ಅಕ್ಟೋಬರ್ 1, 2025ರಂದು ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ರಾಷ್ಟ್ರಕ್ಕೆ ಆರ್ಎಸ್ಎಸ್ನ ಕೊಡುಗೆಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
1925ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿದ ಆರ್ಎಸ್ಎಸ್, ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯೊಂದಿಗೆ ಸ್ವಯಂಸೇವಕ-ಆಧಾರಿತ ಸಂಘಟನೆಯಾಗಿ ಸ್ಥಾಪಿಸಲ್ಪಟ್ಟಿತು.
ರಾಷ್ಟ್ರೀಯ ಪುನರ್ ನಿರ್ಮಾಣಕ್ಕಾಗಿ ಆರ್ಎಸ್ಎಸ್ ಒಂದು ವಿಶಿಷ್ಟ ಜನ-ಪೋಷಿತ ಚಳುವಳಿಯಾಗಿದೆ. ಶತಮಾನಗಳ ವಿದೇಶಿ ಆಳ್ವಿಕೆಯ ಪ್ರತಿಕ್ರಿಯೆಯಾಗಿ ಇದರ ಉದಯವಾಗಿದೆ. ನಮ್ಮ ಧರ್ಮದಲ್ಲಿ ಬೇರೂರಿರುವ ಭಾರತದ ರಾಷ್ಟ್ರೀಯ ವೈಭವ ದೃಷ್ಟಿಕೋನದ ಭಾವನಾತ್ಮಕ ಪ್ರತಿಬಿಂಬವೇ ಅದರ ನಿರಂತರ ಬೆಳವಣಿಗೆಗೆ ಕಾರಣವಾಗಿದೆ.
ಈ ಸಂಘವು ದೇಶಭಕ್ತಿ ಮತ್ತು ರಾಷ್ಟ್ರೀಯ ಚಾರಿತ್ರ್ಯ ರಚನೆಯ ಮೇಲೆ ಪ್ರಮುಖವಾಗಿ ಒತ್ತು ನೀಡುತ್ತದೆ. ಇದು ಮಾತೃಭೂಮಿಯ ಬಗ್ಗೆ ಭಕ್ತಿ, ಶಿಸ್ತು, ಸ್ವಯಂ ಸಂಯಮ, ಧೈರ್ಯ ಮತ್ತು ಶೌರ್ಯವನ್ನು ತುಂಬಲು ಪ್ರಯತ್ನಿಸುತ್ತದೆ. ಸಂಘದ ಅಂತಿಮ ಗುರಿಯಾದ ಭಾರತದ "ಸರ್ವಾಂಗೀಣ ಉನ್ನತಿ"ಗಾಗಿ (ಸರ್ವಾಂಗೀಣ ಅಭಿವೃದ್ಧಿ), ಪ್ರತಿಯೊಬ್ಬ ಸ್ವಯಂಸೇವಕನು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ.
ಕಳೆದ ಶತಮಾನದಲ್ಲಿ, ಆರ್ಎಸ್ಎಸ್ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ವಿಪತ್ತು ಪರಿಹಾರ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರವಾಹ, ಭೂಕಂಪ ಮತ್ತು ಚಂಡಮಾರುತಗಳು ಸೇರಿದಂತೆ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರ್ಎಸ್ಎಸ್ ಸ್ವಯಂಸೇವಕರು ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದರ ಜೊತೆಗೆ, ಆರ್ಎಸ್ಎಸ್ನ ವಿವಿಧ ಅಂಗಸಂಸ್ಥೆಗಳು ಯುವಕರು, ಮಹಿಳೆಯರು ಮತ್ತು ರೈತರ ಸಬಲೀಕರಣ, ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಸಮುದಾಯಗಳನ್ನು ಬಲಪಡಿಸುವಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಕೊಡುಗೆಯಾಗಿ ನೀಡಿವೆ.
ಈ ಶತಮಾನೋತ್ಸವ ಆಚರಣೆಗಳು ಆರ್ಎಸ್ಎಸ್ನ ಐತಿಹಾಸಿಕ ಸಾಧನೆಗಳನ್ನು ಗೌರವಿಸುವುದು ಮಾತ್ರವಲ್ಲದೆ, ಭಾರತದ ಸಾಂಸ್ಕೃತಿಕ ಪ್ರಯಾಣಕ್ಕೆ ಮತ್ತು ಅದರ ರಾಷ್ಟ್ರೀಯ ಏಕತೆಯ ಸಂದೇಶಕ್ಕೆ ತನ್ನ ನಿರಂತರ ಕೊಡುಗೆಗಳನ್ನು ನೀಡುತ್ತವೆ.


