ಕೃತಕ ಬುದ್ಧಿಮತ್ತೆಯು (ಎಐ) ಮಾನವ ಇತಿಹಾಸದಲ್ಲಿ ಒಂದು ಪರಿವರ್ತನಾತ್ಮಕ ಅಧ್ಯಾಯವನ್ನು ಗುರುತಿಸುತ್ತದೆ: ಪ್ರಧಾನಮಂತ್ರಿ
ನಾವು ಎಐ ಅನ್ನು ಪ್ರಜಾಪ್ರಭುತ್ವೀಕರಣಗೊಳಿಸಬೇಕು; ಇದು ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಒಳಗೊಳ್ಳುವಿಕೆ ಮತ್ತು ಸಬಲೀಕರಣಕ್ಕೆ ಒಂದು ಸಾಧನವಾಗಬೇಕು:ಪ್ರಧಾನಮಂತ್ರಿ
ನೈತಿಕ ಮತ್ತು ನೀತಿಬದ್ಧ ವ್ಯವಸ್ಥೆಗಳು, ಹೊಣೆಗಾರಿಕೆಯ ಆಡಳಿತ, ರಾಷ್ಟ್ರೀಯ ಸಾರ್ವಭೌಮತ್ವ, ಸುಲಭ ಲಭ್ಯತೆ ಮತ್ತು ಒಳಗೊಳ್ಳುವಿಕೆ, ಮಾನ್ಯತೆ ಮತ್ತು ಕಾನೂನುಬದ್ಧ ಎಐಗಾಗಿ ಪ್ರಧಾನಮಂತ್ರಿಯವರು ʼಮಾನವ್‌ʼ (M.A.N.A.V.) ದೃಷ್ಟಿಕೋನವನ್ನು ಮಂಡಿಸಿದರು
ನಾವು ಮಾನವರು ಮತ್ತು ಬುದ್ಧಿವಂತ ವ್ಯವಸ್ಥೆಗಳು ಸಹ-ಸೃಷ್ಟಿಸುವ, ಸಹ-ಕೆಲಸ ಮಾಡುವ ಮತ್ತು ಸಹ-ವಿಕಸನಗೊಳ್ಳುವ ಯುಗವನ್ನು ಪ್ರವೇಶಿಸುತ್ತಿದ್ದೇವೆ; ಎಐ ನಮ್ಮ ಕೆಲಸವನ್ನು ಹೆಚ್ಚು ಚತುರ, ಹೆಚ್ಚು ದಕ್ಷ ಮತ್ತು ಹೆಚ್ಚು ಪ್ರಭಾವಶಾಲಿಯಾಗಿಸಲಿದೆ: ಪ್ರಧಾನಮಂತ್ರಿ
ಜಾಗತಿಕ ಸಾಮಾನ್ಯ ಒಳಿತಿಗಾಗಿ ಎಐ ಎಂಬ ಸಾಮೂಹಿಕ ಸಂಕಲ್ಪವನ್ನು ನಾವು ಅಭಿವೃದ್ಧಿಪಡಿಸಬೇಕು: ಪ್ರಧಾನಮಂತ್ರಿ
ಎಐನಲ್ಲಿ ಭಾರತವು ಅವಕಾಶವನ್ನು ಮತ್ತು ನಾಳೆಯ ನೀಲನಕ್ಷೆಯನ್ನು ಕಾಣುತ್ತಿದೆ: ಪ್ರಧಾನಮಂತ್ರಿ

ಗೌರವಾನ್ವಿತ ಗಣ್ಯರೆ, ಸಚಿವರೆ, ಉದ್ಯಮ ನಾಯಕರೆ, ನಾವೀನ್ಯಕಾರರೆ, ಉದ್ಯಮಿಗಳೆ, ಸಂಶೋಧಕರೆ, ಪ್ರತಿನಿಧಿಗಳೆ, ಗಣ್ಯ ಅತಿಥಿಗಳೆ, ಮಹಿಳೆಯರು ಮತ್ತು ಮಹನೀಯರೆ - ನಮಸ್ತೆ!

ವಿಶ್ವದ ಅತಿದೊಡ್ಡ ಮತ್ತು ಐತಿಹಾಸಿಕ “ಎಐ ಇಂಪ್ಯಾಕ್ಟ್(ಪ್ರಭಾವ) ಶೃಂಗಸಭೆ”ಗೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಶೃಂಗಸಭೆಯು ಮನುಕುಲದ 6ನೇ ಒಂದು ಭಾಗವನ್ನು ಪ್ರತಿನಿಧಿಸುವ ರಾಷ್ಟ್ರವಾದ ಭಾರತದಲ್ಲಿ ನಡೆಯುತ್ತಿದೆ. ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯ ನೆಲೆಯಾಗಿದೆ, ತಂತ್ರಜ್ಞಾನ ಪ್ರತಿಭೆಗಳ ಅತಿದೊಡ್ಡ ಗುಂಪಾಗಿದೆ, ಅತ್ಯಂತ ವಿಸ್ತಾರವಾದ ತಂತ್ರಜ್ಞಾನ-ಸಕ್ರಿಯಗೊಳಿಸಿದ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತವು ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುವುದಲ್ಲದೆ ಅವುಗಳನ್ನು ಅಭೂತಪೂರ್ವ ವೇಗದಲ್ಲಿ ಅಳವಡಿಸಿಕೊಳ್ಳುತ್ತಿದೆ. ನಾವೀನ್ಯತೆಯನ್ನು ಸ್ವೀಕರಿಸಲು ಉತ್ಸುಕರಾಗಿರುವ 1.4 ಶತಕೋಟಿ ಭಾರತೀಯರ ಪರವಾಗಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಸರ್ಕಾರಿ ಮುಖ್ಯಸ್ಥರು, ಜಾಗತಿಕ ಎಐ ಪರಿಸರ ವ್ಯವಸ್ಥೆಯ ನಾಯಕರು ಮತ್ತು ನಾವೀನ್ಯಕಾರರಿಗೆ ನಾನು ಆತ್ಮೀಯ ಸ್ವಾಗತ ಕೋರುತ್ತೇನೆ. ನಿಮ್ಮೆಲ್ಲರ ಉಪಸ್ಥಿತಿಗೆ ನಾನು ನನ್ನ ಆಳವಾದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಈ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸುತ್ತಿರುವುದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಾಗತಿಕ ದಕ್ಷಿಣಕ್ಕೆ ಹೆಮ್ಮೆಯ ವಿಷಯವಾಗಿದೆ. ಎಐ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಇಂದು ಇಲ್ಲಿದ್ದಾರೆ. 100ಕ್ಕೂ ಹೆಚ್ಚು ದೇಶಗಳ ಪ್ರಾತಿನಿಧ್ಯ ಮತ್ತು ವಿಶ್ವಾದ್ಯಂತದ ಗಣ್ಯರು ಭಾಗವಹಿಸುವುದರೊಂದಿಗೆ, ಈ ಶೃಂಗಸಭೆಯು ಯಶಸ್ಸಿನ ಹೊಸ ಎತ್ತರ ತಲುಪುತ್ತಿದೆ. ಯುವ ಪೀಳಿಗೆಯ ಬಲವಾದ ಉಪಸ್ಥಿತಿಯು ಹೊಸ ಆತ್ಮವಿಶ್ವಾಸ  ತುಂಬುತ್ತದೆ. ಸಾಮಾನ್ಯವಾಗಿ, ಹೊಸ ತಂತ್ರಜ್ಞಾನಗಳು ಅವುಗಳ ಆರಂಭಿಕ ಹಂತಗಳಲ್ಲಿ ಸಂದೇಹವನ್ನು ಎದುರಿಸುತ್ತವೆ. ಆದರೂ, ವಿಶ್ವದ ಯುವಕರು ಎಐ ತಂತ್ರಜ್ಞಾನ  ಅಳವಡಿಸಿಕೊಳ್ಳುತ್ತಿರುವ, ಅದರ ಮಾಲೀಕತ್ವ ತೆಗೆದುಕೊಳ್ಳುವ ಮತ್ತು ಅದನ್ನು ಬಳಸುತ್ತಿರುವ ವೇಗ ಮತ್ತು ವಿಶ್ವಾಸವು ನಿಜವಾಗಿಯೂ ಅಸಾಧಾರಣವಾಗಿದೆ. ಈ ಶೃಂಗಸಭೆಯಲ್ಲಿನ ಪ್ರದರ್ಶನವು ಅಪಾರ ಉತ್ಸಾಹವನ್ನು ಉಂಟುಮಾಡಿದೆ, ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಯುವ ಪ್ರತಿಭೆಗಳಿಗೆ. ಇಲ್ಲಿ ಪ್ರಸ್ತುತಪಡಿಸಲಾದ ಪರಿಹಾರಗಳು - ಕೃಷಿ, ಭದ್ರತೆ, ಅಂಗವಿಕಲರಿಗೆ ನೆರವು ಮತ್ತು ಬಹುಭಾಷಾ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವಲ್ಲಿ - ಮೇಡ್ ಇನ್ ಇಂಡಿಯಾ ಶಕ್ತಿ ಮತ್ತು ಭಾರತದ ನವೀನ ಸಾಮರ್ಥ್ಯಗಳ ಪ್ರಬಲ ಉದಾಹರಣೆಗಳಾಗಿವೆ.

 

ಸ್ನೇಹಿತರೆ,

ಮಾನವ ಇತಿಹಾಸದಲ್ಲಿ, ಪ್ರತಿ ಕೆಲವು ಶತಮಾನಗಳಲ್ಲಿ ಒಂದು ಮಹತ್ವದ ತಿರುವು ಬರುತ್ತದೆ - ಅದು ನಾಗರಿಕತೆಯ ದಿಕ್ಕನ್ನು ಮರುಹೊಂದಿಸುತ್ತದೆ, ಅಭಿವೃದ್ಧಿಯ ವೇಗವನ್ನು ಬದಲಾಯಿಸುತ್ತದೆ. ನಾವು ಹೇಗೆ ಯೋಚಿಸುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಕೆಲಸ ಮಾಡುತ್ತೇವೆ ಎಂಬುದರ ಮಾದರಿಗಳನ್ನು ಪರಿವರ್ತಿಸುತ್ತದೆ. ಆಕರ್ಷಕ ಭಾಗವೆಂದರೆ ನಾವು ಅಂತಹ ರೂಪಾಂತರದ ಮೂಲಕ ಬದುಕುತ್ತಿರುವಾಗ, ಅದರ ನಿಜವಾದ ಪರಿಣಾಮವನ್ನು ನಾವು ವಿರಳವಾಗಿ ಗ್ರಹಿಸುತ್ತೇವೆ. ಮೊದಲು ಕಲ್ಲಿನಿಂದ ಕಿಡಿಗಳನ್ನು ಹೊತ್ತಿಸಿದಾಗ, ಅದು ನಾಗರಿಕತೆಯ ಅಡಿಪಾಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮಾತನ್ನು ಮೊದಲು ಲಿಪಿಯಾಗಿ ಪರಿವರ್ತಿಸಿದಾಗ, ಲಿಖಿತ ಜ್ಞಾನವು ಭವಿಷ್ಯದ ವ್ಯವಸ್ಥೆಗಳ ಬೆನ್ನೆಲುಬಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಂಕೇತಗಳನ್ನು ಮೊದಲು ವೈರ್‌ಲೆಸ್ ಮೂಲಕ ರವಾನಿಸಿದಾಗ, ಒಂದು ದಿನ ಇಡೀ ಪ್ರಪಂಚವು ನೈಜ ಸಮಯದಲ್ಲಿ ಸಂಪರ್ಕಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಸ್ನೇಹಿತರೆ,

ಕೃತಕ ಬುದ್ಧಿಮತ್ತೆ ಮಾನವ ಇತಿಹಾಸದಲ್ಲಿ ಒಂದು ರೂಪಾಂತರವಾಗಿದೆ. ಇಂದು ನಾವು ನೋಡುವುದು, ಇಂದು ನಾವು ಊಹಿಸುವುದು, ಅದರ ಪ್ರಭಾವದ ಆರಂಭಿಕ ಚಿಹ್ನೆಗಳು ಮಾತ್ರ. ಎಐ ಯಂತ್ರಗಳನ್ನು ಬುದ್ಧಿವಂತರನ್ನಾಗಿ ಮಾಡುತ್ತಿದೆ, ಆದರೆ ಹೆಚ್ಚು ಮುಖ್ಯವಾಗಿ, ಇದು ಮಾನವ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಈ ಬಾರಿ ವ್ಯತ್ಯಾಸವೆಂದರೆ ವೇಗ ಮತ್ತು ಪ್ರಮಾಣ ಎರಡೂ ಅಭೂತಪೂರ್ವವಾಗಿವೆ. ಮೊದಲು, ತಂತ್ರಜ್ಞಾನವು ತನ್ನ ಪರಿಣಾಮವನ್ನು ತೋರಿಸಲು ದಶಕಗಳೇ ಬೇಕಾಯಿತು. ಇಂದು, ಯಂತ್ರ ಕಲಿಕೆಯಿಂದ ಕಲಿಕೆಯ ಯಂತ್ರಗಳಿಗೆ ಪ್ರಯಾಣವು ವೇಗವಾಗಿದೆ, ಆಳವಾಗಿದೆ ಮತ್ತು ವಿಶಾಲವಾಗಿದೆ. ಆದ್ದರಿಂದ, ನಮ್ಮ ದೃಷ್ಟಿಕೋನವು ಅಷ್ಟೇ ವಿಸ್ತಾರವಾಗಿರಬೇಕು,  ನಮ್ಮ ಜವಾಬ್ದಾರಿಯೂ ಅಷ್ಟೇ ಆಳವಾಗಿರಬೇಕು. ಪ್ರಸ್ತುತ ಪೀಳಿಗೆಯ ಜೊತೆಗೆ, ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ ಎಐ ಹಸ್ತಾಂತರಿಸುತ್ತೇವೆ ಎಂಬುದನ್ನು ಸಹ ನಾವು ಪರಿಗಣಿಸಬೇಕು. ನಿಜವಾದ ಪ್ರಶ್ನೆ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದು ಅಲ್ಲ, ಆದರೆ ಇಂದು ನಾವು ಅದರೊಂದಿಗೆ ಏನು ಮಾಡಲು ಆಯ್ಕೆ ಮಾಡುತ್ತೇವೆ. ಮಾನವತೆಯು ಈ ಹಿಂದೆಯೂ ಅಂತಹ ಪ್ರಶ್ನೆಗಳನ್ನು ಎದುರಿಸಿದೆ. ಅತ್ಯಂತ ಶಕ್ತಿಶಾಲಿ ಉದಾಹರಣೆಯೆಂದರೆ ಪರಮಾಣು ಶಕ್ತಿ - ನಾವು ಅದರ ವಿನಾಶಕಾರಿ ಶಕ್ತಿಯನ್ನು ನೋಡಿದ್ದೇವೆ, ಜತೆಗೆ ಅದರ ಸಕಾರಾತ್ಮಕ ಕೊಡುಗೆಗಳನ್ನು ನಾವು ನೋಡಿದ್ದೇವೆ. ಹಾಗಾಗಿ, ಎಐ ಕೂಡ ಒಂದು ಪರಿವರ್ತಕ ಶಕ್ತಿಯಾಗಿದೆ: ದಿಕ್ಕಿಲ್ಲದಿದ್ದರೆ, ಅದು ಅಡ್ಡಿಪಡಿಸುತ್ತದೆ; ಸರಿಯಾಗಿ ಮಾರ್ಗದರ್ಶನ ನೀಡಿದರೆ, ಅದು ಪರಿಹಾರವಾಗುತ್ತದೆ. ಎಐ ಅನ್ನು ಯಂತ್ರ ಕೇಂದ್ರಿತಕ್ಕಿಂತ ಮಾನವ ಕೇಂದ್ರಿತ, ಸೂಕ್ಷ್ಮ ಮತ್ತು ಅಜಾಗರೂಕತೆಯ ಬದಲು ಜವಾಬ್ದಾರಿಯುತವಾಗಿಸುವುದು ಹೇಗೆ - ಇದು ಜಾಗತಿಕ ಎಐ ಪ್ರಭಾವ ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.

ಸ್ನೇಹಿತರೆ,

ಈ ಶೃಂಗಸಭೆಯ ವಿಷಯವಾದ ಸರ್ವಜನ ಹಿತಾಯ, ಸರ್ವಜನ ಸುಖಾಯ - ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ಸಂತೋಷ. ಇದು ನಮ್ಮ ಮಾನದಂಡ. ಎಐ ಮನುಷ್ಯರನ್ನು ಕೇವಲ ದತ್ತಾಂಶ ಬಿಂದುಗಳು ಅಥವಾ ಕಚ್ಚಾ ವಸ್ತುಗಳಿಗೆ ಇಳಿಸಬಾರದು. ಆದ್ದರಿಂದ, ಎಐ ಅನ್ನು ಸಾರ್ವತ್ರೀಕರಣಗೊಳಿಸಬೇಕು. ಇದು ಸೇರ್ಪಡೆ ಮತ್ತು ಸಬಲೀಕರಣದ ಮಾಧ್ಯಮವಾಗಬೇಕು, ವಿಶೇಷವಾಗಿ ಜಾಗತಿಕ ದಕ್ಷಿಣದಾದ್ಯಂತ.

 

ಸ್ನೇಹಿತರೆ,

ನಾವು ಎಐಗೆ ಮುಕ್ತ ಆಗಸವನ್ನು ನೀಡಬೇಕು, ಆದರೆ ಆಜ್ಞೆಯನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು. ಜಿಪಿಎಸ್ ನಂತೆ - ಇದು ಮಾರ್ಗವನ್ನು ಸೂಚಿಸುತ್ತದೆ, ಆದರೆ ದಿಕ್ಕಿನ ಅಂತಿಮ ನಿರ್ಧಾರ ನಮ್ಮದು. ಇಂದು ಎಐಗಾಗಿ ನಾವು ಆರಿಸಿಕೊಳ್ಳುವ ಮಾರ್ಗವು ನಾಳೆ ನಾವು ರೂಪಿಸುವ ಭವಿಷ್ಯವನ್ನು ನಿರ್ಧರಿಸುತ್ತದೆ.

ಸ್ನೇಹಿತರೆ,

ನವದೆಹಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ನಾನು ಎಐಗಾಗಿ ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತೇನೆ - M.A.N.A.V (MANAV), ಅಂದರೆ ಮಾನವ. MANAV ದೃಷ್ಟಿಕೋನವು ಈ ಕೆಳಗಿನವುಗಳನ್ನು ಸೂಚಿಸುತ್ತದೆ: M - ಸನ್ನಡತೆಯ ಮತ್ತು ನೈತಿಕ ವ್ಯವಸ್ಥೆಗಳು: ಅಂದರೆ ಎಐ ಅನ್ನು ನೈತಿಕ ಮಾರ್ಗಸೂಚಿಗಳ ಮೇಲೆ ನಿರ್ಮಿಸಬೇಕು. A - ಜವಾಬ್ದಾರಿಯುತ ಆಡಳಿತ: ಅಂದರೆ ಪಾರದರ್ಶಕ ನಿಯಮಗಳು ಮತ್ತು ಸದೃಢವಾದ ಮೇಲ್ವಿಚಾರಣೆ. N - ರಾಷ್ಟ್ರೀಯ ಸಾರ್ವಭೌಮತ್ವ: ಅಂದರೆ ಡೇಟಾ ಅಥವಾ ದತ್ತಾಂಶ ಉತ್ಪಾದಿಸುವವರಿಗೆ ಸೇರಿದೆ. A - ಅಂದರೆ ಪ್ರವೇಶಿಸಬಹುದಾದ ಮತ್ತು ಅಂತರ್ಗತ: ಎಐ ಏಕಸ್ವಾಮ್ಯವಾಗಿರಬಾರದು, ಆದರೆ ಗುಣಕವಾಗಿರಬೇಕು. V - ಅಂದರೆ ಮಾನ್ಯ ಮತ್ತು ಕಾನೂನುಬದ್ಧ: ಎಐ ಕಾನೂನುಬದ್ಧ ಮತ್ತು ಪರಿಶೀಲಿಸಬಹುದಾಗಿರಬೇಕು. 21ನೇ ಶತಮಾನದ ಎಐ-ಚಾಲಿತ ಜಗತ್ತಿನಲ್ಲಿ ಭಾರತದ MANAV ದೃಷ್ಟಿಕೋನವು ಮಾನವ ಕಲ್ಯಾಣಕ್ಕೆ ಪ್ರಮುಖ ಕೊಂಡಿಯಾಗಿದೆ.

ಸ್ನೇಹಿತರೆ,

ದಶಕಗಳ ಹಿಂದೆ, ಇಂಟರ್ನೆಟ್ ಪ್ರಾರಂಭವಾದಾಗ, ಅದು ಎಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎಐಗೂ ಇದು ನಿಜ. ಇಂದು, ಈ ಕ್ಷೇತ್ರದಲ್ಲಿ ಯಾವ ರೀತಿಯ ಉದ್ಯೋಗಗಳು ಹೊರಹೊಮ್ಮುತ್ತವೆ ಎಂದು ಊಹಿಸುವುದು ಕಷ್ಟ. ಕೆಲಸದ ಭವಿಷ್ಯವು ಪೂರ್ವನಿರ್ಧರಿತವಾಗಿಲ್ಲ; ಅದು ನಮ್ಮ ನಿರ್ಧಾರಗಳು ಮತ್ತು ನಮ್ಮ ಕ್ರಿಯೆಯ ಹಾದಿಯನ್ನು ಅವಲಂಬಿಸಿರುತ್ತದೆ. ಕೆಲಸದ ಭವಿಷ್ಯವು ಒಂದು ಹೊಸ ಅವಕಾಶ ಎಂದು ನಾನು ನಂಬುತ್ತೇನೆ. ಇದು ಮಾನವರು ಮತ್ತು ಬುದ್ಧಿವಂತ ವ್ಯವಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಯುಗ. "ಮಾನವರು ಮತ್ತು ಬುದ್ಧಿವಂತ ವ್ಯವಸ್ಥೆಗಳು ಸಹ-ಸೃಷ್ಟಿಸುವ, ಜತೆಗೂಡಿ ಕೆಲಸ ಮಾಡುವ ಮತ್ತು ಸಹ-ವಿಕಸನಗೊಳ್ಳುವ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ." ಎಐ ನಮ್ಮ ಕೆಲಸವನ್ನು ಚುರುಕಾದ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಪ್ರಭಾವಶಾಲಿಯನ್ನಾಗಿ ಮಾಡುತ್ತದೆ. ನಾವು ಉತ್ತಮವಾಗಿ ವಿನ್ಯಾಸಗೊಳಿಸುತ್ತೇವೆ, ವೇಗವಾಗಿ ನಿರ್ಮಿಸುತ್ತೇವೆ ಮತ್ತು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಹೆಚ್ಚಿನ ಜನರು ಹೆಚ್ಚಿನ ಮೌಲ್ಯದ, ಸೃಜನಶೀಲ ಮತ್ತು ಅರ್ಥಪೂರ್ಣ ಪಾತ್ರಗಳನ್ನು ಕಂಡುಕೊಳ್ಳುತ್ತಾರೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೊಸ ಕೈಗಾರಿಕೆಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆದ್ದರಿಂದ, ಕೌಶಲ್ಯ, ಮರುಕೌಶಲ್ಯ ಮತ್ತು ಆಜೀವ ಕಲಿಕೆಯು ಒಂದು ಸಾಮೂಹಿಕ ಆಂದೋಲನವಾಗಬೇಕು.

 

ಸ್ನೇಹಿತರೆ,

ಕೆಲಸದ ಭವಿಷ್ಯವು ಎಲ್ಲರನ್ನೂ ಒಳಗೊಳ್ಳುವ, ವಿಶ್ವಾಸಾರ್ಹ ಮತ್ತು ಮಾನವ ಕೇಂದ್ರಿತವಾಗಿರುತ್ತದೆ. ನಾವು ಒಟ್ಟಾಗಿ ಮುಂದುವರೆದರೆ, ಕೃತಕ ಬುದ್ಧಿಮತ್ತೆ ಮಾನವತೆಯ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ.

ಸ್ನೇಹಿತರೆ,

“ಸೂರ್ಯನ ಕಿರಣ ಅತ್ಯುತ್ತಮ ಸೋಂಕು ನಿವಾರಕ” ಎಂದು ಹೇಳಲಾಗುತ್ತದೆ. ಅಂದರೆ ಪಾರದರ್ಶಕತೆಯೇ ಅತ್ಯಂತ ದೊಡ್ಡ ರಕ್ಷಣೆ. ಕೆಲವು ದೇಶಗಳು ಮತ್ತು ಕಂಪನಿಗಳು ಎಐ ಒಂದು “ಕಾರ್ಯತಂತ್ರ ಆಸ್ತಿ”, ಅದನ್ನು ಗೌಪ್ಯವಾಗಿ ಅಭಿವೃದ್ಧಿಪಡಿಸಬೇಕು ಎಂದು ನಂಬುತ್ತಿವೆ. ಆದರೆ ಭಾರತ ವಿಭಿನ್ನವಾಗಿ ಯೋಚಿಸುತ್ತಿದೆ. ಎಐ ಹಂಚಿಕೊಂಡಾಗ ಮಾತ್ರ ಜಗತ್ತಿಗೆ ಪ್ರಯೋಜನವಾಗುತ್ತದೆ ಎಂದು ನಾವು ನಂಬುತ್ತೇವೆ. ಸಂಕೇತಗಳನ್ನು ಮುಕ್ತವಾಗಿ ಹಂಚಿಕೊಂಡಾಗ, ಲಕ್ಷಾಂತರ ಯುವ ಮನಸ್ಸುಗಳು ಅವುಗಳನ್ನು ಸುರಕ್ಷಿತ ಮತ್ತು ಉತ್ತಮಗೊಳಿಸಬಹುದು. ಆದ್ದರಿಂದ, ಎಐ ಅನ್ನು ಜಾಗತಿಕ ಸಾಮಾನ್ಯ ಒಳಿತಿಗಾಗಿ ಅಭಿವೃದ್ಧಿಪಡಿಸಲು ನಾವು ಸಂಕಲ್ಪ ಮಾಡೋಣ.

ಸ್ನೇಹಿತರೆ,

ಇಂದಿನ ಮತ್ತೊಂದು ತುರ್ತು ಅಗತ್ಯವೆಂದರೆ ಜಾಗತಿಕ ಮಾನದಂಡಗಳನ್ನು ಸ್ಥಾಪಿಸುವುದಾಗಿದೆ. ಡೀಪ್‌ಫೇಕ್‌ಗಳು ಮತ್ತು ಕೃತ್ರಿಮ ವಿಷಯವು ಮುಕ್ತ ಸಮಾಜಗಳನ್ನು ಅಸ್ಥಿರಗೊಳಿಸುತ್ತಿದೆ. ಭೌತಿಕ ಜಗತ್ತಿನಲ್ಲಿ, ನಾವು ಆಹಾರದ ಮೇಲೆ ಪೌಷ್ಟಿಕಾಂಶದ ಲೇಬಲ್‌ಗಳನ್ನು ನೋಡುತ್ತೇವೆ, ಆದ್ದರಿಂದ ನಾವು ಏನನ್ನು ಸೇವಿಸುತ್ತಿದ್ದೇವೆ ಎಂದು ನಮಗೆ ತಿಳಿದಿದೆ. ಅದೇ ರೀತಿ, ಡಿಜಿಟಲ್ ಜಗತ್ತಿನಲ್ಲಿ ವಿಷಯವು ದೃಢೀಕರಣ ಲೇಬಲ್‌ಗಳನ್ನು ಹೊಂದಿರಬೇಕು. ಆದ್ದರಿಂದ ಜನರು ನಿಜ ಮತ್ತು ಎಐನಿಂದ ಉತ್ಪಾದನೆಯಾಗಿದ್ದು ಏನು ಎಂದು ತಿಳಿಯುತ್ತಾರೆ. ಎಐ ಹೆಚ್ಚಿನ ಪಠ್ಯ, ಚಿತ್ರಗಳು ಮತ್ತು ವೀಡಿಯೊಗಳನ್ನು ಉತ್ಪಾದಿಸುತ್ತಿದ್ದಂತೆ, ವಾಟರ್‌ಮಾರ್ಕ್ ಮತ್ತು ಸ್ಪಷ್ಟ ಮೂಲ ಮಾನದಂಡಗಳ ಅಗತ್ಯವು ಬೆಳೆಯುತ್ತದೆ. ಅದಕ್ಕಾಗಿಯೇ ತಂತ್ರಜ್ಞಾನದೊಳಗೆ ಆರಂಭದಿಂದಲೇ ನಂಬಿಕೆ ಬೆಳೆಸಬೇಕು.

 

ಸ್ನೇಹಿತರೆ,

ಮಕ್ಕಳ ಸುರಕ್ಷತೆಯ ಬಗ್ಗೆ ನಾವು ಇನ್ನಷ್ಟು ಜಾಗರೂಕರಾಗಿರಬೇಕು. ಶಾಲಾ ಪಠ್ಯಕ್ರಮವನ್ನು ಎಚ್ಚರಿಕೆಯಿಂದ ನಿರ್ವಹಿಸಿದಂತೆಯೇ, ಎಐ ಸ್ಥಳವು ಸಹ ಮಕ್ಕಳಿಗೆ ಸುರಕ್ಷಿತ ಮತ್ತು ಕುಟುಂಬ-ಮಾರ್ಗದರ್ಶನವಾಗಿರಬೇಕು.

ಸ್ನೇಹಿತರೆ,

ಇಂದು ಜಗತ್ತು 2 ರೀತಿಯ ಜನರಾಗಿ ವಿಂಗಡಣೆಯಾಗಿದೆ. ಎಐನಲ್ಲಿ ಭಯ ನೋಡುವವರು - ಮತ್ತು ಆ ಭಯದ ಬಗ್ಗೆ ಮಾತ್ರ ಮಾತನಾಡುವವರು – ಮತ್ತೊಂದು ಎಐನಲ್ಲಿ ಅದೃಷ್ಟ ನೋಡುವವರು.

ಮತ್ತು ಸ್ನೇಹಿತರೆ,

ನಾನು ಇದನ್ನು ಜವಾಬ್ದಾರಿ ಮತ್ತು ಹೆಮ್ಮೆಯಿಂದ ಹೇಳುತ್ತೇನೆ: ಭಾರತ ಎಐನಲ್ಲಿ ಭಯ ನೋಡುವುದಿಲ್ಲ. ಭಾರತ ಎಐನಲ್ಲಿ ಅದೃಷ್ಟ ನೋಡುತ್ತದೆ. ಭಾರತ ಎಐನಲ್ಲಿ ಭವಿಷ್ಯ ನೋಡುತ್ತದೆ. ನಮ್ಮಲ್ಲಿ ಪ್ರತಿಭೆ ಇದೆ, ನಮಗೆ ಶಕ್ತಿ ಮತ್ತು ಸಾಮರ್ಥ್ಯವಿದೆ ಮತ್ತು ನಮಗೆ ನೀತಿ ಸ್ಪಷ್ಟತೆ ಇದೆ. ಈ ಶೃಂಗಸಭೆ ಸಮಯದಲ್ಲಿ 3 ಭಾರತೀಯ ಕಂಪನಿಗಳು ತಮ್ಮದೇ ಆದ ಎಐ ಮಾದರಿಗಳು ಮತ್ತು ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿವೆ ಎಂಬ ವಿಷಯ  ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಮಾದರಿಗಳು ನಮ್ಮ ಯುವಕರ ಪ್ರತಿಭೆಯನ್ನು ಪ್ರದರ್ಶಿಸುತ್ತವೆ, ಭಾರತ ನೀಡುತ್ತಿರುವ ಪರಿಹಾರಗಳ ಆಳ ಮತ್ತು ವೈವಿಧ್ಯತೆಯನ್ನು ಇದು ಪ್ರತಿಬಿಂಬಿಸುತ್ತವೆ.

 

ಸ್ನೇಹಿತರೆ,

ಭಾರತವು ಸೆಮಿಕಂಡಕ್ಟರ್ ಗಳು ಮತ್ತು ಚಿಪ್ ತಯಾರಿಕೆಯಿಂದ ಹಿಡಿದು ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಹೊಂದಾಣಿಕೆಯ ಪರಿಸರ ವ್ಯವಸ್ಥೆ ನಿರ್ಮಿಸುತ್ತಿದೆ. ಸುರಕ್ಷಿತ ಡೇಟಾ ಕೇಂದ್ರಗಳು, ಬಲವಾದ ಐಟಿ ಬೆನ್ನೆಲುಬು ಮತ್ತು ಕ್ರಿಯಾತ್ಮಕ ಆರಂಭಿಕ ಪರಿಸರ ವ್ಯವಸ್ಥೆಯು ಭಾರತವನ್ನು ಕೈಗೆಟುಕುವ, ಅಳೆಯಬಹುದಾದ ಮತ್ತು ಸುರಕ್ಷಿತ ಎಐ ಪರಿಹಾರಗಳಿಗೆ ನೈಸರ್ಗಿಕ ಕೇಂದ್ರವನ್ನಾಗಿ ಮಾಡುತ್ತದೆ. ಭಾರತವು ವೈವಿಧ್ಯತೆ, ಜನಸಂಖ್ಯಾಶಾಸ್ತ್ರ ಮತ್ತು ಪ್ರಜಾಪ್ರಭುತ್ವ ಹೊಂದಿದೆ. ಭಾರತದಲ್ಲಿ ಯಶಸ್ವಿಯಾದ ಯಾವುದೇ ಎಐ ಮಾದರಿಯನ್ನು ಜಾಗತಿಕವಾಗಿ ನಿಯೋಜಿಸಬಹುದು. ಅದಕ್ಕಾಗಿ, ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ: ಭಾರತದಲ್ಲಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿ. ಜಗತ್ತಿಗೆ ತಲುಪಿಸಿ. ಮಾನವತೆಗೆ ತಲುಪಿಸಿ. ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
e-Jagriti: Reimagining consumer justice for a Digital India

Media Coverage

e-Jagriti: Reimagining consumer justice for a Digital India
NM on the go

Nm on the go

Always be the first to hear from the PM. Get the App Now!
...
Prime Minister greets President of the United States on the 250th anniversary of the United States' independence
July 04, 2026

The Prime Minister, Shri Narendra Modi, extended greetings to the President of the United States, Mr. Donald J. Trump, and the people of the United States on the historic occasion of the 250th anniversary of the country's independence. Shri Modi underscored the enduring strength of the India–United States partnership. He noted that the relationship between the two democracies extends beyond a strategic partnership and is anchored in shared values of democracy, the rule of law and faith in the limitless potential of their people.

The Prime Minister posted on X:

On behalf of 1.4 billion Indians, I extend my warmest congratulations to President Trump and the people of the United States on the historic 250th anniversary of your Independence.

India and the United States share more than a strategic partnership. Our shared belief in democracy, rule of law and the limitless potential of our people make our friendship a force for global good.

May the next 250 years bring even greater prosperity, peace and progress for America and take the India-US partnership to new heights.

@POTUS
@realDonaldTrump