ಉತ್ತರಪ್ರದೇಶದಲ್ಲಿ ಎಚ್‌ಸಿಎಲ್-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸೌಲಭ್ಯದ ಸ್ಥಾಪನೆಯು ತಾಂತ್ರಿಕ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಾಗಿದೆ, ಇದು ಜಾಗತಿಕ ಚಿಪ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ಭಾರತವು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡರಲ್ಲೂ ಏಕಕಾಲದಲ್ಲಿ ಮುನ್ನಡೆಯುತ್ತಿದೆ; ಉತ್ತರ ಪ್ರದೇಶವು ದೇಶದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ: ಪ್ರಧಾನಮಂತ್ರಿ
ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್‌ನ ಈ ಹೊಸ ಕಾರ್ಖಾನೆಯು ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಉತ್ತರ ಪ್ರದೇಶದ ನವೀನ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ: ಪ್ರಧಾನಮಂತ್ರಿ
ಈ ದಶಕವು ಭಾರತದ ಟೆಕೇಡ್ ಆಗಿದೆ; ಭಾರತದ ಇಂದಿನ ತಾಂತ್ರಿಕ ಪ್ರಗತಿಗಳು 21 ನೇ ಶತಮಾನದಲ್ಲಿ ನಮ್ಮ ಬಲವಾದ ಅಡಿಪಾಯವನ್ನು ರೂಪಿಸುತ್ತವೆ: ಪ್ರಧಾನಮಂತ್ರಿ
ಚಿಪ್ ತಯಾರಿಕೆಯಲ್ಲಿ ಭಾರತವು ಸ್ವಾವಲಂಬನೆಯನ್ನು ಗುರಿಯಾಗಿಸಿಕೊಂಡಿದೆ; ದೃಢವಾದ ದೇಶೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನ ಹರಿಸಲಾಗಿದೆ: ಪ್ರಧಾನಮಂತ್ರಿ
ಪ್ರಜಾಪ್ರಭುತ್ವ ಭಾರತವು ವಿಶ್ವಾಸಾರ್ಹ ಜಾಗತಿಕ ಪಾಲುದಾರ; ನಮ್ಮ ಭಾಗವಹಿಸುವಿಕೆಯು ಜಾಗತಿಕ ಮೌಲ್ಯ ಸರಪಳಿಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ಇಂದು ಜಗತ್ತು ಭಾರತವನ್ನು ತಂತ್ರಜ್ಞಾನ ಭವಿಷ್ಯದ ಕೇಂದ್ರವಾಗಿ ನೋಡುತ್ತಿದೆ: ಪ್ರಧಾನಮಂತ್ರಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜಿ, ಜಿತಿನ್ ಪ್ರಸಾದ ಜಿ, ಉತ್ತರ ಪ್ರದೇಶ ಸರ್ಕಾರದ ಎಲ್ಲಾ ಸಚಿವರೆ, ಫಾಕ್ಸ್‌ಕಾನ್‌ ಸೆಮಿಕಂಡಕ್ಟರ್ ಬಿಸಿನೆಸ್ ಗ್ರೂಪ್‌ ಅಧ್ಯಕ್ಷರಾದ ಬಾಬ್ ಚೆನ್, ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷರಾದ ರೋಶ್ನಿ ನಾಡರ್ ಜಿ, ಕಾರ್ಯಕ್ರಮದಲ್ಲಿ ಹಾಜರಿರುವ ಉದ್ಯಮ ಮುಖಂಡರೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಇಂದು ಭಾರತ ಅಭಿವೃದ್ಧಿ ಹೊಂದುವ ಗುರಿಯತ್ತ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ನಿಲ್ಲಲು ಅಥವಾ ವಿರಾಮ ಪಡೆಯಲು ಭಾರತಕ್ಕೀಗ ಸಮಯವಿಲ್ಲ ನಾನು ಕೆಂಪು ಕೋಟೆಯಿಂದ ಹೇಳಿದ್ದೇನೆ. 2026ರ ವರ್ಷದ ಆರಂಭದಿಂದಲೂ ಭಾರತ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಜನವರಿ 12ರಂದು ದೇಶದ ಲಕ್ಷಾಂತರ ಯುವಕರು ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಸೇರಿದ್ದರು. ಜನವರಿ 16ರಂದು ನಾವು ರಾಷ್ಟ್ರೀಯ ಸ್ಟಾರ್ಟಪ್ ದಿನ ಆಚರಿಸಿದ್ದೇವೆ, ಭಾರತದ ಸ್ಟಾರ್ಟಪ್ ಕ್ರಾಂತಿಗೆ ಹೊಸ ಶಕ್ತಿ ನೀಡಿದ್ದೇವೆ, ಜನವರಿಯಲ್ಲೇ ಜರುಗಿದ ಭಾರತ ಇಂಧನ ಶೃಂಗಸಭೆಯಲ್ಲಿ ಭಾರತವು ತನ್ನ ಸಾಮರ್ಥ್ಯದಿಂದಲೇ ವಿಶ್ವದ ಗಮನ ಸೆಳೆಯಿತು. ನಂತರ ವಿಕಸಿತ ಭಾರತಕ್ಕೆ ಹೊಸ ಆವೇಗ ನೀಡುವ ಬಜೆಟ್ ಮಂಡಿಸಲಾಯಿತು, ಈಗ ಈ ವಾರವೂ ಭಾರತಕ್ಕೆ ಐತಿಹಾಸಿಕ ಎಂಬುದು ಸಾಬೀತಾಗಿದೆ. ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ವಿಶ್ವದ ಹಲವು ದೇಶಗಳ ಮುಖ್ಯಸ್ಥರು, ತಂತ್ರಜ್ಞಾನ ಜಗತ್ತಿನ ದಿಗ್ಗಜರು ಎಲ್ಲರೂ ದೆಹಲಿಯಲ್ಲಿ ಒಟ್ಟುಗೂಡಿದರು. ಈ ಶೃಂಗಸಭೆಯಲ್ಲಿ ಜಗತ್ತು ಭಾರತದ ಎಐ ಸಾಮರ್ಥ್ಯವನ್ನು ಕಂಡಿತು, ನಮ್ಮ ದೃಷ್ಟಿಕೋನವನ್ನು ಅರ್ಥ ಮಾಡಿಕೊಂಡಿತು ಮತ್ತು ಮೆಚ್ಚಿಕೊಂಡಿತು.

ಸ್ನೇಹಿತರೆ,

ಈ ಶೃಂಗಸಭೆ ನಿನ್ನೆಯಷ್ಟೇ ಕೊನೆಗೊಂಡಿತು, ಇದೀಗ ನಾವು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಒಂದು ದೊಡ್ಡ ಕಾರ್ಯಕ್ರಮದ ಭಾಗವಾಗುತ್ತಿದ್ದೇವೆ.

ಸ್ನೇಹಿತರೆ,

ಆಧುನಿಕ ಜಗತ್ತನ್ನು ನಡೆಸಲು ಅಗತ್ಯವಿರುವ ಸಂಸ್ಕರಣಾ ಶಕ್ತಿಯಲ್ಲಿ, ಭಾರತವು ಈಗ ವಿಶ್ವದ ಉನ್ನತ ದೇಶಗಳೊಂದಿಗೆ ಸೇರಲು ಪ್ರಯತ್ನಿಸುತ್ತಿದೆ. ಅಂದರೆ, ಭಾರತವು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡೂ ರಂಗಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ. ಉತ್ತರ ಪ್ರದೇಶವು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ದೊಡ್ಡ ಕೇಂದ್ರವಾಗಲಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್‌ನ ಈ ಹೊಸ ಕಾರ್ಖಾನೆಯು ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಉತ್ತರಪ್ರದೇಶದ ಹೊಸ ಗುರುತನ್ನು ಮತ್ತಷ್ಟು ಬಲಪಡಿಸುತ್ತದೆ. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ಇದು ನನಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ. ಈ ಸೆಮಿಕಂಡಕ್ಟರ್ ಕಾರ್ಖಾನೆಯಿಂದಾಗಿ, ಉತ್ತರ ಪ್ರದೇಶದ ಯುವಕರು ಮತ್ತು ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುತ್ತಾರೆ. ಏಕೆಂದರೆ ಸೆಮಿಕಂಡಕ್ಟರ್ ಘಟಕ ಎಲ್ಲಿಗೆ ಬರುತ್ತದೆಯೋ, ಅಲ್ಲಿ ವಿನ್ಯಾಸ ಮನೆಗಳು ಬರುತ್ತವೆ, ಸಂಶೋಧನಾ & ಅಭಿವೃದ್ಧಿ ಕೇಂದ್ರಗಳು ಬರುತ್ತವೆ, ನವೋದ್ಯಮ ಪರಿಸರ ವ್ಯವಸ್ಥೆಗಳು ರೂಪುಗೊಳ್ಳುತ್ತವೆ. ಇದೆಲ್ಲವೂ ಈಗ ಉತ್ತರಪ್ರದೇಶದಲ್ಲೇ ಆಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಮತ್ತು ಅವರ ಇಡೀ ತಂಡ ಮತ್ತು ಇಲ್ಲಿನ ಜನರನ್ನು ನಾನು ಅಭಿನಂದಿಸುತ್ತೇನೆ.

 

ಸ್ನೇಹಿತರೆ,

ನಾನು ಆಗಾಗ್ಗೆ ಒಂದು ವಿಷಯ ಹೇಳುತ್ತಿರುತ್ತೇನೆ, ಈ ದಶಕವು ಭಾರತದ ತಂತ್ರಜ್ಞಾನ ಯುಗ ಆಗಿದೆ. ಈ ದಶಕದಲ್ಲಿ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಏನು ಮಾಡುತ್ತಿದೆಯೋ ಅದು 21ನೇ ಶತಮಾನದಲ್ಲಿ ನಮ್ಮ ಸಾಮರ್ಥ್ಯಕ್ಕೆ ಭದ್ರ ಅಡಿಪಾಯವಾಗುತ್ತದೆ. ಅದು ಹಸಿರು ಶಕ್ತಿಯಾಗಿರಲಿ, ಬಾಹ್ಯಾಕಾಶ ತಂತ್ರಜ್ಞಾನವಾಗಿರಲಿ, ಡಿಜಿಟಲ್ ತಂತ್ರಜ್ಞಾನವಾಗಿರಲಿ, ಉತ್ಪಾದನಾ ತಂತ್ರಜ್ಞಾನವಾಗಿರಲಿ, ಅಥವಾ ಕೃತಕ ಬುದ್ಧಿಮತ್ತೆಯಾಗಿರಲಿ, ಇಂದು ಭಾರತವು ಮಾನವತೆಯ ಭವಿಷ್ಯ ನಿರ್ಧರಿಸುವ ಪ್ರತಿಯೊಂದು ತಂತ್ರಜ್ಞಾನದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಭಾರತದಲ್ಲಿ ಬಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೂ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತವು ಸೆಮಿಕಂಡಕ್ಟರ್ ವಲಯದಲ್ಲಿ ತನ್ನ ಪ್ರಯಾಣವನ್ನು ತಡವಾಗಿ ಪ್ರಾರಂಭಿಸಿರಬಹುದು, ಆದರೆ ಇಂದು ನಾವು ಅತ್ಯಂತ ವೇಗವಾಗಿ ಮುಂದುವರಿಯುತ್ತಿದ್ದೇವೆ. ತನ್ನ ಸೆಮಿಕಂಡಕ್ಟರ್ ಮಿಷನ್ ಅಡಿ, ಭಾರತವು ಇಲ್ಲಿಯವರೆಗೆ 10 ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್ ಯೋಜನೆಗಳನ್ನು ಅನುಮೋದಿಸಿದೆ. ಇವುಗಳಲ್ಲಿ 4 ಘಟಕಗಳು ಶೀಘ್ರದಲ್ಲೇ ತಮ್ಮ ಉತ್ಪಾದನೆ  ಪ್ರಾರಂಭಿಸಲಿವೆ.

ಸ್ನೇಹಿತರೆ,

ನಿಮಗೆಲ್ಲರಿಗೂ ತಿಳಿದಿದೆ, 20ನೇ ಶತಮಾನದಲ್ಲಿ ತೈಲ ಹೊಂದಿದ್ದ ದೇಶವು ಸಮೃದ್ಧಿ ಮತ್ತು ಶಕ್ತಿ ಎರಡನ್ನೂ ಗಳಿಸಿತು. 21ನೇ ಶತಮಾನದಲ್ಲಿ, ಇದೇ ಶಕ್ತಿಯು ಒಂದು ಸಣ್ಣ ಚಿಪ್‌ನೊಂದಿಗೆ ಮತ್ತು ಅದಕ್ಕೆ ಸಂಬಂಧಿಸಿದ ಕೌಶಲ್ಯ ಮತ್ತು ಸಾಮಗ್ರಿಗಳಲ್ಲಿ ಇರುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಸಣ್ಣ ಚಿಪ್‌ನ ಪೂರೈಕೆ ಸರಪಳಿ ಎಷ್ಟು ದುರ್ಬಲವಾಗಿತ್ತು ಎಂಬುದನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ, ಚಿಪ್‌ಗಳ ಪೂರೈಕೆಗೆ ಬ್ರೇಕ್ ಹಾಕಿದ ತಕ್ಷಣ, ವಿಶ್ವಾದ್ಯಂತ ಕಾರ್ಖಾನೆಗಳು ನಿಂತುಹೋಗಿ,  ಆರ್ಥಿಕತೆಗಳು ಕುಸಿಯಲು ಪ್ರಾರಂಭಿಸಿದವು. ಭಾರತವು ಆ ಬಿಕ್ಕಟ್ಟಿನಿಂದ ಪಾಠ ಕಲಿತು ಅದನ್ನು ಅವಕಾಶವನ್ನಾಗಿ ಪರಿವರ್ತಿಸುವ ಪ್ರಯತ್ನ ಆರಂಭಿಸಿತು. ಚಿಪ್ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕೆಂದು ನಾವು ನಿರ್ಧರಿಸಿದ್ದೇವೆ. ಇದಕ್ಕಾಗಿ, ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಿಸಬೇಕಾಗಿದೆ. ಇಂದಿನ ಕಾರ್ಯಕ್ರಮವು ಈ ದೃಷ್ಟಿಕೋನದ ಪ್ರತಿಬಿಂಬವಾಗಿದೆ.

ಸ್ನೇಹಿತರೆ,

ವಿಕಸಿತ ಭಾರತ ನಿರ್ಮಾಣವು ಭಾರತ ಸ್ವಾವಲಂಬಿಯಾದಾಗ ಮಾತ್ರ ಸಂಭವಿಸುತ್ತದೆ. ಇದಕ್ಕಾಗಿ, ಮೇಡ್ ಇನ್ ಇಂಡಿಯಾ ಚಿಪ್ ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಭಾರತದ ಚಿಪ್ ಮೇಡ್ ಇನ್ ಇಂಡಿಯಾ ಆದಾಗ, ನಮ್ಮ ಆಧುನಿಕ ಉಪಕರಣಗಳ ತಯಾರಿಕೆಗಾಗಿ ನಾವು ಇತರರ ಕಡೆಗೆ ನೋಡಬೇಕಾಗಿಲ್ಲ. ಡಿಜಿಟಲ್ ಇಂಡಿಯಾ, ಎಐ, 5ಜಿ-6ಜಿ, ಎಲೆಕ್ಟ್ರಿಕ್ ವಾಹನಗಳು, ರಕ್ಷಣೆ, ಇಂದು ಪ್ರತಿಯೊಂದು ಅಗತ್ಯ ವಸ್ತುವಿನ ಆತ್ಮವೆಂದರೆ ಸೆಮಿಕಂಡಕ್ಟರ್ ಮತ್ತು ಚಿಪ್ ಗಳಾಗಿವೆ. ನಮ್ಮಲ್ಲಿ ನಮ್ಮದೇ ಆದ ಚಿಪ್ ಇದ್ದಾಗ, ಪ್ರತಿಯೊಂದು ವಲಯದಲ್ಲೂ ಭಾರತದ ವೇಗವು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ.

ಸ್ನೇಹಿತರೆ,

ಇಂದು ಫಾಕ್ಸ್‌ಕಾನ್‌ನಂತಹ ದೈತ್ಯ ಕಂಪನಿಗಳು ಭಾರತಕ್ಕೆ ಬಂದಿರುವುದು ಮತ್ತು ಚಿಪ್ ತಯಾರಿಕೆಯಲ್ಲಿ ಸಹಕರಿಸುತ್ತಿರುವುದು ಜಾಗತಿಕ ಸಂದೇಶ ಸಾರಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವು ವಿಶ್ವದ ವಿಶ್ವಾಸಾರ್ಹ ಪಾಲುದಾನಾಗಿದೆ. ಯಾವುದೇ ಮೌಲ್ಯ ಸರಪಳಿಯಲ್ಲಿ ಭಾರತದ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಆ ಮೌಲ್ಯ ಸರಪಳಿಯ ಚೇತರಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ವಿಶ್ವದ ಕಾರ್ಖಾನೆಯಾಗಿ ಭಾರತದ ಗುರುತು ಭಾರತ ಮತ್ತು ವಿಶ್ವದ ಇತರೆ ದೇಶಗಳಿಗೆ ಗೆಲುವು-ಗೆಲುವಿನ ಸನ್ನಿವೇಶವಿದ್ದಂತೆ.

 

ಸ್ನೇಹಿತರೆ,

ಇಂದು ಜಗತ್ತು ಭಾರತವನ್ನು ತಂತ್ರಜ್ಞಾನ ಭವಿಷ್ಯದ ಕೇಂದ್ರವಾಗಿ ನೋಡುತ್ತಿದೆ. ಇದಕ್ಕೆ ಭಾರತದ ಪ್ರತಿಭೆಯೂ ಒಂದು ದೊಡ್ಡ ಕಾರಣ. ಭಾರತವು ತನ್ನ ಚಿಪ್ ವಿನ್ಯಾಸ ಪ್ರತಿಭೆಗಳ ಗುಂಪನ್ನು ವಿಸ್ತರಿಸುವುದಲ್ಲದೆ, ಸೆಮಿಕಂಡಕ್ಟರ್ ಗಳಿಗೆ ಸಂಬಂಧಿಸಿದ ಇತರ ಕೌಶಲ್ಯಗಳ ಮೇಲೂ ಹೆಚ್ಚಿನ ಒತ್ತು ನೀಡುತ್ತಿದೆ. ಭಾರತ ಸರ್ಕಾರವು ಚಿಪ್ ಟು ಸ್ಟಾರ್ಟಪ್ ಕಾರ್ಯಕ್ರಮ  ಪ್ರಾರಂಭಿಸಿದೆ. ಸೆಮಿಕಂಡಕ್ಟರ್ ವಿನ್ಯಾಸದಲ್ಲಿ 85 ಸಾವಿರಕ್ಕೂ ಹೆಚ್ಚು ಉದ್ಯಮ-ಸಿದ್ಧ ವೃತ್ತಿಪರರನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್‌ನ 2ನೇ ಹಂತವನ್ನು ಸಹ ಘೋಷಿಸಲಾಗಿದೆ. ಅಂದರೆ, ಎಲ್ಲಾ ರೀತಿಯ ಫ್ಯಾಬ್‌ಗಳು, ಸುಧಾರಿತ ಪ್ಯಾಕೇಜಿಂಗ್ ಮತ್ತು ಸಂಶೋಧಮೆ & ಅಭಿವೃದ್ಧಿಗಾಗಿ ಭಾರತದಲ್ಲಿಯೇ ಸಂಪೂರ್ಣ ಬೆಂಬಲ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ. ಸೆಮಿಕಂಡಕ್ಟರ್ ಮತ್ತು ಬ್ಯಾಟರಿ ಉತ್ಪಾದನೆಗೆ ಅಪರೂಪದ ಭೂಮಿಯ ಖನಿಜಗಳು ಸಹ ಬಹಳ ಅವಶ್ಯಕ. ಭಾರತವು ಇದರಲ್ಲಿಯೂ ಸ್ವಾವಲಂಬನೆಗಾಗಿ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ದೇಶದಲ್ಲಿ ಅಪರೂಪದ ಭೂಮಿಯ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಇದು ಸೆಮಿಕಂಡಕ್ಟರ್ ವಲಯಕ್ಕೆ ಒಂದು ದೊಡ್ಡ ಪ್ರೋತ್ಸಾಹವಾಗಿದೆ.

ಕಳೆದ 11 ವರ್ಷಗಳಲ್ಲಿ ನಾವು ಏನು ಮಾಡಲು ನಿರ್ಧರಿಸಿದರೂ ಅದನ್ನು ಸಾಧಿಸುತ್ತಿದ್ದೇವೆ ಎಂಬುದನ್ನು ಭಾರತವು ಪದೇಪದೆ ತೋರಿಸಿದೆ. ಕೆಲವು ವರ್ಷಗಳ ಹಿಂದೆ, ದೇಶವು ಮೇಕ್ ಇನ್ ಇಂಡಿಯಾ ನಿರ್ಣಯ ತೆಗೆದುಕೊಂಡಾಗ, ಕೆಲವರು ಅನುಮಾನ  ಮತ್ತು ಆತಂಕಗಳನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ಮೇಕ್ ಇನ್ ಇಂಡಿಯಾ ಬಲವಾದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಕಳೆದ 11 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸುಮಾರು 6 ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ರಫ್ತು ಕೂಡ ಸುಮಾರು 8 ಪಟ್ಟು ಹೆಚ್ಚಿದೆ. ಅದರಲ್ಲೂ ಮೊಬೈಲ್ ಉತ್ಪಾದನೆ 28 ಪಟ್ಟು ಹೆಚ್ಚಾಗಿದೆ. ನಮ್ಮ ಮೊಬೈಲ್ ಫೋನ್ ರಫ್ತು 100ಕ್ಕೂ ಹೆಚ್ಚು ಪಟ್ಟು ಹೆಚ್ಚಾಗಿದೆ.

ಸ್ನೇಹಿತರೆ,

ಭಾರತದ ಉತ್ಪಾದನಾ ಯಶಸ್ಸಿನಲ್ಲಿ ಉತ್ತರಪ್ರದೇಶ ಬಲವಾದ ಆಧಾರಸ್ತಂಭವಾಗಿ ಹೊರಹೊಮ್ಮುತ್ತಿದೆ ಎಂಬ ತೃಪ್ತಿ ನನಗಿದೆ. ನಾನು ಮೊಬೈಲ್ ಫೋನ್ ಉತ್ಪಾದನೆಯ ಬಗ್ಗೆ ಮಾತನಾಡಿದರೆ, ದೇಶದ ಅರ್ಧಕ್ಕಿಂತ ಹೆಚ್ಚು ಮೊಬೈಲ್ ಫೋನ್‌ಗಳನ್ನು ಇಂದು ಉತ್ತರ ಪ್ರದೇಶದಲ್ಲಿ ತಯಾರಿಸಲಾಗುತ್ತಿದೆ. ಮುಂಬರುವ ಸಮಯದಲ್ಲಿ ಉತರಪ್ರದೇಶದ ಈ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಲಿದೆ. ಏಕೆಂದರೆ ಇಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಜತೆಗೆ, ಎಲೆಕ್ಟ್ರಾನಿಕ್ ಘಟಕಗಳು ಅಂದರೆ, ಸಣ್ಣ ಬಿಡಿ ಭಾಗಗಳನ್ನು ಸಹ ಇಲ್ಲಿ ತಯಾರಿಸಲಾಗುವುದು. ಇದು ಇಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೆ,

ಇಂದು ಉತ್ತರ ಪ್ರದೇಶದ ಉತ್ಪಾದನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮತ್ತು ಇಲ್ಲಿ ಸ್ಥಾಪನೆಯಾಗುತ್ತಿರುವ ಹೊಸ ಕಾರ್ಖಾನೆಗಳಿಗಾಗಿ ಉತ್ತರ ಪ್ರದೇಶ ಸುದ್ದಿಯಲ್ಲಿದೆ. ಆದರೆ ಸುಮಾರು 1 ದಶಕದ ಹಿಂದಿನವರೆಗೂ ತಪ್ಪು ವಿಷಯಗಳಿಗಾಗಿ ಉತ್ತರ ಪ್ರದೇಶದ ಹೆಸರನ್ನು ಎಲ್ಲೆಡೆ ಪ್ರಸ್ತಾಪಿಸಲಾಗುತ್ತಿತ್ತು. ವಲಸೆ ಮತ್ತು ಕೊರತೆ, ಸೌಲಭ್ಯಗಳ ಕೊರತೆ ಮತ್ತು ಅಪರಾಧ - ಇದು ದೇಶದ ಅತಿದೊಡ್ಡ ರಾಜ್ಯದ ದುರದೃಷ್ಟಕರವಾಗಿ ಕಾಣುತ್ತಿತ್ತು. ಉತ್ತರಪ್ರದೇಶದ ಜನರು ಡಬಲ್-ಎಂಜಿನ್ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ ಮತ್ತು ಅವರು ಪದೇಪದೆ ನೀಡಿದ ಆಶೀರ್ವಾದಗಳ ಫಲಿತಾಂಶಗಳು ನಿರಂತರವಾಗಿ ಗೋಚರಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇಂದು ಉತ್ತರ ಪ್ರದೇಶವು ಎಕ್ಸ್‌ಪ್ರೆಸ್‌ವೇಗಳ ರಾಜ್ಯವಾಗಿದೆ. ಉತ್ತರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್‌ ಅನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ದೇಶ ಮತ್ತು ವಿಶ್ವದ ಜನರು ಇಂದು ಉತ್ತರ ಪ್ರದೇಶವನ್ನು ನೆಚ್ಚಿನ ಪ್ರವಾಸೋದ್ಯಮ ತಾಣವನ್ನಾಗಿ ಮಾಡುತ್ತಿದ್ದಾರೆ.

 

ಸ್ನೇಹಿತರೆ,

ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಖಚಿತ ಎಂದು ಮನಗಂಡಿರುವ ಕಾರಣ ಜಾಗತಿಕ ಹೂಡಿಕೆದಾರರು ಇಂದು ಯುಪಿಗೆ ಬರುತ್ತಿದ್ದಾರೆ. ಮೀಸಲಾದ ಸರಕು ಸಾಗಣೆ ಕಾರಿಡಾರ್ ಮತ್ತು ಜೆವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಆಧುನಿಕ ಸಂಪರ್ಕವು ಈ ಇಡೀ ಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಭಾನುವಾರ ನಾನು ದೆಹಲಿ-ಮೀರತ್ ನಮೋ ಭಾರತ್ ರೈಲು ಕಾರಿಡಾರ್ ಅನ್ನು ಉದ್ಘಾಟಿಸಿದ್ದೇನೆ. ಅಂತಹ ಅತ್ಯುತ್ತಮ ಕೆಲಸ ನಡೆಯುತ್ತಿರುವಲ್ಲಿ, ಉತ್ತರ ಪ್ರದೇಶವು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ನಾನು ಮತ್ತೊಮ್ಮೆ ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್‌ಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಸೆಮಿಕಂಡಕ್ಟರ್ ಘಟಕವು ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ.

ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯಗಳು.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India clears a major nuclear milestone as Kalpakkam fast breeder reactor turns 'critical'

Media Coverage

India clears a major nuclear milestone as Kalpakkam fast breeder reactor turns 'critical'
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಎಪ್ರಿಲ್ 2026
April 07, 2026

Aatmanirbhar Dreams Delivered: PM Modi’s Vision Turns Self-Reliance into Record Reality Across Defence, Energy & Nation-Building