ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಿಗೆ ಹಸಿರು ನಿಶಾನೆ
ʻಸ್ಮಾರ್ಟ್ ಸಿಟಿʼ ಯೋಜನೆ ಅಡಿಯಲ್ಲಿ ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆಗೆ ಚಾಲನೆ
"ಕಾಶಿಯ ಜನತೆಯ ಕೆಲಸವನ್ನು ಶ್ಲಾಘಿಸಿಸುವಾಗ ನನಗೆ ಅಪಾರ ಹೆಮ್ಮೆ ಎನಿಸುತ್ತದೆ"
"ಕಾಶಿಯು ಅಭಿವೃದ್ಧಿ ಹೊಂದಿದಾಗ ಉತ್ತರ ಪ್ರದೇಶ ಅಭಿವೃದ್ಧಿ ಹೊಂದುತ್ತದೆ, ಮತ್ತು ಉತ್ತರ ಪ್ರದೇಶ ಅಭಿವೃದ್ಧಿ ಹೊಂದಿದಾಗ ದೇಶವು ಅಭಿವೃದ್ಧಿ ಹೊಂದುತ್ತದೆ"
"ಕಾಶಿ ಮತ್ತು ಇಡೀ ದೇಶವು ʻವಿಕಸಿತ ಭಾರತ ಸಂಕಲ್ಪʼಕ್ಕೆ ಬದ್ಧವಾಗಿದೆ"
"ಮೋದಿ ಅವರ ʻಗ್ಯಾರಂಟಿಯ ಗಾಡಿʼ ಸೂಪರ್ ಹಿಟ್ ಆಗಿದೆ, ಏಕೆಂದರೆ ಈಗ ಜನರು ಸರ್ಕಾರದ ಬಳಿಗೆ ಬರುವುದರ ಬದಲಿಗೇ ಸರ್ಕಾರವೇ ಜನರ ಬಳಿಗೆ ತಲುಪಲು ಪ್ರಯತ್ನಿಸುತ್ತಿದೆ "
"ಈ ವರ್ಷ, ʻಬನಾಸ್ ಡೈರಿʼಯು ಉತ್ತರ ಪ್ರದೇಶದ ರೈತರಿಗೆ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಪಾವತಿಸಿದೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು

 

ಈ ಯೋಜನೆಗಳಲ್ಲಿ ಸುಮಾರು 10,900 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ʻಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ- ನ್ಯೂ ಭಾಪುರ್ ವಿಶೇಷ ಸರಕು ಸಾಗಣೆ ಕಾರಿಡಾರ್ʼ ಯೋಜನೆಯ ಉದ್ಘಾಟನೆಯೂ ಸೇರಿದೆ. ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುʼ, ʻದೋಹ್ರಿಘಾಟ್-ಮವು ಮೆಮು ರೈಲುʼ ಮತ್ತು ಹೊಸದಾಗಿ ಉದ್ಘಾಟಿಸಲಾದ ವಿಶೇಷ ಸರಕು ಸಾಗಣೆ ಕಾರಿಡಾರ್‌ನಲ್ಲಿ ಒಂದು ಜೋಡಿ ʻಲಾಂಗ್ ಹೌಲ್ ಗೂಡ್ಸ್ ರೈಲುʼಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ʻಬನಾರಸ್ ಲೋಕೋಮೋಟಿವ್ ವರ್ಕ್ಸ್ʼ ನಿರ್ಮಿಸಿದ 10,000ನೇ ಲೋಕೋಮೋಟಿವ್‌ಗೂ ಅವರು ಹಸಿರು ನಿಶಾನೆ ತೋರಿದರು. ಎರಡು ರೈಲ್ವೆ ಮೇಲ್ಸೇತುವೆಗಳೊಂದಿಗೆ 370 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ʻಶಿವಪುರ-ಫುಲ್ವಾರಿಯಾ-ಲಹರ್ತಾರಾʼ ಹಸಿರು ಕ್ಷೇತ್ರ ರಸ್ತೆಯನ್ನು ಅವರು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಉದ್ಘಾಟಿಸಿದ ಇತರ ಪ್ರಮುಖ ಯೋಜನೆಗಳಲ್ಲಿ 20 ರಸ್ತೆಗಳ ಪುನಶ್ಚೇತನ ಮತ್ತು ಅಗಲೀಕರಣ; ಕೈಥಿ ಗ್ರಾಮದ ಸಂಗಮ್ ಘಾಟ್ ರಸ್ತೆ; ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ವಸತಿ ಕಟ್ಟಡಗಳ ನಿರ್ಮಾಣ, ಪೊಲೀಸ್ ಲೈನ್ ಮತ್ತು ಪಿಎಸಿ ಭುಲ್ಲನ್‌ಪುರದಲ್ಲಿ 200 ಮತ್ತು 150 ಹಾಸಿಗೆಗಳ ಎರಡು ಬಹುಮಹಡಿ ಬ್ಯಾರಕ್ ಕಟ್ಟಡಗಳು, 9 ಸ್ಥಳಗಳಲ್ಲಿ ನಿರ್ಮಿಸಲಾದ ಸ್ಮಾರ್ಟ್ ಬಸ್ ತಂಗುದಾಣಗಳು, ಮತ್ತು ಅಲೈಪುರದಲ್ಲಿ 132 ಕಿಲೋವ್ಯಾಟ್ ಸಬ್ ಸ್ಟೇಷನ್ ಸೇರಿವೆ. ʻಸ್ಮಾರ್ಟ್ ಸಿಟಿʼ ಯೋಜನೆ ಅಡಿಯಲ್ಲಿ ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆಗೂ ಅವರು ಚಾಲನೆ ನೀಡಿದರು.

ಚಿತ್ರಕೂಟ್ ಜಿಲ್ಲೆಯಲ್ಲಿ ಸುಮಾರು 4000 ಕೋಟಿ ರೂ.ಗಳ ವೆಚ್ಚದಲ್ಲಿ 800 ಮೆಗಾವ್ಯಾಟ್ ಸೌರ ಪಾರ್ಕ್; ಮಿರ್ಜಾಪುರದಲ್ಲಿ 1050 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಹೊಸ ಪೆಟ್ರೋಲಿಯಂ ತೈಲ ಟರ್ಮಿನಲ್; ವಾರಣಾಸಿ-ಭದೋಹಿ ಎನ್ಎಚ್ 731 ಬಿ (ಪ್ಯಾಕೇಜ್ -2) ಅನ್ನು 900 ಕೋಟಿ ರೂ.ಗಳ ವೆಚ್ಚದಲ್ಲಿ ಅಗಲಗೊಳಿಸುವುದು ಸೇರಿದಂತೆ 6500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಜಲ ಜೀವನ್ ಮಿಷನ್ ಅಡಿಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ 69 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು ಮತ್ತು ಇತರ ಆರೋಗ್ಯ ವಲಯದ ಯೋಜನೆಗಳು ಸಹ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳಲ್ಲಿ ಸೇರಿವೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻದೇವ್ ದೀಪಾವಳಿʼಯ ಸಂದರ್ಭದಲ್ಲಿ ಅತಿ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ʻಗಿನ್ನೆಸ್ ವಿಶ್ವ ದಾಖಲೆʼ ನಿರ್ಮಿಸಿದ್ದಕ್ಕಾಗಿ ವಾರಣಾಸಿಯ ಜನರನ್ನು ಅಭಿನಂದಿಸಿದರು. ಈ ದೃಶ್ಯವನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಲು ತಾವು ಉಪಸ್ಥಿತರಿಲ್ಲದಿದ್ದರೂ, ವಿದೇಶಿ ಗಣ್ಯರು ಮತ್ತು ಪ್ರವಾಸಿಗರು ಸೇರಿದಂತೆ ವಾರಣಾಸಿಗೆ ಭೇಟಿ ನೀಡಿದವರು ಈ ಬಗ್ಗೆ ತಮಗೆ ಮಾಹಿತಿ ನೀಡುತ್ತಿದ್ದರು. ವಾರಣಾಸಿ ಮತ್ತು ನಗರದ ಜನತೆಯ ಬಗ್ಗೆ ಅವರಿಂದ ಪ್ರಶಂಸೆಗಳನ್ನು ಕೇಳಿದಾಗ ತಮಗೆ ಹೆಮ್ಮೆಯ ಮೂಡಿತು ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. "ಕಾಶಿಯ ಜನರ ಕಾರ್ಯವನ್ನು ಶ್ಲಾಘಿಸಿದಾಗ ನನಗೆ ಅಪಾರ ಹೆಮ್ಮೆ ಎನಿಸುತ್ತದೆ", ಎಂದು ಉದ್ಗರಿಸಿದರು. ಭಗವಾನ್ ಮಹಾದೇವನ ಈ ಭೂಮಿಯಲ್ಲಿ ಸೇವೆಗೆ ಎಷ್ಟೇ ಸಮರ್ಪಣೆ ಇದ್ದರೂ ಸಾಲದು ಎಂದರು.

 

"ಕಾಶಿ ಅಭಿವೃದ್ಧಿ ಹೊಂದಿದಾಗ ಉತ್ತರ ಪ್ರದೇಶವು ಅಭಿವೃದ್ಧಿ ಹೊಂದುತ್ತದೆ, ಮತ್ತು ಉತ್ತರ ಪ್ರದೇಶವು ಅಭಿವೃದ್ಧಿ ಹೊಂದಿದಾಗ ದೇಶವು ಅಭಿವೃದ್ಧಿ ಹೊಂದುತ್ತದೆ," ಎಂದು ಪ್ರಧಾನಿ ಹೇಳಿದ. ಸರಿಸುಮಾರು 20,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲೂ ಇದೇ ವಿಶ್ವಾಸವನ್ನು ಶ್ರೀ ಮೋದಿ ಅವರು ವ್ಯಕ್ತಪಡಿಸಿದರು. ವಾರಣಾಸಿಯ ಗ್ರಾಮಗಳಿಗೆ ನೀರು ಸರಬರಾಜು, ಬನಾರಸ್‌ ಹಿಂದೂ ವಿವಿಯ ಟ್ರಾಮಾ ಸೆಂಟರ್‌ನಲ್ಲಿ ಕ್ರಿಟಿಕಲ್ ಕೇರ್ ಘಟಕ, ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ವಿದ್ಯುತ್, ಸೌರಶಕ್ತಿ, ಗಂಗಾ ಘಟ್ಟಗಳು ಮತ್ತು ಇತರ ಹಲವಾರು ವಲಯಗಳಿಗೆ ನೀರು ಪೂರೈಕೆಯನ್ನು ಪ್ರಸ್ತಾಪಿಸಿದ ಅವರು, ಇದು ಈ ಪ್ರದೇಶದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. ʻಕಾಶಿ-ಕನ್ಯಾಕುಮಾರಿ ತಮಿಳು ಸಂಗಮಂʼ ರೈಲಿಗೆ ನಿನ್ನೆ ಸಂಜೆ ಹಾಗೂ ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ʼ, ʻದೋಹ್ರಿಘಾಟ್-ಮವು ಮೆಮುʼ ರೈಲುಗಳಿಗೆ ಇಂದು  ಹಸಿರು ನಿಶಾನೆ ತೋರಿದ್ದನ್ನು ಅವರು ಉಲ್ಲೇಖಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಧಾನಮಂತ್ರಿಯವರು ಎಲ್ಲರನ್ನೂ ಅಭಿನಂದಿಸಿದರು.

"ಇಡೀ ದೇಶದೊಂದಿಗೆ ಕಾಶಿಯು ಸಹ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಗೆ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಸಾವಿರಾರು ಗ್ರಾಮಗಳು ಮತ್ತು ನಗರಗಳನ್ನು ತಲುಪಿದೆ. ಅಲ್ಲಿ ಕೋಟ್ಯಂತರ ನಾಗರಿಕರು ಅದರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು. ವಾರಣಾಸಿಯಲ್ಲಿ ನಡೆದ ʻವಿಕಸಿತ ಭಾರತ್ ಸಂಕಲ್ಪ ಯಾತ್ರೆʼಯಲ್ಲಿ ಪಾಲ್ಗೊಂಡಿದ್ದನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ʻವಿಕಾಸ ಭಾರತ ಸಂಕಲ್ಪ ಯಾತ್ರೆʼಯ(ವಿಬಿಎಸ್‌ವೈ) ವ್ಯಾನ್‌ಗಳನ್ನು ಜನರು 'ಮೋದಿಯವರ ಗ್ಯಾರಂಟಿಯ ಗಾಡಿʼ ಎಂದು ಕರೆಯುತ್ತಿದ್ದಾರೆ ಎಂದರು. "ಸರ್ಕಾರಿ ಯೋಜನೆಗಳಿಗೆ ಅರ್ಹರಾಗಿರುವ ಎಲ್ಲರನ್ನೂ ಅರ್ಹ ಫಲಾನುಭವಿಗಳ ಪಟ್ಟಿಗೆ ಸೇರಿಸುವ ಗುರಿಯನ್ನು ಸರ್ಕಾರ ಹೊಂದಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಜನರು ಸರ್ಕಾರದ ಬಳಿಗೆ ಬರುವ ಬದಲು, ಸರ್ಕಾರವೇ ಈಗ ಜನರ ಬಳಿಗೆ ತಲುಪುತ್ತಿದೆ ಎಂದು ಒತ್ತಿ ಹೇಳಿದರು. "ಮೋದಿಯವರ ʻಗ್ಯಾರಂಟಿ ಗಾಡಿʼಯು ಸೂಪರ್ ಹಿಟ್ ಆಗಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಹಿಂದೆ ಅವಕಾಶ ವಂಚಿತರಾಗಿದ್ದ ಸಾವಿರಾರು ಫಲಾನುಭವಿಗಳನ್ನು ವಾರಣಾಸಿಯಲ್ಲಿ ʻವಿಬಿಎಸ್‌ವೈʼ ಮೂಲಕ ಸಂಪರ್ಕಿಸಲಾಗಿದೆ ಎಂದರು. ʻಆಯುಷ್ಮಾನ್ ಕಾರ್ಡ್‌ಗಳು, ಉಚಿತ ಪಡಿತರ ಚೀಟಿಗಳು, ಶಾಶ್ವತ ಮನೆಗಳು, ಕೊಳಾಯಿ ನೀರಿನ ಸಂಪರ್ಕಗಳು ಮತ್ತು ʻವಿಬಿಎಸ್‌ವೈʼ ಅವಧಿಯಲ್ಲಿ ಪಡೆದ ಉಜ್ವಲ ಅನಿಲ ಸಂಪರ್ಕಗಳಂತಹ ಪ್ರಯೋಜನಗಳ ಉದಾಹರಣೆಗಳನ್ನು ಅವರು ನೀಡಿದರು. "ವಿಕಾಸ ಭಾರತ ಸಂಕಲ್ಪ ಯಾತ್ರೆ’ಯು ಎಲ್ಲಕ್ಕಿಂತ ಹೆಚ್ಚಾಗಿ ಜನರಲ್ಲಿ ವಿಶ್ವಾಸ ಮೂಡಿಸಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ನಂಬಿಕೆಯು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಬಲಪಡಿಸಿದೆ ಎಂದರು. ಪ್ರಧಾನಮಂತ್ರಿಯವರು ಅಂಗನವಾಡಿ ಮಕ್ಕಳ ಆತ್ಮವಿಶ್ವಾಸದ ಬಗ್ಗೆ ಅಪಾರ ತೃಪ್ತಿ ವ್ಯಕ್ತಪಡಿಸಿದರು. ತಮ್ಮ ʻವಿಬಿಎಸ್‌ವೈʼ ಭೇಟಿಯ ಸಂದರ್ಭದಲ್ಲಿ ಫಲಾನುಭವಿ ಮತ್ತು ʻಲಕ್ಷಾಧಿಪತಿ ದೀದಿʼ ಅವರೊಂದಿಗೆ ನಡೆಸಿದ ಸಂವಾದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ʻವಿಬಿಎಸ್‌ವೈʼ ಕುರಿತ ತಮ್ಮ ಕಲಿಕೆಯ ಅನುಭವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, "ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರಿಗೆ ʻವಿಬಿಎವೈʼ ಒಂದು ಸಂಚಾರಿ ವಿಶ್ವವಿದ್ಯಾಲಯವಾಗಿದೆ," ಎಂದು ಹೇಳಿದರು.

 

ನಗರದ ಸೌಂದರ್ಯೀಕರಣದ ಪ್ರಯೋಜನಗಳ ಬಗ್ಗೆ ಪ್ರಧಾನಿ ಮಾತನಾಡಿದರು. ನಂಬಿಕೆ ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿ ಕಾಶಿಯ ವೈಭವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ನವೀಕರಣದ ನಂತರ ಕಾಶಿ ವಿಶ್ವನಾಥ ಧಾಮದಲ್ಲಿ 13 ಕೋಟಿಗೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಪ್ರವಾಸೋದ್ಯಮವು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ವಿದೇಶಕ್ಕೆ ಹೋಗಲು ಯೋಜಿಸುವ ಮೊದಲು 15 ದೇಶೀಯ ಸ್ಥಳಗಳಿಗೆ ಭೇಟಿ ನೀಡುವಂತೆ ಕೆಂಪು ಕೋಟೆಯ ಕೊತ್ತಲಗಳಿಂದ ತಾವು ನೀಡಿದ ಕರೆಯನ್ನು ಮೋದಿ ಅವರು ಜನರಿಗೆ ನೆನಪಿಸಿದರು. ಜನರು ದೇಶೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿರುವ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ʻಸ್ಮಾರ್ಟ್ ಸಿಟಿʼ ಯೋಜನೆ ಅಡಿಯಲ್ಲಿ ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆ ಮತ್ತು ನಗರದ ಬಗ್ಗೆ ಮಾಹಿತಿ ಒದಗಿಸಲು ಪ್ರವಾಸಿ ವೆಬ್‌ಸೈಟ್ - 'ಕಾಶಿ' ಬಿಡುಗಡೆ ಸೇರಿದಂತೆ ಪ್ರವಾಸೋದ್ಯಮ ಸೌಲಭ್ಯಗಳನ್ನು ಸುಧಾರಣೆಗೆ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ʻಗಂಗಾ ಘಾಟ್ʼಗಳ ನವೀಕರಣ ಕಾರ್ಯಗಳು, ಆಧುನಿಕ ಬಸ್ ತಂಗುದಾಣಗಳು, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ರೈಲ್ವೆ ಸಂಬಂಧಿತ ಯೋಜನೆಗಳ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ, ʻವಿಶೇಷ ಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್‌ʼ ಬಗ್ಗೆ, ಹೊಸ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ - ಹೊಸ ಭೌಪುರ್ ಉದ್ಘಾಟನೆಯ ಬಗ್ಗೆ ಮಾತನಾಡಿದರು. ಸ್ಥಳೀಯ ಕಾರ್ಖಾನೆಯಲ್ಲಿ ತಯಾರಿಸಿದ 10000ನೇ ರೈಲ್ವೆ ಎಂಜಿನ್ ಕಾರ್ಯಾರಂಭ ಮಾಡಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಸೌರ ವಿದ್ಯುತ್ ಕ್ಷೇತ್ರದಲ್ಲಿ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು. ಚಿತ್ರಕೂಟದಲ್ಲಿ 800 ಮೆಗಾವ್ಯಾಟ್ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆಯು ಉತ್ತರ ಪ್ರದೇಶದಲ್ಲಿ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಗೆ ನಮ್ಮ ಬದ್ಧತೆಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ದಿಯೋರೈ ಮತ್ತು ಮಿರ್ಜಾಪುರದಲ್ಲಿನ ಹೊಸ ಘಟಕಗಳು ಪೆಟ್ರೋಲ್, ಡೀಸೆಲ್, ಬಯೋ-ಸಿಎಮನ್‌ಜಿ ಹಾಗೂ ಎಥೆನಾಲ್ ಸಂಸ್ಕರಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವನ್ನು ಪೂರೈಸುತ್ತವೆ ಎಂದರು.

 

ನಾರಿ ಶಕ್ತಿ, ಯುವ ಶಕ್ತಿ, ರೈತರು ಹಾಗೂ ಬಡವರ ಅಭಿವೃದ್ಧಿಯು ʻವಿಕಸಿತ ಭಾರತʼಕ್ಕೆ ಅತ್ಯಗತ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. "ಇವು ನನಗೆ ಕೇವಲ ನಾಲ್ಕು ವರ್ಗಗಳು. ಈ ನಾಲ್ಕು ವರ್ಗಗಳ ಬಲವರ್ಧನೆಯಿಂದ ರಾಷ್ಟ್ರದ ಬಲವರ್ಧನೆಯಾಗಲಿದೆ," ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ವಿಶ್ವಾಸದೊಂದಿಗೆ, ಸರ್ಕಾರವು ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದೆ. ರೈತರ ಬ್ಯಾಂಕ್ ಖಾತೆಗಳಿಗೆ 30,000 ಕೋಟಿ ರೂ.ಗಳನ್ನು ವರ್ಗಾಯಿಸಿದ ʻಪಿಎಂ ಕಿಸಾನ್ ಸಮ್ಮಾನ್‌ʼ ʻಕಿಸಾನ್ ಕ್ರೆಡಿಟ್ ಕಾರ್ಡ್‌ʼಗಳು, ನೈಸರ್ಗಿಕ ಕೃಷಿಗೆ ಒತ್ತು ಹಾಗೂ ರಸಗೊಬ್ಬರಗಳ ಸಿಂಪಡಣೆಯನ್ನು ಸುಲಭಗೊಳಿಸುವ ʻಕಿಸಾನ್ ಡ್ರೋನ್‌ʼಗಳಂತಹ ಯೋಜನೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಮಹಿಳೆಯರಿಗೆ ತರಬೇತಿ ನೀಡುವ ʻನಮೋ ಡ್ರೋನ್ ದೀದಿʼ ಯೋಜನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಉದ್ದೇಶಿತ ಆಧುನಿಕ ಬನಾಸ್ ಡೈರಿ ಘಟಕವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಬನಾಸ್ ಡೈರಿಯು 500 ಕೋಟಿ ರೂ.ಗಿಂತಲೂ ಅಧಿಕ ಹೂಡಿಕೆ ಮಾಡುತ್ತಿದ್ದು, ಪಶುಸಂಗೋಪನೆಯನ್ನು ಉತ್ತೇಜಿಸುವ ಅಭಿಯಾನ ನಡೆಸುತ್ತಿದೆ. ಬನಾಸ್ ಡೈರಿಯು ಬನಾರಸ್ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು. ಬನಾಸ್ ಡೈರಿ ಘಟಕಗಳು ಈಗಾಗಲೇ ಮತ್ತು ಕಾನ್ಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವರ್ಷ, ಬನಾಸ್ ಡೈರಿಯು ಉತ್ತರ ಪ್ರದೇಶದ 4 ಸಾವಿರಕ್ಕೂ ಅಧಿಕ ಹಳ್ಳಿಗಳ ರೈತರಿಗೆ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಾವತಿಸಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ, ಬನಾಸ್ ಡೈರಿಯು 100 ಕೋಟಿ ರೂ.ಗಿಂತ ಅಧಿಕ ಹಣವನ್ನು ಲಾಭಾಂಶದ ರೂಪದಲ್ಲಿ  ಉತ್ತರ ಪ್ರದೇಶದ ಹೈನೋದ್ಯಮದ ರೈತರ ಖಾತೆಗಳಿಗೆ ಜಮಾ ಮಾಡಿದೆ ಎಂದು ಮಾಹಿತಿ ನೀಡಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ವಾರಣಾಸಿಯಲ್ಲಿನ ಅಭಿವೃದ್ಧಿಯ ಹರಿವು ಇಡೀ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪುನರುಚ್ಚರಿಸಿದರು. ಪೂರ್ವಾಂಚಲ ಪ್ರದೇಶವನ್ನು ದಶಕಗಳಿಂದ ನಿರ್ಲಕ್ಷಿಸಲಾಗಿದ್ದರೂ, ಭಗವಾನ್‌ ಮಹಾದೇವನ ಆಶೀರ್ವಾದದಿಂದ ಮೋದಿ ಈಗ ಈ ಪ್ರದೇಶದ ಜನರ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಕೆಲವೇ ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣೆಗಳ ಆಗಮನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಭರವಸೆಯನ್ನು ಮೋದಿ ನೀಡಿದ್ದಾರೆ ಎಂದರು. "ನಾನು ಇಂದು ದೇಶಕ್ಕೆ ಈ ಖಾತರಿಯನ್ನು ನೀಡುತ್ತಿದ್ದೇನೆ ಎಂದರೆ ಅದು ನಿಮ್ಮೆಲ್ಲರಿಂದಾಗಿ. ಕಾಶಿಯ ನನ್ನ ಕುಟುಂಬ ಸದಸ್ಯರ ಕಾರಣದಿಂದಾಗಿ. ನೀವು ಸದಾ ನನ್ನೊಂದಿಗೆ ನಿಲ್ಲುತ್ತೀರಿ, ನನ್ನ ಸಂಕಲ್ಪಗಳನ್ನು ಬಲಪಡಿಸುತ್ತೀರಿ," ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಕೇಶವ್ ಪ್ರಸಾದ್ ಮೌರ್ಯ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಕಳೆದ ಒಂಬತ್ತು ವರ್ಷಗಳಲ್ಲಿ, ವಾರಣಾಸಿಯ ಚಿತ್ರಣವನ್ನು ಪರಿವರ್ತಿಸಲು ಹಾಗೂ ವಾರಣಾಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನವನ್ನು ಸುಲಭಗೊಳಿಸಲು ಪ್ರಧಾನಿ ವಿಶೇಷ ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿಯವರು, ಸುಮಾರು 19,150 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿಯವರು ಸುಮಾರು 10,900 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಹೊಸ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ - ನ್ಯೂ ಭೌಪುರ್ ವಿಶೇಷ ಸರಕು ಕಾರಿಡಾರ್ʼ ಯೋಜನೆಯನ್ನು ಉದ್ಘಾಟಿಸಿದರು. ʻಬಲ್ಲಿಯಾ-ಗಾಜಿಪುರ ಸಿಟಿ ರೈಲು ಮಾರ್ಗ ಡಬ್ಲಿಂಗ್ ಯೋಜನೆ; ‌ʻಇಂದ್ರಾ-ದೋಹ್ರಿಘಾಟ್ ರೈಲು ಮಾರ್ಗ ಗೇಜ್ ಪರಿವರ್ತನೆʼ ಯೋಜನೆಗಳು ಪ್ರಧಾನಿಯವರು ಉದ್ಘಾಟಿಸಿದ ಇತರೆ ಯೋಜನೆಗಳಲ್ಲಿ ಸೇರಿವೆ.

ʻವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುʼ, ʻದೋಹ್ರಿಘಾಟ್-ಮವು ಮೆಮು ರೈಲುʼ ಮತ್ತು ಹೊಸದಾಗಿ ಉದ್ಘಾಟಿಸಲಾದ ವಿಶೇಷ ಸರಕು ಕಾರಿಡಾರ್‌ನಲ್ಲಿ ಒಂದು ಜೋಡಿ ʻಲಾಂಗ್ ಹೌಲ್ʼ ಗೂಡ್ಸ್ ರೈಲುಗಳಿಗೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು. ʻಬನಾರಸ್ ಲೋಕೋಮೋಟಿವ್ ವರ್ಕ್ಸ್ʼ ನಿರ್ಮಿಸಿದ 10,000ನೇ ಲೋಕೋಮೋಟಿವ್‌ಗೂ ಅವರು ಹಸಿರು ನಿಶಾನೆ ತೋರಿದರು.

 

ಎರಡು ರೈಲ್ವೆ ಮೇಲ್ಸೇತುವೆಗಳೊಂದಿಗೆ 370 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ʻಶಿವಪುರ-ಫುಲ್ವಾರಿಯಾ-ಲಹರ್ತಾರಾʼ ಗ್ರೀನ್‌ಫೀಲ್ಡ್‌ ರಸ್ತೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಇದು ವಾರಣಾಸಿ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಚಾರವನ್ನು ಸರಾಗಗೊಳಿಸುತ್ತದೆ. ಜೊತೆಗೆ ಸಂದರ್ಶಕರ ಅನುಕೂಲವನ್ನು ಹೆಚ್ಚಿಸುತ್ತದೆ. ಪ್ರಧಾನಮಂತ್ರಿಯವರು ಉದ್ಘಾಟಿಸಲಿರುವ ಇತರ ಪ್ರಮುಖ ಯೋಜನೆಗಳಲ್ಲಿ 20 ರಸ್ತೆಗಳ ಸುಧಾರಣೆ ಮತ್ತು ಅಗಲೀಕರಣ; ಕೈಥಿ ಗ್ರಾಮದಲ್ಲಿ ಸಂಗಮ್ ಘಾಟ್ ರಸ್ತೆ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ವಸತಿ ಕಟ್ಟಡಗಳ ನಿರ್ಮಾಣ ಸೇರಿವೆ.

ಹೆಚ್ಚುವರಿಯಾಗಿ, ಪೊಲೀಸ್ ಸಿಬ್ಬಂದಿಯ ವಸತಿ ಅಗತ್ಯಗಳನ್ನು ಪೂರೈಸಲು, ಪೊಲೀಸ್ ಲೈನ್ ಮತ್ತು ಪಿಎಸಿ ಭುಲ್ಲನ್‌ಪುರದಲ್ಲಿ 200 ಮತ್ತು 150 ಹಾಸಿಗೆಗಳ ಎರಡು ಬಹುಮಹಡಿ ಬ್ಯಾರಕ್ ಕಟ್ಟಡಗಳು, 9 ಸ್ಥಳಗಳಲ್ಲಿ ನಿರ್ಮಿಸಲಾದ ಸ್ಮಾರ್ಟ್ ಬಸ್ ತಂಗುದಾಣಗಳು ಹಾಗೂ ಅಲೈಪುರದಲ್ಲಿ ನಿರ್ಮಿಸಲಾದ 132 ಕಿಲೋವ್ಯಾಟ್ ವಿದ್ಯುತ್‌ ಉಪಕೇಂದ್ರವನ್ನು ಪ್ರಧಾನಿ ಉದ್ಘಾಟಿಸಿದರು.

ʻಸ್ಮಾರ್ಟ್ ಸಿಟಿʼ ಯೋಜನೆ ಅಡಿಯಲ್ಲಿ, ವಿವರವಾದ ಪ್ರವಾಸಿ ಮಾಹಿತಿಗಾಗಿ ವೆಬ್‌ಸೈಟ್ ಮತ್ತು ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆಯನ್ನು ಪ್ರಧಾನಿ ಉದ್ಘಾಟಿಸಿದರು. ʻಏಕೀಕೃತ ಪಾಸ್ʼ ವ್ಯವಸ್ಥೆಯು ಶ್ರೀ ಕಾಶಿ ವಿಶ್ವನಾಥ ಧಾಮ, ʻಗಂಗಾ ಕ್ರೂಸ್ʼ ಮತ್ತು ಸಾರನಾಥ ʻಲೈಟ್ ಸೌಂಡ್ ಶೋʼಗೆ ಒಂದೇ ವೇದಿಕೆಯ ಟಿಕೆಟ್ ಬುಕಿಂಗ್ ಒದಗಿಸುತ್ತದೆ. ಇದು ಸಮಗ್ರ ʻಕ್ಯೂಆರ್ ಕೋಡ್ʼ ಸೇವೆಗಳನ್ನು ಒದಗಿಸುತ್ತದೆ.

 

ಪ್ರಧಾನಮಂತ್ರಿಯವರು 6500 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಚಿತ್ರಕೂಟ್ ಜಿಲ್ಲೆಯಲ್ಲಿ ಸುಮಾರು 4000 ಕೋಟಿ ರೂ.ಗಳ ವೆಚ್ಚದಲ್ಲಿ 800 ಮೆಗಾವ್ಯಾಟ್ ಸೌರ ಉದ್ಯಾನಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಪೆಟ್ರೋಲಿಯಂ ಪೂರೈಕೆ ಸರಪಳಿಯನ್ನು ಹೆಚ್ಚಿಸಲು, ಮಿರ್ಜಾಪುರದಲ್ಲಿ 1050 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಹೊಸ ಪೆಟ್ರೋಲಿಯಂ ತೈಲ ಟರ್ಮಿನಲ್ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ ಇತರ ಯೋಜನೆಗಳಲ್ಲಿ 900 ಕೋಟಿ ರೂ.ಗಳ ವೆಚ್ಚದಲ್ಲಿ ವಾರಣಾಸಿ-ಭದೋಹಿ ಎನ್ಎಚ್ 731 ಬಿ (ಪ್ಯಾಕೇಜ್ -2) ಅಗಲೀಕರಣ; ʻಜಲ ಜೀವನ್ ಮಿಷನ್ʼ ಅಡಿಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ 69 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು; ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್‌ನಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಘಟಕ ನಿರ್ಮಾಣ; 8 ಗಂಗಾ ಘಾಟ್‌ಗಳ ಪುನರಾಭಿವೃದ್ಧಿ ಕಾರ್ಯಗಳು, ದಿವ್ಯಾಂಗ ವಸತಿ ಮಾಧ್ಯಮಿಕ ಶಾಲೆಯ ನಿರ್ಮಾಣ ಕಾರ್ಯಗಳು ಸೇರಿವೆ.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi inaugurates Northeast’s first Emergency Landing Facility in Moran. Why it matters?

Media Coverage

PM Modi inaugurates Northeast’s first Emergency Landing Facility in Moran. Why it matters?
NM on the go

Nm on the go

Always be the first to hear from the PM. Get the App Now!
...
Prime Minister pays homage to great social reformer Shri Sant Sevalal Maharaj
February 15, 2026

The Prime Minister, Shri Narendra Modi paid tributes to the great social reformer Shri Sant Sevalal Maharaj on his birth anniversary, today. “By spreading the message of truth, non-violence, and high moral values, he instilled a new consciousness in society. His inspiring life will forever continue to guide the people of the country”, Shri Modi said.

The Prime Minister posted on X:

“महान समाज सुधारक श्री संत सेवालाल महाराज को उनकी जयंती पर शत-शत नमन। सत्य, अहिंसा और उच्च नैतिक मूल्यों का संदेश देकर उन्होंने समाज में नवचेतना का संचार किया। उनका प्रेरणादायी जीवन सदैव देशवासियों का मार्गदर्शन करता रहेगा।

जय सेवालाल!”