ಭಾರತವು ತನ್ನ ಆಡಳಿತದಲ್ಲಿ ಪ್ರಜಾಸತ್ತಾತ್ಮಕ ಮನೋಭಾವವನ್ನು ಬಲಿಷ್ಠ ಆಧಾರಸ್ತಂಭವನ್ನಾಗಿ ಮಾಡಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ, ಭಾರತವು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ಸಾಧಿಸಿದೆ, ಇಂದಿನ ಭಾರತವು ವಿಶ್ವದ ಅತ್ಯಂತ ತಾಂತ್ರಿಕವಾಗಿ ಒಳಗೊಳ್ಳುವ ಸಮಾಜಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ
ನಾವು ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸಿದ್ದೇವೆ, ಅದನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಲಭ್ಯವಾಗುವಂತೆ ಮಾಡಿದ್ದೇವೆ: ಪ್ರಧಾನಮಂತ್ರಿ
ತಂತ್ರಜ್ಞಾನವು ಕೇವಲ ಅನುಕೂಲತೆಯ ಸಾಧನವಲ್ಲ, ಸಮಾನತೆಯನ್ನು ಖಚಿತಪಡಿಸುವ ಒಂದು ಮಾಧ್ಯಮವೂ ಹೌದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ: ಪ್ರಧಾನಮಂತ್ರಿ
ಇಂಡಿಯಾ ಸ್ಟಾಕ್ ವಿಶ್ವಕ್ಕೆ, ವಿಶೇಷವಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಒಂದು ಆಶಾಕಿರಣವಾಗಿದೆ: ಪ್ರಧಾನಮಂತ್ರಿ
ನಾವು ಇತರ ದೇಶಗಳೊಂದಿಗೆ ತಂತ್ರಜ್ಞಾನವನ್ನು ಹಂಚಿಕೊಳ್ಳುವುದು ಮಾತ್ರವಲ್ಲ, ಅದನ್ನು ಅಭಿವೃದ್ಧಿಪಡಿಸಲು ಸಹ ಅವರಿಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಇದು ಡಿಜಿಟಲ್ ನೆರವು ಅಲ್ಲ, ಇದು ಡಿಜಿಟಲ್ ಸಬಲೀಕರಣವಾಗಿದೆ: ಪ್ರಧಾನಮಂತ್ರಿ
ಭಾರತದ ಫಿನ್ ಟೆಕ್ ಸಮುದಾಯದ ಪ್ರಯತ್ನಗಳಿಂದಾಗಿ, ನಮ್ಮ ಸ್ವದೇಶಿ ಪರಿಹಾರಗಳು ಜಾಗತಿಕ ಮನ್ನಣೆಯನ್ನು ಗಳಿಸುತ್ತಿವೆ: ಪ್ರಧಾನಮಂತ್ರಿ
ಎ.ಐ. ಕ್ಷೇತ್ರದಲ್ಲಿ, ಭಾರತದ ವಿಧಾನವು ಮೂರು ಪ್ರಮುಖ ತತ್ವಗಳನ್ನು ಆಧರಿಸಿದೆ - ಸಮಾನ ಪ್ರವೇಶ, ಜನಸಂಖ್ಯಾ ಪ್ರಮಾಣದ ಕೌಶಲ್ಯ ಮತ್ತು ಜವಾಬ್ದಾರಿಯುತ ನಿಯೋಜನೆ: ಪ್ರಧಾನಮಂತ್ರಿ
ನೈತಿಕ ಎಐಗಾಗಿ ಜಾಗತಿಕ ಚೌಕಟ್ಟನ್ನು ಭಾರತ ಯಾವಾಗಲೂ ಬೆಂಬಲಿಸಿದೆ: ಪ್ರಧಾನಮಂತ್ರಿ
ನಮಗೆ, ಎ.ಐ. ಎಂದರೆ 'ಆಲ್ ಇನ್ಕ್ಲೂಸಿವ್': ಪ್ರಧಾನಮಂತ್ರಿ
ತಂತ್ರಜ್ಞಾನವು ಜನರು ಮತ್ತು ಭೂಮಿ ಎರಡನ್ನೂ ಸಮೃದ್ಧಗೊಳಿಸುವಂತಹ ಫಿನ್ ಟೆಕ್ ಜಗತ್ತನ್ನು ರಚಿಸುವ ಗುರಿ ನಮ್ಮದು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ 'ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2025' ಅನ್ನುದ್ದೇಶಿಸಿ ಮಾತನಾಡಿದರು. ಮುಂಬೈಗೆ ಆಗಮಿಸಿದ ಎಲ್ಲ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ ಶ್ರೀ ಮೋದಿ ಅವರು, ಮುಂಬೈಯನ್ನು 'ಶಕ್ತಿಯ ನಗರ, ಉದ್ಯಮಶೀಲತೆಯ ನಗರ, ಮತ್ತು ಅನಂತ ಸಾಧ್ಯತೆಗಳ ನಗರ' ಎಂದು ಬಣ್ಣಿಸಿದರು. ಅವರು ತಮ್ಮ ಸ್ನೇಹಿತ, ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಕೀರ್ ಸ್ಟಾರ್ಮರ್ ಅವರನ್ನು ವಿಶೇಷವಾಗಿ ಸ್ವಾಗತಿಸಿದರು ಮತ್ತು ಈ ಕಾರ್ಯಕ್ರಮಕ್ಕಾಗಿ ಸಮಯ ಮೀಸಲಿಟ್ಟು ಆಗಮಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಐದು ವರ್ಷಗಳ ಹಿಂದೆ 'ಗ್ಲೋಬಲ್ ಫಿನ್ ಟೆಕ್ ಫೆಸ್ಟಿವಲ್' ಪ್ರಾರಂಭವಾದಾಗ ಜಗತ್ತು ಜಾಗತಿಕ ಮಹಾಮಾರಿಯೊಂದಿಗೆ ಹೋರಾಡುತ್ತಿತ್ತು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಇಂದು ಈ ಉತ್ಸವವು ಹಣಕಾಸು ನಾವೀನ್ಯತೆ ಮತ್ತು ಸಹಕಾರಕ್ಕಾಗಿ ಒಂದು ಜಾಗತಿಕ ವೇದಿಕೆಯಾಗಿ ವಿಕಸನಗೊಂಡಿದೆ ಎಂದು ಹೇಳಿದರು. ಈ ವರ್ಷ ಯುನೈಟೆಡ್ ಕಿಂಗ್ಡಮ್ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು ಮತ್ತು ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಈ ಪಾಲುದಾರಿಕೆಯು ಜಾಗತಿಕ ಹಣಕಾಸು ಚಿತ್ರಣವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಒತ್ತಿ ಹೇಳಿದರು. ಶ್ರೀ ಮೋದಿ ಅವರು, ಕಾರ್ಯಕ್ರಮದ ಸ್ಥಳದಲ್ಲಿದ್ದ ಉತ್ಸಾಹಭರಿತ ವಾತಾವರಣ, ಶಕ್ತಿ ಮತ್ತು ಚೈತನ್ಯವನ್ನು ಶ್ಲಾಘಿಸಿದರು. ಇದು ಭಾರತದ ಆರ್ಥಿಕತೆ ಮತ್ತು ಬೆಳವಣಿಗೆಯ ಮೇಲೆ ಜಗತ್ತಿಗಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಎಲ್ಲಾ ಸಂಘಟಕರು ಮತ್ತು ಭಾಗವಹಿಸಿದವರಿಗೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು.

 

“ಭಾರತವು ಪ್ರಜಾಪ್ರಭುತ್ವದ ತಾಯಿ. ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳು ಅಥವಾ ನೀತಿ ನಿರೂಪಣೆಗೆ ಸೀಮಿತವಾಗಿಲ್ಲ, ಬದಲಾಗಿ ಆಡಳಿತದ ಒಂದು ಬಲವಾದ ಆಧಾರಸ್ತಂಭವಾಗಿ ಸ್ಥಾಪಿತವಾಗಿದೆ” ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು. ಈ ಪ್ರಜಾಸತ್ತಾತ್ಮಕ ಮನೋಭಾವಕ್ಕೆ ತಂತ್ರಜ್ಞಾನವೇ ಒಂದು ಪ್ರಮುಖ ಉದಾಹರಣೆ ಎಂದು ಅವರು ಬಣ್ಣಿಸಿದರು. ಜಗತ್ತು ಬಹಳ ಹಿಂದಿನಿಂದಲೂ 'ತಾಂತ್ರಿಕ ಅಸಮಾನತೆ'ಯ (technological divide) ಬಗ್ಗೆ ಚರ್ಚಿಸುತ್ತಿದೆ ಮತ್ತು ಭಾರತವೂ ಒಮ್ಮೆ ಇದರಿಂದ ಬಾಧಿತವಾಗಿತ್ತು. ಆದರೆ, ಕಳೆದ ದಶಕದಲ್ಲಿ ಭಾರತವು ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಜಾಸತ್ತೀಕರಣಗೊಳಿಸಿದೆ ಎಂದು ಅವರು ಗಮನಸೆಳೆದರು. “ಇಂದಿನ ಭಾರತವು ವಿಶ್ವದ ಅತ್ಯಂತ ತಾಂತ್ರಿಕವಾಗಿ ಎಲ್ಲರನ್ನೂ ಒಳಗೊಂಡ ಸಮಾಜಗಳಲ್ಲಿ ಒಂದಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತವು ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಸತ್ತೀಕರಣಗೊಳಿಸಿ, ಅದನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಲಭ್ಯವಾಗುವಂತೆ ಮಾಡಿದೆ. ಇದು ಈಗ ಭಾರತದ ಉತ್ತಮ ಆಡಳಿತದ ಮಾದರಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಈ ಮಾದರಿಯಲ್ಲಿ, ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರವು ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದರೆ, ಖಾಸಗಿ ವಲಯವು ಆ ವೇದಿಕೆಯ ಮೇಲೆ ನವೀನ ಉತ್ಪನ್ನಗಳನ್ನು ನಿರ್ಮಿಸುತ್ತದೆ ಎಂದು ಅವರು ವಿವರಿಸಿದರು. ತಂತ್ರಜ್ಞಾನವು ಕೇವಲ ಅನುಕೂಲತೆಯ ಸಾಧನವಾಗಿ ಮಾತ್ರವಲ್ಲದೆ, ಸಮಾನತೆಯ ಸಾಧನವಾಗಿಯೂ ಹೇಗೆ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಶ್ರೀ ಮೋದಿ ಅವರು ಮತ್ತಷ್ಟು ಒತ್ತಿ ಹೇಳಿದರು.

"ಭಾರತದ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನವು ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಿದೆ" ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "ಒಂದು ಕಾಲದಲ್ಲಿ ಬ್ಯಾಂಕಿಂಗ್ ಒಂದು ವಿಶೇಷ ಸೌಲಭ್ಯವಾಗಿತ್ತು, ಆದರೆ ಡಿಜಿಟಲ್ ತಂತ್ರಜ್ಞಾನವು ಅದನ್ನು ಸಬಲೀಕರಣದ ಮಾಧ್ಯಮವನ್ನಾಗಿ ಪರಿವರ್ತಿಸಿದೆ" ಎಂದು ಅವರು ಹೇಳಿದರು. ಭಾರತದಲ್ಲಿ ಡಿಜಿಟಲ್ ಪಾವತಿಗಳು ದಿನನಿತ್ಯದ ಚಟುವಟಿಕೆಯಾಗಿವೆ ಎಂದು ಹೇಳಿದ ಅವರು, ಈ ಯಶಸ್ಸಿಗೆ 'JAM ತ್ರಿಮೂರ್ತಿ'ಗಳಾದ—ಜನ್ ಧನ್, ಆಧಾರ್, ಮತ್ತು ಮೊಬೈಲ್ ಕಾರಣವೆಂದು ಹೇಳಿದರು. ಯುಪಿಐ (UPI) ಒಂದರಲ್ಲೇ ಪ್ರತಿ ತಿಂಗಳು ಇಪ್ಪತ್ತು ಬಿಲಿಯನ್ (ಎರಡು ಸಾವಿರ ಕೋಟಿ) ವಹಿವಾಟುಗಳು ನಡೆಯುತ್ತಿದ್ದು, ಇದರ ಮೌಲ್ಯ ಇಪ್ಪತ್ತೈದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದ ಶ್ರೀ ಮೋದಿ ಅವರು, ಜಾಗತಿಕವಾಗಿ ನಡೆಯುವ ಪ್ರತಿ ನೂರು ನೈಜ-ಸಮಯದ ಡಿಜಿಟಲ್ ವಹಿವಾಟುಗಳಲ್ಲಿ, ಐವತ್ತು ವಹಿವಾಟುಗಳು ಭಾರತದಲ್ಲೇ ನಡೆಯುತ್ತವೆ ಎಂದು ಒತ್ತಿ ಹೇಳಿದರು.

 

ಈ ವರ್ಷದ 'ಗ್ಲೋಬಲ್ ಫಿನ್ ಟೆಕ್ ಫೆಸ್ಟ್'ನ ವಿಷಯವು ಭಾರತದ ಪ್ರಜಾಸತ್ತಾತ್ಮಕ ಸ್ಪೂರ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಮುಂದುವರಿಸುತ್ತದೆ ಎಂದು ಹೇಳಿದ ಶ್ರೀ ಮೋದಿ ಅವರು, ಭಾರತದ 'ಡಿಜಿಟಲ್ ಸ್ಟ್ಯಾಕ್' ಜಾಗತಿಕವಾಗಿ ಚರ್ಚೆಯಾಗುತ್ತಿದೆ ಎಂದು ಹೇಳಿದರು. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI), ಆಧಾರ್ ಆಧಾರಿತ ಪಾವತಿ ವ್ಯವಸ್ಥೆ, ಭಾರತ್ ಬಿಲ್ ಪಾವತಿ ವ್ಯವಸ್ಥೆ, ಭಾರತ್-ಕ್ಯೂಆರ್, ಡಿಜಿಲಾಕರ್, ಡಿಜಿಯಾತ್ರಾ, ಮತ್ತು ಸರ್ಕಾರಿ ಇ-ಮಾರುಕಟ್ಟೆ (GeM) ಯಂತಹ ಪ್ರಮುಖ ಅಂಶಗಳು ಭಾರತದ ಡಿಜಿಟಲ್ ಆರ್ಥಿಕತೆಯ ಬೆನ್ನೆಲುಬಾಗಿವೆ ಎಂದು ಅವರು ಉಲ್ಲೇಖಿಸಿದರು. 'ಇಂಡಿಯಾ ಸ್ಟ್ಯಾಕ್' ಈಗ ಹೊಸ ಮುಕ್ತ ಪರಿಸರ ವ್ಯವಸ್ಥೆಗಳಿಗೆ (open ecosystems) ಜನ್ಮ ನೀಡುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತೃಪ್ತಿ ವ್ಯಕ್ತಪಡಿಸಿದರು. ಒ.ಎನ್.ಡಿ.ಸಿ (ONDC - ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಸಣ್ಣ ಅಂಗಡಿಯವರಿಗೆ ಮತ್ತು ಎಂಎಸ್ಎಂಇಗಳಿಗೆ (MSMEs) ವರದಾನವಾಗಿದ್ದು, ದೇಶದಾದ್ಯಂತದ ಮಾರುಕಟ್ಟೆಗಳನ್ನು ಪ್ರವೇಶಿಸಲು ಅವರಿಗೆ ಅನುವು ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು. ಒ.ಸಿ.ಇ.ಎನ್ (OCEN - ಓಪನ್ ಕ್ರೆಡಿಟ್ ಎನೇಬಲ್ಮೆಂಟ್ ನೆಟ್ವರ್ಕ್) ಸಣ್ಣ ಉದ್ಯಮಿಗಳಿಗೆ ಸಾಲದ ಲಭ್ಯತೆಯನ್ನು ಸರಳಗೊಳಿಸುತ್ತಿದೆ ಮತ್ತು ಎಂ.ಎಸ್.ಎಂ.ಇಗಳ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತಿದೆ ಎಂದು ಅವರು ಸೇರಿಸಿದರು. ಆರ್.ಬಿ.ಐ (RBI) ಅನುಸರಿಸುತ್ತಿರುವ ಡಿಜಿಟಲ್ ಕರೆನ್ಸಿ ಉಪಕ್ರಮವು ಫಲಿತಾಂಶಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಎಲ್ಲಾ ಪ್ರಯತ್ನಗಳು ಭಾರತದ ಬಳಕೆಯಾಗದ ಸಾಮರ್ಥ್ಯವನ್ನು ದೇಶದ ಬೆಳವಣಿಗೆಯ ಕಥೆಯ ಚಾಲನಾ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು.

"'ಇಂಡಿಯಾ ಸ್ಟ್ಯಾಕ್' ಕೇವಲ ಭಾರತದ ಯಶೋಗಾಥೆಯಲ್ಲ, ಇದು ವಿಶ್ವಕ್ಕೆ, ವಿಶೇಷವಾಗಿ 'ಗ್ಲೋಬಲ್ ಸೌತ್' ದೇಶಗಳಿಗೆ ಒಂದು ಆಶಾಕಿರಣವಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ತನ್ನ ಡಿಜಿಟಲ್ ನಾವೀನ್ಯತೆಗಳ ಮೂಲಕ, ಭಾರತವು ಜಾಗತಿಕವಾಗಿ ಡಿಜಿಟಲ್ ಸಹಕಾರ ಮತ್ತು ಡಿಜಿಟಲ್ ಪಾಲುದಾರಿಕೆಗಳನ್ನು ಬೆಳೆಸುವ ಗುರಿ ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ತನ್ನ ಅನುಭವ ಮತ್ತು ಓಪನ್-ಸೋರ್ಸ್ ವೇದಿಕೆಗಳೆರಡನ್ನೂ 'ಜಾಗತಿಕ ಸಾರ್ವಜನಿಕ ಸಂಪತ್ತು'ಗಳಾಗಿ ಹಂಚಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು. ಭಾರತದಲ್ಲಿ ಅಭಿವೃದ್ಧಿಪಡಿಸಲಾದ 'ಮಾಡ್ಯುಲರ್ ಓಪನ್-ಸೋರ್ಸ್ ಐಡೆಂಟಿಟಿ ಪ್ಲಾಟ್ ಫಾರ್ಮ್ (MOSIP)' ಅನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿ ಅವರು, ಇಪ್ಪತ್ತೈದಕ್ಕೂ ಹೆಚ್ಚು ದೇಶಗಳು ತಮ್ಮ ಸಾರ್ವಭೌಮ ಡಿಜಿಟಲ್ ಗುರುತಿನ ವ್ಯವಸ್ಥೆಗಳನ್ನು ನಿರ್ಮಿಸಲು ಇದನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಹೇಳಿದರು. ಭಾರತವು ಕೇವಲ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿಲ್ಲ, ಬದಲಿಗೆ ಅದನ್ನು ಅಭಿವೃದ್ಧಿಪಡಿಸಲು ಇತರ ರಾಷ್ಟ್ರಗಳಿಗೆ ಸಹಾಯವನ್ನೂ ಮಾಡುತ್ತಿದೆ ಎಂದು ಅವರು ದೃಢಪಡಿಸಿದರು. ಇದು ಡಿಜಿಟಲ್ ಸಹಾಯವಲ್ಲ, ಬದಲಿಗೆ ಡಿಜಿಟಲ್ ಸಬಲೀಕರಣವಾಗಿದೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಫಿನ್ಟೆಕ್ ಸಮುದಾಯದ ಪ್ರಯತ್ನಗಳು ದೇಶೀಯ ಪರಿಹಾರಗಳಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿವೆ ಎಂದು ಹೇಳಿದ ಶ್ರೀ ಮೋದಿ ಅವರು, ಅಂತರ-ಕಾರ್ಯಾಚರಣೆಯ ಕ್ಯೂಆರ್ ನೆಟ್ವರ್ಕ್ಗಳು, ಮುಕ್ತ ವಾಣಿಜ್ಯ, ಮತ್ತು ಮುಕ್ತ ಹಣಕಾಸು ಚೌಕಟ್ಟುಗಳನ್ನು ಭಾರತೀಯ ಸ್ಟಾರ್ಟ್ಅಪ್ಗಳ ಬೆಳವಣಿಗೆಯು ವಿಶ್ವಾದ್ಯಂತ ಗುರುತಿಸಲ್ಪಡುತ್ತಿರುವ ಪ್ರಮುಖ ಕ್ಷೇತ್ರಗಳೆಂದು ಉಲ್ಲೇಖಿಸಿದರು. ಈ ವರ್ಷದ ಮೊದಲ ಆರು ತಿಂಗಳೊಳಗೆ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಬಂಡವಾಳ ಪಡೆದ ಅಗ್ರ ಮೂರು ಫಿನ್ ಟೆಕ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಭಾರತದ ಶಕ್ತಿಯು ಕೇವಲ ಅದರ ದೊಡ್ಡ ಪ್ರಮಾಣದಲ್ಲಿಲ್ಲ, ಬದಲಿಗೆ ಆ ಪ್ರಮಾಣವನ್ನು ಒಳಗೊಳ್ಳುವಿಕೆ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯೊಂದಿಗೆ ಸಂಯೋಜಿಸುವುದರಲ್ಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, ಅಂಡರ್ ರೈಟಿಂಗ್ ನಲ್ಲಿನ ಪಕ್ಷಪಾತವನ್ನು ಕಡಿಮೆ ಮಾಡುವಲ್ಲಿ, ರಿಯಲ್‌ ಟೈಮ್ ವಂಚನೆಯನ್ನು ಪತ್ತೆಹಚ್ಚುವಲ್ಲಿ ಮತ್ತು ವಿವಿಧ ಸೇವೆಗಳನ್ನು ಹೆಚ್ಚಿಸುವಲ್ಲಿ ಕೃತಕ ಬುದ್ಧಿಮತ್ತೆ (AI) ಯ ಪಾತ್ರವನ್ನು ಎತ್ತಿ ತೋರಿಸಿದರು. ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಡೇಟಾ, ಕೌಶಲ್ಯ ಮತ್ತು ಆಡಳಿತದಲ್ಲಿ ಜಂಟಿ ಹೂಡಿಕೆಗೆ ಪ್ರಧಾನಮಂತ್ರಿ ಅವರು ಕರೆ ನೀಡಿದರು.

"ಕೃತಕ ಬುದ್ಧಿಮತ್ತೆ (AI) ಕುರಿತು ಭಾರತದ ದೃಷ್ಟಿಕೋನವು ಮೂರು ಪ್ರಮುಖ ತತ್ವಗಳನ್ನು ಆಧರಿಸಿದೆ—ಸಮಾನ ಪ್ರವೇಶ, ಜನಸಂಖ್ಯಾ ಪ್ರಮಾಣದ ಕೌಶಲ್ಯ, ಮತ್ತು ಜವಾಬ್ದಾರಿಯುತ ನಿಯೋಜನೆ" ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು. 'ಇಂಡಿಯಾ-ಎ.ಐ. ಮಿಷನ್' ಅಡಿಯಲ್ಲಿ, ಪ್ರತಿಯೊಬ್ಬ ನಾವೀನ್ಯಕಾರ ಮತ್ತು ಸ್ಟಾರ್ಟ್ ಅಪ್ ಗೆ ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಎಐನ ಪ್ರಯೋಜನಗಳನ್ನು ಪ್ರತಿಯೊಂದು ಜಿಲ್ಲೆಗೆ ಮತ್ತು ಪ್ರತಿಯೊಂದು ಭಾಷೆಯಲ್ಲಿ ತಲುಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಮೋದಿ ದೃಢಪಡಿಸಿದರು. ಭಾರತದ ಉತ್ಕೃಷ್ಟತಾ ಕೇಂದ್ರಗಳು, ಕೌಶಲ್ಯ ಕೇಂದ್ರಗಳು, ಮತ್ತು ದೇಶೀಯ ಎಐ ಮಾದರಿಗಳು ಈ ಗುರಿಯನ್ನು ತಲುಪಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ನೈತಿಕ ಎ.ಐಗಾಗಿ ಜಾಗತಿಕ ಚೌಕಟ್ಟಿನ ರಚನೆಯನ್ನು ಭಾರತವು ಸತತವಾಗಿ ಬೆಂಬಲಿಸಿದೆ ಎಂದು ದೃಢಪಡಿಸಿದ ಶ್ರೀ ಮೋದಿ ಅವರು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತದ ಅನುಭವ ಮತ್ತು ಅದರ ಕಲಿಕೆಯ ಭಂಡಾರವು ಜಗತ್ತಿಗೆ ಮೌಲ್ಯಯುತವಾಗಬಲ್ಲದು ಎಂದು ಹೇಳಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತವು ಅನುಸರಿಸಿದ ಮಾರ್ಗವನ್ನೇ, ಎಐ ಕ್ಷೇತ್ರದಲ್ಲೂ ಮುಂದುವರಿಸಲು ಬಯಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಭಾರತದ ಪಾಲಿಗೆ, ಎ.ಐ. (AI) ಎಂದರೆ 'ಆಲ್ ಇನ್ಕ್ಲೂಸಿವ್' (ಎಲ್ಲರನ್ನೂ ಒಳಗೊಂಡಿದ್ದು)" ಎಂದು ಶ್ರೀ ಮೋದಿ ಹೇಳಿದರು.

 

"ಎ.ಐಗಾಗಿ ವಿಶ್ವಾಸ ಮತ್ತು ಸುರಕ್ಷತಾ ನಿಯಮಗಳ ಕುರಿತು ಜಾಗತಿಕ ಚರ್ಚೆಗಳು ಮುಂದುವರಿದಿರುವಾಗ, ಭಾರತವು ಈಗಾಗಲೇ 'ವಿಶ್ವಾಸದ ಪದರ'ವನ್ನು (trust layer) ನಿರ್ಮಿಸಿದೆ" ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭಾರತದ ಎ.ಐ. ಮಿಷನ್ ಡೇಟಾ ಮತ್ತು ಗೌಪ್ಯತೆಯ ಕಾಳಜಿಗಳೆರಡನ್ನೂ ನಿರ್ವಹಿಸಲು ಸಜ್ಜಾಗಿದೆ ಎಂದು ಒತ್ತಿ ಹೇಳಿದರು. ನಾವೀನ್ಯಕಾರರಿಗೆ ಎಲ್ಲರನ್ನೂ ಒಳಗೊಳ್ಳುವ ಅಪ್ಲಿಕೇಶನ್ ಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ಭಾರತದ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು. ಪಾವತಿಗಳಲ್ಲಿ, ಭಾರತವು ವೇಗ ಮತ್ತು ಭರವಸೆಗೆ ಆದ್ಯತೆ ನೀಡುತ್ತದೆ; ಸಾಲ ನೀಡುವಿಕೆಯಲ್ಲಿ, ಅನುಮೋದನೆಗಳು ಮತ್ತು ಕೈಗೆಟುಕುವಿಕೆಯ ಮೇಲೆ ಗಮನಹರಿಸಲಾಗುತ್ತದೆ; ವಿಮೆಯಲ್ಲಿ, ಪರಿಣಾಮಕಾರಿ ಪಾಲಿಸಿಗಳು ಮತ್ತು ಸಕಾಲಿಕ ಕ್ಲೇಮ್ ಗಳು ಗುರಿಗಳಾಗಿವೆ; ಮತ್ತು ಹೂಡಿಕೆಗಳಲ್ಲಿ, ಸುಲಭ ಪ್ರವೇಶ ಮತ್ತು ಪಾರದರ್ಶಕತೆಯಲ್ಲಿ ಯಶಸ್ಸು ಸಾಧಿಸುವುದು ಗುರಿಯಾಗಿದೆ.

ಈ ಪರಿವರ್ತನೆಯ ಹಿಂದಿನ ಚಾಲನಾ ಶಕ್ತಿ ಎಐ ಆಗಬಲ್ಲದು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇದಕ್ಕಾಗಿ, ಎ.ಐ. ಅಪ್ಲಿಕೇಶನ್ ಗಳನ್ನು ಜನರನ್ನು ಕೇಂದ್ರವಾಗಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಮೊದಲ ಬಾರಿಗೆ ಡಿಜಿಟಲ್ ಹಣಕಾಸು ಸೇವೆ ಬಳಸುವ ಬಳಕೆದಾರನಿಗೆ, ತಪ್ಪುಗಳು ಶೀಘ್ರವಾಗಿ ಪರಿಹರಿಸಲ್ಪಡುತ್ತವೆ ಎಂಬ ವಿಶ್ವಾಸವಿರಬೇಕು ಎಂದು ಅವರು ಒತ್ತಿ ಹೇಳಿದರು. ಈ ವಿಶ್ವಾಸವು, ಡಿಜಿಟಲ್ ಸೇರ್ಪಡೆ ಮತ್ತು ಹಣಕಾಸು ಸೇವೆಗಳಲ್ಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಕೆಲವು ವರ್ಷಗಳ ಹಿಂದೆ ಯುಕೆ'ಯಲ್ಲಿ 'ಎ.ಐ. ಸುರಕ್ಷತಾ ಶೃಂಗಸಭೆ' (AI Safety Summit) ಪ್ರಾರಂಭವಾಯಿತು ಮತ್ತು ಮುಂದಿನ ವರ್ಷ ಭಾರತದಲ್ಲಿ 'ಎ.ಐ. ಪ್ರಭಾವ ಶೃಂಗಸಭೆ' (AI Impact Summit) ನಡೆಯಲಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಸುರಕ್ಷತೆಯ ಕುರಿತಾದ ಸಂವಾದವು ಯುಕೆ'ಯಲ್ಲಿ ಪ್ರಾರಂಭವಾದರೆ, ಅದರ ಪ್ರಭಾವದ ಕುರಿತಾದ ಸಂವಾದವು ಈಗ ಭಾರತದಲ್ಲಿ ನಡೆಯಲಿದೆ ಎಂದು ಹೇಳಿದರು. ಭಾರತ ಮತ್ತು ಯುಕೆ ಜಾಗತಿಕ ವ್ಯಾಪಾರದಲ್ಲಿ 'ಗೆಲುವು-ಗೆಲುವಿನ ಪಾಲುದಾರಿಕೆ ಮಾದರಿ'ಯನ್ನು ಜಗತ್ತಿಗೆ ತೋರಿಸಿವೆ ಮತ್ತು ಎ.ಐ. ಹಾಗೂ ಫಿನ್ಟೆಕ್ ನಲ್ಲಿನ ಅವರ ಸಹಯೋಗವು ಈ ಸ್ಪೂರ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಯುಕೆ'ಯ ಸಂಶೋಧನೆ ಮತ್ತು ಜಾಗತಿಕ ಹಣಕಾಸು ಪರಿಣತಿಯೊಂದಿಗೆ, ಭಾರತದ ವ್ಯಾಪ್ತಿ ಮತ್ತು ಪ್ರತಿಭೆ ಸೇರಿದಾಗ, ಅದು ಜಗತ್ತಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯಬಲ್ಲದು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಸ್ಟಾರ್ಟ್ಅಪ್ ಗಳು, ಸಂಸ್ಥೆಗಳು ಮತ್ತು ನಾವೀನ್ಯತಾ ಕೇಂದ್ರಗಳ ನಡುವಿನ ಸಂಪರ್ಕಗಳನ್ನು ಮತ್ತಷ್ಟು ಗಾಢವಾಗಿಸಲು ನವೀಕೃತ ಬದ್ಧತೆಯನ್ನು ಅವರು ಘೋಷಿಸಿದರು. 'ಯುಕೆ-ಭಾರತ ಫಿನ್ ಟೆಕ್ ಕಾರಿಡಾರ್' ಹೊಸ ಸ್ಟಾರ್ಟ್ಅಪ್ ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಮತ್ತು ವಿಸ್ತರಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ, ಜೊತೆಗೆ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಗಿಫ್ಟ್ ಸಿಟಿ ನಡುವಿನ ಸಹಕಾರವನ್ನು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಎರಡೂ ದೇಶಗಳ ನಡುವಿನ ಈ ಆರ್ಥಿಕ ಏಕೀಕರಣವು, ಕಂಪನಿಗಳಿಗೆ ಮುಕ್ತ ವ್ಯಾಪಾರ ಒಪ್ಪಂದದ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಸೇರಿಸಿದರು.

 

ಎಲ್ಲಾ ಪಾಲುದಾರರು ಹಂಚಿಕೊಂಡಿರುವ ಅಪಾರ ಜವಾಬ್ದಾರಿಯನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ಈ ವೇದಿಕೆಯಿಂದ ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಪ್ರತಿಯೊಬ್ಬ ಜಾಗತಿಕ ಪಾಲುದಾರರಿಗೂ ಭಾರತದೊಂದಿಗೆ ಸಹಕರಿಸಲು ಆಹ್ವಾನ ನೀಡಿದರು. ಪ್ರತಿಯೊಬ್ಬ ಹೂಡಿಕೆದಾರರಿಗೂ ಭಾರತದ ಬೆಳವಣಿಗೆಯೊಂದಿಗೆ ಬೆಳೆಯಲು ಅವರು ಸ್ವಾಗತಿಸಿದರು. ತಂತ್ರಜ್ಞಾನ, ಜನರು ಮತ್ತು ಭೂಮಿ, ಈ ಮೂರನ್ನೂ ಸಮೃದ್ಧಗೊಳಿಸುವಂತಹ ಫಿನ್ಟೆಕ್ ಜಗತ್ತನ್ನು ರಚಿಸಲು ಪ್ರಧಾನಮಂತ್ರಿ ಅವರು ಕರೆ ನೀಡಿದರು—ಅಲ್ಲಿ ನಾವೀನ್ಯತೆಯು ಕೇವಲ ಬೆಳವಣಿಗೆಯನ್ನು ಮಾತ್ರವಲ್ಲ, ಒಳಿತನ್ನೂ ಗುರಿಯಾಗಿಸಿಕೊಂಡಿರುತ್ತದೆ ಮತ್ತು ಅಲ್ಲಿ ಹಣಕಾಸು ಕೇವಲ ಸಂಖ್ಯೆಗಳನ್ನು ಮಾತ್ರವಲ್ಲ, ಮಾನವ ಪ್ರಗತಿಯನ್ನು ಸೂಚಿಸುತ್ತದೆ. ಈ ಕಾರ್ಯೋನ್ಮುಖ ಕರೆಯೊಂದಿಗೆ, ಅವರು ಸಭಿಕರೆಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಕೀರ್ ಸ್ಟಾರ್ಮರ್, ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್, ಶ್ರೀ ಸಂಜಯ್ ಮಲ್ಹೋತ್ರಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

ಹಿನ್ನೆಲೆ

 

ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2025, ವಿಶ್ವದಾದ್ಯಂತದ ಆವಿಷ್ಕಾರಕರು, ನೀತಿ ನಿರೂಪಕರು, ಕೇಂದ್ರ ಬ್ಯಾಂಕರ್ಗಳು, ನಿಯಂತ್ರಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಉದ್ಯಮದ ಮುಖಂಡರನ್ನು ಒಂದೆಡೆ ಸೇರಿಸಲಿದೆ. ಈ ಸಮ್ಮೇಳನದ ಕೇಂದ್ರ ವಿಷಯವಾದ 'ಉತ್ತಮ ಜಗತ್ತಿಗಾಗಿ ಹಣಕಾಸು ಸಬಲೀಕರಣ' – ಇದು ಎ.ಐ. (ಕೃತಕ ಬುದ್ಧಿಮತ್ತೆ), ವರ್ಧಿತ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯಿಂದ ಶಕ್ತಿ ಪಡೆದಿದ್ದು, ನೈತಿಕ ಮತ್ತು ಸುಸ್ಥಿರ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನ ಮತ್ತು ಮಾನವ ಒಳನೋಟದ ಸಂಗಮವನ್ನು ಎತ್ತಿ ತೋರಿಸುತ್ತದೆ.

 

ಈ ವರ್ಷದ ಆವೃತ್ತಿಯು 75ಕ್ಕೂ ಹೆಚ್ಚು ದೇಶಗಳಿಂದ 100,000ಕ್ಕೂ ಹೆಚ್ಚು ಭಾಗವಹಿಸುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದು ವಿಶ್ವದ ಅತಿದೊಡ್ಡ ಫಿನ್ ಟೆಕ್ ಸಮಾವೇಶಗಳಲ್ಲಿ ಒಂದೆನಿಸಲಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಅಧಿಕಾರ ವ್ಯಾಪ್ತಿಗಳನ್ನು ಪ್ರತಿನಿಧಿಸುವ ಸುಮಾರು 7,500 ಕಂಪನಿಗಳು, 800 ಭಾಷಣಕಾರರು, 400 ಪ್ರದರ್ಶಕರು ಮತ್ತು 70 ನಿಯಂತ್ರಕರು ಭಾಗವಹಿಸಲಿದ್ದಾರೆ.

ಭಾಗವಹಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸಿಂಗಾಪುರದ ಹಣಕಾಸು ಪ್ರಾಧಿಕಾರ, ಜರ್ಮನಿಯ ಡಾಯ್ಚ ಬುಂಡೆಸ್ ಬ್ಯಾಂಕ್, ಬ್ಯಾಂಕ್ ಡಿ ಫ್ರಾನ್ಸ್ ಮತ್ತು ಸ್ವಿಸ್ ಹಣಕಾಸು ಮಾರುಕಟ್ಟೆ ಮೇಲ್ವಿಚಾರಣಾ ಪ್ರಾಧಿಕಾರ (FINMA) ನಂತಹ ಪ್ರಸಿದ್ಧ ನಿಯಂತ್ರಕ ಸಂಸ್ಥೆಗಳು ಸೇರಿವೆ. ಇವುಗಳ ಭಾಗವಹಿಸುವಿಕೆಯು, ಹಣಕಾಸು ನೀತಿ ಸಂವಾದ ಮತ್ತು ಸಹಕಾರಕ್ಕಾಗಿ ಒಂದು ಜಾಗತಿಕ ವೇದಿಕೆಯಾಗಿ 'ಗ್ಲೋಬಲ್ ಫಿನ್ ಟೆಕ್ ಫೆಸ್ಟ್' ನ ಬೆಳೆಯುತ್ತಿರುವ ಸ್ಥಾನಮಾನವನ್ನು ಒತ್ತಿ ಹೇಳುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto industry contributes over ₹22.75 lakh crore to Indian economy: SIAM

Media Coverage

Auto industry contributes over ₹22.75 lakh crore to Indian economy: SIAM
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"