



ತಳ್ಳಿ ದುರ್ಗಾ ಭವಾನಿ ಕೊಲುವುನ್ನ ಈ ಪುಣ್ಯಭೂಮಿ ಪೈ ಮೀ ಅಂದರಿನಿ ಕಲ್ವಾದಂ ನಾಕು ಆನಂದಮುಗ ನಿನ್ನದಿ||
ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸೈಯದ್ ಅಬ್ದುಲ್ ನಜೀರ್ ಜೀ, ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ಶ್ರೀ ಚಂದ್ರಬಾಬು ನಾಯ್ಡು ಜೀ, ನನ್ನ ಸಂಪುಟ ಸಹೋದ್ಯೋಗಿಗಳೆ, ಕ್ರಿಯಾಶೀಲ ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಜೀ, ರಾಜ್ಯ ಸರ್ಕಾರದ ಸಚಿವರೆ, ಎಲ್ಲಾ ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ ಮತ್ತು ಆಂಧ್ರಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ನಾನಿಂದು ಅಮರಾವತಿಯ ಪವಿತ್ರ ಭೂಮಿಯಲ್ಲಿ ನಿಂತಿರುವಾಗ, ನಾನು ಕೇವಲ ಒಂದು ನಗರವನ್ನು ನೋಡದೆ, ನನ್ನ ಕಣ್ಣ ಮುಂದೆ ಒಂದು ಕನಸು ರೂಪುಗೊಳ್ಳುವುದನ್ನು ನೋಡುತ್ತಿದ್ದೇನೆ. ಹೊಸ ಅಮರಾವತಿ, ಹೊಸ ಆಂಧ್ರ. ಅಮರಾವತಿ ಎಂದರೆ ಸಂಪ್ರದಾಯ ಮತ್ತು ಪ್ರಗತಿ ಕೈಜೋಡಿಸುವ ಪುಣ್ಯಭೂಮಿ. ಬೌದ್ಧ ಪರಂಪರೆಯ ಶಾಂತಿ ಮತ್ತು ವಿಕಸಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವ ಚೈತನ್ಯವೂ ಇದೆ. ಇಂದು ಸುಮಾರು 60,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವು ಕೇವಲ ಕಾಂಕ್ರೀಟ್ ನಿರ್ಮಾಣಗಳಲ್ಲ, ಅವು ಆಂಧ್ರಪ್ರದೇಶದ ಆಕಾಂಕ್ಷೆಗಳು ಮತ್ತು ವಿಕಸಿತ ಭಾರತದ ಭರವಸೆಗಳ ಸದೃಢವಾದ ಅಡಿಪಾಯಗಳಾಗಿವೆ. ಭಗವಾನ್ ವೀರಭದ್ರ, ಭಗವಾನ್ ಅಮರಲಿಂಗೇಶ್ವರ ಮತ್ತು ತಿರುಪತಿ ಬಾಲಾಜಿ ಅವರ ಪಾದಗಳಿಗೆ ನಮಸ್ಕರಿಸುತ್ತಾ, ಆಂಧ್ರಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಾರು ಮತ್ತು ಶ್ರೀ ಪವನ್ ಕಲ್ಯಾಣ್ ಜಿ ಅವರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಇಂದ್ರಲೋಕದ ರಾಜಧಾನಿಯನ್ನು ಅಮರಾವತಿ ಎಂದು ಕರೆಯಲಾಗುತ್ತಿತ್ತು, ಆದರೀಗ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ಕೇವಲ ಕಾಕತಾಳೀಯವಲ್ಲ. ಇದು "ಸುವರ್ಣ ಆಂಧ್ರ"ದ ಸೃಷ್ಟಿಯ ಶುಭ ಸಂಕೇತವೂ ಆಗಿದೆ. ಈ "ಸುವರ್ಣ ಆಂಧ್ರ"ವು 'ವಿಕಸಿತ ಭಾರತ'ದತ್ತ ಭಾರತದ ಪ್ರಯಾಣವನ್ನು ಬಲಪಡಿಸುತ್ತದೆ, ಅಮರಾವತಿಯು "ಸುವರ್ಣ ಆಂಧ್ರ"ದ ದೃಷ್ಟಿಕೋನವನ್ನು ಚೈತನ್ಯಗೊಳಿಸುತ್ತದೆ.
ಅಮರಾವತಿ ಕೇವಲಂ ಓಕ್ ನಗರಂ ಕಾಡು ಅಮರಾವತಿ, ಓಕ್ ಶಕ್ತಿ. ಆಂಧ್ರಪ್ರದೇಶವನ್ನು ಆಧುನಿಕ ಪ್ರದೇಶವಾಗಿ ಮಾರ್ಚೆ ಶಕ್ತಿ. ಆಂಧ್ರಪ್ರದೇಶ ನು ಅಧುನತನ್ ಪ್ರದೇಶ ಗಾ ಮಾರ್ಚೆ ಶಕ್ತಿ.
ಸ್ನೇಹಿತರೆ,
ಆಂಧ್ರಪ್ರದೇಶದ ಪ್ರತಿಯೊಬ್ಬ ಯುವಕರು ತಮ್ಮ ಕನಸುಗಳನ್ನು ನನಸಾಗಿಸುವ ನಗರ ಅಮರಾವತಿಯಾಗಲಿದೆ. ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹಸಿರು ಇಂಧನ, ಸ್ವಚ್ಛ ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ, ಮುಂಬರುವ ವರ್ಷಗಳಲ್ಲಿ ಅಮರಾವತಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ. ಈ ಎಲ್ಲಾ ಕ್ಷೇತ್ರಗಳಿಗೆ, ಅಗತ್ಯ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ದಾಖಲೆಯ ವೇಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದೀಗ, ನಮ್ಮ ಚಂದ್ರಬಾಬು ಜಿ ತಂತ್ರಜ್ಞಾನದ ವಿಷಯಗಳಲ್ಲಿ ನನ್ನನ್ನು ಬಹಳವಾಗಿ ಹೊಗಳುತ್ತಿದ್ದರು. ಆದರೆ ಇಂದು ನಾನು ಒಂದು ರಹಸ್ಯವನ್ನು ಬಹಿರಂಗಪಡಿಸುತ್ತೇನೆ. ಆರಂಭಿಕ ದಿನಗಳಲ್ಲಿ, ನಾನು ಗುಜರಾತ್ ಮುಖ್ಯಮಂತ್ರಿಯಾದ ನಂತರ, ಚಂದ್ರಬಾಬು ಜಿ ಹೈದರಾಬಾದ್ನಲ್ಲಿ ಕೈಗೊಳ್ಳುತ್ತಿದ್ದ ವಿವಿಧ ಉಪಕ್ರಮಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ, ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ಆ ಕಲಿಕೆಗಳನ್ನು ಇಂದು ಕಾರ್ಯಗತಗೊಳಿಸಲು ನನಗೆ ಅವಕಾಶ ಸಿಕ್ಕಿದ್ದು, ನಾನು ಹಾಗೆ ಮಾಡುತ್ತಿದ್ದೇನೆ. ನನ್ನ ಸ್ವಂತ ಅನುಭವದ ಆಧಾರದ ಮೇಲೆ ಭವಿಷ್ಯದ ತಂತ್ರಜ್ಞಾನಗಳಾಗಲಿ, ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡುವುದಾಗಲಿ ಅಥವಾ ನೆಲದ ಮೇಲೆ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದಾಗಲಿ, ಚಂದ್ರಬಾಬು ಜಿ, ಅಂತಹ ಕಾರ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ಕಾರ್ಯಗತಗೊಳಿಸುತ್ತಾರೆ ಎಂಬುದನ್ನು ನಾನು ಹೇಳಬಲ್ಲೆ.
ಸ್ನೇಹಿತರೆ,
2015ರಲ್ಲಿ ಜನ ಸಮುದಾಯದ ರಾಜಧಾನಿಗೆ ಶಿಲಾನ್ಯಾಸ ನೆರವೇರಿಸುವ ಸೌಭಾಗ್ಯ ನನಗೆ ಸಿಕ್ಕಿತು. ಕಳೆದ ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಅಮರಾವತಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯವನ್ನು ನೀಡಿದೆ. ಇಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗ ಚಂದ್ರಬಾಬು ಗಾರು ನೇತೃತ್ವದಲ್ಲಿ ರಾಜ್ಯ ಸರ್ಕಾರ ರಚನೆಯಾದ ನಂತರ, ಪ್ರಗತಿಗೆ ಅಡ್ಡಿಯಾಗಿದ್ದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ. ಹೈಕೋರ್ಟ್, ವಿಧಾನಸಭೆ, ಸಚಿವಾಲಯ ಮತ್ತು ರಾಜಭವನದಂತಹ ಪ್ರಮುಖ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಸ್ನೇಹಿತರೆ,
ಎನ್ಟಿಆರ್ ಗಾರು ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶದ ಕನಸು ಕಂಡಿದ್ದರು. ಒಟ್ಟಾಗಿ, ನಾವು ಅಮರಾವತಿ ಮತ್ತು ಆಂಧ್ರಪ್ರದೇಶವನ್ನು ವಿಕಿಸತ ಭಾರತದ ಬೆಳವಣಿಗೆಯ ಎಂಜಿನ್ಗಳನ್ನಾಗಿ ಮಾಡಬೇಕು. ನಾವು ಎನ್ಟಿಆರ್ ಗಾರು ಅವರ ಕನಸುಗಳನ್ನು ನನಸಾಗಿಸಬೇಕು. ಚಂದ್ರಬಾಬು ಗಾರು, ಸಹೋದರ ಪವನ್ ಕಲ್ಯಾಣ್- ಇದಿ ಮನ್ಮು ಚೆಯ್ಯಲಿ ಇದಿ ಮನ್ಮೆ ಚೆಯ್ಯಲಿ.
ಸ್ನೇಹಿತರೆ,
ಕಳೆದ 10 ವರ್ಷಗಳಲ್ಲಿ, ಭಾರತವು ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ ವಿಶೇಷ ಒತ್ತು ನೀಡಿದೆ. ಇಂದು ಮೂಲಸೌಕರ್ಯವು ವೇಗವಾಗಿ ಆಧುನಿಕವಾಗುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಆಂಧ್ರಪ್ರದೇಶವು ಸಹ ಈ ಪ್ರಗತಿಯ ಲಾಭ ಪಡೆಯುತ್ತಿದೆ. ಇಂದಿಗೂ, ರೈಲು ಮತ್ತು ರಸ್ತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಆಂಧ್ರಪ್ರದೇಶಕ್ಕೆ ನೀಡಲಾಗಿದೆ. ಸಂಪರ್ಕದಲ್ಲಿ ಇಲ್ಲಿ ಹೊಸ ಅಧ್ಯಾಯ ಬರೆಯಲಾಗುತ್ತಿದೆ. ಈ ಯೋಜನೆಗಳು ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಸುಧಾರಿಸುತ್ತದೆ ಮತ್ತು ನೆರೆಯ ರಾಜ್ಯಗಳೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಸಾಗಿಸಲು ಸುಲಭವಾಗುತ್ತದೆ, ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ಸೃಷ್ಟಿಸುತ್ತದೆ. ಪ್ರವಾಸೋದ್ಯಮ ವಲಯ ಮತ್ತು ತೀರ್ಥಯಾತ್ರೆಗಳು ಸಹ ಉತ್ತೇಜನಗೊಳ್ಳುತ್ತವೆ. ಉದಾಹರಣೆಗೆ, ರೇಣಿಗುಂಟ-ನಾಯ್ಡುಪೇಟ ಹೆದ್ದಾರಿಯೊಂದಿಗೆ, ತಿರುಪತಿ ಬಾಲಾಜಿಯಲ್ಲಿ ದರ್ಶನ ಸುಲಭವಾಗುತ್ತದೆ, ಭಕ್ತರು ಕಡಿಮೆ ಸಮಯದಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯವಾಗುತ್ತದೆ.
ಸ್ನೇಹಿತರೆ,
ವೇಗವಾಗಿ ಅಭಿವೃದ್ಧಿ ಹೊಂದಿದ ಪ್ರತಿಯೊಂದು ದೇಶವು ತನ್ನ ರೈಲ್ವೆ ವ್ಯವಸ್ಥೆಯ ಮೇಲೆ ಬಲವಾದ ಒತ್ತು ನೀಡಿದೆ. ಕಳೆದ ದಶಕವು ಭಾರತದಲ್ಲಿ ರೈಲ್ವೆಯ ಪರಿವರ್ತನೆಯನ್ನು ಗುರುತಿಸಿದೆ. ಆಂಧ್ರಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ದಾಖಲೆಯ ಹಣ ಒದಗಿಸಿದೆ. 2009ರಿಂದ 2014ರ ವರೆಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಒಟ್ಟು ರೈಲ್ವೆ ಬಜೆಟ್ 900 ಕೋಟಿ ರೂ.ಗಳಿಗಿಂತ ಕಡಿಮೆಯಿತ್ತು. ಇಂದು ಆಂಧ್ರಪ್ರದೇಶದ ರೈಲು ಬಜೆಟ್ ಕೇವಲ 9,000 ಕೋಟಿ ರೂ.ಗಳನ್ನು ಮೀರಿದೆ - ಇದು 10 ಪಟ್ಟು ಹೆಚ್ಚಾಗಿದೆ.
ಸ್ನೇಹಿತರೆ,
ರೈಲ್ವೆ ಬಜೆಟ್ ಹೆಚ್ಚಳದಿಂದಾಗಿ, ಆಂಧ್ರಪ್ರದೇಶದ ರೈಲ್ವೆಗಳು 100% ವಿದ್ಯುದೀಕರಣ ಸಾಧಿಸಿವೆ. ಪ್ರಸ್ತುತ 8 ಜೋಡಿ ಆಧುನಿಕ ವಂದೇ ಭಾರತ್ ರೈಲುಗಳು ಇಲ್ಲಿ ಸಂಚರಿಸುತ್ತಿವೆ. ಹೆಚ್ಚುವರಿಯಾಗಿ, ಆಧುನಿಕ ಮತ್ತು ಸುಸಜ್ಜಿತ ಅಮೃತ್ ಭಾರತ್ ರೈಲು ಕೂಡ ಆಂಧ್ರಪ್ರದೇಶದ ಮೂಲಕ ಹಾದುಹೋಗುತ್ತದೆ. ಕಳೆದ 10 ವರ್ಷಗಳಲ್ಲಿ, ಆಂಧ್ರಪ್ರದೇಶದಲ್ಲಿ 750ಕ್ಕೂ ಹೆಚ್ಚು ರೈಲ್ವೆ ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ, ರಾಜ್ಯದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಸ್ನೇಹಿತರೆ,
ಮೂಲಸೌಕರ್ಯಕ್ಕಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಕೆಲಸಗಳನ್ನು ಕೈಗೊಂಡಾಗ, ಅದರ ಗುಣಕ ಪರಿಣಾಮವು ಅಪಾರವಾಗಿರುತ್ತದೆ. ನಿರ್ಮಾಣದಲ್ಲಿ ಬಳಸುವ ಕಚ್ಚಾ ವಸ್ತುಗಳು ಉತ್ಪಾದನಾ ಉದ್ಯಮವನ್ನು ಉತ್ತೇಜಿಸುತ್ತವೆ. ಅದು ಸಿಮೆಂಟ್, ಉಕ್ಕು ಅಥವಾ ಸಾರಿಗೆಯಾಗಿರಲಿ, ಅಂತಹ ಪ್ರತಿಯೊಂದು ವಲಯದ ಪ್ರಯೋಜನಗಳು. ಮೂಲಸೌಕರ್ಯ ಅಭಿವೃದ್ಧಿಯ ನೇರ ಪರಿಣಾಮವು ನಮ್ಮ ಯುವಕರ ಮೇಲೆ ಆಗುತ್ತದೆ, ಅವರು ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಾರೆ. ಆಂಧ್ರಪ್ರದೇಶದ ಸಾವಿರಾರು ಯುವಕರು ಈ ಮೂಲಸೌಕರ್ಯ ಯೋಜನೆಗಳ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಸ್ನೇಹಿತರೆ,
ಕೆಂಪುಕೋಟೆಯಿಂದ ನಾನು, ವಿಕಸಿತ ಭಾರತ ನಿರ್ಮಿಸಲು 4 ಆಧಾರಸ್ತಂಭಗಳು ಬೇಕಾಗುತ್ತವೆ ಎಂದು ಘೋಷಿಸಿದ್ದೆ, ಬಡವರು, ರೈತರು, ಯುವಕರು ಮತ್ತು ಮಹಿಳೆಯರೇ ಈ 4 ಆಧಾರಸ್ತಂಭಗಳಾಗಿದ್ದು, ಎನ್ಡಿಎ ಸರ್ಕಾರದ ನೀತಿಗಳ ಕೇಂದ್ರಬಿಂದುವಾಗಿದ್ದಾರೆ. ನಾವು ವಿಶೇಷವಾಗಿ ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ರೈತರು ಆರ್ಥಿಕವಾಗಿ ಹೊರೆಯಾಗದಂತೆ ನೋಡಿಕೊಳ್ಳಲು, ಕೇಂದ್ರ ಸರ್ಕಾರವು ಕಳೆದ ದಶಕದಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಒದಗಿಸಲು ಸುಮಾರು 12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾವಿರಾರು ಹೊಸ ಮತ್ತು ಆಧುನಿಕ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಆಂಧ್ರಪ್ರದೇಶದ ರೈತರು ಇಲ್ಲಿಯವರೆಗೆ 5,500 ಕೋಟಿ ರೂ.ಗಳ ವಿಮಾ ಕ್ಲೈಮ್ಗಳನ್ನು ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ, ಆಂಧ್ರಪ್ರದೇಶದ ಲಕ್ಷಾಂತರ ರೈತರ ಖಾತೆಗಳಿಗೆ 17,500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ.
ಸ್ನೇಹಿತರೆ,
ಇಂದು ದೇಶಾದ್ಯಂತ ನೀರಾವರಿ ಯೋಜನೆಗಳ ವ್ಯಾಪಕ ಜಾಲವನ್ನು ನಿರ್ಮಿಸಲಾಗುತ್ತಿದೆ. ನದಿ ಜೋಡಣೆಯ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ. ಪ್ರತಿಯೊಂದು ಜಮೀನಿಗೂ ನೀರು ಸಿಗುವಂತೆ ಮಾಡುವುದು ಮತ್ತು ಯಾವುದೇ ರೈತ ನೀರಿನ ಕೊರತೆಯಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಇಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ, ಪೋಲವರಂ ಯೋಜನೆಯು ಹೊಸ ವೇಗ ಪಡೆದುಕೊಂಡಿದೆ. ಆಂಧ್ರಪ್ರದೇಶದ ಲಕ್ಷಾಂತರ ಜನರ ಜೀವನವು ಈ ಯೋಜನೆಯಿಂದ ಪರಿವರ್ತನೆಯಾಗುತ್ತದೆ. ಪೋಲವರಂ ಯೋಜನೆಯ ತ್ವರಿತ ಪೂರ್ಣಗೊಳಿಸುವಿಕೆ ಖಚಿತಪಡಿಸಿಕೊಳ್ಳಲು ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ.
ಸ್ನೇಹಿತರೆ,
ದಶಕಗಳಿಂದ ಭಾರತವನ್ನು ಬಾಹ್ಯಾಕಾಶ ಶಕ್ತಿಯನ್ನಾಗಿ ಮಾಡುವಲ್ಲಿ ಆಂಧ್ರದ ಭೂಮಿ ಪ್ರಮುಖ ಪಾತ್ರ ವಹಿಸಿದೆ. ಶ್ರೀಹರಿಕೋಟಾದಿಂದ ಪ್ರತಿ ಬಾರಿಯೂ ಒಂದು ಕಾರ್ಯಾಚರಣೆ ಪ್ರಾರಂಭಿಸಿದಾಗ, ಅದು ಕೋಟ್ಯಂತರ ಭಾರತೀಯರನ್ನು ಹೆಮ್ಮೆಯಿಂದ ಬೀಗುತ್ತದೆ. ಬಾಹ್ಯಾಕಾಶ ವಲಯವು ಲಕ್ಷಾಂತರ ಭಾರತೀಯ ಯುವಕರ ಕಲ್ಪನೆಯನ್ನು ಬಹಳ ಹಿಂದಿನಿಂದಲೂ ಆಕರ್ಷಿಸಿದೆ. ಈಗ, ನಮ್ಮ ರಾಷ್ಟ್ರ ಮತ್ತು ನಮ್ಮ ರಕ್ಷಣಾ ವಲಯವನ್ನು ಹೊಸ ಸಂಸ್ಥೆಯಿಂದ ಬಲಪಡಿಸಲಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ, ನಾವು ಡಿಆರ್ಡಿಒದ ಹೊಸ ಕ್ಷಿಪಣಿ ಪರೀಕ್ಷಾ ಶ್ರೇಣಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ನಾಗಯಲಂಕಾದಲ್ಲಿ ಸ್ಥಾಪಿಸಲಾಗುತ್ತಿರುವ ನವದುರ್ಗಾ ಪರೀಕ್ಷಾ ಶ್ರೇಣಿಯು, ಬಹುಶಃ ದುರ್ಗಾದೇವಿಯಂತೆಯೇ, ಭಾರತದ ರಕ್ಷಣೆಯನ್ನು ಬಲಪಡಿಸುತ್ತದೆ. ಈ ಸಾಧನೆಗಾಗಿ ನಮ್ಮ ರಾಷ್ಟ್ರದ ವಿಜ್ಞಾನಿಗಳು ಮತ್ತು ಆಂಧ್ರಪ್ರದೇಶದ ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ಭಾರತದ ನಿಜವಾದ ಶಕ್ತಿ ಶಸ್ತ್ರಾಸ್ತ್ರಗಳಲ್ಲಿ ಮಾತ್ರ ಅಡಗಿಲ್ಲ, ಅದರ ಏಕತೆಯಲ್ಲಿ ಅಡಗಿದೆ. ನಮ್ಮ ಏಕತಾ ಮಾಲ್ಗಳ ಮೂಲಕ ಏಕತಾ ಮನೋಭಾವವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ದೇಶದ ಹಲವಾರು ನಗರಗಳಲ್ಲಿ, ಏಕತಾ ಮಾಲ್ಗಳನ್ನು ಸ್ಥಾಪಿಸಲಾಗುತ್ತಿದೆ. ಈಗ ವಿಶಾಖಪಟ್ಟಣದಲ್ಲಿ ಏಕತಾ ಮಾಲ್ ಸ್ಥಾಪಿಸುತ್ತಿರುವುದು ನನಗೆ ಸಂತೋಷ ತಂದಿದೆ. ಈ ಮಾಲ್ ಭಾರತದ ಪ್ರತಿಯೊಂದು ರಾಜ್ಯದ ಉತ್ಪನ್ನಗಳನ್ನು ಇರಿಸುತ್ತದೆ. ಇದರ ಪರಿಣಾಮವಾಗಿ, ಆಂಧ್ರಪ್ರದೇಶದ ಜನರು ಇಡೀ ರಾಷ್ಟ್ರದ ಕರಕುಶಲ ವಸ್ತುಗಳು, ಕಲೆ ಮತ್ತು ಸಂಸ್ಕೃತಿಯನ್ನು ಒಂದೇ ಸೂರಿನಡಿ ಅನುಭವಿಸುತ್ತಾರೆ. ಇದಲ್ಲದೆ, ಈ ಉಪಕ್ರಮವು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ, ಏಕ್ ಭಾರತ್ ಶ್ರೇಷ್ಠ ಭಾರತದ ಮನೋಭಾವವನ್ನು ಬಲಪಡಿಸುತ್ತದೆ.
ಚಂದ್ರಬಾಬು ಜಿ ಮಾತನಾಡುವುದನ್ನು ನಾವು ಕೇಳಿದ್ದೇವೆ, ಈ ಸಂದರ್ಭದಲ್ಲಿ ಅವರು ಜೂನ್ 21 - ಅಂತಾರಾಷ್ಟ್ರೀಯ ಯೋಗ ದಿನ ಉಲ್ಲೇಖಿಸಿದರು. ಆಂಧ್ರಪ್ರದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ದೇಶದ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಚಂದ್ರಬಾಬು ಜಿ, ಆಂಧ್ರಪ್ರದೇಶ ಸರ್ಕಾರ ಮತ್ತು ರಾಜ್ಯದ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಗೌರವಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಚಂದ್ರಬಾಬು ಜಿ ಹೇಳಿದಂತೆ, ಜೂನ್ 21ರಂದು ಆಂಧ್ರಪ್ರದೇಶದ ಜನರೊಂದಿಗೆ ನಾನು ಯೋಗದಲ್ಲಿ ಭಾಗವಹಿಸುತ್ತೇನೆ. ಜಾಗತಿಕ ಮಟ್ಟದ ಕಾರ್ಯಕ್ರಮವೊಂದು ಇಲ್ಲಿ ನಡೆಯಲಿದ್ದು, ಇದು ಅತ್ಯಂತ ಮಹತ್ವದ್ದಾಗಿ ಪರಿಣಮಿಸಲಿದೆ. ಈ ವರ್ಷದ ಆಚರಣೆಯು ಅಂತಾರಾಷ್ಟ್ರೀಯ ಯೋಗ ದಿನದ 10 ವರ್ಷಗಳ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುವುದರಿಂದ ಇದು ವಿಶೇಷ ಮಹತ್ವವನ್ನು ಹೊಂದಿದೆ.
ಇಂದು ಯೋಗದ ಬಗ್ಗೆ ಜಾಗತಿಕವಾಗಿ ಆಕರ್ಷಣೆ ಹೆಚ್ಚುತ್ತಿದೆ. ಜೂನ್ 21ರಂದು, ಇಡೀ ಪ್ರಪಂಚದ ಕಣ್ಣುಗಳು ಆಂಧ್ರಪ್ರದೇಶದ ಮೇಲೆ ನೆಟ್ಟಿರುತ್ತದೆ. ಮುಂದಿನ 50 ದಿನಗಳಲ್ಲಿ, ರಾಜ್ಯಾದ್ಯಂತ ಯೋಗವನ್ನು ಉತ್ತೇಜಿಸುವ ರೋಮಾಂಚಕ ವಾತಾವರಣವನ್ನು ಸೃಷ್ಟಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಯೋಗ ಸ್ಪರ್ಧೆಗಳನ್ನು ದೂರದವರೆಗೆ ಆಯೋಜಿಸಲಿ. ಆಂಧ್ರಪ್ರದೇಶವು ಹೊಸ ವಿಶ್ವ ದಾಖಲೆ ಸ್ಥಾಪಿಸುವ ಮೂಲಕ ಜಗತ್ತನ್ನು ಬೆರಗುಗೊಳಿಸಲಿ. ಚಂದ್ರಬಾಬು ಜಿ ಅವರ ಸಮರ್ಥ ನಾಯಕತ್ವದಲ್ಲಿ ಇದನ್ನು ಸಾಧಿಸಬಹುದು ಮತ್ತು ಸಾಧಿಸಲಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.
ಆಂಧ್ರಪ್ರದೇಶದಲ್ಲಿ ಕನಸುಗಾರರಿಗೆ ಕೊರತೆಯಿಲ್ಲ ಅಥವಾ ಆ ಕನಸುಗಳನ್ನು ನನಸಾಗಿಸುವ ಶಕ್ತಿ ಮತ್ತು ಸಂಕಲ್ಪ ಹೊಂದಿರುವವರಿಗೂ ಕೊರತೆ ಇಲ್ಲ. ನಾನು ಇದನ್ನು ವಿಶ್ವಾಸದಿಂದ ಹೇಳುತ್ತೇನೆ. ಆಂಧ್ರಪ್ರದೇಶ ಸರಿಯಾದ ಹಾದಿಯಲ್ಲಿದೆ ಮತ್ತು ಸರಿಯಾದ ಆವೇಗ ಪಡೆದುಕೊಂಡಿದೆ. ಈಗ ನಾವು ಈ ಪ್ರಗತಿಯ ವೇಗವನ್ನು ಉಳಿಸಿಕೊಳ್ಳಬೇಕು ಮತ್ತು ವೇಗಗೊಳಿಸಬೇಕು.
3 ವರ್ಷಗಳಲ್ಲಿ ಅಮರಾವತಿಯನ್ನು ಅಭಿವೃದ್ಧಿಪಡಿಸುವ ಚಂದ್ರಬಾಬು ಜಿ ಅವರ ದೃಷ್ಟಿಕೋನವು ಮಹತ್ವಾಕಾಂಕ್ಷೆಯ ಮತ್ತು ಸಾಧಿಸಬಹುದಾದದ್ದು ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಈ 3 ವರ್ಷಗಳಲ್ಲಿ ಅಮರಾವತಿಯ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಗಳು ಆಂಧ್ರಪ್ರದೇಶದ ಒಟ್ಟಾರೆ ಜಿಡಿಪಿಯ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎಂಬುದು ನನಗೆ ಸ್ಪಷ್ಟವಾಗಿದೆ.
ಮತ್ತೊಮ್ಮೆ, ಆಂಧ್ರಪ್ರದೇಶದ ಜನರಿಗೆ ಮತ್ತು ಇಂದು ಇಲ್ಲಿ ನೆರೆದಿರುವ ನನ್ನ ಗೌರವಾನ್ವಿತ ಸಹೋದ್ಯೋಗಿಗಳಿಗೆ, ನಿಮ್ಮ ಪ್ರಗತಿ ಮತ್ತು ಅಭಿವೃದ್ಧಿಯ ಅನ್ವೇಷಣೆಯಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ.
ಮತ್ತೊಮ್ಮೆ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ನಾನು ಅಂದಾರಿ ಆಶೀರ್ವಾದಮುತೋ ಇ ಕುಟಮಿ ಆಂಧ್ರಪ್ರದೇಶ ಅಭಿವೃದ್ಧಿಕಿ ಕಟ್ಟುಬಡಿ ಉನ್ನಡಿ.
ಭಾರತ ಮಾತೆಗೆ ನಮಸ್ಕಾರ! ಭಾರತ ಮಾತೆಗೆ ನಮಸ್ಕಾರ!
ಭಾರತ ಮಾತೆಗೆ ನಮಸ್ಕಾರ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!