ಪೂಜ್ಯ ಮಹಾಸಂಘದ ಗ್ಗೌರವಾನ್ವಿತ ಸದಸ್ಯರೇ, ನೇಪಾಳ ಮತ್ತು ಶ್ರೀ ಲಂಕಾದ ಪ್ರಧಾನ ಮಂತ್ರಿಗಳೇ, ನನ್ನ ಸಚಿವ ಸಹೋದ್ಯೋಗಿಗಳಾಗಿರುವ ಶ್ರೀ ಪ್ರಹ್ಲಾದ ಸಿಂಗ್ ಮತ್ತು ಶ್ರೀ ಕಿರಣ್ ರಿಜಿಜು, ಅಂತಾರಾಷ್ಟ್ರೀಯ ಬೌದ್ಧರ ಒಕ್ಕೂಟದ ಮಹಾ ಕಾರ್ಯದರ್ಶಿ ಪೂಜ್ಯ ಡಾಕ್ಟರ್ ಧಮ್ಮಪಿಯಾಜಿ, ಗೌರವಾನ್ವಿತ ವಿದ್ವಾಂಸರೇ, ಧಮ್ಮ ಅನುಯಾಯಿಗಳೇ, ವಿಶ್ವದ ಸಹೋದರಿಯರೇ ಮತ್ತು ಸಹೋದರರೇ.

ನಮೋ ಬುದ್ಧಾಯ

ನಮಸ್ತೇ

ವೈಶಾಖದ ವಿಶೇಷ ದಿನದಂದು ನಿಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡಲು ನಾನು ಅತ್ಯಂತ ಹರ್ಷಿತನಾಗಿದ್ದೇನೆ. ಇದು ನನಗೆ ಗೌರವದ ಸಂಗತಿ ಕೂಡಾ. ವೈಶಾಖವು ಭಗವಾನ್ ಬುದ್ಧ ಅವರ ಜೀವನವನ್ನು ಆಚರಿಸುವ ದಿನ. ಇದು ಬುದ್ಧ ಅವರ  ಅತ್ಯಂತ ಶ್ರೇಷ್ಠ ಆದರ್ಶಗಳು ಮತ್ತು ನಮ್ಮ ಭೂಗ್ರಹದ  ಒಳಿತಿಗಾಗಿ ಅವರು ಮಾಡಿದ ತ್ಯಾಗಗಳನ್ನು ಪ್ರತಿಬಿಂಬಿಸುವ ದಿನ ಕೂಡಾ.

ಸ್ನೇಹಿತರೇ,

ಕಳೆದ ವರ್ಷ ಕೂಡಾ ನಾನು ವೈಶಾಖ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದೆ. ಆ ಕಾರ್ಯಕ್ರಮವನ್ನು  ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ವಿರುದ್ಧ ಮನುಕುಲದ ಹೋರಾಟವನ್ನು ಮುಂಚೂಣಿಯಲ್ಲಿ ನಿಂತು ನಡೆಸುತ್ತಿರುವ ಎಲ್ಲಾ ಕಾರ್ಯಕರ್ತರಿಗೆ  ಅರ್ಪಿಸಲಾಗಿತ್ತು. ವರ್ಷದ ಬಳಿಕ ನಾವು ಅದರ ಮುಂದುವರಿಕೆಯ ಮತ್ತು ಬದಲಾವಣೆಯ ಮಿಶ್ರಣವನ್ನು ಕಾಣುತ್ತಿದ್ದೇವೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕ ನಮ್ಮನ್ನು ಬಿಟ್ಟು ಹೋಗಿಲ್ಲ. ಭಾರತವೂ ಸಹಿತ ಹಲವಾರು ದೇಶಗಳು ಎರಡನೇ ಅಲೆಯನ್ನು ಕಾಣುತ್ತಿವೆ. ದಶಕಗಳಲ್ಲಿ ಮಾನವ ಕುಲ ಎದುರಿಸುತ್ತಿರುವ ಅತ್ಯಂತ ಕೆಟ್ಟ ಬಿಕ್ಕಟ್ಟು ಇದು. ಇಂತಹ ಜಾಗತಿಕ ಸಾಂಕ್ರಾಮಿಕವನ್ನು ನಾವು ಶತಮಾನದಲ್ಲಿ ಕಂಡಿರಲಿಲ್ಲ. ಇದು ಜೀವಮಾನದಲ್ಲೊಮ್ಮೆ ಬರುವ ಜಾಗತಿಕ ಸಾಂಕ್ರಾಮಿಕ. ಇದು ಹಲವರ ಮನೆ ಬಾಗಿಲಿಗೆ ದುರಂತ ಮತ್ತು ವೇದನೆಗಳನ್ನು ತಂದಿದೆ.

ಜಾಗತಿಕ ಸಾಂಕ್ರಾಮಿಕವು ಪ್ರತೀ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಪರಿಣಾಮ ಬಹಳ ದೊಡ್ಡ ಪ್ರಮಾಣದ್ದಾಗಿದೆ. ಕೋವಿಡ್-19 ರ ಬಳಿಕ ನಮ್ಮ ಭೂಗ್ರಹ ಈ ಹಿಂದಿನಂತಿರದು. ಬರಲಿರುವ ಕಾಲ ಘಟ್ಟದಲ್ಲಿ ನಾವು ಘಟನೆಗಳನ್ನು ಖಂಡಿತವಾಗಿಯೂ ಕೋವಿಡ್ ಪೂರ್ವ ಅಥವಾ  ಕೋವಿಡ್ ನಂತರದ ಘಟನೆಗಳೆಂದು  ನೆನಪಿಡುತ್ತೇವೆ. ಆದರೆ ಕಳೆದೊಂದು ವರ್ಷದಿಂದೀಚೆಗೆ ಅಲ್ಲಿ ಬಹಳ ಗಮನಿಸಬೇಕಾದ ಬದಲಾವಣೆಗಳಾಗಿವೆ. ಜಾಗತಿಕ ಸಾಂಕ್ರಾಮಿಕದ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಇದೆ. ಇದು ಹೋರಾಟಕ್ಕೆ ನಮ್ಮ ವ್ಯೂಹವನ್ನು ಬಲಗೊಳಿಸಿದೆ. ಬಹಳ ಮುಖ್ಯವಾಗಿ ನಮ್ಮಲ್ಲೀಗ ಲಸಿಕೆ ಇದೆ, ಇದು ಜೀವ ಉಳಿಸಲು ಮತ್ತು ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ಬಹಳ ಮುಖ್ಯ. ಜಾಗತಿಕ ಸಾಂಕ್ರಾಮಿಕ ಅಪ್ಪಳಿಸಿದ ವರ್ಷದಲ್ಲಿಯೇ ಲಸಿಕೆ ಲಭ್ಯತೆ ಮನುಷ್ಯನ ಬದ್ಧತೆ, ದೃಢ ನಿರ್ಧಾರವನ್ನು ತೋರಿಸುತ್ತದೆ. ಭಾರತವು ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಕಾರ್ಯನಿರತರಾದ ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಯನ್ನು ಹೊಂದಿದೆ.

ಈ ವೇದಿಕೆಯ ಮೂಲಕ, ನಾನು ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಸ್ವಾರ್ಥರಹಿತರಾಗಿ ಪ್ರತೀದಿನ ಅವಶ್ಯಕತೆ  ಇರುವ ಇತರರಿಗಾಗಿ ಸೇವೆ ಸಲ್ಲಿಸಿದ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ , ವೈದ್ಯರಿಗೆ, ದಾದಿಯರಿಗೆ, ಮತ್ತು ಸ್ವಯಂಸೇವಕರಿಗೆ ನಮಿಸುತ್ತೇನೆ. ತೊಂದರೆ ಅನುಭವಿಸಿದವರಿಗೆ ಮತ್ತು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ  ನನ್ನ ಸಂತಾಪಗಳು. ಅವರೊಂದಿಗೆ ನಾನು ದುಃಖಿಸುತ್ತೇನೆ.

ಸ್ನೇಹಿತರೇ,

ಬುದ್ಧ ಅವರ ಬದುಕನ್ನು ಅಧ್ಯಯನ ಮಾಡುವಾಗ, ಅಲ್ಲಿ ನಾಲ್ಕು ದೃಷ್ಟಿಗಳಿವೆ. ಈ ನಾಲ್ಕು ದೃಷ್ಟಿಗಳು ಭಗವಾನ್ ಬುದ್ಧ ಅವರನ್ನು ಮಾನವನ ದುಃಖ, ದುಮ್ಮಾನಗಳ ಜೊತೆ ಮುಖಾಮುಖಿಯಾಗಿಸಿದಂತಹವು. ಇದೇ ವೇಳೆಗೆ ಅವು ಆತನೊಳಗೆ ಮಾನವ ದುಃಖವನ್ನು ತೊಡೆಯುವುದಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವ ಆಶಯವನ್ನು  ಉದ್ದೀಪಿಸಿದವು.

ಭಗವಾನ್ ಬುದ್ಧ ನಮಗೆ ‘भवतु सब्ब मंगलम’. ಆಶೀರ್ವಾದಗಳನ್ನು, ಅನುಭೂತಿ ಮತ್ತು ಎಲ್ಲರ ಕಲ್ಯಾಣವನ್ನು ಹೇಳಿಕೊಟ್ಟರು. ಕಳೆದ ವರ್ಷ ಹಲವಾರು ವ್ಯಕ್ತಿಗಳು ಮತ್ತು ಸಂಘಟನೆಗಳು ಸಂದರ್ಭಕ್ಕೆ ಸರಿಯಾಗಿ ಎದ್ದು ನಿಂತು ತೊಂದರೆಗಳನ್ನು , ಕಷ್ಟ ಕೋಟಲೆಗಳನ್ನು ತೊಡೆಯಲು ಸಾಧ್ಯ ಇರುವುದೆಲ್ಲವನ್ನೂ ಮಾಡಿರುವುದನ್ನು ನಾವು ನೋಡಿದ್ದೇವೆ.

ವಿಶ್ವದಾದ್ಯಂತದ ಬುದ್ಧ ಧರ್ಮ ಅನುಯಾಯಿಗಳು, ಬೌದ್ಧ ಸಂಘಟನೆಗಳು ಉದಾರವಾಗಿ ಸಲಕರಣೆಗಳು ಮತ್ತು ಇತರ ವಸ್ತುಗಳ ದೇಣಿಗೆ ನೀಡಿದ್ದನ್ನು ನಾನು ತಿಳಿದುಕೊಂಡಿದ್ದೇನೆ. ಜನಸಂಖ್ಯೆ ಮತ್ತು ಭೌಗೋಳಿಕ ವ್ಯಾಪ್ತಿಯನ್ನು ಪರಿಗಣಿಸಿದರೆ  ಈ ಕೆಲಸ ಬಹಳ ದೊಡ್ಡದು. ಉದಾರತೆ ಮತ್ತು ಸಹ ಮಾನವ ಜೀವಿಗಳ ಬೆಂಬಲದಿಂದ ಮಾನವತೆ ಇಲ್ಲಿ ವಿನೀತವಾಗಿದೆ. ಈ ಕಾರ್ಯಚಟುವಟಿಕೆಗಳು ಭಗವಾನ್ ಬುದ್ಧನ ಬೋಧನೆಗಳ ಹಾದಿಯನ್ನು ಅನುಸರಿಸಿದಂತಹವು. ಅದು अप्प दीपो भव: ಎಂಬ ಸರ್ವೋಚ್ಚ ಮಂತ್ರದ ಅನುರಣನ

ಸ್ನೇಹಿತರೇ,

ಕೋವಿಡ್-19 ನಾವು ಎದುರಿಸುತ್ತಿರುವ ಪ್ರಮುಖ ಸವಾಲು ಎಂಬುದು ಖಂಡಿತ. ಅದರ ವಿರುದ್ಧ ಹೋರಾಡಲು ನಾವು ಸಾಧ್ಯ ಇರುವ ಎಲ್ಲವನ್ನೂ ಮಾಡುತ್ತಿರುವಾಗಲೂ ನಾವು ಮಾನವ ಕುಲ ಎದುರಿಸುತ್ತಿರುವ ಇತರ ಸವಾಲುಗಳನ್ನು ನಿರ್ಲಕ್ಷಿಸಬಾರದು. ಒಂದು ದೊಡ್ಡ ಸವಾಲೆಂದರೆ ಅದು ವಾತಾವರಣ ಬದಲಾವಣೆಯದ್ದು. ಈಗಿನ ಅನಿಯಂತ್ರಿತ ಜೀವನ ವಿಧಾನ ಬರಲಿರುವ ತಲೆಮಾರುಗಳಿಗೆ ಅಪಾಯ ತರುತ್ತಿದೆ. ಹವಾಮಾನ ರೀತಿಗಳು ಬದಲಾಗುತ್ತಿವೆ. ನೀರ್ಗಲ್ಲುಗಳು ಕರಗುತ್ತಿವೆ. ನದಿಗಳು ಮತ್ತು ಅರಣ್ಯಗಳು ಅಪಾಯದಲ್ಲಿವೆ. ನಾವು ನಮ್ಮ ಭೂಗ್ರಹ ಗಾಯಗೊಂಡಿರಲು ಬಿಡಬಾರದು.ಭಗವಾನ್ ಬುದ್ಧ ಪ್ರಕೃತಿ ಮಾತೆಗೆ ಗರಿಷ್ಠ ಗೌರವ ನೀಡುವ ಜೀವನ ವಿಧಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು.

ಪ್ಯಾರೀಸ್ ಗುರಿಗಳನ್ನು ಪೂರ್ಣಗೊಳಿಸುವ ಕೆಲವು  ಬೃಹತ್ ಆರ್ಥಿಕತೆಗಳಲ್ಲಿ ಭಾರತವೂ ಗುಂಪಿನಲ್ಲಿ ಸಾಗುತ್ತಿದೆ ಎಂಬುದನ್ನು ಹಂಚಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ನಮಗೆ ಸುಸ್ಥಿರ ಜೀವನ ಬರೇ ಸರಿಯಾದ  ಶಬ್ದಗಳಲ್ಲ. ಅದು ಸರಿಯಾದ ಕ್ರಮಗಳು.

ಸ್ನೇಹಿತರೇ, ಗೌತಮ ಬುದ್ಧರ ಜೀವನ ಎಂದರೆ ಅದು ಶಾಂತಿ, ಸೌಹಾರ್ದ ಮತ್ತು ಸಹ ಜೀವನವನ್ನು ಸಾರುವಂತಿದೆ. ಇಂದು ದ್ವೇಷ, ಭಯ ಮತ್ತು ಆಲೋಚನಾರಹಿತ ಹಿಂಸೆಯನ್ನು ಹರಡುವುದರಲ್ಲಿ ಕೆಲವು ಶಕ್ತಿಗಳು ನಿರತವಾಗಿವೆ ಮತ್ತು ಅದರಲ್ಲಿಯೇ ತಮ್ಮ ಅಸ್ತಿತ್ವವನ್ನು ಕಾಣುತ್ತಿವೆ. ಇಂತಹ ಶಕ್ತಿಗಳು ಉದಾರವಾದಿ ಪ್ರಜಾಸತ್ತಾತ್ಮಕ ತತ್ವಗಳಲ್ಲಿ ನಂಬಿಕೆ ಇಟ್ಟಿಲ್ಲ.ಈ ಸಮಯದ ತುರ್ತು ಎಂದರೆ, ಮಾನವತೆಯಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಒಟ್ಟಾಗಿ ಭಯ ಮತ್ತು ತೀವ್ರಗಾಮಿತ್ವವನ್ನು  ಸೋಲಿಸಬೇಕಾಗಿದೆ.

ಅದಕ್ಕೆ ಭಗವಾನ್ ಬುದ್ಧ ತೋರಿದ ದಾರಿ ಬಹಳ ಪ್ರಸ್ತುತವಾದುದಾಗಿದೆ. ಭಗವಾನ್ ಬುದ್ಧರ ಬೋಧನೆಗಳು ಮತ್ತು ಅವರ ಸಾಮಾಜಿಕ ನ್ಯಾಯಕ್ಕೆ ನೀಡಿದ ಮಹತ್ವ ಜಾಗತಿಕವಾಗಿ ಏಕೀಕರಣ ಮಾಡುವ ಶಕ್ತಿಯಾಗಬಲ್ಲದು.

ಅವರು ಸರಿಯಾಗಿಯೇ ಹೇಳಿದ್ದಾರೆ-,"नत्ती संति परण सुखं: ಶಾಂತಿಗಿಂತ ಪರಮ ಸುಖ ಬೇರೊಂದಿಲ್ಲ.

ಸ್ನೇಹಿತರೇ,

ಭಗವಾನ್ ಬುದ್ಧ ಇಡೀ ವಿಶ್ವಕ್ಕೇ ಬುದ್ಧಿಮತ್ತೆಯ, ತೇಜಸ್ಸಿನ  ಜಲಾಶಯದಂತಿದ್ದರು. ಅವರಿಂದ ನಾವೆಲ್ಲರೂ ಕಾಲ ಕಾಲಕ್ಕೆ ಬೆಳಕು ಪಡೆದು  ಅನುಕಂಪದ, ಅನುಭೂತಿಯ, ಜಾಗತಿಕ ಜವಾಬ್ದಾರಿಯ ಮತ್ತು ಕಲ್ಯಾಣದ ಹಾದಿಯನ್ನು ಅನುಸರಿಸೋಣ. ಗೌತಮ ಬುದ್ಧ ಅವರ ಬಗ್ಗೆ ಮಹಾತ್ಮಾ ಗಾಂಧಿ ಅವರು ಸರಿಯಾಗಿಯೇ ನುಡಿದಿದ್ದಾರೆ, “ಬುದ್ಧ ನಮಗೆ ಬಾಹ್ಯವನ್ನು ಧಿಕ್ಕರಿಸಲು ಮತ್ತು  ಸತ್ಯ ಹಾಗು ಪ್ರೀತಿಯ ಅಂತಿಮ  ಗೆಲುವಿನಲ್ಲಿ ವಿಶ್ವಾಸವಿಡಲು ಹೇಳಿದರು” .

ಇಂದು ಬುದ್ಧ ಪೂರ್ಣಿಮೆಯಂದು ನಾವು ಭಗವಾನ್ ಬುದ್ಧ ಅವರ ಆದರ್ಶಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ.

ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಈ ಪರೀಕ್ಷಾ ಸಂದರ್ಭದಲ್ಲಿ ಪರಿಹಾರವನ್ನು ಕರುಣಿಸುವಂತೆ  ರತ್ನ ತ್ರಯಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ನಾನೂ ನಿಮ್ಮ ಜೊತೆ ಸೇರುತ್ತೇನೆ.

ಧನ್ಯವಾದಗಳು

ಬಹಳ ಬಹಳ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Infra spend up six-fold since 2014, crosses Rs 12 lakh crore: PM Modi

Media Coverage

Infra spend up six-fold since 2014, crosses Rs 12 lakh crore: PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಎಪ್ರಿಲ್ 2026
April 15, 2026

From Temples to Turbines: PM Modi’s Blueprint for a Culturally Rooted, Economically Explosive Viksit Bharat