"ಸುಸ್ಥಿರ ಇಂಧನ ಮೂಲಗಳ ಮೂಲಕ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ"
"ಭಾರತವು ತನಗಾಗಿ ಯಾವುದೇ ಗುರಿಗಳನ್ನು ನಿಗದಿಪಡಿಸಿಕೊಂಡರೂ, ನಾನು ಅವುಗಳನ್ನು ಸವಾಲುಗಳಾಗಿ ನೋಡುವುದಿಲ್ಲ, ಬದಲಿಗೆ ಅವಕಾಶವಾಗಿ ನೋಡುತ್ತೇನೆ"
"ಅಧಿಕ ದಕ್ಷತೆಯ ಸೌರ ಮಾಡ್ಯೂಲ್ ಉತ್ಪಾದನೆಗಾಗಿ ಬಜೆಟ್‌ನಲ್ಲಿ 19.5 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆಯು, ಭಾರತವನ್ನು ಸೌರ ಮಾಡ್ಯೂಲ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ"
"ಬ್ಯಾಟರಿ ವಿನಿಮಯ ನೀತಿ ಮತ್ತು ಕಾರ್ಯಸಾಧ್ಯ ಮಾನದಂಡಗಳಿಗೆ ಸಂಬಂಧಿಸಿದಂತೆ ಸಹ ಈ ವರ್ಷದ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಎದುರಾಘುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ"
"ಇಂಧನ ಸಂಗ್ರಹಣೆಯ ಸವಾಲಿನತ್ತ ಬಜೆಟ್‌ನಲ್ಲಿ ಗಮನಾರ್ಹ ಗಮನ ನೀಡಲಾಗದೆ”
"ವಿಶ್ವವು ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳ ಕ್ಷೀಣತೆಗೆ ಸಾಕ್ಷಿಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಆವರ್ತನ ಆರ್ಥಿಕತೆಯು ತುರ್ತು ಅಗತ್ಯವಾಗಿದೆ ಮತ್ತು ನಾವು ಅದನ್ನು ನಮ್ಮ ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಬೇಕು"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಸುಸ್ಥಿರ ಬೆಳವಣಿಗೆಗಾಗಿ ಇಂಧನ' ಕುರಿತ ವೆಬಿನಾರ್‌ ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಭಾಷಣ ಮಾಡಿದ ಬಜೆಟ್ ನಂತರದ ವೆಬಿನಾರ್ ಗಳ ಸರಣಿಯಲ್ಲಿ ಇದು ಒಂಬತ್ತನೇ ವೆಬಿನಾರ್‌ ಆಗಿದೆ.

'ಸುಸ್ಥಿರ ಬೆಳವಣಿಗೆಗಾಗಿ ಇಂಧನ' ಎಂಬುದು ಭಾರತೀಯ ಸಂಪ್ರದಾಯದ ಅನುರಣನೆ ಮಾತ್ರವಲ್ಲದೆ, ಭವಿಷ್ಯದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸುವ ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದರು. ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎಂದು ಅವರು ಪ್ರತಿಪಾದಿಸಿದರು. 2070ರ ವೇಳೆಗೆ ʻನಿವ್ವಳ ಶೂನ್ಯʼ (ನೆಟ್ ಝೀರೋ) ಗುರಿ ಸಾಧಿಸುವುದಾಗಿ ಗ್ಲ್ಯಾಸ್ಗೋದಲ್ಲಿ ತಾವು ಘೋಷಿಸಿದುದರ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಪರಿಸರದ ಸುಸ್ಥಿರ ಜೀವನಶೈಲಿಗೆ ಸಂಬಂಧಿಸಿದ `LIFE’ ಬಗ್ಗೆಯೂ ಅವರು ತಮ್ಮ ದೃಷ್ಟಿಕೋನವನ್ನು ಉಲ್ಲೇಖಿಸಿದರು. ಭಾರತವು ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದಂತಹ ಜಾಗತಿಕ ಸಹಯೋಗಗಳ ನಾಯಕತ್ವ ವಹಿಸಿದೆ ಎಂದರು. 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಮತ್ತು ಸ್ಥಾಪಿತ ಇಂಧನ ಸಾಮರ್ಥ್ಯದ ಶೇಕಡಾ 50ರಷ್ಟನ್ನು ಪಳೆಯುಳಿಕೆಯೇತರ ಶಕ್ತಿಯ ಮೂಲಕ ಸಂಗ್ರಹಿಸುವ ಗುರಿಯ ಬಗ್ಗೆಯೂ ಮಾತನಾಡಿದರು. "ಭಾರತವು ತಾನು ನಿಗದಿಪಡಿಸಿಕೊಂಡಿರುವ ಗುರಿಗಳನ್ನು ನಾನು ಸವಾಲುಗಳಾಗಿ ನೋಡುವುದಿಲ್ಲ, ಬದಲಿಗೆ ಅವಕಾಶವಾಗಿ ನೋಡುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಈ ದೃಷ್ಟಿಕೋನದೊಂದಿಗೆ ಸಾಗುತ್ತಿದೆ ಮತ್ತು ಈ ವರ್ಷದ ಬಜೆಟ್‌ನಲ್ಲಿ ನೀತಿ ಮಟ್ಟದಲ್ಲಿ ಇದನ್ನು ಮುಂದುವರಿಸಲಾಗಿದೆ", ಎಂದು ಅವರು ಹೇಳಿದರು. ಈ ಬಜೆಟ್‌ನಲ್ಲಿ ಅಧಿಕ ದಕ್ಷತೆಯ ಸೌರ ಮಾಡ್ಯೂಲ್ ಉತ್ಪಾದನೆಗಾಗಿ 19.5 ಸಾವಿರ ಕೋಟಿ ಅನುದಾನ ಘೋಷಿಸಲಾಗಿದೆ, ಇದು ಭಾರತವನ್ನು ಸೌರ ಮಾಡ್ಯೂಲ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದರು.

ಇತ್ತೀಚೆಗೆ ಘೋಷಿಸಲಾದ ʻರಾಷ್ಟ್ರೀಯ ಜಲಜನಕ ಯೋಜನೆʼ (ರಾಷ್ಟ್ರೀಯ ಹೈಡ್ರೋಜನ್ ಮಿಷನ್) ಬಗ್ಗೆಯೂ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನವೀಕರಿಸಬಹುದಾದ ಸಂಪನ್ಮೂಲದ ಹೇರಳ ನಿಧಿ ಹೊಂದಿರುವ ಭಾರತವು, ತನ್ನ ಅಂತರ್ಗತ ಲಾಭವನ್ನು ಬಳಸಿಕೊಂಡು ಹಸಿರು ಜಲಜನಕದ ಕೇಂದ್ರವಾಗಬಹುದು ಎಂದು ಹೇಳಿದರು. ಅವರು ಈ ನಿಟ್ಟಿನಲ್ಲಿ ಖಾಸಗಿ ವಲಯದ ಪ್ರಯತ್ನಗಳಿಗಾಗಿ ಮನವಿ ಮಾಡಿದರು.

ಬಜೆಟ್‌ನಲ್ಲಿ ಪ್ರಧಾನವಾಗಿ ಗಮನ ಹರಿಸಲಾದ ಇಂಧನ ಸಂಗ್ರಹಣೆಯ ಸವಾಲಿನತ್ತಲೂ ಶ್ರೀ ಮೋದಿ ಗಮನ ಸೆಳೆದರು.  "ಬ್ಯಾಟರಿ ವಿನಿಮಯ ನೀತಿ ಮತ್ತು ಅಂತರ-ಕಾರ್ಯಸಾಧ್ಯತೆ ಮಾನದಂಡಗಳಿಗೆ ಸಂಬಂಧಿಸಿದಂತೆಯೂ ಈ ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಗಳನ್ನು ಮಾಡಲಾಗಿದೆ. ಇವು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಎದುರಿಸಲಾಗುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ" ಎಂದು ಅವರು ಹೇಳಿದರು.

ಇಂಧನ ಉತ್ಪಾದನೆಯ ಜೊತೆಗೆ ಇಂಧನ ಉಳಿತಾಯವೂ ಸುಸ್ಥಿರತೆಗೆ ಅಷ್ಟೇ ಮುಖ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. "ನಮ್ಮ ದೇಶದಲ್ಲಿ ಅಧಿಕ ಇಂಧನ ದಕ್ಷತೆಯ ಎ/ಸಿ, ಹೀಟರ್‌ಗಳು, ಗೀಸರ್‌ಗಳು, ಓವನ್‌ಗಳ ಕುರಿತಾಗಿ ನೀವು ಕಾರ್ಯಪ್ರವೃತ್ತರಾಗಬೇಕು", ಎಂದು ಅವರು ವೆಬಿನಾರ್‌ನಲ್ಲಿ ಭಾಗವಹಿಸಿದವರಿಗೆ ಸಲಹೆ ನೀಡಿದರು.

ಇಂಧನ ದಕ್ಷ ಉತ್ಪನ್ನಗಳಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ʻಎಲ್‌ಇಡಿʼ ಬಲ್ಬ್‌ಗಳ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಿದ  ಉದಾಹರಣೆ ನೀಡಿದರು. ಮೊದಲು ಸರ್ಕಾರವು ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ʻಎಲ್‌ಇಡಿʼ ಬಲ್ಬ್‌ಗಳ ವೆಚ್ಚವನ್ನು ಕಡಿಮೆ ಮಾಡಿತು ಮತ್ತು ನಂತರ ʻಉಜಾಲಾʼ ಯೋಜನೆಯಡಿ 37 ಕೋಟಿ ʻಎಲ್‌ಇಡಿʼ ಬಲ್ಬ್‌ಗಳನ್ನು ವಿತರಿಸಲಾಯಿತು ಎಂದು ಅವರು ಹೇಳಿದರು. ಇದು ನಲವತ್ತೆಂಟು ಸಾವಿರ ದಶಲಕ್ಷ ʻಕಿಲೋವ್ಯಾಟ್ ಅವರ್ʼ ವಿದ್ಯುತ್ ಉಳಿತಾಯಕ್ಕೆ ಕಾರಣವಾಗಿದೆ ಹಾಗೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯುತ್ ಬಿಲ್‌ಗಳಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಲು ಕಾರಣವಾಗಿದೆ. ಇದಲ್ಲದೆ, ವಾರ್ಷಿಕ ಇಂಗಾಲದ ಹೊರಸೂಸುವಿಕೆಯು 4 ಕೋಟಿ ಟನ್‌ಗಳಷ್ಟು ಕಡಿಮೆಯಾಗಿದೆ. ಬೀದಿ ದೀಪಗಳಲ್ಲಿ ʻಎಲ್‌ಇಡಿʼ ಬಲ್ಬ್‌ಗಳನ್ನು ಅಳವಡಿಸುವ ಮೂಲಕ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ 6 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಕಲ್ಲಿದ್ದಲು ಅನಿಲೀಕರಣವು ಕಲ್ಲಿದ್ದಲಿಗೆ ಶುದ್ಧ ಪರ್ಯಾಯವಾಗಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷದ ಬಜೆಟ್‌ನಲ್ಲಿ, ಕಲ್ಲಿದ್ದಲು ಅನಿಲೀಕರಣಕ್ಕಾಗಿ 4 ಪ್ರಾಯೋಗಿಕ ಯೋಜನೆಗಳನ್ನು ಘೋಷಿಸಲಾಗಿದೆ, ಇದು ಈ ಯೋಜನೆಗಳ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ದೃಢಪಡಿಸುವಲ್ಲಿ ಸಹಾಯ ಮಾಡುತ್ತದೆ. ಅದೇ ರೀತಿ, ಸರ್ಕಾರವು ಎಥೆನಾಲ್ ಮಿಶ್ರಣವನ್ನು ನಿರಂತರವಾಗಿ ಉತ್ತೇಜಿಸುತ್ತಿದೆ. ಮಿಶ್ರಣವಾಗದ ಇಂಧನಕ್ಕೆ ಹೆಚ್ಚುವರಿ ಪ್ರತ್ಯೇಕ ಅಬಕಾರಿ ಸುಂಕದ ಬಗ್ಗೆ ಪ್ರಧಾನಿ ಸಭೆಯಲ್ಲಿ ಹೇಳಿದರು. ಇಂದೋರ್‌ನಲ್ಲಿ ಇತ್ತೀಚೆಗೆ ʻಗೋಬರ್ಧನ್ ಘಟಕʼವನ್ನು ಉದ್ಘಾಟಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ಖಾಸಗಿ ವಲಯವು ಇಂತಹ 500 ಅಥವಾ 1000 ಘಟಕಗಳನ್ನು ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

ಭವಿಷ್ಯದಲ್ಲಿ ಭಾರತದ  ಇಂಧನ ಬೇಡಿಕೆಯಲ್ಲಿ ಭಾರಿ ಏರಿಕೆ ಕಂಡುಬರುವ ಬಗ್ಗೆ ಮಾತನಾಡಿದ ಪ್ರಧಾನಿ, ನವೀಕರಿಸಬಹುದಾದ ಇಂಧನದತ್ತ ಪರಿವರ್ತನೆಗೊಳ್ಳಬೇಕಾದ ಅಗತ್ಯ ಎಷ್ಟು ನಿರ್ಣಾಯಕ ಎಂದು ವಿವರಿಸಿದರು. ಭಾರತದ 24-25 ಕೋಟಿ ಕುಟುಂಬಗಳಲ್ಲಿ ಅಡುಗೆಗೆ  ಸ್ವಚ್ಛ ಇಂಧನ ಬಳಕೆ ಸೇರಿದಂತೆ ಈ ನಿಟ್ಟಿನಲ್ಲಿ ಕೈಗೊಂಡ ಸರಣಿ ಕ್ರಮಗಳನ್ನು ಅವರು ಪಟ್ಟಿ ಮಾಡಿದರು.   ಕಾಲುವೆಗಳ ಮೇಲಿನ ಸೌರ ಫಲಕಗಳು, ಮನೆಯ ಉದ್ಯಾನಗಳಲ್ಲಿ ಅಥವಾ ಬಾಲ್ಕನಿಗಳಲ್ಲಿ ಸೌರ ಫಲಕಗಳ ಮೂಲಕ ಮನೆಗೆ ಬೇಕಾದ ಸುಮಾರು ಶೇಕಾಡ 15ರಷ್ಟು ವಿದ್ಯುತ್‌ ಅನ್ನು ಪಡೆಯಬಹುದು ಎಂದರು. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸೂಕ್ಷ್ಮ ಜಲ ಯೋಜನೆಗಳನ್ನು ಅನ್ವೇಷಿಸಲು ಅವರು ಸಲಹೆ ನೀಡಿದರು. "ವಿಶ್ವದಲ್ಲಿ ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳು ಕ್ಷೀಣಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ಆವರ್ತನ ಆರ್ಥಿಕತೆಯು ತುರ್ತು ಅಗತ್ಯವಾಗಿದೆ ಮತ್ತು ನಾವು ಅದನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಬೇಕು", ಎಂದು ಅವರು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Reform, perform, transform will go on: PM Modi hails 7.7% GDP growth

Media Coverage

Reform, perform, transform will go on: PM Modi hails 7.7% GDP growth
NM on the go

Nm on the go

Always be the first to hear from the PM. Get the App Now!
...
Prime Minister Narendra Modi congratulates people of Assam on commendable environmental feat
June 05, 2026

Prime Minister Shri Narendra Modi today extended his heartiest congratulations to the people of Assam, especially the state’s Nari Shakti, for achieving a commendable feat in environmental conservation. The Prime Minister remarked that the state's Nari Shakti has taken a lead in this significant effort, which is aimed at building a sustainable planet.

The Prime Minister posted on X:

"Commendable feat. Congratulations to the people of Assam, especially the state’s Nari Shakti for taking the lead in this effort aimed at building a sustainable planet"