ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ ಭಾರತದಂತಹ ರೈಲುಗಳು ಮುಂದಿನ ಪೀಳಿಗೆಯ ಭಾರತೀಯ ರೈಲ್ವೆಗೆ ಬುನಾದಿ ಹಾಕುತ್ತಿವೆ: ಪ್ರಧಾನಮಂತ್ರಿ
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭಾರತ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸುವ ಮಿಷನ್ ಆರಂಭಿಸಿದೆ ಮತ್ತು ಈ ರೈಲುಗಳು ಆ ಪಯಣಣದಲ್ಲಿ ಮೈಲಿಗಲ್ಲುಗಳಾಗಲು ಸಜ್ಜಾಗಿವೆ: ಪ್ರಧಾನಮಂತ್ರಿ
ಪವಿತ್ರ ಯಾತ್ರಾ ಸ್ಥಳಗಳನ್ನು ಈಗ ವಂದೇ ಭಾರತ್ ಜಾಲದ ಮೂಲಕ ಸಂಪರ್ಕಿಸಲಾಗುತ್ತಿದ್ದು, ಇದು ಭಾರತದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿ ಪ್ರಯಾಣದ ಸಮ್ಮಿಳಿತವನ್ನು ಗುರುತಿಸುತ್ತದೆ; ಪಾರಂಪರಿಕ ನಗರಗಳನ್ನು ರಾಷ್ಟ್ರೀಯ ಪ್ರಗತಿಯ ಸಂಕೇತಗಳಾಗಿ ಪರಿವರ್ತಿಸುವತ್ತ ಇದು ಮಹತ್ವದ ಹೆಜ್ಜೆ: ಪ್ರಧಾನಮಂತ್ರಿ

ಹರ್ ಹರ್ ಮಹಾದೇವ್!

ನಮಃ ಪಾರ್ವತಿ ಪತಯೇ!

ಹರ್ ಹರ್ ಮಹಾದೇವ್!

ಉತ್ತರ ಪ್ರದೇಶದ ಉತ್ಸಾಹಭರಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ; ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಮತ್ತು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ದ ಬಲವಾದ ಅಡಿಪಾಯವನ್ನು ಹಾಕುತ್ತಿರುವ ಗಮನಾರ್ಹ ತಾಂತ್ರಿಕ ಪ್ರಗತಿಗೆ ಕಾರಣರಾದ ಶ್ರೀ ಅಶ್ವಿನಿ ವೈಷ್ಣವ್ ಜಿ; ಎರ್ನಾಕುಲಂನಿಂದ ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸೇರುತ್ತಿರುವ ಕೇರಳ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್ ಜಿ; ಕೇಂದ್ರದಲ್ಲಿರುವ ನನ್ನ ಸಹೋದ್ಯೋಗಿಗಳಾದ ಶ್ರೀ ಸುರೇಶ್ ಗೋಪಿ ಜಿ ಮತ್ತು ಶ್ರೀ ಜಾರ್ಜ್ ಕುರಿಯನ್ ಜಿ; ಕೇರಳದಲ್ಲಿ ಈ ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲಾ ಇತರ ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳು; ಫಿರೋಜ್‌ ಪುರದಿಂದ ಸಂಪರ್ಕ ಹೊಂದಿದ ಕೇಂದ್ರದ ನನ್ನ ಸಹೋದ್ಯೋಗಿ ಮತ್ತು ಪಂಜಾಬ್ ನಾಯಕ ಶ್ರೀ ರವನೀತ್ ಸಿಂಗ್ ಬಿಟ್ಟು ಜಿ; ಅಲ್ಲಿನ ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳು; ಲಕ್ನೋದಿಂದ ಸಂಪರ್ಕ ಹೊಂದಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಬ್ರಜೇಶ್ ಪಾಠಕ್ ಜಿ; ಇತರ ಗಣ್ಯ ಅತಿಥಿಗಳೇ;  ಮತ್ತು ಕಾಶಿಯಲ್ಲಿರುವ ನನ್ನ ಕುಟುಂಬ ಸದಸ್ಯರುಗಳೇ! 

 

ಬಾಬಾ ವಿಶ್ವನಾಥರ ಈ ಪವಿತ್ರ ನಗರದಲ್ಲಿ, ನಿಮ್ಮೆಲ್ಲರಿಗೂ, ಕಾಶಿಯ ಪ್ರತಿಯೊಂದು ಕುಟುಂಬಕ್ಕೂ ನನ್ನ ನಮನಗಳನ್ನು ಅರ್ಪಿಸುತ್ತೇನೆ! ನಾನು ದೇವ ದೀಪಾವಳಿಯ ಭವ್ಯ ಆಚರಣೆಯನ್ನು ಕಂಡೆ, ಮತ್ತು ಇಂದು ಶುಭ ದಿನವೂ ಆಗಿದೆ. ಈ ಅಭಿವೃದ್ಧಿಯ ಹಬ್ಬಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ!

ಸ್ನೇಹಿತರೇ,

ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಅವರ ಆರ್ಥಿಕ ಪ್ರಗತಿಗೆ ಪ್ರಮುಖ ಕಾರಣವೆಂದರೆ ಅಲ್ಲಿನ ಬಲವಾದ ಮೂಲಸೌಕರ್ಯ. ಗಮನಾರ್ಹ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಿದ ಪ್ರತಿಯೊಂದು ರಾಷ್ಟ್ರದಲ್ಲಿ, ಅವರ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಉದಾಹರಣೆಗೆ, ವರ್ಷಗಳಿಂದ ರೈಲು ಮಾರ್ಗವಿಲ್ಲದ, ಹಳಿಗಳಿಲ್ಲದ, ರೈಲುಗಳಿಲ್ಲದ, ನಿಲ್ದಾಣವಿಲ್ಲದ ಪ್ರದೇಶವನ್ನು ಊಹಿಸಿ. ಆದರೆ ಹಳಿಗಳನ್ನು ಹಾಕಿದ ಮತ್ತು ನಿಲ್ದಾಣವನ್ನು ನಿರ್ಮಿಸಿದ ತಕ್ಷಣ, ಆ ಪಟ್ಟಣದ ಅಭಿವೃದ್ಧಿ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ. ವರ್ಷಗಳಿಂದ ಸರಿಯಾದ ರಸ್ತೆಗಳಿಲ್ಲದ ಮತ್ತು ಜನರು ತಿರುಗಾಡಲು ಕೆಸರಿನ ಹಾದಿಗಳನ್ನು ಬಳಸುವ ಹಳ್ಳಿಯಲ್ಲಿ, ಆದರೆ ಒಂದು ಸಣ್ಣ ರಸ್ತೆಯನ್ನು ನಿರ್ಮಿಸಿದ ನಂತರ, ರೈತರು ಸುಲಭವಾಗಿ ಪ್ರಯಾಣಿಸಲು ಪ್ರಾರಂಭಿಸುತ್ತಾರೆ ಮತ್ತು ಅವರ ಉತ್ಪನ್ನಗಳು ಮಾರುಕಟ್ಟೆಗಳನ್ನು ತಲುಪಲು ಪ್ರಾರಂಭಿಸುತ್ತವೆ. ಮೂಲಸೌಕರ್ಯ ಎಂದರೆ ದೊಡ್ಡ ಸೇತುವೆಗಳು ಮತ್ತು ಹೆದ್ದಾರಿಗಳು ಎಂದಲ್ಲ. ಅಂತಹ ಸೌಲಭ್ಯಗಳು ಎಲ್ಲಿಯಾದರೂ ಅಭಿವೃದ್ಧಿಗೊಂಡಾಗ, ಆ ಪ್ರದೇಶದ ಬೆಳವಣಿಗೆ ಪ್ರಾರಂಭವಾಗುತ್ತದೆ.  ನಮ್ಮ ಹಳ್ಳಿಗಳು, ನಮ್ಮ ಸಣ್ಣ ಪಟ್ಟಣಗಳು ಮತ್ತು ಇಡೀ ದೇಶಕ್ಕೂ ಇದು ಅನ್ವಯಿಸುತ್ತದೆ. ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆ, ಚಲಿಸುತ್ತಿರುವ ವಂದೇ ಭಾರತ್ ರೈಲುಗಳ ಸಂಖ್ಯೆ ಮತ್ತು ಭಾರತವನ್ನು ಜಗತ್ತಿಗೆ ಸಂಪರ್ಕಿಸುವ ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆ ಹೆಚ್ಚುತ್ತಿದೆ - ಇವೆಲ್ಲವೂ ಈಗ ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿವೆ. ಇಂದು, ಭಾರತವೂ ಈ ಹಾದಿಯಲ್ಲಿ ವೇಗವಾಗಿ ಚಲಿಸುತ್ತಿದೆ. ಈ ಉತ್ಸಾಹದಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಲಾಗುತ್ತಿದೆ. ಕಾಶಿ-ಖಜುರಾಹೊ ವಂದೇ ಭಾರತ್ ಜೊತೆಗೆ, ಫಿರೋಜ್‌ಪುರ-ದೆಹಲಿ ವಂದೇ ಭಾರತ್, ಲಕ್ನೋ-ಸಹಾರನ್‌ಪುರ ವಂದೇ ಭಾರತ್ ಮತ್ತು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ರೈಲುಗಳಿಗೆ ಸಹ ಚಾಲನೆ ನೀಡಲಾಗಿದೆ. ಈ ನಾಲ್ಕು ಹೊಸ ರೈಲುಗಳೊಂದಿಗೆ, ಈಗ ದೇಶಾದ್ಯಂತ 160 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಈ ಸಾಧನೆಗಾಗಿ ಕಾಶಿಯ ಜನರಿಗೆ ಮತ್ತು ದೇಶದ ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು, ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ ಭಾರತ್‌ ನಂತಹ ರೈಲುಗಳು ಭಾರತೀಯ ರೈಲ್ವೆಯ ಮುಂದಿನ ಪೀಳಿಗೆಗೆ ಅಡಿಪಾಯ ಹಾಕುತ್ತಿವೆ. ಇದು ಭಾರತೀಯ ರೈಲ್ವೆಯನ್ನು ಪರಿವರ್ತಿಸುವ ಸಂಪೂರ್ಣ ಅಭಿಯಾನವಾಗಿದೆ.  ವಂದೇ ಭಾರತ್ ಎಂಬುದು ಭಾರತೀಯರಿಂದ, ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿಸಲ್ಪಟ್ಟ ರೈಲು, ಮತ್ತು ಪ್ರತಿಯೊಬ್ಬ ಭಾರತೀಯನೂ ಅದರ ಬಗ್ಗೆ ಹೆಮ್ಮೆ ಪಡುತ್ತಾನೆ. ಮೊದಲು, "ನಾವು ನಿಜವಾಗಿಯೂ ಇದನ್ನು ಮಾಡಬಹುದೇ? ಇದು ವಿದೇಶಗಳಲ್ಲಿ ಮಾತ್ರ ನಡೆಯುವ ವಿಷಯವಲ್ಲವೇ? ಇಲ್ಲಿ ನಡೆಯಬಹುದೇ?" ಎಂಬಂತೆ ಇತ್ತು. ಈಗ ಅದು ನಡೆಯುತ್ತಿದೆ! ಅಲ್ಲವೇ? ಇದು ನಮ್ಮ ದೇಶದಲ್ಲಿ ನಡೆಯುತ್ತಿದೆಯೇ ಅಥವಾ ಇಲ್ಲವೇ? ನಮ್ಮ ಸ್ವಂತ ದೇಶದಲ್ಲಿ, ನಮ್ಮ ಸ್ವಂತ ಜನರಿಂದ ಮಾಡಲ್ಪಡುತ್ತಿದೆಯೇ ಅಥವಾ ಇಲ್ಲವೇ? ಇದು ನಮ್ಮ ದೇಶದ ಶಕ್ತಿ. ಇಂದು, ವಿದೇಶಿ ಪ್ರಯಾಣಿಕರು ಸಹ ವಂದೇ ಭಾರತ್ ರೈಲನ್ನು ನೋಡಿದಾಗ ಆಶ್ಚರ್ಯಚಕಿತರಾಗುತ್ತಾರೆ. ಭಾರತವು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಗಾಗಿ ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸುವ ತನ್ನ ಧ್ಯೇಯವನ್ನು ಪ್ರಾರಂಭಿಸಿದ ರೀತಿ, ಈ ರೈಲುಗಳು ಆ ಅಭಿವೃದ್ಧಿಶೀಲ ಪ್ರಯಾಣದಲ್ಲಿ ಒಂದು ಮೈಲಿಗಲ್ಲಾಗುತ್ತಿವೆ.

 

ಸ್ನೇಹಿತರೇ,

ಶತಮಾನಗಳಿಂದ, ಭಾರತದಲ್ಲಿ ತೀರ್ಥಯಾತ್ರೆಗಳನ್ನು ರಾಷ್ಟ್ರದ ಪ್ರಜ್ಞೆಯ ಮಾಧ್ಯಮವಾಗಿ ನೋಡಲಾಗುತ್ತಿದೆ. ಈ ಪ್ರಯಾಣಗಳು ಕೇವಲ ದೈವಿಕ ದರ್ಶನಕ್ಕೆ ಮಾರ್ಗಗಳಲ್ಲ, ಆದರೆ ಭಾರತದ ಆತ್ಮವನ್ನು ಸಂಪರ್ಕಿಸುವ ಪವಿತ್ರ ಸಂಪ್ರದಾಯಗಳಾಗಿವೆ. ಪ್ರಯಾಗರಾಜ್, ಅಯೋಧ್ಯೆ, ಹರಿದ್ವಾರ, ಚಿತ್ರಕೂಟ, ಕುರುಕ್ಷೇತ್ರ ಮತ್ತು ಇತರ ಅಸಂಖ್ಯಾತ ತೀರ್ಥಯಾತ್ರೆಯ ಸ್ಥಳಗಳು ನಮ್ಮ ಆಧ್ಯಾತ್ಮಿಕ ಪರಂಪರೆಯ ಕೇಂದ್ರಗಳಾಗಿವೆ.  ಈಗ, ಈ ಪವಿತ್ರ ಸ್ಥಳಗಳು ವಂದೇ ಭಾರತ್ ಜಾಲದ ಮೂಲಕ ಸಂಪರ್ಕಗೊಳ್ಳುತ್ತಿರುವುದರಿಂದ, ಇದು ಭಾರತದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿಯನ್ನೂ ಸಂಪರ್ಕಿಸುತ್ತಿದೆ. ಭಾರತದ ಪಾರಂಪರಿಕ ನಗರಗಳನ್ನು ರಾಷ್ಟ್ರದ ಪ್ರಗತಿಯ ಸಂಕೇತಗಳನ್ನಾಗಿ ಮಾಡುವಲ್ಲಿ ಇದು ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.

ಸ್ನೇಹಿತರೇ,

ಈ ತೀರ್ಥಯಾತ್ರೆಗಳು ಆರ್ಥಿಕ ಆಯಾಮವನ್ನು ಸಹ ಹೊಂದಿವೆ, ಅವುಗಳು ಹೆಚ್ಚಾಗಿ ಸಾಕಷ್ಟು ಗಮನವನ್ನು ಪಡೆಯುವುದಿಲ್ಲ. ಕಳೆದ 11 ವರ್ಷಗಳಲ್ಲಿ, ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯಗಳು ಧಾರ್ಮಿಕ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿವೆ. ಕಳೆದ ವರ್ಷವಷ್ಟೇ, 11 ಕೋಟಿ ಭಕ್ತರು ಬಾಬಾ ವಿಶ್ವನಾಥನ ದರ್ಶನಕ್ಕಾಗಿ ಕಾಶಿಗೆ ಭೇಟಿ ನೀಡಿದ್ದರು.

ರಾಮ ಮಂದಿರ ನಿರ್ಮಾಣವಾದಾಗಿನಿಂದ, 6 ಕೋಟಿಗೂ ಹೆಚ್ಚು ಭಕ್ತರು ರಾಮಲಲ್ಲಾ ಅವರ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ಯಾತ್ರಿಕರು ಉತ್ತರ ಪ್ರದೇಶದ ಆರ್ಥಿಕತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಡುಗೆ ನೀಡಿದ್ದಾರೆ. ಅವರು ಹೋಟೆಲ್‌ ಗಳು, ವ್ಯಾಪಾರಿಗಳು, ಸಾರಿಗೆ ಕಂಪನಿಗಳು, ಸ್ಥಳೀಯ ಕಲಾವಿದರು ಮತ್ತು ದೋಣಿ ಚಾಲಕರಿಗೆ ನಿರಂತರ ಆದಾಯದ ಅವಕಾಶಗಳನ್ನು ಒದಗಿಸಿದ್ದಾರೆ. ಇದರ ಪರಿಣಾಮವಾಗಿ, ಬನಾರಸ್‌ ನ ನೂರಾರು ಯುವಕರು ಈಗ ಸಾರಿಗೆ ಸೇವೆಗಳಿಂದ ಹಿಡಿದು ಬನಾರಸಿ ಸೀರೆಗಳು ಮತ್ತು ಇತರ ಹಲವು ಉದ್ಯಮಗಳವರೆಗೆ ಹೊಸ ವ್ಯವಹಾರಗಳನ್ನು ಪ್ರಾರಂಭಿಸುತ್ತಿದ್ದಾರೆ. ಇದೆಲ್ಲವೂ ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಕಾಶಿಯಲ್ಲಿ ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತಿದೆ.

 

ಸ್ನೇಹಿತರೇ,

"ವಿಕಸಿತ ಕಾಶಿಯಿಂದ ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಕಾಶಿಯ ಮೂಲಕ ಅಭಿವೃದ್ಧಿ ಹೊಂದಿದ ಭಾರತ) ಎಂಬ ಮಂತ್ರವನ್ನು ಅರಿತುಕೊಳ್ಳಲು ನಾವು ಇಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದೇವೆ. ಇಂದು, ಕಾಶಿ ಆಸ್ಪತ್ರೆಗಳು, ರಸ್ತೆಗಳು, ಅನಿಲ ಪೈಪ್‌ಲೈನ್‌ ಗಳು ಮತ್ತು ಇಂಟರ್ನೆಟ್ ಸಂಪರ್ಕದಲ್ಲಿ ವಿಸ್ತರಣೆ ಮತ್ತು ಸುಧಾರಣೆಗೆ ಸಾಕ್ಷಿಯಾಗುತ್ತಿದೆ ಮತ್ತು ಬೆಳವಣಿಗೆ ಸಂಖ್ಯೆಯಲ್ಲಿಲ್ಲ, ಆದರೆ ಗುಣಾತ್ಮಕ ಸುಧಾರಣೆಗಳೂ ಇವೆ. ರೋಪ್‌ ವೇ ಯೋಜನೆಯ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ. ಗಂಜಾರಿ ಮತ್ತು ಸಿಗ್ರಾ ಕ್ರೀಡಾಂಗಣಗಳಂತಹ ಕ್ರೀಡಾ ಮೂಲಸೌಕರ್ಯಗಳು ಈಗ ಬರುತ್ತಿವೆ.  ಬನಾರಸ್‌ ಗೆ ಭೇಟಿ ನೀಡುವುದು, ಬನಾರಸ್‌ ನಲ್ಲಿ ವಾಸಿಸುವುದು ಮತ್ತು ಬನಾರಸ್‌ ನ ಸೌಲಭ್ಯಗಳನ್ನು ಅನುಭವಿಸುವುದು ಎಲ್ಲರಿಗೂ ಒಂದು ವಿಶಿಷ್ಟ ಮತ್ತು ವಿಶೇಷ ಅನುಭವವಾಗುವಂತೆ ಮಾಡುವುದು ನಮ್ಮ ಪ್ರಯತ್ನ.

ಸ್ನೇಹಿತರೇ,

ಕಾಶಿಯಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಸುಮಾರು 10-11 ವರ್ಷಗಳ ಹಿಂದೆ, ಯಾವುದೇ ಗಂಭೀರ ಕಾಯಿಲೆ ಬಂದಾಗ ಜನರಿಗೆ ಒಂದೇ ಒಂದು ಆಯ್ಕೆ ಇತ್ತು, ಅದು ಬಿಎಚ್‌ಯು (ಬನಾರಸ್ ಹಿಂದೂ ವಿಶ್ವವಿದ್ಯಾಲಯ). ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದ್ದು, ಇಡೀ ರಾತ್ರಿ ಸರತಿ ಸಾಲಿನಲ್ಲಿ ನಿಂತರೂ, ಅನೇಕರಿಗೆ ಚಿಕಿತ್ಸೆ ಸಿಗಲಿಲ್ಲ. ಕ್ಯಾನ್ಸರ್‌ ನಂತಹ ಗಂಭೀರ ಕಾಯಿಲೆ ಇರುವುದು ಪತ್ತೆಯಾದಾಗ, ಕುಟುಂಬಗಳು ಚಿಕಿತ್ಸೆಗಾಗಿ ಮುಂಬೈಗೆ ಹೋಗಲು ತಮ್ಮ ಭೂಮಿ ಮತ್ತು ಹೊಲಗಳನ್ನು ಮಾರಾಟ ಮಾಡಬೇಕಾಯಿತು. ಇಂದು, ನಮ್ಮ ಸರ್ಕಾರ ಕಾಶಿಯ ಜನರ ಈ ಚಿಂತೆಗಳನ್ನು ಕಡಿಮೆ ಮಾಡಲು ಕೆಲಸ ಮಾಡಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ, ಮಹಾಮನ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ; ಕಣ್ಣಿನ ಆರೈಕೆಗಾಗಿ, ಶಂಕರ್ ನೇತ್ರಾಲಯ; ಬಿಎಚ್‌ಯು ಒಳಗೆ, ಅತ್ಯಾಧುನಿಕ ಆಘಾತ ಕೇಂದ್ರ ಮತ್ತು ಶತಾಬ್ದಿ ಆಸ್ಪತ್ರೆ; ಮತ್ತು ಪಾಂಡೆಪುರದಲ್ಲಿ, ವಿಭಾಗೀಯ ಆಸ್ಪತ್ರೆ - ಈ ಎಲ್ಲಾ ಆಸ್ಪತ್ರೆಗಳು ಕಾಶಿ ಮತ್ತು ಪೂರ್ವಾಂಚಲ್‌ ಪ್ರದೇಶಕ್ಕೆ ಮಾತ್ರವಲ್ಲದೆ ನೆರೆಯ ರಾಜ್ಯಗಳಿಗೂ ವರದಾನವಾಗಿವೆ.  ಆಯುಷ್ಮಾನ್ ಭಾರತ್ ಮತ್ತು ಜನೌಷಧಿ ಕೇಂದ್ರಗಳಿಂದಾಗಿ, ಲಕ್ಷಾಂತರ ಬಡ ಜನರು ಈಗ ತಮ್ಮ ವೈದ್ಯಕೀಯ ವೆಚ್ಚದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತಿದ್ದಾರೆ. ಒಂದೆಡೆ, ಇದು ಜನರ ಕಳವಳಗಳನ್ನು ಕಡಿಮೆ ಮಾಡಿದೆ; ಮತ್ತೊಂದೆಡೆ, ಕಾಶಿಯನ್ನು ಈಗ ಇಡೀ ಪ್ರದೇಶದ ಆರೋಗ್ಯ ರಾಜಧಾನಿಯಾಗಿ ಗುರುತಿಸಲಾಗುತ್ತಿದೆ.

 

ಸ್ನೇಹಿತರೇ,

ಕಾಶಿಯ ಅಭಿವೃದ್ಧಿಯಲ್ಲಿ ನಾವು ಈ ತೀವ್ರತೆ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದನ್ನು ಮುಂದುವರಿಸಬೇಕು, ಇದರಿಂದಾಗಿ ಈ ಭವ್ಯ ಮತ್ತು ದೈವಿಕ ನಗರವು ವೇಗವಾಗಿ ಸಮೃದ್ಧವಾಗುತ್ತದೆ. ಮತ್ತು ಕಾಶಿಗೆ ಭೇಟಿ ನೀಡುವವರು ಪ್ರಪಂಚದ ಎಲ್ಲಿಂದಲಾದರೂ ಬಾಬಾ ವಿಶ್ವನಾಥನ ಈ ಪವಿತ್ರ ನಗರದಲ್ಲಿ ಒಂದು ಅನನ್ಯ ಶಕ್ತಿ, ವಿಶೇಷ ಉತ್ಸಾಹ ಮತ್ತು ಸಾಟಿಯಿಲ್ಲದ ಸಂತೋಷವನ್ನು ಅನುಭವಿಸಲಿ.

ಸ್ನೇಹಿತರೇ,

ಸ್ವಲ್ಪ ಸಮಯದ ಹಿಂದೆ, ನಾನು ವಂದೇ ಭಾರತ್ ರೈಲಿನೊಳಗೆ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೆ. ಅದ್ಭುತ ಸಂಪ್ರದಾಯವನ್ನು ಪ್ರಾರಂಭಿಸಿದ ಶ್ರೀ ಅಶ್ವಿನಿ ಜಿ ಅವರನ್ನು ನಾನು ಅಭಿನಂದಿಸುತ್ತೇನೆ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಯಾದಲ್ಲೆಲ್ಲಾ, ವರ್ಣಚಿತ್ರಗಳು ಮತ್ತು ಕವಿತೆಗಳ ಮೂಲಕ ಅಭಿವೃದ್ಧಿ, ವಂದೇ ಭಾರತ್ ಮತ್ತು ವಿಕಸಿತ ಭಾರತದ ಪರಿಕಲ್ಪನೆಯ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಶಾಲಾ ಮಕ್ಕಳ ನಡುವೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮಕ್ಕಳಿಗೆ ತಯಾರಿ ಮಾಡಲು ಕೆಲವೇ ದಿನಗಳು ಇದ್ದರೂ, ಅವರ ಸೃಜನಶೀಲತೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ.  ಅವರು ವಿಕಸಿತ ಕಾಶಿ, ವಿಕಸಿತ ಭಾರತ ಮತ್ತು ಸುರಕ್ಷಿತ ಭಾರತವನ್ನು ಚಿತ್ರಿಸುವ ರೇಖಾಚಿತ್ರಗಳನ್ನು ರಚಿಸಿದ್ದರು. 12 ರಿಂದ 14 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರು ಬರೆದ ಕವಿತೆಗಳನ್ನು ಸಹ ನಾನು ಕೇಳಿದ್ದೇನೆ. ತುಂಬಾ ಸುಂದರ ಮತ್ತು ಚಿಂತನಶೀಲ ಪದ್ಯಗಳು! ಕಾಶಿಯ ಸಂಸತ್ ಸದಸ್ಯನಾಗಿ, ಅಂತಹ ಪ್ರತಿಭಾನ್ವಿತ ಮಕ್ಕಳು ನನ್ನ ಕಾಶಿಗೆ ಸೇರಿದವರು ಎಂದು ನನಗೆ ಅಪಾರ ಹೆಮ್ಮೆ ಅನಿಸಿತು. ನಾನು ಅವರಲ್ಲಿ ಕೆಲವರನ್ನು ಇಲ್ಲಿ ಭೇಟಿಯಾದೆ ಮತ್ತು ಒಂದು ಮಗು, ಕೈ ಅಂಗವೈಕಲ್ಯವನ್ನು ಹೊಂದಿದ್ದರೂ, ಅಸಾಧಾರಣವಾದ ಚಿತ್ರಕಲೆಯನ್ನು ಮಾಡಿತು. ಅದು ನನಗೆ ತುಂಬಾ ಸಂತೋಷವನ್ನುಂಟುಮಾಡಿತು. ಮಕ್ಕಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿದ್ದಕ್ಕಾಗಿ ಈ ಶಾಲೆಗಳ ಶಿಕ್ಷಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಅವರ ಪ್ರತಿಭೆ ಮತ್ತು ಉತ್ಸಾಹವನ್ನು ಪೋಷಿಸುವಲ್ಲಿ ಪಾತ್ರ ವಹಿಸಿದ ಪೋಷಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ವಾಸ್ತವವಾಗಿ, ನಾವು ಇಲ್ಲಿ ಈ ಮಕ್ಕಳಿಗಾಗಿ 'ಕವಿ ಸಮ್ಮೇಳನ' (ಕವಿತಾ ಕೂಟ) ಆಯೋಜಿಸಬೇಕು ಮತ್ತು ದೇಶಾದ್ಯಂತ ತಮ್ಮ ಕವಿತೆಗಳನ್ನು ಹಂಚಿಕೊಳ್ಳಲು 8-10 ಅತ್ಯುತ್ತಮ ಯುವ ಕವಿಗಳನ್ನು ಆಯ್ಕೆ ಮಾಡಬೇಕು ಎಂಬ ಕಲ್ಪನೆ ನನಗೆ ಸಿಕ್ಕಿತು. ಇದು ನನಗೆ ತುಂಬಾ ಹೃದಯಸ್ಪರ್ಶಿ ಮತ್ತು ಸ್ಪೂರ್ತಿದಾಯಕ ಅನುಭವವಾಗಿತ್ತು, ಕಾಶಿಯ ಸಂಸದನಾಗಿ, ಇಂದು ನಾನು ನಿಜವಾಗಿಯೂ ಸಂತೋಷಪಟ್ಟಿದ್ದೇನೆ. ನಾನು ಈ ಮಕ್ಕಳನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

 ಸ್ನೇಹಿತರೇ,

ಇಂದು, ನಾನು ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗಿದೆ, ಅದಕ್ಕಾಗಿಯೇ ಇಲ್ಲಿ ಕೇವಲ ಒಂದು ಸಣ್ಣ ಕಾರ್ಯಕ್ರಮವನ್ನು ಮಾತ್ರ ಯೋಜಿಸಲಾಗಿತ್ತು. ನಾನು ಕೂಡ ಶೀಘ್ರದಲ್ಲೇ ಹೊರಡಬೇಕಾಗಿದೆ, ಆದರೆ ನಿಮ್ಮಲ್ಲಿ ಅನೇಕರು ಬೆಳಿಗ್ಗೆ ಇಲ್ಲಿ ಸೇರಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಮತ್ತೊಮ್ಮೆ, ಇಂದಿನ ಕಾರ್ಯಕ್ರಮಕ್ಕಾಗಿ ಮತ್ತು ಹೊಸ ವಂದೇ ಭಾರತ್ ರೈಲುಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತುಂಬಾ ಧನ್ಯವಾದಗಳು!

ಹರ್ ಹರ್ ಮಹಾದೇವ್!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vikram-1 launch fills every citizen with pride; young innovators have accomplished something unimaginable: PM Modi

Media Coverage

Vikram-1 launch fills every citizen with pride; young innovators have accomplished something unimaginable: PM Modi
NM on the go

Nm on the go

Always be the first to hear from the PM. Get the App Now!
...
Prime Minister greets all CRPF personnel on their Raising Day
July 27, 2026

Prime Minister Shri Narendra Modi today extended his greetings to all CRPF personnel on their Raising Day. He stated that the CRPF has distinguished itself through its unwavering courage and commitment to duty.

Shri Modi noted that from safeguarding internal security to serving citizens during challenging situations, CRPF personnel have always placed the nation first. He highlighted that their efforts in eliminating the menace of Maoism are particularly notable and have contributed to peace and progress in the lives of several people.

In a post on X, the Prime Minister shared:

"Greetings to all CRPF personnel on their Raising Day. The CRPF has distinguished itself through its unwavering courage and commitment to duty. From safeguarding internal security to serving citizens during challenging situations, CRPF personnel have always placed the nation first. Their efforts in eliminating the menace of Maoism are particularly notable and have contributed to peace and progress in the lives of several people.

@crpfindia"