ಸನ್ಮಾನ್ಯರೇ,

ಗೌರವಾನ್ವಿತರೇ,

ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಬ್ರಿಕ್ಸ್, ಪರಿಸರ ಮತ್ತು ಆರೋಗ್ಯ ಸುರಕ್ಷತೆಯಂತಹ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ನನಗೆ ಸಂತೋಷ ತಂದಿದೆ. ಈ ವಿಷಯಗಳು ಪರಸ್ಪರ ಸಂಬಂಧ ಹೊಂದಿರುವುದು ಮಾತ್ರವಲ್ಲ ಮಾನವೀಯತೆಯ ಉಜ್ವಲ ಭವಿಷ್ಯಕ್ಕೂ ಸಹ ಬಹಳ ಮುಖ್ಯವಾಗಿವೆ.

ಸ್ನೇಹಿತರೇ,

ಈ ವರ್ಷ ಸಿಒಪಿ-30 ಬ್ರೆಜಿಲ್‌ ನಲ್ಲಿ ನಡೆಯುತ್ತಿದ್ದು, ಬ್ರಿಕ್ಸ್‌ ನಲ್ಲಿ ಪರಿಸರ ಚರ್ಚೆಯನ್ನು ಪ್ರಸ್ತುತ ಮತ್ತು ಸಮಯೋಚಿತವಾಗಿಸಿದೆ. ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಯಾವಾಗಲೂ ಭಾರತದ ಪ್ರಮುಖ ಆದ್ಯತೆಗಳಾಗಿವೆ. ನಮಗೆ, ಇದು ಕೇವಲ ಇಂಧನದ ಬಗ್ಗೆ ಅಲ್ಲ, ಇದು ಬದುಕು ಮತ್ತು ಪ್ರಕೃತಿಯ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆಯಾಗಿದೆ. ಕೆಲವರು ಇದನ್ನು ಕೇವಲ ಸಂಖ್ಯೆಗಳಾಗಿ ನೋಡುತ್ತಾರೆ, ಆದರೆ ಭಾರತದಲ್ಲಿ, ಇದು ನಮ್ಮ ದೈನಂದಿನ ಜೀವನ ಮತ್ತು ಸಂಪ್ರದಾಯಗಳ ಭಾಗವಾಗಿದೆ. ನಮ್ಮ ಸಂಸ್ಕೃತಿಯಲ್ಲಿ, ಭೂಮಿಯನ್ನು ತಾಯಿಯಂತೆ ಗೌರವಿಸಲಾಗುತ್ತದೆ. ಆದ್ದರಿಂದ, ಭೂಮಿ ತಾಯಿಗೆ ಅಗತ್ಯವಿರುವಾಗ, ನಾವು ಯಾವಾಗಲೂ ಸ್ಪಂದಿಸುತ್ತೇವೆ. ನಾವು ನಮ್ಮ ಮನಸ್ಥಿತಿ, ನಮ್ಮ ನಡವಳಿಕೆ ಮತ್ತು ನಮ್ಮ ಜೀವನಶೈಲಿಯನ್ನು ಬದಲಾಯಿಸುತ್ತಿದ್ದೇವೆ.

ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ನಾವು ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಉತ್ತರ ಮತ್ತು ದಕ್ಷಿಣ ರಾಷ್ಟ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಒತ್ತು ನೀಡಿದ್ದೇವೆ. ಈ ನಿಟ್ಟಿನಲ್ಲಿ, ನಾವು ಹಸಿರು ಅಭಿವೃದ್ಧಿ ಒಪ್ಪಂದದ ಕುರಿತು ಎಲ್ಲಾ ದೇಶಗಳಲ್ಲಿ ಒಮ್ಮತವನ್ನು ಸಾಧಿಸಿದ್ದೇವೆ. ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸಲು, ನಾವು ಹಸಿರು ಕ್ರೆಡಿಟ್ಸ್ ಉಪಕ್ರಮವನ್ನು ಸಹ ಪ್ರಾರಂಭಿಸಿದ್ದೇವೆ.‌

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದರೂ, ಭಾರತವು ಪ್ಯಾರಿಸ್‌ ನಲ್ಲಿ ನಿಗದಿಪಡಿಸಿದ ಅವಧಿಗೆ ಮುಂಚಿತವಾಗಿ ತನ್ನ ಬದ್ಧತೆಗಳನ್ನು ಸಾಧಿಸಿದ ಮೊದಲ ದೇಶವಾಗಿದೆ. 2070 ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವ ನಮ್ಮ ಗುರಿಯತ್ತ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ. ಕಳೆದ ದಶಕದಲ್ಲಿ, ಭಾರತವು ತನ್ನ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಗಮನಾರ್ಹವಾದ ಶೇ.4000 ರಷ್ಟು ಹೆಚ್ಚಳವನ್ನು ಕಂಡಿದೆ. ಈ ಪ್ರಯತ್ನಗಳ ಮೂಲಕ, ನಾವು ಸುಸ್ಥಿರ ಮತ್ತು ಹಸಿರು ಭವಿಷ್ಯಕ್ಕಾಗಿ ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ.

ಸ್ನೇಹಿತರೇ,

ಭಾರತಕ್ಕೆ ಹವಾಮಾನ ನ್ಯಾಯವು ಕೇವಲ ಒಂದು ಆಯ್ಕೆಯಲ್ಲ, ಅದು ನೈತಿಕ ಬಾಧ್ಯತೆಯಾಗಿದೆ. ಅಗತ್ಯವಿರುವ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಕೈಗೆಟುಕುವ ಹಣಕಾಸು ಒದಗಿಸದಿದ್ದರೆ, ಹವಾಮಾನ ಕ್ರಮವು ಹವಾಮಾನ ಮಾತುಕತೆಗೆ ಸೀಮಿತವಾಗಿರುತ್ತದೆ ಎಂದು ಭಾರತ ದೃಢವಾಗಿ ನಂಬುತ್ತದೆ. ಹವಾಮಾನ ಮಹತ್ವಾಕಾಂಕ್ಷೆ ಮತ್ತು ಹವಾಮಾನ ಹಣಕಾಸು ನಡುವಿನ ಅಂತರವನ್ನು ಕಡಿಮೆ ಮಾಡುವುದು ಅಭಿವೃದ್ಧಿ ಹೊಂದಿದ ದೇಶಗಳ ವಿಶೇಷ ಮತ್ತು ಮಹತ್ವದ ಜವಾಬ್ದಾರಿಯಾಗಿದೆ. ನಾವು ಎಲ್ಲಾ ರಾಷ್ಟ್ರಗಳನ್ನು, ವಿಶೇಷವಾಗಿ ವಿವಿಧ ಜಾಗತಿಕ ಸವಾಲುಗಳಿಂದಾಗಿ ಆಹಾರ, ಇಂಧನ, ರಸಗೊಬ್ಬರ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವವರನ್ನು ಜೊತೆಯಲ್ಲಿ ಕರೆದೊಯ್ಯುತ್ತೇವೆ.

ಈ ದೇಶಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಂತೆಯೇ ವಿಶ್ವಾಸ ಹೊಂದಿರಬೇಕು. ಎಲ್ಲಿಯವರೆಗೆ ಎರಡು ಮಾನದಂಡಗಳು ಚಾಲ್ತಿಯಲ್ಲಿರುತ್ತವೋ ಅಲ್ಲಿಯವರೆಗೆ, ಮಾನವೀಯತೆಯ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ. ಇಂದು ಬಿಡುಗಡೆಯಾಗುತ್ತಿರುವ "ಹವಾಮಾನ ಹಣಕಾಸಿನ ಕುರಿತು ಚೌಕಟ್ಟು ಘೋಷಣೆ" ಈ ದಿಕ್ಕಿನಲ್ಲಿ ಒಂದು ಶ್ಲಾಘನೀಯ ಹೆಜ್ಜೆಯಾಗಿದೆ. ಭಾರತವು ಈ ಉಪಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಸ್ನೇಹಿತರೇ,

ಗ್ರಹದ ಆರೋಗ್ಯ ಮತ್ತು ಮಾನವೀಯತೆಯ ಆರೋಗ್ಯವು ಪರಸ್ಪರ ಆಳವಾಗಿ ಹೆಣೆದುಕೊಂಡಿದೆ. ವೈರಾಣುಗಳಿಗೆ ವೀಸಾ ಅಗತ್ಯವಿಲ್ಲ ಮತ್ತು ಪಾಸ್‌ಪೋರ್ಟ್‌ ಆಧಾರದ ಮೇಲೆ ಪರಿಹಾರಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಕೋವಿಡ್-19 ಸಾಂಕ್ರಾಮಿಕ ರೋಗವು ನಮಗೆ ಕಲಿಸಿದೆ. ಎಲ್ಲರಿಗೂ ಸಾಮಾನ್ಯವಾದ ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ಪರಿಹರಿಸಬಹುದು.

'ಒಂದು ಭೂಮಿ, ಒಂದು ಆರೋಗ್ಯ' ಎಂಬ ಮಂತ್ರದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು ಎಲ್ಲಾ ದೇಶಗಳೊಂದಿಗೆ ಸಹಕಾರವನ್ನು ವಿಸ್ತರಿಸಿದೆ. ಇಂದು, ಭಾರತವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ "ಆಯುಷ್ಮಾನ್ ಭಾರತ್" ಗೆ ನೆಲೆಯಾಗಿದೆ, ಇದು 500 ಮಿಲಿಯನ್‌ ಗಿಂತಲೂ ಹೆಚ್ಚು ಜನರಿಗೆ ಜೀವನಾಡಿಯಾಗಿದೆ. ಆಯುರ್ವೇದ, ಯೋಗ, ಯುನಾನಿ ಮತ್ತು ಸಿದ್ಧದಂತಹ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಿಗೆ ಒಂದು ಪೂರಕ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಡಿಜಿಟಲ್ ಆರೋಗ್ಯ ಉಪಕ್ರಮಗಳ ಮೂಲಕ, ನಾವು ದೇಶದ ಅತ್ಯಂತ ದೂರದ ಪ್ರದೇಶಗಳಲ್ಲಿರುವ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುತ್ತಿದ್ದೇವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಯಶಸ್ವಿ ಅನುಭವಗಳನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಆರೋಗ್ಯ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಬ್ರಿಕ್ಸ್ ವಿಶೇಷ ಒತ್ತು ನೀಡಿರುವುದು ನನಗೆ ಸಂತೋಷ ತಂದಿದೆ. 2022 ರಲ್ಲಿ ಪ್ರಾರಂಭವಾದ ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಈ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇಂದು ಹೊರಡಿಸಲಾಗುತ್ತಿರುವ "ಸಾಮಾಜಿಕವಾಗಿ ನಿರ್ಧರಿಸಲ್ಪಟ್ಟ ರೋಗಗಳ ನಿರ್ಮೂಲನೆಗಾಗಿ ಬ್ರಿಕ್ಸ್ ಪಾಲುದಾರಿಕೆ" ಕುರಿತು ನಾಯಕರ ಹೇಳಿಕೆಯು ನಮ್ಮ ಸಹಯೋಗವನ್ನು ಬಲಪಡಿಸಲು ಹೊಸ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಸ್ನೇಹಿತರೇ,

ಇಂದಿನ ಪ್ರಮುಖ ಮತ್ತು ರಚನಾತ್ಮಕ ಚರ್ಚೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮುಂದಿನ ವರ್ಷ ಭಾರತದ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ, ನಾವು ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸಹಕಾರ ಮತ್ತು ಸ್ಥಿರತೆಗಾಗಿ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯನ್ನು ನಿರ್ಮಿಸುವ ವೇದಿಕೆಯಾಗಿ ಬ್ರಿಕ್ಸ್ ಅನ್ನು ಮರು ವ್ಯಾಖ್ಯಾನಿಸುವುದು ನಮ್ಮ ಗುರಿಯಾಗಿದೆ. ನಮ್ಮ ಜಿ-20 ಅಧ್ಯಕ್ಷತೆಯಲ್ಲಿ ನಾವು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ತಂದಂತೆ ಮತ್ತು ಜಾಗತಿಕ ದಕ್ಷಿಣದ ಕಾಳಜಿಗಳನ್ನು ಕಾರ್ಯಸೂಚಿಯ ಮುಂಚೂಣಿಯಲ್ಲಿ ಇರಿಸಿದಂತೆ, ನಮ್ಮ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ, ನಾವು ಈ ವೇದಿಕೆಯನ್ನು ಜನ-ಕೇಂದ್ರಿತ ವಿಧಾನ ಮತ್ತು 'ಮಾನವೀಯತೆ ಮೊದಲು' ಎಂಬ ಮನೋಭಾವದೊಂದಿಗೆ ಮುನ್ನಡೆಸುತ್ತೇವೆ.

ಮತ್ತೊಮ್ಮೆ, ಈ ಯಶಸ್ವಿ ಬ್ರಿಕ್ಸ್ ಶೃಂಗಸಭೆಗಾಗಿ ಅಧ್ಯಕ್ಷ ಲೂಲಾ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Over 52,000 Indians return safely from Gulf amid Iran war: MEA

Media Coverage

Over 52,000 Indians return safely from Gulf amid Iran war: MEA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2026
March 10, 2026

Citizens Appreciate India’s Digital Leap and Green Triumphs Under the Leadership of PM Modi