"ಪ್ರಕೃತಿ ಸೊಬಗು ಮತ್ತು ಉಲ್ಲಾಸ ಮಾತ್ರವಲ್ಲದೆ, ಅಭಿವೃದ್ಧಿಯ ಹೊಸ ಮಾದರಿಯಿಂದಲೂ ಗೋವಾ ಗಮನ ಸೆಳೆದಿದೆ, ಪಂಚಾಯಿತಿಯಿಂದ ಹಿಡಿದು ರಾಜ್ಯಾಡಳಿತದವರೆಗೆ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಯತ್ನಗಳ ಪ್ರತಿಫಲನ ಮತ್ತು ಏಕತೆಗೆ ಸಾಕ್ಷಿಯಾಗಿದೆ"
"ಬಯಲು ಶೌಚ ಮುಕ್ತ(ಒಡಿಎಫ್), ವಿದ್ಯುತ್, ಕೊಳವೆ ನೀರು, ಬಡವರಿಗೆ ಪಡಿತರದಂತಹ ಎಲ್ಲಾ ಪ್ರಮುಖ ಯೋಜನೆಗಳಲ್ಲಿ ಗೋವಾ ಶೇ.100 ರಷ್ಟು ಸಾಧನೆ ಮಾಡಿದೆ"
"ಸ್ವಯಂಪೂರ್ಣ ಗೋವಾ ಎಂಬುದು ಹೊಸ ʻಟೀಮ್‌ ಗೋವಾʼದ ತಂಡದ ಸ್ಫೂರ್ತಿಯ ಫಲವಾಗಿದೆ"
"ಗೋವಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಮೂಲಸೌಕರ್ಯಗಳು ರೈತರು, ಜಾನುವಾರು ಸಾಕಣೆಗಾರರು ಮತ್ತು ನಮ್ಮ ಮೀನುಗಾರರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ"
"ಪ್ರವಾಸೋದ್ಯಮ ಪ್ರಧಾನ ರಾಜ್ಯಗಳು ಲಸಿಕೆ ಅಭಿಯಾನದಲ್ಲಿ ವಿಶೇಷ ಗಮನ ಸೆಳೆದವು ಮತ್ತು ಈ ನಿಟ್ಟಿನಲ್ಲಿ ಗೋವಾ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ"

ಸ್ವಯಂಪೂರ್ಣ ಗೋವಾದ ಮೂಲಕ ಆತ್ಮನಿರ್ಭರ್ ಭಾರತದ ಕನಸು ಸಾಕಾರಗೊಳಿಸಿದ ಗೋವಾದ ಮಹಾಜನತೆಯನ್ನು ಸ್ವಾಗತಿಸುತ್ತೇನೆ. ನಿಮ್ಮೆಲ್ಲರ ದಣಿವರಿಯದ ಪ್ರಯತ್ನದ ಫಲವಾಗಿ, ಗೋವಾದಲ್ಲಿ ಗೋವಾ ಜನತೆಯ ನೈಜ ಅಗತ್ಯಗಳನ್ನು ಪೂರೈಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ.

ಸರಕಾರದ ಬೆಂಬಲ ಮತ್ತು ಜನರ ಕಠಿಣ ಪರಿಶ್ರಮವಿದ್ದಾಗ ಆಗುವ ಬದಲಾವಣೆ ಮತ್ತು ಆತ್ಮವಿಶ್ವಾಸವನ್ನು ನಾವೆಲ್ಲಾ ಸ್ವಯಂಪೂರ್ಣ ಗೋವಾ ಫಲಾನುಭವಿಗಳ ಜತೆಗಿನ ಸಂವಾದದಲ್ಲಿ ಅನುಭವಿಸಿದ್ದೇವೆ. ಈ ಅರ್ಥಪೂರ್ಣ ಬದಲಾವಣೆಗೆ ದಾರಿ ತೋರಿದ ನಮ್ಮ ಜನಪ್ರಿಯ ಮತ್ತು ಶಕ್ತಿಶಾಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಜೀ, ನನ್ನ ಹಿರಿಯ ಸಹೋದ್ಯೋಗಿ ಶ್ರೀಪಾದ್ ನಾಯಕ್ ಜೀ, ಗೋವಾ ಉಪಮುಖ್ಯಮಂತ್ರಿಗಳಾದ ಶ್ರೀ ಮನೋಹರ್ ಅಜ್ ಗಾಂವ್ಕರ್ ಜೀ ಮತ್ತು ಶ್ರೀ ಚಂದ್ರಕಾಂತ್ ಕಾವ್ಳೇಕರ್ ಜೀ, ರಾಜ್ಯ ಸರ್ಕಾರದ ಇತರೆ ಸಚಿವರು, ಸಂಸದರು, ಶಾಸಕರು, ಸ್ಥಳೀಯ ಸಂಸ್ಥೆಗಳ ಎಲ್ಲಾ ಪ್ರತಿನಿಧಿಗಳು, ಜಿಪಂ ಸದಸ್ಯರು, ಪಂಚಾಯಿತಿ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು ಹಾಗೂ ನನ್ನ ಆತ್ಮೀಯ ಗೋವಾ ಸಹೋದರರು ಮತ್ತು ಸಹೋದರಿಯರೇ!!

ಗೋವಾ ಎಂದರೆ ಆನಂದ, ಗೋವಾ ಎಂದರೆ ಪ್ರಕೃತಿ ಮತ್ತು ಗೋವಾ ಎಂದರೆ ಪ್ರವಾಸೋದ್ಯಮ ಎಂದು ಹೇಳಲಾಗುತ್ತದೆ. ಆದರೆ ನಾನಿಂದು ಹೇಳಲು ಬಯಸುವುದೇನೆಂದರೆ, ಗೋವಾ ಎಂದರೆ ಅಭಿವೃದ್ಧಿಯ ಹೊಸ ಮಾದರಿ. ಸಂಘಟಿತ ಪ್ರಯತ್ನಗಳ ಪ್ರತಿಫಲವೇ ಗೋವಾ. ಗೋವಾ ಅರ್ಥಾತ್ ಪಂಚಾಯಿತಿಯಿಂದ ಆಡಳಿತದವರೆಗೆ ಅಭಿವೃದ್ಧಿಯ ಐಕಮತ್ಯ ಅಥವಾ ಒಗ್ಗಟ್ಟು.

ಸ್ನೇಹಿತರೇ,

ಹಲವಾರು ವರ್ಷಗಳ ತರುವಾಯ ದೇಶವು ಜನತೆಯ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ನ್ಯೂನತೆಗಳಿಂದ ಹೊರಬಂದಿದೆ. ಹಲವಾರು ದಶಕಗಳಿಂದ ವಂಚಿತರಾಗಿದ್ದ ಜನತೆಗೆ, ದೇಶವಾಸಿಗಳಿಗೆ ಆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆಯ ಗಮನ ನೀಡಲಾಗಿದೆ. ಈ ವರ್ಷ ಆಗಸ್ಟ್ 15ರಂದು ನಾನು ಕೆಂಪುಕೋಟೆಯ ಮೇಲೆ ನಿಂತು, ಈ ಎಲ್ಲಾ ಯೋಜನೆಗಳನ್ನು 100% ಸಂತೃಪ್ತ ಗುರಿ ಸಾಧನೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದ್ದೆ. ಪ್ರಮೋದ್ ಸಾವಂತ್ ಜೀ ಮತ್ತು ಅವರ ತಂಡದ ನಾಯಕತ್ವದಲ್ಲಿ ಗೋವಾ ರಾಜ್ಯವು ಈ ಎಲ್ಲ ಗುರಿಗಳನ್ನು ಸಾಧಿಸಲು ಮುಂಚೂಣಿ ಪಾತ್ರ ವಹಿಸಿದೆ. ಬಯಲು ಶೌಚ ಮುಕ್ತಗೊಳಿಸಲು ಭಾರತ ಸರ್ಕಾರ ಗುರಿ ನಿಗದಿಪಡಿಸಿತು. ಗೋವಾ ರಾಜ್ಯ 100% ಗುರಿ ಸಾಧಿಸಿತು. ಪ್ರತಿ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ನಿಗದಿಪಡಿಸಿದಾಗ, ಗೋವಾ ರಾಜ್ಯ 100% ಸಾಧನೆ ಮಾಡಿತು. ಹರ್ ಘರ್ ಜಲ್ ಅಭಿಯಾನದ 100% ಗುರಿ ಸಾಧಿಸಿದ ಮೊದಲ ರಾಜ್ಯವಾಗಿ ಗೋವಾ ಹೊರಹೊಮ್ಮಿತು. ಬಡವರಿಗೆ ಉಚಿತ ಪಡಿತರ ವಿತರಣೆಯಲ್ಲೂ ಗೋವಾ 100% ಗುರಿ ಸಾಧಿಸಿದೆ.

ಸ್ನೇಹಿತರೆ,

2 ದಿನಗಳ ಹಿಂದೆ ಭಾರತವು ಕೋವಿಡ್-19 ಲಸಿಕೆ ನೀಡಿಕೆಯಲ್ಲಿ 100 ಕೋಟಿ ಡೋಸ್ ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರಲ್ಲೂ ಸಹ ಗೋವಾ ಮೊದಲ ಡೋಸ್ ನೀಡಿಕೆಯಲ್ಲಿ 100% ಗುರಿ ಸಾಧನೆ ಮಾಡಿದೆ. 2ನೇ ಡೋಸ್ ಲಸಿಕೆ ನೀಡಿಕೆಯಲ್ಲೂ 100% ಸಾಧನೆ ಮಾಡಲು ಗೋವಾ, ತನ್ನೆಲ್ಲಾ ಪ್ರಯತ್ನಗಳನ್ನು ಹಾಕುತ್ತಿದೆ.

ಸಹೋದರ, ಸಹೋದರಿಯರೆ,

ಗೋವಾ ರಾಜ್ಯವು ಮಹಿಳೆಯರ ಅನುಕೂಲಕ್ಕಾಗಿ ಮತ್ತು ಅವರ ಘನತೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜತೆಗೆ, ಆ ಯೋಜನೆಗಳನ್ನು ವಿಸ್ತರಿಸುತ್ತಾ ಬಂದಿದೆ ಎಂದು ಹೇಳಲು ನನಗಿಲ್ಲಿ ಸಂತೋಷವಾಗುತ್ತಿದೆ. ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸುವ ಮಹತ್ವದ ಕೆಲಸವನ್ನು ಗೋವಾ ಆಡಳಿತ ಮಾಡುತ್ತಾ ಬಂದಿದೆ. ಶೌಚಾಲಯವೇ ಇರಲಿ, ಉಜ್ವಲ ಅನಿಲ ಸಂಪರ್ಕವೇ ಇರಲಿ, ಜನ್ ಧನ್ ಬ್ಯಾಂಕ್ ಖಾತೆಯೇ ಇರಲಿ.... ಮಹಿಳಾ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ಇಲ್ಲಿನ ಸಾವಿರಾರು ಸಹೋದರಿಯರು ಉಚಿತ ಅನಿಲ ಸಂಪರ್ಕ ಪಡೆದಿದ್ದಾರೆ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಠೇವಣಿ ಮಾಡಲಾಗಿತ್ತು. ಪ್ರತಿ ಕುಟುಂಬಕ್ಕೆ ನಲ್ಲಿ ನೀರು ಒದಗಿಸುವ ಮೂಲಕ ಗೋವಾ ಸರ್ಕಾರ, ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ. ಗೃಹ ಆಧಾರ್ ಮತ್ತು ದೀನ್ ದಯಾಳ್ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಗೋವಾ ಸರ್ಕಾರವು ಮಹಿಳೆಯರ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು ಕಾರ್ಯೋನ್ಮುಖವಾಗಿದೆ.

ಸಹೋದರರು ಮತ್ತು ಸಹೋದರಿಯರೇ,

ಸಂಕಷ್ಟ ಕಾಲ ಎದುರಾದಾಗಲೇ ನಮಗೆ ನೈಜ ಸಾಮರ್ಥ್ಯ ಮತ್ತು ಸವಾಲುಗಳು ಅರ್ಥವಾಗುವುದು. ಕಳೆದ ಒಂದೂವರೆ ವರ್ಷಗಳಲ್ಲಿ, ಗೋವಾ ಶತಮಾನದ ಬಹುದೊಡ್ಡ ಸಾಂಕ್ರಾಮಿಕ ಸೋಂಕನ್ನು ಎದುರಿಸಿತು. ಇದರ ಜತೆಗೆ, ಆದರೆ ವಿನಾಶಕಾರಿ ಚಂಡಮಾರುತ ಮತ್ತು ಪ್ರವಾಹಗಳ ಭೀಕರತೆಯನ್ನು ಸಹಿಸಿಕೊಂಡಿತು. ಇದರಿಂದ ಗೋವಾ ಪ್ರವಾಸೋದ್ಯಮದ ಮೇಲೆ ಉಂಟಾದ ವ್ಯತಿರಿಕ್ತ ಪರಿಣಾಮಗಳನ್ನು ನಾನು ಮನಗಂಡಿದ್ದೇನೆ. ಈ ಎಲ್ಲಾ ಸವಾಲುಗಳ ಮಧ್ಯೆ, ಗೋವಾ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಮ್ಮ ಬಲ ದುಪ್ಪಟ್ಟುಗೊಳಿಸಿ, ಗೋವಾ ಜನತೆಗೆ ಪರಿಹಾರ ಒದಗಿಸಲು ತೊಡಗಿಸಿಕೊಂಡಿದ್ದವು. ಗೋವಾದಲ್ಲಿ ಅಭಿವೃದ್ಧಿ ಕೆಲಸಗಳು ನಿಲ್ಲಲು ನಾವು ಬಿಡಲಿಲ್ಲ. ಗೋವಾದ ಅಭಿವೃದ್ಧಿಯ ಬುನಾದಿಯಾಗಿ ಸ್ವಯಂಪೂರ್ಣ ಗೋವಾ ಅಭಿಯಾನವನ್ನು ರೂಪಿಸಿರುವ ಪ್ರಮೋದ್ ಜೀ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ವೇಗ ನೀಡಲು, ಮತ್ತೊಂದು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಅದೆಂದರೆ ‘ಸರ್ಕಾರ್ ತುಮ್|ಚ್ಯಾ ದಾರಿ’ (ಮನೆ ಬಾಗಿಲಿಗೆ ಸರ್ಕಾರ).

ಸ್ನೇಹಿತರೆ,

ಕಳೆದ 7 ವರ್ಷಗಳಿಂದ ದೇಶವು ಜನಪರ, ಕ್ರಿಯಾಶೀಲ ಆಡಳಿತ ನೀಡುವ ಸ್ಫೂರ್ತಿಯ ಮನೋಭಾವದೊಂದಿಗೆ ಮುನ್ನಡೆಯುತ್ತಿದೆ. ಆಡಳಿತ ನೀಡುವ ಸರ್ಕಾರವೇ ಸ್ವತಃ ನಾಗರಿಕರ ಬಳಿಗೆ ಹೋಗಿ, ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಗೋವಾ ಸರ್ಕಾರವು ಗ್ರಾಮ, ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ ಇದುವರೆಗೆ ಜಾರಿ ಮಾಡಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು 100% ಅನುಷ್ಠಾನಗೊಳಿಸಿ, ಗುರಿ ಸಾಧಿಸಿರುವಂತೆ, ಗೋವಾ ಸರ್ಕಾರ ಇನ್ನುಳಿದ ಯೋಜನೆಗಳನ್ನು ಸಹ ಅತಿ ಶೀಘ್ರವೇ ಅನುಷ್ಠಾನಗೊಳಿಸಿ, ಸಂಪೂರ್ಣ ಗುರಿ ಸಾಧಿಸಲಿದೆ ಎಂಬ ಪೂರ್ಣ ನಂಬಿಕೆ ತಮಗಿದೆ.

ಸ್ನೇಹಿತರೆ,

ನಾನು ಗೋವಾ ಬಗ್ಗೆ ಮಾತನಾಡುವಾಗ, ಫುಟ್|ಬಾಲ್ ಪ್ರಸ್ತಾಪಿಸದೆ ಇದ್ದರೆ ಅದಕ್ಕೆ ಅರ್ಥವೇ ಬಾರದು. ಫುಟ್|ಬಾಲ್ ಆಟಕ್ಕೆ ಗೋವಾದಲ್ಲಿ ವಿಶಿಷ್ಟವಾದ ಗೀಳು ಇದೆ. ಫುಟ್ ಬಾಲ್ ಆಟದಲ್ಲಿ ಡಿಫೆನ್ಸ್ ಸ್ಥಾನವೇ ಇರಲಿ ಅಥವಾ ಫಾರ್ವರ್ಡ್ ಸ್ಥಾನವೇ ಇರಲಿ, ಆಟ ಆಡುವಾಗ ಪ್ರತಿಯೊಬ್ಬರ ಗುರಿಯೂ ಗೋಲ್ ಬಾರಿಸುವುದೇ ಆಗಿರುತ್ತದೆ. ಕೆಲವರು ಗೋಲ್ ಉಳಿಸಲು ಯತ್ನಿಸಿದರೆ, ಮತ್ತೆ ಕೆಲವರು ಗೋಲ್ ಬಾರಿಸಲು ಯತ್ನಿಸುತ್ತಾರೆ. ಹೀಗೆ ಗುರಿ (ಗೋಲ್) ಸಾಧಿಸುವ ಸ್ಫೂರ್ತಿ ಗೋವಾದಲ್ಲಿ ಎಂದಿಗೂ ತಪ್ಪದು. ಆದರೆ ಹಿಂದಿನ ಸರ್ಕಾರಗಳಿಗೆ ಸಕಾರಾತ್ಮಕ ಪರಿಸರ ಸೃಷ್ಟಿಸುವ ತಂಡ ಸ್ಫೂರ್ತಿಯ ಮನೋಭಾವ ಇರಲಿಲ್ಲ. ದೀರ್ಘಕಾಲದವರೆಗೆ, ಗೋವಾದಲ್ಲಿ ರಾಜಕೀಯ ಹಿತಾಸಕ್ತಿಗಳು ಮೇಲುಗೈ ಸಾಧಿಸಿದವು. ರಾಜಕೀಯ ಅಸ್ಥಿರತೆಯು ಸಹ ರಾಜ್ಯದ ಅಭಿವೃದ್ಧಿಯನ್ನು ಹಾನಿ ಮಾಡಿತು. ಆದರೆ ಕಳೆದ ಕೆಲವು ವರ್ಷಗಳಿಂದ ಗೋವಾದ ಸೂಕ್ಷ್ಮ ಜನರು ರಾಜಕೀಯ ಅಸ್ಥಿರತೆಯನ್ನು ಸ್ಥಿರತೆಗೆ ಪರಿವರ್ತಿಸಿದರು. ನನ್ನ ಸ್ನೇಹಿತ ದಿವಂಗತ ಮನೋಹರ್ ಪರಿಕ್ಕರ್ ಅವರು ಗೋವಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯುತ್ತಿದ್ದ ಹಾಗೆ, ಪ್ರಮೋದ್  ಜೀ ನೇತೃತ್ವದ ತಂಡವು ಗೋವಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹೊಸ ಆತ್ಮವಿಶ್ವಾಸದೊಂದಿಗೆ ಗೋವಾ ಇದೀಗ ಮುನ್ನಡೆಯುತ್ತಿದೆ. ಈ ಹೊಸ ಸ್ಫೂರ್ತಿಯ ಫಲಿತಾಂಶವೇ ಸ್ವಯಂಪೂರ್ಣ ಗೋವಾ ಸಂಕಲ್ಪವಾಗಿದೆ.

ಸಹೋದರ ಮತ್ತು ಸಹೋದರಿಯರೆ,

ಗೋವಾದಲ್ಲಿ ಶ್ರೀಮಂತ ಗ್ರಾಮೀಣ ಆರ್ಥಿಕತೆ ಮತ್ತು ಆಕರ್ಷಕ ನಗರ ಜೀವನವಿದೆ. ಗೋವಾದಲ್ಲಿ ಕೃಷಿ ಚಟುವಟಿಕೆ ವ್ಯಾಪಕವಾಗಿದ್ದು, ನೀಲಿ ಆರ್ಥಿಕತೆ ಅಭಿವೃದ್ಧಿಗೆ ಅಪಾರ ಸಾಧ್ಯತೆಗಳಿವೆ. ಸ್ವಾವಲಂಬಿ ಭಾರತ ಕಟ್ಟಲು ಅಗತ್ಯವಾದ ಎಲ್ಲವೂ ಗೋವಾದಲ್ಲಿವೆ. ಆದ್ದರಿಂದ ಗೋವಾದ ಒಟ್ಟಾರೆ ಅಥವಾ ಸರ್ವಾಂಗೀಣ ಅಭಿವೃದ್ಧಿಯೇ ಡಬಲ್ ಎಂಜಿನ್ ಸರ್ಕಾರದ ಬಹುದೊಡ್ಡ ಆದ್ಯತೆಯಾಗಿದೆ.

ಸ್ನೇಹಿತರೆ,

ಗೋವಾದ ಗ್ರಾಮೀಣ, ನಗರ ಮತ್ತು ಕರಾವಳಿ ಮೂಲಸೌಕರ್ಯ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ವಿಶೇಷ ಗಮನ ನೀಡಿದೆ. ಗೋವಾದಲ್ಲಿ 2ನೇ ಏರ್ ಪೋರ್ಟ್ ನಿರ್ಮಾಣವೇ ಇರಬಹುದು, ಸರಕು ಸಾಗಣೆ ವ್ಯವಸ್ಥೆಯೇ ಇರಬಹುದು, ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವೇ ಆಗಿರಬಹುದು, ಈ ಎಲ್ಲಾ ಯೋಜನೆಗಳು ಗೋವಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿವೆ.

ಸಹೋದರ, ಸಹೋದರಿಯರೆ,

ಗೋವಾಕ್ಕೆ ಒದಗಿಸುವ ಮೂಲಸೌಕರ್ಯದಿಂದ ಅಲ್ಲಿನ ರೈತರ, ಮೀನುಗಾರರ  ಆದಾಯ ಹೆಚ್ಚಾಗಲಿದೆ. ಈ ವರ್ಷ ಗೋವಾಕ್ಕೆ 5  ಪಟ್ಟು ಹೆಚ್ಚಿನ ಅನುದಾನ ಒದಗಿಸಲಾಗಿದೆ. ಗೋವಾದ ಗ್ರಾಮೀಣ ಮೂಲಸೌಕರ್ಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂ. ಅನುದಾನ ಒದಗಿಸಿದೆ. ಕೃಷಿ ಮತ್ತು ಪಶುಸಂಗೋಪನೆ ವಲಯದಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಈ ಅನುದಾನ ಹೊಸ ಚಾಲನಾಶಕ್ತಿಯಾಗಲಿದೆ.

ಸ್ನೇಹಿತರೆ,

ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ ರೈತರು ಹಣ್ಣು, ತರಕಾರಿ ಬೆಳೆಯುವಲ್ಲಿ ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆರ್ಥಿಕ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ವಿಸ್ತರಿಸಲಾಗಿದೆ. ಇಲ್ಲಿನ ಸಣ್ಣ ರೈತರಿಗೆ ಅಲ್ಪಾವಧಿಯಲ್ಲಿ ನೂರಾರು ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಿ, ಕೋಟ್ಯಂತರ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಗೋವಾ ರೈತರು ಅಪಾರ ಪ್ರಯೋಜನ ಪಡೆದಿದ್ದಾರೆ. ಈ ಎಲ್ಲಾ ಯೋಜನೆಗಳಿಂದಾಗಿ ಇಲ್ಲಿನ ಯುವ ಸಮುದಾಯ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಒಂದೇ ವರ್ಷದಲ್ಲಿ ಗೋವಾದಲ್ಲಿ ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ 40% ಹೆಚ್ಚಾಗಿದೆ. ಹಾಲಿನ ಉತ್ಪಾದನೆ ಸಹ 20% ಹೆಚ್ಚಳವಾಗಿದೆ. ಈ ವರ್ಷ ಗೋವಾ ಸರ್ಕಾರ, ಇಲ್ಲಿನ ರೈತರಿಂದ ದಾಖಲೆ ಮಟ್ಟದ ಕೃಷಿ ಉತ್ಪನ್ನಗಳನ್ನು ಖರೀದಿಸಿರುವುದು ನನ್ನ ಗಮನಕ್ಕೆ ಬಂದಿದೆ.

ಸ್ನೇಹಿತರೆ,

ಆಹಾರ ಸಂಸ್ಕರಣಾ ಉದ್ಯಮವು ಸ್ವಯಂಪೂರ್ಣ ಗೋವಾದ ಪ್ರಮುಖ ಶಕ್ತಿಯಾಗಿದೆ. ಮೀನು ಸಂಸ್ಕರಣೆಯಲ್ಲಿ ಗೋವಾ ಭಾರತದ ಪ್ರಮುಖ ಶಕ್ತಿಯಾಗುವ ಎಲ್ಲ ಲಕ್ಷಣ ಹೊಂದಿದೆ. ಬಹುದೀರ್ಘ ಕಾಲದಿಂದಲೂ ಭಾರತ ತಾಜಾ ಮೀನುಗಳನ್ನು ರಫ್ತು ಮಾಡುತ್ತಾ ಬಂದಿದೆ. ಭಾರತದ ಮೀನುಗಳು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಸಂಸ್ಕರಣೆಯಾಗಿ ನಂತರ ಜಾಗತಿಕ ಮಾರುಕಟ್ಟೆಗೆ ತಲುಪುತ್ತವೆ. ಈ ಪರಿಸ್ಥಿತಿ ಬದಲಾಯಿಸಲು, ದೇಶದ ಮೀನುಗಾರಿಕೆ ವಲಯಕ್ಕೆ ಮೊಟ್ಟಮೊದಲ ಬಾರಿಗೆ ಬೃಹತ್ ಪ್ರಮಾಣದ ನೆರವು ಒದಗಿಸಲಾಗಿದೆ ಪ್ರತ್ಯೇಕ ಸಚಿವಾಲಯ ಸೃಜನೆಯಿಂದ ಹಿಡಿದು ಮೀನುಗಾರರ ದೋಣಿಗಳ ಆಧುನೀಕರಣದ ತನಕ  ಪ್ರತಿ ಹಂತದಲ್ಲೂ ಉತ್ತೇಜನಾ ಕ್ರಮಗಳನ್ನು ಪ್ರಕಟಿಸಲಾಗಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿ ಗೋವಾ ಮೀನುಗಾರರು ಹಲವು ಪ್ರಯೋಜನಗಳನ್ನು ಪಡೆದಿದ್ದಾರೆ.

ಸ್ನೇಹಿತರೆ,

ಗೋವಾದ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯು ನೇರವಾಗಿ ಭಾರತದ ಅಭಿವೃದ್ಧಿಗೆ ಸಂಪರ್ಕ ಹೊಂದಿದೆ. ಭಾರತದ ಪ್ರವಾಸೋದ್ಯಮದಲ್ಲಿ ಗೋವಾ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತದ ಕ್ಷಿಪ್ರ ಆರ್ಥಿಕ ಪ್ರಗತಿಯಲ್ಲಿ ಪ್ರವಾಸೋದ್ಯಮ, ಪ್ರವಾಸ ಮತ್ತು ಆತಿಥ್ಯ ಉದ್ಯಮ ನಿರಂತರವಾಗಿ ಬೆಳೆಯುತ್ತಿದೆ. ಸಹಜವಾಗಿ, ಗೋವಾದ ಪಾಲು ಸಹ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಎಲ್ಲ ರೀತಿಯ ಸಹಾಯ ಮತ್ತು ನೆರವು ನೀಡುತ್ತಾ ಬರಲಾಗಿದೆ. ಪ್ರವಾಸಿಗರ ಆಗಮನ ಸೌಲಭ್ಯಕ್ಕೆ ವೀಸಾ ವಿಸ್ತರಿಸಲಾಗಿದೆ. ಗೋವಾ ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ನೆರವು ಒದಗಿಸಲಾಗಿದೆ.

ಸ್ನೇಹಿತರೆ,

ಗೋವಾ ಸೇರಿದಂತೆ ಪ್ರವಾಸೋದ್ಯಮ ಕೇಂದ್ರಗಳಿರುವ ಹಲವು ರಾಜ್ಯಗಳಿಗೆ ವಿಶೇಷ ಪ್ರೋತ್ಸಾಹಧನ ಒದಗಿಸಲಾಗಿದೆ. ಇಲ್ಲಿ ಕೋವಿಡ್-19 ಲಸಿಕೆ ನೀಡಿಕೆಗೆ ವಿಶೇಷ ಗಮನ ನೀಡಲಾಗಿದೆ. ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಗೋವಾ 100% ಸಾಧನೆ ಮಾಡಿದೆ. ಇದೀಗ ರಾಷ್ಟ್ರವು 100 ಕೋಟಿ ಡೋಸ್ ಲಸಿಕೆ ನೀಡಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರಿಂದ ದೇಶವಾಸಿಗಳ, ಪ್ರವಾಸಿಗರ  ಆತ್ಮವಿಶ್ವಾಸ ಹೆಚ್ಚಾಗಿದೆ.  ನೀವೆಲ್ಲಾ ಇದೀಗ ದೀಪಾವಳಿ, ಕ್ರಿಸ್|ಮಸ್ ಮತ್ತು ಹೊಸ ವರ್ಷಾಚರಣೆಗೆ ಸಿದ್ಧತೆಯಲ್ಲಿದ್ದೀರಿ. ಗೋವಾ ಪ್ರವಾಸೋದ್ಯಮದಲ್ಲಿ ಇದೀಗ ಹೊಸ ಶಕ್ತಿ ಮೂಡಿದೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಗೋವಾದಲ್ಲಿ ಸಂಚರಿಸುತ್ತಿದ್ದಾರೆ. ಅವರ ಸಂಖ್ಯೆ ಹೆಚ್ಚಾಗುತ್ತಿದ್ದು, ಗೋವಾ ಪ್ರವಾಸೋದ್ಯಮಕ್ಕೆ ಉತ್ತಮ ಸಂಜ್ಞೆ ಇದಾಗಿದೆ.

ಸಹೋದರ, ಸಹೋದರಿಯರೆ,

ಅಭಿವೃದ್ಧಿಯ ಎಲ್ಲಾ ಸಾಮರ್ಥ್ಯಗಳನ್ನು ಸಂಪೂರ್ಣ ಬಳಕೆ ಮಾಡಿಕೊಂಡರೆ ಗೋವಾ ರಾಜ್ಯವು ಸಂಪೂರ್ಣ ಸ್ವಾವಲಂಬಿಯಾಗಲಿದೆ. ಶ್ರೀಸಾಮಾನ್ಯರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸ್ವಯಂಪೂರ್ಣ ಗೋವಾ ನಿಜವಾದ ಸಂಕಲ್ಪವಾಗಿದೆ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ, ಅನುಕೂಲ, ಸುರಕ್ಷತೆಗೆ ಸ್ವಯಂಪೂರ್ಣ ಗೋವಾವು ನಂಬಿಕೆಯಾಗಿದೆ. ಸ್ವಯಂಪೂರ್ಣ ಗೋವಾದಲ್ಲಿ ಅಪಾರ ಉದ್ಯೋಗಾವಕಾಶಗಳು, ಸ್ವ-ಉದ್ಯೋಗ ಅವಕಾಶಗಳು ಸೃಜನೆಯಾಗಲಿವೆ. ಉಜ್ವಲ ಗೋವಾ ಭವಿಷ್ಯಕ್ಕೆ  ನಾಂದಿ ಹಾಡಲಿದೆ. ಇದು 5 ತಿಂಗಳ ಅಥವಾ 5 ವರ್ಷಗಳ ಕಾರ್ಯಕ್ರಮವಾಗಿರದೆ, ಮುಂದಿನ 25 ವರ್ಷಗಳ ಅಭಿವೃದ್ದಿಗೆ ಮುನ್ನುಡಿ ಬರೆಯಲಿದೆ. ಈ ಹಂತಕ್ಕೆ ತಲುಪಲು ಪ್ರತಿ ಗೋವಾ ಪ್ರಜೆಯನ್ನು ಸಜ್ಜುಗೊಳಿಸಬೇಕು. ಜೋಡಿ ಎಂಜಿನ್ ಅಭಿವೃದ್ಧಿಯನ್ನು ಮುಂದುವರಿಸುವುದು ಗೋವಾದ ಅಗತ್ಯವಾಗಿದೆ. ಇದಕ್ಕಾಗಿ ಗೋವಾಕ್ಕೆ ದಿಟ್ಟ ಮತ್ತು ಶಕ್ತಿಶಾಲಿ ನಾಯಕತ್ವ, ಸ್ಥಿರ ಸರ್ಕಾರ ಮತ್ತು ಸ್ಪಷ್ಟ ನೀತಿಯ ಅಗತ್ಯವಿದೆ. ಇಡೀ ಗೋವಾದ ಅದ್ಭುತ ಆಶೀರ್ವಾದದೊಂದಿಗೆ, ನಾವು ಸ್ವಯಂಪೂರ್ಣ ಗೋವಾ ಸಂಕಲ್ಪವನ್ನು ಈಡೇರಿಸುತ್ತೇವೆ. ಇದೇ ನಂಬಿಕೆಯೊಂದಿಗೆ, ನಾನು ನಿಮ್ಮೆಲ್ಲರಿಗೂ ಶುಭಾ ಕಾಮನೆಗಳನ್ನು ಅರ್ಪಿಸುತ್ತೇನೆ.

ಮತ್ತೊಮ್ಮೆ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UDAN Push: Why Aerospace Majors Airbus And Embraer Are Betting Big On Make In India

Media Coverage

UDAN Push: Why Aerospace Majors Airbus And Embraer Are Betting Big On Make In India
NM on the go

Nm on the go

Always be the first to hear from the PM. Get the App Now!
...
Prime Minister congratulates Mr. Balendra Shah on being sworn in as the Prime Minister of Nepal
March 27, 2026

The Prime Minister, Shri Narendra Modi congratulated Mr. Balendra Shah on being sworn in as the Prime Minister of Nepal. “Your appointment reflects the trust reposed in your leadership by the people of Nepal. I look forward to working closely with you to take India-Nepal friendship and cooperation to even greater heights for the mutual benefit of our two peoples”, Shri Modi said.

The Prime Minister posted on X:

“Warm congratulations to Mr. Balendra Shah on being sworn in as the Prime Minister of Nepal.

Your appointment reflects the trust reposed in your leadership by the people of Nepal. I look forward to working closely with you to take India-Nepal friendship and cooperation to even greater heights for the mutual benefit of our two peoples.”

@ShahBalen