ವಿಶ್ವದ ಆಧುನಿಕ ಆರ್ಥಿಕತೆಗಳಲ್ಲಿ ಉಕ್ಕು ಅಸ್ಥಿಪಂಜರದಂತೆ ಪಾತ್ರ ವಹಿಸಿದೆ, ಪ್ರತಿಯೊಂದು ಯಶೋಗಾಥೆಯ ಹಿಂದಿನ ಶಕ್ತಿ ಉಕ್ಕು: ಪ್ರಧಾನಮಂತ್ರಿ
ಭಾರತ ಇಂದು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ ಎಂದು ನಮಗೆ ಹೆಮ್ಮೆಯಿದೆ: ಪ್ರಧಾನಮಂತ್ರಿ
ರಾಷ್ಟ್ರೀಯ ಉಕ್ಕು ನೀತಿಯಡಿಯಲ್ಲಿ 2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ನಾವು ಹೊಂದಿದ್ದೇವೆ: ಪ್ರಧಾನಮಂತ್ರಿ
ಉಕ್ಕಿನ ಉದ್ಯಮಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಇತರ ಹಲವು ಭಾರತೀಯ ಉದ್ಯಮಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ: ಪ್ರಧಾನಮಂತ್ರಿ
ನಮ್ಮ ಎಲ್ಲಾ ಮೂಲಸೌಕರ್ಯ ಯೋಜನೆಗಳ ಗುರಿ 'ಶೂನ್ಯ ಆಮದು' ಮತ್ತು 'ನಿವ್ವಳ ರಫ್ತು' ಆಗಿರಬೇಕು: ಪ್ರಧಾನಮಂತ್ರಿ
ನಮ್ಮ ಉಕ್ಕಿನ ವಲಯವು ಹೊಸ ಪ್ರಕ್ರಿಯೆಗಳು, ಹೊಸ ಶ್ರೇಣಿಗಳು ಮತ್ತು ಹೊಸ ಪ್ರಮಾಣಕ್ಕೆ ಸಿದ್ಧವಾಗಬೇಕು: ಪ್ರಧಾನಮಂತ್ರಿ
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ವಿಸ್ತರಿಸಬೇಕು ಮತ್ತು ಉನ್ನತೀಕರಿಸಬೇಕು, ನಾವು ಇಂದಿನಿಂದಲೇ ಭವಿಷ್ಯಕ್ಕೆ ಸಿದ್ಧರಾಗಬೇಕು: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ ಹಲವಾರು ಗಣಿಗಾರಿಕೆ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ, ಕಬ್ಬಿಣದ ಅದಿರಿನ ಲಭ್ಯತೆ ಸುಲಭವಾಗಿದೆ: ಪ್ರಧಾನಮಂತ್ರಿ
ದೇಶದ ಹಂಚಿಕೆಯಾದ ಗಣಿಗಳು ಮತ್ತು ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಮಯ ಇದು, ಗ್ರೀನ್ ಫೀಲ್ಡ್ ಗಣಿಗಾರಿಕೆಯನ್ನು ವೇಗಗೊಳಿಸಬೇಕಾಗಿದೆ: ಪ್ರಧಾನಮಂತ್ರಿ
ನಾವೆಲ್ಲರೂ ಒಟ್ಟಾಗಿ ಸ್ಥಿತಿಸ್ಥಾಪಕ, ಕ್ರಾಂತಿಕಾರಿ ಮತ್ತು ಉಕ್ಕಿನ ಬಲದ ಭಾರತವನ್ನು ನಿರ್ಮಿಸೋಣ: ಪ್ರಧಾನಮಂತ್ರಿ

ಮುಂಬೈನಲ್ಲಿ ಇಂದು ನಡೆದ ಇಂಡಿಯಾ ಸ್ಟೀಲ್ 2025 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ತಮ್ಮ ಭಾಷಣ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಉದಯೋನ್ಮುಖ ವಲಯವಾದ ಉಕ್ಕು ಉದ್ಯಮದ ಸಾಮರ್ಥ್ಯ ಮತ್ತು ಅವಕಾಶಗಳ ಕುರಿತು ಮುಂದಿನ ಎರಡು ದಿನಗಳು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ಈ ವಲಯವು ಭಾರತದ ಪ್ರಗತಿಯ ಅಡಿಪಾಯವಾಗಿದೆ, ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸುತ್ತದೆ ಮತ್ತು ದೇಶದಲ್ಲಿ ಪರಿವರ್ತನೆಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಅವರು ಹೇಳಿದರು. ಇಂಡಿಯಾ ಸ್ಟೀಲ್ 2025ಕ್ಕೆ ಎಲ್ಲರನ್ನು ಸ್ವಾಗತಿಸಿದ ಪ್ರಧಾನಿ, ಹೊಸ ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಪಾಲುದಾರಿಕೆಗಳನ್ನು ರೂಪಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವು ಒಂದು ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಉಕ್ಕು ವಲಯದಲ್ಲಿ ಹೊಸ ಅಧ್ಯಾಯಕ್ಕೆ ಅಡಿಪಾಯ ಹಾಕಲಿದೆ ಎಂದು ಅವರು ಒತ್ತಿ ಹೇಳಿದರು.

ಆಧುನಿಕ ಆರ್ಥಿಕತೆಯಲ್ಲಿ ಉಕ್ಕು ಅಸ್ಥಿಪಂಜರದಂತೆ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಅದು ಗಗನಚುಂಬಿ ಕಟ್ಟಡಗಳಾಗಿರಬಹುದು, ಹಡಗುಗಳಾಗಿರಬಹುದು, ಹೆದ್ದಾರಿಗಳಾಗಿರಬಹುದು, ಹೈಸ್ಪೀಡ್ ರೈಲು ಆಗಿರಬಹುದು, ಸ್ಮಾರ್ಟ್ ಸಿಟಿಗಳಾಗಿರಬಹುದು ಅಥವಾ ಕೈಗಾರಿಕಾ ಕಾರಿಡಾರ್ ಗಳಾಗಿರಬಹುದು, ಪ್ರತಿಯೊಂದು ಯಶೋಗಾಥೆಯ ಹಿಂದಿನ ಶಕ್ತಿ ಉಕ್ಕು ಎಂದು ಅವರು ಹೇಳಿದರು. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸಲು ಶ್ರಮಿಸುತ್ತಿದೆ, ಈ ಕಾರ್ಯಾಚರಣೆಯಲ್ಲಿ ಉಕ್ಕು ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು. ಭಾರತವು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಉಕ್ಕು ನೀತಿಯಡಿಯಲ್ಲಿ, ಭಾರತವು 2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಪ್ರಸ್ತುತ ತಲಾವಾರು ಉಕ್ಕಿನ ಬಳಕೆ ಸುಮಾರು 98 ಕೆಜಿ ಇದ್ದು, 2030 ರ ವೇಳೆಗೆ ಇದು 160 ಕೆಜಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಈ ಹೆಚ್ಚುತ್ತಿರುವ ಉಕ್ಕಿನ ಬಳಕೆ ದೇಶದ ಮೂಲಸೌಕರ್ಯ ಮತ್ತು ಆರ್ಥಿಕತೆಗೆ ಸುವರ್ಣ ಮಾನದಂಡವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದು ದೇಶ ಸಾಗುತ್ತಿರುವ ದಿಕ್ಕಿನ ಜೊತೆಗೆ ಸರ್ಕಾರದ ದಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೂ ಮಾನದಂಡವಾಗಿದೆ ಎಂದು ಅವರು ಹೇಳಿದರು.

 

ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಪಾಯದಿಂದಾಗಿ ಉಕ್ಕು ಉದ್ಯಮವು ತನ್ನ ಭವಿಷ್ಯದ ಬಗ್ಗೆ ಹೊಸ ವಿಶ್ವಾಸದಿಂದ ತುಂಬಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಈ ಉಪಕ್ರಮವು ವಿವಿಧ ಉಪಯುಕ್ತತೆ ಸೇವೆಗಳು ಮತ್ತು ಲಾಜಿಸ್ಟಿಕ್ಸ್ ವಿಧಾನಗಳನ್ನು ಸಂಯೋಜಿಸುತ್ತದೆ ಎಂದು ಹೇಳಿದರು. ಸುಧಾರಿತ ಬಹು-ಮಾದರಿ ಸಂಪರ್ಕಕ್ಕಾಗಿ ಗಣಿ ಪ್ರದೇಶಗಳು ಮತ್ತು ಉಕ್ಕಿನ ಘಟಕಗಳನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಉಕ್ಕಿನ ವಲಯವು ಕೇಂದ್ರೀಕೃತವಾಗಿರುವ ಪೂರ್ವ ಭಾರತದಲ್ಲಿ ನಿರ್ಣಾಯಕ ಮೂಲಸೌಕರ್ಯವನ್ನು ನವೀಕರಿಸಲು ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು. 1.3 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು. ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಪೈಪ್ಲೈನ್ ಗಳ ಅಭಿವೃದ್ಧಿಯಲ್ಲಿ ಅಭೂತಪೂರ್ವ ವೇಗದೊಂದಿಗೆ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತಿಸುವ ದೊಡ್ಡ ಪ್ರಮಾಣದ ಪ್ರಯತ್ನಗಳು ಉಕ್ಕು ವಲಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕೋಟ್ಯಂತರ ಮನೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಜಲ ಜೀವನ್ ಮಿಷನ್ ಮೂಲಕ ಹಳ್ಳಿಗಳಲ್ಲಿ ಗಮನಾರ್ಹ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ರೀತಿಯ ಕಲ್ಯಾಣ ಉಪಕ್ರಮಗಳು ಉಕ್ಕು ಉದ್ಯಮಕ್ಕೆ ಹೊಸ ಬಲವನ್ನು ನೀಡುತ್ತಿವೆ ಎಂದು ಅವರು ಹೇಳಿದರು. ಸರ್ಕಾರಿ ಯೋಜನೆಗಳಲ್ಲಿ 'ಭಾರತದಲ್ಲಿ ತಯಾರಿಸಿದ' ಉಕ್ಕನ್ನು ಮಾತ್ರ ಬಳಸುವ ಸರ್ಕಾರದ ನಿರ್ಧಾರವನ್ನು ಅವರು ಎತ್ತಿ ತೋರಿಸಿದರು ಮತ್ತು ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯಗಳಲ್ಲಿ ಸರ್ಕಾರದ ಉಪಕ್ರಮಗಳು ಉಕ್ಕಿನ ಅತ್ಯಧಿಕ ಬಳಕೆಗೆ ಕಾರಣವಾಗಿವೆ ಎಂದು ಹೇಳಿದರು.

ಬಹು ವಲಯಗಳ ಬೆಳವಣಿಗೆಗೆ ಉಕ್ಕು ಪ್ರಮುಖ ಕಾರಣ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಉಕ್ಕು ಉದ್ಯಮಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಭಾರತದ ಇತರ ಹಲವು ಉದ್ಯಮಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಭಾರತೀಯ ಉಕ್ಕು ಉದ್ಯಮದಿಂದ ತಯಾರಿಕೆ, ನಿರ್ಮಾಣ, ಯಂತ್ರೋಪಕರಣಗಳು ಮತ್ತು ಆಟೋಮೋಟಿವ್ ನಂತಹ ಕ್ಷೇತ್ರಗಳು ಬಲವನ್ನು ಪಡೆಯುತ್ತಿವೆ ಎಂದು ಅವರು ಹೇಳಿದರು. 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡಲು ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಪ್ರಾರಂಭಿಸಿದೆ ಎಂದು ಅವರು ಉಲ್ಲೇಖಿಸಿದರು. ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಉಕ್ಕು ವಲಯಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು.

ರಕ್ಷಣಾ ಮತ್ತು ಕಾರ್ಯತಂತ್ರದ ವಲಯಗಳಿಗೆ ನಿರ್ಣಾಯಕವಾಗಿದ್ದ ಉನ್ನತ ದರ್ಜೆಯ ಉಕ್ಕಿಗಾಗಿ ಭಾರತವು ಬಹುಕಾಲದಿಂದ ಆಮದಿನ ಮೇಲೆ ಅವಲಂಬಿತವಾಗಿತ್ತು ಎಂದು ಪ್ರಧಾನಿ ಹೇಳಿದರು. ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯಲ್ಲಿ ಬಳಸಲಾದ ಉಕ್ಕನ್ನು ದೇಶೀಯವಾಗಿ ಉತ್ಪಾದಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಭಾರತದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಸಂಕೇತಿಸುವ ಐತಿಹಾಸಿಕ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗೆ ಭಾರತೀಯ ಉಕ್ಕು ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಯನ್ನು ಬೆಂಬಲಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವ ಪಿ ಎಲ್ ಐ ಯೋಜನೆಯಂತಹ ಉಪಕ್ರಮಗಳ ಮೂಲಕ ಈ ಪರಿವರ್ತನೆ ಸಾಧ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಕೇವಲ ಆರಂಭ, ಮುಂದೆ ಬಹಳ ದೂರ ಸಾಗಬೇಕಿದೆ ಎಂದು ಅವರು ಒತ್ತಿ ಹೇಳಿದರು. ದೇಶಾದ್ಯಂತ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಉನ್ನತ ದರ್ಜೆಯ ಉಕ್ಕಿನ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಅವರು ಗಮನಸೆಳೆದರು. ಈ ವರ್ಷದ ಬಜೆಟ್ ನಲ್ಲಿ ಹಡಗು ನಿರ್ಮಾಣವನ್ನು ಮೂಲಸೌಕರ್ಯ ಎಂದು ವರ್ಗೀಕರಿಸಲಾಗಿದೆ ಎಂದು ಅವರು ಹೇಳಿದರು, "ಭಾರವು ದೇಶೀಯವಾಗಿ ಆಧುನಿಕ ಮತ್ತು ದೊಡ್ಡ ಹಡಗುಗಳನ್ನು ನಿರ್ಮಿಸಿ ಇತರ ದೇಶಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಭಾರತದಲ್ಲಿ ಪೈಪ್ಲೈನ್ ದರ್ಜೆಯ ಉಕ್ಕು ಮತ್ತು ತುಕ್ಕು ನಿರೋಧಕ ಮಿಶ್ರಲೋಹಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರಧಾನಿ ಒತ್ತಿ ಹೇಳಿದರು. ದೇಶದ ರೈಲು ಮೂಲಸೌಕರ್ಯವು ಅಭೂತಪೂರ್ವ ವೇಗದಲ್ಲಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು. ಶೂನ್ಯ ಆಮದು ಗುರಿಯನ್ನು ಹೊಂದುವ ಮತ್ತು ನಿವ್ವಳ ರಫ್ತಿನ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭಾರತವು ಪ್ರಸ್ತುತ 25 ಮಿಲಿಯನ್ ಟನ್ ಉಕ್ಕನ್ನು ರಫ್ತು ಮಾಡುವ ಗುರಿಯತ್ತ ಕೆಲಸ ಮಾಡುತ್ತಿದೆ ಮತ್ತು 2047 ರ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು 500 ಮಿಲಿಯನ್ ಟನ್ ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು, ಉಕ್ಕು ವಲಯವನ್ನು ಹೊಸ ಪ್ರಕ್ರಿಯೆಗಳು, ಶ್ರೇಣಿಗಳು  ಮತ್ತು ಪ್ರಮಾಣಗಳಿಗೆ ಸಿದ್ಧಪಡಿಸುವ ಮಹತ್ವವನ್ನು ಒತ್ತಿ ಹೇಳಿದರು, ಭವಿಷ್ಯಕ್ಕೆ ಸಿದ್ಧವಾದ ಮನಸ್ಥಿತಿಯೊಂದಿಗೆ ಉದ್ಯಮವನ್ನು ವಿಸ್ತರಿಸಲು ಮತ್ತು ಮೇಲ್ದರ್ಜೆಗೇರಿಸಲು ಕರೆ ನೀಡಿದರು. ಉಕ್ಕು ಉದ್ಯಮದ ಅಭಿವೃದ್ಧಿಯು ಉದ್ಯೋಗ ಸೃಷ್ಟಿಸುವ ಅಪಾರ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹೊಸ ವಿಚಾರಗಳನ್ನು ಅಭಿವೃದ್ಧಿಪಡಿಸಲು, ಪೋಷಿಸಲು ಮತ್ತು ಹಂಚಿಕೊಳ್ಳಲು ಅವರು ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡಕ್ಕೂ ಕರೆ ನೀಡಿದರು. ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನ ಉನ್ನತೀಕರಣದಲ್ಲಿ ಸಹಯೋಗವನ್ನು ಅವರು ಒತ್ತಿ ಹೇಳಿದರು.

 

ಉಕ್ಕು ಉದ್ಯಮವು ಮುಂದಿನ ಬೆಳವಣಿಗೆಗೆ ಪರಿಹಾರದ ಅಗತ್ಯವಿರುವ ಕೆಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತ ಇನ್ನೂ ನಿಕಲ್, ಕೋಕಿಂಗ್ ಕಲ್ಲಿದ್ದಲು ಮತ್ತು ಮ್ಯಾಂಗನೀಸ್ ಆಮದಿನ ಮೇಲೆ ಅವಲಂಬಿತವಾಗಿರುವುದರಿಂದ ಕಚ್ಚಾ ವಸ್ತುಗಳ ಸುರಕ್ಷತೆಯು ಒಂದು ಗಮನಾರ್ಹ ಕಾಳಜಿಯಾಗಿದೆ ಎಂದು ಅವರು ಹೇಳಿದರು. ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವ, ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವ ಮತ್ತು ತಂತ್ರಜ್ಞಾನ ನವೀಕರಣಗಳ ಮೇಲೆ ಗಮನಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇಂಧನ-ಸಮರ್ಥ, ಕಡಿಮೆ-ಹೊರಸೂಸುವಿಕೆ ಮತ್ತು ಡಿಜಿಟಲ್ ಮುಂದುವರಿದ ತಂತ್ರಜ್ಞಾನಗಳತ್ತ ವೇಗವಾಗಿ ಚಲಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಉಕ್ಕು ಉದ್ಯಮದ ಭವಿಷ್ಯವು ಎಐ, ಆಟೋಮೇಷನ್, ಮರುಬಳಕೆ ಮತ್ತು ಉಪ-ಉತ್ಪನ್ನ ಬಳಕೆಯಿಂದ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು, ನಾವೀನ್ಯತೆಯ ಮೂಲಕ ಈ ಕ್ಷೇತ್ರಗಳಲ್ಲಿ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜಾಗತಿಕ ಪಾಲುದಾರರು ಮತ್ತು ಭಾರತೀಯ ಕಂಪನಿಗಳ ನಡುವಿನ ಸಹಯೋಗವು ಈ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಎದುರಿಸಲು ಸಹಾಯ ಮಾಡಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಕಲ್ಲಿದ್ದಲು ಆಮದು, ವಿಶೇಷವಾಗಿ ಕೋಕಿಂಗ್ ಕಲ್ಲಿದ್ದಲು, ವೆಚ್ಚ ಮತ್ತು ಆರ್ಥಿಕತೆ ಎರಡರ ಮೇಲೂ ಬೀರುವ ಗಮನಾರ್ಹ ಪರಿಣಾಮದ ಬಗ್ಗೆ ಪ್ರಧಾನಿಯವರು ಮಾತನಾಡಿದರು. ಈ ಅವಲಂಬನೆಯನ್ನು ಕಡಿಮೆ ಮಾಡಲು ಪರ್ಯಾಯಗಳನ್ನು ಅನ್ವೇಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಡಿ ಆರ್ ಐ ಮಾರ್ಗದಂತಹ ತಂತ್ರಜ್ಞಾನಗಳ ಲಭ್ಯತೆಯನ್ನು ಅವರು ಎತ್ತಿ ತೋರಿಸಿದರು ಮತ್ತು ಅವುಗಳನ್ನು ಮತ್ತಷ್ಟು ಉತ್ತೇಜಿಸುವ ಪ್ರಯತ್ನಗಳನ್ನು ಒತ್ತಿ ಹೇಳಿದರು. ದೇಶದ ಕಲ್ಲಿದ್ದಲು ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕಲ್ಲಿದ್ದಲು ಅನಿಲೀಕರಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು. ಉಕ್ಕು ಉದ್ಯಮದ ಎಲ್ಲಾ ಪಾಲುದಾರರು ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಈ ದಿಕ್ಕಿನಲ್ಲಿ ಮುಂದುವರಿಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.

 

ಬಳಕೆಯಾಗದ ಗ್ರೀನ್ ಫೀಲ್ಡ್ ಗಣಿಗಳ ಸಮಸ್ಯೆಯನ್ನು ಪರಿಹರಿಸುವ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಕಳೆದ ದಶಕದಲ್ಲಿ ಗಮನಾರ್ಹ ಗಣಿಗಾರಿಕೆ ಸುಧಾರಣೆಗಳನ್ನು ಪರಿಚಯಿಸಲಾಗಿದ್ದು, ಇದು ಕಬ್ಬಿಣದ ಅದಿರಿನ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಹೇಳಿದರು. ದೇಶದ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಹಂಚಿಕೆಯಾದ ಗಣಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಮಯ ಇದೀಗ ಬಂದಿದೆ ಎಂದು ಅವರು ಒತ್ತಿ ಹೇಳಿದರು. ಈ ಪ್ರಕ್ರಿಯೆಯಲ್ಲಿನ ವಿಳಂಬವು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಶ್ರೀ ಮೋದಿ, ಈ ಸವಾಲನ್ನು ಎದುರಿಸಲು ಗ್ರೀನ್ ಫೀಲ್ಡ್ ಗಣಿಗಾರಿಕೆ ಪ್ರಯತ್ನಗಳನ್ನು ವೇಗಗೊಳಿಸುವಂತೆ ಒತ್ತಾಯಿಸಿದರು.

ಭಾರತವು ಇನ್ನು ಮುಂದೆ ದೇಶೀಯ ಬೆಳವಣಿಗೆಯ ಮೇಲೆ ಮಾತ್ರ ಗಮನಹರಿಸುವುದಿಲ್ಲ, ಬದಲಾಗಿ ಜಾಗತಿಕ ನಾಯಕತ್ವಕ್ಕೆ ಸಿದ್ಧವಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜಗತ್ತು ಈಗ ಭಾರತವನ್ನು ಉತ್ತಮ ಗುಣಮಟ್ಟದ ಉಕ್ಕಿನ ವಿಶ್ವಾಸಾರ್ಹ ಪೂರೈಕೆದಾರನಾಗಿ ನೋಡುತ್ತಿದೆ ಎಂದು ಅವರು ಹೇಳಿದರು. ಉಕ್ಕು ಉತ್ಪಾದನೆಯಲ್ಲಿ ವಿಶ್ವ ದರ್ಜೆಯ ಮಾನದಂಡಗಳನ್ನು ಕಾಯ್ದುಕೊಳ್ಳುವ ಮತ್ತು ನಿರಂತರವಾಗಿ ಸಾಮರ್ಥ್ಯಗಳನ್ನು ನವೀಕರಿಸುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಲಾಜಿಸ್ಟಿಕ್ಸ್ ಅನ್ನು ಸುಧಾರಿಸುವುದು, ಬಹು-ಮಾದರಿ ಸಾರಿಗೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವೆಚ್ಚವನ್ನು ಕಡಿಮೆ ಮಾಡುವುದರಿಂದ ಭಾರತವು ಜಾಗತಿಕ ಉಕ್ಕಿನ ಕೇಂದ್ರವಾಗಲು ನೆರವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಸಾಮರ್ಥ್ಯಗಳನ್ನು ವಿಸ್ತರಿಸಲು ಮತ್ತು ಆಲೋಚನೆಗಳನ್ನು ಕಾರ್ಯಸಾಧ್ಯ ಪರಿಹಾರಗಳಾಗಿ ಪರಿವರ್ತಿಸಲು ಇಂಡಿಯಾ ಸ್ಟೀಲ್ ವೇದಿಕೆಯನ್ನು ಒದಗಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ಥಿತಿಸ್ಥಾಪಕ, ಕ್ರಾಂತಿಕಾರಿ ಮತ್ತು ಉಕ್ಕಿನ ಬಲದ ಭಾರತವನ್ನು ನಿರ್ಮಿಸಲು ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದ ಅವರು ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi inaugurates Micron’s ₹22,516-crore ATMP facility in Gujarat; calls chips ‘Regulator of 21st century’

Media Coverage

PM Modi inaugurates Micron’s ₹22,516-crore ATMP facility in Gujarat; calls chips ‘Regulator of 21st century’
NM on the go

Nm on the go

Always be the first to hear from the PM. Get the App Now!
...
Prime Minister expresses grief over loss of lives in factory explosion in Nagpur, Maharashtra
March 01, 2026
Prime Minister announces ex-gratia from PMNRF

The Prime Minister has expressed deep distress over the explosion at a factory in Nagpur, Maharashtra.

Extending his condolences to the families of the deceased, the Prime Minister also prayed for the speedy recovery of the injured. The Prime Minister further affirmed that the local administration is assisting those affected.

The Prime Minister has announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased. The injured would be given Rs. 50,000.

The Prime Minister Shared on X;

"The explosion at a factory in Nagpur, Maharashtra, is deeply distressing. My condolences to the families of the deceased. I pray for the speedy recovery of the injured. The local administration is assisting those affected.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000"