ಇಂದು ಪಿಎಂ-ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ, ಈ ಯೋಜನೆ ದೇಶಾದ್ಯಂತದ ನಮ್ಮ ಸಣ್ಣ ರೈತರಿಗೆ ಬಹಳ ಉಪಯುಕ್ತವೆಂದು ಸಾಬೀತಾಗಿರುವುದರಿಂದ ಎಂದು ನನಗೆ ತುಂಬಾ ತೃಪ್ತಿ ಇದೆ: ಪ್ರಧಾನಮಂತ್ರಿ
ಮಖಾನಾ ವಿಕಾಸ್ ಮಂಡಳಿಯನ್ನು ರಚಿಸುವ ನಮ್ಮ ಕ್ರಮವು ಅದರ ಕೃಷಿಯಲ್ಲಿ ತೊಡಗಿರುವ ಬಿಹಾರದ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ, ಇದು ಮಖಾನಾದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟಕ್ಕೆ ಸಾಕಷ್ಟು ಸಹಾಯ ಮಾಡಲಿದೆ:ಪ್ರಧಾನಮಂತ್ರಿ
ಎನ್ ಡಿ ಎ ಸರ್ಕಾರ ಇಲ್ಲದಿದ್ದರೆ, ಬಿಹಾರ ಸೇರಿದಂತೆ ದೇಶಾದ್ಯಂತದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಗುತ್ತಿರಲಿಲ್ಲ, ಕಳೆದ 6 ವರ್ಷಗಳಲ್ಲಿ, ಇದರ ಪ್ರತಿ ಪೈಸೆಯೂ ನೇರವಾಗಿ ನಮ್ಮ ಅನ್ನದಾತರ ಖಾತೆಗಳಿಗೆ ತಲುಪಿದೆ: ಪ್ರಧಾನಮಂತ್ರಿ
ಅದು ಸೂಪರ್ ಫುಡ್ ಮಖಾನಾ ಆಗಿರಲಿ ಅಥವಾ ಭಾಗಲ್ಪುರದ ರೇಷ್ಮೆಯಾಗಿರಲಿ, ಬಿಹಾರದ ಇಂತಹ ವಿಶೇಷ ಉತ್ಪನ್ನಗಳನ್ನು ವಿಶ್ವದಾದ್ಯಂತದ ಮಾರುಕಟ್ಟೆಗಳಿಗೆ ಕೊಂಡೊಯ್ಯುವತ್ತ ನಮ್ಮ ಗಮನವಿದೆ: ಪ್ರಧಾನಮಂತ್ರಿ
ಪಿಎಂ ಧನ್-ಧಾನ್ಯಾ ಯೋಜನೆ ಕೃಷಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ ನಮ್ಮ ರೈತರನ್ನು ಸಬಲೀಕರಣಗೊಳಿಸುತ್ತದೆ: ಪ್ರಧಾನಮಂತ್ರಿ
ಇಂದು, ಬಿಹಾರದ ಭೂಮಿ 10,000ನೇ ಎಫ್ ಪಿ ಒ ರಚನೆಗೆ ಸಾಕ್ಷಿಯಾಗಿದೆ, ಈ ಸಂದರ್ಭದಲ್ಲಿ, ದೇಶಾದ್ಯಂತದ ರೈತ ಉತ್ಪಾದಕ ಸಂಘದ ಎಲ್ಲಾ ಸದಸ್ಯರಿಗೆ ಅನೇಕ ಅಭಿನಂದನೆಗಳು!: ಪ್ರಧಾನಮಂತ್ರಿ

ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಭಾಗಲ್ ಪುರದಲ್ಲಿ ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗವಹಿಸಿದ ಎಲ್ಲ ಗಣ್ಯರು ಮತ್ತು ಜನರನ್ನು ಶ್ರೀ ಮೋದಿ ಸ್ವಾಗತಿಸಿದರು. ಮಹಾಕುಂಭದ ಪವಿತ್ರ ಅವಧಿಯಲ್ಲಿ ಮಂದಾರಾಚಲದ ಭೂಮಿಯಲ್ಲಿ ಹೆಜ್ಜೆ ಹಾಕುವುದು ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ಈ ಸ್ಥಳವು ಆಧ್ಯಾತ್ಮಿಕತೆ, ಪರಂಪರೆ ಮತ್ತು ವಿಕ್ಷಿತ್ ಭಾರತದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಹುತಾತ್ಮ ತಿಲ್ಕಾ ಮಾಂಝಿ ಅವರ ಭೂಮಿ ಮತ್ತು ಸಿಲ್ಕ್ ಸಿಟಿ ಎಂದು ಕೂಡಾ ಪ್ರಸಿದ್ಧವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಬಾಬಾ ಅಜ್ಜೈಬಿನಾಥ್ ಅವರ ಪವಿತ್ರ ಭೂಮಿಯಲ್ಲಿ ಮುಂಬರುವ ಮಹಾ ಶಿವರಾತ್ರಿಗೆ ಸಿದ್ಧತೆಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದರು. ಇಂತಹ ಪವಿತ್ರ ಸಮಯದಲ್ಲಿ ಪಿಎಂ ಕಿಸಾನ್ ನ 19 ನೇ ಕಂತನ್ನು ಬಿಡುಗಡೆ ಮಾಡುವ ಅದೃಷ್ಟ ನನ್ನದಾಗಿದೆ ಮತ್ತು ಸುಮಾರು 22,000 ಕೋಟಿ ರೂ.ಗಳನ್ನು ನೇರ ಲಾಭ/ನಗದು ವರ್ಗಾವಣೆಯ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.

ಬಿಹಾರದ ಸುಮಾರು 75 ಲಕ್ಷ ರೈತ ಕುಟುಂಬಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು, ಅವರ 19 ನೇ ಕಂತನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಇಂದು ಸುಮಾರು 1,600 ಕೋಟಿ ರೂ.ಗಳನ್ನು ಬಿಹಾರದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಅವರು ನುಡಿದರು. ಬಿಹಾರ ಮತ್ತು ದೇಶದ ಇತರ ಭಾಗಗಳ ಎಲ್ಲ ರೈತ ಕುಟುಂಬಗಳಿಗೆ ಅವರು ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

 

ಕೆಂಪು ಕೋಟೆಯಲ್ಲಿ ತಾವು ಮಾಡಿದ್ದ ಭಾಷಣದ ಮಾತುಗಳನ್ನು ಪುನರುಚ್ಚರಿಸಿದ ಶ್ರೀ ಮೋದಿ, "ವಿಕಸಿತ ಭಾರತಕ್ಕೆ ನಾಲ್ಕು ಪ್ರಮುಖ ಸ್ತಂಭಗಳಿವೆ: ಬಡವರು, ರೈತರು, ಯುವಜನರು ಮತ್ತು ಮಹಿಳೆಯರು" ಎಂದು ಹೇಳಿದರು. ಅದು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಿರಲಿ, ರೈತರ ಕಲ್ಯಾಣವು ಆದ್ಯತೆಯಾಗಿ ಉಳಿದಿದೆ ಎಂದು ಅವರು ಹೇಳಿದರು. "ಕಳೆದ ದಶಕದಲ್ಲಿ ರೈತರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ನಾವು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. ರೈತರಿಗೆ ಉತ್ತಮ ಬೀಜಗಳು, ಸಾಕಷ್ಟು ಪ್ರಮಾಣ ಮತ್ತು ಕೈಗೆಟುಕುವ ದರದಲ್ಲಿ ರಸಗೊಬ್ಬರಗಳು, ನೀರಾವರಿ ಸೌಲಭ್ಯಗಳು, ಅವರ ಜಾನುವಾರುಗಳಿಗೆ ರೋಗಗಳಿಂದ ರಕ್ಷಣೆ ಮತ್ತು ವಿಪತ್ತುಗಳ ಸಮಯದಲ್ಲಿ ನಷ್ಟದಿಂದ ಸುರಕ್ಷತೆಯ ಅಗತ್ಯವಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. ಈ ಹಿಂದೆ, ರೈತರು ಈ ಸಮಸ್ಯೆಗಳಿಂದ ಬಳಲುತ್ತಿದ್ದರು. ತಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಬದಲಾಯಿಸಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ನೂರಾರು ಆಧುನಿಕ ಬೀಜ ಪ್ರಭೇದಗಳನ್ನು ರೈತರಿಗೆ ಒದಗಿಸಲಾಗಿದೆ ಎಂದರು. ಈ ಹಿಂದೆ, ರೈತರು ಯೂರಿಯಾಕ್ಕಾಗಿ ಹೆಣಗಾಡಬೇಕಾಗಿತ್ತು ಮತ್ತು ಕಾಳಸಂತೆಯಲ್ಲಿ ಅದರ ಮಾರಾಟದ ಜತೆ ಹೆಣಗಾಡಬೇಕಾಗಿತ್ತು. ಆದರೆ ಇಂದು ರೈತರು ಸಾಕಷ್ಟು ರಸಗೊಬ್ಬರಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಜಾಗತಿಕ ಸಾಂಕ್ರಾಮಿಕ ರೋಗದ ಪ್ರಮುಖ ಬಿಕ್ಕಟ್ಟಿನ ಸಮಯದಲ್ಲಿಯೂ, ರೈತರಿಗೆ ರಸಗೊಬ್ಬರಗಳ ಕೊರತೆಯಾಗದಂತೆ ಸರ್ಕಾರ ನೋಡಿಕೊಂಡಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ತಮ್ಮ ಸರ್ಕಾರವನ್ನು ಆಯ್ಕೆ ಮಾಡದಿದ್ದರೆ, ರೈತರು ಇನ್ನೂ ರಸಗೊಬ್ಬರಗಳಿಗಾಗಿ ಹೆಣಗಾಡುತ್ತಿದ್ದರು ಎಂದು ಹೇಳಿದರು. ಬರೌನಿ ರಸಗೊಬ್ಬರ ಕಾರ್ಖಾನೆ ಇನ್ನೂ ಮುಚ್ಚಲ್ಪಟ್ಟಿರುತ್ತಿತ್ತು ಮತ್ತು ಭಾರತೀಯ ರೈತರಿಗೆ ಪ್ರತಿ ಚೀಲಕ್ಕೆ 300 ರೂ.ಗಿಂತ ಕಡಿಮೆ ದರದಲ್ಲಿ ಈಗ ಲಭ್ಯವಿರುವ ರಸಗೊಬ್ಬರಗಳನ್ನು ಅನೇಕ ದೇಶಗಳಲ್ಲಿ ಪ್ರತಿ ಚೀಲಕ್ಕೆ 3,000 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ₹ 3,000 ವೆಚ್ಚದ ಯೂರಿಯಾ ಚೀಲಗಳು ಇಂದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ತಮ್ಮ ಸರ್ಕಾರ ಖಾತ್ರಿಪಡಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅವರ ಅನುಕೂಲಕ್ಕಾಗಿ ಕೆಲಸ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು. ಈ ಮೊದಲು ರೈತರು ಭರಿಸಬೇಕಾಗಿ ಬರುತ್ತಿದ್ದ ಯೂರಿಯಾ ಮತ್ತು ಡಿಎಪಿಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸುಮಾರು ₹12 ಲಕ್ಷ ಕೋಟಿ ಒದಗಿಸಿದೆ, ಅದಿಲ್ಲದಿದ್ದರೆ ಆ ಹಣ ರೈತರ ಕಿಸೆಯಿಂದ ಪಾವತಿಯಾಗುತ್ತಿತ್ತು, ಇದು ದೇಶಾದ್ಯಂತ ಕೋಟ್ಯಂತರ ರೈತರಿಗೆ ಗಮನಾರ್ಹ ಪ್ರಮಾಣದ ಹಣವನ್ನು ಉಳಿಸಿದೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರ ಆಯ್ಕೆಯಾಗಿಲ್ಲದಿದ್ದರೆ, ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳು ಸಿಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದ ಪ್ರಧಾನಿ, ಯೋಜನೆ ಪ್ರಾರಂಭವಾದ ಆರು ವರ್ಷಗಳಲ್ಲಿ ಸುಮಾರು ₹3.7 ಲಕ್ಷ ಕೋಟಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಒತ್ತಿ ಹೇಳಿದರು. ಈ ಹಿಂದೆ ಸರ್ಕಾರಿ ಯೋಜನೆಗಳ ಪೂರ್ಣ ಪ್ರಯೋಜನಗಳನ್ನು ಪಡೆಯದ ಸಣ್ಣ ರೈತರು ಈಗ ತಮ್ಮ ಹಕ್ಕಿನ  ಹಣವನ್ನು ಪಡೆಯುತ್ತಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಧ್ಯವರ್ತಿಗಳು ಸಣ್ಣ ರೈತರ ಹಕ್ಕುಗಳನ್ನು ಬಳಸಿಕೊಂಡು ಅವರನ್ನು ಶೋಷಿಸುತ್ತಿದ್ದರು ಎಂದು ಅವರು ಹೇಳಿದರು. ಅವರು ತಮ್ಮ ನಾಯಕತ್ವದಲ್ಲಿ ಮತ್ತು ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಪ್ರಧಾನಿಯವರು ಇದನ್ನು ಹಿಂದಿನ ಸರ್ಕಾರಗಳೊಂದಿಗೆ ಹೋಲಿಸಿ ತುಲನಾತ್ಮಕವಾಗಿ  ವಿವರಿಸಿದರು, ತಮ್ಮ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಿರುವ ಮೊತ್ತವು ಹಿಂದಿನ ಸರ್ಕಾರಗಳು ನಿಗದಿಪಡಿಸಿದ ಕೃಷಿ ಬಜೆಟ್‌ಗಿಂತ ಹೆಚ್ಚಿನದಾಗಿದೆ ಎಂದು ಎತ್ತಿ ತೋರಿಸಿದರು. ಅಂತಹ ಪ್ರಯತ್ನಗಳನ್ನು ರೈತರ ಕಲ್ಯಾಣಕ್ಕೆ ಮೀಸಲಾಗಿರುವ ಸರ್ಕಾರದಿಂದ ಮಾತ್ರ ಕೈಗೊಳ್ಳಲು ಸಾಧ್ಯ  ಮತ್ತು ಭ್ರಷ್ಟ ಸಂಸ್ಥೆಗಳಿಂದಲ್ಲ ಎಂದು ಅವರು ಒತ್ತಿ ಹೇಳಿದರು.

 

ಹಿಂದಿನ ಸರ್ಕಾರಗಳು ರೈತರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಶ್ರೀ ಮೋದಿ ಹೇಳಿದರು. ಹಿಂದೆ, ಪ್ರವಾಹ, ಬರ ಅಥವಾ ಆಲಿಕಲ್ಲು ಮಳೆ ಬಂದಾಗ, ರೈತರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿತ್ತು ಎಂಬುದರತ್ತ  ಅವರು ಬೆಟ್ಟು ಮಾಡಿದರು. 2014 ರಲ್ಲಿ ತಮ್ಮ ಸರ್ಕಾರಕ್ಕೆ ಜನರ ಆಶೀರ್ವಾದ ದೊರೆತ ನಂತರ, ಈ ವಿಧಾನವು ಮುಂದುವರಿಯುವುದಿಲ್ಲ ಎಂದು ತಾವು  ಘೋಷಿಸಿದ್ದನ್ನು ಅವರು ಉಲ್ಲೇಖಿಸಿದರು. ತಮ್ಮ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪರಿಚಯಿಸಿತು, ಇದರ ಅಡಿಯಲ್ಲಿ ರೈತರು ವಿಪತ್ತುಗಳ ಸಮಯದಲ್ಲಿ ₹ 1.75 ಲಕ್ಷ ಕೋಟಿ ಮೌಲ್ಯದ ನಷ್ಟ ಮೌಲ್ಯದ ಕ್ಲೇಮುಗಳನ್ನು (ಹಕ್ಕುಗಳನ್ನು)  ಪಡೆದಿದ್ದಾರೆ ಎಂದೂ ಅವರು ಹೇಳಿದರು.

ಭೂರಹಿತ ಮತ್ತು ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ತಮ್ಮ ಸರ್ಕಾರ ಪಶುಸಂಗೋಪನೆಯನ್ನು ಉತ್ತೇಜಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಪಶುಸಂಗೋಪನೆಯು ಹಳ್ಳಿಗಳಲ್ಲಿ "ಲಖ್ಪತಿ ದೀದಿಗಳನ್ನು" ರಚಿಸಲು ಸಹಾಯ ಮಾಡುತ್ತಿದೆ ಮತ್ತು ಇಲ್ಲಿಯವರೆಗೆ, ಬಿಹಾರದ ಸಾವಿರಾರು ಜೀವಿಕಾ ದೀದಿಗಳು ಸೇರಿದಂತೆ ದೇಶಾದ್ಯಂತ ಸುಮಾರು 1.25 ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. "ಕಳೆದ ದಶಕದಲ್ಲಿ ಭಾರತದ ಹಾಲು ಉತ್ಪಾದನೆಯು 14 ಕೋಟಿ ಟನ್ ಗಳಿಂದ 24 ಕೋಟಿ ಟನ್ ಗಳಿಗೆ ಏರಿದೆ, ಇದು ವಿಶ್ವದ ನಂಬರ್ ಒನ್ ಹಾಲು ಉತ್ಪಾದಕರಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ" ಎಂದು ಹೇಳಿದ ಶ್ರೀ ಮೋದಿ ಈ ಸಾಧನೆಯಲ್ಲಿ ಬಿಹಾರದ ಮಹತ್ವದ ಪಾತ್ರವನ್ನು ಶ್ಲಾಘಿಸಿದರು. ಬಿಹಾರದ ಸಹಕಾರಿ ಹಾಲು ಒಕ್ಕೂಟಗಳು ದಿನಕ್ಕೆ 30 ಲಕ್ಷ ಲೀಟರ್ ಹಾಲನ್ನು ಖರೀದಿಸುತ್ತವೆ, ಇದರ ಪರಿಣಾಮವಾಗಿ ವಾರ್ಷಿಕವಾಗಿ 3,000 ಕೋಟಿ ರೂ.ಗಳನ್ನು ಬಿಹಾರದ ಜಾನುವಾರು ಸಾಕುವ ರೈತರು, ತಾಯಂದಿರು ಮತ್ತು ಸಹೋದರಿಯರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಹೈನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಶ್ರೀ ರಾಜೀವ್ ರಂಜನ್ ಅವರು ಕೌಶಲ್ಯಯುತವಾಗಿ ಮುನ್ನಡೆಸುತ್ತಿದ್ದಾರೆ ಎಂದು ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಅವರ ಪ್ರಯತ್ನಗಳಿಂದಾಗಿ ಬಿಹಾರದಲ್ಲಿ ಎರಡು ಯೋಜನೆಗಳು ವೇಗವಾಗಿ ಪ್ರಗತಿ ಸಾಧಿಸುತ್ತಿವೆ ಎಂದರು. ಮೋತಿಹರಿಯಲ್ಲಿರುವ ಉತ್ಕೃಷ್ಟತಾ ಕೇಂದ್ರವು ಉತ್ಕೃಷ್ಟ ದೇಶೀಯ ಜಾನುವಾರು ತಳಿಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ಉಲ್ಲೇಖಿಸಿದರು. ಇದಲ್ಲದೆ, ಬರೌನಿಯಲ್ಲಿರುವ ಹಾಲಿನ ಘಟಕವು ಈ ಪ್ರದೇಶದ ಮೂರು ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

 

ಮೀನುಗಾರರು ಮತ್ತು ದೋಣಿಯವರಿಗೆ ಸಹಾಯ ಮಾಡದಿದ್ದಕ್ಕಾಗಿ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಶ್ರೀ ಮೋದಿ, ತಮ್ಮ ಸರ್ಕಾರವು ಮೊದಲ ಬಾರಿಗೆ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸಿದೆ ಎಂದು ಒತ್ತಿ ಹೇಳಿದರು. ಇಂತಹ ಪ್ರಯತ್ನಗಳಿಂದಾಗಿ ಬಿಹಾರವು ಮೀನು ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. ಹತ್ತು ವರ್ಷಗಳ ಹಿಂದೆ, ಬಿಹಾರವು ದೇಶದ ಅಗ್ರ 10 ಮೀನು ಉತ್ಪಾದಿಸುವ ರಾಜ್ಯಗಳಲ್ಲಿ ಒಂದಾಗಿತ್ತು, ಆದರೆ ಇಂದು, ಬಿಹಾರವು ಭಾರತದ ಅಗ್ರ ಐದು ಮೀನು ಉತ್ಪಾದಿಸುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಮೀನುಗಾರಿಕೆ ಕ್ಷೇತ್ರದತ್ತ ಗಮನ ಹರಿಸಿರುವುದು ಸಣ್ಣ ರೈತರು ಮತ್ತು ಮೀನುಗಾರರಿಗೆ ಗಮನಾರ್ಹವಾಗಿ ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾಗಲ್ಪುರವು ಗಂಗಾ ಡಾಲ್ಫಿನ್ಗಳಿಗೂ ಹೆಸರುವಾಸಿಯಾಗಿದೆ, ಇದು ನಮಾಮಿ ಗಂಗೆ ಅಭಿಯಾನದ ಗಮನಾರ್ಹ ಯಶಸ್ಸಾಗಿದೆ ಎಂದು ಅವರು ಉಲ್ಲೇಖಿಸಿದರು.

"ಇತ್ತೀಚಿನ ವರ್ಷಗಳಲ್ಲಿ ನಮ್ಮ ಸರ್ಕಾರದ ಪ್ರಯತ್ನಗಳು ಭಾರತದ ಕೃಷಿ ರಫ್ತನ್ನು ಗಮನಾರ್ಹವಾಗಿ ಹೆಚ್ಚಿಸಿವೆ" ಎಂದು ಪ್ರಧಾನಿ ಹೇಳಿದರು. ಇದರ ಪರಿಣಾಮವಾಗಿ, ರೈತರು ಈಗ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಹಿಂದೆಂದೂ ರಫ್ತಾಗದ ಹಲವಾರು ಕೃಷಿ ಉತ್ಪನ್ನಗಳು ಈಗ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು. ಬಿಹಾರದ ಮಖಾನಾ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುವ ಸಮಯ ಈಗ ಬಂದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಖಾನಾ ಭಾರತೀಯ ನಗರಗಳಲ್ಲಿ ಉಪಾಹಾರದ ಜನಪ್ರಿಯ ಭಾಗವಾಗಿದೆ ಮತ್ತು ಇದನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ ಎಂಬುದರತ್ತ  ಅವರು ಗಮನ ಸೆಳೆದರು. ಈ ವರ್ಷದ ಬಜೆಟ್ ನಲ್ಲಿ ಮಖಾನಾ ರೈತರಿಗಾಗಿ ಘೋಷಿಸಲಾದ ಮಖಾನಾ ಮಂಡಳಿಯ ರಚನೆಯು ಮಖಾನಾ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೇರಿದಂತೆ ಪ್ರತಿಯೊಂದು ಅಂಶದಲ್ಲೂ ರೈತರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಬಜೆಟ್ ನಲ್ಲಿ ಬಿಹಾರದ ರೈತರು ಮತ್ತು ಯುವಜನರಿಗಾಗಿ ಘೋಷಿಸಲಾದ ಮತ್ತೊಂದು ಮಹತ್ವದ ಉಪಕ್ರಮವನ್ನು ಉಲ್ಲೇಖಿಸಿದ ಶ್ರೀ ಮೋದಿ, ಬಿಹಾರವು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣಾ ಉದ್ಯಮದ ಪ್ರಮುಖ ಕೇಂದ್ರವಾಗಲಿದೆ ಎಂದು ಒತ್ತಿ ಹೇಳಿದರು. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದರು. ಇದಲ್ಲದೆ, ರಾಜ್ಯದಲ್ಲಿ ಮೂರು ಹೊಸ ಕೃಷಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳಲ್ಲಿ ಒಂದನ್ನು ಭಾಗಲ್ಪುರದಲ್ಲಿ ಸ್ಥಾಪಿಸಲಾಗುವುದು, ಇಲ್ಲಿ ಜರ್ಡಾಲು ತಳಿಯ ಮಾವಿನಹಣ್ಣುಗಳನ್ನು ಕೇಂದ್ರೀಕರಿಸಲಾಗುವುದು, ಇತರ ಎರಡು ಕೇಂದ್ರಗಳನ್ನು ಮುಂಗೇರ್ ಮತ್ತು ಬಕ್ಸಾರ್ನಲ್ಲಿ ಸ್ಥಾಪಿಸಲಾಗುವುದು, ಇದು ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ರೈತರಿಗೆ ಸಹಾಯವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ರೈತರಿಗೆ ಅನುಕೂಲವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರವು ಯಾವುದೇ ಅವಕಾಶವನ್ನು ಕೈಬಿಡುತ್ತಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

 

"ಭಾರತವು ಜವಳಿ ರಫ್ತು ಮಾಡುವ ಪ್ರಮುಖ ರಾಷ್ಟ್ರವಾಗುತ್ತಿದೆ" ಎಂದು ಹೇಳಿದ ಶ್ರೀ ಮೋದಿ, ದೇಶದಲ್ಲಿ ಜವಳಿ ಉದ್ಯಮವನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಒತ್ತಿ ಹೇಳಿದರು. ಭಾಗಲ್ಪುರದಲ್ಲಿ, ಮರಗಳು ಸಹ ಚಿನ್ನವನ್ನು ಉತ್ಪಾದಿಸುತ್ತವೆ ಎಂದು ಆಗಾಗ್ಗೆ ಹೇಳಲಾಗುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ಭಾಗಲ್ಪುರಿ ರೇಷ್ಮೆ ಮತ್ತು ತುಸ್ಸಾರ್ ರೇಷ್ಮೆ ಭಾರತದಾದ್ಯಂತ ಪ್ರಸಿದ್ಧವಾಗಿವೆ ಮತ್ತು ಇತರ ದೇಶಗಳಲ್ಲಿಯೂ ತುಸ್ಸಾರ್ ರೇಷ್ಮೆಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಬಟ್ಟೆ ಮತ್ತು ದಾರಕ್ಕೆ ಬಣ್ಣ ಹಾಕುವ ಘಟಕಗಳು, ಫ್ಯಾಬ್ರಿಕ್ ಮುದ್ರಣ ಘಟಕಗಳು ಮತ್ತು ಫ್ಯಾಬ್ರಿಕ್ ಸಂಸ್ಕರಣಾ ಘಟಕಗಳು ಸೇರಿದಂತೆ ರೇಷ್ಮೆ ಉದ್ಯಮಕ್ಕೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಉಪಕ್ರಮಗಳು ಭಾಗಲ್ಪುರದ ನೇಕಾರರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ, ಅವರ ಉತ್ಪನ್ನಗಳು ವಿಶ್ವದ ಮೂಲೆ ಮೂಲೆಯನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದೂ ಅವರು ಹೇಳಿದರು.

ಸಾರಿಗೆ ತೊಂದರೆಗಳನ್ನು ಪರಿಹರಿಸಲು ನದಿಗಳಿಗೆ ಹಲವಾರು ಸೇತುವೆಗಳನ್ನು ನಿರ್ಮಿಸುವ ಮೂಲಕ ಸರ್ಕಾರ ಬಿಹಾರದ ಪ್ರಮುಖ ಸಮಸ್ಯೆಗಳಲ್ಲಿ ಒಂದನ್ನು ಪರಿಹರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಸಾಕಷ್ಟು ಸೇತುವೆಗಳು ಇಲ್ಲದಿರುವುದರಿಂದ ರಾಜ್ಯಕ್ಕೆ ಅನೇಕ ಸಮಸ್ಯೆಗಳು ಉಂಟಾಗಿವೆ ಎಂದು ಅವರು ಎತ್ತಿ ತೋರಿಸಿದರು. ಗಂಗಾ ನದಿಯ ಮೇಲೆ ನಾಲ್ಕು ಪಥಗಳ ಸೇತುವೆಯನ್ನು ನಿರ್ಮಿಸುವಲ್ಲಿ ತ್ವರಿತ ಪ್ರಗತಿ ಸಾಧಿಸಲಾಗುತ್ತಿದೆ, ಈ ಯೋಜನೆಗೆ ₹1,100 ಕೋಟಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಬಿಹಾರವು ಪ್ರವಾಹದಿಂದ ಗಣನೀಯ ನಷ್ಟವನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಅನುಮೋದಿಸಿದೆ ಎಂದು ಒತ್ತಿ ಹೇಳಿದರು. ಈ ವರ್ಷದ ಬಜೆಟ್‌ನಲ್ಲಿ ಮಿಥಿಲಾಂಚಲ್ ಪ್ರದೇಶದ 50,000 ಹೆಕ್ಟೇರ್ ಭೂಮಿಯನ್ನು ನೀರಾವರಿ ಅಡಿಯಲ್ಲಿ ತರುವ ಪಶ್ಚಿಮ ಕೋಸಿ ಕಾಲುವೆ ಇಆರ್‌ಎಂ ಯೋಜನೆಗೆ ಬೆಂಬಲ ನೀಡುವುದರ ಮೂಲಕ  ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದೂ  ಅವರು ಉಲ್ಲೇಖಿಸಿದರು.

 

ರೈತರ ಆದಾಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಬಹು ಹಂತಗಳಲ್ಲಿ ಕೆಲಸ ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದರು, ಉತ್ಪಾದನೆಯನ್ನು ಹೆಚ್ಚಿಸುವ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವ, ಹೆಚ್ಚಿನ ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಸ್ಥಾಪಿಸುವ ಮತ್ತು ಭಾರತೀಯ ರೈತರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುವಂತೆ ನೋಡಿಕೊಳ್ಳುವ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಪ್ರಪಂಚದ ಪ್ರತಿಯೊಂದು ಅಡುಗೆಮನೆಯಲ್ಲಿ ಭಾರತೀಯ ರೈತರು ಬೆಳೆದ ಕನಿಷ್ಠ ಒಂದು ಉತ್ಪನ್ನವಿರಬೇಕು ಎಂಬ ತಮ್ಮ ದೃಷ್ಟಿಕೋನವನ್ನು ಅವರು ಹಂಚಿಕೊಂಡರು. ಈ ವರ್ಷದ ಬಜೆಟ್ ಪ್ರಧಾನ ಮಂತ್ರಿ ಧನ್ ಧಾನ್ಯ ಯೋಜನೆಯ ಘೋಷಣೆಯ ಮೂಲಕ ಈ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂಬುದರತ್ತ  ಅವರು ಗಮನ ಸೆಳೆದರು. ಈ ಯೋಜನೆಯಡಿಯಲ್ಲಿ, ಕಡಿಮೆ ಬೆಳೆ ಉತ್ಪಾದನೆ ಹೊಂದಿರುವ 100 ಜಿಲ್ಲೆಗಳನ್ನು ಗುರುತಿಸಲಾಗುವುದು ಮತ್ತು ಈ ಪ್ರದೇಶಗಳಲ್ಲಿ ಕೃಷಿಯನ್ನು ಉತ್ತೇಜಿಸಲು ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಮಿಷನ್-ಮೋಡ್ ಕೆಲಸವನ್ನು ಕೈಗೊಳ್ಳಲಾಗುವುದು, ರೈತರು ಹೆಚ್ಚಿನ ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ಮತ್ತು ಮಾರುಕಟ್ಟೆ ಮಧ್ಯಪ್ರವೇಶದ (MSP) ಮೂಲಕ ಖರೀದಿಯನ್ನು  ಹೆಚ್ಚಿಸಲಾಗುವುದು ಎಂದು ಅವರು ಒತ್ತಿ ಹೇಳಿದರು.

ಇಂದು ಬಹಳ ವಿಶೇಷ ದಿನ ಎಂದು ಹೇಳಿದ ಪ್ರಧಾನಿ, ದೇಶದಲ್ಲಿ 10,000 ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿತ್ತು ಮತ್ತು ಅದು ಈಗ ಆ ಗುರಿಯನ್ನು ಸಾಧಿಸಿದೆ ಎಂದು ಒತ್ತಿ ಹೇಳಿದರು. ಬಿಹಾರವು 10,000 ನೇ ಎಫ್.ಪಿ.ಒ. ಸ್ಥಾಪನೆಗೆ ಸಾಕ್ಷಿಯಾಗುತ್ತಿರುವುದಕ್ಕೆ ಅವರು ತಮ್ಮ ಸಂತೋಷವನ್ನು ಹಂಚಿಕೊಂಡರು. ಖಗಾರಿಯಾ ಜಿಲ್ಲೆಯಲ್ಲಿ ನೋಂದಾಯಿಸಲಾದ ಈ ಎಫ್.ಪಿ.ಒ., ಮೆಕ್ಕೆಜೋಳ, ಬಾಳೆಹಣ್ಣು ಮತ್ತು ಭತ್ತದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. ಎಫ್.ಪಿ.ಒ., ಗಳು ಕೇವಲ ಸಂಸ್ಥೆಗಳಲ್ಲ, ಬದಲಾಗಿ ರೈತರ ಆದಾಯವನ್ನು ಹೆಚ್ಚಿಸುವ ಅಭೂತಪೂರ್ವ ಶಕ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಎಫ್.ಪಿ.ಒ., ಗಳು ಸಣ್ಣ ರೈತರಿಗೆ ಗಮನಾರ್ಹ ಮಾರುಕಟ್ಟೆ ಪ್ರಯೋಜನಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತವೆ ಎಂದು ಶ್ರೀ ಮೋದಿ ನುಡಿದರು. ಹಿಂದೆ ಲಭ್ಯವಿಲ್ಲದ ಅವಕಾಶಗಳು ಈಗ ನಮ್ಮ ರೈತ ಸಹೋದರ ಸಹೋದರಿಯರಿಗೆ ಎಫ್.ಪಿ.ಒ., ಗಳ ಮೂಲಕ ಲಭ್ಯವಿದೆ. ದೇಶದಲ್ಲಿ ಸುಮಾರು 30 ಲಕ್ಷ ರೈತರು ಎಫ್.ಪಿ.ಒ., ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಅವರಲ್ಲಿ ಸುಮಾರು 40 ಪ್ರತಿಶತದಷ್ಟು ಮಹಿಳೆಯರು ಎಂದು ಪ್ರಧಾನಿ ಉಲ್ಲೇಖಿಸಿದರು. ಈ ಎಫ್.ಪಿ.ಒ ಗಳು ಈಗ ಕೃಷಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಮೌಲ್ಯದ ವ್ಯವಹಾರವನ್ನು ನಡೆಸುತ್ತಿವೆ ಎಂದು ಅವರು ಹೇಳಿದರು. 10,000 ಎಫ್.ಪಿ.ಒ ಗಳ ಎಲ್ಲಾ ಸದಸ್ಯರಿಗೆ ಅವರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ಬಿಹಾರದ ಕೈಗಾರಿಕಾ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನವನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಬಿಹಾರ ಸರ್ಕಾರ ಭಾಗಲ್ಪುರದಲ್ಲಿ ದೊಡ್ಡ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುತ್ತಿದೆ, ಇದು ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ಪಡೆಯುತ್ತದೆ ಎಂದು ಒತ್ತಿ ಹೇಳಿದರು. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಕಲ್ಲಿದ್ದಲು ಸಂಪರ್ಕವನ್ನು ಅನುಮೋದಿಸಿದೆ ಎಂದೂ  ಹೇಳಿದರು. ಇಲ್ಲಿ ಉತ್ಪಾದಿಸುವ ವಿದ್ಯುತ್ ಬಿಹಾರದ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ಒದಗಿಸುತ್ತದೆ ಮತ್ತು ಬಿಹಾರದ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವನ್ನು ಅವರು  ವ್ಯಕ್ತಪಡಿಸಿದರು.

“ಪೂರ್ವೋದಯದಿಂದ ವಿಕ್ಷಿತ ಭಾರತದ ಉದಯ ಆರಂಭವಾಗಲಿದೆ" ಎಂದು ಶ್ರೀ ಮೋದಿ ಹೇಳಿದರು, ಬಿಹಾರ ಪೂರ್ವ ಭಾರತದ ಪ್ರಮುಖ ಸ್ತಂಭ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದರು. ಹಿಂದಿನ ಸರ್ಕಾರದ ದೀರ್ಘ ದುರಾಡಳಿತವನ್ನು ಅವರು ಟೀಕಿಸಿದರು, ಅದು ಬಿಹಾರವನ್ನು ಹಾಳುಮಾಡಿತು ಮತ್ತು ಅಪಖ್ಯಾತಿಗೆ ಒಡ್ಡಿತು ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದಲ್ಲಿ, ಬಿಹಾರವು ಪ್ರಾಚೀನ ಸಮೃದ್ಧ ಪಾಟಲಿಪುತ್ರದಂತೆಯೇ ತನ್ನ ಸ್ಥಾನವನ್ನು ಮರಳಿ ಪಡೆಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಗುರಿಯತ್ತ ನಿರಂತರ ಪ್ರಯತ್ನಗಳನ್ನು ಪ್ರಧಾನಿ ಎತ್ತಿ ತೋರಿಸಿದರು. ಬಿಹಾರದಲ್ಲಿ ಆಧುನಿಕ ಸಂಪರ್ಕ, ರಸ್ತೆ ಜಾಲಗಳು ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಬೆಟ್ಟು ಮಾಡಿದರು. ಮುಂಗೇರ್ ನಿಂದ ಭಾಗಲ್ಪುರ್ ನಿಂದ ಮಿರ್ಜಾ ಚೌಕಿಗೆ ಸುಮಾರು ₹5,000 ಕೋಟಿ ವೆಚ್ಚದ ಹೊಸ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಘೋಷಿಸಿದರು. ಹೆಚ್ಚುವರಿಯಾಗಿ, ಭಾಗಲ್ಪುರದಿಂದ ಅಂಶದಿಹ್ವಾವರೆಗಿನ ನಾಲ್ಕು ಪಥದ ರಸ್ತೆಯ ಅಗಲೀಕರಣವು ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ವಿಕ್ರಮಶಿಲಾದಿಂದ ಕಟಾರಿಯಾವರೆಗಿನ ಹೊಸ ರೈಲು ಮಾರ್ಗ ಮತ್ತು ರೈಲು ಸೇತುವೆಯನ್ನು ಭಾರತ ಸರ್ಕಾರವು ಅನುಮೋದಿಸಿದೆ ಎಂದು ಅವರು ಉಲ್ಲೇಖಿಸಿದರು.

 

ಭಾಗಲ್ ಪುರ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿತ್ತು ಎಂದು ಪ್ರಧಾನಿ ಹೇಳಿದರು, ವಿಕ್ರಮಶಿಲಾ ವಿಶ್ವವಿದ್ಯಾಲಯದ ಯುಗದಲ್ಲಿ ಅದು ಜಾಗತಿಕ ಜ್ಞಾನ ಕೇಂದ್ರವಾಗಿತ್ತು ಎಂಬುದನ್ನು ಎತ್ತಿ ತೋರಿಸಿದರು. ನಳಂದ ವಿಶ್ವವಿದ್ಯಾಲಯದ ಪ್ರಾಚೀನ ವೈಭವವನ್ನು ಆಧುನಿಕ ಭಾರತದೊಂದಿಗೆ ಜೋಡಿಸಲು ಸರ್ಕಾರ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಅವರು ನುಡಿದರು. ನಳಂದದ ನಂತರ, ವಿಕ್ರಮಶಿಲಾದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು. ಈ ಯೋಜನೆಯ ಅಗತ್ಯಗಳನ್ನು ಪೂರೈಸಲು ತ್ವರಿತ ಪ್ರಯತ್ನಗಳಿಗಾಗಿ ಶ್ರೀ ನಿತೀಶ್ ಕುಮಾರ್ ಮತ್ತು ಇಡೀ ಬಿಹಾರದ ಸರ್ಕಾರದ ತಂಡವನ್ನು ಅವರು ಅಭಿನಂದಿಸಿದರು.

“ಭಾರತದ ಭವ್ಯ ಪರಂಪರೆಯನ್ನು ಕಾಪಾಡಲು ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ನಮ್ಮ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಭಾರತದ ನಂಬಿಕೆ, ಏಕತೆ ಮತ್ತು ಸಾಮರಸ್ಯದ ಅತಿದೊಡ್ಡ ಹಬ್ಬವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಸ್ತುತ ಮಹಾಕುಂಭವು ನಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಡೀ ಯುರೋಪಿನ ಜನಸಂಖ್ಯೆಗಿಂತ ಹೆಚ್ಚಿನ ಜನರು ಏಕತೆಯ ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅವರು ಗಮನಿಸಿದರು. ಬಿಹಾರದಾದ್ಯಂತದ ಹಳ್ಳಿಗಳ ಭಕ್ತರು ಮಹಾಕುಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ಮಹಾಕುಂಭದ ಬಗ್ಗೆ ಅವಮಾನಿಸುವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷಗಳನ್ನು ಅವರು ಟೀಕಿಸಿದರು. ರಾಮ ಮಂದಿರವನ್ನು ವಿರೋಧಿಸಿದ ಅದೇ ಜನರು ಈಗ ಮಹಾಕುಂಭವನ್ನು ಟೀಕಿಸುತ್ತಿದ್ದಾರೆ ಎಂದು ಅವರು ಬೆಟ್ಟು ಮಾಡಿದರು. ಮಹಾಕುಂಭವನ್ನು ಅವಮಾನಿಸುವವರನ್ನು ಬಿಹಾರ ಎಂದಿಗೂ ಕ್ಷಮಿಸುವುದಿಲ್ಲ ಎಂಬ ವಿಶ್ವಾಸವನ್ನು  ಪ್ರಧಾನಿ ವ್ಯಕ್ತಪಡಿಸಿದರು. ಬಿಹಾರವನ್ನು ಹೊಸ ಸಮೃದ್ಧಿಯ ಹಾದಿಗೆ ಕೊಂಡೊಯ್ಯಲು ಸರ್ಕಾರ ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು. ದೇಶದ ರೈತರು ಮತ್ತು ಬಿಹಾರದ ನಿವಾಸಿಗಳಿಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

 

ಕಾರ್ಯಕ್ರಮದಲ್ಲಿ ಬಿಹಾರದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ಲಾಲನ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಕೇಂದ್ರ ಸಹಾಯಕ ಸಚಿವ ಶ್ರೀ ರಾಮ್ ನಾಥ್ ಠಾಕೂರ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ:

ರೈತರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಬದ್ಧರಾಗಿದ್ದಾರೆ. ಇದಕ್ಕೆ ಅನುಗುಣವಾಗಿ, ಅವರು ಭಾಗಲ್ಪುರದಲ್ಲಿ ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳಲಿದ್ದಾರೆ. ದೇಶಾದ್ಯಂತ 9.7 ಕೋಟಿ ರೈತರು 21,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ನೇರ ಆರ್ಥಿಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.

 

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಸಂಭಾವನೆ ಪಡೆಯುವುದನ್ನು ಖಾತ್ರಿಪಡಿಸುವತ್ತ ಪ್ರಧಾನ ಮಂತ್ರಿಯವರು ಮಹತ್ವದ ಗಮನ ಹರಿಸಿದ್ದಾರೆ. ಇದನ್ನು ಅನುಸರಿಸಿ, 2020 ರ ಫೆಬ್ರವರಿ 29 ರಂದು, ಅವರು 10,000 ರೈತ ಉತ್ಪಾದಕ ಸಂಸ್ಥೆಗಳ (ಎಫ್ಪಿಒ) ರಚನೆ ಮತ್ತು ಉತ್ತೇಜನಕ್ಕಾಗಿ ಕೇಂದ್ರ ವಲಯದ ಯೋಜನೆಯನ್ನು ಪ್ರಾರಂಭಿಸಿದರು, ಇದು ರೈತರಿಗೆ ಸಾಮೂಹಿಕವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಮತ್ತು ಉತ್ಪಾದಿಸಲು ಸಹಾಯ ಮಾಡುತ್ತದೆ. ಐದು ವರ್ಷಗಳಲ್ಲಿ, ರೈತರ ಬಗ್ಗೆ ಪ್ರಧಾನಮಂತ್ರಿಯವರ ಈ ಬದ್ಧತೆ ಈಡೇರಿದೆ, ಕಾರ್ಯಕ್ರಮದ ಸಂದರ್ಭದಲ್ಲಿ ದೇಶದಲ್ಲಿ 10,000 ನೇ ಎಫ್ಪಿಒ ರಚನೆಯ ಮೈಲಿಗಲ್ಲನ್ನು ಅವರು ಗುರುತಿಸಿದ್ದಾರೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಮೋತಿಹರಿಯಲ್ಲಿ ನಿರ್ಮಿಸಲಾದ ದೇಶೀಯ ತಳಿಗಳ ಉತ್ಕೃಷ್ಟತಾ ಕೇಂದ್ರವನ್ನು ಉದ್ಘಾಟಿಸಿದರು. ಇದರ ಪ್ರಮುಖ ಉದ್ದೇಶಗಳಲ್ಲಿ ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನವನ್ನು ಪರಿಚಯಿಸುವುದು, ಹೆಚ್ಚಿನ ಪ್ರಚಾರಕ್ಕಾಗಿ ದೇಶೀಯ ತಳಿಗಳ ಜಾನುವಾರುಗಳ/ಪ್ರಾಣಿಗಳ ಉತ್ಪಾದನೆ ಮತ್ತು ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ರೈತರು ಮತ್ತು ವೃತ್ತಿಪರರಿಗೆ ತರಬೇತಿ ನೀಡುವುದು ಸೇರಿವೆ. 3 ಲಕ್ಷ ಹಾಲು ಉತ್ಪಾದಕರಿಗೆ ಸಂಘಟಿತ ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿಯನ್ನು ತಲುಪಲು ಬರೌನಿಯಲ್ಲಿ ಹಾಲು ಉತ್ಪನ್ನ ಘಟಕವನ್ನು ಅವರು ಉದ್ಘಾಟಿಸಲಿದ್ದಾರೆ.

ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು 526 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಾರಿಸಾಲಿಗಂಜ್ - ನವಾಡಾ - ತಿಲೈಯಾ ರೈಲು ವಿಭಾಗದ ಹಳಿಗಳ ದ್ವಿಪಥ   ಮತ್ತು ಇಸ್ಮಾಯಿಲ್ಪುರ - ರಫಿಗಂಜ್ ರಸ್ತೆ ಮೇಲ್ಸೇತುವೆಯ (ಆರ್.ಒ.ಬಿ.) ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
On Puri’s Grand Road, a devotee’s submission

Media Coverage

On Puri’s Grand Road, a devotee’s submission
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.