ವಿಶ್ವದ ಆಧುನಿಕ ಆರ್ಥಿಕತೆಗಳಲ್ಲಿ ಉಕ್ಕು ಅಸ್ಥಿಪಂಜರದಂತೆ ಪಾತ್ರ ವಹಿಸಿದೆ, ಪ್ರತಿಯೊಂದು ಯಶೋಗಾಥೆಯ ಹಿಂದಿನ ಶಕ್ತಿ ಉಕ್ಕು: ಪ್ರಧಾನಮಂತ್ರಿ
ಭಾರತ ಇಂದು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ ಎಂದು ನಮಗೆ ಹೆಮ್ಮೆಯಿದೆ: ಪ್ರಧಾನಮಂತ್ರಿ
ರಾಷ್ಟ್ರೀಯ ಉಕ್ಕು ನೀತಿಯಡಿಯಲ್ಲಿ 2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ನಾವು ಹೊಂದಿದ್ದೇವೆ: ಪ್ರಧಾನಮಂತ್ರಿ
ಉಕ್ಕಿನ ಉದ್ಯಮಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಇತರ ಹಲವು ಭಾರತೀಯ ಉದ್ಯಮಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ: ಪ್ರಧಾನಮಂತ್ರಿ
ನಮ್ಮ ಎಲ್ಲಾ ಮೂಲಸೌಕರ್ಯ ಯೋಜನೆಗಳ ಗುರಿ 'ಶೂನ್ಯ ಆಮದು' ಮತ್ತು 'ನಿವ್ವಳ ರಫ್ತು' ಆಗಿರಬೇಕು: ಪ್ರಧಾನಮಂತ್ರಿ
ನಮ್ಮ ಉಕ್ಕಿನ ವಲಯವು ಹೊಸ ಪ್ರಕ್ರಿಯೆಗಳು, ಹೊಸ ಶ್ರೇಣಿಗಳು ಮತ್ತು ಹೊಸ ಪ್ರಮಾಣಕ್ಕೆ ಸಿದ್ಧವಾಗಬೇಕು: ಪ್ರಧಾನಮಂತ್ರಿ
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ವಿಸ್ತರಿಸಬೇಕು ಮತ್ತು ಉನ್ನತೀಕರಿಸಬೇಕು, ನಾವು ಇಂದಿನಿಂದಲೇ ಭವಿಷ್ಯಕ್ಕೆ ಸಿದ್ಧರಾಗಬೇಕು: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ ಹಲವಾರು ಗಣಿಗಾರಿಕೆ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ, ಕಬ್ಬಿಣದ ಅದಿರಿನ ಲಭ್ಯತೆ ಸುಲಭವಾಗಿದೆ: ಪ್ರಧಾನಮಂತ್ರಿ
ದೇಶದ ಹಂಚಿಕೆಯಾದ ಗಣಿಗಳು ಮತ್ತು ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಮಯ ಇದು, ಗ್ರೀನ್ ಫೀಲ್ಡ್ ಗಣಿಗಾರಿಕೆಯನ್ನು ವೇಗಗೊಳಿಸಬೇಕಾಗಿದೆ: ಪ್ರಧಾನಮಂತ್ರಿ
ನಾವೆಲ್ಲರೂ ಒಟ್ಟಾಗಿ ಸ್ಥಿತಿಸ್ಥಾಪಕ, ಕ್ರಾಂತಿಕಾರಿ ಮತ್ತು ಉಕ್ಕಿನ ಬಲದ ಭಾರತವನ್ನು ನಿರ್ಮಿಸೋಣ: ಪ್ರಧಾನಮಂತ್ರಿ

ಗೌರವಾನ್ವಿತ ಅತಿಥಿಗಳೆ, ನನ್ನ ಸಂಪುಟ ಸಹೋದ್ಯೋಗಿಗಳೆ, ಉದ್ಯಮ ದಿಗ್ಗಜರೆ, ಅಂತಾರಾಷ್ಟ್ರೀಯ ಪ್ರತಿನಿಧಿಗಳೇ ಮತ್ತು ನನ್ನ ಸ್ನೇಹಿತರೆ, ಎಲ್ಲರಿಗೂ ನಮಸ್ಕಾರ!

ಇಂದು ಮತ್ತು ಮುಂದಿನ 2 ದಿನಗಳಲ್ಲಿ ಭಾರತದ ಉದಯೋನ್ಮುಖ ವಲಯ ಉಕ್ಕಿನ ಕ್ಷೇತ್ರದ ಸಾಮರ್ಥ್ಯಗಳು ಮತ್ತು ಸಂಭಾವ್ಯ ಸಾಮರ್ಥ್ಯದ ಬಗ್ಗೆ ನಾವು ವ್ಯಾಪಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಇದು ಭಾರತದ ಪ್ರಗತಿಯ ಬೆನ್ನೆಲುಬಾಗಿ ರೂಪುಗೊಳ್ಳುವ ವಲಯವಾಗಿದೆ, 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ಕ್ಕೆ ಬಲವಾದ ಅಡಿಪಾಯವಾಗಿದ್ದು, ದೇಶದಲ್ಲಿ ಪರಿವರ್ತನೆಯ ಹೊಸ ಅಧ್ಯಾಯ ಬರೆಯುತ್ತಿದೆ. ಇಂಡಿಯಾ ಸ್ಟೀಲ್-2025 ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮವು ಹೊಸ ವಿಚಾರ, ಆಲೋಚನೆಗಳನ್ನು ಹಂಚಿಕೊಳ್ಳಲು, ಹೊಸ ಪಾಲುದಾರಿಕೆಗಳನ್ನು ರೂಪಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಹೊಸ ಅನಾವರಣ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ. ಇದು ಉಕ್ಕಿನ ವಲಯದಲ್ಲಿ ಹೊಸ ಅಧ್ಯಾಯಕ್ಕೆ ಭದ್ರ ಬುನಾದಿ ಹಾಕುತ್ತದೆ.

 

ಸ್ನೇಹಿತರೆ,

ವಿಶ್ವದ ಆಧುನಿಕ ಆರ್ಥಿಕತೆಗಳಲ್ಲಿ ಉಕ್ಕು ಒಂದು ಅಸ್ಥಿಪಂಜರದಂತೆ ಪಾತ್ರ ವಹಿಸಿದೆ. ಅದು ಗಗನಚುಂಬಿ ಕಟ್ಟಡಗಳಾಗಿರಬಹುದು ಅಥವಾ ಹಡಗು ಸಾಗಣೆಯಾಗಿರಬಹುದು, ಹೆದ್ದಾರಿಗಳಾಗಿರಬಹುದು ಅಥವಾ ಹೈ-ಸ್ಪೀಡ್ ರೈಲು, ಸ್ಮಾರ್ಟ್ ಸಿಟಿಗಳು ಅಥವಾ ಕೈಗಾರಿಕಾ ಕಾರಿಡಾರ್‌ಗಳಾಗಿರಬಹುದು - ಪ್ರತಿಯೊಂದು ಯಶಸ್ಸಿನ ಕಥೆಯ ಹಿಂದೆ ಉಕ್ಕಿನ ಬಲವಿದೆ. ಇಂದು, ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಸಾಧಿಸಲು ಶ್ರಮಿಸುತ್ತಿದೆ. ಈ ಗುರಿ ಸಾಧಿಸುವಲ್ಲಿ ಉಕ್ಕಿನ ವಲಯವು ಮಹತ್ವದ ಪಾತ್ರ ವಹಿಸುತ್ತದೆ. ಭಾರತವು ಈಗ ವಿಶ್ವದ 2ನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ ಎಂಬ ಹೆಮ್ಮೆ ನಮಗಿದೆ. ರಾಷ್ಟ್ರೀಯ ಉಕ್ಕು ನೀತಿಯಡಿ, 2030ರ ವೇಳೆಗೆ ನಾವು 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿದ್ದೇವೆ. ಪ್ರಸ್ತುತ, ನಮ್ಮ ತಲಾ ಉಕ್ಕಿನ ಬಳಕೆ ಸರಿಸುಮಾರು 98 ಕಿಲೋಗ್ರಾಂಗಳಷ್ಟಿದ್ದು, 2030ರ ವೇಳೆಗೆ ಇದು 160 ಕಿಲೋಗ್ರಾಂಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಬೆಳೆಯುತ್ತಿರುವ ಉಕ್ಕಿನ ಬಳಕೆಯು ದೇಶದ ಮೂಲಸೌಕರ್ಯ ಮತ್ತು ಆರ್ಥಿಕತೆಗೆ ಸುವರ್ಣ ಮಾನದಂಡವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ದೇಶದ ನಿರ್ದೇಶನ ಮತ್ತು ಸರ್ಕಾರದ ದಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ಮಾನದಂಡವಾಗಿದೆ.

ಸ್ನೇಹಿತರೆ,

ಇಂದು ನಮ್ಮ ಉಕ್ಕು ಉದ್ಯಮವು ತನ್ನ ಭವಿಷ್ಯದ ಬಗ್ಗೆ ಹೊಸ ವಿಶ್ವಾಸದಿಂದ ತುಂಬಿದೆ - ಏಕೆಂದರೆ ದೇಶವು ಈಗ ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ರೂಪದಲ್ಲಿ ಭದ್ರ ಬುನಾದಿ ಹೊಂದಿದೆ. ಪ್ರಧಾನ ಮಂತ್ರಿ ಗತಿಶಕ್ತಿಯ ಮೂಲಕ, ವಿವಿಧ ಉಪಯುಕ್ತತೆ ಸೇವೆಗಳು ಮತ್ತು ಸರಕು ಸಾಗಣೆ ವಿಧಾನಗಳನ್ನು ಸಂಯೋಜಿಸಲಾಗುತ್ತಿದೆ. ದೇಶದ ಗಣಿಗಾರಿಕೆ ಪ್ರದೇಶಗಳು ಮತ್ತು ಉಕ್ಕಿನ ಘಟಕಗಳ ನಡುವೆ ಬಹು-ಮಾದರಿ ಸಂಪರ್ಕ ಹೆಚ್ಚಿಸಲು ಮ್ಯಾಪಿಂಗ್ ನಡೆಯುತ್ತಿದೆ. ದೇಶದ ಪೂರ್ವ ಪ್ರದೇಶಗಳಲ್ಲಿ, ಹೆಚ್ಚಿನ ಉಕ್ಕಿನ ವಲಯವು ಕೇಂದ್ರೀಕೃತವಾಗಿರುವಲ್ಲಿ, ನಿರ್ಣಾಯಕ ಮೂಲಸೌಕರ್ಯ ನವೀಕರಿಸಲು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ನಾವು 1.3 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಅನ್ನು ಸಹ ಮುನ್ನಡೆಸುತ್ತಿದ್ದೇವೆ. ನಮ್ಮ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತಿಸಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಪೈಪ್‌ಲೈನ್‌ಗಳಲ್ಲಿನ ಅಭಿವೃದ್ಧಿಯ ಅಭೂತಪೂರ್ವ ವೇಗವು ಉಕ್ಕಿನ ವಲಯಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ದೇಶಾದ್ಯಂತ ಲಕ್ಷಾಂತರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ, ಜಲಜೀವನ್ ಮಿಷನ್ ದೇಶಾದ್ಯಂತ ಹಳ್ಳಿಗಳಲ್ಲಿ ಬೃಹತ್ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದೆ. ಆಗಾಗ್ಗೆ, ನಮ್ಮ ದೇಶದಲ್ಲಿ ಇಂತಹ ಯೋಜನೆಗಳನ್ನು ಕಲ್ಯಾಣ ಕಾರ್ಯಕ್ರಮದ ಮೂಲಕ ಮಾತ್ರ ನೋಡಲಾಗುತ್ತದೆ. ಆದರೆ ಬಡವರ ಸಬಲೀಕರಣದ ಗುರಿ ಹೊಂದಿರುವ ಈ ಕಲ್ಯಾಣ ಯೋಜನೆಗಳು ಉಕ್ಕಿನ ಉದ್ಯಮವನ್ನು ಬಲಪಡಿಸುತ್ತಿವೆ. ಸರ್ಕಾರಿ ಯೋಜನೆಗಳಿಗೆ 'ಭಾರತದಲ್ಲಿ ತಯಾರಿಸಿದ' ಉಕ್ಕನ್ನು ಮಾತ್ರ ಬಳಸಬೇಕೆಂದು ನಾವು ನಿರ್ಧರಿಸಿದ್ದೇವೆ. ಈ ಪ್ರಯತ್ನಗಳ ಪರಿಣಾಮವಾಗಿ, ನಿರ್ಮಾಣ ಮತ್ತು ಮೂಲಸೌಕರ್ಯದಲ್ಲಿ ಉಕ್ಕಿನ ಬಳಕೆಯ ಗಮನಾರ್ಹ ಪಾಲು ಈಗ ಸರ್ಕಾರದ ನೇತೃತ್ವದ ಉಪಕ್ರಮಗಳಿಂದ ಬಂದಿದೆ.

ಸ್ನೇಹಿತರೆ,

ಹಲವು ವಲಯಗಳ ಬೆಳವಣಿಗೆಯಲ್ಲಿ ಉಕ್ಕು ಒಂದು ಪ್ರಾಥಮಿಕ ಖನಿಜವಾಗಿದೆ. ಅದಕ್ಕಾಗಿಯೇ ಉಕ್ಕು ಉದ್ಯಮಕ್ಕಾಗಿ ಸರ್ಕಾರದ ನೀತಿಗಳು ಹಲವಾರು ಇತರ ಭಾರತೀಯ ಕೈಗಾರಿಕೆಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಉತ್ಪಾದನಾ ವಲಯ, ನಿರ್ಮಾಣ, ಯಂತ್ರೋಪಕರಣಗಳು ಮತ್ತು ಆಟೋಮೋಟಿವ್ ವಲಯ - ಇವೆಲ್ಲವೂ ಭಾರತೀಯ ಉಕ್ಕು ಉದ್ಯಮದಿಂದ ಬಲ ಪಡೆಯುತ್ತಿವೆ. ಈ ವರ್ಷದ ಬಜೆಟ್‌ನಲ್ಲಿ ನಮ್ಮ ಸರ್ಕಾರ 'ಭಾರತದಲ್ಲಿ ತಯಾರಿಸಿ' ಕಾರ್ಯಕ್ರಮ ವೇಗಗೊಳಿಸಲು ರಾಷ್ಟ್ರೀಯ ಉತ್ಪಾದನಾ ಮಿಷನ್ ಘೋಷಿಸಿತು. ಈ ಮಿಷನ್ ಅನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗೆ ಸಮಾನವಾಗಿ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರೀಯ ಉತ್ಪಾದನಾ ಮಿಷನ್ ನಮ್ಮ ಉಕ್ಕು ಉದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ.

 

ಸ್ನೇಹಿತರೆ,

ದೀರ್ಘಕಾಲದಿಂದ ಭಾರತವು ಉನ್ನತ ದರ್ಜೆಯ ಉಕ್ಕಿಗಾಗಿ ಆಮದು ಅವಲಂಬಿಸಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸುವುದು, ವಿಶೇಷವಾಗಿ ರಕ್ಷಣಾ ಮತ್ತು ಕಾರ್ಯತಂತ್ರ ವಲಯಗಳಿಗೆ ಇದು ನಿರ್ಣಾಯಕವಾಗಿತ್ತು. ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಿಸಲು ಬಳಸಿದ ಉಕ್ಕನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬ ವಿಚಾರದ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತೀಯ ಉಕ್ಕಿನ ಬಲವು ಚಂದ್ರಯಾನ ಕಾರ್ಯಾಚರಣೆಯ ಐತಿಹಾಸಿಕ ಯಶಸ್ಸಿಗೆ ಕಾರಣವಾಗಿದೆ. ಇಂದು ನಾವು ಸಾಮರ್ಥ್ಯ ಮತ್ತು ವಿಶ್ವಾಸ ಎರಡನ್ನೂ ಹೊಂದಿದ್ದೇವೆ - ಇದು ಆಕಸ್ಮಿಕವಾಗಿ ಸಂಭವಿಸಲಿಲ್ಲ. ಪಿಎಲ್ಐ(ಉತ್ಪಾದನೆ ಸಂಪರ್ಕಿತ ಉತ್ತೇಜನ) ಯೋಜನೆಯಡಿ, ಉನ್ನತ ದರ್ಜೆಯ ಉಕ್ಕು ಉತ್ಪಾದನೆ ಹೆಚ್ಚಿಸಲು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಇದು ಕೇವಲ ಆರಂಭ ಅಷ್ಟೆ, ನಾವು ಸಾಗಬೇಕಾದ ದಾರಿ ಬಹಳಷ್ಟಿದೆ. ದೇಶಾದ್ಯಂತ ಅನೇಕ ಬೃಹತ್-ಯೋಜನೆಗಳು ಪ್ರಾರಂಭವಾಗುತ್ತಿವೆ, ಉನ್ನತ ದರ್ಜೆಯ ಉಕ್ಕಿನ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಈ ವರ್ಷದ ಬಜೆಟ್‌ನಲ್ಲಿ ನಮ್ಮ ಮೂಲಸೌಕರ್ಯ ಗಮನದ ಭಾಗವಾಗಿ ನಾವು ಹಡಗು ನಿರ್ಮಾಣ ಸೇರಿಸಿದ್ದೇವೆ. ಇತರೆ ದೇಶಗಳು ಭಾರತದಲ್ಲಿ ತಯಾರಿಸಿದ ಹಡಗುಗಳನ್ನು ಖರೀದಿಸುತ್ತವೆ ಎಂಬ ದೃಷ್ಟಿಕೋನದೊಂದಿಗೆ ಭಾರತದಲ್ಲಿ ಆಧುನಿಕ ಮತ್ತು ದೊಡ್ಡ ಹಡಗುಗಳನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅದೇ ರೀತಿ, ಪೈಪ್‌ಲೈನ್-ದರ್ಜೆಯ ಉಕ್ಕು ಮತ್ತು ತುಕ್ಕು-ನಿರೋಧಕ ಮಿಶ್ರಲೋಹಗಳ ಬೇಡಿಕೆಯೂ ದೇಶದೊಳಗೆ ಹೆಚ್ಚುತ್ತಿದೆ.

ದೇಶದ ರೈಲು ಮೂಲಸೌಕರ್ಯವು ಅಭೂತಪೂರ್ವ ವೇಗದಲ್ಲಿ ವಿಸ್ತರಿಸುತ್ತಿದೆ. ಈ ಎಲ್ಲಾ ಅಗತ್ಯಗಳಿಗೆ, ನಮ್ಮ ಗುರಿ 'ಶೂನ್ಯ ಆಮದು' ಮತ್ತು 'ನಿವ್ವಳ ರಫ್ತು' ಆಗಿರಬೇಕು! ಪ್ರಸ್ತುತ, ನಾವು 25 ದಶಲಕ್ಷ ಟನ್ ಉಕ್ಕಿನ ರಫ್ತು ಗುರಿ ಹೊಂದಿದ್ದೇವೆ. 2047ರ ವೇಳೆಗೆ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು 500 ದಶಲಕ್ಷ ಟನ್‌ಗಳಿಗೆ ವಿಸ್ತರಿಸುವತ್ತಲೂ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಇದು ಸಂಭವಿಸಬೇಕಾದರೆ, ನಮ್ಮ ಉಕ್ಕಿನ ವಲಯವು ಹೊಸ ಪ್ರಕ್ರಿಯೆಗಳು, ಹೊಸ ಶ್ರೇಣಿಗಳು ಮತ್ತು ಹೊಸ ಪ್ರಮಾಣಕ್ಕೆ ಸಿದ್ಧವಾಗಿರಬೇಕು. ನಾವು ಭವಿಷ್ಯ-ಆಧಾರಿತ ಮನಸ್ಥಿತಿಯೊಂದಿಗೆ ವಿಸ್ತರಿಸಬೇಕು ಮತ್ತು ಪರಿಷ್ಕರಣೆ ಮಾಡಬೇಕು. ನಾವು ಈಗ ಭವಿಷ್ಯಕ್ಕೆ ಸಿದ್ಧರಾಗಬೇಕು. ಉಕ್ಕು ಉದ್ಯಮದ ಬೆಳವಣಿಗೆ ಸಾಮರ್ಥ್ಯವು ಉದ್ಯೋಗ ಸೃಷ್ಟಿಗೆ ಅಪರಿಮಿತ ಅವಕಾಶಗಳನ್ನು ಹೊಂದಿದೆ. ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು, ಪೋಷಿಸಲು ಮತ್ತು ಹಂಚಿಕೊಳ್ಳಲು ನಾನು ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ಕರೆ ನೀಡುತ್ತೇನೆ. ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನ ನವೀಕರಣಗಳಲ್ಲಿ ನಾವು ಒಟ್ಟಾಗಿ ಮುಂದುವರಿಯಬೇಕು, ನಮ್ಮ ದೇಶದ ಯುವಕರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು.

ಸ್ನೇಹಿತರೆ,

ಉಕ್ಕು ಉದ್ಯಮದ ಬೆಳವಣಿಗೆಯ ಪ್ರಯಾಣದಲ್ಲಿ ಕೆಲವು ಸವಾಲುಗಳಿವೆ, ಅವುಗಳನ್ನು ಪರಿಹರಿಸಲು ಮುಂದಡಿ ಇಡುವುದು ಅತ್ಯಗತ್ಯ. ಕಚ್ಚಾ ವಸ್ತುಗಳ ಸುರಕ್ಷತೆಯು ಒಂದು ಪ್ರಮುಖ ಕಾಳಜಿಯಾಗಿ ಉಳಿದಿದೆ. ನಾವು ಇನ್ನೂ ನಿಕ್ಕಲ್, ಕೋಕಿಂಗ್ ಕಲ್ಲಿದ್ದಲು ಮತ್ತು ಮ್ಯಾಂಗನೀಸ್ ಆಮದುಗಳ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ, ನಾವು ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸಬೇಕು, ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಬೇಕು ಮತ್ತು ತಂತ್ರಜ್ಞಾನ ನವೀಕರಣಗಳತ್ತ ಗಮನ ಹರಿಸಬೇಕು. ನಾವು ಇಂಧನ-ಸಮರ್ಥ, ಕಡಿಮೆ ಇಂಗಾಲ ಹೊರಸೂಸುವಿಕೆ ಮತ್ತು ಡಿಜಿಟಲ್ ಮುಂದುವರಿದ ತಂತ್ರಜ್ಞಾನಗಳತ್ತ ವೇಗವಾಗಿ ಸಾಗಬೇಕು. ಉಕ್ಕು ಉದ್ಯಮದ ಭವಿಷ್ಯವು ಕೃತಕ ಬುದ್ಧಿಮತ್ತೆ, ಆಟೊಮೇಷನ್, ಮರುಬಳಕೆ ಮತ್ತು ಉಪ-ಉತ್ಪನ್ನ ಬಳಕೆಯಿಂದ ರೂಪುಗೊಳ್ಳುತ್ತದೆ. ಅದಕ್ಕಾಗಿಯೇ ನಾವು ಈ ಕ್ಷೇತ್ರಗಳಲ್ಲಿ ನಾವೀನ್ಯತೆಯಲ್ಲಿ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕು. ನಮ್ಮ ಜಾಗತಿಕ ಪಾಲುದಾರರು ಮತ್ತು ಭಾರತೀಯ ಕಂಪನಿಗಳು ಈ ದಿಕ್ಕಿನಲ್ಲಿ ಒಟ್ಟಾಗಿ ಕೆಲಸ ಮಾಡಿದರೆ, ನಾವು ಈ ಸವಾಲುಗಳನ್ನು ಹೆಚ್ಚು ವೇಗವಾಗಿ ಜಯಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಕಲ್ಲಿದ್ದಲು ಆಮದುಗಳು, ವಿಶೇಷವಾಗಿ ಕೋಕಿಂಗ್ ಕಲ್ಲಿದ್ದಲು, ವೆಚ್ಚ ಮತ್ತು ಆರ್ಥಿಕತೆ ಎರಡರ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಾವು ಪರ್ಯಾಯಗಳನ್ನು ಹುಡುಕಬೇಕು. ಇಂದು ಡಿಆರ್ ಐ(ನೇರವಾಗಿ ಕಡಿಮೆಗೊಳಿಸಿದ ಕಬ್ಬಿಣ) ಮಾರ್ಗ ಮತ್ತು ಇತರೆ ಆಧುನಿಕ ವಿಧಾನಗಳಂತಹ ತಂತ್ರಜ್ಞಾನಗಳು ಲಭ್ಯವಿದೆ, ನಾವು ಅವುಗಳನ್ನು ಮತ್ತಷ್ಟು ಉತ್ತೇಜಿಸಲು ಕೆಲಸ ಮಾಡುತ್ತಿದ್ದೇವೆ. ನಾವು ಕಲ್ಲಿದ್ದಲು ಅನಿಲೀಕರಣವನ್ನು ಸಹ ಬಳಸಿಕೊಳ್ಳಬಹುದು, ಇದು ದೇಶದ ಕಲ್ಲಿದ್ದಲು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಉಕ್ಕು ಉದ್ಯಮದ ಎಲ್ಲಾ ಪಾಲುದಾರರು ಈ ಪ್ರಯತ್ನದ ಭಾಗವಾಗಲು ಮತ್ತು ಈ ದಿಕ್ಕಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ.

 

ಸ್ನೇಹಿತರೆ,

ಇನ್ನೊಂದು ಪ್ರಮುಖ ವಿಷಯವೆಂದರೆ, ಬಳಕೆಯಾಗದ ಹಸಿರು ವಲಯದ ಗಣಿಗಳು. ಕಳೆದ 10 ವರ್ಷಗಳಲ್ಲಿ ದೇಶವು ಹಲವಾರು ಗಣಿಗಾರಿಕೆ ಸುಧಾರಣೆಗಳನ್ನು ಕೈಗೊಂಡಿದೆ, ಇದು ಕಬ್ಬಿಣದ ಅದಿರನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಈಗ, ಈ ಹಂಚಿಕೆಯಾದ ಗಣಿಗಳು ಮತ್ತು ನಮ್ಮ ರಾಷ್ಟ್ರೀಯ ಸಂಪನ್ಮೂಲಗಳನ್ನು ಸರಿಯಾಗಿ ಮತ್ತು ಸಕಾಲಿಕವಾಗಿ ಬಳಸುವುದು ಅತ್ಯಂತ ಮುಖ್ಯವಾಗಿದೆ. ಇದರಲ್ಲಿ ಯಾವುದೇ ವಿಳಂಬವು ರಾಷ್ಟ್ರಕ್ಕೆ ಹಾನಿ ಮಾಡುವುದಲ್ಲದೆ, ಉದ್ಯಮಕ್ಕೂ ನಷ್ಟವಾಗುತ್ತದೆ. ಅದಕ್ಕಾಗಿಯೇ ನಾನು ಹಸಿರು ವಲಯದ ಗಣಿಗಾರಿಕೆಯನ್ನು ತ್ವರಿತಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಇಂದಿನ ಭಾರತವು ಕೇವಲ ದೇಶೀಯ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸದೆ, ಜಾಗತಿಕ ನಾಯಕತ್ವ ವಹಿಸಿಕೊಳ್ಳಲು ಸಹ ತಯಾರಿ ನಡೆಸುತ್ತಿದೆ. ಇಂದು ಜಗತ್ತು ನಮ್ಮನ್ನು ಉತ್ತಮ ಗುಣಮಟ್ಟದ ಉಕ್ಕಿನ ವಿಶ್ವಾಸಾರ್ಹ ಪೂರೈಕೆದಾರರಾಗಿ ನೋಡುತ್ತದೆ. ನಾನು ಮೊದಲೇ ಹೇಳಿದಂತೆ, ನಾವು ಉಕ್ಕಿನಲ್ಲಿ ವಿಶ್ವ ದರ್ಜೆಯ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು, ನಿರಂತರವಾಗಿ ನಮ್ಮನ್ನು ಪರಿಷ್ಕರಿಸಿಕೊಳ್ಳಬೇಕು. ಸರಕು ಸಾಗಣೆ ಸುಧಾರಿಸುವುದು, ಬಹು-ಮಾದರಿ ಸಾರಿಗೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವೆಚ್ಚ ದಕ್ಷತೆ ಖಚಿತಪಡಿಸಿಕೊಳ್ಳುವುದರಿಂದ ಭಾರತವನ್ನು ಜಾಗತಿಕ ಉಕ್ಕಿನ ಗಮ್ಯ ತಾಣವಾಗಿ ಮಾಡಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಈ ಇಂಡಿಯಾ ಸ್ಟೀಲ್ ವೇದಿಕೆಯು ನಮ್ಮ ಸಾಮರ್ಥ್ಯಗಳನ್ನು ವಿಸ್ತರಿಸಲು ಮತ್ತು ನಮ್ಮ ಆಲೋಚನೆಗಳನ್ನು ಜೀವಂತಗೊಳಿಸಲು ನಮಗೆ ಒಂದು ಅವಕಾಶವಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಚೇತರಿಕೆಯ,  ಕ್ರಾಂತಿಕಾರಿ ಮತ್ತು ಉಕ್ಕಿನಂತಹ ಬಲಿಷ್ಠ ಭಾರತ ಕಟ್ಟಲು ನಾವೆಲ್ಲರೂ ಒಟ್ಟಾಗಿ ಬರೋಣ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's IT industry to hit $315 billion in FY26 as AI revenues reach $10-12 billion: Nasscom

Media Coverage

India's IT industry to hit $315 billion in FY26 as AI revenues reach $10-12 billion: Nasscom
NM on the go

Nm on the go

Always be the first to hear from the PM. Get the App Now!
...
Prime Minister Condoles the Passing of Thiru R. Nallakannu
February 25, 2026

The Prime Minister has expressed his condolences over the passing of Thiru R. Nallakannu, highlighting his grassroots connect and his tireless efforts to give a voice to the underprivileged.

The Prime Minister noted that Thiru R. Nallakannu was widely respected by people from every section of society and his simplicity was noteworthy. The Prime Minister shared that his thoughts are with the family and admirers during this time.

The Prime Minister shared on X;

"Thiru R. Nallakannu will be remembered for his grassroots connect and efforts to give voice to the underprivileged, workers and farmers. He was widely respected by people from every section of society. Equally noteworthy was his simplicity. My thoughts are with his family and admirers."