ʻಜನಪರ-ಸಕ್ರಿಯ-ಉತ್ತಮ ಆಡಳಿತʼ(ಪಿ2ಜಿ2) ನಮ್ಮ ಕೆಲಸದ ಕೇಂದ್ರಬಿಂದುವಾಗಿದೆ, ಅದರ ಮೂಲಕ ನಾವು ʻವಿಕಸಿತ ಭಾರತʼದ ಆಶಯವನ್ನು ಸಾಧಿಸಬಹುದು: ಪ್ರಧಾನಮಂತ್ರಿ
ನಾಗರಿಕರಿಗೆ ಕಿರುಕುಳಕ್ಕೆ ಕಾರಣವಾಗುವ ಕಡ್ಡಾಯ ಅನುಸರಣೆಗಳನ್ನು ಸರಳೀಕರಿಸುವಂತೆ ರಾಜ್ಯಗಳಿಗೆ ಪ್ರಧಾನಮಂತ್ರಿ ಮನವಿ
ಇ-ತ್ಯಾಜ್ಯದ ಮರುಬಳಕೆಗೆ ʻಕಾರ್ಯಸಾಧ್ಯತೆ ಅಂತರ ನಿಧಿʼಯ ಪರಿಕಲ್ಪನೆಗಳನ್ನು ಅನ್ವೇಷಿಸಲು ರಾಜ್ಯಗಳಿಗೆ ಪ್ರಧಾನಮಂತ್ರಿ ನಿರ್ದೇಶನ
ಸಣ್ಣ ನಗರಗಳಲ್ಲಿ ಉದ್ಯಮಿಗಳಿಗೆ ಸೂಕ್ತವಾದ ಸ್ಥಳಗಳನ್ನು ಗುರುತಿಸುವಂತೆ ಮತ್ತು ಅವರಿಗೆ ಅನುಕೂಲವಾಗುವಂತೆ ಉಪಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಪ್ರಧಾನಮಂತ್ರಿ ಮನವಿ
ʻಪಿಎಂ ಗತಿಶಕ್ತಿʼ ಉತ್ತಮ ಆಡಳಿತಕ್ಕೆ ಪ್ರಮುಖ ಪಾತ್ರ ವಹಿಸಿದೆ; ಅದನ್ನು ನಿಯಮಿತವಾಗಿ ನವೀಕರಿಸಬೇಕು ಜೊತೆಗೆ, ಪರಿಸರ ಪರಿಣಾಮಗಳು, ವಿಪತ್ತು ಪೀಡಿತ ಪ್ರದೇಶಗಳ ಸೂಚಕಗಳನ್ನು ಸಹ ಇದರಲ್ಲಿ ಸೇರಿಸಬೇಕು: ಪ್ರಧಾನಮಂತ್ರಿ
ಹಳೆಯ ಹಸ್ತಪ್ರತಿಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವುಗಳನ್ನು ಡಿಜಿಟಲೀಕರಣಗೊಳಿಸಲು ತಂತ್ರಜ್ಞಾನವನ್ನು ಬಳಸಲು ಕರೆ ನೀಡಿದರು
ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆ ಮತ್ತು ಮಾಹಿತಿಯತ್ತ ಗಮನ ಹರಿಸಿ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಇಂದು ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ 4ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು. ಮೂರು ದಿನಗಳ ಸಮ್ಮೇಳನವು 2024ರ ಡಿಸೆಂಬರ್ 13 ರಿಂದ 15 ರವರೆಗೆ ದೆಹಲಿಯಲ್ಲಿ ನಡೆಯಿತು.

ಈ ಸಮ್ಮೇಳನದ ಹೆಚ್ಚಿನ ಪ್ರಯೋಜನವೆಂದರೆ ʻಟೀಮ್ ಇಂಡಿಯಾ’ ಮುಕ್ತ ಮನಸ್ಸಿನಿಂದ ಚರ್ಚಿಸಲು ಮತ್ತು ʻವಿಕಸಿತ ಭಾರತʼಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಒಗ್ಗೂಡಿದೆ ಎಂದು ಪ್ರಧಾನಿ ಹೇಳಿದರು.

ʻಜನಪರ-ಸಕ್ರಿಯ-ಉತ್ತಮ ಆಡಳಿತʼವು(ಪಿ2ಜಿ2) ನಮ್ಮ ಕೆಲಸದ ಕೇಂದ್ರಬಿಂದುವಾಗಿದ್ದು, ಅದರ ಮೂಲಕ ನಾವು ʻವಿಕಸಿತ ಭಾರತʼದ ದೃಷ್ಟಿಕೋನವನ್ನು ಸಾಧಿಸಬಹುದು ಎಂದು ಪ್ರಧಾನಿ ಹೇಳಿದರು.

ಸಮ್ಮೇಳನವು 'ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯ ಉತ್ತೇಜನ- ಜನಸಂಖ್ಯಾ ಲಾಭವನ್ನು ಹೆಚ್ಚಿಸುವುದು' ಎಂಬ ವಿಷಯದ ಬಗ್ಗೆ ಚರ್ಚೆಗಳನ್ನು ಒಳಗೊಂಡಿತ್ತು.

ನವೋದ್ಯಮಗಳ ಆಗಮನವನ್ನು ವಿಶೇಷವಾಗಿ ಶ್ರೇಣಿ 2/3 ನಗರಗಳಲ್ಲಿ ಅವುಗಳ ಉಗಮವನ್ನು ಪ್ರಧಾನಿ ಶ್ಲಾಘಿಸಿದರು. ಇಂತಹ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವಂತೆ ಮತ್ತು ನವೋದ್ಯಮಗಳು ಪ್ರವರ್ಧಮಾನಕ್ಕೆ ಬರುವ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅವರು ರಾಜ್ಯಗಳಿಗೆ ಕರೆ ನೀಡಿದರು. ಸಣ್ಣ ನಗರಗಳಲ್ಲಿ ಉದ್ಯಮಿಗಳಿಗೆ ಸೂಕ್ತವಾದ ಸ್ಥಳಗಳನ್ನು ಗುರುತಿಸುವಂತೆ ಹಾಗೂ ಅವುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು, ಸರಕು-ಸಾಗಣೆ ವ್ಯವಸ್ಥೆ ಕಲ್ಪಿಸಲು ಮತ್ತು ಅವರಿಗೆ ಅನುಕೂಲವಾಗುವ ತೆಗೆದುಕೊಳ್ಳುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು.

 

ನಾಗರಿಕರ ಕಿರುಕುಳಕ್ಕೆ ಕಾರಣವಾಗುವ ಅನಗತ್ಯ ಅನುಸರಣೆಗಳನ್ನು ಸರಳೀಕರಿಸುವಂತೆ ಪ್ರಧಾನಿ ರಾಜ್ಯಗಳಿಗೆ ಸೂಚಿಸಿದರು. ನಾಗರಿಕರ ಪಾಲ್ಗೊಳ್ಳುವಿಕೆ ಅಥವಾ ಜನ ಭಾಗೀದಾರಿಯನ್ನು ಉತ್ತೇಜಿಸುವ ರೀತಿಯಲ್ಲಿ ರಾಜ್ಯಗಳು ಆಡಳಿತ ಮಾದರಿಯನ್ನು ಸುಧಾರಿಸಬೇಕು ಎಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಒತ್ತಾಯಿಸಿದರು. ʻಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆʼಯ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ ಮತ್ತು ಸರ್ಕಾರದ ವಿವಿಧ ಉಪಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದು ಸಹ ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ಪರಿವೃತ್ತ ಆರ್ಥಿಕತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಗೋಬರ್ಧನ್ʼ ಕಾರ್ಯಕ್ರಮವನ್ನು ಈಗ ದೊಡ್ಡ ಇಂಧನ ಸಂಪನ್ಮೂಲವಾಗಿ ನೋಡಲಾಗುತ್ತಿದೆ ಎಂದು ಶ್ಲಾಘಿಸಿದರು. ಈ ಉಪಕ್ರಮವು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುತ್ತದೆ ಮತ್ತು ವಯಸ್ಸಾದ ಜಾನುವಾರುಗಳನ್ನು ಆಸ್ತಿಯನ್ನಾಗಿ ಮಾಡುತ್ತದೆ ಎಂದು ಅವರು ಗಮನ ಸೆಳೆದರು.

ಇ-ತ್ಯಾಜ್ಯದ ಮರುಬಳಕೆಗಾಗಿ ʻಕಾರ್ಯಸಾಧ್ಯತೆ ಅಂತರ ನಿಧಿʼಯ ಪರಿಕಲ್ಪನೆಗಳನ್ನು ಅನ್ವೇಷಿಸುವಂತೆ ಪ್ರಧಾನಿಯವರು ರಾಜ್ಯಗಳಿಗೆ ನಿರ್ದೇಶನ ನೀಡಿದರು. ಹೆಚ್ಚುತ್ತಿರುವ ಅಂತರ್ಜಾಲ ಮತ್ತು ತಂತ್ರಜ್ಞಾನ ಚಾಲಿತ ಸಮಾಜದೊಂದಿಗೆ, ಡಿಜಿಟಲ್ ತ್ಯಾಜ್ಯವು ಮತ್ತಷ್ಟು ಹೆಚ್ಚಾಗುವುದರಿಂದ ಇದು ವಿಶೇಷವಾಗಿ ಮುಖ್ಯವಾಗಿದೆ ಎಂದರು. ಈ
ಇ-ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸುವುದರಿಂದ ಅಂತಹ ವಸ್ತುಗಳ ಆಮದಿನ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ʻಫಿಟ್ ಇಂಡಿಯಾʼ ಆಂದೋಲನದ ಅಡಿಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆಯನ್ನು ದೊಡ್ಡ ಸವಾಲಾಗಿ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಒತ್ತಾಯಿಸಿದರು. ಸದೃಢ ಮತ್ತು ಆರೋಗ್ಯವಂತ ಭಾರತ ಮಾತ್ರ ʻವಿಕಸಿತ ಭಾರತʼವಾಗಲು ಸಾಧ್ಯ ಎಂದು ಅವರು ಹೇಳಿದರು. 2025ರ ಅಂತ್ಯದ ವೇಳೆಗೆ ಭಾರತವನ್ನು ಕ್ಷಯ ಮುಕ್ತಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ಗುರಿಯನ್ನು ತಲುಪಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ದೊಡ್ಡ ಪಾತ್ರ ವಹಿಸಬಹುದು ಎಂದು ಅವರು ಹೇಳಿದರು.

 

ಹಳೆಯ ಹಸ್ತಪ್ರತಿಗಳು ಭಾರತದ ಸಂಪತ್ತು ಮತ್ತು ಅದನ್ನು ಡಿಜಿಟಲೀಕರಣಗೊಳಿಸಲು ತಂತ್ರಜ್ಞಾನವನ್ನು ಬಳಸಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಉತ್ತಮ ಆಡಳಿತಕ್ಕೆ ʻಪಿಎಂ ಗತಿಶಕ್ತಿʼ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದ ಅವರು, ʻಪಿಎಂ ಗತಿಶಕ್ತಿʼಯನ್ನು ನಿಯಮಿತವಾಗಿ ನವೀಕರಿಸಬೇಕು ಮತ್ತು ಪರಿಸರ ಪರಿಣಾಮಗಳು, ವಿಪತ್ತು ಪೀಡಿತ ಪ್ರದೇಶಗಳ ಸೂಚಕಗಳನ್ನು ಸಹ ಇದರಲ್ಲಿ ಸೇರಿಸಬೇಕು ಎಂದು ಹೇಳಿದರು.

ʻಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಕ್ಷೇತ್ರಗಳುʼ(ಬ್ಲಾಕ್‌) ಕಾರ್ಯಕ್ರಮದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಕ್ಷೇತ್ರಗಳು ಮತ್ತು ಜಿಲ್ಲೆಗಳಲ್ಲಿ ನೇಮಕಗೊಂಡಿರುವ ಸಮರ್ಥ ಅಧಿಕಾರಿಗಳು ತಳಮಟ್ಟದಲ್ಲಿ ಭಾರಿ ಬದಲಾವಣೆಗಳನ್ನು ತರಬಹುದು ಎಂದರು. ಇದು ಅಪಾರ ಸಾಮಾಜಿಕ-ಆರ್ಥಿಕ ಪ್ರಯೋಜನಗಳಿಗೆ ಕಾರಣವಾಗುತ್ತದೆ ಎಂದರು.

ನಗರಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಗರಗಳನ್ನು ಆರ್ಥಿಕ ಬೆಳವಣಿಗೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ನಗರ ಆಡಳಿತ, ನೀರು ಮತ್ತು ಪರಿಸರ ನಿರ್ವಹಣೆಯಲ್ಲಿ ಪರಿಣತಿಗಾಗಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಅವರು ಒತ್ತು ನೀಡಿದರು. ಹೆಚ್ಚುತ್ತಿರುವ ನಗರ ಚಲನಶೀಲತೆಯೊಂದಿಗೆ, ಸಾಕಷ್ಟು ನಗರ ವಸತಿಗಳನ್ನು ಸಹ ಒದಗಿಸಲು ಒತ್ತು ನೀಡಬೇಕು ಎಂದು ಅವರು ಹೇಳಿದರು, ಇದು ಹೊಸ ಕೈಗಾರಿಕಾ ಕೇಂದ್ರಗಳಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ಉತ್ಪಾದಕತೆಗೆ ಕಾರಣವಾಗುತ್ತದೆ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಎಲ್ಲ ನಾಗರಿಕ ಸೇವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಅವರಿಗೆ ಗೌರವ ನಮನ ಸಲ್ಲಿಸಿದರು. ಇಂದು ಅವರ ಪುಣ್ಯತಿಥಿ ಮತ್ತು ಈ ವರ್ಷ ಅವರ 150ನೇ ಜನ್ಮ ದಿನಾಚರಣೆಯಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ಮುಂದಿನ ಎರಡು ವರ್ಷಗಳನ್ನು ವಿಶೇಷವಾಗಿ ಆಚರಿಸಬೇಕು ಮತ್ತು ಭಾರತದ ಬಗ್ಗೆ ಅವರ ಕನಸನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು.

 

ʻವಿಕಸಿತ ಭಾರತʼದ ಭಾರತದ ಗುರಿಯನ್ನು ಸಾಧಿಸುವಲ್ಲಿ ಪ್ರತಿಯೊಬ್ಬ ಭಾರತೀಯ  ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಸ್ವಾತಂತ್ರ್ಯ ಚಳವಳಿಯ ಉದಾಹರಣೆಯನ್ನು ಅನುಸರಿಸುವಂತೆ ಅವರು ಒತ್ತಾಯಿಸಿದರು. ವಿಭಿನ್ನ ಪರಿಸ್ಥಿತಿಗಳು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ವಿಭಿನ್ನ ವಿಧಾನಗಳ ಹೊರತಾಗಿಯೂ ಎಲ್ಲಾ ವರ್ಗದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.  ಅದೇ ರೀತಿ ಪ್ರತಿಯೊಬ್ಬ ಭಾರತೀಯನು 2047ರ ವೇಳೆಗೆ ʻವಿಕಸಿತ ಭಾರತʼವನ್ನು ಸಾಧಿಸಲು ಕೆಲಸ ಮಾಡಬೇಕು. ʻದಂಡಿ ಯಾತ್ರೆʼಯ 25 ವರ್ಷಗಳ ನಂತರ ಭಾರತ ಸ್ವತಂತ್ರವಾಯಿತು, ಅದು ಆ ಕಾಲದಲ್ಲಿ ನಡೆದ ಬೃಹತ್ ಕ್ರಾಂತಿಯಾಗಿತ್ತು ಎಂದು ಉಲ್ಲೇಖಿಸಿದ ಪ್ರಧಾನಿ, ಅದೇ ರೀತಿ ನಾವು 2047ರ ವೇಳೆಗೆ ʻವಿಕಸಿತ ಭಾರತʼ ಸಾಧನೆ ಮಾಡಲು ನಿರ್ಧರಿಸಿದರೆ, ನಾವೂ ಸಹ ಖಂಡಿತವಾಗಿಯೂ ʻವಿಕಸಿತʼ ಆಗುತ್ತೇವೆ ಎಂದರು.

ಮೂರು ದಿನಗಳ ಸಮ್ಮೇಳನವು ಉತ್ಪಾದನೆ, ಸೇವೆಗಳು, ಗ್ರಾಮೀಣ ಕೃಷಿಯೇತರ, ನಗರ, ನವೀಕರಿಸಬಹುದಾದ ಇಂಧನ ಮತ್ತು ಪರಿವೃತ್ತ ಆರ್ಥಿಕತೆ ಸೇರಿದಂತೆ ವಿಶೇಷ ವಿಷಯಗಳಿಗೆ ಒತ್ತು ನೀಡಿತು.

ಸಮ್ಮೇಳನದಲ್ಲಿ ಚರ್ಚೆ

ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ, ಕೌಶಲ್ಯ ಉಪಕ್ರಮಗಳನ್ನು ಹೆಚ್ಚಿಸುವಲ್ಲಿ ಮತ್ತು ಗ್ರಾಮೀಣ ಮತ್ತು ನಗರ ಜನಸಂಖ್ಯೆಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಸಹಯೋಗದ ಕ್ರಮಕ್ಕೆ ನೆರವಾಗುವ ವಿಷಯಗಳ ಮೇಲೆ ಕೆಲಸ ಮಾಡುವ ಬಗ್ಗೆ ಅಧಿವೇಶನಗಳಲ್ಲಿ ಚರ್ಚಿಸಲಾಯಿತು. ಈ ಉಪಕ್ರಮಗಳು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಅಡಿಪಾಯವಾಗಿಟ್ಟುಕೊಂಡು ಆರ್ಥಿಕತೆಯ ಚಾಲನಾ ಚಕ್ರಗಳಾಗಿ ಹೊರಹೊಮ್ಮಬಹುದು.

ಭಾರತದ ಸೇವಾ ವಲಯದ ಸಾಮರ್ಥ್ಯವನ್ನು, ವಿಶೇಷವಾಗಿ ಸಣ್ಣ ನಗರಗಳಲ್ಲಿ ಬಳಸಿಕೊಳ್ಳಲು ಬಹುಮುಖಿ ವಿಧಾನದ ಅಗತ್ಯವಿದೆ ಎಂದು ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಇದು ನೀತಿ ಮಧ್ಯಸ್ಥಿಕೆಗಳು, ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯ ವರ್ಧನೆ ಮತ್ತು ವ್ಯಾಪಾರ ಸ್ನೇಹಿ ವಾತಾವರಣವನ್ನು ಸೃಷ್ಟಿಸುವತ್ತ ಗಮನ ಹರಿಸುವುದನ್ನು ಒಳಗೊಂಡಿದೆ. ಅನೌಪಚಾರಿಕ ವಲಯದ ಕೌಶಲ್ಯವೃದ್ಧಿಗಾಗಿ ಮತ್ತು ಅದನ್ನು ಔಪಚಾರಿಕವಾಗಿಸಲು ಒತ್ತು ನೀಡುವ ಬಗ್ಗೆಯೂ ಚರ್ಚಿಸಲಾಯಿತು. ಅದೇ ರೀತಿ ಗ್ರಾಮೀಣ ಕೃಷಿಯೇತರ ವಲಯದಲ್ಲಿ, ನಿರ್ದಿಷ್ಟ ಕೌಶಲ್ಯ ಕೋರ್ಸ್‌ಗಳ ಮೂಲಕ ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಬೇಕು ಎಂದು ಚರ್ಚಿಸಲಾಯಿತು. ಕೃಷಿಯೇತರ ಉದ್ಯೋಗಗಳಲ್ಲಿ ಮಹಿಳೆಯರು ಮತ್ತು ಅಂಚಿನಲ್ಲಿರುವ ಗುಂಪುಗಳ ಭಾಗವಹಿಸುವಿಕೆಯನ್ನು ವಿಶೇಷ ಪ್ರೋತ್ಸಾಹಕಗಳ ಮೂಲಕ ಉತ್ತೇಜಿಸಬೇಕು ಎಂದು ಸಹ ಅಭಿಪ್ರಾಯಪಡಲಾಯಿತು.

 

ವ್ಯವಸ್ಥಿತ ಬದಲಾವಣೆಗೆ ಚಾಲನೆ ನೀಡುವ ಜೊತೆಗೆ, ಕಠಿಣ ಪರಿಶೀಲನೆಗಳ ಮೂಲಕ ಮೂಲಸೌಕರ್ಯ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿರುವ ʻಪ್ರಗತಿʼ(PRAGATI) ವೇದಿಕೆಯ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚಿಸಲಾಯಿತು.

ಸಮ್ಮೇಳನವು ʻಫ್ರಾಂಟಿಯರ್ ಟೆಕ್ನಾಲಜೀಸ್ʼ ಕುರಿತ ವಿಶೇಷ ಅಧಿವೇಶನವನ್ನು ಒಳಗೊಂಡಿತ್ತು. ಇದು ವಿವಿಧ ಕ್ಷೇತ್ರಗಳ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ಭಾರತಕ್ಕೆ ಈ ರಂಗದಲ್ಲಿ ಮುನ್ನಡೆಯಲು ಮತ್ತು ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರ ಬೆಳವಣಿಗೆಯ ಪಥವನ್ನು ಹೊಂದಲು ಅವಕಾಶವನ್ನು ಒದಗಿಸುತ್ತದೆ. ʻಕರ್ಮಯೋಗಿʼ ಕುರಿತ ಮತ್ತೊಂದು ವಿಶೇಷ ಅಧಿವೇಶನದಲ್ಲಿ, ಇದು ಕಲಿಕೆಯ ಪ್ರಜಾಪ್ರಭುತ್ವೀಕರಣ, ನಾಗರಿಕ ಕೇಂದ್ರಿತ ಕಾರ್ಯಕ್ರಮಗಳಲ್ಲಿ ರಾಜ್ಯಗಳಿಗೆ ಸಹಾಯ ಮಾಡುತ್ತದೆ, ಆ ಮೂಲಕ ಸಾಮರ್ಥ್ಯ ವರ್ಧನೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಚರ್ಚಿಸಲಾಯಿತು.

ಸಮ್ಮೇಳನದಲ್ಲಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು, ಕ್ಷೇತ್ರ ತಜ್ಞರು ಮತ್ತು ಕೇಂದ್ರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
As Naxalism ends in Chhattisgarh, village gets tap water for first time

Media Coverage

As Naxalism ends in Chhattisgarh, village gets tap water for first time
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಎಪ್ರಿಲ್ 2026
April 13, 2026

Nari Shakti, 7% Growth & Global Respect: PM Modi Leadership Formula India is Celebrating