ತಮಿಳಿನ ಶ್ರೇಷ್ಠ ಕವಿ ಸುಬ್ರಮಣ್ಯಭಾರತಿ ಅವರ 100ನೇ ಪುಣ್ಯತಿಥಿಯ ವೇಳೆ ಅವರ ಹೆಸರಿನಲ್ಲಿ ವಾರಾಣಸಿಯ ಬಿಎಚ್ ಯುನ ಕಲಾ ವಿಭಾಗದಲ್ಲಿ ತಮಿಳು ಅಧ್ಯಯನ ಪೀಠ ಆರಂಭಿಸುವುದಾಗಿ ಘೋಷಿಸಿದ ಪ್ರಧಾನಮಂತ್ರಿ
ಸರ್ದಾರ್ ಪಟೇಲ್ ಅವರ ಕಲ್ಪನೆಯ ‘ಏಕ್ ಭಾರತ್ ಶ್ರೇಷ್ಠ ಭಾರತ್ ‘ತತ್ವವು ತಮಿಳಿನ ಮಹಾಕವಿ ಭಾರತಿಯರ ತಮಿಳು ಬರಹಗಳಲ್ಲಿ ಸಂಪೂರ್ಣ ದೈವತ್ವದೊಂದಿಗೆ ಹೊಳೆಯುತ್ತಿದೆ
ಮಾನವೀಯ ಮೌಲ್ಯಗಳ ಮೂಲಕ ಮಾತ್ರ 9/11 ನಂತಹ ದುರಂತಗಳಿಗೆ ಶಾಶ್ವತ ಪರಿಹಾರ ಸಾಧ್ಯವೆಂಬುದು ಇಡೀ ಜಗತ್ತಿಗೆ ಇಂದು ಅರ್ಥವಾಗಿದೆ: ಪ್ರಧಾನಮಂತ್ರಿ
ಸಾಂಕ್ರಾಮಿಕವು ಭಾರತೀಯ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ, ಆದರೆ ಹಾನಿಗಿಂತ ವೇಗವಾಗಿ ನಾವು ಚೇತರಿಸಿಕೊಳ್ಳುತ್ತಿದ್ದೇವೆ: ಪ್ರಧಾನಮಂತ್ರಿ
ದೊಡ್ಡ ಆರ್ಥಿಕತೆಗಳು ರಕ್ಷಣಾ ವಿಧಾನ ಪಾಲಿಸುತ್ತಿದ್ದರೆ, ಭಾರತ ಸುಧಾರಣೆ ಹಾದಿಯಲ್ಲಿದೆ: ಪ್ರಧಾನಮಂತ್ರಿ

ನಮಸ್ಕಾರ್!

ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ಭಾಯಿ ರೂಪಾನಿ ಜೀ, ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ, ಸಂಪುಟದ ನನ್ನ ಸಹೋದ್ಯೋಗಿಗಳಾದ, ಸಚಿವರಾದ ಶ್ರೀ ಪರಶೋತ್ತಮ ರೂಪಾಲ ಜೀ, ಶ್ರೀ ಮನ್ಸುಖ್ ಭಾಯಿ ಮಾಂಡವೀಯ ಜೀ, ಅನುಪ್ರಿಯ ಪಟೇಲ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ಪ್ರದೇಶ ಬಿ.ಜೆ.ಪಿ. ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಎಲ್ಲಾ ಸಚಿವರೇ, ಇಲ್ಲಿ ಹಾಜರಿರುವ ಎಲ್ಲಾ ಸಂಸತ್ ಸದಸ್ಯರೇ, ಗುಜರಾತಿನ ಶಾಸಕರೇ, ಸರ್ದಾರ್ ಧಾಮದ ಎಲ್ಲಾ ಟ್ರಸ್ಟೀಗಳೇ, ನನ್ನ ಸ್ನೇಹಿತರಾದ ಶ್ರೀ ಗಾಗಿಭಾಯಿ, ಟ್ರಸ್ಟಿನ ಎಲ್ಲಾ ಗೌರವಾನ್ವಿತ ಸದಸ್ಯರೇ, ಈ ಶ್ರೇಷ್ಠ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ನೇಹಿತರೇ, ಮತ್ತು ಸಹೋದರರೇ ಹಾಗು ಸಹೋದರಿಯರೇ!.

ನಾವು ಯಾವುದೇ ಮಂಗಳಕರ ಕಾರ್ಯವನ್ನು ಕೈಗೊಳ್ಳುವುದಕ್ಕೆ ಮೊದಲು ಗಣೇಶನನ್ನು ಪೂಜಿಸುವ ಪರಂಪರೆಯನ್ನು ಹೊಂದಿದ್ದೇವೆ. ಮತ್ತು ಅದೃಷ್ಟವಶಾತ್, ಸರ್ದಾರ್ ಧಾಮ ಭವನ ಉದ್ಘಾಟನೆ ಪವಿತ್ರ ಹಬ್ಬವಾದ ಗಣೇಶ ಪೂಜಾದಂದು ನಡೆಯುತ್ತಿದೆ. ನಿನ್ನೆ ಗಣೇಶ ಚತುರ್ಥಿ, ಮತ್ತು ಇಂದು ಇಡೀ ದೇಶ ಗಣೇಶೋತ್ಸವವನ್ನು ಆಚರಿಸುತ್ತಿದೆ. ನಾನು ನಿಮಗೆಲ್ಲರಿಗೂ ಗಣೇಶ ಚತುರ್ಥಿ ಮತ್ತು ಗಣೇಶೋತ್ಸವದ ಶುಭಾಶಯಗಳನ್ನು ಕೋರುತ್ತೇನೆ. ಇಂದು ಋಷಿ ಪಂಚಮಿ ಕೂಡಾ. ಭಾರತವು ಋಷಿ, ಮುನಿಗಳ ದೇಶ ಮತ್ತು ನಮ್ಮ ಗುರುತಿಸುವಿಕೆ  ಋಷಿಗಳ ಜ್ಞಾನವನ್ನು ಆಧರಿಸಿದೆ, ವಿಜ್ಞಾನ ಮತ್ತು ತತ್ವಜ್ಞಾನಗಳನ್ನು ಆಧರಿಸಿದೆ. ನಾವು ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ. ಇಡೀ ಮನುಕುಲಕ್ಕೆ ಮಾರ್ಗದರ್ಶನ ಮಾಡುವಂತಹ  ನಮ್ಮ ವಿಜ್ಞಾನಿಗಳ ಮತ್ತು ಚಿಂತಕರ ಸ್ಫೂರ್ತಿಯೊಂದಿಗೆ ನಾವು ಬೆಳೆದಿದ್ದೇವೆ. ಅದೇ ಸ್ಫೂರ್ತಿಯೊಂದಿಗೆ ನಾನು ನಿಮಗೆಲ್ಲಾ ಋಷಿ ಪಂಚಮಿಯ ಶುಭಾಶಯಗಳನ್ನು ಹಾರೈಸುತ್ತೇನೆ.

ಋಷಿ ಮುನಿಗಳ ಪರಂಪರೆ ನಮಗೆ ಉತ್ತಮ ಮಾನವರಾಗಲು ಶಕ್ತಿಯನ್ನು ನೀಡುತ್ತದೆ. ಈ ಸ್ಫೂರ್ತಿಯೊಂದಿಗೆ ನಾವು ಜೈನ ಪರಂಪರೆಯ ಪರ್ಯೂಶಣ್ ಹಬ್ಬದ ಬಳಿಕ ಈ ದಿನವನ್ನು ’ಮಿಚ್ ಛಾಮಿ ದುಕ್ಕಡಂ’  ಮಾಡುವ ಮೂಲಕ ಕ್ಷಮೆಯ ದಿನವನ್ನಾಗಿ ಆಚರಿಸುತ್ತೇವೆ. ದೇಶದ ಎಲ್ಲಾ ನಾಗರಿಕರಿಗೆ ನಾನು ’ಮಿಚ್ ಛಾಮಿ ದುಕ್ಕಡಂ’  ಸಲ್ಲಿಸುತ್ತೇನೆ. ಇದು ಎಂತಹ ಹಬ್ಬ ಮತ್ತು ಪರಂಪರೆ ಎಂದರೆ ಅಲ್ಲಿ ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇವೆ, ಅವುಗಳನ್ನು ತಿದ್ದಿಕೊಳ್ಳುತ್ತೇವೆ, ಮತ್ತು ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಲು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಇದು ನಮ್ಮ ಬದುಕಿನ ಭಾಗವಾಗಬೇಕು. ನಾನು ಎಲ್ಲಾ ದೇಶವಾಸಿಗಳಿಗೆ ಮತ್ತು ಎಲ್ಲಾ ಸಹೋದರರಿಗೆ ಹಾಗು ಸಹೋದರಿಯರಿಗೆ ಈ ಪವಿತ್ರ ಹಬ್ಬದಂದು ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ನಾನು ಭಗವಾನ್ ಮಹಾವೀರರ ಪಾದಗಳಿಗೆ ಶಿರಬಾಗಿ ನಮಿಸುತ್ತೇನೆ.

ನಾನು ಸರ್ದಾರ್ ಸಾಹೀಬ್ ಅವರ ಪಾದಗಳಿಗೆ ನಮಿಸುತ್ತೇನೆ. ನಮ್ಮ ಸ್ಫೂರ್ತಿಯ ಮೂಲ ಮತ್ತು ಉಕ್ಕಿನ ಮನುಷ್ಯ ಅವರು. ಅವರಿಗೆ  ನನ್ನ ಗೌರವವನ್ನು ಸಲ್ಲಿಸುತ್ತೇನೆ. ಸರ್ದಾರ್ ಧಾಮ ಟ್ರಸ್ಟ್ ಜೊತೆ ಸಂಪರ್ಕ ಹೊಂದಿರುವ ಎಲ್ಲಾ ಸದಸ್ಯರನ್ನೂ ಅಭಿನಂದಿಸುತ್ತೇನೆ. ಅವರು ಸೇವೆಯ ಈ ಸುಂದರ ಯೋಜನೆಯನ್ನು ಅರ್ಪಣಾ ಭಾವದಿಂದ ರೂಪಿಸಿದ್ದಾರೆ. ನಿಮ್ಮ ಅರ್ಪಣಾಭಾವ ಮತ್ತು ದೃಢ ನಿಶ್ಚಯ ಸೇವೆಗೆ ಒಂದು ನಿದರ್ಶನದಂತಿದೆ. ನಿಮ್ಮ ಪ್ರಯತ್ನಗಳೊಂದಿಗೆ ಇಂದು ಹೆಣ್ಣು ಮಕ್ಕಳ ಹಾಸ್ಟೆಲಿನ ಎರಡನೇ ಹಂತಕ್ಕೆ ಶಿಲಾನ್ಯಾಸವನ್ನು ಈ ಸರ್ದಾರ್ ಧಾಮದ ಭವ್ಯ ಕಟ್ಟಡ ಉದ್ಘಾಟನೆಯ ಜೊತೆ ಮಾಡಲಾಗಿದೆ.

ಅತ್ಯಾಧುನಿಕ ಕಟ್ಟಡ, ಆಧುನಿಕ ಸಂಪನ್ಮೂಲಗಳು ಮತ್ತು ಆಧುನಿಕ ಗ್ರಂಥಾಲಯದಂತಹ ಸವಲತ್ತುಗಳು ಹಲವಾರು ಯುವಜನತೆಯನ್ನು ಸಶಕ್ತೀಕರಣಗೊಳಿಸಬಲ್ಲವು. ಒಂದೆಡೆ ನೀವು ಉದ್ಯಮ ಅಭಿವೃದ್ಧಿ ಕೇಂದ್ರಗಳ ಮೂಲಕ ಗುಜರಾತಿನ ಸಮೃದ್ಧ ವ್ಯಾಪಾರೋದ್ಯಮದ ಗುರುತಿಸುವಿಕೆಯನ್ನು ಬಲಪಡಿಸುತ್ತಿದ್ದರೆ, ಇನ್ನೊಂದೆಡೆ ಆ ಯುವಜನಾಂಗಕ್ಕೆ  ನಾಗರಿಕ ಸೇವೆಗಳನ್ನು ಅಥವಾ ರಕ್ಷಣಾ ಅಥವಾ ನ್ಯಾಯಾಂಗ ಸೇವೆಗಳಿಗೆ ಸೇರುವ ಅವಕಾಶವನ್ನು ನಾಗರಿಕ ಸೇವಾ ಕೇಂದ್ರಗಳ ಮೂಲಕ ಒದಗಿಸಿ ಹೊಸ ದಿಕ್ಕು ಲಭ್ಯವಾಗುವಂತೆ ಮಾಡಿದ್ದೀರಿ.

ಪಾಟಿದಾರ್ ಸಮುದಾಯದ ಯುವಕರನ್ನು ಸಶಕ್ತೀಕರಣ ಮಾಡುವ , ಬಡವರನ್ನು ಮತ್ತು ಅದರಲ್ಲೂ ವಿಶೇಷವಾಗಿ ಮಹಿಳೆಯನ್ನು ಸಶಕ್ತೀಕರಣ ಮಾಡುವ ನಿಟ್ಟಿನಲ್ಲಿ ನಿಮ್ಮ ಆದ್ಯತೆ ಮತ್ತು ಒತ್ತು ನಿಜವಾಗಿಯೂ ಅಭಿನಂದನೀಯ. ಹಾಸ್ಟೆಲ್ ಸೌಲಭ್ಯಗಳು ಅನೇಕ ಹೆಣ್ಣು ಮಕ್ಕಳಿಗೆ ಮುನ್ನಡೆ ಸಾಧಿಸಲು ಸಹಾಯ ಮಾಡಲಿವೆ.

ಸರ್ದಾರ್ ಧಾಮ ದೇಶದ ಭವಿಷ್ಯ ನಿರ್ಮಾಣದ ನೆಲೆಗಟ್ಟು ಮಾತ್ರವಲ್ಲ ಅದು ಸರ್ದಾರ್ ಸಾಹೀಬ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಭವಿಷ್ಯದ ಜನಾಂಗಕ್ಕೆ ಪ್ರೇರಣೆ ಕೂಡಾ. ಇನ್ನೊಂದು ಸಂಗತಿ ನಾನು ನಿಮಗೆ ಹೇಳಬೇಕಿರುವುದೆಂದರೆ, ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಳ್ಳಲು ಪ್ರೇರಣೆ ಪಡೆದಿದ್ದೇವೆ. ಆದರೆ 18,20,25 ವರ್ಷಗಳ ವಯಸ್ಸಿನ ಪುತ್ರರಿಗೆ ಮತ್ತು ಹೆಣ್ಣು ಮಕ್ಕಳಿಗೆ  ಮತ್ತು ಈ ಹಾಸ್ಟೆಲ್ ನಲ್ಲಿ ನಿಂತು ಕಲಿಕೆ ಕೈಗೊಳ್ಳುವವರಿಗೆ ಸ್ವಾತಂತ್ರ್ಯದ ನೂರು ವರ್ಷಗಳ ಆಚರಣೆಯನ್ನು ಮಾಡುವಾಗ 2047ರಲ್ಲಿ ಬಹಳ ನಿರ್ಣಾಯಕವಾದಂತಹ ಪಾತ್ರ ಲಭಿಸಲಿದೆ. 2047ರಲ್ಲಿ ಭಾರತದ ಬಗ್ಗೆ ನೀವು ಇಂದು ಕೈಗೊಳ್ಳುವ ನಿರ್ಧಾರಗಳು ಈ ಪವಿತ್ರ ಭೂಮಿಯಿಂದ ದೀಕ್ಷೆ ಪಡೆಯಲಿವೆ.

ಸ್ನೇಹಿತರೇ,

ಸರ್ದಾರ್ ಧಾಮ ಉದ್ಘಾಟನೆಯಾಗಿರುವ ಈ ದಿನದ ಮಹತ್ವ ಅದಕ್ಕೆ ಸಂಬಂಧಿಸಿದ ಬಹಳ ದೊಡ್ಡ ಸಂದೇಶವನ್ನು ಅಡಕಗೊಳಿಸಿಕೊಂಡಿದೆ. ಇಂದು ಸೆಪ್ಟೆಂಬರ್ 11, ಅಂದರೆ 9/11!. ಇದು ಜಾಗತಿಕ ಇತಿಹಾಸದ ದಿನ ಮತ್ತು ಮಾನವತೆಯ ಮೇಲೆ ದಾಳಿ ನಡೆದ ದಿನ!. ಆದರೆ ಈ ದಿನ ಇಡೀ ಜಗತ್ತಿಗೆ ಬಹಳಷ್ಟನ್ನು ತಿಳಿಸಿಕೊಟ್ಟಿದೆ!.

ಒಂದು ಶತಮಾನಕ್ಕೂ ಅಧಿಕ ಕಾಲಕ್ಕೆ  ಮೊದಲು, 1893ರ ಸೆಪ್ಟೆಂಬರ್ 11ರಂದು ಚಿಕಾಗೋದಲ್ಲಿ ವಿಶ್ವ ಧರ್ಮಗಳ ಸಮಾವೇಶ ನಡೆದಿತ್ತು. ಆ ಜಾಗತಿಕ ವೇದಿಕೆಯಲ್ಲಿ ಮಾತನಾಡಿದ ಸ್ವಾಮೀ ವಿವೇಕಾನಂದ ಅವರು   ಭಾರತದ ಮಾನವೀಯ ಮೌಲ್ಯಗಳ ಬಗ್ಗೆ ಜಗತ್ತಿಗೆ ತಿಳಿಸಿದ್ದರು. ಇಂದು ವಿಶ್ವವು ಅವೇ ಮಾನವ ಮೌಲ್ಯಗಳು 9/11 ರ ದಾಳಿಗೆ ಶಾಶ್ವತ ಪರಿಹಾರಗಳನ್ನು  ತರುತ್ತಿರುವ ಭಾವನೆಯನ್ನು ಅನುಭವಿಸುತ್ತಿದೆ. ಈ ದಾಳಿಗೆ ಈಗ 20 ವರ್ಷಗಳು ಪೂರ್ಣಗೊಂಡಿವೆ. ಒಂದೆಡೆ ಇಂತಹ ಭಯೋತ್ಪಾದನಾ ದಾಳಿಯಿಂದ ನಾವು ಪಾಠಗಳನ್ನು ಕಲಿಯಬೇಕಾಗಿದೆ ಮತ್ತು ಇನ್ನೊಂದೆಡೆಯಿಂದ ನಾವು ಮಾನವ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಬಹಳ ಪ್ರಯತ್ನಗಳನ್ನು ಮಾಡಬೇಕಾಗಿದೆ.

ಸ್ನೇಹಿತರೇ

ಇಂದು ಇದು ಇನ್ನೊಂದು ಬಹಳ ದೊಡ್ಡ ಸಂದರ್ಭ. ಭಾರತದ ಶ್ರೇಷ್ಠ ವಿದ್ವಾಂಸ, ತತ್ವಶಾಸ್ತ್ರಜ್ಞ, ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ನೂರನೇ ಪುಣ್ಯ ತಿಥಿ. ಸರ್ದಾರ್ ಸಾಹೇಬ್ ಅನುಸರಿಸಿದ “ಏಕ ಭಾರತ್, ಶ್ರೇಷ್ಠ ಭಾರತ್” ಎಂಬ ಚಿಂತನೆಯೇ ತಮಿಳು ಮಹಾಕವಿ ಭಾರತಿ ಅವರ ಬರಹಗಳಲ್ಲೂ ತುಂಬಿ ತುಳುಕುತ್ತದೆ. ಅವರ ಚಿಂತನೆಯತ್ತ ನೋಡಿ!. ಅವರು ತಮಿಳುನಾಡಿನಲ್ಲಿ ಜೀವಿಸಿದ್ದರು, ಆದರೆ ಹಿಮಾಲಯ ನಮ್ಮದೆಂದಿದ್ದರು. ಗಂಗಾದಂತಹ ನದಿಯನ್ನು ಬೇರೆಲ್ಲಿ ಕಾಣಬಹುದು ಎಂದು ಹೇಳುತ್ತಿದ್ದ ಅವರು ಉಪನಿಷದ್ ಗಳ ವೈಭವವನ್ನು ವರ್ಣಿಸುವಾಗ ಅವರು ಭಾರತದ ಏಕತೆಗೆ, ಭಾರತದ ಪ್ರಾವೀಣ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಸುಬ್ರಮಣ್ಯ ಭಾರತಿ ಅವರು ಸ್ವಾಮಿ ವಿವೇಕಾನಂದ ಅವರಿಂದ ಪ್ರೇರಣೆಯನ್ನು ಪಡೆದಿದ್ದರು. ಮತ್ತು ಶ್ರೀ ಅರವಿಂದೋ ಅವರಿಂದಲೂ ಪ್ರಭಾವಿತರಾಗಿದ್ದರು. ಮತ್ತು ಕಾಶಿಯಲ್ಲಿ ಜೀವಿಸುತ್ತಿದ್ದಾಗ ಅವರ ಚಿಂತನೆಗಳಿಗೆ ಹೊಸ ಶಕ್ತಿಯನ್ನು ಹಾಗು ದಿಕ್ಕನ್ನು ನೀಡಿದರು.

ಸ್ನೇಹಿತರೇ,

ಇಂದು ನಾನು ಈ ಸಂದರ್ಭದಲ್ಲಿ ಬಹಳ ಪ್ರಮುಖವಾದಂತಹ ಘೋಷಣೆಯನ್ನು ಮಾಡಲಿದ್ದೇನೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸುಬ್ರಮಣ್ಯ ಭಾರತಿ ಜೀ  ಅವರ ಹೆಸರಿನಲ್ಲಿ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ತಮಿಳು ಸಮೃದ್ಧ ಭಾಷೆ, ಅದು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಇದು ಎಲ್ಲಾ ಹಿಂದೂಸ್ಥಾನಿಗಳಿಗೆ ಹೆಮ್ಮೆಯ ಸಂಗತಿ. ಸುಬ್ರಮಣ್ಯ ಭಾರತೀ ಪೀಠ ಬಿ.ಎಚ್.ಯು.ನ ಕಲಾ ನಿಕಾಯದಲ್ಲಿ ತಮಿಳು ಅದ್ಯಯನದಲ್ಲಿ ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಭಾರತೀ ಜೀ ಅವರು ಕನಸು ಕಂಡಂತಹ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಲು ಪ್ರೇರಣೆ ನೀಡಲಿದೆ.

ಸ್ನೇಹಿತರೇ,

ಸುಬ್ರಮಣ್ಯ ಭಾರತಿ ಅವರು ಸದಾ ಭಾರತದ ಏಕತೆ ಮತ್ತು ಮನುಕುಲದ ಏಕತೆ ಬಗ್ಗೆ ವಿಶೇಷ ಆದ್ಯತೆ ನೀಡಿದ್ದರು. ಅವರ ಆದರ್ಶಗಳು ಭಾರತದ ಚಿಂತನೆ ಮತ್ತು ತತ್ವಜ್ಞಾನದ ಸಮಗ್ರ ಭಾಗವಾಗಿವೆ. ಪುರಾಣ ಕಾಲದ  ದಧೀಚಿ ಮತ್ತು ಕರ್ಣರಂತಹವರಿಂದ  ಅಥವಾ ಮಧ್ಯಕಾಲೀನ ಭಾರತದ ಶ್ರೇಷ್ಠ ವ್ಯಕ್ತಿಗಳಾದ ಮಹಾರಾಜ ಹರ್ಷವರ್ಧನರಂತಹವರಿಂದ  ಭಾರತವು ಈಗಲೂ ಪ್ರತಿಯೊಂದನ್ನೂ  ಸೇವೆಗೆ ಅರ್ಪಿಸುವ  ಈ ಪರಂಪರೆಯಿಂದ  ಪ್ರೇರಣೆಯನ್ನು ಪಡೆಯುತ್ತಿದೆ.  ನಾವು ಎಲ್ಲಿಂದ ಪಡೆಯುತ್ತೇವೆಯೋ ಅಲ್ಲಿಗೆ ಹಲವು ಪಟ್ಟನ್ನು ಅರ್ಪಿಸುವುದನ್ನು ಬೋಧಿಸುವುದು ನಮ್ಮ   ಜೀವನದ ಮಂತ್ರವಾಗಿದೆ. ನಾವು ಏನನ್ನು ಪಡೆದಿದ್ದೇವೆಯೋ , ನಾವದನ್ನು ಈ ಮಣ್ಣಿನಿಂದ ಪಡೆದಿದ್ದೇವೆ. ನಾವು ಏನು ಪ್ರಗತಿ ಸಾಧಿಸಿದ್ದೇವೆಯೋ ಅದನ್ನು ಈ ಸಮಾಜದ ಮಧ್ಯದಲ್ಲಿ ಮಾಡಿದ್ದೇವೆ. ಮತ್ತು ಸಮಾಜದ ಕಾರಣದಿಂದ ಇದು ಸಾಧ್ಯವಾಗಿದೆ. ಆದುದರಿಂದ ನಾವು ಗಳಿಸಿರುವುದು ನಮ್ಮದು ಮಾತ್ರವಲ್ಲ, ಅದು ನಮ್ಮ ಸಮಾಜಕ್ಕೂ ಸೇರಿದುದು ಮತ್ತು ನಮ್ಮ ದೇಶಕ್ಕೂ ಸೇರಿದುದು. ನಾವು ಸಮಾಜಕ್ಕೆ ಏನು ಸೇರಿದೆಯೋ ಅದನ್ನು ಹಿಂತಿರುಗಿಸಿದರೆ, ಮತ್ತು ಆಗ ಸಮಾಜ  ಅದನ್ನು ಹಲವು ಪಟ್ಟು ಹೆಚ್ಚಿಸಿ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಮರಳಿ ನೀಡುತ್ತದೆ. ಪ್ರತೀ ಪ್ರಯತ್ನದ ಜೊತೆ ವೇಗ ಪಡೆದುಕೊಳ್ಳುವ ಶಕ್ತಿಯ ಆವರ್ತನ ಇದು. ಇಂದು ನೀವು ಈ ಶಕ್ತಿಯ ಆವರ್ತನೆಗೆ ಇನ್ನಷ್ಟು ವೇಗ ಕೊಡುತ್ತಿದ್ದೀರಿ.

ಸ್ನೇಹಿತರೇ,

ನಾವು ಸಮಾಜಕ್ಕಾಗಿ ದೃಢ ನಿರ್ಧಾರಗಳನ್ನು ತಾಳಿದಾಗ ಸಮಾಜ ಕೂಡಾ ಅದನ್ನು ಸಾಧಿಸಲು ನಮಗೆ ಶಕ್ತಿಯನ್ನು ಕೊಡುತ್ತದೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ದೇಶವು “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಎಂಬ ಮಂತ್ರವನ್ನು ನೀಡಿದೆ. ಗುಜರಾತ್ ಬಹಳ ಹಿಂದಿನಿಂದ ಇಂದಿನವರೆಗೂ ಪರಸ್ಪರ ಹಂಚಿಕೊಂಡ ಪ್ರಯತ್ನಗಳ ಮೂಲಕ ಸಾಧನೆ ಮಾಡಿದ  ನಾಡಾಗಿದೆ. ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಇಲ್ಲಿಂದ ಆರಂಭಿಸಿದರು, ಅದು ಈಗಲೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ದೇಶದ ಪ್ರೇರಣೆಯ ಮತ್ತು ಸಾಮೂಹಿಕ ಪ್ರಯತ್ನಗಳ ಸಂಕೇತವಾಗಿದೆ.

ಅದೇ ರೀತಿ, ಖೇಡಾ ಚಳವಳಿಯಲ್ಲಿ ಸರ್ದಾರ್ ಪಟೇಲ್ ನೇತೃತ್ವದಲ್ಲಿ ರೈತರ, ಯುವ ಜನತೆಯ  ಮತ್ತು ಬಡವರ ಒಗ್ಗೂಡುವಿಕೆ ಬ್ರಿಟಿಷ್ ಸರಕಾರದ ಶರಣಾಗತಿಗೆ ಕಾರಣವಾಯಿತು.   ಈ ಪ್ರೇರಣೆ ಮತ್ತು ಶಕ್ತಿ ಇಂದಿಗೂ ನಮ್ಮೆದುರು ಗುಜರಾತಿನ ಮಣ್ಣಿನಲ್ಲಿ ಸರ್ದಾರ್ ಸಾಹೀಬ್ ಅವರ ಮುಗಿಲೆತ್ತರದ  ’ಏಕತಾ ಪ್ರತಿಮೆ”ಯಾಗಿ ನಿಂತಿದೆ. ಗುಜರಾತ್ ಮುಂದಿರಿಸಿದ ಏಕತಾ ಪ್ರತಿಮೆಯ ಚಿಂತನೆಯನ್ನು ಯಾರು ತಾನೆ ಮರೆಯಬಲ್ಲರು, ಇಡೀ ದೇಶವೇ ಈ ಪ್ರಯತ್ನದ ಭಾಗವಾದುದನ್ನು ಯಾರು ಮರೆಯಲು ಸಾಧ್ಯ?. ಆಗ ದೇಶದ ಪ್ರತೀ ಮೂಲೆಯಿಂದಲೂ ರೈತರು ಕಬ್ಬಿಣವನ್ನು ಕಳುಹಿಸಿದ್ದರು. ಇಂದು ಈ ಪ್ರತಿಮೆ ಇಡೀ ದೇಶದ ಏಕತಾ ಸಂಕೇತವಾಗಿದೆ , ಒಗ್ಗಟಿನ ಪ್ರಯತ್ನಗಳ ಸಂಕೇತವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತ್ ಮುಂದಿರಿಸಿರುವ “ಸಹಕಾರದ ಮೂಲಕ ಯಶಸ್ಸು” ಮುನ್ನೋಟದಲ್ಲಿ ದೇಶವು ಭಾಗಿಯಾಗಿದೆ ಮತ್ತು ಇಂದು ದೇಶವು ಅದರ ಪ್ರಯೋಜನಗಳನ್ನು ಪಡೆಯುತ್ತಿದೆ. ಸರ್ದಾರ್ ಧಾಮ ಟ್ರಸ್ಟ್ ತನ್ನ ಸಾಮೂಹಿಕ ಪ್ರಯತ್ನಗಳ ಮೂಲಕ ಮುಂದಿನ ಐದು ವರ್ಷಗಳಿಗೆ ಮತ್ತು ಹತ್ತು ವರ್ಷಗಳಿಗೆ ತನ್ನದೇ ಗುರಿಗಳನ್ನು ನಿಗದಿ ಮಾಡಿರುವುದೂ ನನಗೆ ಸಂತಸದ ಸಂಗತಿ. ಇಂದು ದೇಶವು ಅಂತಹದೇ ಗುರಿಗಳ ಮೂಲಕ ಮುನ್ನಡೆಯುತ್ತಿದೆ, ಸ್ವಾತಂತ್ರ್ಯದ ನೂರನೇ ವರ್ಷದ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಗುತ್ತಿದೆ.

ಈಗ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸರಕಾರದಲ್ಲಿ ರೂಪಿಸಲಾಗಿದೆ. ಸಹಕಾರಿ ಸಂಸ್ಥೆಗಳ ಪೂರ್ಣ ಪ್ರಯೋಜನ ರೈತರಿಗೆ ಮತ್ತು ಯುವಜನತೆಗೆ ಲಭಿಸುವಂತಾಗಲು ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಮಾಜದ ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರಲು ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂದು ಒಂದೆಡೆ ದಲಿತರು ಮತ್ತು ಹಿಂದುಳಿದವರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಟಾನಿಸಲಾಗುತ್ತಿದೆ, ಇನ್ನೊಂದೆಡೆ 10 ಶೇಖಡಾ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತಿದೆ. ಈ ನೀತಿಗಳ ಫಲವಾಗಿ ಸಮಾಜದಲ್ಲಿ ಹೊಸ ಭರವಸೆ ಮತ್ತು  ವಿಶ್ವಾಸ ಮೂಡಿದೆ.

ಸ್ನೇಹಿತರೇ,

ನಮ್ಮಲ್ಲೊಂದು ಮಾತಿದೆ: "सत् विद्या यदि का चिन्ता, वराकोदर पूरणे ಅಂದರೆ, ಯಾರು ಜ್ಞಾನವನ್ನು ಮತ್ತು ಕೌಶಲ್ಯವನ್ನು ಹೊಂದಿದ್ದಾರೋ ಅವರು ಅವರ ಜೀವನೋಪಾಯಕ್ಕಾಗಿ ಮತ್ತು ಅವರ ಪ್ರಗತಿಗಾಗಿ ಚಿಂತಿಸಬೇಕಾಗಿಲ್ಲ. ಸಾಮರ್ಥ್ಯಶೀಲ ವ್ಯಕ್ತಿಯು ಆತನ ಪ್ರಗತಿಗೆ ಆತನದೇ ದಾರಿಯನ್ನು ರೂಪಿಸಿಕೊಳ್ಳುತ್ತಾನೆ. ಸರ್ದಾರ್ ಧಾಮ ಟ್ರಸ್ಟ್  ಶಿಕ್ಷಣಕ್ಕೆ ಮತ್ತು ಕೌಶಲ್ಯಕ್ಕೆ ಬಹಳಷ್ಟು ಒತ್ತನ್ನು ನೀಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಿದೆ.

ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೂಡಾ ಕೌಶಲ್ಯ ವರ್ಧನೆಯ ಶಿಕ್ಷಣಕ್ಕೆ ಗಮನ ಕೊಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಆರಂಭದಿಂದಲೇ ಜಾಗತಿಕ ವಾಸ್ತವಿಕತೆಗೆ ತಕ್ಕಂತೆ, ಭವಿಷ್ಯಕ್ಕೆ ಅವಶ್ಯವಾಗಿರುವ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಿದೆ. ಇಂದು “ಕೌಶಲ್ಯ ಇಂಡಿಯಾ ಮಿಷನ್”  ಕೂಡಾ ದೇಶದ ಬಹಳ ದೊಡ್ಡ ಆದ್ಯತೆಯಾಗಿದೆ. ಈ ಮಿಷನ್ ಅಡಿಯಲ್ಲಿ ಲಕ್ಷಾಂತರ ಯುವಜನತೆಗೆ ಕಠಿಣ ಕೌಶಲ್ಯಗಳನ್ನು ಕಲಿಯುವ ಮತ್ತು ಸ್ವಾವಲಂಬಿಯಾಗುವ ಅವಕಾಶ ಲಭಿಸಿದೆ. ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಉತ್ತೇಜನ ಯೋಜನೆಯ ಅಡಿಯಲ್ಲಿ ಯುವ ಜನತೆ ಕಲಿಕೆಯ ಜೊತೆ ಕೌಶಲ್ಯ ಅಭಿವೃದ್ಧಿಯ ಅವಕಾಶಗಳನ್ನು ಪಡೆಯುತ್ತಿದ್ದಾರೆ ಮಾತ್ರವಲ್ಲ ಅವರು ಆದಾಯ ಕೂಡಾ ಗಳಿಸುತ್ತಿದ್ದಾರೆ.

ಗುಜರಾತ್ ತಾನೇ ಈ ನಿಟ್ಟಿನಲ್ಲಿ “ಮಾನವ ಕಲ್ಯಾಣ ಯೋಜನೆ" ಮತ್ತು ಇತರ ಅಂತಹ ಯೋಜನೆಗಳ ಮೂಲಕ ತ್ವರಿತಗತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನಗಳಿಗಾಗಿ ನಾನು ಗುಜರಾತ್ ಸರಕಾರವನ್ನು ಅಭಿನಂದಿಸುತ್ತೇನೆ. ಹಲವಾರು ವರ್ಷಗಳ ಕಾಲದ ನಮ್ಮ ಪ್ರಯತ್ನಗಳ ಫಲವಾಗಿ ಶಾಲೆ ತೊರೆಯುವವರ ಸಂಖ್ಯೆ ಗುಜರಾತಿನಲ್ಲಿ ಶೇಖಡಾ 1 ಕ್ಕಿಂತ ಕೆಳಗೆ ಇಳಿದಿದೆ; ಲಕ್ಷಾಂತರ ಯುವಜನತೆ ವಿವಿಧ ಯೋಜನೆಗಳ ಅಡಿಯಲ್ಲಿ ಅವರ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಉದ್ಯಮಶೀಲತ್ವ ಗುಜರಾತಿನ ಯುವಜನತೆಯಲ್ಲಿ ಸಹಜವಾಗಿದೆ.ಇಂದು ಗುಜರಾತಿನ ಯುವ ಜನತೆಯ ಈ ಪ್ರತಿಭೆ ನವೋದ್ಯಮ ಭಾರತದಂತಹ ಆಂದೋಲನದ ಮೂಲಕ ಹೊಸ ಪರಿಸರ ವ್ಯವಸ್ಥೆಯನ್ನು ಪಡೆಯುತ್ತಿದೆ.

ಸರ್ದಾರ್ ಧಾಮ ಟ್ರಸ್ಟ್ ನಮ್ಮ ಯುವಜನತೆಯನ್ನು ಜಾಗತಿಕ ವ್ಯಾಪಾರೋದ್ಯಮದ ಜೊತೆ ಜೋಡಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಹಿಂದೆ ರೋಮಾಂಚಕ ಗುಜರಾತ್ ಶೃಂಗದ ಮೂಲಕ ಗುಜರಾತ್ ಆರಂಭ ಮಾಡಿದ್ದ ಗುರಿಗಳನ್ನು ಜಾಗತಿಕ ಪಾಟಿದಾರ್ ವ್ಯಾಪಾರೋದ್ಯಮ ಶೃಂಗ ಇನ್ನಷ್ಟು ಮುಂದೆ ಕೊಂಡೊಯ್ಯಲಿದೆ. ಪಾಟಿದಾರ್ ಸಮಾಜವು ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ವ್ಯಾಪಾರೋದ್ಯಮಕ್ಕೆ ಹೊಸ ಗುರುತಿಸುವಿಕೆಯನ್ನು ನೀಡುತ್ತದೆ ಎಂಬ ಖ್ಯಾತಿಯನ್ನು ಹೊಂದಿದೆ. ನಿಮ್ಮ ಈ ಕೌಶಲ್ಯ ಈಗ ಗುಜರಾತಿನಲ್ಲಿ ಮತ್ತು ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ. ಮತ್ತು ಪಾಟಿದಾರ್ ಸಮಾಜದಲ್ಲಿ ಇನ್ನೊಂದು ಪ್ರಮುಖ ವೈಶಿಷ್ಟ್ಯವಿದೆ. ನೀವು ಎಲ್ಲೆಲ್ಲಿ ಹೋಗುತ್ತೀರೋ, ಜೀವನ ನಡೆಸುತ್ತೀರೋ, ಅಲ್ಲೆಲ್ಲಾ ಭಾರತದ ಹಿತಾಸಕ್ತಿಗೆ ನೀವು ಗರಿಷ್ಠ ಆದ್ಯತೆಯನ್ನು ನೀಡುತ್ತೀರಿ. ದೇಶದ ಆರ್ಥಿಕ ಪ್ರಗತಿಯಲ್ಲಿ ನೀವು ನೀಡಿರುವ ಕಾಣಿಕೆ ಅದ್ಭುತವಾದುದು ಮತ್ತು ಪ್ರೇರಣಾದಾಯಕವಾದುದು.

ಸ್ನೇಹಿತರೇ,

ಕಠಿಣ ಪರಿಸ್ಥಿತಿಯಲ್ಲಿಯೂ ಕೂಡಾ, ಪೂರ್ಣ ನಂಬಿಕೆಯೊಂದಿಗೆ ಮತ್ತು ಕರ್ತವ್ಯದ ಭಾವನೆಯೊಂದಿಗೆ ಕೆಲಸ ಮಾಡಿದರೆ ಅದರ ಫಲಿತಾಂಶ ಧನಾತ್ಮಕವಾಗಿರುತ್ತದೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ಇಡೀ ಜಗತ್ತಿನ ಆರ್ಥಿಕತೆಯನ್ನು ಹಳಿ ತಪ್ಪಿಸಿದೆ. ಇದು ಭಾರತದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಆದರೆ ನಮ್ಮ ಆರ್ಥಿಕತೆ ಈ ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಸ್ಥಗಿತಗೊಂಡಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಪ್ರಮುಖ ಆರ್ಥಿಕತೆಗಳು ರಕ್ಷಣಾತ್ಮಕ ರೀತಿಯಲ್ಲಿ ಸಾಗುತ್ತಿವೆಯಾದರೆ ನಾವು ಸುಧಾರಣೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದರೆ ನಾವು ಪ್ರವಾಹವನ್ನು ಭಾರತದತ್ತ ತಿರುಗಿಸಲು ಪಿ.ಎಲ್.ಐ. ಯೋಜನೆಯನ್ನು ಆರಂಭ ಮಾಡಿದ್ದೇವೆ. ಇತ್ತೀಚೆಗೆ ಪಿ.ಎಲ್.ಐ. ಯೋಜನೆಯನ್ನು ಜವಳಿ ಕ್ಷೇತ್ರಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಭಾರೀ ದೊಡ್ಡ ಪ್ರಯೋಜನ ದೇಶದ ಜವಳಿ ರಂಗಕ್ಕೆ ಮತ್ತು ಸೂರತ್ತಿನಂತಹ ನಗರಗಳಿಗೆ ದೊರೆಯಲಿದೆ.

ಸ್ನೇಹಿತರೇ,

21 ನೇ ಶತಮಾನದಲ್ಲಿ ಭಾರತದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ನಾವು ನಮ್ಮನ್ನು ಜಾಗತಿಕ ನಾಯಕನಂತೆ ಪರಿಭಾವಿಸಬೇಕು. ನಮ್ಮಲ್ಲಿರುವ ಉತ್ತಮವಾದುದನ್ನು ಕೊಡಬೇಕು ಮತ್ತು ನಾವೂ ಉತ್ತಮವಾದುದನ್ನು ಮಾಡಬೇಕು. ದೇಶದ ಪ್ರಗತಿಗೆ ಕಾಣಿಕೆ ನೀಡಿರುವ ಗುಜರಾತ್ ಇನ್ನಷ್ಟು ದೃಢ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡಲಿದೆ ಎಂಬುದರ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ನಮ್ಮ ಪ್ರಯತ್ನಗಳು ನಮ್ಮ ಸಮಾಜಕ್ಕೆ ಹೊಸ ಎತ್ತರಗಳನ್ನು ತಂದುಕೊಡುವುದು ಮಾತ್ರವಲ್ಲ, ಅವುಗಳು ದೇಶವನ್ನು ಅಭಿವೃದ್ಧಿಯ ಶಿಖರದತ್ತ ಕೊಂಡೊಯ್ಯುತ್ತವೆ.

ಶುಭಾಶಯಗಳೊಂದಿಗೆ, ಮತ್ತೊಮ್ಮೆ ನಿಮಗೆಲ್ಲರಿಗೂ ಬಹಳ ಬಹಳ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre allows 100% FDI in insurance via auto route

Media Coverage

Centre allows 100% FDI in insurance via auto route
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives due to a fire mishap in Delhi’s Shahdara district
May 03, 2026
PM announces ex-gratia from PMNRF

Prime Minister Shri Narendra Modi has expressed deep grief over the loss of lives due to a fire mishap in Delhi’s Shahdara district.

The Prime Minister extended his condolences to those who have lost their loved ones in this tragic mishap and prayed for the speedy recovery of the injured.

Shri Modi announced that an ex-gratia of Rs. 2 lakh from the Prime Minister's National Relief Fund (PMNRF) would be given to the next of kin of each of those who lost their lives, and the injured would be given Rs. 50,000.

The Prime Minister posted on X:

"The loss of lives due to a fire mishap in Delhi’s Shahdara district is extremely distressing. Condolences to those who have lost their loved ones. Praying for the speedy recovery of the injured.
An ex-gratia of Rs. 2 lakh from PMNRF would be given to the next of kin of each of those who lost their lives. The injured would be given Rs. 50,000: PM"