“ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂದು ಹೆಮ್ಮೆಯ ದಿನ, ಇದು ವೈಭವದ ದಿನ. ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ನಮ್ಮ ಹೊಸ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗುತ್ತಿದೆ
“ನಾಳೆ ಜೂನ್ 25. 50 ವರ್ಷಗಳ ಹಿಂದೆ ಇದೇ ದಿನ ಸಂವಿಧಾನಕ್ಕೆ ಕಪ್ಪು ಚುಕ್ಕೆ ಹಾಕಲಾಗಿತ್ತು. ಅಂತಹ ಕಳಂಕ ದೇಶಕ್ಕೆ ಬರದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ
“ಸ್ವಾತಂತ್ರ್ಯಾ ನಂತರ 2ನೇ ಬಾರಿ ಸತತ 3ನೇ ಬಾರಿಗೆ ದೇಶಕ್ಕಾಗಿ ಸೇವೆ ಮಾಡುವ ಅವಕಾಶ ಸರ್ಕಾರಕ್ಕೆ ಸಿಕ್ಕಿದೆ. 60 ಸುದೀರ್ಘ ವರ್ಷಗಳ ನಂತರ ಈ ಸದವಕಾಶ ಬಂದಿದೆ
"ಸರ್ಕಾರ ಮುನ್ನಡೆಸಲು ಬಹುಮತದ ಅಗತ್ಯವಿದೆ ಎಂದು ನಾವು ನಂಬುತ್ತೇವೆ, ಆದರೆ ದೇಶವನ್ನು ಸನ್ಮಾರ್ಗದಲ್ಲಿ ಮುಂದಕ್ಕೆ ಕೊಂಡೊಯ್ಯಲು ಒಮ್ಮತವು ಬಹಳ ಮುಖ್ಯ"
"ನಮ್ಮ 3ನೇ ಅವಧಿಯಲ್ಲಿ ನಾವು 3 ಪಟ್ಟು ಹೆಚ್ಚು ಶ್ರಮಿಸುತ್ತೇವೆ, 3 ಪಟ್ಟು ಫಲಿತಾಂಶ ಸಾಧಿಸುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ"
“ದೇಶಕ್ಕೆ ಘೋಷಣೆಗಳ ಅಗತ್ಯವಿಲ್ಲ, ಅದಕ್ಕೆ ಸತ್ವ ಬೇಕು. ದೇಶಕ್ಕೆ ಉತ್ತಮ ಪ್ರತಿಪಕ್ಷ, ಜವಾಬ್ದಾರಿಯುತ ಪ್ರತಿಪಕ್ಷ ಬೇಕು

ಸ್ನೇಹಿತರೇ,

ಇಂದು ಸಂಸದೀಯ ಪ್ರಜಾಪ್ರಭುತ್ವದ ಪಾಲಿಗೆ ಹೆಮ್ಮೆಯ ದಿನ, ವೈಭವದ ದಿನ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಈ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಮ್ಮ ಹೊಸ ಸಂಸತ್‌ ಭವನದಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ, ಈ ಪ್ರಕ್ರಿಯೆಯು ಹಳೆಯ ಸದನದಲ್ಲಿ ನಡೆಯುತ್ತಿತ್ತು. ಈ ಮಹತ್ವದ ದಿನದಂದು, ನಾನು ಹೊಸದಾಗಿ ಆಯ್ಕೆಯಾದ ಎಲ್ಲಾ ಸಂಸದರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ!

ಸಂಸತ್ತಿನ ಈ ರಚನೆಯು, ಭಾರತದ ಜನಸಾಮಾನ್ಯರ ಆಕಾಂಕ್ಷೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಹೊಸ ಉತ್ಸಾಹ ಮತ್ತು ಹುರುಪಿನೊಂದಿಗೆ ಹೊಸ ವೇಗ ಮತ್ತು ಹೊಸ ಎತ್ತರವನ್ನು ಸಾಧಿಸಲು ಇದು ಅತ್ಯಂತ ಮಹತ್ವದ ಅವಕಾಶವಾಗಿದೆ. 2047ರ ವೇಳೆಗೆ 'ಶ್ರೇಷ್ಠ ಭಾರತʼ ಮತ್ತು 'ವಿಕಸಿತ ಭಾರತʼವನ್ನು ನಿರ್ಮಿಸುವ ಗುರಿ, ಕನಸುಗಳು ಹಾಗೂ ಸಂಕಲ್ಪಗಳೊಂದಿಗೆ 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಪ್ರಾರಂಭವಾಗಿದೆ. ವಿಶ್ವದ ಅತಿದೊಡ್ಡ ಚುನಾವಣೆಯನ್ನು ಭವ್ಯವಾಗಿ ಮತ್ತು ವೈಭವಯುತವಾಗಿ ನಡೆಸಲಾಯಿತು ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ಇದು 140 ಕೋಟಿ ದೇಶವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ. 65 ಕೋಟಿಗೂ ಹೆಚ್ಚು ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಈ ಚುನಾವಣೆಯೂ ಬಹಳ ಮಹತ್ವದ್ದಾಗಿದೆ ಏಕೆಂದರೆ, ಸ್ವಾತಂತ್ರ್ಯದ ನಂತರ ಎರಡನೇ ಬಾರಿಗೆ, ದೇಶದ ಜನರು ಸತತ ಮೂರನೇ ಅವಧಿಗೆ ಸೇವೆ ಸಲ್ಲಿಸಲು ಸರ್ಕಾರವೊಂದಕ್ಕೆ ಅವಕಾಶ ನೀಡಿದ್ದಾರೆ. 60 ವರ್ಷಗಳ ನಂತರ ಈ ಅವಕಾಶ ಬಂದಿರುವುದೇ ಬಹಳ ಹೆಮ್ಮೆಯ ವಿಷಯವಾಗಿದೆ.

ಸ್ನೇಹಿತರೇ,

ದೇಶದ ಜನರು ಮೂರನೇ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆಂದರೆ, ಅದು ಸರ್ಕಾರದ ಉದ್ದೇಶಗಳು ಮತ್ತು ನೀತಿಗಳನ್ನು ಜನರು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ. ಜನರತ್ತ ಸರ್ಕಾರ ಹೊಂದಿರುವ ಸಮರ್ಪಣಾ ಭಾವದ ಮೇಲೆ ಮತದಾರರು ತಮ್ಮ ನಂಬಿಕೆಯನ್ನು ದೃಢಪಡಿಸಿದ್ದಾರೆ ಮತ್ತು ಅದಕ್ಕಾಗಿ ನಾನು ಜನತೆಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸರ್ಕಾರವನ್ನು ನಡೆಸಲು ಬಹುಮತದ ಅಗತ್ಯವದೆ, ಆದರೆ ದೇಶವನ್ನು ಆಳಲು ಒಮ್ಮತವು ನಿರ್ಣಾಯಕವಾಗಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದಲೇ, ಕಳೆದ 10 ವರ್ಷಗಳಲ್ಲಿ, ನಾವು ಈ ಸಂಪ್ರದಾಯವನ್ನು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸಿದ್ದೇವೆ. ಆದ್ದರಿಂದ, ಎಲ್ಲರ ಒಪ್ಪಿಗೆಯೊಂದಿಗೆ ತಾಯಿ ಭಾರತಿಯ ಸೇವೆ ಮಾಡುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು 140 ಕೋಟಿ ದೇಶವಾಸಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನ ಮುಂದುವರಿಯಲಿದೆ.

ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರಗಳನ್ನು ಕೈಗೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. 18ನೇ ಲೋಕಸಭೆಯಲ್ಲಿ, ಗಮನಾರ್ಹ ಸಂಖ್ಯೆಯ ಯುವ ಸಂಸದರನ್ನು ನೋಡಿ ನನಗೆ ಸಂತೋಷವಾಗಿದೆ. ಭಾರತೀಯ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವಿರುವವರಿಗೆ, ಸಂಖ್ಯೆ 18 ಹೊಂದಿರುವ ಮಹತ್ವದ ಬಗ್ಗೆಯೂ ಗೊತ್ತಿರಬಹುದು.  ಭಗವದ್ಗೀತೆಯು 18 ಅಧ್ಯಾಯಗಳನ್ನು ಒಳಗೊಂಡಿದ್ದು ಕರ್ಮ, ಕರ್ತವ್ಯ ಮತ್ತು ಕರುಣೆಯ ಸಂದೇಶಗಳನ್ನು ನೀಡುತ್ತದೆ. ನಮ್ಮ ಸಂಪ್ರದಾಯದಲ್ಲಿ 18 ಪುರಾಣಗಳು ಮತ್ತು ಉಪಪುರಾಣಗಳಿವೆ. ನಾವು 18ನೇ ವಯಸ್ಸಿನಲ್ಲಿ ಮತ ಚಲಾಯಿಸುವ ಹಕ್ಕನ್ನು ಪಡೆಯುತ್ತೇವೆ. 18ನೇ ಲೋಕಸಭೆಯು ಭಾರತದ 'ಅಮೃತ ಕಾಲ'ದೊಂದಿಗೆ ಸಮಕಾಲೀನವಾಗುತ್ತದೆ, ಆ ಮೂಲಕ ಇದು 18ನೇ ಲೋಕಸಭೆ ರಚನೆಯನ್ನು ಶುಭ ಸಂಕೇತವನ್ನಾಗಿ ಮಾಡುತ್ತದೆ.

 

ಸ್ನೇಹಿತರೇ,

ಇಂದು, ನಾವು ಜೂನ್ 24 ರಂದು ಸಭೆ ಸೇರುತ್ತಿದ್ದೇವೆ. ನಾಳೆ ಜೂನ್ 25. ನಮ್ಮ ಸಂವಿಧಾನದ ಘನತೆಯನ್ನು ಎತ್ತಿಹಿಡಿಯಲು ಸಮರ್ಪಿತರಾದವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗೆ, ಜೂನ್ 25 ಮರೆಯಲಾಗದ ದಿನವಾಗಿದೆ. ನಾಳೆ ಭಾರತದ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯವನ್ನು ಬರೆದು 50 ವರ್ಷಗಳು. ನಮ್ಮ ಸಂವಿಧಾನವನ್ನು ಹೇಗೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು, ಛಿದ್ರಗೊಳಿಸಲಾಯಿತು ಮತ್ತು ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಲಾಯಿತು, ಪ್ರಜಾಪ್ರಭುತ್ವವನ್ನು ಹೇಗೆ ಸಂಪೂರ್ಣವಾಗಿ ನಿಗ್ರಹಿಸಲಾಯಿತು ಎಂಬುದನ್ನು ಭಾರತದ ಹೊಸ ಪೀಳಿಗೆಯು ಎಂದಿಗೂ ಮರೆಯಬಾರದು. ತುರ್ತು ಪರಿಸ್ಥಿತಿಯ ನಂತರದ ಈ 50 ವರ್ಷಗಳು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹೆಮ್ಮೆಯಿಂದ ರಕ್ಷಿಸಬೇಕೆಂದು ನಮಗೆ ನೆನಪು ಮಾಡುತ್ತವೆ. ಇಂತಹ ವಿಕೃತಿ ಮತ್ತೆ ಸಂಭವಿಸಲು ಅವಕಾಶ ನೀಡುವುದಿಲ್ಲ ಎಂದು ದೇಶವಾಸಿಗಳು ಸಂಕಲ್ಪ ಮಾಡಬೇಕು. ಸದೃಢ ಪ್ರಜಾಪ್ರಭುತ್ವವನ್ನು ಖಾತರಿಪಡಿಸಲು ಮತ್ತು ಭಾರತೀಯ ಸಂವಿಧಾನವು ವಿವರಿಸಿದಂತೆ ಸಾಮಾನ್ಯ ಜನರ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.

ಸ್ನೇಹಿತರೇ,

 ದೇಶದ ಜನರು ನಮಗೆ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಇದೊಂದು ಗಮನಾರ್ಹ ಮತ್ತು ಮಹತ್ವದ ಗೆಲುವು. ಇದರೊಂದಿಗೆ, ನಮ್ಮ ಜವಾಬ್ದಾರಿ ಮೂರು ಪಟ್ಟು ಹೆಚ್ಚಾಗುತ್ತದೆ. ಎರಡು ಬಾರಿ ಸರ್ಕಾರವನ್ನು ನಡೆಸಿದ ಅನುಭವದೊಂದಿಗೆ, ನಮ್ಮ ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚು ಶ್ರಮಿಸುತ್ತೇವೆ ಎಂದು ನಾನು ಇಂದು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ. ಈ ಹೊಸ ಧ್ಯೇಯದೊಂದಿಗೆ ಮುಂದುವರಿಯುತ್ತಾ ನಾವು ಮೂರು ಪಟ್ಟು ಫಲಿತಾಂಶಗಳನ್ನು ಸಾಧಿಸಲಿದ್ದೇವೆ.

 

ಗೌರವಾನ್ವಿತ ಸದಸ್ಯರೇ,

ರಾಷ್ಟ್ರವು ನಮ್ಮೆಲ್ಲರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನಕಲ್ಯಾಣ ಮತ್ತು ಜನಸೇವೆಗಾಗಿ ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಾನು ಎಲ್ಲಾ ಸಂಸದರನ್ನು ಒತ್ತಾಯಿಸುತ್ತೇನೆ. ಜನರು ವಿರೋಧ ಪಕ್ಷಗಳಿಂದ ಸಹ ರಚನಾತ್ಮಕ ಕೊಡುಗೆಗಳನ್ನು ನಿರೀಕ್ಷಿಸುತ್ತಾರೆ. ಇದುವರೆಗಿನ ನಿರಾಸೆಯ ಹೊರತಾಗಿಯೂ, 18ನೇ ಲೋಕಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ ಮತ್ತು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯುತ್ತವೆ ಎಂದು ನಾನು ಭಾವಿಸುತ್ತೇನೆ. ಪ್ರತಿಪಕ್ಷಗಳು ಈ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ಸಾಮಾನ್ಯ ಜನರು, ಸದನದಲ್ಲಿ ಚರ್ಚೆ ಮತ್ತು ಕಾರ್ಯಶ್ರದ್ಧೆಯನ್ನು ನಿರೀಕ್ಷಿಸುತ್ತಾರೆಯೇ ಹೊರತು ಕೋಪೋದ್ರಿಕ್ತತೆ, ನಾಟಕೀಯತೆ ಮತ್ತು ಅಶಾಂತಿಯನ್ನಲ್ಲ. ಅವರು ಘನತೆಯನ್ನು ಹುಡುಕುತ್ತಾರೆಯೇ ಹೊರತು ಘೋಷಣೆಗಳನ್ನಲ್ಲ. ದೇಶಕ್ಕೆ ಉತ್ತಮ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ, ಮತ್ತು 18ನೇ ಲೋಕಸಭೆಗೆ ಆಯ್ಕೆಯಾದ ಸಂಸದರು ಸಾಮಾನ್ಯ ಜನರ ಈ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ.

 

ಸ್ನೇಹಿತರೇ,

'ವಿಕಸಿತ ಭಾರತ'ಕ್ಕಾಗಿ (ಅಭಿವೃದ್ಧಿ ಹೊಂದಿದ ಭಾರತ) ನಮ್ಮ ಸಂಕಲ್ಪವನ್ನು ಸಾಧಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಾವು ಒಟ್ಟಾಗಿ ಈ ಜವಾಬ್ದಾರಿಯನ್ನು ಪೂರೈಸುತ್ತೇವೆ, ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತೇವೆ. 25 ಕೋಟಿ ಜನರು ಬಡತನದಿಂದ ಮೇಲೆ ಬಂದಿರುವುದು ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ನಾವು ಶೀಘ್ರದಲ್ಲೇ ಯಶಸ್ವಿಯಾಗಬಹುದು ಎಂಬ ಹೊಸ ವಿಶ್ವಾಸವನ್ನು ಮೂಡಿಸಿದೆ. ಇದು ಮಾನವೀಯತೆಗೆ ದೊಡ್ಡ ಸೇವೆಯಾಗಲಿದೆ. ನಮ್ಮ ದೇಶದ ಜನರು, 140 ಕೋಟಿ ನಾಗರಿಕರು, ಕಷ್ಟಪಟ್ಟು ಕೆಲಸ ಮಾಡಲು ದೊರೆತ ಯಾವುದೇ ಅವಕಾಶವನ್ನೂ ತಪ್ಪಿಸುವುದಿಲ್ಲ. ನಾವು ಅವರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಬೇಕು. ಇದು ನಮ್ಮ ಏಕೈಕ ದೃಷ್ಟಿಕೋನವಾಗಿರಬೇಕು, ಮತ್ತು ನಮ್ಮ ಈ ಸದನವು ನಿರ್ಣಯಗಳ ಸದನವಾಗಬೇಕು. ನಮ್ಮ 18ನೇ ಲೋಕಸಭೆಯು ಸಾಮಾನ್ಯ ಜನರ ಕನಸುಗಳನ್ನು ನನಸಾಗಿಸುವ ಸಂಕಲ್ಪಗಳಿಂದ ತುಂಬಿರಬೇಕು.

ಸ್ನೇಹಿತರೇ,

ನಾನು ಮತ್ತೊಮ್ಮೆ ಹೊಸದಾಗಿ ಆಯ್ಕೆಯಾದ ಸಂಸದರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚಿನ ನಿರೀಕ್ಷೆಗಳೊಂದಿಗೆ ಈ ದೇಶದ ಜನರು ನಮಗೆ ವಹಿಸಿದ ಹೊಸ ಜವಾಬ್ದಾರಿಯನ್ನು ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ಪೂರೈಸಲು ನಾವೆಲ್ಲರೂ ಒಗ್ಗೂಡೋಣ. ಅನಂತ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PMAY-U Nears 1.25 Crore Homes: Top 10 States With The Highest PMAY-U Completion Rates

Media Coverage

PMAY-U Nears 1.25 Crore Homes: Top 10 States With The Highest PMAY-U Completion Rates
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಜೂನ್ 2026
June 24, 2026

Appreciation for PM Modi’s Vision for Holistic Growth, Furthering Technology as well as Traditions