ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಗೌರವಾನ್ವಿತ ಡೊನಾಲ್ಡ್ ಜೆ. ಟ್ರಂಪ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 2025ರ ಫೆಬ್ರವರಿ 13ರಂದು ವಾಷಿಂಗ್ಟನ್ ಡಿಸಿಯಲ್ಲಿ ಅಧಿಕೃತ ಭೇಟಿಗಾಗಿ ಆತಿಥ್ಯ ವಹಿಸಿದರು.

ಸಾರ್ವಭೌಮ ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳ ನಾಯಕರಾಗಿ, ಸ್ವಾತಂತ್ರ್ಯ, ಕಾನೂನಿನ ನಿಯಮ, ಮಾನವ ಹಕ್ಕುಗಳು ಮತ್ತು ಬಹುತ್ವವಾದವನ್ನು ಮೌಲ್ಯಯುತವಾಗಿ ಪರಿಗಣಿಸುವ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಮಂತ್ರಿ ಮೋದಿ ಅವರು, ಪರಸ್ಪರ ವಿಶ್ವಾಸ, ಹಂಚಿಕೊಂಡ ಹಿತಾಸಕ್ತಿಗಳು,  ಸದ್ಭಾವನೆ ಮತ್ತು ತಮ್ಮ ನಾಗರಿಕರ ಬಲವಾದ ಬದ್ಧತೆಯ ಆಧಾರದ ಮೇಲೆ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಬಲವನ್ನು ಪುನರುಚ್ಚರಿಸಿದ್ದಾರೆ. 

ಇಂದು, ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು "21ನೇ ಶತಮಾನಕ್ಕೆ ಅಮೆರಿಕ-ಭಾರತ ಕಾಂಪ್ಯಾಕ್ಟ್ (ಮಿಲಿಟರಿ ಸಹಭಾಗಿತ್ವ, ತ್ವರಿತ ವಾಣಿಜ್ಯ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ) ಎಂಬ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಕಾರದ ಮುಖ್ಯ ಕ್ಷೇತ್ರಗಳಲ್ಲಿ ಪರಿವರ್ತನೆಯನ್ನು ತರುವ ಉದ್ದೇಶ ಇದಕ್ಕಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಪರಸ್ಪರ ಲಾಭದಾಯಕ ಸಹಭಾಗಿತ್ವದ ಮೇಲಿನ ನಂಬಿಕೆಯನ್ನು ತೋರಿಸಲು, ಈ ವರ್ಷದ ಆರಂಭದಲ್ಲಿಯೇ ಫಲಿತಾಂಶಗಳನ್ನು ನೀಡುವ ಗುರಿಯನ್ನು ಹೊಂದಿರುವ ಕಾರ್ಯಸೂಚಿಗೆ ಅವರು ಬದ್ಧರಾಗಿದ್ದಾರೆ.

ರಕ್ಷಣೆ

ಅಮೆರಿಕ ಮತ್ತು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳು ಒಂದಕ್ಕೊಂದು ಹತ್ತಿರವಾಗುತ್ತಿರುವುದನ್ನು ಒತ್ತಿ ಹೇಳಿದ ನಾಯಕರು, ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿರುವ ಬಲವಾದ ರಕ್ಷಣಾ ಸಹಭಾಗಿತ್ವಕ್ಕೆ ತಾವು ಬದ್ಧರಾಗಿರುವುದನ್ನು ಪುನರುಚ್ಚರಿಸಿದರು. ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು, 21ನೇ ಶತಮಾನದಲ್ಲಿ ಅಮೆರಿಕ-ಭಾರತ ಪ್ರಮುಖ ರಕ್ಷಣಾ ಸಹಭಾಗಿತ್ವಕ್ಕಾಗಿ ಹೊಸ ಹತ್ತು ವರ್ಷಗಳ ಕಾರ್ಯಸೂಚಿಗೆ ಈ ವರ್ಷ ಸಹಿ ಹಾಕಲು ನಾಯಕರು ಯೋಜಿಸಿದ್ದಾರೆಂದು ತಿಳಿಸಿದರು.

C-130J ಸೂಪರ್ ಹರ್ಕ್ಯುಲಸ್, C-17 ಗ್ಲೋಬ್‌ಮಾಸ್ಟರ್ III, P-8I ಪೋಸಿಡಾನ್ ವಿಮಾನಗಳು, CH-47F ಚಿನೂಕ್ಸ್, MH-60R ಸೀಹಾಕ್ಸ್, AH-64E ಅಪಾಚೆ ಹೆಲಿಕಾಪ್ಟರ್‌ಗಳು, ಹಾರ್ಪೂನ್ ಹಡಗು ವಿರೋಧಿ ಕ್ಷಿಪಣಿಗಳು, M777 ಹೋವಿಟ್ಜರ್ ಫಿರಂಗಿಗಳು ಮತ್ತು MQ-9B ಸೇರಿದಂತೆ ಅಮೆರಿಕ ಮೂಲದ ರಕ್ಷಣಾ ಸಲಕರಣೆಗಳನ್ನು ಭಾರತದ ದಾಸ್ತಾನುಗಳಲ್ಲಿ ಸೇರಿಸಿಕೊಂಡಿರುವುದನ್ನು ನಾಯಕರು ಸ್ವಾಗತಿಸಿದರು. ಪರಸ್ಪರ ಕಾರ್ಯಸಾಧ್ಯತೆ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಅಮೆರಿಕವು ಭಾರತದೊಂದಿಗೆ ರಕ್ಷಣಾ ಮಾರಾಟ ಮತ್ತು ಸಹ-ಉತ್ಪಾದನೆಯನ್ನು ಹೆಚ್ಚಿಸಲು ನಾಯಕರು ನಿರ್ಧರಿಸಿದರು. ಭಾರತದ ರಕ್ಷಣಾ ಅಗತ್ಯಗಳನ್ನು ತಕ್ಷಣ ಪೂರೈಸಲು "ಜಾವೆಲಿನ್" ಟ್ಯಾಂಕ್ ವಿರೋಧಿ ಕ್ಷಿಪಣಿಗಳು ಮತ್ತು "ಸ್ಟ್ರೈಕರ್" ಪದಾತಿದಳ ಯುದ್ಧ ವಾಹನಗಳ ಹೊಸ ಖರೀದಿ ಮತ್ತು ಸಹ-ಉತ್ಪಾದನಾ ಒಪ್ಪಂದಗಳನ್ನು ಈ ವರ್ಷವೇ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಅವರು ಘೋಷಿಸಿದರು. ಮಾರಾಟದ ನಿಯಮಗಳಿಗೆ ಅನುಗುಣವಾಗಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಡಲ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚುವರಿಯಾಗಿ ಆರು P-8I ಕಡಲ ಗಸ್ತು ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯೂ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಭಾರತವು ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವೆಂದು, ಕಾರ್ಯತಂತ್ರದ ವಾಣಿಜ್ಯ ಅಧಿಕಾರ-೧ (STA-೧) ಮಾನ್ಯತೆ ಹೊಂದಿರುವ ಮತ್ತು ಕ್ವಾಡ್‌ನ ಪ್ರಮುಖ ಪಾಲುದಾರನೆಂದು ಮಾನ್ಯಮಾಡಿಕೊಂಡು, US ಮತ್ತು ಭಾರತವು, ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ಸಂಚಾರ ನಿಯಮಗಳು (ITAR) ಸೇರಿದಂತೆ ತಮ್ಮ ತಮ್ಮ ಶಸ್ತ್ರಾಸ್ತ್ರ ವರ್ಗಾವಣೆ ನಿಯಮಗಳನ್ನು ಪರಿಶೀಲಿಸಲಿವೆ. ಇದರಿಂದ ರಕ್ಷಣಾ ವ್ಯಾಪಾರ, ತಂತ್ರಜ್ಞಾನ ವಿನಿಮಯ, ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಮತ್ತು US ಒದಗಿಸಿದ ರಕ್ಷಣಾ ವ್ಯವಸ್ಥೆಗಳ ದೇಶದಲ್ಲೇ ದುರಸ್ತಿ ಹಾಗೂ ಕೂಲಂಕುಷ ಪರೀಕ್ಷೆ ಸುಗಮವಾಗಲಿದೆ. ಅಲ್ಲದೆ, ತಮ್ಮ ಖರೀದಿ ವ್ಯವಸ್ಥೆಗಳನ್ನು ಉತ್ತಮವಾಗಿ ಹೊಂದಿಸಲು ಮತ್ತು ರಕ್ಷಣಾ ಸರಕು ಮತ್ತು ಸೇವೆಗಳ ಪರಸ್ಪರ ಪೂರೈಕೆಗೆ ಅನುವು ಮಾಡಿಕೊಡಲು, ಈ ವರ್ಷವೇ ಪರಸ್ಪರ ರಕ್ಷಣಾ ಖರೀದಿ (RDP) ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಲು ನಾಯಕರು ಕರೆ ನೀಡಿದರು. ಬಾಹ್ಯಾಕಾಶ, ವಾಯು ರಕ್ಷಣೆ, ಕ್ಷಿಪಣಿ, ಕಡಲ ಮತ್ತು ಜಲಾಂತರ್ಗಾಮಿ ತಂತ್ರಜ್ಞಾನಗಳಾದ್ಯಂತ ರಕ್ಷಣಾ ತಂತ್ರಜ್ಞಾನ ಸಹಕಾರವನ್ನು ವೇಗಗೊಳಿಸಲು ನಾಯಕರು ಬದ್ಧತೆ ತೋರಿದರು.  US, ಭಾರತಕ್ಕೆ ಐದನೇ ತಲೆಮಾರಿನ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ವ್ಯವಸ್ಥೆಗಳನ್ನು ಬಿಡುಗಡೆ ಮಾಡುವ ತನ್ನ ನೀತಿಯನ್ನು ಪರಿಶೀಲಿಸುವುದಾಗಿ ಘೋಷಿಸಿತು.

ಅಮೆರಿಕ-ಭಾರತ ರಕ್ಷಣಾ ಕೈಗಾರಿಕಾ ಸಹಕಾರದ ಮಾರ್ಗಸೂಚಿಯನ್ನು ಮುಂದುವರೆಸುತ್ತಾ, ಸ್ವಾಯತ್ತ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಮನಗಂಡು, ಇಂಡೋ-ಪೆಸಿಫಿಕ್ ವಲಯದಲ್ಲಿ ಕೈಗಾರಿಕಾ ಸಹಭಾಗಿತ್ವ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ನಾಯಕರು ಸ್ವಾಯತ್ತ ಸಿಸ್ಟಮ್ಸ್ ಇಂಡಸ್ಟ್ರಿ ಅಲೈಯನ್ಸ್ (ASIA) ಎಂಬ ಹೊಸ ಉಪಕ್ರಮವನ್ನು ಘೋಷಿಸಿದರು. ಪ್ರಾದೇಶಿಕ ಭದ್ರತೆಯನ್ನು ಬಲಪಡಿಸಲು ಅತ್ಯಾಧುನಿಕ ಕಡಲ ತೀರದ ವ್ಯವಸ್ಥೆಗಳು ಮತ್ತು ಸುಧಾರಿತ ಕೃತಕ ಬುದ್ಧಿಮತ್ತೆ (AI) ಆಧಾರಿತ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು (UAS) ಜಂಟಿಯಾಗಿ ಅಭಿವೃದ್ಧಿಪಡಿಸಲು ಮತ್ತು ಉತ್ಪಾದಿಸಲು ಆಂಡುರಿಲ್ ಇಂಡಸ್ಟ್ರೀಸ್ ಮತ್ತು ಮಹೀಂದ್ರಾ ಗ್ರೂಪ್ ನಡುವಿನ ಪಾಲುದಾರಿಕೆಯನ್ನು ನಾಯಕರು ಸ್ವಾಗತಿಸಿದರು. ಸಕ್ರಿಯ ಟವ್ಡ್ ಅರೆ ಸಿಸ್ಟಮ್‌ಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು L3 ಹ್ಯಾರಿಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ನಡುವಿನ ಸಹಯೋಗಕ್ಕೂ ನಾಯಕರು ಬೆಂಬಲ ಸೂಚಿಸಿದರು.

ಕ್ಷಿಪ್ರ ತರಬೇತಿ, ವ್ಯಾಯಾಮಗಳು ಮತ್ತು ಕಾರ್ಯಾಚರಣೆಗಳ ಮೂಲಕ ವಾಯು, ಭೂಮಿ, ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ನಾಯಕರು ಪ್ರತಿಜ್ಞೆ ಮಾಡಿದರು, ಜೊತೆಗೆ ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಭಾರತದಲ್ಲಿ ಆಯೋಜಿಸಲಿರುವ ದೊಡ್ಡ ಪ್ರಮಾಣದ ಮತ್ತು ಸಂಕೀರ್ಣತೆಯೊಂದಿಗೆ ಮುಂಬರುವ "ಟೈಗರ್ ಟ್ರಯಂಫ್" ತ್ರಿ-ಸೇವಾ ವ್ಯಾಯಾಮವನ್ನು (ಮೊದಲ ಬಾರಿಗೆ 2019 ರಲ್ಲಿ ಉದ್ಘಾಟಿಸಲಾಯಿತು) ನಾಯಕರು ಸ್ವಾಗತಿಸಿದರು.

ಕೊನೆಯದಾಗಿ, ನಾಯಕರು ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕ ಮತ್ತು ಭಾರತೀಯ ಸೈನ್ಯಗಳ ಸಾಗರೋತ್ತರ ನಿಯೋಜನೆಗಳಿಗೆ ಬೆಂಬಲ ನೀಡಲು ಮತ್ತು ಅವುಗಳನ್ನು ನಿರಂತರವಾಗಿ ಕಾಪಾಡಲು ಹೊಸ ವಿಧಾನಗಳನ್ನು ಕಂಡುಕೊಳ್ಳಲು ಬದ್ಧರಾದರು.  ಇದರಲ್ಲಿ, ಹೆಚ್ಚಿದ ಲಾಜಿಸ್ಟಿಕ್ಸ್ ಮತ್ತು ಗುಪ್ತಚರ ಮಾಹಿತಿಯ ಹಂಚಿಕೆ, ಜಂಟಿ ಮಾನವೀಯ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಪಡೆಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವ ವ್ಯವಸ್ಥೆಗಳು, ಇತರ ವಿನಿಮಯ ಕಾರ್ಯಕ್ರಮಗಳು ಮತ್ತು ಭದ್ರತಾ ಸಹಕಾರ ಒಪ್ಪಂದಗಳು ಸೇರಿವೆ.

ವ್ಯಾಪಾರ ಮತ್ತು ಹೂಡಿಕೆ

ತಮ್ಮ ನಾಗರಿಕರನ್ನು ಹೆಚ್ಚು ಸಮೃದ್ಧರನ್ನಾಗಿಸಲು, ರಾಷ್ಟ್ರಗಳನ್ನು ಬಲಪಡಿಸಲು, ಆರ್ಥಿಕತೆಗಳನ್ನು ಹೆಚ್ಚು ನವೀನಗೊಳಿಸಲು ಮತ್ತು ಪೂರೈಕೆ ಸರಪಳಿಗಳನ್ನು ಹೆಚ್ಚು ಸ್ಥಿತಿಸ್ಥಾಪಕತ್ವವುಳ್ಳವನ್ನಾಗಿಸಲು ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಲು ನಾಯಕರು ನಿರ್ಣಯಿಸಿದರು. ನ್ಯಾಯಯುತತೆ, ರಾಷ್ಟ್ರೀಯ ಭದ್ರತೆ ಮತ್ತು ಉದ್ಯೋಗ ಸೃಷ್ಟಿಯನ್ನು ಖಚಿತಪಡಿಸುವ ಬೆಳವಣಿಗೆಯನ್ನು ಉತ್ತೇಜಿಸಲು ಅಮೆರಿಕ-ಭಾರತ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಅವರು ಸಂಕಲ್ಪ ಮಾಡಿದರು. ಈ ಉದ್ದೇಶಕ್ಕಾಗಿ, ನಾಯಕರು ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಒಂದು ಮಹತ್ವಾಕಾಂಕ್ಷೆಯ ಹೊಸ ಗುರಿಯನ್ನು ಹೊಂದಿಸಿದರು - "ಮಿಷನ್ 500" - 2030 ರ ವೇಳೆಗೆ ಒಟ್ಟು ದ್ವಿಪಕ್ಷೀಯ ವ್ಯಾಪಾರವನ್ನು $500 ಶತಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.

ಈ ಮಹತ್ವಾಕಾಂಕ್ಷೆಯ ಮಟ್ಟಕ್ಕೆ ಹೊಸ, ನ್ಯಾಯಯುತ ವ್ಯಾಪಾರ ನಿಯಮಗಳು ಬೇಕಾಗುತ್ತವೆ ಎಂದು ಮನಗಂಡ ನಾಯಕರು, 2025ರ ಶರತ್ಕಾಲದ ವೇಳೆಗೆ ಪರಸ್ಪರ ಪ್ರಯೋಜನಕಾರಿ, ಬಹು-ಕ್ಷೇತ್ರೀಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (BTA) ಮೊದಲ ಹಂತದ ಮಾತುಕತೆಗಳನ್ನು ನಡೆಸಲು ಯೋಜಿಸಿದ್ದಾರೆಂದು ಘೋಷಿಸಿದರು. ಈ ಮಾತುಕತೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ವ್ಯಾಪಾರ ಸಂಬಂಧವು ಕಾಂಪ್ಯಾಕ್ಟ್‌ನ ಆಶಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಂತೆ ನೋಡಿಕೊಳ್ಳಲು ಹಿರಿಯ ಪ್ರತಿನಿಧಿಗಳನ್ನು ನೇಮಿಸಲು ನಾಯಕರು ಬದ್ಧರಾದರು. ಈ ನವೀನ, ವಿಸ್ತಾರವಾದ BTA ಅನ್ನು ಮುನ್ನಡೆಸಲು, ಅಮೆರಿಕ ಮತ್ತು ಭಾರತವು ಸರಕು ಮತ್ತು ಸೇವಾ ವಲಯಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸಲು ಮತ್ತು ಆಳವಾಗಿಸಲು ಒಂದು ಸಮಗ್ರ ವಿಧಾನವನ್ನು ಅನುಸರಿಸುತ್ತವೆ.  ಅಲ್ಲದೆ, ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು, ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಪೂರೈಕೆ ಸರಪಳಿಗಳ ಏಕೀಕರಣವನ್ನು ಬಲಪಡಿಸಲು ಶ್ರಮಿಸುತ್ತವೆ.

ದ್ವಿಪಕ್ಷೀಯ ವ್ಯಾಪಾರ ಅಡೆತಡೆಗಳನ್ನು ನಿವಾರಿಸುವಲ್ಲಿ ಪರಸ್ಪರ ಬದ್ಧತೆಯನ್ನು ಪ್ರದರ್ಶಿಸಲು ಕೈಗೊಂಡ ಆರಂಭಿಕ ಕ್ರಮಗಳನ್ನು ನಾಯಕರು ಸ್ವಾಗತಿಸಿದರು. ಬೌರ್ಬನ್, ಮೋಟಾರ್‌ಸೈಕಲ್‌ಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉತ್ಪನ್ನಗಳು ಮತ್ತು ಲೋಹಗಳಂತಹ ಕ್ಷೇತ್ರಗಳಲ್ಲಿ ಅಮೆರಿಕದ ಆಸಕ್ತಿಯ ಉತ್ಪನ್ನಗಳ ಮೇಲಿನ ಸುಂಕಗಳನ್ನು ಭಾರತ ಇತ್ತೀಚೆಗೆ ಕಡಿಮೆಗೊಳಿಸಿರುವುದನ್ನು ಅಮೆರಿಕ ಸ್ವಾಗತಿಸಿತು. ಜೊತೆಗೆ, ಅಲ್ಫಾಲ್ಫಾ ಹುಲ್ಲು, ಬಾತುಕೋಳಿ ಮಾಂಸ ಮತ್ತು ವೈದ್ಯಕೀಯ ಸಾಧನಗಳಂತಹ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ಕ್ರಮಗಳನ್ನೂ ಸಹ ಅಮೆರಿಕ ಸ್ವಾಗತಿಸಿತು. ಭಾರತವು, ಭಾರತೀಯ ಮಾವಿನಹಣ್ಣು ಮತ್ತು ದಾಳಿಂಬೆಗಳ ರಫ್ತುಗಳನ್ನು ಹೆಚ್ಚಿಸಲು ಅಮೆರಿಕ ಕೈಗೊಂಡ ಕ್ರಮಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿತು. ಅಮೆರಿಕದಿಂದ ಭಾರತಕ್ಕೆ ಕೈಗಾರಿಕಾ ಸರಕುಗಳ ರಫ್ತು ಮತ್ತು ಭಾರತದಿಂದ ಅಮೆರಿಕಕ್ಕೆ ಶ್ರಮ-ತೀವ್ರ ಉತ್ಪಾದಿತ ವಸ್ತುಗಳ ರಫ್ತು ಹೆಚ್ಚಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಸಹಕರಿಸಲು ಬದ್ಧರಾದರು. ಕೃಷಿ ಸರಕುಗಳ ವ್ಯಾಪಾರವನ್ನು ಹೆಚ್ಚಿಸಲು ಸಹ ಇಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ.

ಅಂತಿಮವಾಗಿ, ಅಮೆರಿಕ ಮತ್ತು ಭಾರತೀಯ ಕಂಪನಿಗಳಿಗೆ ಎರಡೂ ದೇಶಗಳಲ್ಲಿ ಹೆಚ್ಚಿನ ಮೌಲ್ಯದ ಕೈಗಾರಿಕೆಗಳಲ್ಲಿ ಹೊಸ ಹಸಿರು ಕ್ಷೇತ್ರಗಳಲ್ಲಿ (greenfield) ಹೂಡಿಕೆ ಮಾಡಲು ಉತ್ತೇಜನ ನೀಡಲು ನಾಯಕರು ಬದ್ಧರಾಗಿದ್ದಾರೆ. ಈ ಸಂಬಂಧದಲ್ಲಿ, ಹಿಂದಾಲ್ಕೋ ಒಡೆತನದ ನೋವೆಲಿಸ್ ಸಂಸ್ಥೆಯು ಅಲಬಾಮಾ ಮತ್ತು ಕೆಂಟುಕಿಯ ಆಧುನಿಕ ಸೌಲಭ್ಯಗಳಲ್ಲಿ ಅಲ್ಯೂಮಿನಿಯಂ ಉತ್ಪನ್ನಗಳ ತಯಾರಿಕೆಗೆ, ಟೆಕ್ಸಾಸ್ ಮತ್ತು ಓಹಿಯೋಗಳಲ್ಲಿ JSW ಉಕ್ಕು ಉತ್ಪಾದನಾ ಘಟಕಗಳಿಗೆ, ಉತ್ತರ ಕೆರೊಲಿನಾದಲ್ಲಿ ಎಪ್ಸಿಲಾನ್ ಅಡ್ವಾನ್ಸ್‌ಡ್ ಮೆಟೀರಿಯಲ್ಸ್ ಬ್ಯಾಟರಿ ತಯಾರಿಕೆಗೆ ಬೇಕಾದ ಪ್ರಮುಖ ವಸ್ತುಗಳ ಉತ್ಪಾದನೆಗೆ, ಮತ್ತು ವಾಷಿಂಗ್ಟನ್‌ನಲ್ಲಿ ಜುಬಿಲಂಟ್ ಫಾರ್ಮಾ ಉತ್ಪಾದಿಸುವ ಇಂಜೆಕ್ಷನ್‌ ಗಳ ತಯಾರಿಕಾ ಘಟಕಗಳಿಗೆ ಸೇರಿದಂತೆ ಸುಮಾರು $7.35 ಶತಕೋಟಿ ಮೌಲ್ಯದ ಭಾರತೀಯ ಕಂಪನಿಗಳ ಹೂಡಿಕೆಗಳನ್ನು ನಾಯಕರು ಸ್ವಾಗತಿಸಿದರು. ಈ ಹೂಡಿಕೆಗಳು ಸ್ಥಳೀಯ ಕುಟುಂಬಗಳಿಗೆ 3,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತವೆ.

ಇಂಧನ ಭದ್ರತೆ

ಎರಡೂ ದೇಶಗಳ ಆರ್ಥಿಕ ಬೆಳವಣಿಗೆ, ಸಾಮಾಜಿಕ ಯೋಗಕ್ಷೇಮ ಮತ್ತು ತಾಂತ್ರಿಕ ನಾವೀನ್ಯತೆಗೆ ಇಂಧನ ಭದ್ರತೆಯು ಅಡಿಪಾಯವೆಂದು ನಾಯಕರು ಒಪ್ಪಿಕೊಂಡರು. ಇಂಧನವು ಕೈಗೆಟುಕುವ ದರದಲ್ಲಿ, ವಿಶ್ವಾಸಾರ್ಹವಾಗಿ ಮತ್ತು ಲಭ್ಯವಿರುವಂತೆ ಹಾಗೂ ಸ್ಥಿರವಾದ ಇಂಧನ ಮಾರುಕಟ್ಟೆಗಳನ್ನು ಖಚಿತಪಡಿಸಿಕೊಳ್ಳಲು ಅಮೆರಿಕ-ಭಾರತ ಸಹಯೋಗದ ಮಹತ್ವವನ್ನು ಅವರು ಒತ್ತಿ ಹೇಳಿದರು. ಜಾಗತಿಕ ಇಂಧನ ಪರಿಸ್ಥಿತಿಯನ್ನು ರೂಪಿಸುವಲ್ಲಿ ಪ್ರಮುಖ ಉತ್ಪಾದಕರು ಮತ್ತು ಗ್ರಾಹಕರಾಗಿ ಅಮೆರಿಕ ಮತ್ತು ಭಾರತದ ನಿರ್ಣಾಯಕ ಪಾತ್ರವನ್ನು ಮನಗಂಡ ನಾಯಕರು, ತೈಲ, ಅನಿಲ ಮತ್ತು ನಾಗರಿಕ ಪರಮಾಣು ಇಂಧನ ಸೇರಿದಂತೆ ಅಮೆರಿಕ-ಭಾರತ ಇಂಧನ ಭದ್ರತಾ ಸಹಭಾಗಿತ್ವಕ್ಕೆ ಪುನಃ ಬದ್ಧರಾದರು.

ಜಾಗತಿಕ ಇಂಧನ ಬೆಲೆಗಳನ್ನು ಉತ್ತಮಗೊಳಿಸಲು ಮತ್ತು ತಮ್ಮ ನಾಗರಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಹೈಡ್ರೋಕಾರ್ಬನ್‌ಗಳ ಉತ್ಪಾದನೆಯನ್ನು ಹೆಚ್ಚಿಸುವ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲುಗಳ ಮೌಲ್ಯವನ್ನು ನಾಯಕರು ಒತ್ತಿ ಹೇಳಿದರು ಮತ್ತು ಕಾರ್ಯತಂತ್ರದ ತೈಲ ಮೀಸಲು ವ್ಯವಸ್ಥೆಗಳನ್ನು ವಿಸ್ತರಿಸಲು ಪ್ರಮುಖ ಪಾಲುದಾರರೊಂದಿಗೆ ಕೆಲಸ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ, ಅಮೆರಿಕವು ಭಾರತವು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಲ್ಲಿ ಪೂರ್ಣ ಸದಸ್ಯತ್ವ ಪಡೆಯಲು ತನ್ನ ಬಲವಾದ ಬೆಂಬಲವನ್ನು ದೃಢಪಡಿಸಿತು.

ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ಇಂಧನ ವಹಿವಾಟನ್ನು ಹೆಚ್ಚಿಸುವ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು.  ಬೆಳೆಯುತ್ತಿರುವ ನಮ್ಮ ಕ್ರಿಯಾತ್ಮಕ ಆರ್ಥಿಕತೆಗಳ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ, ಯುನೈಟೆಡ್ ಸ್ಟೇಟ್ಸ್ ಅನ್ನು ಭಾರತಕ್ಕೆ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಪ್ರಮುಖ ಪೂರೈಕೆದಾರರನ್ನಾಗಿ ಸ್ಥಾಪಿಸಲು ಅವರು ಒಪ್ಪಿಕೊಂಡರು. ಪೂರೈಕೆ ವೈವಿಧ್ಯೀಕರಣ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ನೈಸರ್ಗಿಕ ಅನಿಲ, ಈಥೇನ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಹೈಡ್ರೋಕಾರ್ಬನ್ ವಲಯದಲ್ಲಿ ವಹಿವಾಟನ್ನು ಹೆಚ್ಚಿಸಲು ಅಪಾರ ಅವಕಾಶಗಳಿವೆ ಎಂದು ಅವರು ಪ್ರತಿಪಾದಿಸಿದರು.  ವಿಶೇಷವಾಗಿ ತೈಲ ಮತ್ತು ಅನಿಲ ಮೂಲಸೌಕರ್ಯಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಎರಡೂ ದೇಶಗಳ ಇಂಧನ ಕಂಪನಿಗಳ ನಡುವೆ ಹೆಚ್ಚಿನ ಸಹಕಾರವನ್ನು ಸುಗಮಗೊಳಿಸಲು ನಾಯಕರು ಬದ್ಧತೆ ತೋರಿದರು.

ದೊಡ್ಡ ಪ್ರಮಾಣದ ಸ್ಥಳೀಕರಣ ಮತ್ತು ಸಾಧ್ಯವಿರುವ ತಂತ್ರಜ್ಞಾನ ವರ್ಗಾವಣೆಯ ಮೂಲಕ ಭಾರತದಲ್ಲಿ ಅಮೆರಿಕ ವಿನ್ಯಾಸದ ಪರಮಾಣು ರಿಯಾಕ್ಟರ್‌ ಗಳನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸುವ ಯೋಜನೆಗಳೊಂದಿಗೆ ಮುಂದುವರಿಯುವ ಮೂಲಕ, ಅಮೆರಿಕ-ಭಾರತ 123 ನಾಗರಿಕ ಪರಮಾಣು ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ನಾಯಕರು ತಮ್ಮ ಬದ್ಧತೆಯನ್ನು ಘೋಷಿಸಿದರು. ಭಾರತ ಸರ್ಕಾರವು ಪರಮಾಣು ರಿಯಾಕ್ಟರ್‌ ಗಳಿಗಾಗಿ ಪರಮಾಣು ಶಕ್ತಿ ಕಾಯ್ದೆ ಮತ್ತು ನಾಗರಿಕ ಪರಮಾಣು ಹಾನಿ ಕಾಯ್ದೆ (CLNDA) ಗೆ ತಿದ್ದುಪಡಿಗಳನ್ನು ಕೈಗೊಳ್ಳಲು ಇತ್ತೀಚೆಗೆ ಬಜೆಟ್‌ ನಲ್ಲಿ ಘೋಷಿಸಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.  CLNDAಗೆ ಅನುಗುಣವಾಗಿ ದ್ವಿಪಕ್ಷೀಯ ವ್ಯವಸ್ಥೆಗಳನ್ನು ಸ್ಥಾಪಿಸಲು ಅವರು ನಿರ್ಧರಿಸಿದರು. ಇದು ನಾಗರಿಕ ಹೊಣೆಗಾರಿಕೆಯ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಪರಮಾಣು ರಿಯಾಕ್ಟರ್‌ ಗಳ ಉತ್ಪಾದನೆ ಮತ್ತು ನಿಯೋಜನೆಯಲ್ಲಿ ಭಾರತೀಯ ಮತ್ತು ಅಮೆರಿಕದ ಕೈಗಾರಿಕೆಗಳ ಸಹಯೋಗವನ್ನು ಸುಗಮಗೊಳಿಸುತ್ತದೆ. ಈ ಕ್ರಮವು ದೊಡ್ಡ ಅಮೆರಿಕ ವಿನ್ಯಾಸದ ರಿಯಾಕ್ಟರ್‌ ಗಳನ್ನು ನಿರ್ಮಿಸುವ ಯೋಜನೆಗಳಿಗೆ ಅನುವು ಮಾಡಿಕೊಡುತ್ತದೆ ಮತ್ತು ಸುಧಾರಿತ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ ಗಳೊಂದಿಗೆ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಅಭಿವೃದ್ಧಿಪಡಿಸಲು, ನಿಯೋಜಿಸಲು ಮತ್ತು ಹೆಚ್ಚಿಸಲು ಸಹಕಾರವನ್ನು ಸಕ್ರಿಯಗೊಳಿಸುತ್ತದೆ.

ತಂತ್ರಜ್ಞಾನ ಮತ್ತು ಆವಿಷ್ಕಾರ

ನಾಯಕರು ಅಮೆರಿಕ-ಭಾರತ TRUST ("Transforming the Relationship Utilizing Strategic Technology”) ಉಪಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಉಪಕ್ರಮವು ರಕ್ಷಣೆ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ ಗಳು, ಕ್ವಾಂಟಮ್, ಜೈವಿಕ ತಂತ್ರಜ್ಞಾನ, ಇಂಧನ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಅನ್ವಯವನ್ನು ಉತ್ತೇಜಿಸಲು ಸರ್ಕಾರದಿಂದ ಸರ್ಕಾರಕ್ಕೆ, ಶಿಕ್ಷಣ ಸಂಸ್ಥೆಗಳಿಂದ ಖಾಸಗಿ ವಲಯದವರೆಗೆ ಸಹಯೋಗವನ್ನು ವೇಗಗೊಳಿಸುತ್ತದೆ. ಅಲ್ಲದೆ, ಪರಿಶೀಲಿಸಿದ ತಂತ್ರಜ್ಞಾನ ಮಾರಾಟಗಾರರ ಬಳಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸೂಕ್ಷ್ಮ ತಂತ್ರಜ್ಞಾನಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ.

"TRUST" ಉಪಕ್ರಮದ ಮುಖ್ಯ ಅಂಶವಾಗಿ, ನಾಯಕರು ಈ ವರ್ಷದ ಅಂತ್ಯದ ವೇಳೆಗೆ ಅಮೆರಿಕ-ಭಾರತ AI ಮೂಲಸೌಕರ್ಯವನ್ನು ವೇಗಗೊಳಿಸುವ ಕುರಿತು ಒಂದು ಮಾರ್ಗಸೂಚಿಯನ್ನು ರೂಪಿಸಲು ಅಮೆರಿಕ ಮತ್ತು ಭಾರತೀಯ ಖಾಸಗಿ ಕೈಗಾರಿಕೆಗಳೊಂದಿಗೆ ಸಹಕರಿಸಲು ಬದ್ಧರಾದರು. ಈ ಮಾರ್ಗಸೂಚಿಯು ಭಾರತದಲ್ಲಿ ದೊಡ್ಡ ಪ್ರಮಾಣದ ಅಮೆರಿಕ ಮೂಲದ AI ಮೂಲಸೌಕರ್ಯವನ್ನು ಹಣಕಾಸು ಒದಗಿಸುವುದು, ನಿರ್ಮಿಸುವುದು, ಶಕ್ತಿ ತುಂಬುವುದು ಮತ್ತು ಸಂಪರ್ಕಿಸುವಲ್ಲಿನ ಸವಾಲುಗಳನ್ನು, ಮೈಲಿಗಲ್ಲುಗಳು ಮತ್ತು ಭವಿಷ್ಯದ ಕ್ರಮಗಳೊಂದಿಗೆ ಗುರುತಿಸುತ್ತದೆ.  ಅಮೆರಿಕ ಮತ್ತು ಭಾರತವು ಮುಂದಿನ ಪೀಳಿಗೆಯ ಡೇಟಾ ಸೆಂಟರ್‌ಗಳಲ್ಲಿ ಕೈಗಾರಿಕಾ ಸಹಭಾಗಿತ್ವ ಮತ್ತು ಹೂಡಿಕೆಗಳನ್ನು ಸಕ್ರಿಯಗೊಳಿಸಲು, AI ಗಾಗಿ ಕಂಪ್ಯೂಟಿಂಗ್ ಮತ್ತು ಪ್ರೊಸೆಸರ್‌ಗಳ ಅಭಿವೃದ್ಧಿ ಮತ್ತು ಪ್ರವೇಶದ ಕುರಿತು ಸಹಕಾರ, AI ಮಾದರಿಗಳಲ್ಲಿನ ನಾವೀನ್ಯತೆಗಾಗಿ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಹರಿಸಲು AI ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಈ ತಂತ್ರಜ್ಞಾನಗಳನ್ನು ರಕ್ಷಿಸಲು ಮತ್ತು ನಿಯಂತ್ರಕ ಅಡೆತಡೆಗಳನ್ನು ಕಡಿಮೆ ಮಾಡಲು ಅಗತ್ಯವಿರುವ ರಕ್ಷಣೆಗಳು ಮತ್ತು ನಿಯಂತ್ರಣಗಳನ್ನು ಸಹ ಒದಗಿಸುತ್ತವೆ.

ನಾಯಕರು INDUS ಇನ್ನೋವೇಶನ್ ಎಂಬ ಹೊಸ ನಾವೀನ್ಯತೆ ಸಹಯೋಗವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ಯಶಸ್ವಿ INDUS-X ಮಾದರಿಯನ್ನು ಆಧರಿಸಿರುವ ಇದು, ಅಮೆರಿಕ-ಭಾರತ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸುತ್ತದೆ. ಬಾಹ್ಯಾಕಾಶ, ಶಕ್ತಿ ಮತ್ತು ಇತರ ನವೀನ ತಂತ್ರಜ್ಞಾನಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ, 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಮತ್ತು ನಾವೀನ್ಯತೆಯಲ್ಲಿ ಅಮೆರಿಕ ಮತ್ತು ಭಾರತದ ಮುಂಚೂಣಿಯನ್ನು ಕಾಪಾಡಲು ಇದು ನೆರವಾಗುತ್ತದೆ.  ಅಮೆರಿಕ ಮತ್ತು ಭಾರತೀಯ ರಕ್ಷಣಾ ಕಂಪನಿಗಳು, ಹೂಡಿಕೆದಾರರು ಮತ್ತು ವಿಶ್ವವಿದ್ಯಾಲಯಗಳ ಸಹಯೋಗದಿಂದ ನಮ್ಮ ಸೈನ್ಯಗಳಿಗೆ ಅಗತ್ಯ ಸಾಮರ್ಥ್ಯಗಳನ್ನು ಒದಗಿಸುವ INDUS-X ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ನಾಯಕರು ಪುನರುಚ್ಚರಿಸಿದರು. 2025ರ ಮುಂದಿನ ಶೃಂಗಸಭೆಯನ್ನು ಅವರು ಸ್ವಾಗತಿಸಿದರು.

ಟ್ರಸ್ಟ್ ಉಪಕ್ರಮದ ಅಡಿಯಲ್ಲಿ, ನಾಯಕರು ಸೆಮಿಕಂಡಕ್ಟರ್‌ ಗಳು, ನಿರ್ಣಾಯಕ ಖನಿಜಗಳು, ಸುಧಾರಿತ ವಸ್ತುಗಳು ಮತ್ತು ಔಷಧಿಗಳಂತಹ ವಸ್ತುಗಳಿಗೆ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಬದ್ಧತೆ ವ್ಯಕ್ತಪಡಿಸಿದರು.  ಇದರ ಭಾಗವಾಗಿ, US ಸೇರಿದಂತೆ ಭಾರತದಲ್ಲಿ ನಿರ್ಣಾಯಕ ಔಷಧಿಗಳಿಗೆ ಸಕ್ರಿಯ ಔಷಧೀಯ ಪದಾರ್ಥಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಅವರು ಯೋಜಿಸಿದ್ದಾರೆ. ಈ ಹೂಡಿಕೆಗಳು ಉಭಯ ದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಪ್ರಮುಖ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುತ್ತವೆ ಮತ್ತು ಜೀವ ರಕ್ಷಕ ಔಷಧಿಗಳ ಕೊರತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ.

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸುಧಾರಿತ ಉತ್ಪಾದನೆಗೆ ನಿರ್ಣಾಯಕ ಖನಿಜಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಮನಗಂಡು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಯೋಗವನ್ನು ಹೆಚ್ಚಿಸಲಿವೆ.  ಅವು, ಎರಡೂ ದೇಶಗಳು ಸದಸ್ಯರಾಗಿರುವ ಮಿನರಲ್ ಸೆಕ್ಯುರಿಟಿ ಪಾಲುದಾರಿಕೆ ಹಾಗೂ ಸಂಪೂರ್ಣ ನಿರ್ಣಾಯಕ ಖನಿಜ ಮೌಲ್ಯ ಸರಪಳಿಯ ಉದ್ದಕ್ಕೂ ಹೂಡಿಕೆಗಳನ್ನು ಉತ್ತೇಜಿಸಲಿವೆ. ನಿರ್ಣಾಯಕ ಖನಿಜಗಳ ಪರಿಶೋಧನೆ, ಲಾಭ ಮತ್ತು ಸಂಸ್ಕರಣೆ, ಮತ್ತು ಮರುಬಳಕೆ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ರಾಷ್ಟ್ರಗಳು ಬದ್ಧವಾಗಿವೆ.  ಇದಕ್ಕಾಗಿ, ನಾಯಕರು ಸ್ಟ್ರಾಟೆಜಿಕ್ ಮಿನರಲ್ ರಿಕವರಿ ಉಪಕ್ರಮವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.  ಅಲ್ಯೂಮಿನಿಯಂ, ಕಲ್ಲಿದ್ದಲು ಗಣಿಗಾರಿಕೆ, ಮತ್ತು ತೈಲ ಹಾಗೂ ಅನಿಲದಂತಹ ಭಾರೀ ಕೈಗಾರಿಕೆಗಳಿಂದ ಲಿಥಿಯಂ, ಕೋಬಾಲ್ಟ್ ಮತ್ತು ಅಪರೂಪದ ಧಾತುಗಳಂತಹ ನಿರ್ಣಾಯಕ ಖನಿಜಗಳನ್ನು ಮರುಪಡೆಯಲು ಮತ್ತು ಸಂಸ್ಕರಿಸಲು ಇದೊಂದು ಹೊಸ ಅಮೆರಿಕ-ಭಾರತ ಕಾರ್ಯಕ್ರಮವಾಗಿದೆ.

2025 US-ಭಾರತ ನಾಗರಿಕ ಬಾಹ್ಯಾಕಾಶ ಸಹಕಾರದ ಮೈಲಿಗಲ್ಲಾಗಲಿದೆ ಎಂದು ನಾಯಕರು ಬಣ್ಣಿಸಿದರು.  ಮೊದಲ ಭಾರತೀಯ ಗಗನಯಾತ್ರಿಯನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸಲು NASA-ISRO ಮತ್ತು AXIOM ಜೊತೆಗಿನ ಯೋಜನೆಗಳು ಹಾಗೂ ಭೂಮಿಯ ಮೇಲ್ಮೈ ಬದಲಾವಣೆಗಳನ್ನು ಡ್ಯುಯಲ್ ರೇಡಾರ್‌ ಗಳಿಂದ ಕ್ರಮಬದ್ಧವಾಗಿ ನಕ್ಷೆ ಮಾಡುವ ಪ್ರಥಮ ಜಂಟಿ "NISAR" ಮಿಷನ್‌ನ ಆರಂಭಿಕ ಉಡಾವಣೆ ಇದಕ್ಕೆ ಸಾಕ್ಷಿ.  ದೀರ್ಘಕಾಲೀನ ಮಾನವ ಸಹಿತ ಬಾಹ್ಯಾಕಾಶ ಹಾರಾಟ, ಬಾಹ್ಯಾಕಾಶ ಹಾರಾಟ ಸುರಕ್ಷತೆ, ಗ್ರಹಗಳ ರಕ್ಷಣೆ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಪರಿಣತಿ ಹಂಚಿಕೆ ಮತ್ತು ವೃತ್ತಿಪರ ವಿನಿಮಯದಂತಹ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೆಚ್ಚಿನ ಸಹಯೋಗಕ್ಕೆ ನಾಯಕರು ಕರೆ ನೀಡಿದರು. ಸಂಪರ್ಕ, ಸುಧಾರಿತ ಬಾಹ್ಯಾಕಾಶ ಹಾರಾಟ, ಉಪಗ್ರಹ ಮತ್ತು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಗಳು, ಬಾಹ್ಯಾಕಾಶ ಸುಸ್ಥಿರತೆ, ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತು ಸುಧಾರಿತ ಬಾಹ್ಯಾಕಾಶ ಉತ್ಪಾದನೆಯಂತಹ ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಕೈಗಾರಿಕಾ ಸಹಭಾಗಿತ್ವದ ಮೂಲಕ ವಾಣಿಜ್ಯ ಬಾಹ್ಯಾಕಾಶ ಸಹಯೋಗವನ್ನು ವೃದ್ಧಿಸಲು ನಾಯಕರು ಬದ್ಧರಾದರು.

US ಮತ್ತು ಭಾರತದ ವೈಜ್ಞಾನಿಕ ಸಂಶೋಧನಾ ಸಮುದಾಯಗಳ ಬಾಂಧವ್ಯವನ್ನು ಬಲಪಡಿಸುವ ಮಹತ್ವವನ್ನು ನಾಯಕರು ಪ್ರತಿಪಾದಿಸಿದರು. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಂಶೋಧನೆಯಲ್ಲಿ ತೊಡಗಿರುವ US ನ್ಯಾಷನಲ್ ಸೈನ್ಸ್ ಫೌಂಡೇಶನ್ ಮತ್ತು ಇಂಡಿಯನ್ ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ನಡುವಿನ ಹೊಸ ಸಹಯೋಗವನ್ನು ಅವರು ಘೋಷಿಸಿದರು. ಈ ಸಹಯೋಗವು, ಸೆಮಿಕಂಡಕ್ಟರ್‌ ಗಳು, ಸಂಪರ್ಕಿತ ವಾಹನಗಳು, ಮಷಿನ್‌ ಲರ್ನಿಂಗ್‌, ಮುಂದಿನ ಪೀಳಿಗೆಯ ದೂರಸಂಪರ್ಕ, ಬುದ್ಧಿವಂತ ಸಾರಿಗೆ ವ್ಯವಸ್ಥೆಗಳು ಮತ್ತು ಭವಿಷ್ಯದ ಬಯೋಮ್ಯಾನುಫ್ಯಾಕ್ಚರಿಂಗ್‌ ನಂತಹ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಗೆ ಅನುವು ಮಾಡಿಕೊಡಲು US ನ್ಯಾಷನಲ್ ಸೈನ್ಸ್ ಫೌಂಡೇಶನ್ ಮತ್ತು ಅನೇಕ ಭಾರತೀಯ ವಿಜ್ಞಾನ ಸಂಸ್ಥೆಗಳ ನಡುವಿನ ಪ್ರಸ್ತುತ ಸಹಕಾರವನ್ನು ಆಧರಿಸಿದೆ.

US ಮತ್ತು ಭಾರತದ ನಾಯಕರು, ತಮ್ಮ ಸರ್ಕಾರಗಳು ರಫ್ತು ನಿಯಂತ್ರಣಗಳನ್ನು ನಿಭಾಯಿಸಲು, ಉನ್ನತ ತಂತ್ರಜ್ಞಾನ ವಾಣಿಜ್ಯವನ್ನು ವೃದ್ಧಿಸಲು ಮತ್ತು ತಂತ್ರಜ್ಞಾನ ಭದ್ರತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಎರಡೂ ದೇಶಗಳ ನಡುವೆ ತಂತ್ರಜ್ಞಾನ ವರ್ಗಾವಣೆಗೆ ಇರುವ ಅಡೆತಡೆಗಳನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ನಿರ್ಧರಿಸಿದರು.  ನಿರ್ಣಾಯಕ ಪೂರೈಕೆ ಸರಪಳಿಗಳ ಏಕಾಗ್ರತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುವ ಮೂರನೇ ವ್ಯಕ್ತಿಗಳಿಂದ ರಫ್ತು ನಿಯಂತ್ರಣದಲ್ಲಿನ ಅನ್ಯಾಯದ ಪದ್ಧತಿಗಳ ಸಾಮಾನ್ಯ ಸವಾಲನ್ನು ಒಟ್ಟಾಗಿ ಎದುರಿಸಲು ಸಹ ಅವರು ನಿರ್ಣಯ ಕೈಗೊಂಡರು.

ಬಹುಪಕ್ಷೀಯ ಸಹಕಾರ

US ಮತ್ತು ಭಾರತದ ನಡುವಿನ ಬಲವಾದ ಸಹಭಾಗಿತ್ವವು ಸ್ವತಂತ್ರ, ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಅತ್ಯಗತ್ಯ ಎಂದು ನಾಯಕರು ಪುನಃ ದೃಢಪಡಿಸಿದರು. ಕ್ವಾಡ್ ಪಾಲುದಾರರಾಗಿ, ASEANನ ಕೇಂದ್ರ ಸ್ಥಾನವನ್ನು ಗುರುತಿಸುವುದು, ಅಂತಾರಾಷ್ಟ್ರೀಯ ಕಾನೂನು ಮತ್ತು ಉತ್ತಮ ಆಡಳಿತಕ್ಕೆ ಬದ್ಧವಾಗಿರುವುದು, ಸಮುದ್ರ ಸಂಚಾರ, ವಿಮಾನ ಹಾರಾಟ ಮತ್ತು ಇತರ ಕಾನೂನುಬದ್ಧ ಸಮುದ್ರ ಬಳಕೆಯ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸುವುದು, ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ಮತ್ತು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಕಡಲ ವಿವಾದಗಳ ಶಾಂತಿಯುತ ಪರಿಹಾರವನ್ನು ಪ್ರತಿಪಾದಿಸುವುದು ಈ ಸಹಭಾಗಿತ್ವದ ಆಧಾರಸ್ತಂಭಗಳು ಎಂದು ಅವರು ಪುನರುಚ್ಚರಿಸಿದರು.

ಪ್ರಧಾನಿ ಮೋದಿ ಅವರು ನವದೆಹಲಿಯಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಆಹ್ವಾನಿಸಲು ಎದುರು ನೋಡುತ್ತಿದ್ದಾರೆ, ಈ ಶೃಂಗಸಭೆಗೂ ಮುನ್ನ, ನಾಯಕರು ನೈಸರ್ಗಿಕ ವಿಪತ್ತುಗಳಿಗೆ ಸ್ಪಂದಿಸಲು ನೆರವಾಗುವ ಸಾಮಾನ್ಯ ವಾಯು ಸಾಗಣೆ ಸಾಮರ್ಥ್ಯ ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸಲು ಕಡಲ ಗಸ್ತುಗಳಂತಹ ಹೊಸ ಕ್ವಾಡ್ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸಹಕಾರವನ್ನು ವೃದ್ಧಿಸಲು, ರಾಜತಾಂತ್ರಿಕ ಸಮಾಲೋಚನೆಗಳನ್ನು ಬಲಪಡಿಸಲು ಮತ್ತು ಪಾಲುದಾರರೊಂದಿಗೆ ವಾಸ್ತವಿಕ ಸಹಯೋಗವನ್ನು ಹೆಚ್ಚಿಸಲು ನಾಯಕರು ಬದ್ಧರಾದರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ನಿರ್ಣಾಯಕ ಮೂಲಸೌಕರ್ಯ ಮತ್ತು ಆರ್ಥಿಕ ಕಾರಿಡಾರ್‌ ಗಳಲ್ಲಿ ಹೂಡಿಕೆ ಮಾಡುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. 2025 ರಲ್ಲಿ ನೂತನ ಉಪಕ್ರಮಗಳನ್ನು ಪ್ರಕಟಿಸಲು ಮುಂದಿನ ಆರು ತಿಂಗಳೊಳಗೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಮತ್ತು I2U2 ಗುಂಪಿನ ಪಾಲುದಾರರನ್ನು ಸಭೆ ಸೇರಿಸಲು ನಾಯಕರು ಯೋಜಿಸಿದ್ದಾರೆ.

ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಭಿವೃದ್ಧಿಶೀಲ ರಾಷ್ಟ್ರವಾಗಿ, ಮಾನವೀಯ ನೆರವು ನೀಡುವ ರಾಷ್ಟ್ರವಾಗಿ ಮತ್ತು ಭದ್ರತೆಯನ್ನು ಒದಗಿಸುವ ರಾಷ್ಟ್ರವಾಗಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಮೆರಿಕವು ಮೆಚ್ಚುಗೆಯಿಂದ ಗುರುತಿಸುತ್ತದೆ. ಈ ಹಿನ್ನೆಲೆಯಲ್ಲಿ, ನಾಯಕರು ವಿಶಾಲವಾದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವಿಪಕ್ಷೀಯ ಮಾತುಕತೆ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದರು. ಆರ್ಥಿಕ ಸಂಪರ್ಕ ಮತ್ತು ವಾಣಿಜ್ಯದಲ್ಲಿ ಸಮನ್ವಯಿತ ಹೂಡಿಕೆಗಳನ್ನು ಉತ್ತೇಜಿಸಲು ಅವರು ಇಂಡಿಯನ್ ಓಷನ್ ಸ್ಟ್ರಾಟೆಜಿಕ್ ವೆಂಚರ್ ಎಂಬ ಹೊಸ ದ್ವಿಪಕ್ಷೀಯ ವೇದಿಕೆಯನ್ನು ಸ್ಥಾಪಿಸಿದರು. ಹಿಂದೂ ಮಹಾಸಾಗರದಲ್ಲಿ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಮೆಟಾ ಕಂಪನಿಯು ಬಹು-ಬಿಲಿಯನ್ ಡಾಲರ್ ವೆಚ್ಚದ, ಬಹು-ವರ್ಷಗಳ ಜಲಾಂತರ್ಗತ ಕೇಬಲ್ ಯೋಜನೆಯನ್ನು ಘೋಷಿಸಿದ್ದು, ಈ ವರ್ಷವೇ ಕಾಮಗಾರಿ ಪ್ರಾರಂಭವಾಗಲಿದೆ.  ಈ ಯೋಜನೆಯು 50,000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ವ್ಯಾಪಿಸಿ ಐದು ಖಂಡಗಳನ್ನು ಸಂಪರ್ಕಿಸಲಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶ ಹಾಗೂ ಅದರ ಆಚೆಗಿನ ಜಾಗತಿಕ ಡಿಜಿಟಲ್ ಹೆದ್ದಾರಿಗಳನ್ನು ಬಲಪಡಿಸಲಿದೆ. ಭಾರತವು ವಿಶ್ವಾಸಾರ್ಹ ಸಂಸ್ಥೆಗಳಿಂದ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗತ ಕೇಬಲ್‌ಗಳ ನಿರ್ವಹಣೆ, ದುರಸ್ತಿ ಮತ್ತು ಹಣಕಾಸಿನಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿದೆ ಎಂದು ನಾಯಕರು ಸ್ವಾಗತಿಸಿದರು.

ಸಂಬಂಧಗಳು, ವಾಣಿಜ್ಯ ಮತ್ತು ರಕ್ಷಣೆ, ತಂತ್ರಜ್ಞಾನ, ಇಂಧನ ಮತ್ತು ನಿರ್ಣಾಯಕ ಖನಿಜಗಳ ಸಹಕಾರವನ್ನು ವೃದ್ಧಿಸಲು ಪಶ್ಚಿಮ ಹಿಂದೂ ಮಹಾಸಾಗರ, ಮಧ್ಯಪ್ರಾಚ್ಯ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಹೊಸ ಬಹುಪಕ್ಷೀಯ ಪಾಲುದಾರಿಕೆಗಳನ್ನು ಸ್ಥಾಪಿಸುವ ಅಗತ್ಯವನ್ನು ನಾಯಕರು ಮನಗಂಡರು. 2025 ರ ಶರತ್ಕಾಲದ ವೇಳೆಗೆ ಈ ಉಪ-ಪ್ರದೇಶಗಳಲ್ಲಿ ಹೊಸ ಪಾಲುದಾರಿಕೆ ಉಪಕ್ರಮಗಳನ್ನು ಘೋಷಿಸಲು ಅವರು ಯೋಜಿಸಿದ್ದಾರೆ.

ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಮಿಲಿಟರಿ ಸಹಕಾರವನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು. ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಬೈನ್ಡ್ ಮ್ಯಾರಿಟೈಮ್ ಫೋರ್ಸಸ್ ನೌಕಾ ಕಾರ್ಯಪಡೆಯಲ್ಲಿ ಮುಂಬರುವ ನಾಯಕತ್ವದ ಜವಾಬ್ದಾರಿಯನ್ನು ಭಾರತ ವಹಿಸಿಕೊಳ್ಳುವ ನಿರ್ಧಾರವನ್ನು ನಾಯಕರು ಸ್ವಾಗತಿಸಿದರು.

ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಮತ್ತು ಭಯೋತ್ಪಾದಕ ತಾಣಗಳನ್ನು ನಾಶಪಡಿಸಬೇಕು ಎಂದು ನಾಯಕರು ಪುನರುಚ್ಚರಿಸಿದರು. ಅಲ್-ಖೈದಾ, ಐಸಿಸ್, ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸೇರಿದಂತೆ ಭಯೋತ್ಪಾದಕ ಗುಂಪುಗಳಿಂದ ಉಂಟಾಗುವ ಬೆದರಿಕೆಗಳನ್ನು ಎದುರಿಸಲು ಸಹಕಾರವನ್ನು ಬಲಪಡಿಸಲು ಅವರು ಬದ್ಧರಾದರು, 26/11 ರ ಮುಂಬೈ ದಾಳಿ ಮತ್ತು 2021 ರ ಆಗಸ್ಟ್ 26 ರಂದು ಅಫ್ಘಾನಿಸ್ತಾನದ ಅಬ್ಬೆ ಗೇಟ್ ಬಾಂಬ್ ಸ್ಫೋಟದಂತಹ ಭೀಕರ ಕೃತ್ಯಗಳನ್ನು ತಡೆಯಲು. ನಮ್ಮ ನಾಗರಿಕರನ್ನು ಹಾನಿಗೊಳಿಸುವವರನ್ನು ನ್ಯಾಯದ ಮುಂದೆ ನಿಲ್ಲಿಸುವ ಹಂಚಿಕೆಯ ಉದ್ದೇಶವನ್ನು ಗುರುತಿಸಿ, ತಹವ್ವುರ್ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಅಮೆರಿಕ ಘೋಷಿಸಿತು. 26/11 ರ ಮುಂಬೈ ಮತ್ತು ಪಠಾಣ್‌ಕೋಟ್ ದಾಳಿಯ ಅಪರಾಧಿಗಳನ್ನು ಪಾಕಿಸ್ತಾನವು ಕೂಡಲೇ ನ್ಯಾಯಕ್ಕೆ ತರಬೇಕು ಮತ್ತು ತನ್ನ ನೆಲವನ್ನು ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳಿಗೆ ಬಳಸಿಕೊಳ್ಳಬಾರದು ಎಂದು ನಾಯಕರು ಒತ್ತಾಯಿಸಿದರು. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳನ್ನು ತಡೆಯಲು ಮತ್ತು ಭಯೋತ್ಪಾದಕರು ಮತ್ತು ರಾಜ್ಯೇತರ ವ್ಯಕ್ತಿಗಳು ಅಂತಹ ಶಸ್ತ್ರಾಸ್ತ್ರಗಳನ್ನು ಪಡೆಯದಂತೆ ನೋಡಿಕೊಳ್ಳಲು ಒಟ್ಟಾಗಿ ಶ್ರಮಿಸಲು ನಾಯಕರು ಪ್ರತಿಜ್ಞೆ ಮಾಡಿದರು.

ಜನರಿಂದ ಜನರಿಗೆ ಸಹಕಾರ

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಅಮೆರಿಕ ಮತ್ತು ಭಾರತದ ಜನತೆ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು. 300,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಆರ್ಥಿಕತೆಗೆ ವಾರ್ಷಿಕವಾಗಿ 8 ಬಿಲಿಯನ್ ಡಾಲರ್‌ ಗಳಿಗಿಂತ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ ಮತ್ತು ಅನೇಕ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯೋಗಿಗಳ ಪ್ರತಿಭೆ ಮತ್ತು ಚಲನೆಯಿಂದ ಉಭಯ ದೇಶಗಳಿಗೂ ಲಾಭವಾಗಿದೆ ಎಂದು ಅವರು ಒಪ್ಪಿಕೊಂಡರು.  ನಾವೀನ್ಯತೆಯನ್ನು ಉತ್ತೇಜಿಸಲು, ಕಲಿಕೆಯನ್ನು ಉತ್ತಮಗೊಳಿಸಲು ಮತ್ತು ಭವಿಷ್ಯದ ಕಾರ್ಯಪಡೆಗೆ ಸಿದ್ಧತೆ ನಡೆಸಲು ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗವು ಮುಖ್ಯವೆಂದು ಗುರುತಿಸಿ, ಜಂಟಿ/ದ್ವಿಪದವಿ ಮತ್ತು ಟ್ವಿನ್ನಿಂಗ್ ಕಾರ್ಯಕ್ರಮಗಳು, ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಮತ್ತು ಭಾರತದಲ್ಲಿ ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳ ಆಫ್‌ಶೋರ್ ಕ್ಯಾಂಪಸ್‌ ಗಳ ಸ್ಥಾಪನೆಯಂತಹ ಉಪಕ್ರಮಗಳ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಲು ಇಬ್ಬರೂ ನಾಯಕರು ನಿರ್ಧರಿಸಿದರು.

ವಿಶ್ವವು ಜಾಗತಿಕ ಕಾರ್ಯಕ್ಷೇತ್ರವಾಗಿ ರೂಪಾಂತರಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನವೀನ, ಪರಸ್ಪರ ಲಾಭದಾಯಕ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಉಭಯ ದೇಶಗಳ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ, ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸುವ ಮೂಲಕ, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಕಾನೂನುಬದ್ಧ ಸಂಚಾರಕ್ಕೆ ಮಾರ್ಗಗಳನ್ನು ಸುಗಮಗೊಳಿಸಲು ಮತ್ತು ಅಲ್ಪಾವಧಿಯ ಪ್ರವಾಸಿ ಹಾಗೂ ವಾಣಿಜ್ಯ ಪ್ರಯಾಣವನ್ನು ಸುಲಭಗೊಳಿಸಲು ನಾಯಕರು ಬದ್ಧರಾದರು.  ದುಷ್ಕರ್ಮಿಗಳು, ಅಪರಾಧ ಸಹಾಯಕರು ಮತ್ತು ಅಕ್ರಮ ವಲಸೆ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ಗುರಿ ಸಾಧಿಸಲಾಗುವುದು.

ಅಕ್ರಮ ವಲಸೆ ಜಾಲಗಳು, ಸಂಘಟಿತ ಅಪರಾಧ ಸಿಂಡಿಕೇಟ್‌ ಗಳು, ಮಾದಕ ದ್ರವ್ಯ ಭಯೋತ್ಪಾದಕರು, ಮಾನವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರು, ಮತ್ತು ಸಾರ್ವಜನಿಕ ಹಾಗೂ ರಾಜತಾಂತ್ರಿಕ ಸುರಕ್ಷತೆ ಮತ್ತು ಉಭಯ ರಾಷ್ಟ್ರಗಳ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಗೆ ಅಪಾಯ ಒಡ್ಡುವ ಇತರ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಜಾರಿ ಸಹಕಾರವನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು.

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರಗಳು, ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಉನ್ನತ ಮಟ್ಟದ ಸಂಪರ್ಕವನ್ನು ಮುಂದುವರಿಸಲು ಮತ್ತು ಭಾರತ-ಅಮೆರಿಕ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧರಾದರು.  ಈ ಪಾಲುದಾರಿಕೆಯು ಜನರ ಉಜ್ವಲ ಭವಿಷ್ಯದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ, ಜಾಗತಿಕ ಒಳಿತಿಗೆ ಕೊಡುಗೆ ನೀಡುತ್ತದೆ ಮತ್ತು ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರ್ಮಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament on verge of history, says PM Modi, as it readies to take up women's bills

Media Coverage

Parliament on verge of history, says PM Modi, as it readies to take up women's bills
NM on the go

Nm on the go

Always be the first to hear from the PM. Get the App Now!
...
Booth strength, people’s trust and grassroots outreach - PM Modi’s interaction with BJP Karyakartas from West Bengal
April 14, 2026
The citizens across West Bengal have described the BJP’s Sankalp Patra (manifesto) as practical, implementable and focused on holistic development and welfare: PM Modi
PM Modi constantly reiterated to the BJP karyakartas of West Bengal that booth-level strength is the foundation of electoral success
The scale of victory in West Bengal will directly translate into relief and better governance for its people: PM Modi to BJP karyakartas

PM Modi interacted with BJP karyakartas from across West Bengal under the ‘Mera Booth, Sabse Mazboot’ initiative, extending his best wishes for the Bengali New Year to all citizens of the state.


During the interaction, the PM reflected on his recent visits across various parts of West Bengal, highlighting the remarkable enthusiasm, energy and growing support for the BJP among the people. He credited this momentum to the tireless efforts and dedication of booth-level karyakartas.

The PM appreciated the positive response to the BJP’s Sankalp Patra (manifesto), stating that citizens across the state have described it as practical, implementable, and focused on holistic development and welfare.

During the interaction, several karyakartas shared their on-the-ground experiences, highlighting key concerns among the people, including safety, employment, corruption, political violence, and governance challenges. Women karyakartas spoke about concerns over security and dignity, while youth-related issues such as migration due to lack of opportunities were also raised.

PM Modi acknowledged these concerns and emphasised the need for continuous engagement with citizens at the grassroots level. He urged karyakartas to strengthen booth-level organisation through regular outreach and small group meetings, actively connect with women, youth, farmers and first-time voters , clearly communicate the benefits and vision outlined by the BJP, ensure transparency, development and safety, use social media and digital tools effectively to amplify facts and counter misinformation.
He also stressed the importance of documenting and communicating local issues, ensuring that the voices of the people are consistently heard and represented.

The PM constantly reiterated that booth-level strength is the foundation of electoral success, stating that “Booth jeeta, toh chunav jeeta.” He expressed confidence that the growing trust of the people in BJP presents a significant opportunity to bring transformation in West Bengal.

Concluding the interaction, PM Modi said that the scale of victory in West Bengal will directly translate into relief and better governance for its people. He encouraged all karyakartas to work with renewed energy, expand outreach, and ensure that every household becomes a partner in this journey of development.