗೆ ನೆನಪಿದೆ. ಈ ಯೋಜನೆಯಡಿ ನಾವು ದೇಶಾದ್ಯಂತ ರೈತರಿಗೆ ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ಒದಗಿಸಿದ್ದೇವೆ. ಈ ಕಾರ್ಡ್ ಗಳಿಂದಾಗಿಯೇ ರೈತರು ಈಗ ತಮ್ಮ ಮಣ್ಣಿನ ಆರೋಗ್ಯವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ.

ರಾಜಸ್ಥಾನದ ಭೂಮಿಯಿಂದ ರೈತರಿಗಾಗಿ ಮತ್ತೊಂದು ಮಹತ್ವದ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ. ಇಂದು, 1.25 ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಎಲ್ಲಾ ಕೇಂದ್ರಗಳು ನಿಜವಾಗಿಯೂ ರೈತರ ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ. ಒಂದು ರೀತಿಯಲ್ಲಿ, ಅವು ರೈತರಿಗೆ ಏಕ-ನಿಲುಗಡೆ ಕೇಂದ್ರಗಳಾಗಿವೆ.

ರೈತ ಸಹೋದರ ಸಹೋದರಿಯರು ಕೃಷಿಗೆ ಸಂಬಂಧಿಸಿದ ಸರಕುಗಳನ್ನು ಖರೀದಿಸಲು ಮತ್ತು ಇತರ ಅಗತ್ಯಗಳಿಗಾಗಿ ವಿವಿಧ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಈಗ, ನೀವು ಇನ್ನು ಮುಂದೆ ಅಂತಹ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ರೈತರಿಗೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, ಈ ಕೇಂದ್ರಗಳು ಕೃಷಿಗೆ ಸಂಬಂಧಿಸಿದ ಉಪಕರಣಗಳು ಮತ್ತು ಇತರ ಯಂತ್ರಗಳನ್ನು ಒದಗಿಸುತ್ತವೆ. ಈ ಕೇಂದ್ರಗಳು ರೈತರಿಗೆ ಕೃಷಿಗೆ ಸಂಬಂಧಿಸಿದ ಆಧುನಿಕ ಮಾಹಿತಿಯನ್ನು ಸಹ ಒದಗಿಸುತ್ತವೆ. ಸರ್ಕಾರದ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯಿಂದಾಗಿ ನನ್ನ ರೈತ ಸಹೋದರ ಸಹೋದರಿಯರು ಗಮನಾರ್ಹ ನಷ್ಟವನ್ನು ಅನುಭವಿಸುತ್ತಿರುವುದನ್ನು ನಾನು ನೋಡಿದ್ದೇನೆ. ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಈಗ ಪ್ರತಿಯೊಂದು ಯೋಜನೆಯ ಬಗ್ಗೆ ಸಮಯೋಚಿತ ಮಾಹಿತಿಯ ವಿಶ್ವಾಸಾರ್ಹ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.

 

ಮತ್ತು ಸ್ನೇಹಿತರೇ,

ಇದು ಕೇವಲ ಆರಂಭ ಮತ್ತು ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ನಾನು ನನ್ನ ಸಹ ರೈತರನ್ನು ಒತ್ತಾಯಿಸುತ್ತೇನೆ. ನೀವು ಕೃಷಿಗೆ ಸಂಬಂಧಿಸಿದ ಏನನ್ನೂ ಖರೀದಿಸುವ ಅಗತ್ಯವಿಲ್ಲದಿದ್ದರೂ, ನೀವು ಮಾರುಕಟ್ಟೆಗೆ ಹೋಗಿದ್ದರೆ ಮತ್ತು ಪಟ್ಟಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರವಿದ್ದರೆ, ಅಲ್ಲಿಗೆ ಭೇಟಿ ನೀಡಿ. ಅಲ್ಲಿ ಏನಾಗುತ್ತಿದೆ ನೋಡಿ. ನಮ್ಮ ತಾಯಂದಿರು ಮತ್ತು ಸಹೋದರಿಯರು ತರಕಾರಿಗಳನ್ನು ಖರೀದಿಸಲು ಹೋದಾಗ ನೀವು ಗಮನಿಸಿರಬಹುದು ಆದರೆ ಅವರು ಸೀರೆ ಅಂಗಡಿಯನ್ನು ಕಂಡರೆ, ಅವರು ಸೀರೆಯನ್ನು ಖರೀದಿಸುವ ಅಗತ್ಯವಿಲ್ಲದಿದ್ದರೂ ಸಹ, ಅವರು ಇನ್ನೂ ಅಲ್ಲಿಗೆ ಭೇಟಿ ನೀಡುತ್ತಾರೆ. ಹೊಸತೇನಿದೆ, ಯಾವ ವೈವಿಧ್ಯತೆ ಲಭ್ಯವಿದೆ ಎಂದು ಅವರು ತಿಳಿಯಲು ಬಯಸುತ್ತಾರೆ. ನನ್ನ ರೈತ ಸಹೋದರ ಸಹೋದರಿಯರು ಸಹ ಸ್ವಲ್ಪ ಸಮಯ ತೆಗೆದುಕೊಂಡು ಈ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು - ನೀವು ಪಟ್ಟಣಕ್ಕೆ ಹೋದಾಗ ಮತ್ತು ಕಿಸಾನ್ ಸಮೃದ್ಧಿ ಕೇಂದ್ರವಿದ್ದಾಗಲೆಲ್ಲಾ, ಅಲ್ಲಿಗೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ. ಪ್ರತಿಯೊಂದು ವಿಧವನ್ನು ಪರಿಶೀಲಿಸಿ, ಹೊಸದನ್ನು ನೋಡಿ. ನೀವು ಅದರಿಂದ ಅಪಾರ ಪ್ರಯೋಜನಗಳನ್ನು ಪಡೆಯುತ್ತೀರಿ. ಸ್ನೇಹಿತರೇ, ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 1.75 ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಸ್ನೇಹಿತರೇ,

ಕೇಂದ್ರದಲ್ಲಿನ ಪ್ರಸ್ತುತ ಸರ್ಕಾರವು ರೈತರ ಖರ್ಚುಗಳನ್ನು ಹಂಚಿಕೊಳ್ಳುವ ಮೂಲಕ ಅವರ ವೆಚ್ಚಗಳನ್ನು ಕಡಿಮೆ ಮಾಡಲು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಯೋಜನೆಯಾಗಿದ್ದು, ಇದರಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣವನ್ನು ವರ್ಗಾಯಿಸಲಾಗುತ್ತದೆ. ಇಂದಿನ 14 ನೇ ಕಂತನ್ನು ಸೇರಿಸಿದರೆ, 2.6 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ. ಈ ಮೊತ್ತವು ವಿವಿಧ ಸಣ್ಣ ವೆಚ್ಚಗಳನ್ನು ನಿರ್ವಹಿಸಲು ರೈತರಿಗೆ ಗಮನಾರ್ಹವಾಗಿ ಸಹಾಯ ಮಾಡಿದೆ.

ನಮ್ಮ ಸರ್ಕಾರವು ನಮ್ಮ ರೈತ ಸಹೋದರರ ಹಣವನ್ನು ಹೇಗೆ ಉಳಿಸುತ್ತಿದೆ ಎಂಬುದಕ್ಕೆ ಯೂರಿಯಾ ಬೆಲೆಗಳು ಒಂದು ಉದಾಹರಣೆಯಾಗಿದೆ. ಮತ್ತು ದೇಶಾದ್ಯಂತದ ರೈತರು ದಯವಿಟ್ಟು ನನ್ನ ಮಾತನ್ನು ಎಚ್ಚರಿಕೆಯಿಂದ ಆಲಿಸಿ. ಕೊರೋನಾ ವಿನಾಶಕಾರಿ ಸಾಂಕ್ರಾಮಿಕ ರೋಗವು ಹೇಗೆ ಅಪ್ಪಳಿಸಿತು, ನಂತರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಮಾರುಕಟ್ಟೆಗಳಲ್ಲಿ ಗಮನಾರ್ಹ ಏರಿಳಿತವನ್ನು ಉಂಟುಮಾಡಿತು ಎಂದು ನಿಮಗೆ ತಿಳಿದಿದೆ. ಇದು ವಿಶೇಷವಾಗಿ ರಸಗೊಬ್ಬರ ಕ್ಷೇತ್ರದಲ್ಲಿ ತೀವ್ರ ಅಡೆತಡೆಗಳಿಗೆ ಕಾರಣವಾಯಿತು. ಆದರೆ ಈ ಎಲ್ಲದರ ಪರಿಣಾಮ ನಮ್ಮ ರೈತರ ಮೇಲೆ ಬೀಳಲು ನಮ್ಮ ಸರ್ಕಾರ ಬಿಡಲಿಲ್ಲ.

ರಸಗೊಬ್ಬರಗಳ ಬೆಲೆಗಳ ಬಗ್ಗೆ ಸತ್ಯವನ್ನು ದೇಶದ ನನ್ನ ಎಲ್ಲಾ ಸಹವರ್ತಿ ರೈತರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಇಂದು, ನಾವು ಭಾರತದ ರೈತರಿಗೆ 266 ರೂ.ಗಳಿಗೆ ನೀಡುವ ಯೂರಿಯಾ ಚೀಲ, ಅದೇ ಚೀಲ ಯೂರಿಯಾ ನಮ್ಮ ನೆರೆಯ ದೇಶ ಪಾಕಿಸ್ತಾನದ ರೈತರಿಗೆ ಸುಮಾರು 800 ರೂ.ಗೆ ಲಭ್ಯವಿದೆ. ಅಂತೆಯೇ, ನಾವು ಭಾರತದ ರೈತರಿಗೆ 266 ರೂ.ಗಳಿಗೆ ನೀಡುವ ಯೂರಿಯಾ ಚೀಲ, ಅದೇ ಚೀಲ ಯೂರಿಯಾ ಬಾಂಗ್ಲಾದೇಶದ ರೈತರಿಗೆ ಸುಮಾರು 720 ರೂ.ಗಳಿಗೆ ಲಭ್ಯವಿದೆ. ನಾವು ಭಾರತದ ರೈತರಿಗೆ 266 ರೂ.ಗೆ ನೀಡುವ ಯೂರಿಯಾ ಚೀಲ, ಅದೇ ಚೀಲ ಯೂರಿಯಾದ ಬೆಲೆ ಚೀನಾದ ರೈತರಿಗೆ 2100 ರೂ. ಮತ್ತು ಈ ದಿನಗಳಲ್ಲಿ ಅಮೇರಿಕಾದಲ್ಲಿ ಈ ಯೂರಿಯಾ ಚೀಲದ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ? ನೀವು 300 ರೂ.ಗಿಂತ ಕಡಿಮೆ ಪಾವತಿಸುವ ಅದೇ ಚೀಲ ಯೂರಿಯಾವನ್ನು ಅಮೆರಿಕದ ರೈತರಿಗೆ 3,000 ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 300 ರಿಂದ 3,000 ರೂ.ಗಳ ನಡುವಿನ ವ್ಯತ್ಯಾಸವನ್ನು ನೀವು ನೋಡಬಹುದು.

 

ಯೂರಿಯಾ ಬೆಲೆಯಿಂದಾಗಿ ಭಾರತೀಯ ರೈತರು ತೊಂದರೆ ಅನುಭವಿಸಲು ನಮ್ಮ ಸರ್ಕಾರ ಬಿಡುವುದಿಲ್ಲ. ದೇಶದ ರೈತರು ಪ್ರತಿದಿನ ಈ ಸತ್ಯವನ್ನು ನೋಡುತ್ತಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಅವರು ಯೂರಿಯಾ ಖರೀದಿಸಲು ಹೋದಾಗ, ಇದು ನರೇಂದ್ರ ಮೋದಿ ಅವರ ಗ್ಯಾರಂಟಿ ಎಂದು ಅವರಿಗೆ ಸಂಪೂರ್ಣ ವಿಶ್ವಾಸವಿದೆ. ಗ್ಯಾರಂಟಿ ಎಂದರೇನು ಎಂದು ನೀವು ರೈತರನ್ನು ಕೇಳಿದರೆ, ನೀವು ಅದರ ಬಗ್ಗೆ ತಿಳಿದುಕೊಳ್ಳುತ್ತೀರಿ.

ಸ್ನೇಹಿತರೇ,

ರಾಜಸ್ಥಾನದಲ್ಲಿ, ನೀವೆಲ್ಲರೂ ರೈತರು ನಿಮ್ಮ ಕಠಿಣ ಪರಿಶ್ರಮದಿಂದ ಬಾಜ್ರಾ (ರಾಗಿ) ನಂತಹ ಸಿರಿ ಧಾನ್ಯಗಳನ್ನು ಬೆಳೆಯುತ್ತೀರಿ. ಮತ್ತು ನಮ್ಮ ದೇಶದ ವಿವಿಧ ಮೂಲೆಗಳಲ್ಲಿ, ವಿವಿಧ ರೀತಿಯ ಸಿರಿ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಈಗ ನಮ್ಮ ಸರ್ಕಾರವು ಈ ಒರಟು ಧಾನ್ಯಗಳಿಗೆ 'ಶ್ರೀ ಅನ್ನ' ಮಾನ್ಯತೆ ನೀಡಿದೆ. ಎಲ್ಲಾ ಸಿರಿ ಧಾನ್ಯಗಳನ್ನು 'ಶ್ರೀ ಅನ್ನ' ಹೆಸರಿನಲ್ಲಿ ಗುರುತಿಸಲಾಗುವುದು ಮತ್ತು ನಮ್ಮ ಸರ್ಕಾರವು ಭಾರತದ ಸಿರಿ ಧಾನ್ಯಗಳನ್ನು ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದೆ. ಸರ್ಕಾರದ ಪ್ರಯತ್ನದಿಂದಾಗಿ ದೇಶದಲ್ಲಿ 'ಶ್ರೀ ಅನ್ನ' ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತು ಹೆಚ್ಚುತ್ತಿದೆ. ಇತ್ತೀಚೆಗೆ, ಅಧ್ಯಕ್ಷ ಬೈಡನ್ ಆಯೋಜಿಸಿದ್ದ ಔತಣಕೂಟಕ್ಕಾಗಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಅಲ್ಲಿಯೂ ತಟ್ಟೆಯಲ್ಲಿ ನಮ್ಮ ಸಿರಿ ಧಾನ್ಯಗಳ ಖಾದ್ಯವಿದೆ ಎಂದು ನೋಡಿ ನನಗೆ ಸಂತೋಷವಾಯಿತು.

ಸ್ನೇಹಿತರೇ,

ಈಗ ನಡೆಯುತ್ತಿರುವ ಪ್ರಯತ್ನಗಳು ನಮ್ಮ ದೇಶಕ್ಕೆ ಮತ್ತು ಸಿರಿ ಧಾನ್ಯಗಳು ಮತ್ತು 'ಶ್ರೀ ಅನ್ನ' ಬೆಳೆಗಳನ್ನು ಬೆಳೆಯುವಲ್ಲಿ ತೊಡಗಿರುವ ನಮ್ಮ ರಾಜಸ್ಥಾನದ ಸಣ್ಣ ರೈತರಿಗೆ ಅಪಾರ ಪ್ರಯೋಜನಗಳನ್ನು ತರುತ್ತಿವೆ. ದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಹಲವಾರು ಉಪಕ್ರಮಗಳು ರೈತರ ಜೀವನದಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಿವೆ.

ರೈತರು,

ಭಾರತದ ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಅದಕ್ಕಾಗಿಯೇ ಇಂದು ನಮ್ಮ ಸರ್ಕಾರವು ನಗರಗಳಲ್ಲಿ ಲಭ್ಯವಿರುವಂತೆಯೇ ಭಾರತದ ಹಳ್ಳಿಗಳಿಗೆ ಎಲ್ಲಾ ಸೌಲಭ್ಯಗಳನ್ನು ತರಲು ಕೆಲಸ ಮಾಡುತ್ತಿದೆ. ಒಂದು ಕಾಲದಲ್ಲಿ ದೇಶದ ಗಮನಾರ್ಹ ಜನಸಂಖ್ಯೆಯು ಆರೋಗ್ಯ ಸೇವೆಗಳಿಂದ ವಂಚಿತವಾಗಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕೋಟ್ಯಂತರ ಜನರು ವಿಧಿಯನ್ನು ಅವಲಂಬಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಉತ್ತಮ ಆಸ್ಪತ್ರೆಗಳು ದೆಹಲಿ, ಜೈಪುರ ಅಥವಾ ಇತರ ದೊಡ್ಡ ನಗರಗಳಲ್ಲಿ ಮಾತ್ರ ಇವೆ ಎಂದು ಭಾವಿಸಲಾಗಿತ್ತು. ನಾವು ಈ ಪರಿಸ್ಥಿತಿಯನ್ನು ಸಹ ಬದಲಾಯಿಸುತ್ತಿದ್ದೇವೆ. ಇಂದು, ಹೊಸ ಏಮ್ಸ್ (ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮತ್ತು ಹೊಸ ವೈದ್ಯಕೀಯ ಕಾಲೇಜುಗಳನ್ನು ದೇಶದ ಪ್ರತಿಯೊಂದು ಭಾಗದಲ್ಲೂ ಸ್ಥಾಪಿಸಲಾಗುತ್ತಿದೆ.

 

ಈ ಪ್ರಯತ್ನಗಳ ಪರಿಣಾಮವಾಗಿ, ಇಂದು ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 700 ಮೀರಿದೆ. 8-9 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಕೇವಲ 10 ವೈದ್ಯಕೀಯ ಕಾಲೇಜುಗಳಿದ್ದವು. ಇಂದು, ರಾಜಸ್ಥಾನದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 35 ಕ್ಕೆ ಏರಿದೆ. ಇದು ನಮ್ಮ ಸ್ವಂತ ಜಿಲ್ಲೆಗಳಲ್ಲಿ ಮತ್ತು ಸುತ್ತಮುತ್ತಲಿನ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಈ ಸಂಸ್ಥೆಗಳ ಮೂಲಕ ಹೆಚ್ಚಿನ ಸಂಖ್ಯೆಯ ವೈದ್ಯರನ್ನು ಉತ್ಪಾದಿಸುತ್ತದೆ. ಈ ವೈದ್ಯರು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸುಧಾರಿತ ಆರೋಗ್ಯ ಸೇವೆಗಳಿಗೆ ಅಡಿಪಾಯವಾಗುತ್ತಿದ್ದಾರೆ.

ಉದಾಹರಣೆಗೆ, ಇಂದು ತೆರೆಯಲಾದ ಹೊಸ ವೈದ್ಯಕೀಯ ಕಾಲೇಜುಗಳು ಬರಾನ್, ಬುಂಡಿ, ಟೋಂಕ್, ಸವಾಯಿ ಮಾಧೋಪುರ್, ಕರೌಲಿ, ಜುಂಜುನು, ಜೈಸಲ್ಮೇರ್, ಧೋಲ್ಪುರ್, ಚಿತ್ತೋರ್ಗಢ್, ಸಿರೋಹಿ ಮತ್ತು ಸಿಕಾರ್ ಸೇರಿದಂತೆ ಅನೇಕ ಪ್ರದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ. ಜನರು ಇನ್ನು ಮುಂದೆ ವೈದ್ಯಕೀಯ ಚಿಕಿತ್ಸೆಗಾಗಿ ಜೈಪುರ ಅಥವಾ ದೆಹಲಿಗೆ ಪ್ರಯಾಣಿಸಬೇಕಾಗಿಲ್ಲ. ಉತ್ತಮ ಆಸ್ಪತ್ರೆಗಳು ಈಗ ನಿಮ್ಮ ಮನೆಗಳ ಬಳಿ ಲಭ್ಯವಿರುತ್ತವೆ, ಮತ್ತು ಬಡವರ ಪುತ್ರರು ಮತ್ತು ಹೆಣ್ಣುಮಕ್ಕಳು ಸಹ ಈ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯರಾಗಲು ಅವಕಾಶವಿದೆ. ಇದಲ್ಲದೆ, ನಮ್ಮ ಸರ್ಕಾರವು ವೈದ್ಯಕೀಯ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಸಲು ದಾರಿ ಮಾಡಿಕೊಟ್ಟಿದೆ. ಈಗ, ಇಂಗ್ಲಿಷ್ ಗೊತ್ತಿಲ್ಲದ ಕಾರಣ ಬಡ ವ್ಯಕ್ತಿಯ ಯಾವುದೇ ಮಗ ಅಥವಾ ಮಗಳು ವೈದ್ಯರಾಗಲು ಯಾವುದೇ ಅಡೆತಡೆ ಇರುವುದಿಲ್ಲ. ಮತ್ತು ಇದು ನರೇಂದ್ರ ಮೋದಿ ಅವರ ಗ್ಯಾರಂಟಿಯೂ ಆಗಿದೆ.

ಸಹೋದರ ಸಹೋದರಿಯರೇ,

ದಶಕಗಳಿಂದ, ನಮ್ಮ ಹಳ್ಳಿಗಳು ಮತ್ತು ದೀನದಲಿತರು ಸಹ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆಗಳು ಇಲ್ಲದ ಕಾರಣ ಹಿಂದುಳಿದಿದ್ದರು. ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಮಕ್ಕಳು ದೊಡ್ಡ ಕನಸುಗಳನ್ನು ಕಾಣುತ್ತಿದ್ದರು, ಆದರೆ ಆ ಕನಸುಗಳನ್ನು ಈಡೇರಿಸಲು ಅವರಿಗೆ ಯಾವುದೇ ಮಾರ್ಗವಿರಲಿಲ್ಲ. ನಾವು ಶಿಕ್ಷಣಕ್ಕಾಗಿ ಬಜೆಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿದ್ದೇವೆ, ಸಂಪನ್ಮೂಲಗಳನ್ನು ಸುಧಾರಿಸಿದ್ದೇವೆ ಮತ್ತು ಏಕಲವ್ಯ ಮಾದರಿ ಬುಡಕಟ್ಟು ಶಾಲೆಗಳನ್ನು ತೆರೆದಿದ್ದೇವೆ. ಇದು ನಮ್ಮ ಬುಡಕಟ್ಟು ಯುವಕರಿಗೆ ಅಪಾರ ಪ್ರಯೋಜನಗಳನ್ನು ತಂದಿದೆ.

 

ಸ್ನೇಹಿತರೇ,

ಕನಸುಗಳು ಮಹತ್ವಾಕಾಂಕ್ಷೆಯದ್ದಾಗ ಯಶಸ್ಸು ಮಹತ್ವದ್ದಾಗಿದೆ. ರಾಜಸ್ಥಾನವು ಶತಮಾನಗಳಿಂದ ತನ್ನ ಭವ್ಯತೆಯಿಂದ ಜಗತ್ತನ್ನು ಬೆರಗುಗೊಳಿಸಿದ ರಾಜ್ಯವಾಗಿದೆ. ಆ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ರಾಜಸ್ಥಾನವನ್ನು ಆಧುನಿಕ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ, ರಾಜಸ್ಥಾನದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ರಚಿಸುವುದು ನಮ್ಮ ಆದ್ಯತೆಯಾಗಿದೆ. ಇತ್ತೀಚೆಗೆ, ರಾಜ್ಯದಲ್ಲಿ ಎರಡು ಹೈಟೆಕ್ ಎಕ್ಸ್ ಪ್ರೆಸ್ ಗಳನ್ನು ಉದ್ಘಾಟಿಸಲಾಯಿತು - ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ನಿರ್ಣಾಯಕ ವಿಭಾಗ ಮತ್ತು ಅಮೃತಸರ-ಜಾಮ್ ನಗರ್ ಎಕ್ಸ್ ಪ್ರೇಸ್ ವೇ, ಇವೆರಡೂ ರಾಜಸ್ಥಾನದ ಅಭಿವೃದ್ಧಿಯ ಕಥೆಗೆ ಹೊಸ ಅಧ್ಯಾಯಗಳನ್ನು ಸೇರ್ಪಡೆಗೊಳಿಸುತ್ತವೆ. ರಾಜಸ್ಥಾನದ ಜನರಿಗೆ ವಂದೇ ಭಾರತ್ ರೈಲನ್ನು ಉಡುಗೊರೆಯಾಗಿ ನೀಡಲಾಗಿದೆ.
ಭಾರತ ಸರ್ಕಾರವು ಪ್ರಸ್ತುತ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ, ಇದು ರಾಜಸ್ಥಾನಕ್ಕೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ' ಪಧರೋ ಮಾರೆ ದೇಶ್ ' ಎಂಬ ಘೋಷಣೆಯೊಂದಿಗೆ ನೀವು ಪ್ರವಾಸಿಗರನ್ನು ಆಹ್ವಾನಿಸಿದಾಗ, ಎಕ್ಸ್ ಪ್ರೆಸ್ ವೇಗಳು ಮತ್ತು ಉತ್ತಮ ರೈಲು ಸೌಲಭ್ಯಗಳು ಅವರನ್ನು ಸ್ವಾಗತಿಸುತ್ತವೆ.

ನಮ್ಮ ಸರ್ಕಾರವು ಸ್ವದೇಶ ದರ್ಶನ ಯೋಜನೆಯಡಿ ಖತುಶ್ಯಾಮ್ ಜಿ ದೇವಾಲಯದಲ್ಲಿನ ಸೌಲಭ್ಯಗಳನ್ನು ವಿಸ್ತರಿಸಿದೆ. ಶ್ರೀ ಖತುಶ್ಯಾಮ್ ಅವರ ಆಶೀರ್ವಾದದಿಂದ ರಾಜಸ್ಥಾನದ ಅಭಿವೃದ್ಧಿ ಇನ್ನೂ ಹೆಚ್ಚಿನ ವೇಗವನ್ನು ಪಡೆಯುತ್ತದೆ ಎಂದು ನಾನು ನಂಬುತ್ತೇನೆ. ನಾವೆಲ್ಲರೂ ಇಡೀ ಜಗತ್ತಿನಲ್ಲಿ ರಾಜಸ್ಥಾನದ ಹೆಮ್ಮೆ ಮತ್ತು ಪರಂಪರೆಗೆ ಹೊಸ ಗುರುತನ್ನು ನೀಡುತ್ತೇವೆ.

ಸ್ನೇಹಿತರೇ,

ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂದು, ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು, ಆದರೆ ಆ ಸಮಸ್ಯೆಯಿಂದಾಗಿ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಅವರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ನಾನು ಈ ಎಲ್ಲಾ ಪ್ರಮುಖ ಬೆಳವಣಿಗೆಗಳು ಮತ್ತು ಉಪಕ್ರಮಗಳನ್ನು ರೈತರು ಮತ್ತು ರಾಜಸ್ಥಾನದ ಜನರ ಕಲ್ಯಾಣಕ್ಕಾಗಿ ಸಮರ್ಪಿಸುತ್ತೇನೆ ಮತ್ತು ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸುತ್ತೇನೆ. ಇದರೊಂದಿಗೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ತುಂಬಾ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM announces exam reform task force, Infosys co-founder Nandan Nilekani to lead

Media Coverage

PM announces exam reform task force, Infosys co-founder Nandan Nilekani to lead
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights noble character as the foundation of respect, trust, and effective leadership
July 27, 2026

Prime Minister Shri Narendra Modi shared a Sanskrit Subhashitam today, highlighting how a person of noble character earns respect in society and is regarded as worthy of every responsibility.

The Prime Minister wrote on X;

"शीलवान् पूजितो लोके शीलवान् साधुसम्मतः।

शीलवान् सर्वकर्मार्हः शीलवान् प्रियदर्शनः॥"

A person of noble character earns respect in society and the esteem of the virtuous. Through integrity, humility and disciplined conduct, such an individual is regarded as worthy of every responsibility. Their personality is admirable, inspiring and worthy of emulation. In truth, noble character is the true foundation of lasting success, effective leadership, and enduring trust.