ಕಲಿಯುಗದಲ್ಲಿ,ದೇವರ ನಾಮವನ್ನು ಜಪಿಸುವುದರಿಂದ ಲೌಕಿಕ ದುಃಖದ ಸಾಗರದಿಂದ ಮುಕ್ತಿ ದೊರೆಯುತ್ತದೆ: ಪ್ರಧಾನಮಂತ್ರಿ
ಗೀತೆಯ ಮಾತುಗಳು ಜನರಿಗೆ ಮಾರ್ಗದರ್ಶನ ನೀಡುವುದಲ್ಲದೆ, ರಾಷ್ಟ್ರದ ನೀತಿಗಳ ದಿಕ್ಕನ್ನು ರೂಪಿಸುತ್ತವೆ: ಪ್ರಧಾನಮಂತ್ರಿ
ಶಾಂತಿ ಮತ್ತು ಸತ್ಯವನ್ನು ಎತ್ತಿಹಿಡಿಯಲು ಅನ್ಯಾಯದ ಶಕ್ತಿಗಳನ್ನು ಎದುರಿಸುವುದು ಮತ್ತು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಭಗವದ್ಗೀತೆ ಕಲಿಸುತ್ತದೆ ಮತ್ತು ಈ ತತ್ವವು ನಮ್ಮ ರಾಷ್ಟ್ರೀಯ ಭದ್ರತಾ ಚಿಂತನೆಯ ಹೃದಯಭಾಗದಲ್ಲಿದೆ: ಪ್ರಧಾನಮಂತ್ರಿ
ನೀರನ್ನು ಉಳಿಸುವುದು, ಮರಗಳನ್ನು ನೆಡುವುದು, ಬಡವರಿಗೆ ಸೇವೆ ಸಲ್ಲಿಸುವುದು, ಸ್ವದೇಶಿ ಅಳವಡಿಸಿಕೊಳ್ಳುವುದು, ಸಹಜ ಕೃಷಿಯನ್ನು ಉತ್ತೇಜಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಯೋಗವನ್ನು ಅಭ್ಯಾಸ ಮಾಡುವುದು, ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ಕನಿಷ್ಠ 25 ಪಾರಂಪರಿಕ ತಾಣಗಳಿಗೆ ಭೇಟಿ ನೀಡುವ ʼನವಸಂಕಲ್ಪʼಗಳನ್ನು ನಾವು ಮಾಡೋಣ: ಪ್ರಧಾನಮಂತ್ರಿ

ಎಲ್ಲರಿಗೂ ನಮಸ್ಕಾರ!

ಜೈ ಶ್ರೀ ಕೃಷ್ಣ!

ಜೈ ಶ್ರೀ ಕೃಷ್ಣ!

ಜೈ ಶ್ರೀ ಕೃಷ್ಣ!

ನಾನು ಮಾತು ಆರಂಭಿಸುವ ಮೊದಲು, ಕೆಲವು ಮಕ್ಕಳು ತಮ್ಮ ಚಿತ್ರಕಲೆಗಳನ್ನು ಇಲ್ಲಿಗೆ ತಂದಿದ್ದಾರೆ. ದಯವಿಟ್ಟು ಎಸ್‌ಪಿಜಿ ಮತ್ತು ಸ್ಥಳೀಯ ಪೊಲೀಸರು ಅವುಗಳನ್ನು ಸಂಗ್ರಹಿಸಿ.  ನೀವು ನಿಮ್ಮ ವಿಳಾಸವನ್ನು ಹಿಂಭಾಗದಲ್ಲಿ ಬರೆದರೆ, ನಾನು ಖಂಡಿತವಾಗಿಯೂ ನಿಮಗೆ ಧನ್ಯವಾದ ಪತ್ರವನ್ನು ಕಳುಹಿಸುತ್ತೇನೆ. ಯಾರಾದರೂ ಏನನ್ನಾದರೂ ನನಗೆ ತಂದಿದ್ದರೆ, ದಯವಿಟ್ಟು ಭದ್ರತಾ ಸಿಬ್ಬಂದಿಗೆ ನೀಡಿ, ಅವರು ಅದನ್ನು ಸಂಗ್ರಹಿಸುತ್ತಾರೆ, ನೀವು ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಿರಿ. ಈ ಮಕ್ಕಳು ತುಂಬಾ ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ, ಹಾಗಾಗಿ, ಅವರಿಗೆ ಅನ್ಯಾಯವಾಗಬಾರದು. ಹಾಗೆ ಮಾಡಿದರೆ, ಅದು ನನಗೆ ನೋವುಂಟು ಮಾಡುತ್ತದೆ.

ಜೈ ಶ್ರೀ ಕೃಷ್ಣ!

ಭಗವಾನ್ ಶ್ರೀ ಕೃಷ್ಣನ ದಿವ್ಯ ದರ್ಶನ, ಶ್ರೀಮದ್ ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವ ಮತ್ತು ಹಲವಾರು ಪೂಜ್ಯ ಸಾಧು ಸಂತರು ಮತ್ತು ಗುರುಗಳ ದರ್ಶನ ಪಡೆಯುವ ತೃಪ್ತಿ ಸಮಾಧಾನ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯವೇ ಸರಿ. ನನಗೆ ಇದು ಅಸಂಖ್ಯಾತ ಸದ್ಗುಣಗಳನ್ನು ಪಡೆದಂತೆ ಭಾಸವಾಗುತ್ತಿದೆ. ನನಗೆ ನೀಡಲಾದ ಗೌರವ, ನನ್ನ ಬಗ್ಗೆ ವ್ಯಕ್ತಪಡಿಸಲಾದ ಭಾವನೆಗಳು, ನನ್ನ ಬಗ್ಗೆ ಹೇಳಿದ್ದಕ್ಕೆ ಅರ್ಹನಾಗಬೇಕಾದರೆ, ಇನ್ನೂ ಹೆಚ್ಚಿನ ಕೆಲಸ ಮಾಡಲು ಮತ್ತು ನನ್ನ ಮೇಲೆ ಇಟ್ಟಿರುವ ಅಪಾರ ನಿರೀಕ್ಷೆಗಳನ್ನು ಪೂರೈಸಲು ನನಗೆ ಇನ್ನಷ್ಟು ಆಶೀರ್ವಾದ ಸಿಗಲಿ.

ಸಹೋದರ ಸಹೋದರಿಯರೆ,

ಕೇವಲ 3 ದಿನಗಳ ಹಿಂದೆ ನಾನು ಗೀತೆಯ ನಾಡು ಕುರುಕ್ಷೇತ್ರದಲ್ಲಿದ್ದೆ. ಈಗ ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯ ಅವರ ಖ್ಯಾತಿ ಹೊಂದಿರುವ ಈ ಭೂಮಿಗೆ ಬಂದಿರುವುದು ನನಗೆ ಅತ್ಯಂತ ಆತ್ಮತೃಪ್ತಿಯ ಸಂದರ್ಭವಾಗಿದೆ. ಇಂದು 1 ಲಕ್ಷ ಜನರು ಒಟ್ಟಾಗಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ ಈ ಸಂದರ್ಭದಲ್ಲಿ, ವಿಶ್ವಾದ್ಯಂತದ ಜನರು ಸಾವಿರಾರು ವರ್ಷಗಳಿಂದ ಭಾರತದ ದೈವತ್ವವನ್ನು ವೀಕ್ಷಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳು, ರಾಜ್ಯ ಸರ್ಕಾರದ ಸಚಿವರೆ, ಸಂಸದರೆ, ಶಾಸಕರೆ, ಉಡುಪಿಯ ಅಷ್ಟ ಮಠಗಳ ಎಲ್ಲಾ ಅನುಯಾಯಿಗಳೆ, ಭಕ್ತರೆ ಮತ್ತು ಇಲ್ಲಿ ಉಪಸ್ಥಿತರಿರುವ ಇತರೆ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ!

 

ಕರ್ನಾಟಕದ ಈ ಭೂಮಿಗೆ, ಪ್ರೀತಿಯ ಜನರಲ್ಲಿಗೆ ಬರುವುದು ನನಗೆ ಯಾವಾಗಲೂ ಒಂದು ಅನನ್ಯ ಅನುಭವ. ಉಡುಪಿಯ ಈ ಪವಿತ್ರ ಭೂಮಿಗೆ ಬರುವುದೆಂದರೆ, ಅದು ಯಾವಾಗಲೂ ಅದ್ಭುತ ಸನ್ನಿವೇಶವಾಗಿದೆ. ನಾನು ಗುಜರಾತ್‌ನಲ್ಲಿ ಜನಿಸಿದ್ದೇನೆ, ಗುಜರಾತ್ ಮತ್ತು ಉಡುಪಿ ನಡುವೆ ಗಾಢವಾದ ಮತ್ತು ವಿಶೇಷ ಸಂಬಂಧವಿದೆ. ಇಲ್ಲಿ ಸ್ಥಾಪಿಸಲಾದ ಶ್ರೀ ಕೃಷ್ಣನ ವಿಗ್ರಹವನ್ನು ಮೊದಲು ದ್ವಾರಕೆಯಲ್ಲಿ ತಾಯಿ ರುಕ್ಮಿಣಿ ಪೂಜಿಸಿದರು ಎಂಬ ನಂಬಿಕೆ ಇದೆ. ನಂತರ, ಜಗದ್ಗುರು ಶ್ರೀ ಮಧ್ವಾಚಾರ್ಯರು ಈ ವಿಗ್ರಹವನ್ನು ಇಲ್ಲಿ ಸ್ಥಾಪಿಸಿದರು. ನಿಮಗೆ ಗೊತ್ತಾ, ಕಳೆದ ವರ್ಷ ನಾನು ಸಮುದ್ರದ ಕೆಳಗೆ ಶ್ರೀ ದ್ವಾರಕೆಯನ್ನು ಭೇಟಿ ಮಾಡಲು ಹೋಗಿದ್ದೆ, ಅಲ್ಲಿ ಆಶೀರ್ವಾದ ಪಡೆದುಕೊಂಡೆ. ಈ ವಿಗ್ರಹವನ್ನು ನೋಡಿದಾಗ ನನಗೆ ಏನನಿಸಿತು ಎಂದು ನೀವೇ ಊಹಿಸಬಹುದು. ಈ ದರ್ಶನವು ನನಗೆ ಆಧ್ಯಾತ್ಮಿಕ ಆನಂದ ನೀಡಿದೆ.

ಸ್ನೇಹಿತರೆ,

ಉಡುಪಿಗೆ ಬರುವುದೆಂದರೆ, ನನಗೆ ಇನ್ನೊಂದು ಕಾರಣಕ್ಕಾಗಿ ವಿಶೇಷವಾಗಿದೆ. ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಉತ್ತಮ ಆಡಳಿತದ ಮಾದರಿಯ ಕಾರ್ಯಸ್ಥಳವೇ ಉಡುಪಿ ಆಗಿದೆ. 1968ರಲ್ಲಿ ಉಡುಪಿಯ ಜನರು ನಮ್ಮ ಜನಸಂಘದ ಅಭ್ಯರ್ಥಿ ವಿ.ಎಸ್. ಆಚಾರ್ಯ ಅವರನ್ನು ಇಲ್ಲಿನ ಪುರಸಭೆಗೆ ಆಯ್ಕೆ ಮಾಡಿದರು. ಇದರೊಂದಿಗೆ, ಉಡುಪಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿತು. ಇಂದು ನಾವು ನೋಡುತ್ತಿರುವ ಸ್ವಚ್ಛತಾ ಅಭಿಯಾನವು ರಾಷ್ಟ್ರೀಯ ಆಕರ್ಷಣೆ ಗಳಿಸಿದೆ, ಇದನ್ನು 5 ದಶಕಗಳ ಹಿಂದೆ ಉಡುಪಿ ಅಳವಡಿಸಿಕೊಂಡಿತ್ತು. ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಹೊಸ ಮಾದರಿಯನ್ನು ಒದಗಿಸಲು, 1970ರ ದಶಕದಲ್ಲಿ ಈ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ ಮೊದಲ ಸ್ಥಳ ಉಡುಪಿ. ಇಂದು ಈ ಅಭಿಯಾನಗಳು ದೇಶದ ರಾಷ್ಟ್ರೀಯ ಅಭಿವೃದ್ಧಿಯ ಭಾಗವಾಗಿ ನಮಗೆ ಮಾರ್ಗದರ್ಶನ ನೀಡುತ್ತಿವೆ, ಇದು ರಾಷ್ಟ್ರೀಯ ಆದ್ಯತೆಯಾಗಿದೆ.

 

ಸ್ನೇಹಿತರೆ,

ರಾಮಚರಿತಮಾನಸದಲ್ಲಿ ಹೀಗೆ ಬರೆಯಲಾಗಿದೆ: "ಕಲಿಜುಗ ಕೇವಲ ಹರಿ ಗುನ ಗಾಹಾ. ಗಾವತ ನರ ಪಾವಹಿಂ ಭವ ಥಾಹಾ.” ಅಂದರೆ, "ಕಲಿಯುಗವು ಹರಿಯ ಗುಣಗಳನ್ನು ಮಾತ್ರ ಹಾಡುತ್ತದೆ. ಹಾಡುವ ಮೂಲಕ ಮನುಷ್ಯರು ಜೀವನದ ದಡವನ್ನು ತಲುಪುತ್ತಾರೆ. "ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಗೀತೆಯ ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸಲಾಗುತ್ತಿದೆ. ಆದರೆ 1 ಲಕ್ಷ ಧ್ವನಿಗಳು ಈ ಶ್ಲೋಕಗಳನ್ನು ಏಕಸ್ವರದಲ್ಲಿ ಪಠಿಸಿದಾಗ, ಹಲವಾರು ಜನರು ಗೀತೆಯಂತಹ ಪವಿತ್ರ ಗ್ರಂಥವನ್ನು ಪಠಿಸಿದಾಗ, ಅಂತಹ ದೈವಿಕ ಪದಗಳು ಒಂದೇ ಸ್ಥಳದಲ್ಲಿ ಪ್ರತಿಧ್ವನಿಸಿದಾಗ, ನಮ್ಮ ಮನಸ್ಸು ಮತ್ತು ಮೆದುಳಿಗೆ ಹೊಸ ಕಂಪನ, ಹೊಸ ಬಲ ನೀಡುವ ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿಯೇ ಆಧ್ಯಾತ್ಮಿಕತೆಯ ಶಕ್ತಿ, ಈ ಶಕ್ತಿಯೇ ಸಾಮಾಜಿಕ ಏಕತೆಯ ಶಕ್ತಿ. ಈ ಶಕ್ತಿಯೇ ಆಧ್ಯಾತ್ಮಿಕತೆಯ ಶಕ್ತಿ, ಈ ಶಕ್ತಿಯೇ ಸಾಮಾಜಿಕ ಏಕತೆಯ ಶಕ್ತಿ. ಆದ್ದರಿಂದ  ಇಂದಿನ 1 ಲಕ್ಷ ಕಂಠಗೀತೆ ಪಾರಾಯಣ ಸಂದರ್ಭವು ಅಪಾರ ಶಕ್ತಿಯ ಸಮೂಹವನ್ನು ಅನುಭವಿಸುವ ಅದ್ಭುತಅವಕಾಶವಾಗಿದೆ. ಇದು ಸಾಮೂಹಿಕ ಪ್ರಜ್ಞೆಯ ಶಕ್ತಿ ಚೈತನ್ಯವನ್ನು ಜಗತ್ತಿಗೆ ತೋರಿಸುತ್ತಿದೆ.

ಸ್ನೇಹಿತರೆ,

ಈ ದಿನದಂದು ನಾನು ವಿಶೇಷವಾಗಿ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ವಂದಿಸುತ್ತೇನೆ. ಅವರು ಲಕ್ಷ ಕಂಠಗೀತೆ ಪಾರಾಯಣ ಕಲ್ಪನೆಯನ್ನು ಅಂತಹ ದೈವಿಕ ರೀತಿಯಲ್ಲಿ ಜೀವಂತಗೊಳಿಸಿದ್ದಾರೆ. ವಿಶ್ವಾದ್ಯಂತದ ಜನರಿಗೆ ತಮ್ಮ ಕೈಗಳಿಂದ ಗೀತೆ ಬರೆಯುವ ಕಲ್ಪನೆಯನ್ನು ನೀಡುವ ಮೂಲಕ ಅವರು ಪ್ರಾರಂಭಿಸಿದ ಕೋಟಿ ಗೀತಾ ಲೇಖನ ಯಜ್ಞವು ಸನಾತನ ಸಂಪ್ರದಾಯದ ಜಾಗತಿಕ ಸಾಮೂಹಿಕ ಚಳುವಳಿಯಾಗಿದೆ. ನಮ್ಮ ಯುವಕರು ಭಗವದ್ಗೀತೆಯ ಆತ್ಮ ಮತ್ತು ಬೋಧನೆಗಳೊಂದಿಗೆ ಸಂಪರ್ಕ ಸಾಧಿಸುತ್ತಿರುವ ಈ ವಿಧಾನವು ಸ್ವತಃ ಜೀವಂತ ಸ್ಫೂರ್ತಿಯಾಗಿದೆ. ಶತಮಾನಗಳಿಂದ ಭಾರತವು ವೇದಗಳು, ಉಪನಿಷತ್ತುಗಳು ಮತ್ತು ಧರ್ಮಗ್ರಂಥಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ರವಾನಿಸುವ ಸತ್ಸಂಪ್ರದಾಯ ಹೊಂದಿದೆ. ಈ ಕಾರ್ಯಕ್ರಮವು ಈ ಸಂಪ್ರದಾಯದ ಅರ್ಥಪೂರ್ಣ ಮುಂದುವರಿಕೆಯಾಗಿದೆ, ಮುಂದಿನ ಪೀಳಿಗೆಯನ್ನು ಭಗವದ್ಗೀತೆಯೊಂದಿಗೆ ಸಂಪರ್ಕಿಸುತ್ತದೆ.

 

ಸ್ನೇಹಿತರೆ,

ಇಲ್ಲಿಗೆ ಬರುವ 3 ದಿನಗಳ ಮೊದಲು, ನಾನು ಅಯೋಧ್ಯೆಯಲ್ಲಿದ್ದೆ. ನವೆಂಬರ್ 25ರಂದು ವಿವಾಹ ಪಂಚಮಿಯ ಶುಭ ದಿನದಂದು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಧರ್ಮ ಧ್ವಜ ಸ್ಥಾಪಿಸಲಾಯಿತು. ಅಯೋಧ್ಯೆಯಿಂದ ಉಡುಪಿಯವರೆಗೆ, ಅಸಂಖ್ಯಾತ ರಾಮ ಭಕ್ತರು ಈ ಅತ್ಯಂತ ದೈವಿಕ ಮತ್ತು ಭವ್ಯವಾದ ಉತ್ಸವಕ್ಕೆ ಸಾಕ್ಷಿಯಾದರು. ರಾಮಮಂದಿರ ಚಳುವಳಿಯಲ್ಲಿ ಉಡುಪಿಯ ಮಹತ್ವದ ಪಾತ್ರವನ್ನು ಇಡೀ ದೇಶವೇ ತಿಳಿದಿದೆ. ಧ್ವಜಾರೋಹಣ ಸಮಾರಂಭವು ದಶಕಗಳ ಹಿಂದೆ ಇಡೀ ರಾಮ ಮಂದಿರ ಚಳುವಳಿಗೆ ಪೂಜ್ಯರಾದ ದಿವಂಗತ ವಿಶ್ವೇಶತೀರ್ಥ ಸ್ವಾಮೀಜಿ ನೀಡಿದ ಕೊಡುಗೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ರಾಮಮಂದಿರ ನಿರ್ಮಾಣವು ಉಡುಪಿಗೆ ಮತ್ತೊಂದು ಕಾರಣಕ್ಕಾಗಿ ವಿಶೇಷವಾಗಿದೆ. ಹೊಸ ದೇವಾಲಯದಲ್ಲಿ ಜಗದ್ಗುರು ಮಧ್ವಾಚಾರ್ಯ ಅವರ ಹೆಸರಿನಲ್ಲಿ ಒಂದು ಬೃಹತ್ ದ್ವಾರವನ್ನು ನಿರ್ಮಿಸಲಾಗಿದೆ. ಶ್ರೀರಾಮನ ಕಟ್ಟಾ ಭಕ್ತ ಜಗದ್ಗುರು ಮಧ್ವಾಚಾರ್ಯ ಅವರು, "ರಾಮಾಯ ಶಾಶ್ವತ ಸುವಿಸ್ತೃತ ಷಡ್ಗುಣಾಯ, ಸರ್ವೇಶ್ವರಾಯ ಬಲ-ವೀರ್ಯ ಮಹಾರ್ಣವಾಯ" ಎಂದು ಬರೆದಿದ್ದಾರೆ, ಅಂದರೆ "6 ದೈವಿಕ ಗುಣಗಳಿಂದ ಅಲಂಕರಿಸಲ್ಪಟ್ಟ ಭಗವಾನ್ ಶ್ರೀರಾಮ ಎಲ್ಲರ ಪ್ರಭುವಾಗಿದ್ದ, ಅಪಾರ ಶಕ್ತಿ ಮತ್ತು ಧೈರ್ಯದ ಸಾಗರವಾಗಿದದ್ದ." ಅದಕ್ಕಾಗಿಯೇ ಉಡುಪಿ, ಕರ್ನಾಟಕ ಮತ್ತು ಇಡೀ ದೇಶದ ಜನರಿಗೆ ರಾಮಮಂದಿರ ಸಂಕೀರ್ಣದ ದ್ವಾರಕ್ಕೆ ಅವರ ಹೆಸರಿಡಲಾಗಿದೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ.

ಸ್ನೇಹಿತರೆ,

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಾರತದ ದ್ವೈತ ಸಿದ್ಧಾಂತದ ಸ್ಥಾಪಕರು ಮತ್ತು ವೇದಾಂತದ ದಾರಿದೀಪ. ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳ ವ್ಯವಸ್ಥೆಯು ಸಂಸ್ಥೆಗಳು ಮತ್ತು ಹೊಸ ಸಂಪ್ರದಾಯಗಳ ಸೃಷ್ಟಿಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಇಲ್ಲಿ ಶ್ರೀ ಕೃಷ್ಣನ ಮೇಲಿನ ಭಕ್ತಿ, ವೇದಾಂತ ಜ್ಞಾನ ಮತ್ತು ಸಾವಿರಾರು ಜನರಿಗೆ ಆಹಾರ ಬಡಿಸುವ ಸಂಕಲ್ಪವಿದೆ. ಒಂದು ರೀತಿಯಲ್ಲಿ, ಈ ಸ್ಥಳವು ತೀರ್ಥಯಾತ್ರೆಯ ಸ್ಥಳವಾಗಿದೆ, ಜ್ಞಾನ, ಭಕ್ತಿ ಮತ್ತು ಸೇವೆಯ ಸಂಗಮವಾಗಿದೆ.

ಜಗದ್ಗುರು ಮಧ್ವಾಚಾರ್ಯರು ಜನಿಸಿದ ಸಮಯದಲ್ಲಿ, ಭಾರತವು ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸುತ್ತಿತ್ತು. ಆ ಅವಧಿಯಲ್ಲಿ ಸಮಾಜದ ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ನಂಬಿಕೆಯು ಸಂಪರ್ಕಿಸಬಹುದಾದ ಭಕ್ತಿಯ ಮಾರ್ಗವನ್ನು ಅವರು ತೋರಿಸಿದರು. ಈ ಮಾರ್ಗದರ್ಶನದಿಂದಾಗಿ, ಇಂದಿಗೂ ಹಲವಾರು ಶತಮಾನಗಳ ನಂತರ ಅವರು ಸ್ಥಾಪಿಸಿದ ಮಠಗಳು ಪ್ರತಿದಿನ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿವೆ. ಅವರ ಸ್ಫೂರ್ತಿಯಿಂದಾಗಿ, ದ್ವೈತ ಸಿದ್ಧಾಂತದಲ್ಲಿ ಅಂತಹ ಅನೇಕ ಮಹಾನ್ ವ್ಯಕ್ತಿಗಳು ಹುಟ್ಟಿದ್ದಾರೆ.  ಅವರು ಯಾವಾಗಲೂ ಧರ್ಮ, ಸೇವೆ ಮತ್ತು ಸಮಾಜ ನಿರ್ಮಾಣದ ಕೆಲಸವನ್ನು ಮುಂದುವರೆಸಿದ್ದಾರೆ. ಸಾರ್ವಜನಿಕ ಸೇವೆಯ ಈ ಶಾಶ್ವತ ಸಂಪ್ರದಾಯವು ಉಡುಪಿಯ ಶ್ರೇಷ್ಠ ಪರಂಪರೆಯಾಗಿದೆ.

ಸ್ನೇಹಿತರೆ,

ಜಗದ್ಗುರು ಮಧ್ವಾಚಾರ್ಯ ಅವರ ಪರಂಪರೆ ಹರಿದಾಸ ಸಂಪ್ರದಾಯಕ್ಕೆ ಶಕ್ತಿ ತುಂಬಿತು. ಪುರಂದರ ದಾಸರು ಮತ್ತು ಕನಕ ದಾಸರಂತಹ ಮಹಾನ್ ಪುರುಷರು ಸರಳ, ಆಸಕ್ತಿದಾಯಕ ಮತ್ತು ಸುಲಭವಾದ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ಭಕ್ತಿಯನ್ನು ಹರಡಿದರು. ಅವರ ಸಂದೇಶ ಸಂಯೋಜನೆಗಳು ಪ್ರತಿಯೊಬ್ಬ ಹೃದಯವನ್ನು ತಲುಪಿದವು. ಬಡವರಲ್ಲಿ ಬಡವರನ್ನು ಸಹ ಧರ್ಮ ಮತ್ತು ಶಾಶ್ವತ ಚಿಂತನೆಗೆ ಸಂಪರ್ಕಿಸಿದವು. ಈ ಸಂಯೋಜನೆಗಳು ಇಂದಿನ ಪೀಳಿಗೆಯಲ್ಲೂ ಪ್ರಸ್ತುತವಾಗಿವೆ. ಇಂದಿಗೂ ಸಾಮಾಜಿಕ ಮಾಧ್ಯಮದ ರೀಲ್‌ಗಳಲ್ಲಿ ಶ್ರೀ ಪುರಂದರದಾಸರು ರಚಿಸಿದ ಚಂದ್ರಚೂಡ್ ಶಿವಶಂಕರ್ ಪಾರ್ವತಿಯನ್ನು ಕೇಳಿದ ನಂತರ ನಮ್ಮ ಯುವಕರು ವಿಭಿನ್ನ ಮನಸ್ಥಿತಿಗೆ ಬರುತ್ತಾರೆ. ಇಂದಿಗೂ ಉಡುಪಿಯಲ್ಲಿರುವ ನನ್ನಂತಹ ಭಕ್ತ ಶ್ರೀ ಕೃಷ್ಣನನ್ನು ಸಣ್ಣ ಕಿಟಕಿಯ ಮೂಲಕ ನೋಡಿದಾಗ, ಕನಕದಾಸರ ಭಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶವಿದೆ. ನಾನು ತುಂಬಾ ಅದೃಷ್ಟಶಾಲಿ, ಇದಕ್ಕೂ ಮೊದಲು ನನಗೆ ಈ ಅದೃಷ್ಟ ಸಿಗುತ್ತಿದೆ. ಕನಕದಾಸರಿಗೆ ನನ್ನ ಗೌರವಗಳನ್ನು ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ.

 

ಸ್ನೇಹಿತರೆ,

ಭಗವಾನ್ ಶ್ರೀ ಕೃಷ್ಣನ ಬೋಧನೆಗಳು ಎಲ್ಲಾ ಯುಗಗಳಿಗೂ ಪ್ರಾಯೋಗಿಕವಾಗಿವೆ. ಗೀತೆಯ ಮಾತುಗಳು ವ್ಯಕ್ತಿಗೆ ಮಾತ್ರವಲ್ಲ, ರಾಷ್ಟ್ರದ ನೀತಿಗೂ ಮಾರ್ಗದರ್ಶನ ನೀಡುತ್ತವೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ್ದಾನೆ: ಸರ್ವಭೂತಹಿತೇ ರತಾ: ಗೀತೆಯಲ್ಲಿಯೇ ಹೇಳಲಾಗಿದೆ: ಲೋಕ ಸಂಗ್ರಹಮ್ ಏವಾಪಿ, ಸಂಪಶ್ಯನ್ ಕರ್ತುಮ್! ಈ ಎರಡೂ ವಚನಗಳ ತಾತ್ಪರ್ಯ ಏನೆಂದರೆ, ನಾವು ಜನಕಲ್ಯಾಣಕ್ಕಾಗಿ ದುಡಿಯಬೇಕು. ತಮ್ಮ ಜೀವನದುದ್ದಕ್ಕೂ ಜಗದ್ಗುರು ಮಧ್ವಾಚಾರ್ಯರು ಈ ಭಾವನೆಗಳನ್ನು ಸ್ವೀಕರಿಸುವ ಮೂಲಕ ಭಾರತದ ಏಕತೆಯನ್ನು ಬಲಪಡಿಸಿದರು.

ಸ್ನೇಹಿತರೆ,

ಇಂದು ನಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸರ್ವಜನ್ ಹಿತಾಯ, ಸರ್ವಜನ್ ಸುಖಾಯ ನೀತಿಗಳು ಶ್ರೀ ಕೃಷ್ಣನ ಈ ಶ್ಲೋಕಗಳಿಂದ ಪ್ರೇರಿತವಾಗಿವೆ. ಶ್ರೀ ಕೃಷ್ಣನು ಬಡವರಿಗೆ ಸಹಾಯ ಮಾಡುವ ಮಂತ್ರವನ್ನು ನಮಗೆ ನೀಡಿದ್ದಾನೆ, ಈ ಮಂತ್ರದ ಸ್ಫೂರ್ತಿ ಆಯುಷ್ಮಾನ್ ಭಾರತ್ ಮತ್ತು ಪಿಎಂ ಆವಾಸ್‌ನಂತಹ ಯೋಜನೆಗಳಿಗೆ ಆಧಾರವಾಗುತ್ತದೆ. ಶ್ರೀ ಕೃಷ್ಣನು ಮಹಿಳಾ ಸುರಕ್ಷತೆ ಮತ್ತು ಮಹಿಳಾ ಸಬಲೀಕರಣದ ಜ್ಞಾನವನ್ನು ನಮಗೆ ಕಲಿಸುತ್ತಾನೆ, ಈ ಜ್ಞಾನದಿಂದ ಪ್ರೇರಿತನಾಗಿ ದೇಶವು ನಾರಿಶಕ್ತಿ ವಂದನ ಕಾಯ್ದೆಯ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಶ್ರೀ ಕೃಷ್ಣನು ಎಲ್ಲರ ಕಲ್ಯಾಣದ ಬಗ್ಗೆ ನಮಗೆ ಕಲಿಸುತ್ತಾನೆ, ಇದು ಲಸಿಕೆ ಮೈತ್ರಿ, ಸೌರಶಕ್ತಿ ಒಕ್ಕೂಟ ಮತ್ತು ವಸುಧೈವ ಕುಟುಂಬಕಂ ಎಂಬ ನಮ್ಮ ನೀತಿಗಳ ಆಧಾರವಾಗುತ್ತದೆ.

ಸ್ನೇಹಿತರೆ,

ಶ್ರೀ ಕೃಷ್ಣನು ಯುದ್ಧಭೂಮಿಯಲ್ಲಿ ಗೀತೆಯ ಸಂದೇಶ ನೀಡಿದ. ಶಾಂತಿ ಮತ್ತು ಸತ್ಯದ ಸ್ಥಾಪನೆಗೆ ದಬ್ಬಾಳಿಕೆ ಮಾಡುವವರ ​​ಅಂತ್ಯ ಅತ್ಯಗತ್ಯ ಎಂದು ಭಗವದ್ಗೀತೆ ನಮಗೆ ಕಲಿಸುತ್ತದೆ. ಇದು ನಮ್ಮ ರಾಷ್ಟ್ರೀಯ ಭದ್ರತಾ ನೀತಿಯ ಮೂಲತತ್ವವಾಗಿದೆ. ನಾವು "ವಸುಧೈವ ಕುಟುಂಬಕಂ" ಎಂದು ಘೋಷಿಸುತ್ತೇವೆ, "ಧರ್ಮೋ ರಕ್ಷತಿ ರಕ್ಷಿತ:" ಎಂಬ ಮಂತ್ರವನ್ನು ಸಹ ಪುನರಾವರ್ತಿಸುತ್ತೇವೆ. ನಾವು ಕೆಂಪುಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸುತ್ತೇವೆ, ಅದೇ ಕೋಟೆಯಿಂದ "ಮಿಷನ್ ಸುದರ್ಶನ ಚಕ್ರ" ಘೋಷಿಸುತ್ತೇವೆ. ಮಿಷನ್ ಸುದರ್ಶನ ಚಕ್ರ ಎಂದರೆ ದೇಶದ ಪ್ರಮುಖ ಸ್ಥಳಗಳು, ಕೈಗಾರಿಕಾ ಮತ್ತು ಸಾರ್ವಜನಿಕ ವಲಯಗಳ ಸುತ್ತಲೂ ಭದ್ರತಾ ಗೋಡೆ ನಿರ್ಮಿಸುವುದು, ಅದನ್ನು ಶತ್ರುಗಳು ಭೇದಿಸಲು ಸಾಧ್ಯವಿಲ್ಲ. ಶತ್ರು ಧೈರ್ಯ ಮಾಡಿದರೆ, ನಮ್ಮ ಸುದರ್ಶನ ಚಕ್ರವು ಅವುಗಳನ್ನು ನಾಶ ಮಾಡುತ್ತದೆ.

 

ಸ್ನೇಹಿತರೆ,

ಆಪರೇಷನ್ ಸಿಂದೂರ್‌ನಲ್ಲಿ ನಮ್ಮ ಈ ಸಂಕಲ್ಪವನ್ನು ದೇಶವು ಕಂಡಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅನೇಕ ದೇಶವಾಸಿಗಳು ತಮ್ಮ ಪ್ರಾಣ ಕಳೆದುಕೊಂಡರು. ಕರ್ನಾಟಕದ ನನ್ನ ಸಹೋದರ ಸಹೋದರಿಯರು ಈ ದಾಳಿಯಲ್ಲಿ ಜೀವ ಕಳೆದುಕೊಂಡರು. ಆದರೆ ಮೊದಲು, ಅಂತಹ ಭಯೋತ್ಪಾದಕ ದಾಳಿಗಳು ನಡೆದಾಗ, ಸರ್ಕಾರಗಳು ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ಇದು ನವ ಭಾರತ, ಅದು ಯಾರಿಗೂ ತಲೆ ಬಾಗುವುದಿಲ್ಲ, ತನ್ನ ನಾಗರಿಕರನ್ನು ರಕ್ಷಿಸುವ ಕರ್ತವ್ಯದಿಂದ ನುಣುಚಿಕೊಳ್ಳುವುದಿಲ್ಲ. ಶಾಂತಿಯನ್ನು ಹೇಗೆ ಸ್ಥಾಪಿಸುವುದು ಎಂಬುದು ನಮಗೆ ತಿಳಿದಿದೆ, ಶಾಂತಿಯನ್ನು ಹೇಗೆ ರಕ್ಷಿಸುವುದು ಎಂಬುದು ಸಹ ನಮಗೆ ತಿಳಿದಿದೆ.

ಸ್ನೇಹಿತರೆ,

ನಮ್ಮ ಕರ್ತವ್ಯಗಳು ಮತ್ತು ನಮ್ಮ ಜೀವನ ನಿರ್ಣಯಗಳ ಬಗ್ಗೆ ಭಗವದ್ಗೀತೆ ನಮಗೆ ಅರಿವು ಮೂಡಿಸುತ್ತದೆ. ಈ ಸ್ಫೂರ್ತಿಯೊಂದಿಗೆ ಇಂದು ನಾನು ನಿಮ್ಮೆಲ್ಲರಿಂದ ಕೆಲವು ನಿರ್ಣಯಗಳನ್ನು ಕೋರುತ್ತೇನೆ. 9 ನಿರ್ಣಯ ಅಥವಾ ಸಂಕಲ್ಪಗಳಂತೆ ಈ ಮನವಿಗಳು ನಮ್ಮ ವರ್ತಮಾನ ಮತ್ತು ಭವಿಷ್ಯಕ್ಕೆ ಅತ್ಯಗತ್ಯ. ಸಂತ ಸಮುದಾಯವು ಈ ಮನವಿಗಳಿಗೆ ತನ್ನ ಆಶೀರ್ವಾದ ನೀಡಿದಾಗ, ಯಾರೂ ಸಹ ಅವುಗಳು ಜನಸಾಮಾನ್ಯರನ್ನು ತಲುಪುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ.

ಸ್ನೇಹಿತರೆ,

ನಮ್ಮ ಮೊದಲ ನಿರ್ಣಯ ಅಥವಾ ಸಂಕಲ್ಪವೆಂದರೆ ನಾವು ನೀರನ್ನು ಸಂರಕ್ಷಿಸಬೇಕು, ನೀರನ್ನು ಉಳಿಸಬೇಕು, ನದಿಗಳನ್ನು ಉಳಿಸಬೇಕು. ನಮ್ಮ 2ನೇ ನಿರ್ಣಯವೆಂದರೆ ನಾವು ಸಸಿಗಳನ್ನು ನೆಡಬೇಕು. 'ತಾಯಿಯ ಹೆಸರಿನಲ್ಲಿ ಒಂದು ಮರ' ಅಭಿಯಾನವು ದೇಶಾದ್ಯಂತ ವೇಗ ಪಡೆಯುತ್ತಿದೆ. ಎಲ್ಲಾ ಮಠಗಳ ಶಕ್ತಿ ಈ ಅಭಿಯಾನಕ್ಕೆ ಸೇರಿದರೆ, ಅದರ ಪರಿಣಾಮವು ಹೆಚ್ಚು ವ್ಯಾಪಕವಾಗಿರುತ್ತದೆ. 3ನೇ ನಿರ್ಣಯವೆಂದರೆ ನಾವು ದೇಶದಲ್ಲಿ ಕನಿಷ್ಠ ಒಬ್ಬ ಬಡವನ ಜೀವನ ಸುಧಾರಿಸಲು ಪ್ರಯತ್ನಿಸಬೇಕು. ಈ ಬಗ್ಗೆ ನಾನು ಹೆಚ್ಚಾಗಿ ಹೇಳುವುದಿಲ್ಲ. 4ನೇ ನಿರ್ಣಯವು ಸ್ವದೇಶಿಯ ಕಲ್ಪನೆಯಾಗಿರಬೇಕು. ಜವಾಬ್ದಾರಿಯುತ ನಾಗರಿಕನಾಗಿ, ನಾವೆಲ್ಲರೂ ಸ್ವದೇಶಿಯನ್ನು ಅಳವಡಿಸಿಕೊಳ್ಳಬೇಕು. ಇಂದು ಭಾರತವು ಸ್ವಾವಲಂಬಿ ಭಾರತ ಮತ್ತು ಸ್ವದೇಶಿಯ ಮಂತ್ರದ ಮೇಲೆ ಮುಂದುವರಿಯುತ್ತಿದೆ. ನಮ್ಮ ಆರ್ಥಿಕತೆ, ನಮ್ಮ ಕೈಗಾರಿಕೆ, ನಮ್ಮ ತಂತ್ರಜ್ಞಾನ, ಎಲ್ಲವೂ ತಮ್ಮ ಸ್ವಂತ ಕಾಲಿನ ಮೇಲೆ ದೃಢವಾಗಿ ನಿಂತಿವೆ. ಆದ್ದರಿಂದ, ನಾವು ಗಟ್ಟಿಯಾಗಿ ಹೇಳುತ್ತೇನೆ - ಸ್ಥಳೀಯರಿಗೆ ಸ್ಥಳೀಯವಾಗಿ ಉತ್ಪಾದಿಸಿ – ವೋಕಲ್ ಫಾರ್ ಲೋಕಲ್.

 

ಸ್ನೇಹಿತರೆ,

ನಮ್ಮ 5ನೇ ಸಂಕಲ್ಪವಾಗಿ, ನಾವು ನೈಸರ್ಗಿಕ ಕೃಷಿ ಉತ್ತೇಜಿಸಬೇಕು. ನಮ್ಮ 6ನೇ ಸಂಕಲ್ಪ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಶ್ರೀಅನ್ನ ಅಥವಾ ಸಿರಿಧಾನ್ಯ ಬೆಳೆಯುವುದು, ನಮ್ಮ ಆಹಾರದಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಮಾಡುವುದು. ನಮ್ಮ 7ನೇ ಸಂಕಲ್ಪವೆಂದರೆ ನಾವು ಯೋಗವನ್ನು ಅಳವಡಿಸಿಕೊಳ್ಳುವುದು ಮತ್ತು ಅದನ್ನು ನಮ್ಮ ಜೀವನದ ಭಾಗವಾಗಿಸುವುದು. 8ನೇ ಸಂಕಲ್ಪ: ಹಸ್ತಪ್ರತಿಗಳ ಸಂರಕ್ಷಣೆಗೆ ಸಹಕರಿಸುವುದು. ನಮ್ಮ ದೇಶದ ಪ್ರಾಚೀನ ಜ್ಞಾನದ ಬಹುಪಾಲು ಹಸ್ತಪ್ರತಿಗಳಲ್ಲಿ ಅಡಗಿದೆ. ಈ ಜ್ಞಾನವನ್ನು ಸಂರಕ್ಷಿಸಲು, ಕೇಂದ್ರ ಸರ್ಕಾರವು ಜ್ಞಾನ ಭಾರತಂ ಮಿಷನ್‌ನಲ್ಲಿ ಕೆಲಸ ಮಾಡುತ್ತಿದೆ. ನಿಮ್ಮ ಬೆಂಬಲವು ಈ ಅಮೂಲ್ಯ ಪರಂಪರೆ ಉಳಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ನಮ್ಮ ಪರಂಪರೆಗೆ ಸಂಬಂಧಿಸಿದ ದೇಶದಲ್ಲಿ ಕನಿಷ್ಠ 25 ಸ್ಥಳಗಳಿಗೆ ನಾವು ಭೇಟಿ ನೀಡುತ್ತೇವೆ ಎಂಬ 9ನೇ ಸಂಕಲ್ಪವನ್ನು ನೀವು ಸ್ವೀಕರಿಸಬೇಕು. ನಾನು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇನೆ. ಮೂರ್ನಾಲ್ಕು ದಿನಗಳ ಹಿಂದೆ, ಕುರುಕ್ಷೇತ್ರದಲ್ಲಿ ಮಹಾಭಾರತ ಅನುಭವ ಕೇಂದ್ರ ಉದ್ಘಾಟಿಸಲಾಯಿತು. ಈ ಕೇಂದ್ರಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ಜೀವನವನ್ನು ಅನುಭವಿಸಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಪ್ರತಿ ವರ್ಷ, ಶ್ರೀಕೃಷ್ಣ ಮತ್ತು ತಾಯಿ ರುಕ್ಮಿಣಿಯ ವಿವಾಹಕ್ಕೆ ಮೀಸಲಾಗಿರುವ ಮಾಧವಪುರ ಜಾತ್ರೆ ಗುಜರಾತ್‌ನಲ್ಲಿ ನಡೆಯುತ್ತದೆ. ದೇಶದಾದ್ಯಂತ, ವಿಶೇಷವಾಗಿ ಈಶಾನ್ಯದಿಂದ ಅನೇಕ ಜನರು ಈ ಜಾತ್ರೆಗೆ ಬರುತ್ತಾರೆ. ಮುಂದಿನ ವರ್ಷ ನೀವೂ ಸಹ ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಬೇಕು.

 

ಸ್ನೇಹಿತರೆ,

ಭಗವಾನ್ ಶ್ರೀ ಕೃಷ್ಣನ ಸಂಪೂರ್ಣ ಜೀವನ, ಗೀತೆಯ ಪ್ರತಿಯೊಂದು ಅಧ್ಯಾಯವು ಕರ್ಮ, ಕರ್ತವ್ಯ ಮತ್ತು ಯೋಗಕ್ಷೇಮದ ಸಂದೇಶ ಸಾರುತ್ತದೆ ನಮಗೆ ಭಾರತೀಯರಿಗೆ, 2047ರ ಅವಧಿಯು ಅಮೃತ ಕಾಲ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಕರ್ತವ್ಯದ ಅವಧಿಯೂ ಆಗಿದೆ. ಹಾಗಾಗಿ, ದೇಶದ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಭಾರತೀಯನಿಗೆ ತನ್ನದೇ ಆದ ಜವಾಬ್ದಾರಿ ಇದೆ. ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಸಂಸ್ಥೆಗೆ ತನ್ನದೇ ಆದ ಕರ್ತವ್ಯವಿದೆ. ಈ ಕರ್ತವ್ಯಗಳನ್ನು ಪೂರೈಸುವಲ್ಲಿ ಕರ್ನಾಟಕದ ಶ್ರಮಶೀಲ ಜನರ ಪಾತ್ರ ಬಹಳ ದೊಡ್ಡದಾಗಿದೆ. ನಾವು ಮಾಡುವ ಪ್ರತಿಯೊಂದು ಪ್ರಯತ್ನವೂ ದೇಶಕ್ಕಾಗಿರಬೇಕು. ಈ ಕರ್ತವ್ಯ ಪ್ರಜ್ಞೆಯನ್ನು ಅನುಸರಿಸಿ ಅಭಿವೃದ್ಧಿ ಹೊಂದಿದ ಕರ್ನಾಟಕ, ಅಭಿವೃದ್ಧಿ ಹೊಂದಿದ ಭಾರತದ ಕನಸು ಸಹ ನನಸಾಗುತ್ತದೆ. ಈ ಆಶಯದೊಂದಿಗೆ, ಉಡುಪಿಯ ಪವಿತ್ರ ಭೂಮಿಯಿಂದ ಹೊರಹೊಮ್ಮುವ ಈ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ನಮ್ಮ ಸಂಕಲ್ಪದಲ್ಲಿ ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ. ಮತ್ತೊಮ್ಮೆ, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು.

ಜೈ ಶ್ರೀ ಕೃಷ್ಣ!

ಜೈ ಶ್ರೀ ಕೃಷ್ಣ!

ಜೈ ಶ್ರೀ ಕೃಷ್ಣ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s health coverage expands rapidly, insurance reaches nearly half the population: Govt

Media Coverage

India’s health coverage expands rapidly, insurance reaches nearly half the population: Govt
NM on the go

Nm on the go

Always be the first to hear from the PM. Get the App Now!
...
Prime Minister pays homage to Adi Shankaracharya
April 21, 2026

The Prime Minister, Shri Narendra Modi, paid tributes to one of India’s greatest spiritual luminaries, Adi Shankaracharya, on his Jayanti today. Shri Modi remarked that his profound teachings, thoughts and philosophy of Advaita Vedanta continue to guide innumerable people globally. And his efforts to revitalise spiritual thought and establish spiritual centres across the nation remain a lasting inspiration."May his wisdom continue to illuminate our path and strengthen our commitment to truth, compassion and collective well-being", Shri Modi added.

The Prime Minister posted on X:

"On the sacred occasion of Adi Shankaracharya Jayanti, paying homage to one of India’s greatest spiritual luminaries. His profound teachings, thoughts and philosophy of Advaita Vedanta continue to guide innumerable people globally. He emphasised harmony, discipline and the oneness of all existence. His efforts to revitalise spiritual thought and establish spiritual centres across the nation remain a lasting inspiration. May his wisdom continue to illuminate our path and strengthen our commitment to truth, compassion and collective well-being."