ಶೇರ್
 
Comments
“ಜಲ್ ಜೀವನ್ ಅಭಿಯಾನ ವಿಕೇಂದ್ರೀಕರಣದ ದೊಡ್ಡ ಚಳವಳಿಯೂ ಆಗಿದೆ. ಇದು ಗ್ರಾಮಚಾಲಿತ-ಮಹಿಳಾ –ಚಾಲಿತ ಚಳವಳಿ. ಇದರ ಮೂಲ ನೆಲೆ ಜನಾಂದೋಲನ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆ”
“ಜನರಿಗೆ ಕೊಳವೆ ಮೂಲಕ ನೀರು ತಲುಪಿಸಲು ಕೇವಲ ಎರಡು ವರ್ಷಗಳಲ್ಲಿ ಕಳೆದ ಏಳು ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸ ಮಾಡಲಾಗಿದೆ”
“ಗುಜರಾತ್ ನಂತಹ ರಾಜ್ಯದಿಂದ ಬಂದ ನಾನು ಬರದಂತಹ ಪರಿಸ್ಥಿತಿಯನ್ನು ಕಂಡಿದ್ದೇನೆ ಮತ್ತು ಪ್ರತಿ ಹನಿ ನೀರಿನ ಪ್ರಾಮುಖ್ಯವನ್ನು ಅರಿತುಕೊಂಡಿದ್ದೇನೆ. ಹೀಗಾಗಿಯೇ, ಗುಜರಾತ್ ಮುಖ್ಯಮಂತ್ರಿಯಾಗಿ ನೀರಿನ ಲಭ್ಯತೆ ಮತ್ತು ಜಲ ಸಂರಕ್ಷಣೆ ನನ್ನ ಆದ್ಯತೆಗಳಲ್ಲಿ ಒಂದಾಗಿತ್ತು”
“ಇಂದು, ದೇಶದ ಸುಮಾರು 80 ಜಿಲ್ಲೆಗಳ ಸುಮಾರು 1.25 ಲಕ್ಷ ಗ್ರಾಮಗಳ ಪ್ರತಿ ಮನೆಗೆ ನೀರು ತಲುಪುತ್ತಿದೆ”
“ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೊಳವೆ ನೀರಿನ ಸಂಪರ್ಕಗಳ ಸಂಖ್ಯೆ 31 ಲಕ್ಷದಿಂದ 1.16 ಕೋಟಿಗೆ ಹೆಚ್ಚಳವಾಗಿದೆ”
“ಪ್ರತಿ ಮನೆ ಮತ್ತು ಶಾಲೆಯಲ್ಲೂ ಶೌಚಾಲಯ, ಅಗ್ಗದ ದರದ ಸ್ಯಾನಿಟರಿ ಪ್ಯಾಡ್ ಗಳು, ಗರ್ಭಿಣಿಯರಿಗೆ ಪೌಷ್ಟಿಕಾಂಶದ ಬೆಂಬಲ ಮತ್ತು ಲಸಿಕೆ ‘ಮಾತೃ ಶಕ್ತಿ’ ಬಲಪಡಿಸಿವೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲ ಜೀವನ ಅಭಿಯಾನ ಕುರಿತಂತೆ ಇಂದು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳು/ ಗ್ರಾಮೀಣ ನೀರು ಮತ್ತು ಒಳಚರಂಡಿ ಸಮಿತಿ (ವಿಡಬ್ಲ್ಯುಎಸ್.ಸಿ.)ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಭಿಯಾನದ ಅಡಿಯಲ್ಲಿ ಬಾಧ್ಯಸ್ಥರ ನಡುವೆ ಜಾಗೃತಿಯನ್ನು ಸುಧಾರಿಸಲು ಮತ್ತು ಅಭಿಯಾನದಡಿಯಲ್ಲಿ ಯೋಜನೆಯ ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ಹೊಣೆಗಾರಿಕೆಗಾಗಿ ಜಲ್ ಜೀವನ ಅಭಿಯಾನದ ಆಪ್ ಗೆ ಚಾಲನೆ ನೀಡಿದರು.  ರಾಷ್ಟ್ರೀಯ ಜಲ ಜೀವನ ಕೋಶಕ್ಕೂ ಅವರು ಚಾಲನೆ ನೀಡಿದರು, ಇದರಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ನಿಗಮ ಅಥವಾ ಭಾರತದಲ್ಲಿರುವ ಅಥವಾ ವಿದೇಶದಲ್ಲಿರುವ ದಾನಿಗಳು ಪ್ರತಿ ಗ್ರಾಮೀಣ ವಸತಿಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಆಶ್ರಮ ಶಾಲೆಗಳಿಗೆ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಕೊಳವೆಯ ನೀರಿನ ಸಂಪರ್ಕ ಕಲ್ಪಿಸಲು ಕೊಡುಗೆ ನೀಡಬಹುದಾಗಿದೆ.   ಗ್ರಾಮ ಪಂಚಾಯ್ತಿಯ ಮತ್ತು ಜಲ ಸಮಿತಿಗಳ ಸದಸ್ಯರುಗಳ ಜೊತೆಗೆ, ಕೇಂದ್ರ ಸಚಿವರುಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಶ್ರೀ ಬಿಶ್ವೇಶ್ವರ್ ತುಡು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಸಮಿತಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಉಮರೀ ಗ್ರಾಮದ ಶ್ರೀ ಗಿರಿಜಾಕಾಂತ್ ತಿವಾರಿ ಅವರನ್ನು ಅವರ ಗ್ರಾಮದಲ್ಲಿ ಜಲ ಜೀವನ ಅಭಿಯಾನದ ಪರಿಣಾಮದ ಬಗ್ಗೆ ವಿಚಾರಿಸಿದರು. ಶ್ರೀ ತಿವಾರಿ ಈಗ ಶುದ್ಧ ಮತ್ತು ಸುರಕ್ಷಿತವಾದ ನೀರು ಲಭಿಸುತ್ತಿದೆ ಮತ್ತು ಇದು ಹಳ್ಳಿಗಳ ಮಹಿಳೆಯರ ಜೀವನವನ್ನು ಸುಧಾರಿಸಿದೆ ಎಂದು ತಿಳಿಸಿದರು. ಅವರ ಹಳ್ಳಿಯ ಜನರು ತಮಗೆ ಕೊಳವೆ ಮೂಲಕ ನೀರಿನ ಸಂಪರ್ಕ ಸಿಗುತ್ತದೆ ಎಂದು ನಂಬಿದ್ದರೆ ಮತ್ತು ಈಗ ಅವರಿಗೆ ಹೇಗನಿಸುತ್ತಿದೆ ಎಂದು ಶ್ರೀ ತಿವಾರಿ ಅವರನ್ನು ಕೇಳಿದರು. ಶ್ರೀ ತಿವಾರಿ ಅವರು ಅಭಿಯಾನಕ್ಕಾಗಿ ಗ್ರಾಮದಲ್ಲಿನ ಸಂಘಟಿತ ಪ್ರಯತ್ನದ ಬಗ್ಗೆ ಮಾತನಾಡಿದರು. ಗ್ರಾಮದ ಪ್ರತಿಯೊಂದು ಮನೆಯಲ್ಲೂ ಈಗ ಶೌಚಾಲಯವಿದೆ ಮತ್ತು ಪ್ರತಿಯೊಬ್ಬರೂ ಅದನ್ನು ಬಳಸುತ್ತಿದ್ದಾರೆ ಎಂದು ಶ್ರೀ ತಿವಾರಿ ಅವರು ತಿಳಿಸಿದರು. ಪ್ರಧಾನಮಂತ್ರಿಯವರು ಬುಂದೇಲ್ ಖಂಡ್ ಗ್ರಾಮದ ಜನರ ದೃಢ ಸಂಕಲ್ಪಕ್ಕಾಗಿ ಅವರನ್ನು ಶ್ಲಾಘಿಸಿ, ಮಹಿಳೆಯರು ಈಗ ಸಬಲರಾಗುತ್ತಿದ್ದಾರೆ ಮತ್ತು ಪಿಎಂ ವಸತಿ ಯೋಜನೆ, ಉಜ್ವಲಾ ಮತ್ತು ಜಲ್ ಜೀವನ್ ಅಭಿಯಾನದ ಕಾರಣದಿಂದಾಗಿ ತಮ್ಮ ಘನತೆಯನ್ನು ಪಡೆಯುತ್ತಿದ್ದಾರೆ ಎಂದರು.

ಪ್ರಧಾನಮಂತ್ರಿಯವರು ಗುಜರಾತ್ ನ ಪಿಪ್ಲಿಯ ಶ್ರೀ ರಮೇಶ್ ಭಾಯ್ ಪಟೇಲ್ ಅವರನ್ನು ಅವರ ಗ್ರಾಮದಲ್ಲಿ ನೀರಿನ ಲಭ್ಯತೆಯ ಬಗ್ಗೆ ಕೇಳಿದರು. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆಯೇ ಎಂದೂ ಕೇಳಿದರು. ಶ್ರೀ ರಮೇಶ್ ಭಾಯ್ ಅವರು ನೀರಿನ ಗುಣಮಟ್ಟ ಉತ್ತಮವಾಗಿದೆ ಮತ್ತು ಗ್ರಾಮದ ಮಹಿಳೆಯರಿಗೆ ಗುಣಮಟ್ಟ ಪರೀಕ್ಷೆಗೆ ತರಬೇತಿ ನೀಡಲಾಗಿದೆ ಎಂದರು. ಕುಡಿಯುವ ನೀರಿಗೆ ಜನರು ಹಣ ಕೊಡುತ್ತಿದ್ದಾರೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು.  ಶ್ರೀ ರಮೇಶ್ ಭಾಯ್ ಮಾಹಿತಿ ನೀಡಿ, ನೀರಿನ ಮೌಲ್ಯವು ಗ್ರಾಮಸ್ಥರಿಗೆ ಸ್ಪಷ್ಟವಾಗಿದೆ ಮತ್ತು ಅದಕ್ಕಾಗಿ ಹಣ ನೀಡುವ ಇಚ್ಛೆಯೂ ಇದೆ ಎಂದರು. ನೀರು ಉಳಿಸಲು ತುಂತುರು ನೀರಾವರಿ ಮತ್ತು ಹನಿ ನೀರಾವರಿಯನ್ನು ಬಳಸುವ ಬಗ್ಗೆ ಪ್ರಧಾನಮಂತ್ರಿ ಕೇಳಿದರು. ನಾವಿನ್ಯಪೂರ್ಣ ನೀರಾವರಿ ತಾಂತ್ರಿಕತೆಯನ್ನು ಗ್ರಾಮದಲ್ಲಿ ಬಳಸುತ್ತಿರುವುದಾಗಿ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಯಿತು.   ಸ್ವಚ್ಛ ಭಾರತ ಅಭಿಯಾನ 2.0ರ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಯವರು, ಸ್ವಚ್ಛತೆಯ ಅಭಿಯಾನಕ್ಕೆ ಜನರು ಬೃಹತ್ ಬೆಂಬಲ ನೀಡಿದರು ಮತ್ತು ಜಲ ಜೀವನ ಅಭಿಯಾನಕ್ಕೂ ಅದೇ ಯಶಸ್ಸು ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 ಜಲ ಜೀವನ ಅಭಿಯಾನಕ್ಕೆ ಮುನ್ನ ಮತ್ತು ನಂತರ ನೀರಿನ ಲಭ್ಯತೆಯ ಕುರಿತಂತೆ ಉತ್ತರಾಖಂಡದ ಶ್ರೀಮತಿ ಕೌಶಲ್ಯಾ ರಾವತ್ ಅವರನ್ನು ಪ್ರಧಾನಮಂತ್ರಿಯವರು ವಿಚಾರಿಸಿದರು. ಜಲ ಜೀವನ ಅಭಿಯಾನದ ಮೂಲಕ ತಮ್ಮ ಗ್ರಾಮಕ್ಕೆ ನೀರು ಬಂದ ತರುವಾಯ ಪ್ರವಾಸಿಗರು ಗ್ರಾಮಗಳಿಗೆ ಬಂದು ಹೋಂ ಸ್ಟೇಗಳಲ್ಲಿ ಉಳಿಯುತ್ತಿದ್ದಾರೆ ಎಂದು ತಿಳಿಸಿದರು. ಶ್ರೀಮತಿ ರಾವತ್ ಅವರ ಗ್ರಾಮದಲ್ಲಿ ಎಲ್ಲರೂ ಲಸಿಕೆ ಪಡೆದಿರುವುದಾಗಿ ತಿಳಿಸಿದರು. ಅರಣ್ಯೀಕರಣ, ಪ್ರವಾಸೋದ್ಯಮ ಸುಧಾರಣೆ ಮತ್ತು ಹೋಂ ಸ್ಟೇ ಯಂತಹ ಸುಸ್ಥಿರ ಅಭ್ಯಾಸಗಳನ್ನು ರೂಢಿಸಿಕೊಂಡಿರುವ ಗ್ರಾಮಸ್ಥರನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು.

 ತಮಿಳುನಾಡಿನ ವೆಲ್ಲೇರಿಯ ಶ್ರೀಮತಿ ಸುಧಾ ಅವರನ್ನು ಪ್ರಧಾನಮಂತ್ರಿಯವರು ಜಲ ಜೀವನ ಅಭಿಯಾನದ ಪರಿಣಾಮ ಕುರಿತಂತೆ ಪ್ರಶ್ನಿಸಿದರು. ಜಲ ಜೀವನ ಅಭಿಯಾನದ ತರುವಾಯ ಎಲ್ಲ ಮನೆಗಳಿಗೂ ಕೊಳವೆ ಮೂಲಕ ನೀರಿನ ಸಂಪರ್ಕ ದೊರೆತಿದೆ ಎಂದು ಅವರು ತಿಳಿಸಿದರು. ಅವರ ಗ್ರಾಮದಲ್ಲಿ ತಯಾರಿಸಲಾಗುವ ವಿಶ್ವ ವಿಖ್ಯಾತ ಆರಣಿ ರೇಷ್ಮೆ ಸೀರೆಗಳ ಕುರಿತಂತೆಯೂ ಅವರು ಪ್ರಶ್ನಿಸಿದರು. ಕೊಳವೆ ಮೂಲಕ ನೀರು ಪೂರೈಕೆ ಆಗುತ್ತಿರುವುದರಿಂದ ಮನೆಯ ಇತರ ಚಟುವಟಿಕೆಗಳಿಗೆ ಅವರಿಗೆ ಸಮಯ ಉಳಿಯುತ್ತಿದೆಯೇ ಎಂದೂ ಪ್ರಧಾನಮಂತ್ರಿ ಪ್ರಶ್ನಿಸಿದರು. ಶ್ರೀಮತಿ ಸುಧಾ ನೀರಿನ ಲಭ್ಯತೆಯು ತಮ್ಮ ಬದುಕು ಉತ್ತಮಪಡಿಸಿದ್ದು, ಇತರ ಉತ್ಪಾದಕ ಚಟುವಟಿಕೆಗಳಿಗೆ ಸಮಯ ಸಿಗುತ್ತಿದೆ ಎಂದು ತಿಳಿಸಿದರು. ಮಳೆ ನೀರು ಸಂಗ್ರಹಿಸಲು ತಮ್ಮ ಗ್ರಾಮದ ಜನರು ಚೆಕ್ ಡ್ಯಾಂ, ಕೊಳ ಇತ್ಯಾದಿ ನಿರ್ಮಿಸಿರುವ ಬಗ್ಗೆಯೂ ತಿಳಿಸಿದರು. ಮಹಿಳೆಯರ ಸಬಲೀಕರಣದಲ್ಲಿ ಜನ ಅಭಿಯಾನದ ಅಳವಡಿಕೆ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಮಣಿಪುರದ ಶ್ರೀಮತಿ ಲೈಥಾಂತಂ ಸರೋಜಿನಿ ದೇವಿಜಿಯವರೊಂದಿಗೆ ಸಂವಾದ ನಡೆಸುವಾಗ, ಶ್ರೀ ಮೋದಿಯವರಿಗೆ, ಈ ಮುನ್ನ ನೀರಿಗಾಗಿ ಬಹಳ ದೂರ ಹೋಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತರೆ ಮಾತ್ರವೇ ಸಿಗುತ್ತಿತ್ತು. ಈಗ ಎಲ್ಲರ ಮನೆಗಳಲ್ಲಿ ಕೊಳವೆ ನೀರು ಇರುವುದರಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ತಿಳಿಸಲಾಯಿತು. ಒಡಿಎಫ್ ಮತ್ತು ಸಂಪೂರ್ಣ ವ್ಯಾಪ್ತಿಯ ಗ್ರಾಮವಾಗಿರುವುದರಿಂದ ಗ್ರಾಮದಲ್ಲಿ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ ಎಂಬು ಮಾಹಿತಿಯನ್ನು ಆಕೆ ನೀಡಿದರು. ತಮ್ಮ ಗ್ರಾಮದಲ್ಲಿ ನೀರಿನ ಗುಣಮಟ್ಟದ ನಿಯಮಿತ ಪರೀಕ್ಷೆ ಕಡ್ಡಾಯವಾಗಿದ್ದು, ಇದಕ್ಕಾಗಿ ಐವರು ಮಹಿಳೆಯರಿಗೆ ತರಬೇತಿಯನ್ನೂ ನೀಡಲಾಗಿದೆ ಎಂದೂ ತಿಳಿಸಿದರು. ಜನರ ಜೀವನವನ್ನು ಸುಗಮಗೊಳಿಸಲು ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಈಶಾನ್ಯದಲ್ಲಿ ನೈಜ ಬದಲಾವಣೆ ಆಗುತ್ತಿದೆ ಎಂದು ಅವರು ಸಂತೃಪ್ತಿ ವ್ಯಕ್ತಪಡಿಸಿದರು.

ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗ್ರಾಮಗಳು ಬಾಪು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಹೃದಯದ ಭಾಗವಾಗಿದೆ. ಈ ದಿನದಂದು, ದೇಶಾದ್ಯಂತ ಲಕ್ಷಾಂತರ ಗ್ರಾಮಗಳ ಜನರು 'ಜಲ ಜೀವನ ಸಂವಾದ'ವನ್ನು 'ಗ್ರಾಮ ಸಭೆಗಳ' ರೂಪದಲ್ಲಿ ಆಯೋಜಿಸುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಜಲ ಜೀವನ ಅಭಿಯಾನದ ದೃಷ್ಟಿ ಕೇವಲ ಜನರಿಗೆ ನೀರು ಲಭ್ಯವಾಗುವಂತೆ ಮಾಡುವುದಷ್ಟೇ ಅಲ್ಲ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಇದು ವಿಕೇಂದ್ರೀಕರಣದ ಅತಿ ದೊಡ್ಡ ಚಳವಳಿಯೂ ಆಗಿದೆ.  “ಇದು ಗ್ರಾಮ –ಚಾಲಿತ- ಮಹಿಳಾ ಚಾಲಿತ ಚಳವಳಿಯಾಗಿದೆ. ಇದರ ಮೂಲ ನೆಲೆ ಜನಾಂದೋಲನವಾಗಿದೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಾಗಿದೆ” ಎಂದು ತಿಳಿಸಿದರು. ಗಾಂಧೀಜಿ ಅವರು 'ಗ್ರಾಮ ಸ್ವರಾಜ್'ನ ನಿಜವಾದ ಅರ್ಥವೆಂದರೆ ಆತ್ಮವಿಶ್ವಾಸ ತುಂಬುವುದು ಎಂದು ಹೇಳುತ್ತಿದ್ದರು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು. "ಅದಕ್ಕಾಗಿಯೇ ಗ್ರಾಮ ಸ್ವರಾಜ್ ಅವರ ಈ ಚಿಂತನೆಯು ಸಾಧನೆಗಳತ್ತ ಮುನ್ನಡೆಯಬೇಕು ಎಂಬುದು ತಮ್ಮ ನಿರಂತರ ಪ್ರಯತ್ನವಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದರು. ಗ್ರಾಮ ಸ್ವರಾಜ್ಯಕ್ಕಾಗಿ ಗುಜರಾತ್ ನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಓಡಿಎಫ್ ಗ್ರಾಮಗಳಿಗಾಗಿ ನಿರ್ಮಲ ಗ್ರಾಮ, ಗ್ರಾಮಗಳ ಹಳೆಯ ಜಲ ಕಾಯಗಳು ಮತ್ತು ಬಾವಿಗಳ ಪುನಶ್ಚೇತನಕ್ಕೆ ಜಲ ಮಂದಿರ್ ಅಭಿಯಾನ, ಗ್ರಾಮಗಳಲ್ಲಿ 24 ಗಂಟೆ ವಿದ್ಯುತ್ ಪೂರೈಕೆಗೆ ಜ್ಯೋತಿಗ್ರಾಮ, ಹಳ್ಳಿಗಳಲ್ಲಿ ಸೌಹಾರ್ದಕ್ಕಾಗಿ ತೀರ್ಥಗ್ರಾಮ, ಗ್ರಾಮಗಳಲ್ಲಿ  ಬ್ರಾಡ್ ಬ್ಯಾಂಡ್ ಗಾಗಿ ಇ-ಗ್ರಾಮದಂತಹ  ಕ್ರಮಗಳನ್ನು ಶ್ರೀ ಮೋದಿ ಸ್ಮರಿಸಿದರು. ಪ್ರಧಾನಮಂತ್ರಿಗಳಾಗಿ ಸಹ, ಯೋಜನೆಗಳ ನಿರ್ವಹಣೆ ಮತ್ತು ಯೋಜನೆ ರೂಪಿಸುವಲ್ಲಿ ಸ್ಥಳೀಯ ಸಮುದಾಯವನ್ನು ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಇದಕ್ಕಾಗಿ ಅದರಲ್ಲೂ ನೀರು ಮತ್ತು ಸ್ವಚ್ಛತೆಗಾಗಿ ಗ್ರಾಮ ಪಂಚಾಯ್ತಿಗಳಿಗೆ 2.5 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ನೀಡಲಾಗುತ್ತಿದೆ ಎಂದರು. ಅಧಿಕಾರ, ಗ್ರಾಮ ಪಂಚಾಯ್ತಿಗಳ ಕಾರ್ಯದಲ್ಲಿನ ಪಾರದರ್ಶಕತೆಯನ್ನು ಸಹ ಆಪ್ತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.  ಜಲ ಜೀವನ ಅಭಿಯಾನ ಮತ್ತು ಜಲ ಸಮಿತಿಗಳು ಕೇಂದ್ರ ಸರ್ಕಾರದ ಗ್ರಾಮ ಸ್ವರಾಜ್ಯದ ಉದಾಹರಣೆಗಳಾಗಿವೆ ಎಂದು ಅವರು ತಿಳಿಸಿದರು.

ನೀರಿನ ಸಮಸ್ಯೆಯ ಕುರಿತ ಜನಪ್ರಿಯ ಪರಿಕಲ್ಪನೆಗಳನ್ನು ಉಲ್ಲೇಖಿಸುತ್ತಾ, ಪ್ರಧಾನಮಂತ್ರಿಯವರು ಚಲನಚಿತ್ರಗಳು, ಕಥೆಗಳು, ಕವಿತೆಗಳು ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳು ಹೇಗೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ನೀರು ತರುತ್ತಿದ್ದರು ಎಂಬುದನ್ನು ವಿವರವಾಗಿ ಹೇಳುತ್ತವೆ ಎಂದರು. ಕೆಲವು ಜನರ ಮನಸ್ಸಿನಲ್ಲಿ, ಹಳ್ಳಿಯ ಹೆಸರು ಕೇಳಿದ ಕೂಡಲೇ ಇಂತಹ ಚಿತ್ರ ಮೂಡುತ್ತದೆ ಎಂದರು. ಕೆಲವರು ಮಾತ್ರ ಇಂತಹ ಪ್ರಶ್ನೆಗಳ ಬಗ್ಗೆ ಯೋಚಿಸುತ್ತಾರೆ ಎಂದು ಪ್ರಧಾನಮಂತ್ರಿ ಕೇಳಿದರು: ಈ ಜನರು ಪ್ರತಿದಿನ ಕೆಲವು ನದಿ ಅಥವಾ ಕೊಳಕ್ಕೆ ಏಕೆ ಹೋಗಬೇಕು,  ನೀರು ಈ ಜನರನ್ನು ಏಕೆ ತಲುಪುವುದಿಲ್ಲ? "ದೀರ್ಘಕಾಲದವರೆಗೆ ನೀತಿ ರೂಪಿಸುವ ಜವಾಬ್ದಾರಿಯನ್ನು ಹೊಂದಿರುವವರು ಈ ಪ್ರಶ್ನೆಯನ್ನು ತಮ್ಮಲ್ಲಿ ಕೇಳಿಕೊಳ್ಳಬೇಕಿತ್ತು" ಎಂದು ಪ್ರಧಾನಮಂತ್ರಿ ಹೇಳಿದರು. ಬಹುಶಃ ಹಿಂದಿನ ನೀತಿ ನಿರೂಪಕರು ನೀರಿನ ಸಮೃದ್ಧ ಪ್ರದೇಶಗಳಿಂದ ಬಂದಿದ್ದರಿಂದ ನೀರಿನ ಮಹತ್ವವನ್ನು ಅರಿತಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ತಾವು ಗುಜರಾತ್ ನಂತಹ ರಾಜ್ಯದಿಂದ ಬಂದಿದ್ದು ಬರ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡಿದ್ದು, ಪ್ರತಿ ಹನಿ ನೀರಿನ ಮಹತ್ವವನ್ನು ತಿಳಿದಿರುವುದಾಗಿ ಶ್ರೀ ಮೋದಿ ಹೇಳಿದರು. ಅದಕ್ಕಾಗಿಯೇ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಜನರಿಗೆ ನೀರು ಪೂರೈಸಲು ಮತ್ತು ನೀರಿನ ಸಂರಕ್ಷಣೆ ತಮ್ಮ ಆದ್ಯತೆಯಾಗಿತ್ತು ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ 2019ರವರೆಗೆ ಕೇವಲ 3 ಕೋಟಿ ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಕೆ ಆಗುತ್ತಿತ್ತು ಎಂದು ಪ್ರಧಾನಮಂತ್ರಿ ತಿಳಿಸಿದರು. ಆದರೆ ಜಲ ಜೀವನ ಅಭಿಯಾನವನ್ನು 2019ರಲ್ಲಿ ಆರಂಭಿಸಿದ ತರುವಾಯ 5 ಕೋಟಿ ಮನೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸಲಾಗಿದೆ. ಇಂದು ದೇಶದ 80 ಜಿಲ್ಲೆಗಳ 1.25 ಲಕ್ಷ ಗ್ರಾಮಗಳ ಮನೆಗಳಿಗೆ ನೀರು ತಲುಪುತ್ತಿದೆ ಎಂದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೊಳವೆ ಮೂಲಕ ನೀರು ಪೂರೈಕೆ ಸಂಪರ್ಕಗಳ ಸಂಖ್ಯೆಯನ್ನು 31 ಲಕ್ಷದಿಂದ 1.16 ಕೋಟಿಗೆ ಹೆಚ್ಚಳ ಮಾಡಲಾಗಿದೆ ಎಂದರು. 

ಕಳೆದ ಏಳು ದಶಕಗಳಲ್ಲಿ ಮಾಡಿದ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಕೇವಲ ಎರಡು ವರ್ಷಗಳಲ್ಲಿ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಜಲ ಸಮೃದ್ಧಿಯಲ್ಲಿ ವಾಸಿಸುವ ದೇಶದ ಪ್ರತಿಯೊಬ್ಬ ಪ್ರಜೆಯೂ ನೀರನ್ನು ಉಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ಅವರು ಮನವಿ ಮಾಡಿದರು. ಮತ್ತು ಅವರು ತಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರಧಾನಮಂತ್ರಿಯವರು ದೇಶದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಸುಧಾರಿಸುವ ಕ್ರಮಗಳನ್ನು ಪಟ್ಟಿ ಮಾಡಿದರು. ಪ್ರತಿ ಮನೆ ಮತ್ತು ಶಾಲೆಯಲ್ಲಿ ಶೌಚಾಲಯಗಳು, ಅಗ್ಗದ ದರದ ಸ್ಯಾನಿಟರಿ ಪ್ಯಾಡ್‌ ಗಳು, ಗರ್ಭಿಣಿಯರಿಗೆ ಪೌಷ್ಟಿಕಾಂಶ ಬೆಂಬಲ ಮತ್ತು ಲಸಿಕೀಕರಣದಂತಹ ಕ್ರಮಗಳು 'ಮಾತೃಶಕ್ತಿ'ಯನ್ನು ಬಲಪಡಿಸಿವೆ ಎಂದು ಅವರು ಮಾಹಿತಿ ನೀಡಿದರು. ಹಳ್ಳಿಗಳಲ್ಲಿ ನಿರ್ಮಿಸಲಾದ 2.5 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ, ಉಜ್ವಲಾ ಯೋಜನೆ ಮಹಿಳೆಯರನ್ನು ಹೊಗೆ ತುಂಬಿದ ಜೀವನದಿಂದ ಮುಕ್ತಗೊಳಿಸಿದೆ. ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಆತ್ಮ ನಿರ್ಭರ ಅಭಿಯಾನದೊಂದಿಗೆ ಸಂಪರ್ಕಿಸಲಾಗುತ್ತಿದೆ ಮತ್ತು ಈ ಗುಂಪುಗಳು ಕಳೆದ ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. 2014 ರ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಮಹಿಳೆಯರಿಗೆ ಕಳೆದ ಏಳು ವರ್ಷಗಳಲ್ಲಿ 13 ಪಟ್ಟು ಹೆಚ್ಚಿನ ಬೆಂಬಲ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Bhupender Yadav writes: What the Sengol represents

Media Coverage

Bhupender Yadav writes: What the Sengol represents
...

Nm on the go

Always be the first to hear from the PM. Get the App Now!
...
PM condoles loss of lives due to train accident in Odisha
June 02, 2023
ಶೇರ್
 
Comments

The Prime Minister, Shri Narendra Modi has expressed deep grief over the loss of lives due to train accident in Odisha.

In a tweet, the Prime Minister said;

"Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all possible assistance is being given to those affected."