'ವಸುಧೈವ ಕುಟುಂಬಕಂ'- ಈ ಎರಡು ಪದಗಳು ಗಾಢವಾದ ತತ್ವವನ್ನು ಸಾರುತ್ತವೆ. ಇದರ ಅರ್ಥ 'ಜಗತ್ತು ಒಂದೇ ಕುಟುಂಬ'. ಗಡಿಗಳು, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಒಂದು ಸಾರ್ವತ್ರಿಕ ಕುಟುಂಬವಾಗಿ ಪ್ರಗತಿ ಸಾಧಿಸಲು ನಮ್ಮನ್ನು ಪ್ರೋತ್ಸಾಹಿಸುವ ದೃಷ್ಟಿಕೋನ ಇದಾಗಿದೆ. ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಇದು ಮಾನವ ಕೇಂದ್ರಿತ ಪ್ರಗತಿಯ ಕರೆಯಾಗಿ ಮಾರ್ಪಟ್ಟಿದೆ. ಒಂದು ಭೂಮಿಯಾಗಿ, ನಮ್ಮ ಗ್ರಹವನ್ನು ಪಾಲನೆ ಮಾಡಲು ನಾವು ಒಟ್ಟಾಗಿ ಬರುತ್ತಿದ್ದೇವೆ. ಒಂದು ಕುಟುಂಬವಾಗಿ, ಬೆಳವಣಿಗೆಯ ಸಾಧನೆಯಲ್ಲಿ ನಾವು ಪರಸ್ಪರರನ್ನು ಬೆಂಬಲಿಸುತ್ತೇವೆ ಮತ್ತು ನಾವು ಹಂಚಿಕೆಯ ಭವಿಷ್ಯದ ಕಡೆಗೆ ಒಟ್ಟಿಗೆ ಸಾಗುತ್ತೇವೆ - ಒಂದು ಭವಿಷ್ಯ - ಇದು ಈ ಅಂತರ್‌ ಸಂಪರ್ಕಿತ ಕಾಲದಲ್ಲಿ ನಿರಾಕರಿಸಲಾಗದ ಸತ್ಯವಾಗಿದೆ.

ಸಾಂಕ್ರಾಮಿಕ ನಂತರದ ವಿಶ್ವ ಕ್ರಮಾಂಕವು ಅದರ ಹಿಂದಿನ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಇಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಿವೆ.

ಮೊದಲನೆಯದಾಗಿ, ಪ್ರಪಂಚದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಗುವ ಅಗತ್ಯವಿದೆ ಎಂಬ ಅರಿವು ಬೆಳೆಯುತ್ತಿದೆ.

ಎರಡನೆಯದಾಗಿ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹತೆಯ ಪ್ರಾಮುಖ್ಯತೆಯನ್ನು ಜಗತ್ತು ಗುರುತಿಸುತ್ತಿದೆ.

ಮೂರನೆಯದಾಗಿ, ಜಾಗತಿಕ ಸಂಸ್ಥೆಗಳ ಸುಧಾರಣೆಯ ಮೂಲಕ ಬಹುಪಕ್ಷೀಯತೆಯನ್ನು ಹೆಚ್ಚಿಸಲು ಸಾಮೂಹಿಕ ಕರೆ ಇದೆ.

ನಮ್ಮ ಜಿ-20 ಅಧ್ಯಕ್ಷತೆಯು ಈ ಬದಲಾವಣೆಗಳಿಗೆ ವೇಗವರ್ಧಕದ ಪಾತ್ರವನ್ನು ವಹಿಸಿದೆ.

ಡಿಸೆಂಬರ್ 2022 ರಲ್ಲಿ, ನಾವು ಇಂಡೋನೇಷ್ಯಾದಿಂದ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ, ನಾನು ಜಿ-20 ರ ಮೂಲಕ ಮನಸ್ಥಿತಿ ಬದಲಾವಣೆಯನ್ನು ವೇಗಗೊಳಿಸಬೇಕು ಎಂದು ಬರೆದಿದ್ದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು (ಗ್ಲೋಬಲ್‌ ಸೌತ್)‌ ಮತ್ತು ಆಫ್ರಿಕಾದ ರಾಷ್ಟ್ರಗಳ ನಿರ್ಲಕ್ಷಿತ ಆಕಾಂಕ್ಷೆಗಳನ್ನು ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಅಗತ್ಯವಾಗಿತ್ತು.

ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು 125 ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ಇದು ನಮ್ಮ ಅಧ್ಯಕ್ಷತೆಯಲ್ಲಿನ ಅತಿಮುಖ್ಯ ಉಪಕ್ರಮಗಳಲ್ಲಿ ಒಂದಾಗಿದೆ. ಗ್ಲೋಬಲ್ ಸೌತ್‌ನಿಂದ ಒಳಹರಿವು ಮತ್ತು ಆಲೋಚನೆಗಳನ್ನು ಸಂಗ್ರಹಿಸಲು ಇದೊಂದು ಪ್ರಮುಖ ಕಾರ್ಯವಾಗಿತ್ತು. ಇದಲ್ಲದೆ, ನಮ್ಮ ಅಧ್ಯಕ್ಷತೆಯು ಆಫ್ರಿಕನ್ ದೇಶಗಳಿಂದ ಅತಿದೊಡ್ಡ ಭಾಗವಹಿಸುವಿಕೆಯನ್ನು ಕಂಡಿರುವುದು ಮಾತ್ರವಲ್ಲ, ಆಫ್ರಿಕನ್ ಒಕ್ಕೂಟವನ್ನು ಜಿ-20 ರ ಖಾಯಂ ಸದಸ್ಯನನ್ನಾಗಿ ಸೇರಿಸಲು ಒತ್ತಾಯಿಸಿದೆ.

ಅಂತರ್‌ ಸಂಪರ್ಕಿತ ಜಗತ್ತಿನಲ್ಲಿ ವಲಯಗಳಾದ್ಯಂತ ನಮ್ಮ ಸವಾಲುಗಳು ಪರಸ್ಪರ ಬೆಸೆದಿರುತ್ತವೆ. ಇದು 2030 ರ ಕಾರ್ಯಸೂಚಿಯ ಮಧ್ಯದ ವರ್ಷವಾಗಿದೆ ಮತ್ತು ಎಸ್‌ ಡಿ ಜಿ (ಸುಸ್ಥಿರ ಅಭಿವೃದ್ಧಿ ಗುರಿ) ಗಳ ಪ್ರಗತಿಯು ಹಳಿ ತಪ್ಪುತ್ತಿವೆ ಎಂದು ಅನೇಕರು ಹೆಚ್ಚಿನ ಕಾಳಜಿಯಿಂದ ಗಮನಿಸುತ್ತಿದ್ದಾರೆ. ಎಸ್‌ ಡಿ ಜಿ ಗಳ ಪ್ರಗತಿಯನ್ನು ವೇಗಗೊಳಿಸುವ ಜಿ-20 2023 ಕ್ರಿಯಾ ಯೋಜನೆಯು ಎಸ್‌ ಡಿ ಜಿ ಗಳನ್ನು ಅನುಷ್ಠಾನಗೊಳಿಸುವತ್ತ ಜಿ-20 ರ ಭವಿಷ್ಯದ ದಿಕ್ಕನ್ನು ಮುನ್ನಡೆಸುತ್ತದೆ.

ಭಾರತದಲ್ಲಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿದೆ ಮತ್ತು ಆಧುನಿಕ ಕಾಲದಲ್ಲೂ ನಾವು ಹವಾಮಾನ ಕ್ರಮಕ್ಕೆ ನಮ್ಮ ಪಾಲಿನ ಕೊಡುಗೆಯನ್ನು ನೀಡುತ್ತಿದ್ದೇವೆ.

ಗ್ಲೋಬಲ್‌ ಸೌತ್‌ ನ ಹಲವು ದೇಶಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಮತ್ತು ಹವಾಮಾನ ಕ್ರಮವು ಇದಕ್ಕೆ ಪೂರಕವಾಗಿರಬೇಕು. ಹವಾಮಾನ ಕ್ರಮದ ಮಹತ್ವಾಕಾಂಕ್ಷೆಗಳು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯ ಮೇಲಿನ ಕ್ರಮಗಳೊಂದಿಗೆ ಹೊಂದಾಣಿಕೆಯಾಗಬೇಕು.

ಏನನ್ನು ಮಾಡಬಾರದು ಎಂಬ ಸಂಪೂರ್ಣ ನಿರ್ಬಂಧಿತ ಮನೋಭಾವದಿಂದ ದೂರ ಸರಿಯುವ ಅವಶ್ಯಕತೆಯಿದೆ ಎಂದು ನಾವು ನಂಬುತ್ತೇವೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಏನು ಮಾಡಬಹುದು ಎಂಬುದರ ಮೇಲೆ ಹೆಚ್ಚು ರಚನಾತ್ಮಕ ನಿಲುವಿನ ಬಗ್ಗೆ ಕೇಂದ್ರೀಕರಿಸಬೇಕು.

ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗಾಗಿ ಚೆನ್ನೈ ಹೆಚ್‌ ಎಲ್‌ ಪಿ ಗಳು ನಮ್ಮ ಸಾಗರಗಳನ್ನು ಆರೋಗ್ಯಕರವಾಗಿಡುವುದರ ಮೇಲೆ ಕೇಂದ್ರೀಕರಿಸುತ್ತವೆ.

ಸ್ವಚ್ಛ ಮತ್ತು ಹಸಿರು ಹೈಡ್ರೋಜನ್‌ಗಾಗಿ ಹಸಿರು ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ನೊಂದಿಗೆ ಜಾಗತಿಕ ಪೂರಕ ವ್ಯವಸ್ಥೆಯು ನಮ್ಮ ಅಧ್ಯಕ್ಷ ಸ್ಥಾನದಿಂದ ಹೊರಹೊಮ್ಮುತ್ತದೆ.

2015 ರಲ್ಲಿ, ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಿದ್ದೇವೆ. ಈಗ, ಜಾಗತಿಕ ಜೈವಿಕ ಇಂಧನ ಒಕ್ಕೂಟದ ಮೂಲಕ, ಮರುಬಳಕೆ ಆರ್ಥಿಕತೆಯ ಪ್ರಯೋಜನಗಳಿಗೆ ಅನುಗುಣವಾಗಿ ಇಂಧನ ಪರಿವರ್ತನೆಗಳನ್ನು ಸಕ್ರಿಯಗೊಳಿಸಲು ನಾವು ಜಗತ್ತನ್ನು ಬೆಂಬಲಿಸುತ್ತೇವೆ.

ಹವಾಮಾನ ಕ್ರಮವನ್ನು ಪ್ರಜಾಪ್ರಭುತ್ವಗೊಳಿಸುವುದು ಆಂದೋಲನಕ್ಕೆ ಆವೇಗವನ್ನು ನೀಡಲು ಉತ್ತಮ ಮಾರ್ಗವಾಗಿದೆ. ವ್ಯಕ್ತಿಗಳು ತಮ್ಮ ದೀರ್ಘಾವಧಿಯ ಆರೋಗ್ಯದ ಆಧಾರದ ಮೇಲೆ ದೈನಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೇ, ಅವರು ಗ್ರಹದ ದೀರ್ಘಾವಧಿಯ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಆಧಾರದ ಮೇಲೆ ಜೀವನಶೈಲಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯೋಗವು ಸ್ವಾಸ್ಥ್ಯಕ್ಕಾಗಿ ಜಾಗತಿಕ ಜನಾಂದೋಲನವಾದಂತೆಯೇ, ನಾವು ಸುಸ್ಥಿರ ಪರಿಸರಕ್ಕಾಗಿ ಜೀವನಶೈಲಿಯೊಂದಿಗೆ (ಲೈಫ್) ಜಗತ್ತನ್ನು ಹುರಿದುಂಬಿಸಿದ್ದೇವೆ.

ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಸಿರಿಧಾನ್ಯ ಅಥವಾ ಶ್ರೀಅನ್ನ, ಹವಾಮಾನ-ಆಧಾರಿತ ಕೃಷಿಯನ್ನು ಉತ್ತೇಜಿಸುವ ಜೊತೆಗೆ ಇದಕ್ಕೆ ಸಹಾಯ ಮಾಡಬಹುದು. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿ, ನಾವು ಸಿರಿಧಾನ್ಯವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ಡೆಕ್ಕನ್ ಉನ್ನತ ಮಟ್ಟದ ತತ್ವಗಳು ಸಹ ಈ ದಿಕ್ಕಿನಲ್ಲಿ ಸಹಾಯಕವಾಗಿವೆ.

ತಂತ್ರಜ್ಞಾನವು ಪರಿವರ್ತಕವಾಗಿದೆ ಆದರೆ ಅದನ್ನು ಎಲ್ಲರಿಗೂ ಲಭ್ಯಗೊಳಿಸುವ ಅಗತ್ಯವಿದೆ. ಹಿಂದೆ, ತಾಂತ್ರಿಕ ಪ್ರಗತಿಯ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾಗಿ ದೊರಕಿಲ್ಲ. ಭಾರತವು ಕಳೆದ ಕೆಲವು ವರ್ಷಗಳಿಂದ ತಂತ್ರಜ್ಞಾನವನ್ನು ಅಸಮಾನತೆಯನ್ನು ಕಡಿಮೆ ಮಾಡಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದೆ.

ಉದಾಹರಣೆಗೆ, ಪ್ರಪಂಚದಾದ್ಯಂತದ ಬ್ಯಾಂಕ್ ವ್ಯವಸ್ಥೆಯಿಂದ ಹೊರಗೆ ಉಳಿದಿರುವ ಅಥವಾ ಡಿಜಿಟಲ್ ಗುರುತುಗಳನ್ನು ಹೊಂದಿಲ್ಲದ ಶತಕೋಟಿ ಜನರನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಮೂಲಕ ಆರ್ಥಿಕವಾಗಿ ಒಳಗೊಳ್ಳಬಹುದು. ನಮ್ಮ ಡಿಪಿಐ ಬಳಸಿ ನಾವು ನಿರ್ಮಿಸಿದ ಪರಿಹಾರಗಳು ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಈಗ, ಜಿ-20 ಮೂಲಕ, ಒಳಗೊಳ್ಳುವ ಬೆಳವಣಿಗೆಯ ಶಕ್ತಿಯನ್ನು ಅನ್‌ಲಾಕ್ ಮಾಡಲು ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಡಿಪಿಐ ಅನ್ನು ಅಳವಡಿಸಿಕೊಳ್ಳಲು, ನಿರ್ಮಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತೇವೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿರುವುದು ಆಕಸ್ಮಿಕವಲ್ಲ. ನಮ್ಮ ಸರಳ, ಹೆಚ್ಚಿಸಬಲ್ಲ ಮತ್ತು ಸುಸ್ಥಿರ ಪರಿಹಾರಗಳು ನಮ್ಮ ಅಭಿವೃದ್ಧಿಯ ಕಥೆಯನ್ನು ಮುನ್ನಡೆಸಲು ದುರ್ಬಲ ಮತ್ತು ವಂಚಿತರನ್ನು ಸಬಲೀಕರಣಗೊಳಿಸಿವೆ. ಬಾಹ್ಯಾಕಾಶದಿಂದ ಕ್ರೀಡೆ, ಆರ್ಥಿಕತೆ, ಉದ್ಯಮಶೀಲತೆಯವರೆಗೆ ಭಾರತೀಯ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಧ್ಯಕ್ಷತೆಯು ಲಿಂಗ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು, ಕಾರ್ಮಿಕ ಬಲದ ಭಾಗವಹಿಸುವಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಮತ್ತು ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರಿಗೆ ದೊಡ್ಡ ಪಾತ್ರವನ್ನು ಸಕ್ರಿಯಗೊಳಿಸುತ್ತದೆ.

ಭಾರತಕ್ಕೆ, ಜಿ-20 ಅಧ್ಯಕ್ಷತೆಯು ಕೇವಲ ಉನ್ನತ ಮಟ್ಟದ ರಾಜತಾಂತ್ರಿಕ ಪ್ರಯತ್ನವಲ್ಲ. ಪ್ರಜಾಪ್ರಭುತ್ವದ ತಾಯಿಯಾಗಿ ಮತ್ತು ವೈವಿಧ್ಯತೆಗೆ ಮಾದರಿಯಾಗಿ, ನಾವು ಈ ಅನುಭವದ ಬಾಗಿಲುಗಳನ್ನು ಜಗತ್ತಿಗೆ ತೆರೆದಿದ್ದೇವೆ.

ಇಂದು, ಪ್ರಮಾಣದಲ್ಲಿ ಕೆಲಸಗಳನ್ನು ಸಾಧಿಸುವುದು ಭಾರತದ ಒಂದು ಗುಣಲಕ್ಷಣವಾಗಿದೆ. ಜಿ-20 ಅಧ್ಯಕ್ಷತೆಯು ಇದಕ್ಕೆ ಹೊರತಾಗಿಲ್ಲ. ಅದೊಂದು ಜನ ಪ್ರೇರಿತ ಆಂದೋಲನವಾಗಿ ಮಾರ್ಪಟ್ಟಿದೆ. ನಮ್ಮ ರಾಷ್ಟ್ರದ ಉದ್ದಗಲಕ್ಕೆ 60 ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ, ನಮ್ಮ ಅವಧಿಯ ಅಂತ್ಯದ ವೇಳೆಗೆ 125 ದೇಶಗಳ ಸುಮಾರು 100,000 ಪ್ರತಿನಿಧಿಗಳಿಗೆ ಆತಿಥ್ಯ ನೀಡಲಾಗುವುದು. ಯಾವುದೇ ಅಧ್ಯಕ್ಷತೆಯಲ್ಲೂ ಇಷ್ಟೊಂದು ವಿಶಾಲವಾದ ಮತ್ತು ವೈವಿಧ್ಯಮಯ ಭೌಗೋಳಿಕ ವಿಸ್ತಾರದಲ್ಲಿ ಆಯೋಜನೆಯಾಗಿರಲಿಲ್ಲ.

ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ಬೇರೆಯವರಿಂದ ಕೇಳುವುದು ಬೇರೆಯ ವಿಷಯ, ಆದರೆ ಅವುಗಳನ್ನು ನೇರವಾಗಿ ಅನುಭವಿಸುವುದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನಮ್ಮ ಜಿ-20 ಪ್ರತಿನಿಧಿಗಳು ಇದನ್ನು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ.

ನಮ್ಮ ಜಿ-20 ಅಧ್ಯಕ್ಷತೆಯು ವಿಭಜನೆಗಳನ್ನು ಬೆಸೆಯಲು, ಅಡೆತಡೆಗಳನ್ನು ಕೆಡವಲು ಮತ್ತು ಸಹಯೋಗದ ಬೀಜಗಳನ್ನು ಬಿತ್ತಲು ಶ್ರಮಿಸುತ್ತದೆ, ಇಲ್ಲಿ ಅಪಸ್ವರದ ವಿರುದ್ಧ ಏಕತೆ ಮೇಲುಗೈ ಸಾಧಿಸುತ್ತದೆ, ಇಲ್ಲಿ ಹಂಚಿಕೆಯ ಅದೃಷ್ಟವು ಪ್ರತ್ಯೇಕತೆಯನ್ನು ನಿವಾರಿಸುತ್ತದೆ. ಜಿ-20 ಅಧ್ಯಕ್ಷರಾಗಿ, ನಾವು ಜಾಗತಿಕ ಕೋಷ್ಟಕವನ್ನು ವಿಸ್ತರಿಸಲು, ಪ್ರತಿ ಧ್ವನಿಯನ್ನು ಕೇಳಲಾಗುತ್ತದೆ ಮತ್ತು ಪ್ರತಿ ದೇಶವು ಕೊಡುಗೆ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡಿದ್ದೆವು. ಕ್ರಮಗಳು ಮತ್ತು ಫಲಿತಾಂಶಗಳೊಂದಿಗೆ ನಾವು ನಮ್ಮ ಪ್ರತಿಜ್ಞೆಯನ್ನು ಈಡೇರಿಸಿದ್ದೇವೆ ಎಂಬ ಭರವಸೆ ನನಗಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian economy navigated well external uncertainties: RBI Bulletin

Media Coverage

Indian economy navigated well external uncertainties: RBI Bulletin
NM on the go

Nm on the go

Always be the first to hear from the PM. Get the App Now!
...
ಭಾರತದ ಏಕತೆ ಮತ್ತು ಪ್ರಗತಿಗೆ ಮೀಸಲಾದ ಜೀವನ
July 06, 2026

ಇಂದು, ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಅವರ ಜೀವನವು ಮಾ ಭಾರತಿಯ ಬಗೆಗಿನ ಧೈರ್ಯ ಮತ್ತು ಅಚಲ ಬದ್ಧತೆಗೆ ಎಂದೆಂದಿಗೂ ಮಾದರಿಯಾಗಿದೆ. ಆಧುನಿಕ ಭಾರತದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರಷ್ಟು ಆಳವಾಗಿ ಬುದ್ಧಿವಂತಿಕೆ, ಸಾರ್ವಜನಿಕ ಸೇವೆ ಮತ್ತು ನೈತಿಕ ದೃಢತೆಯ ಸಂಗಮವನ್ನು ಹೊಂದಿದ್ದ ನಾಯಕರು ಬಹಳ ಕಡಿಮೆ.

ಯುವ ಶ್ಯಾಮ ಪ್ರಸಾದ್ ರವರು ತಮಗೆ ಸುಲಭವಾಗಿ, ಸಂರಕ್ಷಿತ ಮತ್ತು ಸುಖಮಯ ಜೀವನವನ್ನು ನೀಡಬಲ್ಲಂತಹ ಪರಿಸರದಲ್ಲಿ ಜನಿಸಿದ್ದರು. ಅವರ ತಂದೆ ಸರ್ ಅಶುತೋಷ್ ಮುಖರ್ಜಿಯವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಆದರೆ, ವಿಧಿಯು ಅವರ ಮುಂದೆ ಸೌಲಭ್ಯಗಳ ಹಾದಿಯನ್ನು ಇರಿಸಿದ್ದರೂ, ಅವರ ಆತ್ಮಸಾಕ್ಷಿಯು ಅವರನ್ನು ತ್ಯಾಗ ಮತ್ತು ರಾಷ್ಟ್ರ ಸೇವೆಯ ಹಾದಿಯತ್ತ ಕೊಂಡೊಯ್ಯಿತು. ವಸಾಹತುಶಾಹಿ, ಕೋಮುವಾದ, ಮಾನವೀಯ ಸವಾಲುಗಳು ಹೀಗೆ ಆ ಕಾಲದ ಯಾವುದೇ ಪ್ರಕ್ಷುಬ್ಧತೆಯ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಅವರಿಗೆ ಸಾಧ್ಯವಿರಲಿಲ್ಲ. ಈ ಹಾದಿಯಲ್ಲಿ ಅವರು ತಮ್ಮ ಶಿಶುವಿನ ಮರಣ ಮತ್ತು ನಂತರ ಪತ್ನಿಯ ಅಗಲಿಕೆಯಂತಹ ಆಳವಾದ ವೈಯಕ್ತಿಕ ದುರಂತಗಳನ್ನು ಅನುಭವಿಸಿದರು. ಆದರೂ, ಈ ದುರಂತಗಳು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದವು ಮತ್ತು ಸೇವೆಯ ಬಗೆಗಿನ ಅವರ ಬದ್ಧತೆಯನ್ನು ಹೆಚ್ಚಿಸಿದವು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಸಾರ್ವಜನಿಕ ಜೀವನವನ್ನು ವ್ಯಾಖ್ಯಾನಿಸುವ ಒಂದು ಆದರ್ಶವಿದ್ದರೆ, ಅದು ಭಾರತದ ಅವಿಭಾಜ್ಯತೆ. ದೇಶ ವಿಭಜನೆಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ದೃಢವಾಗಿ ನಿಂತರು. ಕೆಲವು ವರ್ಷಗಳ ನಂತರ, ಅದೇ ದೃಢ ನಂಬಿಕೆ ಅವರನ್ನು ಜಮ್ಮು ಮತ್ತು ಕಾಶ್ಮೀರದತ್ತ ಸೆಳೆಯಿತು. ಸೆರೆವಾಸ ಅವರನ್ನು ನಿರುತ್ಸಾಹಗೊಳಿಸಲಿಲ್ಲ ಮತ್ತು ಏಕಾಂತತೆ ಅವರನ್ನು ಕುಗ್ಗಿಸಲಿಲ್ಲ. ತಾವು ಯಾರ ಹಿತಕ್ಕಾಗಿ ಹೋರಾಡಿದ್ದರೋ, ಅಂತಹ ಅಸಂಖ್ಯಾತ ಜನರಿಂದ ದೂರವಿದ್ದಾಗಲೇ ಬಂಧನದಲ್ಲಿ ಅವರ ಜೀವನವು ಅಕಾಲಿಕವಾಗಿ ಕೊನೆಗೊಂಡಿತು. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಅಂತಿಮ ತ್ಯಾಗವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಸ್ಮರಣೆಯ ಭಾಗವಾಗುವ ಕೆಲವು ಕ್ಷಣಗಳು ಬರುತ್ತವೆ. ಡಾ. ಮುಖರ್ಜಿಯವರ ಕೊನೆಯ ಪಯಣ ಅಂತಹ ಒಂದು ಕ್ಷಣವಾಗಿದೆ. ಆಚಾರ್ಯ ವಿನೋಬಾ ಭಾವೆಯವರು, "ಡಾ. ಮುಖರ್ಜಿಯವರು ತಮಗೆ ನಂಬಿಕೆಯಿದ್ದ ಉದ್ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿಕೊಂಡರು" ಎಂದು ಹೇಳಿದ್ದರು. ಹಲವು ವರ್ಷಗಳ ನಂತರ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35(ಎ) ವಿಧಿಗಳ ರದ್ದು ಅವರ ಹುತಾತ್ಮತೆಗೆ ನೀಡಿದ ಅತ್ಯಂತ ಸೂಕ್ತ ಗೌರವವಾಗಿದೆ.

ಡಾ. ಮುಖರ್ಜಿಯವರು ಭಾರತಕ್ಕೆ ಮತ್ತು ಭಾರತೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದರು. ಆ ಕಾಲದ ಸಾಂಪ್ರದಾಯಿಕ ಮನಸ್ಥಿತಿಯನ್ನು ವಿರೋಧಿಸುವ ಸಂಸ್ಥೆಗಳನ್ನು ನಿರ್ಮಿಸುವ ಮತ್ತು ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅವರು ಇದನ್ನು ಸಾಧಿಸಿದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಅತಿಕಿರಿಯ ಉಪಕುಲಪತಿಯಾದರು. ತಮ್ಮ ವಿಶಿಷ್ಟ ಶೈಲಿಯಲ್ಲಿ, ದೇಶಭಕ್ತಿಯುತ ಮತ್ತು ಭವಿಷ್ಯದ ದೃಷ್ಟಿಯುಳ್ಳ ಸಕಾರಾತ್ಮಕ ಬದಲಾವಣೆಗಳನ್ನು ಅವರು ತಂದರು. ಶಿಕ್ಷಣ ತಜ್ಞರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು, "ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗುಮಾಸ್ತರು ಮತ್ತು ಕಡಿಮೆ ಸಂಬಳ ಪಡೆಯುವ ಸಿಬ್ಬಂದಿಯನ್ನು ಸಿದ್ಧಪಡಿಸುವ ಕಾರ್ಖಾನೆಗಳೆಂದು ನೋಡುವುದು ತಪ್ಪು. ನಾವು ಪುರಸಭೆಗಳು, ಪ್ರಾಂತೀಯ ಮತ್ತು ಕೇಂದ್ರ ಶಾಸನಸಭೆಗಳಂತಹ ನಮ್ಮ ಸ್ವಯಂ-ಆಡಳಿತ ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಬಲ್ಲ ಹಾಗೂ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಂತಹ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಿರ್ವಹಿಸಬಲ್ಲ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು" ಎಂದು ಅವರು ಅದ್ಭುತವಾಗಿ ಹೇಳಿದ್ದರು.

ಅವರ ನೇತೃತ್ವದಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಗ್ರಂಥಾಲಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಕಲಾಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಮತ್ತು ಕೃಷಿಯಲ್ಲಿ ಕೋರ್ಸ್‌ಗಳನ್ನು ಸ್ಥಾಪಿಸುವಂತಹ ವಿಶಿಷ್ಟ ಪ್ರಯತ್ನಗಳನ್ನು ಕೈಗೊಂಡಿತು. ಕ್ರೀಡೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿ ಕಲ್ಯಾಣದಂತಹ ಕ್ಷೇತ್ರಗಳತ್ತ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಲು, ಅವರು ಜನವರಿ 24 ಅನ್ನು ವಿಶ್ವವಿದ್ಯಾನಿಲಯದ ಸ್ಥಾಪನಾ ದಿನವನ್ನಾಗಿ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ವಿಶ್ವವಿದ್ಯಾನಿಲಯಕ್ಕಾಗಿ ಗೀತೆ ರಚಿಸಲು ಅವರು ಸ್ವತಃ ಗುರುದೇವ ಟ್ಯಾಗೋರ್ ಅವರನ್ನೇ ಕೋರಿದ್ದರು.

ಈ ಮನೋಭಾವದ ಮತ್ತೊಂದು ಉದಾಹರಣೆಯನ್ನು ಅವರ ಜೀವನದ ನಂತರದ ಭಾಗದಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಲು ನಿರ್ಧರಿಸಿದಾಗ ಕಾಣಬಹುದು. ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಹೊಂದಿರುವಂತೆಯೇ ಭಾರತದ ಪ್ರಗತಿಗಾಗಿ ಧ್ವನಿ ಎತ್ತಲು ಪರ್ಯಾಯ ವೇದಿಕೆಯ ಅಗತ್ಯವಿದೆ ಎಂದು ಅವರು ಭಾವಿಸಿದರು. ಪಕ್ಷದ ಚಿಹ್ನೆಯು ಮಣ್ಣಿನ ದೀಪವಾಗಿದ್ದುದು ಬಹಳ ಅರ್ಥಪೂರ್ಣವಾಗಿತ್ತು. ಒಂದು ದೀಪವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ತನ್ನ ಸುತ್ತಲಿನ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಜನಸಂಘವು ಸಕ್ರಿಯವಾಗಿದ್ದ ವರ್ಷಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಡಿದ್ದು ಕೂಡ ಇದನ್ನೇ.

ಭಾರತದ ಕೈಗಾರಿಕಾ ಮತ್ತು ಪೂರೈಕೆ ಸಚಿವರಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಧಿಕಾರಾವಧಿಯು, ಅಭಿವೃದ್ಧಿಯ ಕುರಿತಾದ ಅವರ ಸಮಗ್ರ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದಿದ್ದ ಒಬ್ಬ ರಾಜನೀತಿಜ್ಞರನ್ನು ಅನಾವರಣಗೊಳಿಸುತ್ತದೆ. ಅವರು ಕೈಗಾರಿಕೆಯನ್ನು ನವತಂತ್ರದ ಭಾರತಕ್ಕೆ ಘನತೆ, ಅವಕಾಶ ಮತ್ತು ಆತ್ಮವಿಶ್ವಾಸವನ್ನು ಮರಳಿ ತರುವ ಸಾಧನವಾಗಿ ನೋಡಿದರು. ಅವರು ಸಂಪತ್ತಿನ ಸೃಷ್ಟಿ ಮತ್ತು ಮೌಲ್ಯವರ್ಧನೆಯನ್ನು ಗೌರವಿಸಿದರು. ದಾಮೋದರ ವ್ಯಾಲಿ ಕಾರ್ಪೊರೇಷನ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮತ್ತು ಬಲಿಷ್ಠ ಕೈಗಾರಿಕಾ ನೀತಿಯಂತಹ ಪ್ರವರ್ತಕ ಉಪಕ್ರಮಗಳ ಮೂಲಕ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯವನ್ನು ಹಾಕುವಾಗ, ಅವರು ಭಾರತದ ಸಾಂಪ್ರದಾಯಿಕ ಶಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಏಕಕಾಲದಲ್ಲಿ ನೋಡಿಕೊಂಡರು. ಕೈಮಗ್ಗ, ಕುಟೀರ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಜವಳಿ ಕಾರ್ಮಿಕರು ಅವರಲ್ಲಿ ಸಮಾನವಾದ ಬದ್ಧತೆಯುಳ್ಳ ಚಾಂಪಿಯನ್ ಅನ್ನು ಕಂಡುಕೊಂಡರು.

ಇಲ್ಲಿ, ನಾನು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸ್ವಾವಲಂಬನೆಯ ಸ್ಪಷ್ಟ ದೃಷ್ಟಿಯೊಂದಿಗೆ ಡಾ. ಮುಖರ್ಜಿಯವರು ಸ್ಥಾಪಿಸಲು ಶ್ರಮಿಸಿದ ಸಿಂಧ್ರಿ ಕಾರ್ಖಾನೆಯನ್ನು, ಹಲವು ದಶಕಗಳ ಕಾಲ ದೇಶವನ್ನು ಆಳಿದವರು ನಿರ್ಲಕ್ಷಿಸಿದ್ದರು. ನಮ್ಮ ಸರ್ಕಾರಕ್ಕೆ ಅದರ ಪುನರುಜ್ಜೀವನಕ್ಕೆ ಕೊಡುಗೆ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ.

ಭಾರತದ ನಾಗರಿಕತೆಯ ಪರಂಪರೆಯು ದೀರ್ಘಕಾಲದಿಂದಲೂ ಸಂವಾದ ಮತ್ತು ಚರ್ಚೆಗಳನ್ನು ಸಂಭ್ರಮಿಸಿದೆ. ಡಾ. ಮುಖರ್ಜಿಯವರು ಈ ಪ್ರಜಾಸಾಮಾಜಿಕ ಮನೋಭಾವವನ್ನು ಸಾಕಾರಗೊಳಿಸಿದ್ದರು. ದೇಶ ನಿರ್ಮಾಣದ ಕಾರ್ಯವು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿ, ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ, ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು ಮತ್ತು ರಾಷ್ಟ್ರಕ್ಕೆ ಅಗತ್ಯವೆಂದು ಅವರು ನಂಬಿದ್ದ ರಾಜಕೀಯ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

75 ವರ್ಷಗಳ ಹಿಂದೆ, ಪಂಡಿತ್ ನೆಹರು ಅವರು ಮೊದಲ ತಿದ್ದುಪಡಿಯನ್ನು ತಂದರು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಡಾ. ಮುಖರ್ಜಿಯವರು ಇದನ್ನು ತೀವ್ರವಾಗಿ ಟೀಕಿಸಿದವರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಏನು ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು. ಮತ್ತು ಅವರು ಹೇಳಿದ್ದು ನಿಜವಾಯಿತು. 75 ವರ್ಷಗಳ ಹಿಂದೆ ಮೊದಲ ತಿದ್ದುಪಡಿಯನ್ನು ತಂದವರು, 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 50 ವರ್ಷಗಳ ಹಿಂದೆ 42ನೇ ತಿದ್ದುಪಡಿ ಕಾಯಿದೆಯನ್ನು ತಂದರು, ಇದು ಮತ್ತೊಮ್ಮೆ ಉದಾರವಾದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲದ ಮೇಲೆ ದಾಳಿ ಮಾಡಿತು.

ಡಾ. ಮುಖರ್ಜಿಯವರು ತಮ್ಮ ಮಾನವೀಯ ಪ್ರಯತ್ನಗಳಿಗಾಗಿಯೂ ಜನಪ್ರಿಯರಾಗಿದ್ದರು. 1943 ರಲ್ಲಿ ಬಂಗಾಳದಲ್ಲಿ ಅತಿ ಭೀಕರ ಬರಗಾಲ ಉಂಟಾದಾಗ, ಡಾ. ಮುಖರ್ಜಿಯವರು ಸಂತ್ರಸ್ತರಿಗೆ ಸೇವೆ ಸಲ್ಲಿಸುವುದರಲ್ಲಿ ಮಗ್ನರಾದರು. ಜನರಿಗೆ ಆಹಾರ ಒದಗಿಸಲು ಹಲವಾರು ಕ್ಯಾಂಟೀನ್‌ಗಳು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯುವುದನ್ನು ಅವರು ಖಚಿತಪಡಿಸಿದರು. ಒಂದು ಕಡೆ, ಅವರು ತಮ್ಮ ಜನರ ಸಂಕಷ್ಟದಿಂದ ತೀವ್ರವಾಗಿ ನೊಂದಿದ್ದರೆ, ಇನ್ನೊಂದೆಡೆ ವಸಾಹತುಶಾಹಿ ಆಡಳಿತಗಾರರ ಸಂವೇದನಾಹೀನತೆಯು ಅವರನ್ನು ಅಸಹ್ಯಪಡುವಂತೆ ಮಾಡಿತ್ತು. ಅವರು 'ಪಂಚಶೇರ್ ಮನ್ವಾಂತರ್' (ಐವತ್ತರ ಕ್ಷಾಮ) ಎಂಬ ಪುಸ್ತಕವನ್ನೂ ಬರೆದರು, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. 1942 ರಲ್ಲಿ ಮಿಡ್ನಾಪುರದಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸಿದಾಗ, ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಅವರು ಮಾಡಿದ ಪ್ರಯತ್ನಗಳು ವ್ಯಾಪಕವಾಗಿ ಶ್ಲಾಘನೆಗೆ ಒಳಗಾದವು.

ಕೋಲ್ಕತ್ತಾದ ಕಾಲೇಜೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು "ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ; ಅದನ್ನು ಅರ್ಧಕ್ಕೆ ಬಿಡಬೇಡಿ ಅಥವಾ ಅಪೂರ್ಣವಾಗಿ ಬಿಡಬೇಡಿ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವವರೆಗೂ ಎಂದಿಗೂ ತೃಪ್ತರಾಗಬೇಡಿ." ಎಂದು ಅವರು ಯುವಕರಿಗೆ ಕರೆ ನೀಡಿದರು. ಭಾರತವು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಯುತ್ತಿರುವಾಗ, ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ಅವರು ಆಳವಾಗಿ ನಂಬಿದ್ದ ಬಲಿಷ್ಠ, ಸಂಘಟಿತ, ಆತ್ಮವಿಶ್ವಾಸವುಳ್ಳ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ನಿರ್ಮಿಸಲು ಪ್ರತಿದಿನ ಶ್ರಮಿಸುವುದು. ಮತ್ತು ಇಂದಿನ ಯುವಕರನ್ನು ನೋಡಿದಾಗ, ಅವರು ಸಂದರ್ಭಕ್ಕೆ ತಕ್ಕಂತೆ ಮುಂದೆ ಬಂದು, ನಿಖರವಾಗಿ ಅದನ್ನೇ ಮಾಡುತ್ತಾರೆ ಎಂಬ ದೃಢವಾದ ನಂಬಿಕೆ ನನಗಿದೆ.

- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ