ಶಿಲ್ಲಾಂಗ್‌ನ ನೈಗ್ರಿಮ್ಸ್ ನಲ್ಲಿ 7500ನೇ ಜನೌಷಧಿ ಕೇಂದ್ರ ರಾಷ್ಟ್ರಕ್ಕೆ ಸಮರ್ಪಣೆ
ಬಡವರ ಅಧಿಕ ವೈದ್ಯಕೀಯ ವೆಚ್ಚದ ಹೊರೆ ಇಳಿಸಿದ ಜನೌಷಧಿ ಯೋಜನೆ: ಪ್ರಧಾನಮಂತ್ರಿ
ಜನೌಷಧಿ ಕೇಂದ್ರಗಳಿಂದಲೇ ಕೈಗೆಟಕುವ ದರದ ಔಷಧಗಳನ್ನು ಖರೀದಿಸಬೇಕೆಂದು ಕರೆ
ನೀವು ನಮ್ಮ ಕುಟುಂಬದವರು ಮತ್ತು ನಿಮ್ಮ ಕಾಯಿಲೆಗಳು, ನಮ್ಮ ಕುಟುಂಬದ ಸದಸ್ಯರ ಕಾಯಿಲೆಗಳಂತೆ, ಹಾಗಾಗಿ ನಾನು ನನ್ನ ದೇಶವಾಸಿಗಳ ಆರೋಗ್ಯ ಸ್ಥಿರವಾಗಿರಬೇಕೆಂದು ಬಯಸುತ್ತೇನೆ: ಪ್ರಧಾನಮಂತ್ರಿ

ಈ ಸಮಾರಂಭದಲ್ಲಿರುವ ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಸದಾನಂದ ಗೌಡ ಜೀ, ಶ್ರೀ ಮನ್ಸುಖ್ ಮಾಂಡವೀಯಾ ಜೀ ಮತ್ತು ಶ್ರೀ ಅನುರಾಗ್ ಠಾಕೂರ್ ಜೀ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್ ಜೀ, ಮೇಘಾಲಯ ಮುಖ್ಯಮಂತ್ರಿ ಶ್ರೀ ಕೊನ್ರಾಡ್ ಕೆ. ಸಂಗ್ಮಾ ಜೀ, ಉಪಮುಖ್ಯಮಂತ್ರಿ ಶ್ರೀ ಪ್ರೆಸ್ಟೋನ್ ತ್ಯಾಂಗ್ ಸಾಂಗ್ ಜೀ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಜೀ, ದೇಶಾದ್ಯಂತದ ಜನೌಷಧಿ ಕೇಂದ್ರಗಳ ಆಪರೇಟರುಗಳೇ ಮತ್ತು ಫಲಾನುಭವಿಗಳೇ, ವೈದ್ಯರೇ ಮತ್ತು ನನ್ನ ಸಹೋದರರೇ ಹಾಗು ಸಹೋದರಿಯರೇ!.

ಜನೌಷಧಿ ಚಿಕಿತ್ಸಕ್, ಜನೌಷಧಿ ಜ್ಯೋತಿ ಮತ್ತು ಜನೌಷಧಿ ಸಾರಥಿ-ಈ ಮೂರು ಪ್ರಮುಖ ಪ್ರಶಸ್ತಿಗಳನ್ನು ಪಡೆದ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ!.

ಸ್ನೇಹಿತರೇ,

ದೇಶದ ಪ್ರತಿಯೊಂದು ಮೂಲೆಗಳಲ್ಲಿ ಜನೌಷಧಿ ಯೋಜನೆಯನ್ನು ನಡೆಸುತ್ತಿರುವ ಆಪರೇಟರುಗಳು ಮತ್ತು ಅದರ ಕೆಲವು ಫಲಾನುಭವಿಗಳ ಜೊತೆಯಲ್ಲಿ ಸಂವಾದ ನಡೆಸುವ ಅವಕಾಶ ನನಗೆ ಲಭಿಸಿತ್ತು. ಮತ್ತು ಚರ್ಚೆಯಿಂದ ಅತ್ಯಂತ ಸ್ಪಷ್ಟವಾಗಿ ಕಂಡುಬಂದುದೇನೆಂದರೆ ಈ ಯೋಜನೆಯು ಬಡವರಿಗೆ ಮತ್ತು ಅದರಲ್ಲಿಯೂ ವಿಶೇಷವಾಗಿ ಮಧ್ಯಮವರ್ಗದ ಕುಟುಂಬಗಳಿಗೆ ಬಹಳ ಉಪಯುಕ್ತ ಎಂಬುದು. ಈ ಯೋಜನೆಯು ಸೇವೆ ಮತ್ತು ಉದ್ಯೋಗಾವಕಾಶಗಳ ಮಾಧ್ಯಮವಾಗುತ್ತಿದೆ. ಕಡಿಮೆ ಬೆಲೆಯ ಔಷಧಿಗಳ ಜೊತೆಗೆ ಈ ಜನೌಷಧಿ ಕೇಂದ್ರಗಳು ಯುವಜನತೆಗೆ ಆದಾಯದ ಮೂಲಗಳಾಗಿವೆ.

ಸ್ಯಾನಿಟರಿ ಪ್ಯಾಡ್ ಗಳನ್ನು ಬರೇ 2.5 ರೂಪಾಯಿಗೆ ಲಭ್ಯವಾಗುವಂತೆ ಮಾಡುವುದರಿಂದ ನಮ್ಮ ಸಹೋದರಿಯರು ಮತ್ತು ಪುತ್ರಿಯರ ಬದುಕಿನಲ್ಲಿ ಧನಾತ್ಮಕ ಪರಿಣಾಮವುಂಟಾಗಿದೆ. ಇದುವರೆಗೆ ಈ ಕೇಂದ್ರಗಳಲ್ಲಿ 11 ಕೋಟಿಗೂ ಅಧಿಕ ನ್ಯಾಪ್ ಕಿನ್ ಗಳು ಮಾರಾಟವಾಗಿವೆ. ಅದೇ ರೀತಿ ಗರ್ಭಿಣಿ ಮಹಿಳೆಗೆ ಅವಶ್ಯ ಪೋಷಕಾಂಶ ಮತ್ತು ಇತರ ಪೂರಕ ಪೋಷಕಾಂಶಗಳನ್ನೂ ಜನೌಷಧಿ ಕೇಂದ್ರಗಳಲ್ಲಿ ”ಜನೌಷಧಿ ಜನನಿ’ ಆಂದೋಲನದಡಿಯಲ್ಲಿ ಒದಗಿಸಲಾಗುತ್ತಿದೆ. ವಾಸ್ತವವಾಗಿ, ಅಲ್ಲಿ 1000 ಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ಜನೌಷಧಿ ಯೋಜನೆ ಪುತ್ರಿಯರಿಗೆ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ವೇಗವರ್ಧಕವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಈಶಾನ್ಯ ಭಾರತದ ಗುಡ್ಡಗಾಡುಗಳಲ್ಲಿ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿರುವ ದೇಶವಾಸಿಗಳಿಗೆ ಯೋಜನೆಯು ಕೈಗೆಟಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದೆ. ಇಂದು 7,500ನೇ ಕೇಂದ್ರವನ್ನು ಶಿಲ್ಲಾಂಗ್ ನಲ್ಲಿ ಆರಂಭಿಸಲಾಯಿತು. ಇದು ಈಶಾನ್ಯದಲ್ಲಿ ಜನೌಷಧಿ ಕೇಂದ್ರಗಳ ವಿಸ್ತರಣೆಯನ್ನು ತೋರಿಸುತ್ತದೆ.

ಸ್ನೇಹಿತರೇ,

ಆರು ವರ್ಷಗಳ ಹಿಂದೆ ದೇಶದಲ್ಲಿ ಇಂತಹ 100 ಕೇಂದ್ರಗಳೂ ಇರಲಿಲ್ಲ, ಆದುದರಿಂದ 7500ನೇ ಮೈಲಿಗಲ್ಲು ಬಹಳ ಮುಖ್ಯ. ಮತ್ತು ನಾವು 10,000ದ ಗುರಿಯನ್ನು ಆದಷ್ಟು ಬೇಗ ದಾಟಲು ಇಚ್ಛಿಸುತ್ತೇವೆ. ನಾನು ರಾಜ್ಯ ಸರಕಾರಗಳು ಮತ್ತು ಇಲಾಖೆಯ ಸಿಬ್ಬಂದಿಗಳಲ್ಲಿ ಒಂದು ಕೋರಿಕೆ ಮಂಡಿಸಲು ಇಚ್ಛಿಸುತ್ತೇನೆ. 75 ನೇ ವರ್ಷದ ಸ್ವಾತಂತ್ರ್ಯೋತ್ಸವ ನಮಗೆ ಬಹಳ ಮುಖ್ಯ ಅವಕಾಶ. ನಾವು ಈ ಅತ್ಯಲ್ಪ ಕಾಲದಲ್ಲಿ ದೇಶದ ಕನಿಷ್ಟ 75 ಜಿಲ್ಲೆಗಳಲ್ಲಿ 75 ಜನೌಷಧಿ ಕೇಂದ್ರಗಳನ್ನು ಹೊಂದಲು ನಿರ್ಧರಿಸಬಹುದೇ?. ನೀವು ನೋಡಿ ಈ ವಿಸ್ತರಣೆಯ ಪರಿಣಾಮ ಏನಾಗಿರುತ್ತದೆ ಎಂಬುದನ್ನು.

ಅದೇ ರೀತಿ, ಫಲಾನುಭವಿಗಳ ಸಂಖ್ಯೆಗೂ ಗುರಿ ನಿಗದಿ ಮಾಡಬೇಕು. ಜನೌಷಧಿ ಕೇಂದ್ರಗಳಿಗೆ ಫಲಾನುಭವಿಗಳ ಸಂಖ್ಯೆಯನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸುವಂತೆ ಗುರಿ ನಿಗದಿ ಮಾಡಬೇಕು. ನಾವು ಈ ಎರಡು ಅಂಶಗಳ ಮೇಲೆ ಕಾರ್ಯಾಚರಿಸಬೇಕು. ಎಷ್ಟು ಬೇಗ ಈ ಕೆಲಸ ಮಾಡುತ್ತೇವೋ, ಅಷ್ಟು ದೇಶದ ಬಡವರಿಗೆ ಹೆಚ್ಚು ಲಾಭವಾಗುತ್ತದೆ. ಈ ಜನೌಷಧಿ ಕೇಂದ್ರಗಳು ಬಡವರಿಗೆ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಪ್ರತೀ ವರ್ಷ 3,600 ಕೋ. ರೂ.ಗಳನ್ನು ಉಳಿತಾಯ ಮಾಡುತ್ತಿವೆ. ಮತ್ತು ಇದು ಸಣ್ಣ ಮೊತ್ತವೇನಲ್ಲ. ಇದನ್ನು ಈ ಮೊದಲು ದುಬಾರಿ ಔಷಧಿಗಳ ಮೇಲೆ ಖರ್ಚು ಮಾಡಲಾಗುತ್ತಿತ್ತು. ಈ ಕುಟುಂಬಗಳು 3,500 ಕೋ.ರೂ.ಗಳನ್ನು ಉತ್ತಮ ಕೆಲಸಗಳಿಗಾಗಿ ಖರ್ಚು ಮಾಡುತ್ತಿವೆ.

ಸ್ನೇಹಿತರೇ,

ಜನೌಷಧಿ ಯೋಜನೆಯನ್ನು ತ್ವರಿತವಾಗಿ ವಿಸ್ತರಿಸಲು ಈ ಕೇಂದ್ರಗಳ ಪ್ರೋತ್ಸಾಹಧನವನ್ನು 2.5 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಇದಲ್ಲದೆ, ದಲಿತರಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಮತ್ತು ಈಶಾನ್ಯದ ಜನತೆಗೆ 2 ಲಕ್ಷ ರೂಪಾಯಿಗಳ ಪ್ರೋತ್ಸಾಹಧನವನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ಹಣವು ಅವರಿಗೆ ಅವರ ಅಂಗಡಿ ಮಳಿಗೆಗಳನ್ನು ಅವಶ್ಯ ಪೀಠೋಪಕರಣಗಳು ಇತ್ಯಾದಿಗಳೊಂದಿಗೆ ರೂಪಿಸಲು ಸಹಾಯ ಮಾಡುತ್ತದೆ. ಈ ಯೋಜನೆ ಫಾರ್ಮಾ ವಲಯಕ್ಕೆ ಹೊಸ ಆಯಾಮ ಮತ್ತು ಸಾಧ್ಯತೆಗಳನ್ನು ತೆರೆಯುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ಭಾರತೀಯ ತಯಾರಿಕೆಯ ಔಷಧಿಗಳಿಗೆ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆ ಹೆಚ್ಚಿದಂತೆ ಉತ್ಪಾದನೆಯೂ ಹೆಚ್ಚುತ್ತಿದೆ. ಇದು ಬೃಹತ್ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತಿದೆ. ಹೋಮಿಯೋಪಥಿ ಮತ್ತು ಆಯುರ್ವೇದ ಸಹಿತ 75 ಆಯುಷ್ ಔಷಧಿಗಳನ್ನು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಲು ಕೈಗೊಂಡಿರುವ ನಿರ್ಧಾರ ನನಗೆ ಸಂತೋಷ ತಂದಿದೆ. ಕಡಿಮೆ ದರದಲ್ಲಿ ಆಯುಷ್ ಔಷಧಿಗಳ ಲಭ್ಯತೆಯು ರೋಗಿಗಳಿಗೆ ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲ, ಇದು ಆಯುರ್ವೇದ ಮತ್ತು ಆಯುಷ್ ಔಷಧಿ ವಲಯಕ್ಕೂ ಸಹಾಯ ಮಾಡಲಿದೆ.

ಸ್ನೇಹಿತರೇ,

ಬಹಳ ಧೀರ್ಘ ಅವಧಿಯಿಂದ, ದೇಶದ ಅಧಿಕೃತ ಚಿಂತನೆಯಲ್ಲಿ ಆರೋಗ್ಯ ಎಂದರೆ ಅನಾರೋಗ್ಯ ಮತ್ತು ಅದಕ್ಕೆ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಆರೋಗ್ಯ ಎಂದರೆ ಅನಾರೋಗ್ಯದಿಂದ ಬಿಡುಗಡೆ ಮಾತ್ರವಲ್ಲ, ಮತ್ತು ಅದು ಚಿಕಿತ್ಸೆಗೆ ಮಾತ್ರ ಸಂಬಂಧಪಟ್ಟುದಲ್ಲ. ಅದು ದೇಶದ ಇಡೀ ಆರ್ಥಿಕ ಮತ್ತು ಸಾಮಾಜಿಕ ಸಂರಚನೆಯ ಮೇಲೆ ಪರಿಣಾಮ ಬೀರುತ್ತದೆ. ದೇಶದ ಜನಸಂಖ್ಯೆ-ನಗರಗಳ ಅಥವಾ ಗ್ರಾಮಗಳ ಜನರು, ಮಹಿಳೆಯರು, ಹಿರಿಯರು, ಯುವಕರು, ಮಕ್ಕಳು- ಆರೋಗ್ಯವಾಗಿದ್ದರೆ, ಆಗ ದೇಶವೂ ಅಷ್ಟೇ ಸಮರ್ಥವಾಗಿರುತ್ತದೆ. ಅವರ ಶಕ್ತಿಯು ದೇಶಕ್ಕೆ ಬಲ ತಂದುಕೊಡುತ್ತದೆ ಮತ್ತು ಅದನ್ನು ಮುನ್ನಡೆಸಲು ಉಪಯುಕ್ತವಾಗುತ್ತದೆ.

ಆದುದರಿಂದ, ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸುವುದರ ಜೊತೆಗೆ ನಾವು ಅನಾರೋಗ್ಯಕ್ಕೆ ಎಡೆ ಮಾಡಿಕೊಡುವ ಸಮಸ್ಯೆಗಳತ್ತಲೂ ಆದ್ಯತೆ ನೀಡಿದ್ದೇವೆ. ದೇಶಾದ್ಯಂತ ಹಮ್ಮಿಕೊಂಡ ಸ್ವಚ್ಛ ಭಾರತ್ ಅಭಿಯಾನ, ಶೌಚಾಲಯಗಳ ನಿರ್ಮಾಣ, ಉಚಿತ ಎಲ್.ಪಿ.ಜಿ. ಸಂಪರ್ಕ, ಆಯುಷ್ಮಾನ್ ಭಾರತ್, ಮಿಶನ್, ಇಂದ್ರಧನುಷ್, ಪೋಷಣ್ ಅಭಿಯಾನಗಳ ಹಿಂದಿನ ಚಿಂತನೆ ಇದೇ ಆಗಿತ್ತು. ಒಂದೂಟ ಕೊಡುವುದಕ್ಕಿಂತ , ನಾವು ಆರೋಗ್ಯದ ವಿಷಯದಲ್ಲಿ ಸಮಗ್ರ ರೀತಿಯಲ್ಲಿ ಕಾರ್ಯನಿರ್ವಹಿಸಿದೆವು.

ನಾವು ಜಗತ್ತಿನಲ್ಲಿ ಯೋಗಕ್ಕೆ ಹೊಸ ಗುರುತಿಸುವಿಕೆಯನ್ನು ನೀಡಲು ಪ್ರಯತ್ನಗಳನ್ನು ಮಾಡಿದೆವು. ಇಂದು, ಅಂತಾರಾಷ್ಟ್ರೀಯ ಯೋಗ ದಿನವನ್ನು ಬಹಳ ಸಂಭ್ರಮದಿಂದ ಇಡೀ ವಿಶ್ವವು ಆಚರಿಸುತ್ತಿದೆ. ನೀವು ನೋಡಿ, ಆಯುಷ್ ನ ಕಷಾಯ, ಸಾಂಬಾರ ಪದಾರ್ಥಗಳು ಮತ್ತು ಆಯುಷ್ ಪರಿಹಾರಗಳನ್ನು ಪರಿಗಣಿಸಲು ನಿರಾಕರಿಸುತ್ತಿದ್ದವರು ಈಗ ಅವುಗಳನ್ನೇ ಹೆಮ್ಮೆಯಿಂದ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಕೊರೊನಾ ಬಳಿಕ, ಅರಿಶಿನ ರಫ್ತು ಬಹಳಷ್ಟು ಹೆಚ್ಚಿದೆ. ವಿಶ್ವವು ಈಗ ಭಾರತದ ಬಳಿ ಕೊಡಲು ಬಹಳಷ್ಟಿದೆ ಎಂದು ಭಾವಿಸತೊಡಗಿದೆ.

ಇಂದು, ಜಗತ್ತು ಭಾರತದ ಸಾಮರ್ಥ್ಯಗಳನ್ನು, ಅದರಲ್ಲೂ ನಮ್ಮ ಸಾಂಪ್ರದಾಯಿಕ ಔಷಧಿಗಳನ್ನು ಗುರುತಿಸುತ್ತಿದೆ. ನಮ್ಮ ದೇಶವು ರಾಗಿ, ಜೋಳಗಳಂತಹ ಡಜನ್ನುಗಳಷ್ಟು ಸಿರಿಧಾನ್ಯಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅವು ಆರೋಗ್ಯಕ್ಕೆ ಬಹಳ ನೆರವಾಗುತ್ತವೆ. ಕಳೆದ ಬಾರಿ ನಾನು ಕರ್ನಾಟಕಕ್ಕೆ ಭೇಟಿ ಕೊಟ್ಟಾಗ, ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಜೀ ಅವರು ಸಿರಿ ಧಾನ್ಯಗಳ ಬಹಳ ದೊಡ್ಡ ಪ್ರದರ್ಶನವನ್ನು ಏರ್ಪಡಿಸಿದ್ದರು. ವಿವಿಧ ಪೋಷಕಾಂಶಯುಕ್ತ ಸಿರಿಧಾನ್ಯಗಳನ್ನು ಉತ್ಪಾದಿಸುವ ಸಣ್ಣ ರೈತರು ಇವುಗಳನ್ನು ಬಹಳ ಪ್ರಮುಖವಾಗಿ ಪ್ರದರ್ಶಿಸಿದ್ದರು. ಆದರೆ ನಮಗೆ ತಿಳಿದಿರುವಂತೆ ಇಂತಹ ಪೋಷಕಾಂಶಯುಕ್ತ ಧಾನ್ಯಗಳನ್ನು ದೇಶದಲ್ಲಿ ಪ್ರೋತ್ಸಾಹಿಸಲಾಗುತ್ತಿಲ್ಲ. ಇದು ಹಣಕಾಸು ಇಲ್ಲದ ಬಡವರಿಗೆ ಇರುವಂತಹದ್ದು ಎಂಬ ಮನೋಸ್ಥಿತಿ ನಮ್ಮದು.

ಆದರೆ ಇಂದು ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗಿದೆ. ಮತ್ತು ಪರಿಸ್ಥಿತಿಯನ್ನು ಬದಲಾಯಿಸಲು ನಾವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇಂದು ಸಿರಿ ಧಾನ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಮಾತ್ರವಲ್ಲ ವಿಶ್ವಸಂಸ್ಥೆಯು ಭಾರತದ ಆಗ್ರಹದ ಮೇರೆ 2023ನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷವಾಗಿ ಘೋಷಿಸಿದೆ. ಇಂತಹ ಸಿರಿ ಧಾನ್ಯಗಳ ಮೇಲಿನ ಗಮನ ದೇಶಕ್ಕೆ ಪೋಷಕಾಂಶಯುಕ್ತ ಆಹಾರವನ್ನು ಒದಗಿಸುತ್ತದೆ ಮಾತ್ರವಲ್ಲ ನಮ್ಮ ರೈತರ ಆದಾಯವನ್ನೂ ಹೆಚ್ಚಿಸುತ್ತದೆ. ಮತ್ತು ಈಗ ಜನರು ಪಂಚತಾರಾ ಹೊಟೇಲುಗಳಲ್ಲಿ ಕೂಡಾ ಸಿರಿ ದಾನ್ಯಗಳಿಗೆ ಬೇಡಿಕೆ ಮಂಡಿಸುತ್ತಿದ್ದಾರೆ. ನಿಧಾನವಾಗಿ ಜನರು ಕೂಡಾ ಸಿರಿ ಧಾನ್ಯಗಳು ಆರೋಗ್ಯಕ್ಕೆ ಬಹಳ ಅನುಕೂಲ ಎಂಬುದನ್ನು ಅರಿಯಲು ಆರಂಭಿಸಿದ್ದಾರೆ.

ಈಗ ವಿಶ್ವ ಸಂಸ್ಥೆಯು ಅದರ ಪ್ರಯೋಜನಗಳನ್ನು ಗುರುತಿಸಿದೆ ಮತ್ತು ಅದರಿಂದಾಗಿ ಇಡೀ ವಿಶ್ವವು 2023ನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಿದೆ. ನಮ್ಮ ಸಣ್ಣ ರೈತರು ತಾವು ಬೆಳೆಯುವ ಈ ಸಿರಿ ಧಾನ್ಯಗಳಿಂದ ಈ ಪ್ರಯತ್ನಗಳ ಮೂಲಕ ಬಹಳ ಲಾಭ ಪಡೆಯಲಿದ್ದಾರೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ಚಿಕಿತ್ಸೆಯಲ್ಲಿ ಎಲ್ಲಾ ರೀತಿಯ ತಾರತಮ್ಯವನ್ನು ತೊಡೆದು ಹಾಕಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಚಿಕಿತ್ಸೆಯು ಪ್ರತಿಯೊಬ್ಬ ಬಡವನಿಗೂ ಲಭಿಸುವಂತೆ ಮಾಡಲಾಗಿದೆ. ಅವಶ್ಯ ಔಷಧಿಗಳ ದರ, ಅದು ಹೃದಯದ ಸ್ಟೆಂಟ್ ಗಳಿರಲಿ, ಅಥವಾ ಮೊಣಕಾಲು ಗಂಟು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳಿರಲಿ-ಇವೆಲ್ಲವುಗಳ ದರವನ್ನು ಹಲವು ಪಟ್ಟು ಇಳಿಕೆ ಮಾಡಲಾಗಿದೆ. ಇದರಿಂದ ಜನತೆಗೆ ವಾರ್ಷಿಕ 12,000 ಕೋ.ರೂ.ಗಳ ಉಳಿತಾಯವಾಗಿದೆ.

ಆಯುಷ್ಮಾನ್ ಯೋಜನೆಯು ದೇಶದಲ್ಲಿಯ 50 ಕೋಟಿಗೂ ಅಧಿಕ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಖಾತ್ರಿಪಡಿಸಿದೆ. ಇದುವರೆಗೆ 1.5 ಕೋಟಿಗೂ ಅಧಿಕ ಜನರಿಗೆ ಇದರ ಪ್ರಯೋಜನ ಲಭಿಸಿದೆ. ಇದರಿಂದ ಜನತೆಗೆ ಸುಮಾರು 30,000 ಕೋ.ರೂ. ಉಳಿತಾಯವಾಗಿದೆ ಎಂದು ಅಂದಾಜು ಮಾಡಲಾಗಿದೆ. ನಾವು ಜನೌಷಧಿಗಳಿಂದಾದ ಉಳಿತಾಯವನ್ನು ಮತ್ತು ಆಯುಷ್ಮಾನ್ ಯೋಜನೆಯಡಿ ಸ್ಟೆಂಟ್ ಗಳು ಮತ್ತು ಇತರ ಉಪಕರಣಗಳ ದರದಲ್ಲಿ ಆಗಿರುವ ಇಳಿಕೆಯನ್ನು ಸೇರಿಸಿದರೆ ಮಧ್ಯಮ ವರ್ಗದ ಕುಟುಂಬಗಳಿಗೆ ವಾರ್ಷಿಕ ಸುಮಾರು 50,000 ಕೋ.ರೂ.ಗಳ ಉಳಿತಾಯವಾಗಿದೆ.

ಸ್ನೇಹಿತರೇ,

ಭಾರತವು ಜಗತ್ತಿನ ಔಷಧಾಲಯ ಎಂಬುದೀಗ ಸಾಬೀತಾಗಿದೆ. ಜಗತ್ತು ನಮ್ಮ ಜೆನರಿಕ್ ಔಷಧಿಗಳನ್ನು ಬಳಸುತ್ತಿದೆ, ಆದರೆ ಅವುಗಳ ಬಗ್ಗೆ ಸ್ವಲ್ಪ ಭಿನ್ನಾಭಿಪ್ರಾಯಗಳಿದ್ದವು ಮತ್ತು ಅವುಗಳನ್ನು ಹೆಚ್ಚು ಉತ್ತೇಜಿಸಲಾಗುತ್ತಿರಲಿಲ್ಲ. ಈಗ ನಾವದಕ್ಕೆ ಒತ್ತು ಕೊಡುತ್ತಿದ್ದೇವೆ. ನಾವು ಜೆನೆರಿಕ್ ಔಷಧಿಗಳಿಗೆ ಸಾಧ್ಯವಿರುವಷ್ಟು ಹೆಚ್ಚು ಒತ್ತು ಕೊಟ್ಟು ಸಾಮಾನ್ಯರ ಹಣ ಉಳಿತಾಯವಾಗಬೇಕು ಮತ್ತು ರೋಗ ಗುಣವಾಗಬೇಕು ಎಂಬ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದೇವೆ.

ಕೊರೊನಾ ಅವಧಿಯಲ್ಲಿ ಜಗತ್ತು ಭಾರತೀಯ ಔಷಧಿಗಳ ಶಕ್ತಿಯನ್ನು ಮನಗಂಡಿದೆ. ಅದೇ ಸ್ಥಿತಿ ನಮ್ಮ ಲಸಿಕಾ ಉದ್ಯಮಕ್ಕೂ ಬಂದಿದೆ. ಭಾರತವು ಹಲವಾರು ರೋಗಗಳಿಗೆ ಲಸಿಕೆಯನ್ನು ಅಭಿವೃದ್ಧಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ, ಆದರೆ ಅವಶ್ಯ ಪ್ರೋತ್ಸಾಹದ ಕೊರತೆಯನ್ನು ಅನುಭವಿಸುತ್ತಿದೆ. ನಾವು ಉದ್ಯಮವನ್ನು ಪ್ರೋತ್ಸಾಹಿಸಿದೆವು ಮತ್ತು ಇಂದು ಭಾರತೀಯ ನಿರ್ಮಿತ ಲಸಿಕೆಗಳು ನಮ್ಮ ಮಕ್ಕಳನ್ನು ರಕ್ಷಿಸುತ್ತಿವೆ.

ಸ್ನೇಹಿತರೇ,

ದೇಶವು ಇಂದು ತನ್ನ ವಿಜ್ಞಾನಿಗಳ ಬಗೆಗೆ ಹೆಮ್ಮೆಯನ್ನು ಹೊಂದಿದೆ, ನಾವು ನಮಗಾಗಿ ಭಾರತೀಯ ನಿರ್ಮಿತ ಲಸಿಕೆಗಳನ್ನು ಹೊಂದಿದ್ದೇವೆ ಮತ್ತು ಜಗತ್ತಿಗೂ ಸಹಾಯ ಮಾಡುತ್ತಿದ್ದೇವೆ. ನಮ್ಮ ಸರಕಾರವು ದೇಶದ ಬಡವರು ಮತ್ತು ಮಧ್ಯಮ ವರ್ಗದವರ ಬಗ್ಗೆ ವಿಶೇಷ ಕಾಳಜಿಯನ್ನು ತೋರಿಸಿದೆ. ಇಂದು ಲಸಿಕಾ ಕಾರ್ಯಕ್ರಮವನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯು ಬರೇ 250 ರೂಪಾಯಿಗಳಿಗೆ ಲಭ್ಯವಿದೆ. ಇದು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರವಾಗಿದೆ. ಪ್ರತೀ ದಿನವೂ ಲಕ್ಷಾಂತರ ಸಹೋದ್ಯೋಗಿಗಳು ಭಾರತೀಯ ನಿರ್ಮಿತ ಲಸಿಕೆಗಳನ್ನು ಪಡೆಯುತ್ತಿದ್ದಾರೆ. ನಾನು ಕೂಡಾ ನನ್ನ ಮೊದಲ ಡೋಸ್ ನ ಲಸಿಕೆಯನ್ನು ನನ್ನ ಕ್ರಮಸಂಖ್ಯೆ ಬಂದಾಗ ಪಡೆದುಕೊಂಡಿದ್ದೇನೆ.

ಸ್ನೇಹಿತರೇ,

ದೇಶದಲ್ಲಿ ಕಡಿಮೆ ದರದಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಾಗಬೇಕಾದರೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿಗಳೂ ಅವಶ್ಯ. ಆದುದರಿಂದ ನಾವು ವೈದ್ಯಕೀಯ ಕಾಲೇಜುಗಳಿಗೆ ಗ್ರಾಮಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಮತ್ತು ಎ.ಐ.ಐ.ಎಂ.ಎಸ್. ಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಧೋರಣೆಯನ್ನು ಅನುಷ್ಠಾನ ಮಾಡಲು ಮುಂದಾಗಿದ್ದೇವೆ. ಇದರಂಗವಾಗಿ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಗ್ರಾಮಗಳಲ್ಲಿ ತೆರೆಯಲಾಗುತ್ತಿದೆ. ಇವುಗಳಲ್ಲಿ 50,000 ಕ್ಕೂ ಅಧಿಕ ಕೇಂದ್ರಗಳು ಈಗಾಗಲೇ ಸೇವೆಯನ್ನು ಆರಂಭಿಸಿವೆ. ಇವುಗಳು ಬರೇ ಕೆಮ್ಮು ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುವಂತಹ ಕೇಂದ್ರಗಳಷ್ಟೇ ಅಲ್ಲ, ಅವುಗಳಲ್ಲಿ ಗಂಭೀರ ಖಾಯಿಲೆಗಳಿಗೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪರೀಕ್ಷೆಗಾಗಿ ನಗರಕ್ಕೆ ಹೋಗಬೇಕಾಗಿದ್ದಲ್ಲಿ, ಇನ್ನು ಮುಂದೆ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಈ ಪರೀಕ್ಷೆಗಳ ಸೌಲಭ್ಯ ಲಭ್ಯವಾಗಲಿದೆ.

ಸ್ನೇಹಿತರೇ,

ಈ ವರ್ಷದ ಬಜೆಟ್ ಆರೋಗ್ಯ ಕ್ಷೇತ್ರಕ್ಕೆ ಹಿಂದೆಂದೂ ಇಲ್ಲದಷ್ಟು ಹೆಚ್ಚಿನ ಹಣಕಾಸನ್ನು ಒದಗಿಸಿದೆ. ಮತ್ತು ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯನ್ನು ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಘೋಷಿಸಲಾಗಿದೆ. ಪ್ರತೀ ಜಿಲ್ಲೆಗಳಲ್ಲಿಯೂ ತಪಾಸಣಾ ಕೇಂದ್ರಗಳನ್ನು ಮತ್ತು 600 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಂಕೀರ್ಣ ಆರೋಗ್ಯ ರಕ್ಷಣಾ ಆಸ್ಪತ್ರೆಗಳನ್ನು ನಿರ್ಮಿಸಲು ಪ್ರಸ್ತಾವನೆಗಳನ್ನು ಮಾಡಲಾಗಿದೆ. ದೇಶದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಆಂದೋಲನವನ್ನು ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ಹರಡುವುದನ್ನು ತಡೆಯುವುದಕ್ಕಾಗಿ ತ್ವರಿತಗೊಳಿಸಲಾಗುತ್ತಿದೆ.

ಮೂರು ಲೋಕಸಭಾ ಕ್ಷೇತ್ರಗಳ ನಡುವೆ ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 180 ಹೊಸ ವೈದ್ಯಕೀಯ ಕಾಲೇಜುಗಳನ್ನು ಕಳೆದ ಆರು ವರ್ಷಗಳಲ್ಲಿ ಸ್ಥಾಪಿಸಲಾಗಿದೆ. 2014ಕ್ಕೆ ಮೊದಲು ದೇಶದಲ್ಲಿ ಸುಮಾರು 55,000 ಎಂ.ಬಿ.ಬಿ.ಎಸ್. ವೈದ್ಯಕೀಯ ಸೀಟುಗಳು ಇದ್ದವು. ಕಳೆದ ಆರು ವರ್ಷಗಳಲ್ಲಿ 30,000 ಕ್ಕೂ ಅಧಿಕ ಸೀಟುಗಳನ್ನು ಸೇರಿಸಲಾಗಿದೆ. ಅದೇ ರೀತಿ ಪಿ.ಜಿ. ಸೀಟುಗಳು ಸುಮಾರು 30,000ದಷ್ಟಿದ್ದವು ಅವುಗಳಿಗೆ 24,000ಕ್ಕೂ ಅಧಿಕ ಸೀಟುಗಳನ್ನು ಸೇರಿಸಲಾಗಿದೆ.

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಬರೆಯಲಾಗಿದೆ

'नात्मार्थम् नापि कामार्थम्, अतभूत दयाम् प्रति'

ಅಂದರೆ, ಈ ಔಷಧಿಗಳ ಮತ್ತು ವೈದ್ಯ ವಿಜ್ಞಾನ ಅನುಭೂತಿ ಇರುವ ಜನರಿಗೆ ಮಾತ್ರ. ಈ ಭಾವನೆಗಳೊಂದಿಗೆ, ಸರಕಾರದ ಪ್ರಯತ್ನಗಳು ಇಂದು ಯಾರೊಬ್ಬರೂ ವೈದ್ಯ ವಿಜ್ಞಾನದ ಸೌಲಭ್ಯಗಳಿಂದ ವಂಚಿತರಾಗದಂತೆ ಮಾಡಿವೆ. ಈ ಮನೋಭಾವದೊಂದಿಗೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರಿಂದಾಗಿ ಇಂದು ಚಿಕಿತ್ಸೆ ಕಡಿಮೆ ದರದಲ್ಲಿ ಎಲ್ಲಾ ಜನಸಾಮಾನ್ಯರಿಗೆ ಲಭ್ಯವಾಗುತ್ತಿದೆ.

ಈ ಆಶಯದೊಂದಿಗೆ ಪ್ರಧಾನ ಮಂತ್ರಿ ಜನೌಷಧಿ ಯೋಜನೆಯ ಜಾಲವು ಹೆಚ್ಚು ಹೆಚ್ಚು ಜನರನ್ನು ತ್ವರಿತವಾಗಿ ತಲುಪಲಿ ಎಂಬ ಹಾರೈಕೆಯೊಂದಿಗೆ ನಿಮಗೆಲ್ಲರಿಗೂ ಧನ್ಯವಾದಗಳು. ಜನೌಷಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡವರು ಇನ್ನಷ್ಟು ಹೆಚ್ಚು ಜನರನ್ನು ಪ್ರೇರೇಪಿಸಿ ಅವರು ಕೂಡಾ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಬೇಕು. ಇದರ ಪ್ರಯೋಜನವನ್ನು ಜನರಿಗೆ ಪ್ರತೀ ದಿನ ತಿಳಿಸಿ. ನೀವು ಕೂಡಾ ಇದನ್ನು ಹರಡಬೇಕು. ಮತು ಇತರರಿಗೆ ಸಹಾಯ ಮತ್ತು ಸೇವೆ ಮಾಡಬೇಕು. ಆರೋಗ್ಯದಿಂದಿರಿ ಮತ್ತು ಶಿಸ್ತನ್ನು ಪಾಲಿಸಿ, ಇದು ಔಷಧಿಯ ಜೊತೆ ಬಹಳ ಮುಖ್ಯ.

ನಾನು ನನ್ನ ದೇಶದ ಎಲ್ಲಾ ನಾಗರಿಕರು ಆರೋಗ್ಯದಿಂದಿರಬೇಕು ಎಂದು ಬಯಸುತ್ತೇನೆ, ಯಾಕೆಂದರೆ ನೀವು ನನ್ನ ಕುಟುಂಬದ ಸದಸ್ಯರು ಮತ್ತು ನೀವು ನನ್ನ ಕುಟುಂಬ ಮತ್ತು ನಿಮ್ಮ ಖಾಯಿಲೆಗಳು ನನ್ನ ಕುಟುಂಬದ ಖಾಯಿಲೆಗಳು. ಇದಕ್ಕಾಗಿ, ಅಲ್ಲಿ ಸ್ವಚ್ಛತೆಯ ಮತ್ತು ಊಟದಲ್ಲಿ ಶಿಸ್ತನ್ನು ಪಾಲಿಸಬೇಕಾದ ಅವಶ್ಯಕತೆ ಇದೆ. ಅವಶ್ಯ ಇದ್ದಲ್ಲಿ ಯೋಗ ಮಾಡಿ. ಸ್ವಲ್ಪ ವ್ಯಾಯಾಮ ಮಾಡಿರಿ. ಮತ್ತು ಫಿಟ್ ಇಂಡಿಯಾ ಆಂದೋಲನಕ್ಕೆ ಸೇರಿರಿ. ನಾವು ದೇಹಕ್ಕಾಗಿ ಏನನ್ನಾದರೂ ಮಾಡುತ್ತಿದ್ದರೆ, ಖಂಡಿತವಾಗಿಯೂ ನಾವು ರೋಗಗಳನ್ನು ದೂರ ಇಡಬಹುದು ಮತ್ತು ಒಂದು ವೇಳೆ ಅನಾರೋಗ್ಯ ಕಾಡಿದರೆ, ಜನೌಷಧಿ ಕೇಂದ್ರಗಳು ರೋಗದ ವಿರುದ್ಧ ಹೋರಾಡಲು ನಮಗೆ ಬಲವನ್ನು ಕೊಡುತ್ತವೆ.

ಈ ನಿರೀಕ್ಷೆಗಳೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಪ್ರತಿಯೊಬ್ಬರಿಗೂ ಶುಭವನ್ನು ಹಾರೈಸುತ್ತೇನೆ.

ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ, ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's sugar exports reach 2.01 lakh tonnes till February in 2026 MY: AISTA

Media Coverage

India's sugar exports reach 2.01 lakh tonnes till February in 2026 MY: AISTA
NM on the go

Nm on the go

Always be the first to hear from the PM. Get the App Now!
...
Prime Minister Welcomes French President to India, Emphasises Strengthening Bilateral Ties
February 17, 2026

Prime Minister Shri Narendra Modi extended a warm welcome to President Emmanuel Macron of France, expressing confidence that the visit will elevate India–France relations to new heights.

Highlighting the significance of the visit, Prime Minister Modi noted that the engagements in Mumbai and later in Delhi will provide fresh momentum to the strategic partnership between the two nations. He reaffirmed that their collaboration will continue to benefit not only both countries but also the wider global community.

In separate posts on X, Shri Modi wrote:

“Welcome to India!

India looks forward to your visit and to advancing our bilateral ties to new heights. I am confident that our discussions will further strengthen cooperation across sectors and contribute to global progress.

See you in Mumbai and later in Delhi, my dear friend @EmmanuelMacron.”

  “Bienvenue en Inde !

L’Inde se félicite de votre visite et entend donner un nouvel élan à notre partenariat stratégique. Je suis convaincu que nos discussions renforceront davantage la coopération dans divers secteurs et contribueront au progrès mondial.

À très bientôt à Mumbai, puis à Delhi, mon cher ami @EmmanuelMacron.”