ಗೌರವಾನ್ವಿತ ಸ್ವೀಡನ್ ಪ್ರಧಾನಮಂತ್ರಿ ಉಲ್ಫ್ ಕ್ರಿಸ್ಟರ್ಸನ್,

ಗೌರವಾನ್ವಿತ ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್,

ರಾಜಮನೆತನದ ಗಣ್ಯರೆ,

ವೋಲ್ವೊ ಗ್ರೂಪ್‌ನ ಅಧ್ಯಕ್ಷರು ಮತ್ತು ಸಿಇಒ,

ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ ಅಧ್ಯಕ್ಷರೆ,

ಇಲ್ಲಿ ಉಪಸ್ಥಿತರಿರುವ ಯುರೋಪಿನ ಗಣ್ಯ ಉದ್ಯಮ ನಾಯಕರೆ,

ಮಹಿಳೆಯರೆ ಮತ್ತು ಮಹನೀಯರೆ,

ನಮಸ್ಕಾರ!

ಮೊದಲನೆಯದಾಗಿ, ಈ ದುಂಡು ಮೇಜಿನ ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸ್ವೀಡನ್ ಪ್ರಧಾನಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಸಭೆ ಗೋಥೆನ್‌ಬರ್ಗ್‌ನಲ್ಲಿ ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇದು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ, ಯುರೋಪಿನ ಉತ್ಪಾದನಾ ಮನೋಭಾವದ ಚೈತನ್ಯಶೀಲ ಸಂಕೇತವಾಗಿಯೂ ನಿಂತಿದೆ.

ಸ್ನೇಹಿತರೆ,

ಯುರೋಪ್ ದುಂಡು ಮೇಜಿನ ಉದ್ಯಮದಂತಹ ವಿಶಿಷ್ಟ ವೇದಿಕೆ ಉದ್ದೇಶಿಸಿ ಮಾತನಾಡುವುದು ನನ್ನ ಪಾಲಿನ ಗೌರವವಾಗಿದೆ.

ನಾನು ನಿಮ್ಮಲ್ಲಿ ಕೆಲವರನ್ನು ಮೊದಲು ಭೇಟಿ ಮಾಡಿದ್ದೇನೆ, ಆದರೆ ನಾನು ಇಂದು ನಿಮ್ಮಲ್ಲಿ ಕೆಲವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ. ಆದರೆ ಒಂದು ವಿಷಯ ನಿಶ್ಚಿತ – ಅದೇನೆಂದರೆ, ನೀವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಾರತದೊಂದಿಗೆ ಸಂಪರ್ಕ ಹೊಂದಿದ್ದೀರಿ.

ಕೆಲವು ಉದ್ಯಮಿಗಳ ಉತ್ಪಾದನಾ ಕಾರ್ಯಾಚರಣೆಗಳು ಭಾರತದಲ್ಲಿ ನೆಲೆಗೊಂಡಿವೆ. ಇನ್ನೂ ಕೆಲವರ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಭಾರತದಲ್ಲಿವೆ. ಕೆಲವರು ಭಾರತದಲ್ಲಿ ತಮ್ಮ ಪ್ರತಿಭಾ ಜಾಲದ ನೆಲೆಯನ್ನು ಹೊಂದಿದ್ದರೆ, ಇನ್ನೂ ಕೆಲವರು ಭಾರತದೊಂದಿಗೆ ಪೂರೈಕೆ ಸರಪಳಿಗಳನ್ನು ಹೊಂದಿದ್ದಾರೆ. ನಿಮ್ಮಲ್ಲಿ ಹಲವರು ಭಾರತದಲ್ಲಿ ಪ್ರಮುಖ ಹೂಡಿಕೆಗಳನ್ನು ಮಾಡುತ್ತಿದ್ದೀರಿ. ಇಂದಿನ ಸಭೆಯು ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಂದು ಉತ್ತಮ ಅವಕಾಶವಾಗಿದೆ.

ಸ್ನೇಹಿತರೆ,

ಇಂದು ಭಾರತ ಮತ್ತು ಯುರೋಪ್ ನಡುವಿನ ಸಂಬಂಧಗಳು ಹೊಸ ತಿರುವು ಪಡೆದಿವೆ. ಸರ್ಕಾರಿ ಮಟ್ಟದಲ್ಲಿ ನಾವು ಮಹತ್ವಾಕಾಂಕ್ಷೆಯ ಮತ್ತು ಕಾರ್ಯತಂತ್ರ  ಕಾರ್ಯಸೂಚಿಯನ್ನು ಸ್ಥಾಪಿಸಿದ್ದೇವೆ.

ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಒಮ್ಮತಕ್ಕೆ ಬರಲಾಗಿದೆ. ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದಂತೆ, ಇದು ನಿಜವಾಗಿಯೂ "ಎಲ್ಲಾ ಒಪ್ಪಂದಗಳ ತಾಯಿಯಾಗಿದೆ". ಸಾಧ್ಯವಾದಷ್ಟು ಬೇಗ ಅದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ.

ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ, ಹಾಗೆಯೇ ಚಲನಶೀಲತೆ ಒಪ್ಪಂದವು ನಮ್ಮ ಸಹಕಾರಕ್ಕೆ ಹೊಸ ದಿಕ್ಕು ನೀಡಿದೆ. ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯು ನಮ್ಮ ಪಾಲುದಾರಿಕೆಗೆ ಹೊಸ ಸಾಂಸ್ಥಿಕ ಬಲ ಒದಗಿಸಿದೆ. ಭಾರತ ಮತ್ತು ಯುರೋಪ್ ಡಿಜಿಟಲ್ ತಂತ್ರಜ್ಞಾನಗಳು, ಪೂರೈಕೆ ಸರಪಳಿಗಳು ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ನಂತಹ ಐತಿಹಾಸಿಕ ಉಪಕ್ರಮಗಳು ಸಂಪರ್ಕ ಮತ್ತು ಆರ್ಥಿಕ ಏಕೀಕರಣವನ್ನು ವೇಗಗೊಳಿಸುತ್ತಿವೆ. ಹಸಿರು ಪರಿವರ್ತನೆ ಮತ್ತು ಸುಸ್ಥಿರ ಬೆಳವಣಿಗೆಗೆ ಸಂಬಂಧಿಸಿದಂತೆ ನಮ್ಮ ಚಿಂತನೆ ಮತ್ತು ಆದ್ಯತೆಗಳು ಸಹ ಹೊಂದಿಕೊಂಡಿವೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ದೊಡ್ಡ ಚಿತ್ರಣವನ್ನು ನೋಡಿದರೆ, ನಮ್ಮ ನಡುವೆ ಆಳವಾದ ರಾಜಕೀಯ, ಆರ್ಥಿಕ ಮತ್ತು ಕಾರ್ಯತಂತ್ರ ಒಮ್ಮುಖವಿದೆ. ಸಮತೋಲಿತ, ಸುರಕ್ಷಿತ ಮತ್ತು ಸುಸ್ಥಿರ ಜಗತ್ತಿಗೆ ಭಾರತ ಮತ್ತು ಯುರೋಪ್ ಕಾರ್ಯತಂತ್ರ ಪಾಲುದಾರರಾಗಿದ್ದೀವಿ.

ಆದರೆ ಸ್ನೇಹಿತರೆ,

ಸರ್ಕಾರಗಳು ಮಾರ್ಗಸೂಚಿ, ಸಾಂಸ್ಥಿಕ ಬೆಂಬಲ ಮತ್ತು ನೀತಿ ನಿರ್ದೇಶನವನ್ನು ಮಾತ್ರ ಒದಗಿಸಬಹುದು. ನಿಮ್ಮೆಲ್ಲರ ಪ್ರಯತ್ನಗಳ ಮೂಲಕ ಮಾತ್ರ ತಳಮಟ್ಟದಲ್ಲಿ ನಿಜವಾದ ಪರಿವರ್ತನೆಯನ್ನು ಸಾಧಿಸಬಹುದು. ಅದಕ್ಕಾಗಿಯೇ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವಂತೆ ನಿಮ್ಮನ್ನು ಆಹ್ವಾನಿಸಲು ನಾನು ಇಂದು ಇಲ್ಲಿದ್ದೇನೆ.

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ಇಂದು ಹೊಸ ಆತ್ಮವಿಶ್ವಾಸದೊಂದಿಗೆ ಮುಂದುವರಿಯುತ್ತಿದೆ. ಭಾರತವು 1.4 ಶತಕೋಟಿ ಆಕಾಂಕ್ಷೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ಯುವ ಜನಸಂಖ್ಯೆ, ವಿಸ್ತರಿಸುತ್ತಿರುವ ಮಧ್ಯಮ ವರ್ಗ ಮತ್ತು ತ್ವರಿತ ಮೂಲಸೌಕರ್ಯ ವಿಸ್ತರಣೆಯು ಭಾರತದ ಬೆಳವಣಿಗೆಗೆ ಹೊಸ ಆವೇಗವನ್ನು ನೀಡುತ್ತಿದೆ.

ಕಳೆದ 12 ವರ್ಷಗಳಲ್ಲಿ ಭಾರತವು "ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ" ಎಂಬ ಮಂತ್ರದೊಂದಿಗೆ ಮುಂದುವರೆದಿದೆ. ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಬೆಂಬಲದೊಂದಿಗೆ, ಈ ಸುಧಾರಣಾ ಅಭಿವ್ಯಕ್ತಿ ಪೂರ್ಣ ವೇಗದಲ್ಲಿ ಮುಂದುವರಿಯುತ್ತಿದೆ.

ಸರಕು ಮತ್ತು ಸೇವಾ ತೆರಿಗೆ ಭಾರತವನ್ನು "ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ" ಎಂಬ ದೃಷ್ಟಿಕೋನದತ್ತ ಕೊಂಡೊಯ್ದಿದೆ. ದಿವಾಳಿತನ ಮತ್ತು ಋಣಭಾರ ಸಂಹಿತೆಯು ವ್ಯಾಪಾರ ಸಂಸ್ಕೃತಿಗೆ ಹೆಚ್ಚಿನ ಹೊಣೆಗಾರಿಕೆ ತಂದಿದೆ. ಕಾರ್ಪೊರೇಟ್ ತೆರಿಗೆ ಸುಧಾರಣೆಗಳು ಉತ್ಪಾದನೆಯನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿವೆ.  ಜತೆಗೆ, ಕಾರ್ಮಿಕ ಸಂಹಿತೆಗಳು ಅನುಸರಣೆಯನ್ನು ಸರಳೀಕರಿಸಿವೆ ಮತ್ತು ಹೆಚ್ಚು ಪಾರದರ್ಶಕಗೊಳಿಸಿವೆ.

ಎಫ್‌ಡಿಐ ಸುಧಾರಣೆಗಳು ಹಲವಾರು ವಲಯಗಳನ್ನು ಜಾಗತಿಕ ಬಂಡವಾಳಕ್ಕೆ ತೆರೆದಿವೆ. ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ(ಪಿಎಲ್‌ಐ) ಯೋಜನೆಗಳು ಎಲೆಕ್ಟ್ರಾನಿಕ್ಸ್, ಔಷಧಗಳು, ಆಟೋ ಘಟಕಗಳು, ಸೌರ ಮಾಡ್ಯೂಲ್‌ಗಳು, ದೂರಸಂಪರ್ಕ ಮತ್ತು ಜವಳಿ ಮುಂತಾದ ಕ್ಷೇತ್ರಗಳಲ್ಲಿ ಬಲವಾದ ಉತ್ಪಾದನಾ ಆವೇಗ ಸೃಷ್ಟಿಸಿವೆ.

ನಾವು ತೆರಿಗೆ ಅನುಸರಣೆಗಳ ಹೊರೆ ಕಡಿಮೆ ಮಾಡಿದ್ದೇವೆ, ಸಾವಿರಾರು ಹಳೆಯ ನಿಯಮಗಳನ್ನು ರದ್ದುಗೊಳಿಸಿದ್ದೇವೆ. ವ್ಯವಹಾರ  ಸುಲಭಗೊಳಿಸುವುದನ್ನು ಆಡಳಿತದ ಅವಿಭಾಜ್ಯ ಅಂಗವನ್ನಾಗಿ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಉಪಕ್ರಮವು ಸಾರ್ವಜನಿಕ ಸೇವೆಗಳನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಪ್ರವೇಶಿಸುವಂತೆ ಮಾಡಿದೆ.

ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿದೆ. ನಮ್ಮ ನವೋದ್ಯಮಗಳು ಕೃತಕ ಬುದ್ಧಿಮತ್ತೆ, ಹಣಕಾಸು ತಂತ್ರಜ್ಞಾನ, ಬಾಹ್ಯಾಕಾಶ, ಡ್ರೋನ್‌ಗಳು, ಬಯೋಟೆಕ್, ಹವಾಮಾನ ತಂತ್ರಜ್ಞಾನ ಮತ್ತು ಚಲನಶೀಲತೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಇಂದು ಭಾರತವು ಪ್ರತಿಭೆ, ಪ್ರಮಾಣ, ಬೇಡಿಕೆ ಮತ್ತು ಸ್ಥಿರತೆಯನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತವು 1.4 ಶತಕೋಟಿ ಜನರ ದೃಢನಿಶ್ಚಯ ಮತ್ತು ಆಕಾಂಕ್ಷೆಗಳನ್ನು ಹೊಂದಿದೆ. ಅದಕ್ಕಾಗಿಯೇ ನಾವು ಉದ್ದೇಶದಿಂದ ಹೂಡಿಕೆಯತ್ತ ಸಾಗುವ ಸಮಯ ಈಗ ಬಂದಿದೆ.

ಈ ನಿಟ್ಟಿನಲ್ಲಿ, ನಾನು ನಿಮ್ಮ ಮುಂದೆ ಪಂಚ ಸಲಹೆಗಳನ್ನು ಇಡಲು ಬಯಸುತ್ತೇನೆ.

ಮೊದಲನೆಯದು: ಟೆಲಿಕಾಂ ಮತ್ತು ಡಿಜಿಟಲ್ ಮೂಲಸೌಕರ್ಯ. ವೊಡಾಫೋನ್, ಎರಿಕ್ಸನ್, ನೋಕಿಯಾ ಮತ್ತು ಆರೆಂಜ್‌ನಂತಹ ಕಂಪನಿಗಳು ಭಾರತದಲ್ಲಿ ವ್ಯಾಪಕ ಅನುಭವ ಹೊಂದಿವೆ. 5ಜಿಯಿಂದ 6ಜಿಗೆ ಪರಿವರ್ತನೆ, ಎಐ-ಸಕ್ರಿಯಗೊಳಿಸಿದ ಜಾಲಗಳು, ಸುರಕ್ಷಿತ ಸಂಪರ್ಕ ಮತ್ತು ಡಿಜಿಟಲ್ ಸೇರ್ಪಡೆಯಲ್ಲಿ ಭಾರತವು ಪ್ರಮುಖ ಪಾಲುದಾರನಾಗಬಹುದು. ಭಾರತವನ್ನು ಜಾಗತಿಕ ಸಂಶೋಧನೆ&ಅಭಿವೃದ್ಧಿ ಕೇಂದ್ರವನ್ನಾಗಿ ಮಾಡುವಲ್ಲಿ ನೀವೆಲ್ಲರೂ ಕೊಡುಗೆ ನೀಡಬಹುದು.

ಎರಡನೆಯದು: ಎಐ, ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಡೀಪ್-ಟೆಕ್ ಉತ್ಪಾದನೆ. ಎಎಸ್‌ಎಂಎಲ್, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್‌ಗಳು, ಎಸ್ಎಪಿ ಮತ್ತು ಕೇಪ್ ಜೆಮಿನಿಯಂತಹ ನಾಯಕರು ಇಂದು ಇಲ್ಲಿ ಉಪಸ್ಥಿತರಿದ್ದಾರೆ. ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಪರಿಪೂರ್ಣ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಪಾಲುದಾರರಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

ಭಾರತದ ದೃಷ್ಟಿಕೋನ ಸ್ಪಷ್ಟವಾಗಿದೆ: ತಾಂತ್ರಿಕ ನಾವೀನ್ಯತೆಯ ಮುಂದಿನ ಅಲೆಯನ್ನು ಭಾರತದಲ್ಲಿ ಸಹ-ಸೃಷ್ಟಿಸಬೇಕು.

ಮೂರನೆಯದು: ಹಸಿರು ಪರಿವರ್ತನೆ ಮತ್ತು ಸ್ವಚ್ಛ ಇಂಧನ. ಅನಿಶ್ಚಿತ ಜಾಗತಿಕ ಪರಿಸರದಲ್ಲಿ ಭಾರತವು ಇಂಧನ ಸುರಕ್ಷತೆ ಬಲಪಡಿಸುವ ಮತ್ತು ಸ್ವಚ್ಛ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವತ್ತ ಗಮನ ಹರಿಸುತ್ತಿದೆ. ಇಎನ್ ಜಿಐಇ, ಟೋಟಲ್ ಎನರ್ಜೀಸ್, ಶೆಲ್ ಮತ್ತು ಉಮಿಕೋರ್ ನಂತಹ ಕಂಪನಿಗಳು ಸ್ವಚ್ಛ ಇಂಧನ, ಹೈಡ್ರೋಜನ್, ಇಂಧನ ಸಂಗ್ರಹಣೆ, ವಿದ್ಯುತ್ ವಾಹನಗಳು ಮತ್ತು ಡಿಕಾರ್ಬೊನೈಸೇಶನ್‌ನಲ್ಲಿ ಜಾಗತಿಕ ನಾಯಕರಾಗಿದ್ದಾರೆ. ನೀವು ಭಾರತದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಬಹುದು.

ನಾಲ್ಕನೆಯದು: ಮೂಲಸೌಕರ್ಯ, ಚಲನಶೀಲತೆ ಮತ್ತು ನಗರ ಪರಿವರ್ತನೆ. ವೋಲ್ವೊ ಗ್ರೂಪ್, ಮೇರ್ಸ್ಕ್, ಏರ್‌ಬಸ್, ಸಾಬ್ ಎಬಿ, ಆರ್ಸೆಲರ್‌ಮಿತ್ತಲ್ ಮತ್ತು ಹೈಡೆಲ್‌ಬರ್ಗ್ - ಈ ಎಲ್ಲಾ ಕಂಪನಿಗಳ ಪರಿಣತಿಯು ಭಾರತದ ರೂಪಾಂತರದೊಂದಿಗೆ ನೇರವಾಗಿ ಹೊಂದಿಕೊಂಡಿವೆ. ಸುಸ್ಥಿರ ಸಿಮೆಂಟ್, ಹಸಿರು ಉಕ್ಕು, ಚಲನಶೀಲತೆ, ಸರಕು ಸಾಗಣೆ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ, ಭಾರತ ಮತ್ತು ಯುರೋಪ್ ನಡುವಿನ ಪಾಲುದಾರಿಕೆಯು ವಿಶ್ವ ದರ್ಜೆಯ ಫಲಿತಾಂಶಗಳನ್ನು ನೀಡಬಲ್ಲದು.

ಐದನೆಯದು: ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ. ಅಸ್ಟ್ರಾಜೆನೆಕಾ, ರೋಚೆ, ಮೆರ್ಕ್, ಫಿಲಿಪ್ಸ್, ನೆಸ್ಲೆ ಮತ್ತು ಯೂನಿಲಿವರ್‌ನಂತಹ ಕಂಪನಿಗಳು ಭಾರತದೊಂದಿಗೆ ದೀರ್ಘಕಾಲದ ಸಂಬಂಧ ಹಂಚಿಕೊಂಡಿವೆ. ಈಗ ನಾವು ಈ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು.

ಲಸಿಕೆಗಳು, ಕ್ಯಾನ್ಸರ್ ಆರೈಕೆ, ಡಿಜಿಟಲ್ ಆರೋಗ್ಯ, ಪೋಷಣೆ ಮತ್ತು ವೈದ್ಯಕೀಯ ಸಾಧನಗಳಲ್ಲಿ ಅಪಾರ ವ್ಯಾಪ್ತಿಯ ಅವಕಾಶಗಳು ಇವೆ. ನೀವು "ಭಾರತಕ್ಕಾಗಿ ವಿನ್ಯಾಸ, ಭಾರತದಲ್ಲಿ ತಯಾರಿಸಿ ಮತ್ತು ಭಾರತದಿಂದ ರಫ್ತು ಮಾಡಿ" ಮಾದರಿಯೊಂದಿಗೆ ಮುಂದುವರಿಯಬಹುದು.

ಸಮಯದ ನಿರ್ಬಂಧಗಳಿಂದಾಗಿ, ಇಲ್ಲಿ ಇರುವ ಪ್ರತಿಯೊಂದು ಕಂಪನಿಯನ್ನು ನಾನು ಉಲ್ಲೇಖಿಸಲು ಸಾಧ್ಯವಾಗುತ್ತಿಲ್ಲ, ಆದರೆ ಭಾರತದಲ್ಲಿರುವ ಅವಕಾಶಗಳಿಗೆ ಎಲ್ಲರಿಗೂ ನನ್ನ ಆಹ್ವಾನವನ್ನು ನಿಮ್ಮೆಲ್ಲರಿಗೂ ವಿಸ್ತರಿಸುತ್ತೇನೆ.

ಸ್ನೇಹಿತರೆ,

ಈ ಸಲಹೆಗಳನ್ನು ನಿಮ್ಮ ಮುಂದೆ ಇಟ್ಟ ನಂತರ, ನಾನು ಒಂದು ಸವಾಲನ್ನು ಸಹ ಮುಂದಿಡಲು ಬಯಸುತ್ತೇನೆ. ಇಲ್ಲಿ ಹಾಜರಿರುವ ಪ್ರತಿಯೊಂದು ಕಂಪನಿಯು ಭಾರತದ ಕಡೆಗೆ ಹೊಸ ಪ್ರಮುಖ ಬದ್ಧತೆಯನ್ನು ಮಾಡಬಹುದೇ? ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪ್ರಾರಂಭವಾಗಲಿರುವ ಪ್ರಮುಖ ಯೋಜನೆಗಳನ್ನು ನಾವು ಗುರುತಿಸಬಹುದೇ?

ಈ ಎಲ್ಲಾ ಯೋಜನೆಗಳ ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಈ ಉಪಕ್ರಮಗಳ ನಿಯಮಿತ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ನಾವು ಸಾಂಸ್ಥಿಕ ಕಾರ್ಯವಿಧಾನವನ್ನು ಸಹ ಸ್ಥಾಪಿಸಬಹುದು.

ಸ್ನೇಹಿತರೆ,

ನಾವು ಪ್ರತಿ ವರ್ಷಕ್ಕೊಮ್ಮೆ ಭಾರತ-ಯುರೋಪ್ ಸಿಇಒ ದುಂಡುಮೇಜಿನ ಸಭೆ ಆಯೋಜಿಸಬಹುದು. ಭಾರತ ಮತ್ತು ಯುರೋಪ್ ಎರಡರಿಂದಲೂ ಕೈಗಾರಿಕಾ ಸಂಸ್ಥೆಗಳನ್ನು ಈ ವೇದಿಕೆಯೊಂದಿಗೆ ಸಂಯೋಜಿಸಬಹುದು ಮತ್ತು ವಲಯ-ನಿರ್ದಿಷ್ಟ ಕಾರ್ಯ ಗುಂಪುಗಳನ್ನು ಸಹ ಸ್ಥಾಪಿಸಬಹುದು.

ಯುರೋಪ್ ದುಂಡುಮೇಜಿನ ಕೈಗಾರಿಕಾ ಸಭೆಯಲ್ಲಿ ಭಾರತ ಮೇಜು ಅಥವಾ ಭಾರತ ಕ್ರಿಯಾ ಗುಂಪನ್ನು ರಚಿಸಬೇಕೆಂದು ನಾನು ಸೂಚಿಸುತ್ತೇನೆ. ಇದರ ಆದೇಶ ಸರಳವಾಗಿರಬಹುದು. ಭಾರತದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳ ವಿಸ್ತರಣೆಯನ್ನು ಬೆಂಬಲಿಸುವುದು, ಭಾರತದಲ್ಲಿ ಹೂಡಿಕೆ ಮಾಡಲು ಬಯಸುವ ಹೊಸ ಕಂಪನಿಗಳ ಪ್ರವೇಶವನ್ನು ಸುಗಮಗೊಳಿಸುವುದು ಮತ್ತು ವ್ಯಾಪಾರ ಕಾಳಜಿಗಳನ್ನು ಪೂರ್ವಭಾವಿಯಾಗಿ ಪರಿಹರಿಸುವುದು.

ಸ್ನೇಹಿತರೆ,

ಭಾರತ ಮತ್ತು ಯುರೋಪ್ ನಡುವಿನ ಪಾಲುದಾರಿಕೆಯು ಕೇವಲ ಆರ್ಥಿಕ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಇದು ಹಂಚಿಕೆಯ ಮೌಲ್ಯಗಳನ್ನು ಆಧರಿಸಿದ ಪಾಲುದಾರಿಕೆಯಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ಪಾಲುದಾರಿಕೆಯಾಗಿದೆ. ಇದು ನಂಬಿಕೆ ಮತ್ತು ಪಾರದರ್ಶಕತೆಯ ಪಾಲುದಾರಿಕೆಯಾಗಿದೆ. ಇದು ನಾವೀನ್ಯತೆ ಮತ್ತು ಸೇರ್ಪಡೆಯ ಪಾಲುದಾರಿಕೆಯಾಗಿದೆ.

ಜಗತ್ತು ಅನಿಶ್ಚಯವನ್ನು ಎದುರಿಸುತ್ತಿರುವ ಸಮಯದಲ್ಲಿ, ಪೂರೈಕೆ ಸರಪಳಿಗಳು ಒತ್ತಡದಲ್ಲಿವೆ. ತಾಂತ್ರಿಕ ಸ್ಪರ್ಧೆ ತೀವ್ರಗೊಳ್ಳುತ್ತಿದೆ, ಇಂಧನ ಭದ್ರತೆ ಮತ್ತು ಹವಾಮಾನ ಕ್ರಿಯೆ ಎರಡೂ ಸವಾಲು ಎದುರಿಸುತ್ತಿರುವ ಸಮಯದಲ್ಲಿ, ಭಾರತ ಮತ್ತು ಯುರೋಪ್ ಒಟ್ಟಾಗಿ ಸ್ಥಿರತೆ, ಸುಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯ ಬಲವಾದ ಆಧಾರಸ್ತಂಭಗಳಾಗಿ ಹೊರಹೊಮ್ಮಬಹುದು.

ಈ ಉತ್ಸಾಹದಿಂದ, ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪಾಲುದಾರರಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಗೋಥೆನ್‌ಬರ್ಗ್‌ನಲ್ಲಿ ಇಂದು ಪ್ರಾರಂಭವಾಗುವ ಸಂವಾದವು ಮುಂಬರುವ ವರ್ಷಗಳಲ್ಲಿ ಭಾರತ ಮತ್ತು ಯುರೋಪ್ ನಡುವಿನ ಕೈಗಾರಿಕಾ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ಬರೆಯುತ್ತದೆ ಎಂಬ ವಿಶ್ವಾಸ ನನಗಿದೆ.

ಇಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಈ ಶೃಂಗಸಭೆಯಲ್ಲಿ ನಿಮ್ಮೊಂದಿಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
103 Cr Internet Connections, 66 Cr Daily UPI Transactions: PM Modi Highlights Digital India Impact At 11

Media Coverage

103 Cr Internet Connections, 66 Cr Daily UPI Transactions: PM Modi Highlights Digital India Impact At 11
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam emphasizing that continuous effort is the true key to success
July 02, 2026

The Prime Minister, Shri Narendra Modi, shared a Sanskrit Subhashitam:

“नानाश्रान्ताय श्रीरस्तीति रोहित शुश्रुम।

पापो नृषद्वरो जन इन्द्र इच्चरतः सखा चरैवेति॥"

The Subhashitam emphasizes that continuous effort is the true key to success, and in life, only that person reaches their goal who keeps moving forward with patience, determination, and self-confidence.

The Prime Minister wrote on X;

निरंतर प्रयास ही सफलता की असली कुंजी है। जीवन में वही व्यक्ति अपने लक्ष्य तक पहुंचता है, जो धैर्य, दृढ़ संकल्प और आत्मविश्वास के साथ आगे बढ़ता रहता है।

नानाश्रान्ताय श्रीरस्तीति रोहित शुश्रुम।

पापो नृषद्वरो जन इन्द्र इच्चरतः सखा चरैवेति॥