ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ - ಸೋನಗರ್ ರೈಲ್ವೆ ಮಾರ್ಗದ ವಿಶೇಷ ಸರಕು ಸಾಗಣೆ ಕಾರಿಡಾರ್ ಉದ್ಘಾಟಿಸಿದರು
ರಾಷ್ಟ್ರೀಯ ಹೆದ್ದಾರಿ 56ರ ವಾರಣಾಸಿ-ಜೌನಪುರ ವಿಭಾಗದ ಚತುಷ್ಪಥ ರಸ್ತೆ ಅಗಲೀಕರಣ ಲೋಕಾರ್ಪಣೆ
ವಾರಣಾಸಿಯಲ್ಲಿ ಹಲವು ಯೋಜನೆಗಳ ಉದ್ಘಾಟನೆ
ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಟ್ಟಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ
ಕರ್ಸಾರದ ʻಸಿಪೆಟ್ʼ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ
ʻಪಿಎಂ ಸ್ವನಿಧಿʼಯ ಸಾಲ, ʻಪಿಎಂಎವೈ-ಗ್ರಾಮೀಣʼ ಯೋಜನೆಯಡಿ ನಿರ್ಮಿಸಲಾದ ಮನೆಗಳ ಕೀಲಿಗಳು ಮತ್ತು ʻಆಯುಷ್ಮಾನ್ ಕಾರ್ಡ್ʼಗಳನ್ನು ಫಲಾನುಭವಿಗಳಿಗೆ ವಿತರಿಸಿದರು
"ಇಂದಿನ ಯೋಜನೆಗಳೊಂದಿಗೆ ಕಾಶಿಯ ಪ್ರಾಚೀನ ಆತ್ಮವನ್ನು ಉಳಿಸಿಕೊಂಡು ಹೊಸ ದೇಹವನ್ನು ಒದಗಿಸುವ ನಮ್ಮ ಸಂಕಲ್ಪ ವಿಸ್ತರಣೆಯಾಗಿದೆ"
"ಸರ್ಕಾರವು ಫಲಾನುಭವಿಗಳೊಂದಿಗೆ ಸಂವಾದ ಮತ್ತು ಸಂವಹನದ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದೆ, ಅಂದರೆ 'ನೇರ ಪ್ರಯೋಜನ ಮತ್ತು ನೇರ ಪ್ರತಿಕ್ರಿಯೆ'
"ಫಲಾನುಭವಿ ವರ್ಗವು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ನಿಜವಾದ ರೂಪಕ್ಕೆ ಉದಾಹರಣೆಯಾಗಿದೆ"
"ಪಿಎಂ ಆವಾಸ್ ಮತ್ತು ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ಅನೇಕ ತಲೆಮಾರುಗಳ ಮೇಲೆ ಪರಿಣಾಮ ಬೀರುತ್ತವೆ"
"ಬಡವರಿಗೆ ಆತ್ಮಗೌರವವೇ ಮೋದಿಯ ಗ್ಯಾರಂಟಿ"
ʻಜಿ- 20ʼ ಪ್ರತಿನಿಧಿಗಳನ್ನು ಸ್ವಾಗತಿಸಿದ್ದಕ್ಕಾಗಿ ಮತ್ತು ಪ್ರಾರ್ಥನಾ ಸ್ಥಳಗಳ ಆವರಣವನ್ನು ಸ್ವಚ್ಛವಾಗಿ ಮತ್ತು ಭವ್ಯವಾಗಿ ಇರಿಸಿದ್ದಕ್ಕಾಗಿ ಕಾಶಿ ಜನರನ್ನು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 12,100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ - ಸೋನ್ ನಗರ ರೈಲ್ವೆ ಮಾರ್ಗದಲ್ಲಿ ನಿರ್ಮಾಣಗೊಂಡ ʻವಿಶೇಷ ಸರಕು ಸಾಗಣೆ ಕಾರಿಡಾರ್‌ʼ, ವಿದ್ಯುದ್ದೀಕರಣ ಅಥವಾ ಡಬ್ಲಿಂಗ್‌ ಪೂರ್ಣಗೊಂಡ ಮೂರು ರೈಲ್ವೆ ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿ-56ರ ವಾರಣಾಸಿ-ಜೌನಪುರ ವಿಭಾಗದ ಅಗಲೀಕೃತ ಚತುಷ್ಪಥ ಮತ್ತು ವಾರಣಾಸಿಯಲ್ಲಿ ಅನೇಕ ಯೋಜನೆಗಳು ಇದರಲ್ಲಿ ಸೇರಿವೆ. 15 ಪಿಡಬ್ಲ್ಯುಡಿ ರಸ್ತೆಗಳ ನಿರ್ಮಾಣ ಮತ್ತು ನವೀಕರಣ, 192 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳ ನವೀಕರಣ ಮತ್ತು ಪುನರಾಭಿವೃದ್ಧಿ, ಆರು ಧಾರ್ಮಿಕ ಮಹತ್ವದ ಸ್ನಾನ ಘಟ್ಟಗಳಲ್ಲಿ ತೇಲುವ ಬಟ್ಟೆ ಬದಲಾಯಿಸುವ ಕೋಣೆ ಜೆಟ್ಟಿಗಳು ಮತ್ತು ಕರ್ಸಾರ್‌ನ ʻಸಿಪೆಟ್ʼ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಹಲವು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ʻಪ್ರಧಾನಮಂತ್ರಿ ಸ್ವನಿಧಿʼಯಡಿ ಸಾಲ ವಿತರಣೆ, ʻಪಿಎಂಎವೈ-ಗ್ರಾಮೀಣʼ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಕೀಗಳು ಮತ್ತು ಆಯುಷ್ಮಾನ್ ಭಾರತ್ ಕಾರ್ಡ್‌ಗಳ ವಿತರಣೆಗೂ ಶ್ರೀ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು, ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಟ್ಟಗಳ ಮಾದರಿಗಳನ್ನು ವೀಕ್ಷಿಸಿದರು.

 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರಾವಣ ಮಾಸದ ಆರಂಭ, ಭಗವಾನ್ ವಿಶ್ವನಾಥ ಮತ್ತು ಗಂಗಾ ಮಾತೆಯ ಆಶೀರ್ವಾದ ಹಾಗೂ ವಾರಣಾಸಿಯ ಜನರ ಉಪಸ್ಥಿತಿಯಿಂದ ಜೀವನವು ಒಂದು ಆಶೀರ್ವಾದವಾಗುತ್ತದೆ ಎಂದರು. ಸಾವಿರಾರು ಶಿವ ಭಕ್ತರು ವಾರಣಾಸಿಗೆ 'ಜಲ'ವನ್ನು ಅರ್ಪಿಸಲು ಬರುತ್ತಿದ್ದಾರೆ ಮತ್ತು ನಗರವು ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳಿಗೆ ಸಾಕ್ಷಿಯಾಗುವುದು ಖಚಿತ ಎಂದು ಪ್ರಧಾನಿ ಹೇಳಿದರು. "ವಾರಾಣಸಿಗೆ ಬರುವವರು ಯಾವಾಗಲೂ ಸಂತೋಷದ ಭಾವನೆಯೊಂದಿಗೆ ಹಿಂದಿರುಗುತ್ತಾರೆ" ಎಂದು ಹೇಳುವ ಮೂಲಕ ಸ್ಥಳೀಯ ಜನರ ಆತಿಥ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ʻಜಿ- 20ʼ ಪ್ರತಿನಿಧಿಗಳನ್ನು ಸ್ವಾಗತಿಸಿದ್ದಕ್ಕಾಗಿ ಮತ್ತು ಪ್ರಾರ್ಥನಾ ಸ್ಥಳಗಳ ಆವರಣವನ್ನು ಸ್ವಚ್ಛವಾಗಿ ಮತ್ತು ಭವ್ಯವಾಗಿ ಇರಿಸಿದ್ದಕ್ಕಾಗಿ ಕಾಶಿ ಜನರನ್ನು ಅವರು ಶ್ಲಾಘಿಸಿದರು.

ಸುಮಾರು 12,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. "ಇದು ಕಾಶಿಗೆ ಅದರ ಪ್ರಾಚೀನ ಆತ್ಮವನ್ನು ಉಳಿಸಿಕೊಂಡು ಹೊಸ ದೇಹವನ್ನು ಒದಗಿಸುವ ನಮ್ಮ ಸಂಕಲ್ಪದ ವಿಸ್ತರಣೆಯಾಗಿದೆ" ಎಂದು ಪ್ರಧಾನಿ ಹೇಳಿದರು. ಯೋಜನೆಗಳಿಗಾಗಿ ಅವರು ಕಾಶಿಯ ಜನರನ್ನು ಅಭಿನಂದಿಸಿದರು.

ಇದಕ್ಕೂ ಮೊದಲು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಹಿಂದಿನ ಕಾಲದಲ್ಲಿ ಯೋಜನೆಗಳು ತಳಮಟ್ಟದ ಜನರೊಂದಿಗೆ ಅಥವಾ ಸಮುದಾಯದೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂದರು. ಪ್ರಸ್ತುತ ಸರ್ಕಾರವು ಫಲಾನುಭವಿಗಳೊಂದಿಗೆ ಸಂವಾದ ಮತ್ತು ಸಂವಹನದ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದೆ, ಅಂದರೆ 'ನೇರ ಪ್ರಯೋಜನ ಮತ್ತು ನೇರ ಪ್ರತಿಕ್ರಿಯೆ'ಗೆ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು. ಇದು ಇಲಾಖೆಗಳು ಮತ್ತು ಅಧಿಕಾರಿಗಳ ಉತ್ತಮ ಕಾರ್ಯಕ್ಷಮತೆಗೆ ಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು. "ಸ್ವಾತಂತ್ರ್ಯದ ಹಲವು ವರ್ಷಗಳ ನಂತರ, ಪ್ರಜಾಪ್ರಭುತ್ವದ ನಿಜವಾದ ಪ್ರಯೋಜನವು ನಿಜವಾದ ಅರ್ಥದಲ್ಲಿ ಸರಿಯಾದ ಜನರನ್ನು ತಲುಪಿದೆ," ಎಂದು ಪ್ರಧಾನಿ ಹೇಳಿದರು.

ಪ್ರತಿಯೊಂದು ಯೋಜನೆಯ ಪ್ರಯೋಜನಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸರ್ಕಾರ ಶ್ರಮಿಸುತ್ತಿರುವುದರಿಂದ, ಫಲಾನುಭವಿ ವರ್ಗವು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ನಿಜವಾದ ರೂಪಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ವಿಧಾನವು ಕಮಿಷನ್ ಹುಡುಕುವವರು, ದಲ್ಲಾಳಿಗಳು ಮತ್ತು ಹಗರಣಕೋರರನ್ನು ನಿರ್ಮೂಲನೆ ಮಾಡಲು ದಾರಿ ಮಾಡಿದೆ. ಆ ಮೂಲಕ ಭ್ರಷ್ಟಾಚಾರ ಮತ್ತು ತಾರತಮ್ಯವನ್ನು ತೊಡೆದುಹಾಕಲಾಗಿದೆ ಎಂದು ಪ್ರಧಾನಿ ಹೇಳಿದರು.

ಕಳೆದ 9 ವರ್ಷಗಳಲ್ಲಿ ಸರ್ಕಾರವು ಕೇವಲ ಒಂದು ಕುಟುಂಬ ಮತ್ತು ಒಂದು ತಲೆಮಾರಿಗಾಗಿ ಕೆಲಸ ಮಾಡದೆ, ಭವಿಷ್ಯದ ಪೀಳಿಗೆಯ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದರು. ʻಪಿಎಂಎವೈʼನ ಉದಾಹರಣೆ ನೀಡಿದ ಅವರು, 4 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಹಸ್ತಾಂತರಿಸಲಾಗಿದೆ ಮತ್ತು ಇಂದು ಉತ್ತರ ಪ್ರದೇಶದಲ್ಲಿ 4 ಲಕ್ಷ ಶಾಶ್ವತ ಮನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಉಲ್ಲೇಖಿಸಿದರು. "ಈ ಮನೆಗಳು ಭದ್ರತೆಯ ಭಾವನೆಯನ್ನು ಮೂಡಿಸುತ್ತವೆ ಮತ್ತು ಮಾಲೀಕರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿನ ಮನೆಗಳ ಮಾಲೀಕರು ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಆಸ್ತಿಯನ್ನು ಹೊಂದಿದ ಮಹಿಳೆಯರೇ ಆಗಿರುವುದು ವಿಶೇಷ ಎಂದು ಒತ್ತಿ ಹೇಳಿದರು. ಈ ಶಾಶ್ವತ ಮನೆಗಳು ಅಂತಹ ಮಹಿಳೆಯರಿಗೆ ಆರ್ಥಿಕ ಭದ್ರತೆಯ ಸಾಧನವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಸರ್ಕಾರದ ಯೋಜನೆಗಳ ಪ್ರಭಾವದ ಬಗ್ಗೆ ಮಾತು ಮುಂದುವರಿಸಿದ ಪ್ರಧಾನಮಂತ್ರಿಯವರು, ʻಆಯುಷ್ಮಾನ್ ಭಾರತ್ʼ ಯೋಜನೆ ಕೇವಲ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆಗೆ ಸೀಮಿತವಾಗಿಲ್ಲ, ಇದು ಅನೇಕ ತಲೆಮಾರುಗಳ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ವೈದ್ಯಕೀಯ ವೆಚ್ಚಗಳು ತಲೆಮಾರುಗಳನ್ನು ಬಡತನ ಮತ್ತು ಸಾಲಕ್ಕೆ ತಳ್ಳುತ್ತವೆ ಎಂದು ಗಮನಸೆಳೆದರು. "ಆಯುಷ್ಮಾನ್ ಯೋಜನೆಯು ಬಡ ಜನರನ್ನು ಈ ವಿಧಿಯಿಂದ ರಕ್ಷಿಸುತ್ತಿದೆ. ಅದಕ್ಕಾಗಿಯೇ, ಸಮರೋಪಾದಿಯಲ್ಲಿ ಪ್ರತಿಯೊಬ್ಬ ಬಡವರಿಗೆ ಕಾರ್ಡ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾನು ತುಂಬಾ ಶ್ರಮಿಸುತ್ತಿದ್ದೇನೆ ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮವು ಒಂದು ಕೋಟಿ ಅರವತ್ತು ಲಕ್ಷ ಜನರಿಗೆ ʻಆಯುಷ್ಮಾನ್ ಭಾರತ್ʼ ಕಾರ್ಡ್‌ಗಳ ವಿತರಣೆಯ ಪ್ರಾರಂಭಕ್ಕೆ ಸಾಕ್ಷಿಯಾಯಿತು.

 

50 ಕೋಟಿ ʻಜನ್ ಧನ್ʼ ಖಾತೆಗಳು ಮತ್ತು ಮುದ್ರಾ ಯೋಜನೆಯಡಿ ಅಡಮಾನರಹಿತ ಸಾಲಗಳಂತಹ ಆರ್ಥಿಕ ಸೇರ್ಪಡೆಯ ಕ್ರಮಗಳ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು. "ರಾಷ್ಟ್ರದ ಸಂಪನ್ಮೂಲಗಳ ಮೇಲೆ ಬಡವರು ಮತ್ತು ಅವಕಾಶ ವಂಚಿತರು ಅತಿದೊಡ್ಡ ಹಕ್ಕು ಹೊಂದಿದ್ದಾರೆ," ಎಂದು ಹೇಳಿದರು. ಇದರಿಂದ ಬಡವರು, ದಲಿತರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗಿದೆ ಎಂದರು.

ʻಪ್ರಧಾನ ಮಂತ್ರಿ ಸ್ವನಿಧಿʼಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬೀದಿ ಬದಿ ವ್ಯಾಪಾರಿಗಳಲ್ಲಿ ಹೆಚ್ಚಿನವರು ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದರೂ, ಹಿಂದಿನ ಸರ್ಕಾರಗಳು ಅವರ ಸಮಸ್ಯೆಗಳನ್ನು ಎಂದಿಗೂ ಪರಿಹರಿಸಲಿಲ್ಲ. ಬದಲಿಗೆ, ಅವರಿಗೆ ಕಿರುಕುಳ ನೀಡಿವೆ ಎಂದರು. ʻಪಿಎಂ ಸ್ವನಿಧಿʼ ಯೋಜನೆಯಿಂದ ಈವರೆಗೆ 35 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಇಂದು ವಾರಾಣಸಿಯಲ್ಲಿ 1.25 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಬಡವರಿಗೆ ಆತ್ಮಗೌರವವೇ ಮೋದಿಯ ಗ್ಯಾರಂಟಿ" ಎಂದು ಪ್ರಧಾನಿ ಉದ್ಗರಿಸಿದರು.

ಹಿಂದಿನ ಆಡಳಿತಗಳ ಮೂಲದಲ್ಲೇ ಅಪ್ರಾಮಾಣಿಕತೆ ಇತ್ತು. ಇದು ನಿರಂತರ ಹಣದ ಕೊರತೆಗೆ ಕಾರಣವಾಗಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದು, "ಅದು ಗರೀಬ್ ಕಲ್ಯಾಣ್ ಆಗಿರಲಿ ಅಥವಾ ಮೂಲಸೌಕರ್ಯವಾಗಿರಲಿ, ಅನುದಾನಕ್ಕೆ ಕೊರತೆಯಿಲ್ಲ. ಅದೇ ತೆರಿಗೆ ಪಾವತಿದಾರ, ಅದೇ ವ್ಯವಸ್ಥೆ, ಸರ್ಕಾರ ಮಾತ್ರ ಬದಲಾಗಿದೆ. ಉದ್ದೇಶಗಳು ಬದಲಾದಂತೆ, ಫಲಿತಾಂಶಗಳು ಸಹ ಬದಲಾದವು," ಎಂದು ಅವರು ವಿಶ್ಲೇಷಿಸಿದರು. ಹಗರಣಗಳು ಮತ್ತು ಹಿಂದಿನ ಕಾಳಸಂತೆಗಳ ಸುದ್ದಿಗಳ ಜಾಗದಲ್ಲಿ ಇಂದು ಹೊಸ ಯೋಜನೆಗಳ ಸಮರ್ಪಣೆ ಮತ್ತು ಶಂಕುಸ್ಥಾಪನೆಯ ಸುದ್ದಿಗಳನ್ನು ಕಾಣಬಹುದು ಎಂದ ಪ್ರಧಾನಿಯವರು, ಸರಕು ರೈಲುಗಳಿಗೆ ವಿಶೇಷ ಟ್ರ್ಯಾಕ್ ನಿರ್ಮಿಸುವ ಯೋಜನೆಯಾದ ʻಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ʼ ಅನ್ನು ಈ ಬದಲಾವಣೆಗೆ ಉದಾಹರಣೆಯಾಗಿ ನೀಡಿದರು. 2006ರಲ್ಲಿ ರೂಪಿಸಲಾದ ಈ ಯೋಜನೆಯು 2014ರವರೆಗೆ ಒಂದೇ ಒಂದು ಕಿಲೋಮೀಟರ್ ಉದ್ದದ ಟ್ರ್ಯಾಕ್ ಅನ್ನು ಸಹ ನೋಡಲಿಲ್ಲ. ಆದರೆ, ಕಳೆದ 9 ವರ್ಷಗಳಲ್ಲಿ, ಯೋಜನೆಯ ಗಮನಾರ್ಹ ಭಾಗವು ಪೂರ್ಣಗೊಂಡಿದೆ ಮತ್ತು ಆ ಪ್ರದೇಶದಲ್ಲಿ ಸರಕು ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.  "ಇಂದೂ ಸಹ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಸೋನ್‌ನಗರ್ವರೆಗಿನ ಹೊಸ ವಿಭಾಗವನ್ನು ಉದ್ಘಾಟಿಸಲಾಗಿದೆ. ಇದು ಸರಕು ರೈಲುಗಳ ವೇಗವನ್ನು ಹೆಚ್ಚಿಸುವುದಲ್ಲದೆ, ಪೂರ್ವಾಂಚಲ ಮತ್ತು ಪೂರ್ವ ಭಾರತದಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ," ಎಂದು ಅವರು ಹೇಳಿದರು.

ವೇಗದ ರೈಲುಗಳಿಗಾಗಿ ದೇಶದ ಬಯಕೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ʻರಾಜಧಾನಿ ಎಕ್ಸ್‌ಪ್ರೆಸ್ʼ ರೈಲು ಸುಮಾರು 50 ವರ್ಷಗಳ ಹಿಂದೆ ಆರಂಭಗೊಂಡಿದ್ದರೂ, ಇಂದು ಅದು ಕೇವಲ 16 ಮಾರ್ಗಗಳಲ್ಲಿ ಮಾತ್ರ ಚಲಿಸಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. 30-35 ವರ್ಷಗಳ ಹಿಂದೆ ಪ್ರಾರಂಭವಾದ ʻಶತಾಬ್ದಿ ಎಕ್ಸ್‌ಪ್ರೆಸ್ʼ ಪ್ರಸ್ತುತ 19 ಮಾರ್ಗಗಳಲ್ಲಿ ಮಾತ್ರ ಚಲಿಸುತ್ತಿದೆ ಎಂದು ಅವರು ಉದಾಹರಣೆ ನೀಡಿದರು. ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 4 ವರ್ಷಗಳ ಅಲ್ಪಾವಧಿಯಲ್ಲಿ ಈ ರೈಲು 25 ಮಾರ್ಗಗಳಲ್ಲಿ ಸಂಚರಿಸುತ್ತಿದೆ ಎಂದರು. "ದೇಶದ ಮೊದಲ ʻವಂದೇ ಭಾರತ್ʼ ಪಡೆದ ಹೆಗ್ಗಳಿಕೆಯನ್ನು ಬನಾರಸ್ ಹೊಂದಿದೆ,ʼʼ  ಎಂದು ಪ್ರಧಾನಿ ಹೇಳಿದರು. ಗೋರಖ್‌ಪುರ-ಲಖನೌ ಮತ್ತು ಜೋಧಪುರ-ಅಹ್ಮದಾಬಾದ್ ಮಾರ್ಗಗಳಲ್ಲಿ ಎರಡು ಹೊಸ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಇಂದು ಗೋರಖ್‌ಪುರದಿಂದ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. "ಈ ವಂದೇ ಭಾರತ್ ರೈಲು ದೇಶದ ಮಧ್ಯಮ ವರ್ಗದಲ್ಲಿ ಸೂಪರ್ ಹಿಟ್ ಆಗಿದೆ ಮತ್ತು ಈ ರೈಲಿಗಾಗಿ ಬೇಡಿಕೆ ಹೆಚ್ಚುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ʻವಂದೇ ಭಾರತ್ʼ, ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವ ದಿನ ದೂರವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಕಳೆದ 9 ವರ್ಷಗಳಲ್ಲಿ ಕಾಶಿಯ ಸಂಪರ್ಕವನ್ನು ಸುಧಾರಿಸಲು ಕೈಗೊಂಡ ಅಭೂತಪೂರ್ವ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಇದು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಒತ್ತಿ ಹೇಳಿದರು. 7 ಕೋಟಿ ಪ್ರವಾಸಿಗರು ಮತ್ತು ಭಕ್ತರು ಕಾಶಿಗೆ ಆಗಮಿಸಿದ್ದು, ಇದು ಒಂದು ವರ್ಷದಲ್ಲಿ 12 ಪಟ್ಟು ಹೆಚ್ಚಾಗಿದೆ, ಇದರಿಂದಾಗಿ ರಿಕ್ಷಾ ಎಳೆಯುವವರು, ಅಂಗಡಿಯವರು, ಡಾಬಾಗಳು ಮತ್ತು ಹೋಟೆಲ್‌ಗಳು ಹಾಗೂ ಬನಾರಸ್ ಸೀರೆ ಉದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ಆದಾಯಕ್ಕೆ ಉತ್ತಮ ಅವಕಾಶಗಳನ್ನು ಸೃಷ್ಟಿಯಾಗಿವೆ ಎಂದು ಅವರು ಗಮನ ಸೆಳೆದರು. ಜೊತೆಗೆ, ಅಂಬಿಗರು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದ ಅವರು, ಸಂಜೆ ಗಂಗಾ ಆರತಿಯ ಸಮಯದಲ್ಲಿ ದೋಣಿಗಳ ಸಂಖ್ಯೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. "ನೀವು ಬನಾರಸ್ ಅನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ," ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು

ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ಇಂದಿನ ಯೋಜನೆಗಾಗಿ ಎಲ್ಲರನ್ನೂ ಅಭಿನಂದಿಸಿದರು. ಬಾಬಾ ಅವರ ಆಶೀರ್ವಾದದೊಂದಿಗೆ ವಾರಣಾಸಿಯ ಅಭಿವೃದ್ಧಿಯ ಪಯಣ ಮುಂದುವರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಶ್ರೀ ಕೇಶವ್ ಪ್ರಸಾದ್ ಮೌರ್ಯ ಮತ್ತು ಶ್ರೀ ಬ್ರಜೇಶ್ ಪಾಠಕ್, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಶ್ರೀ ಮಹೇಂದ್ರ ನಾಥ್ ಪಾಂಡೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವ, ಪ್ರೊ. ಎಸ್‌.ಪಿ. ಸಿಂಗ್‌ ಬಘೇಲ್‌, ಉತ್ತರ ಪ್ರದೇಶ ಸರಕಾರದ ಹಲವು ಸಚಿವರುಗಳು ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ - ಸೋನ್ ನಗರ ರೈಲ್ವೆ ಮಾರ್ಗದ ʻವಿಶೇಷ ಸರಕು ಸಾಗಣೆ ಕಾರಿಡಾರ್‌ʼ ಅನ್ನು ದೇಶಕ್ಕೆ ಸಮರ್ಪಿಸಿದರು. 6760 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಹೊಸ ಮಾರ್ಗವು ಸರಕುಗಳ ತ್ವರಿತ ಮತ್ತು ಹೆಚ್ಚು ಪರಿಣಾಮಕಾರಿ ಸಾಗಣೆಗೆ ಅನುವು ಮಾಡಿಕೊಡುತ್ತದೆ. 990 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿದ್ಯುದ್ದೀಕರಣ ಅಥವಾ ಡಬ್ಲಿಂಗ್ ಪೂರ್ಣಗೊಂಡಿರುವ ಮೂರು ರೈಲ್ವೆ ಮಾರ್ಗಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇವುಗಳಲ್ಲಿ ಘಾಜಿಪುರ ನಗರ - ಅನ್ರಿಹಾರ್ ರೈಲು ಮಾರ್ಗ, ಅನ್ರಿಹಾರ್-ಜೌನ್‌ಪುರ್ ರೈಲು ಮಾರ್ಗ ಮತ್ತು ಭಟ್ನಿ-ಅನ್ರಿಹಾರ್ ರೈಲು ಮಾರ್ಗ ಸೇರಿವೆ. ಈ ಯೋಜನೆಗಳು ಉತ್ತರ ಪ್ರದೇಶದ ರೈಲ್ವೆ ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಲು ಸಹಾಯ ಮಾಡಿವೆ.

ವಾರಾಣಸಿಯಿಂದ ಲಖನೌಗೆ ಪ್ರಯಾಣವನ್ನು ಸುಲಭ ಮತ್ತು ವೇಗವಾಗಿ ಮಾಡಲು 2750 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ 56ರ ವಾರಣಾಸಿ-ಜೌನಪುರ ವಿಭಾಗದ ಚತುಷ್ಪಥ ಅಗಲೀಕರಣವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.

ವಾರಣಾಸಿಯಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸಿದ ಹಲವು ಯೋಜನೆಗಳಲ್ಲಿ 18 ಪಿಡಬ್ಲ್ಯುಡಿ ರಸ್ತೆಗಳ ನಿರ್ಮಾಣ ಮತ್ತು ನವೀಕರಣ, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ನಿರ್ಮಿಸಲಾದ ಅಂತರರಾಷ್ಟ್ರೀಯ ಬಾಲಕಿಯರ ಹಾಸ್ಟೆಲ್ ಕಟ್ಟಡ; ಕರ್ಸಾರಾ ಗ್ರಾಮದಲ್ಲಿ ʻಸೆಂಟ್ರಲ್ ಇನ್ಸ್‌ಟಿಟ್ಯೂಟ್‌ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಆಂಡ್‌ ಟೆಕ್ನಾಲಜಿʼಯ(ಸಿಪೆಟ್) - ವೃತ್ತಿಪರ ತರಬೇತಿ ಕೇಂದ್ರ; ಸಿಂಧೌರಾ ಪೊಲೀಸ್‌ ಠಾಣೆಯಲ್ಲಿ ವಸತಿ ಕಟ್ಟಡ ಮತ್ತು ಸೌಕರ್ಯಗಳು; ಭುಲ್ಲನಪುರ ʻಪಿಎಸಿʼ, ಪಿಂದ್ರಾದಲ್ಲಿ ಅಗ್ನಿಶಾಮಕ ಠಾಣೆ ಮತ್ತು ತರ್ಸಾಡಾದಲ್ಲಿ ಸರ್ಕಾರಿ ವಸತಿ ಶಾಲೆ; ಆರ್ಥಿಕ ಅಪರಾಧಗಳ ಸಂಶೋಧನಾ ಸಂಸ್ಥೆ ಕಟ್ಟಡ; ಮೋಹನ್ ಕತ್ರಾದಿಂದ ಕೊನಿಯಾ ಘಾಟ್‌ವರೆಗೆ ಒಳಚರಂಡಿ ಮಾರ್ಗ ಮತ್ತು ರಾಮನಾ ಗ್ರಾಮದಲ್ಲಿ ಆಧುನಿಕ ಸೆಪ್ಟೇಜ್ ನಿರ್ವಹಣಾ ವ್ಯವಸ್ಥೆ; 30 ಡಬಲ್ ಸೈಡೆಡ್ ಬ್ಯಾಕ್ಲಿಟ್ ಎಲ್ಇಡಿ ಯುನಿಪೋಲ್‌ಗಳು; ರಾಮನಗರದ ಎನ್‌ಡಿಡಿಬಿ ಹಾಲಿನ ಘಟಕದಲ್ಲಿ ಹಸುವಿನ ಸಗಣಿ ಆಧಾರಿತ ಜೈವಿಕ ಅನಿಲ ಸ್ಥಾವರ; ಮತ್ತು ಗಂಗಾ ನದಿಯಲ್ಲಿ ಭಕ್ತರ ಸ್ನಾನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ದಶಾಶ್ವಮೇಧ ಘಾಟ್‌ನಲ್ಲಿ ಒಂದು ವಿಶಿಷ್ಟವಾದ ತೇಲುವ ಬಟ್ಟೆ ಬದಲಾಯಿಸುವ ಕೋಣೆಗಳ ಜೆಟ್ಟಿ ಸೇರಿವೆ.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಲ್ಲಿ ಚೌಖಂಡಿ, ಕಡಿಪುರ ಮತ್ತು ಹರ್ದತ್ಪುರ ರೈಲ್ವೆ ನಿಲ್ದಾಣಗಳ ಬಳಿ 3 ದ್ವಿಪಥ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ; ವ್ಯಾಸನಗರ - ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ರೈಲ್ವೆ ಮೇಲ್ಸೇತುವೆ ನಿರ್ಮಾಣ; ಮತ್ತು 15 ಪಿಡಬ್ಲ್ಯೂಡಿ ರಸ್ತೆಗಳ ನಿರ್ಮಾಣ ಮತ್ತು ನವೀಕರಣ ಸೇರಿವೆ. ಈ ಯೋಜನೆಗಳನ್ನು ಸುಮಾರು 780 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ʻಜಲ ಜೀವನ್ ಮಿಷನ್ʼಅಡಿಯಲ್ಲಿ 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವ 192 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು 192 ಹಳ್ಳಿಗಳ 7 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಟ್ಟಗಳ ಮರುವಿನ್ಯಾಸ ಮತ್ತು ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪುನರಾಭಿವೃದ್ಧಿ ಘಟ್ಟಗಳು ಸಾರ್ವಜನಿಕ ಅನುಕೂಲತೆಗಳು, ಕಾಯುವಿಕೆ ಪ್ರದೇಶಗಳು, ಮರದ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸ್ನೇಹಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸುತ್ತವೆ.

ದಶಾಶ್ವಮೇಧ ಘಾಟ್‌ನ ತೇಲುವ ಬಟ್ಟೆ ಬದಲಾಯಿಸುವ ಕೋಣೆಯ ಜೆಟ್ಟಿಗಳ ಮಾದರಿಯಲ್ಲಿ ವಾರಣಾಸಿಯ ಗಂಗಾ ನದಿಯ ಆರು ಧಾರ್ಮಿಕ ಮಹತ್ವದ ಸ್ನಾನ ಘಟ್ಟಗಳಲ್ಲಿ ತೇಲುವ ಬಟ್ಟೆ ಬದಲಾಯಿಸುವ ಕೋಣೆ ಜೆಟ್ಟಿಗಳು ಮತ್ತು ಕರ್ಸಾರಾದ ʻಸಿಪೆಟ್ʼ ಕ್ಯಾಂಪಸ್ ಕರ್ಸಾರಾದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಉತ್ತರ ಪ್ರದೇಶದ ಫಲಾನುಭವಿಗಳಿಗೆ ʻಪಿಎಂ ಸ್ವನಿಧಿʼಯಡಿ ಸಾಲ, ʻಪಿಎಂಎವೈ ಗ್ರಾಮೀಣ-ಯೋಜನೆʼಯಡಿ ನಿರ್ಮಿಸಲಾದ ಮನೆಗಳ ಕೀಲಿಗಳು ಮತ್ತು ʻಆಯುಷ್ಮಾನ್ ಭಾರತ್ʼ ಕಾರ್ಡ್ ಗಳನ್ನು ವಿತರಿಸಿದರು. ಇದರೊಂದಿಗೆ 5 ಲಕ್ಷ ʻಪಿಎಂಎವೈʼ ಫಲಾನುಭವಿಗಳ ಗೃಹ ಪ್ರವೇಶ, ಅರ್ಹ ಫಲಾನುಭವಿಗಳಿಗೆ 1.25 ಲಕ್ಷ ʻಪಿಎಂ ಸ್ವನಿಧಿʼ ಸಾಲಗಳ ವಿತರಣೆ ಮತ್ತು 2.88 ಕೋಟಿ ʻಆಯುಷ್ಮಾನ್ ಕಾರ್ಡ್ʼಗಳ ವಿತರಣೆಗೆ ಚಾಲನೆ ದೊರೆಯಿತು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-New Zealand elevate ties to strategic partnership; Scripts 2030 roadmap, $20bn investment & Indo-Pacific security

Media Coverage

India-New Zealand elevate ties to strategic partnership; Scripts 2030 roadmap, $20bn investment & Indo-Pacific security
NM on the go

Nm on the go

Always be the first to hear from the PM. Get the App Now!
...
Prime Minister condoles the passing of Father Amir of State of Qatar HH Sheikh Hamad bin Khalifa Al Thani
July 12, 2026

The Prime Minister, Shri Narendra Modi, has expressed deep grief over the passing of the Father Amir of the State of Qatar, HH Sheikh Hamad bin Khalifa Al Thani.

The Prime Minister described him as a visionary leader who led Qatar to great levels of development and prosperity. Shri Modi also remembered him as a true friend whom he had the honour of meeting during his visit to Qatar in February 2024.

The Prime Minister conveyed his sincere condolences to the Amir of Qatar, HH Sheikh Tamim bin Hamad Al Thani, the entire royal family and the people of Qatar.

The Prime Minister wrote on X;

“We deeply mourn the passing of Father Amir of State of Qatar, HH Sheikh Hamad bin Khalifa Al Thani. A visionary leader who led Qatar to great levels of development and prosperity, we remember him also as a true friend whom I had the honour of meeting during my last visit to Qatar in February 2024. I convey my sincere condolences to the Amir of Qatar, HH Sheikh Tamim bin Hamad Al Thani and the entire royal family and people of Qatar. May the departed soul rest in eternal peace.

@TamimBinHamad”