ಪೈಪ್‌ಲೈನ್ ಯೋಜನೆ, ಕರ್ನಾಟಕ ಮತ್ತು ಕೇರಳದ ಜನ ಜೀವನ ಸುಗಮ
ನೀಲಿ ಆರ್ಥಿಕತೆ ಆತ್ಮನಿರ್ಭರ ಭಾರತದ ಪ್ರಮುಖ ಮೂಲವಾಗಲಿದೆ: ಪ್ರಧಾನಿ ನರೇಂದ್ರ ಮೋದಿ

ಕರ್ನಾಟಕದ ಮಂಗಳೂರು ಹಾಗೂ ಕೇರಳದ ಕೊಚ್ಚಿ ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಕಾರ್ಯಕ್ರಮವು ‘ಒಂದು ರಾಷ್ಟ್ರ ಒಂದು ಅನಿಲ ಜಾಲ’ ರಚನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು, ಕರ್ನಾಟಕ ಮತ್ತು ಕೇರಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ನೈಸರ್ಗಿಕ ಅನಿಲ ಪೈಪ್‌ಲೈನ್ ಮೂಲಕ ಸಂಪರ್ಕ ಹೊಂದಿರುವ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ಜನರಿಗೆ ಇಂದು ಮಹತ್ವದ ಮೈಲಿಗಲ್ಲು. ಈ ಎರಡು ರಾಜ್ಯಗಳ ಆರ್ಥಿಕ ಬೆಳವಣಿಗೆಯ ಮೇಲೆ ಪೈಪ್‌ಲೈನ್ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸಲು ಅನಿಲ ಆಧಾರಿತ ಆರ್ಥಿಕತೆಯ ವಿಸ್ತರಣೆ ಅತ್ಯಗತ್ಯ. ಅದಕ್ಕಾಗಿಯೇ ‘ಒಂದು ರಾಷ್ಟ್ರ ಒಂದು ಅನಿಲ ಜಾಲ’ ರಚನೆಗೆ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಪೈಪ್‌ಲೈನ್ ಎರಡೂ ರಾಜ್ಯಗಳ ಜನರ ಜೀವನವನ್ನು ಸುಗಮಗೊಳಿಸುತ್ತದೆ ಮತ್ತು ಎರಡೂ ರಾಜ್ಯಗಳ ಬಡ, ಮಧ್ಯಮ ವರ್ಗ ಮತ್ತು ಉದ್ಯಮಿಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಪೈಪ್‌ಲೈನ್ ​​ಅನೇಕ ನಗರಗಳಲ್ಲಿ ಅನಿಲ ವಿತರಣಾ ವ್ಯವಸ್ಥೆಯ ಮೂಲವಾಗಲಿದೆ ಮತ್ತು ಈ ನಗರಗಳಲ್ಲಿ ಸಿಎನ್ಜಿ ಆಧಾರಿತ ಸಾರಿಗೆ ವ್ಯವಸ್ಥೆಗೆ ಆಧಾರವಾಗಲಿದೆ ಎಂದು ಅವರು ಹೇಳಿದರು. ಪೈಪ್‌ಲೈನ್ ​​ಮಂಗಳೂರು ಸಂಸ್ಕರಣಾಗಾರಕ್ಕೆ ಶುದ್ಧ ಇಂಧನವನ್ನು ಒದಗಿಸುತ್ತದೆ ಮತ್ತು ಎರಡೂ ರಾಜ್ಯಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಮಾಲಿನ್ಯವನ್ನು ಕಡಿಮೆ ಮಾಡುವುದರಿಂದ ಪರಿಸರದ ಮೇಲೆ ಲಕ್ಷಾಂತರ ಮರಗಳನ್ನು ನೆಡುವುದಕ್ಕೆ ಸಮನಾದ ನೇರ ಪರಿಣಾಮ ಬೀರುತ್ತದೆ, ಇದು ಜನರ ಆರೋಗ್ಯವನ್ನು ಸುಧಾರಿಸಲು ಮತ್ತು ಅವರ ಆರೋಗ್ಯ ಸಂಬಂಧಿತ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಕಡಿಮೆ ಮಾಲಿನ್ಯ ಮತ್ತು ಶುದ್ಧ ಗಾಳಿಯು ನಗರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದರು.

ಈ ಪೈಪ್‌ಲೈನ್ ನಿರ್ಮಾಣವು 1.2 ದಶಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಿದೆ ಮತ್ತು ಇದು ಕಾರ್ಯಾರಂಭ ಮಾಡಿದ ನಂತರ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಹೊಸ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ, ಇದು ರಸಗೊಬ್ಬರ, ಪೆಟ್ರೋಕೆಮಿಕಲ್ ಮತ್ತು ವಿದ್ಯುತ್ ಕ್ಷೇತ್ರಕ್ಕೆ ಸಹಾಯ ಮಾಡುತ್ತದೆ. ದೇಶವು ಸಾವಿರಾರು ಕೋಟಿ ವಿದೇಶಿ ವಿನಿಮಯವನ್ನು ಉಳಿಸುವಲ್ಲಿ ಇದು ನೆರವಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

21 ನೇ ಶತಮಾನದಲ್ಲಿ, ಸಂಪರ್ಕ ಮತ್ತು ಶುದ್ಧ ಶಕ್ತಿಗೆ ಹೆಚ್ಚು ಒತ್ತು ನೀಡುವ ದೇಶವು ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ತಲುಪುತ್ತದೆ ಎಂದು ವಿಶ್ವದಾದ್ಯಂತದ ತಜ್ಞರ ಅಭಿಪ್ರಾಯವಾಗಿದೆ ಎಂದು ಪ್ರಧಾನಿ ತಿಳಿಸಿದರು. ಈಗ ದೇಶದಲ್ಲಿ ನಡೆಯುತ್ತಿರುವ ಸಂಪರ್ಕ ಕಾಮಗಾರಿಗಳ ವೇಗವು ಹಿಂದಿನ ದಶಕಗಳಲ್ಲಿ ಎಂದೂ ಕಾಣಿಸಿರಲಿಲ್ಲ ಎಂದು ಅವರು ಒತ್ತಿ ಹೇಳಿದರು. 2014 ರ ಹಿಂದಿನ 27 ವರ್ಷಗಳಲ್ಲಿ ಕೇವಲ 15 ಸಾವಿರ ಕಿಲೋಮೀಟರ್ ನೈಸರ್ಗಿಕ ಅನಿಲ ಪೈಪ್‌ಲೈನ್ ನಿರ್ಮಿಸಲಾಗಿದೆ. ಆದರೆ ದೇಶಾದ್ಯಂತ ಈಗ 16 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ಅನಿಲ ಪೈಪ್‌ಲೈನ್‌ ಕೆಲಸ ನಡೆಯುತ್ತಿದೆ, ಇದು ಮುಂದಿನ 5-6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.. ಈ ಸರ್ಕಾರವು ವಿತರಿಸಿದ ಸಿಎನ್‌ಜಿ ಇಂಧನ ಕೇಂದ್ರಗಳು, ಪಿಎನ್‌ಜಿ ಸಂಪರ್ಕಗಳು ಮತ್ತು ಎಲ್‌ಪಿಜಿ ಸಂಪರ್ಕಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಈ ಸಂಪರ್ಕಗಳು ಸೀಮೆಎಣ್ಣೆ ಬಳಕೆಯನ್ನು ಕಡಿಮೆ ಮಾಡಿವೆ ಮತ್ತು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮನ್ನು ಸೀಮೆಎಣ್ಣೆ ಮುಕ್ತವೆಂದು ಘೋಷಿಸಿಕೊಂಡಿವೆ ಎಂದು ಅವರು ಹೇಳಿದರು.

ಪರಿಶೋಧನೆ ಮತ್ತು ಉತ್ಪಾದನೆ, ನೈಸರ್ಗಿಕ ಅನಿಲ, ಮಾರುಕಟ್ಟೆ ಮತ್ತು ವಿತರಣೆ ಒಳಗೊಂಡಂತೆ 2014 ರಿಂದ ಸರ್ಕಾರ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ವಿವಿಧ ಸುಧಾರಣೆಗಳನ್ನು ತಂದಿದೆ ಎಂದು ಪ್ರಧಾನಿ ಹೇಳಿದರು. ಅನಿಲವು ಹಲವಾರು ಪರಿಸರ ಪ್ರಯೋಜನಗಳನ್ನು ಹೊಂದಿರುವುದರಿಂದ 'ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್' ಸಾಧಿಸಲು ಮತ್ತು ಅನಿಲ ಆಧಾರಿತ ಆರ್ಥಿಕತೆಗೆ ಬದಲಾಗಲು ಸರ್ಕಾರ ಯೋಜಿಸಿದೆ ಎಂದು ಅವರು ಘೋಷಿಸಿದರು. ಭಾರತದ ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಶೇಕಡಾ 6 ರಿಂದ 15 ಕ್ಕೆ ಹೆಚ್ಚಿಸಲು ಸರ್ಕಾರ ನೀತಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಗೇಲ್‌ನ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಸಮರ್ಪಣೆ ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್ ಕಡೆಗೆ ಸಾಗುವ ನಮ್ಮ ಪ್ರಯಾಣದ ಒಂದು ಭಾಗವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಶುದ್ಧ ಶಕ್ತಿಯು ಮುಖ್ಯವಾಗಿದೆ. ಈ ಪೈಪ್‌ಲೈನ್ ಶುದ್ಧ ಇಂಧನ ಲಭ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

 

ದೇಶದ ಭವಿಷ್ಯದ ಇಂಧನ ಅಗತ್ಯಗಳಿಗೆ ತಯಾರಾಗಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಈ ಗುರಿಯನ್ನು ಸಾಧಿಸಲು, ಒಂದೆಡೆ ನೈಸರ್ಗಿಕ ಅನಿಲದ ಬಗ್ಗೆ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ, ಮತ್ತೊಂದೆಡೆ ಇಂಧನ ಸಂಪನ್ಮೂಲಗಳನ್ನು ವೈವಿಧ್ಯಗೊಳಿಸಲಾಗುತ್ತಿದೆ ಎಂದರು. ಗುಜರಾತ್‌ನಲ್ಲಿನ ಉದ್ದೇಶಿತ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸ್ಥಾವರ ಮತ್ತು ಜೈವಿಕ ಇಂಧನಗಳ ಮೇಲೆ ಒತ್ತು ನೀಡುತ್ತಿರುವ ಉದಾಹರಣೆಗಳೊಂದಿಗೆ ಅವರು ಈ ಅಂಶವನ್ನು ವಿವರಿಸಿದರು. ಅಕ್ಕಿ ಮತ್ತು ಕಬ್ಬಿನಿಂದ ಎಥೆನಾಲ್ ಉತ್ಪಾದಿಸಲು ಪ್ರಾಮಾಣಿಕ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. 10 ವರ್ಷಗಳಲ್ಲಿ ಪೆಟ್ರೋಲ್‌ನಲ್ಲಿ ಶೇ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ನಿಗದಿಪಡಿಸಲಾಗಿದೆ. ಪ್ರತಿಯೊಬ್ಬ ನಾಗರಿಕನಿಗೆ ಕೈಗೆಟುಕುವ, ಮಾಲಿನ್ಯ ರಹಿತ ಇಂಧನ ಮತ್ತು ವಿದ್ಯುತ್ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.

ಎರಡು ಕರಾವಳಿ ರಾಜ್ಯಗಳ ಬಗ್ಗೆ ಮಾತನಾಡಿದ ಪ್ರಧಾನಿ, ತ್ವರಿತವಾದ ಮತ್ತು ಸಮತೋಲಿತವಾದ ಕರಾವಳಿ ಪ್ರದೇಶದ ಅಭಿವೃದ್ಧಿಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಕರಾವಳಿ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಸಮಗ್ರ ಯೋಜನೆ ಜಾರಿಯಲ್ಲಿದೆ ಎಂದು ಅವರು ಹೇಳಿದರು. ಆತ್ಮನಿರ್ಭರ ಭಾರತದ ಪ್ರಮುಖ ಮೂಲವೆಂದರೆ ನೀಲಿ ಆರ್ಥಿಕತೆ. ಮಲ್ಟಿ-ಮೋಡಲ್ ಸಂಪರ್ಕವನ್ನು ಕೇಂದ್ರೀಕರಿಸಿ ಬಂದರುಗಳು ಮತ್ತು ಕರಾವಳಿ ರಸ್ತೆಗಳನ್ನು ಸಂಪರ್ಕಿಸಲಾಗುತ್ತಿದೆ. ನಮ್ಮ ಕರಾವಳಿ ಪ್ರದೇಶವನ್ನು ಸುಲಭ ಜೀವನ ಮತ್ತು ಸುಲಭ ವ್ಯಾಪಾರದ ಮಾದರಿಯನ್ನಾಗಿಸುವ ಉದ್ದೇಶದಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

ಸಾಗರ ಸಂಪತ್ತಿನ ಮೇಲೆ ಅವಲಂಬಿತವಾಗಿರುವುದು ಮಾತ್ರವಲ್ಲದೆ, ಆ ಸಂಪತ್ತಿನ ಪಾಲಕರಾಗಿರುವ ಕರಾವಳಿ ಮೀನುಗಾರ ಸಮುದಾಯಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಇದಕ್ಕಾಗಿ ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸಮೃದ್ಧಗೊಳಿಸಲು ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಆಳ ಸಮುದ್ರದ ಮೀನುಗಾರಿಕೆಗೆ ಮೀನುಗಾರರಿಗೆ ಸಹಾಯ ಮಾಡುವುದು, ಪ್ರತ್ಯೇಕ ಮೀನುಗಾರಿಕೆ ಇಲಾಖೆ, ಮೀನುಗಾರರಿಗೆ ಕೈಗೆಟುಕುವ ಸಾಲವನ್ನು ಒದಗಿಸುವುದು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದು ಮುಂತಾದ ಕ್ರಮಗಳು ಉದ್ಯಮಿಗಳು ಮತ್ತು ಸಾಮಾನ್ಯ ಮೀನುಗಾರರಿಗೆ ಸಹಾಯ ಮಾಡುತ್ತಿವೆ ಎಂದರು.

ಕರ್ನಾಟಕ ಮತ್ತು ಕೇರಳದ ಲಕ್ಷಾಂತರ ಮೀನುಗಾರರಿಗೆ ನೇರವಾಗಿ ಅನುಕೂಲವಾಗಲಿರುವ ಇತ್ತೀಚೆಗೆ ಪ್ರಾರಂಭಿಸಲಾದ 20 ಸಾವಿರ ಕೋಟಿ ರೂ. ಮೌಲ್ಯದ ಮತ್ಸ್ಯ ಸಂಪದ ಯೋಜನೆ ಕುರಿತು ಪ್ರಧಾನಿ ಮಾತನಾಡಿದರು. ಮೀನುಗಾರಿಕೆ ಸಂಬಂಧಿತ ರಫ್ತುಗಳಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಭಾರತವನ್ನು ಗುಣಮಟ್ಟದ ಸಂಸ್ಕರಿಸಿದ ಸಮುದ್ರ-ಆಹಾರ ಕೇಂದ್ರವನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಡಲಕಳೆ ಕೃಷಿ ಮಾಡಲು ರೈತರನ್ನು ಪ್ರೋತ್ಸಾಹಿಸುತ್ತಿರುವುದರಿಂದ ಹೆಚ್ಚುತ್ತಿರುವ ಕಡಲಕಳೆಯ ಬೇಡಿಕೆಯನ್ನು ಈಡೇರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
January smartphone exports top full-year total of FY21, shows data

Media Coverage

January smartphone exports top full-year total of FY21, shows data
NM on the go

Nm on the go

Always be the first to hear from the PM. Get the App Now!
...
When it comes to wellness and mental peace, Sadhguru Jaggi Vasudev is always among the most inspiring personalities: PM
February 14, 2025

Remarking that Sadhguru Jaggi Vasudev is always among the most inspiring personalities when it comes to wellness and mental peace, the Prime Minister Shri Narendra Modi urged everyone to watch the 4th episode of Pariksha Pe Charcha tomorrow.

Responding to a post on X by MyGovIndia, Shri Modi said:

“When it comes to wellness and mental peace, @SadhguruJV is always among the most inspiring personalities. I urge all #ExamWarriors and even their parents and teachers to watch this ‘Pariksha Pe Charcha’ episode tomorrow, 15th February.”