ಘನತೆವೆತ್ತ ಮಹಾರಾಜ ಅಬ್ದುಲ್ಲಾ ಅವರೇ,
ಗೌರವಾನ್ವಿತ ರಾಜಕುಮಾರ ಅವರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ವ್ಯಾಪಾರ ಸಮುದಾಯದ ನಾಯಕರುಗಳೇ, 

ಎಲ್ಲರಿಗೂ ನಮಸ್ಕಾರಗಳು,

ಸ್ನೇಹಿತರೇ,  

ಪ್ರಪಂಚದಾದ್ಯಂತದ ಅನೇಕ ದೇಶಗಳು ಗಡಿಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅನೇಕವು ಮಾರುಕಟ್ಟೆಗಳನ್ನು ಹಂಚಿಕೊಳ್ಳುತ್ತವೆ. ಹಾಗೂ, ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧವು ಐತಿಹಾಸಿಕ ನಂಬಿಕೆ ಮತ್ತು ಭವಿಷ್ಯದ ಆರ್ಥಿಕ ಅವಕಾಶಗಳು ಸಂಗಮಿಸುವ ಸ್ಥಳವಾಗಿದೆ.

ನಿನ್ನೆ ಘನತೆವೆತ್ತ ಮಹಾರಾಜರೊಂದಿಗೆ ನನ್ನ ಚರ್ಚೆಯ ಸಾರವೂ ಇದಾಗಿತ್ತು. ಭೌಗೋಳಿಕತೆಯನ್ನು ಅವಕಾಶವಾಗಿ ಮತ್ತು ಅವಕಾಶವನ್ನು ಬೆಳವಣಿಗೆಯಾಗಿ ಹೇಗೆ ಪರಿವರ್ತಿಸುವುದು ಎಂಬುದರ ಕುರಿತು ನಾವು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ.

 

ಘನತೆವೆತ್ತ ಮಹಾರಾಜ ಅವರೇ,

ನಿಮ್ಮ ನಾಯಕತ್ವದಲ್ಲಿ, ಜೋರ್ಡಾನ್ ವಿವಿಧ ಪ್ರದೇಶಗಳ ನಡುವಿನ ಸಹಕಾರ ಮತ್ತು ಜೋಡಣೆಯನ್ನು ಹೆಚ್ಚು ಸುಗಮಗೊಳಿಸುವ ಸೇತುವೆಯಾಗಿ ಹೊರಹೊಮ್ಮಿದೆ. ನಿನ್ನೆ ನಮ್ಮ ಸಭೆಯಲ್ಲಿ, ಭಾರತೀಯ ಕಂಪನಿಗಳು ಜೋರ್ಡಾನ್ ಮೂಲಕ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಇತರ ದೇಶಗಳ ಮಾರುಕಟ್ಟೆಗಳನ್ನು ಹೇಗೆ ಪ್ರವೇಶಿಸಬಹುದು ಎಂಬುದನ್ನು ನೀವು ವಿವರಿಸಿದ್ದೀರಿ. ಇಲ್ಲಿ ಹಾಜರಿರುವ ಭಾರತೀಯ ಕಂಪನಿಗಳು ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ.

ಸ್ನೇಹಿತರೇ,

ಇಂದು, ಭಾರತ ಜೋರ್ಡಾನ್‌ ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.  ವ್ಯಾಪಾರ ಜಗತ್ತಿನಲ್ಲಿ ಸಂಖ್ಯೆಗಳು ಮಹತ್ವದ್ದಾಗಿವೆ ಎಂದು ನನಗೆ ತಿಳಿದಿದೆ. ಹಾಗೂ, ನಾವು ಕೇವಲ ಅಂಕಿಅಂಶಗಳನ್ನು ಎಣಿಸಲು ಇಲ್ಲಿ ಸೇರಲಿಲ್ಲ, ಬದಲಾಗಿ ದೀರ್ಘಾವಧಿಯ ಸಂಬಂಧವನ್ನು ನಿರ್ಮಿಸಲು ಇಲ್ಲಿದ್ದೇವೆ.

ಗುಜರಾತ್‌ ನಿಂದ ವ್ಯಾಪಾರವು ಪೆಟ್ರಾ ಮೂಲಕ ಯುರೋಪ್ ತಲುಪುವ ಸಮಯವಿತ್ತು. ನಮ್ಮ ಭವಿಷ್ಯದ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ನಾವು ಮತ್ತೊಮ್ಮೆ ಆ ಸಂಪರ್ಕಗಳನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಈ ದೃಷ್ಟಿಕೋನವನ್ನು ನನಸಾಗಿಸುವಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸುತ್ತೀರಿ.

ಸ್ನೇಹಿತರೇ,

ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಭಾರತದ ಬೆಳವಣಿಗೆಯ ದರ ಎಂಟು ಪ್ರತಿಶತಕ್ಕಿಂತ ಹೆಚ್ಚಿದೆ. ಈ ಬೆಳವಣಿಗೆಯು ಉತ್ಪಾದಕತೆ-ಚಾಲಿತ ಆಡಳಿತ ಮತ್ತು ನಾವೀನ್ಯತೆ-ಚಾಲಿತ ನೀತಿಗಳ ಪರಿಣಾಮವಾಗಿದೆ.

ಇಂದು, ಜೋರ್ಡಾನ್‌ ನ ಪ್ರತಿಯೊಂದು ವ್ಯವಹಾರ ಮತ್ತು ಪ್ರತಿಯೊಬ್ಬ ಹೂಡಿಕೆದಾರರಿಗೆ ಭಾರತದಲ್ಲಿ ಹೊಸ ಅವಕಾಶಗಳ ಮಾರ್ಗಗಳು ತೆರೆದುಕೊಳ್ಳುತ್ತಿವೆ. ನೀವು ಭಾರತದ ತ್ವರಿತ ಬೆಳವಣಿಗೆಯಲ್ಲಿ ಪಾಲುದಾರರಾಗಬಹುದು ಮತ್ತು ನಿಮ್ಮ ಹೂಡಿಕೆಗಳ ಮೇಲೆ ಬಲವಾದ ಆದಾಯವನ್ನು ಪಡೆಯಬಹುದು.

ಸ್ನೇಹಿತರೇ,

ಇಂದು, ಜಗತ್ತಿಗೆ ಬೆಳವಣಿಗೆಯ ಹೊಸ ಎಂಜಿನ್‌ ಗಳ ಅಗತ್ಯವಿದೆ. ಇದಕ್ಕೆ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಬೇಕಾಗುತ್ತವೆ. ಜಾಗತಿಕ ಆರ್ಥಿಕತೆಯ ಅಗತ್ಯಗಳನ್ನು ಪೂರೈಸುವಲ್ಲಿ ಭಾರತ ಮತ್ತು ಜೋರ್ಡಾನ್ ಒಟ್ಟಾಗಿ ಮಹತ್ವದ ಪಾತ್ರವನ್ನು ವಹಿಸಬಹುದು.

ನಿಮ್ಮೊಂದಿಗೆ ಪರಸ್ಪರ ಸಹಕಾರಕ್ಕಾಗಿ ಕೆಲವು ಪ್ರಮುಖ ವಲಯಗಳನ್ನು, ದೃಷ್ಟಿ, ಕಾರ್ಯಸಾಧ್ಯತೆ ಮತ್ತು ವೇಗ ಎಲ್ಲವೂ ಇರುವ ವಲಯಗಳನ್ನು ನಾನು ಹೈಲೈಟ್ ಮಾಡಲು ಬಯಸುತ್ತೇನೆ.

 

ಮೊದಲನೆಯದಾಗಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಐಟಿ ಕ್ಷೇತ್ರಗಳು. ಈ ಕ್ಷೇತ್ರದಲ್ಲಿ ಭಾರತದ ಅನುಭವವು ಜೋರ್ಡಾನ್‌ ಗೂ ಗಮನಾರ್ಹ ಮೌಲ್ಯವನ್ನು ನೀಡುತ್ತದೆ. ಭಾರತವು ಡಿಜಿಟಲ್ ತಂತ್ರಜ್ಞಾನವನ್ನು ಸೇರ್ಪಡೆ ಮತ್ತು ದಕ್ಷತೆಗೆ ಒಂದು ಮಾದರಿಯಾಗಿ ಪರಿವರ್ತಿಸಿದೆ. ಯುಪಿಐ, ಆಧಾರ್ ಮತ್ತು ಡಿಜಿ ಲಾಕರ್‌ ನಂತಹ ಚೌಕಟ್ಟುಗಳು ಇಂದು ಜಾಗತಿಕ ಮಾನದಂಡಗಳಾಗಿವೆ. ಈ ಚೌಕಟ್ಟುಗಳನ್ನು ಜೋರ್ಡಾನ್‌ ನ ವ್ಯವಸ್ಥೆಗಳೊಂದಿಗೆ ಜೋಡಿಸುವ ಸಾಧ್ಯತೆಯ ಬಗ್ಗೆ ನಾನು ಮತ್ತು ಮಹಾರಾಜರು ವಿವರವಾಗಿ ಚರ್ಚಿಸಿದ್ದೇವೆ. ಒಟ್ಟಾಗಿ, ನಮ್ಮ ಎರಡೂ ದೇಶಗಳು ಫಿನ್‌-ಟೆಕ್, ಆರೋಗ್ಯ-ತಂತ್ರಜ್ಞಾನ ಮತ್ತು ಕೃಷಿ-ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ ಗಳನ್ನು ನೇರವಾಗಿ ಸಂಪರ್ಕಿಸಬಹುದು. ನಾವು ಹಂಚಿಕೆಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಬಹುದು, ಇದು ಕಲ್ಪನೆಗಳನ್ನು ಬಂಡವಾಳದೊಂದಿಗೆ ಮತ್ತು ನಾವೀನ್ಯತೆಯನ್ನು ಪ್ರಮಾಣದೊಂದಿಗೆ ಸಂಪರ್ಕಿಸುತ್ತದೆ.

ಸ್ನೇಹಿತರೇ,

ಫಾರ್ಮಾ ಮತ್ತು ವೈದ್ಯಕೀಯ ಸಾಧನಗಳ ವಲಯಗಳಲ್ಲಿ ಗಮನಾರ್ಹ ಅವಕಾಶಗಳಿವೆ. ಇಂದು, ಆರೋಗ್ಯ ರಕ್ಷಣೆ ಕೇವಲ ಒಂದು ವಲಯವಲ್ಲ, ಇದು ಕಾರ್ಯತಂತ್ರದ ಆದ್ಯತೆಯಾಗಿದೆ.

ಭಾರತೀಯ ಕಂಪನಿಗಳು ಜೋರ್ಡಾನ್‌ ನಲ್ಲಿ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ತಯಾರಿಸಿದರೆ, ಅದು ಜೋರ್ಡಾನ್ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶವು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಕ್ಕೆ ವಿಶ್ವಾಸಾರ್ಹ ಕೇಂದ್ರವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ.  ಅದು ಜೆನೆರಿಕ್ಸ್ ಔಷಧಿ ಆಗಿರಲಿ, ಲಸಿಕೆಗಳಾಗಿರಲಿ, ಆಯುರ್ವೇದವಾಗಿರಲಿ ಅಥವಾ ಆರೋಗ್ಯ ಕ್ಷೇಮವಾಗಿರಲಿ, ಭಾರತವು ವಿಶ್ವಾಸವನ್ನು ತರುತ್ತದೆ ಮತ್ತು ಜೋರ್ಡಾನ್ ಜನರನ್ನು ತಲುಪುತ್ತದೆ.

ಸ್ನೇಹಿತರೇ,

ಮುಂದಿನ ವಲಯ ಕೃಷಿ ಕ್ಷೇತ್ರವಾಗಿದೆ. ಶುಷ್ಕ ಹವಾಮಾನ ಪರಿಸ್ಥಿತಿಗಳಲ್ಲಿ ಕೃಷಿಯಲ್ಲಿ ಭಾರತವು ವ್ಯಾಪಕ ಅನುಭವವನ್ನು ಹೊಂದಿದೆ ಮತ್ತು ಈ ಅನುಭವವು ಜೋರ್ಡಾನ್‌ ನಲ್ಲಿ ನಿಜವಾದ ವ್ಯತ್ಯಾಸವನ್ನು ತರುತ್ತದೆ. ನಿಖರ ಕೃಷಿ ಮತ್ತು ಸೂಕ್ಷ್ಮ ನೀರಾವರಿಯಂತಹ ಪರಿಹಾರಗಳಲ್ಲಿ ನಾವು ಸಹಕರಿಸಬಹುದು. ಶೀತಲ ಸರಪಳಿಗಳು, ಆಹಾರ ಉದ್ಯಾನವನಗಳು ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದು. ರಸಗೊಬ್ಬರಗಳಲ್ಲಿ ನಾವು ಜಂಟಿ ಉದ್ಯಮಗಳನ್ನು ಕೈಗೊಳ್ಳುತ್ತಿರುವಂತೆಯೇ, ಇತರ ಕ್ಷೇತ್ರಗಳಲ್ಲೂ ನಾವು ಒಟ್ಟಾಗಿ ಮುಂದುವರಿಯಬಹುದು.

ಸ್ನೇಹಿತರೇ,

ತ್ವರಿತ ಬೆಳವಣಿಗೆಗೆ ಮೂಲಸೌಕರ್ಯ ಮತ್ತು ನಿರ್ಮಾಣ ಅತ್ಯಗತ್ಯ. ಈ ಕ್ಷೇತ್ರಗಳಲ್ಲಿನ ಸಹಯೋಗವು ನಮಗೆ ವೇಗ ಮತ್ತು ಪ್ರಮಾಣ ಎರಡನ್ನೂ ಒದಗಿಸುತ್ತದೆ.

ಜೋರ್ಡಾನ್‌ ನಲ್ಲಿ ರೈಲ್ವೆ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ಅವರ ದೃಷ್ಟಿಕೋನವನ್ನು ಮಹಾರಾಜರು ಹಂಚಿಕೊಂಡಿದ್ದಾರೆ. ನಮ್ಮ ಕಂಪನಿಗಳು ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸುವಲ್ಲಿ ಪಾಲುದಾರರಾಗಲು ಸಮರ್ಥವಾಗಿವೆ ಮತ್ತು ಉತ್ಸುಕವಾಗಿವೆ ಎಂದು ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ.

 

ನಿನ್ನೆ ನಮ್ಮ ಸಭೆಯಲ್ಲಿ, ಮಹಾರಾಜರು ಸಿರಿಯಾದಲ್ಲಿ ಮೂಲಸೌಕರ್ಯ ಪುನರ್ನಿರ್ಮಾಣದ ಅಗತ್ಯಗಳನ್ನು ಸಹ ಎತ್ತಿ ತೋರಿಸಿದರು. ಭಾರತೀಯ ಮತ್ತು ಜೋರ್ಡಾನ್ ಕಂಪನಿಗಳು ಈ ಅವಶ್ಯಕತೆಗಳನ್ನು ಒಟ್ಟಾಗಿ ಪರಿಹರಿಸಲು ಸಹಕರಿಸಬಹುದು.

ಸ್ನೇಹಿತರೇ,

ಹಸಿರು ಬೆಳವಣಿಗೆ ಇಲ್ಲದೆ ಇಂದು ಜಗತ್ತು ಪ್ರಗತಿ ಸಾಧಿಸಲು ಸಾಧ್ಯವಿಲ್ಲ.  ಶುದ್ಧ ಇಂಧನವು ಇನ್ನು ಮುಂದೆ ಕೇವಲ ಒಂದು ಆಯ್ಕೆಯಾಗಿಲ್ಲ; ಅದು ಅಗತ್ಯವಾಗಿದೆ. ಭಾರತವು ಈಗಾಗಲೇ ಸೌರ, ಪವನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹಣೆಯಲ್ಲಿ ಹೂಡಿಕೆದಾರರಾಗಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಜೋರ್ಡಾನ್ ಕೂಡ ಈ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ಅನ್‌ಲಾಕ್ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಬಹುದು.

ಅದೇ ರೀತಿ, ಆಟೋಮೊಬೈಲ್ ಮತ್ತು ಚಲನಶೀಲತೆ ವಲಯವು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಇಂದು, ಕೈಗೆಟುಕುವ ವಿದ್ಯುತ್ ಚಾಲಿತ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಸಿ.ಎನ್‌.ಜಿ ಚಲನಶೀಲತೆ ಪರಿಹಾರಗಳಲ್ಲಿ ಭಾರತವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಈ ವಲಯದಲ್ಲಿಯೂ ಸಹ, ನಾವು ವ್ಯಾಪಕವಾಗಿ ಸಹಕರಿಸಬೇಕು.

ಸ್ನೇಹಿತರೇ,

ಭಾರತ ಮತ್ತು ಜೋರ್ಡಾನ್ ಎರಡೂ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಬಹಳ ಹೆಮ್ಮೆ ಪಡುತ್ತವೆ. ನಮ್ಮ ದೇಶಗಳ ನಡುವೆ ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಗಮನಾರ್ಹ ಅವಕಾಶವಿದೆ. ಎರಡೂ ರಾಷ್ಟ್ರಗಳ ಹೂಡಿಕೆದಾರರು ಈ ಕ್ಷೇತ್ರದಲ್ಲಿನ ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸಬೇಕು ಎಂದು ನಾನು ನಂಬುತ್ತೇನೆ.

ಭಾರತದಲ್ಲಿ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಜೋರ್ಡಾನ್‌ ನಲ್ಲಿ ಈ ಚಲನಚಿತ್ರಗಳ ಚಿತ್ರೀಕರಣಕ್ಕೆ ಮತ್ತು ಜಂಟಿ ಚಲನಚಿತ್ರೋತ್ಸವಗಳನ್ನು ನಡೆಸಲು ಅವಕಾಶಗಳನ್ನು ಸೃಷ್ಟಿಸಬಹುದು, ಅವುಗಳನ್ನು ಬೆಂಬಲಿಸಲು ಅಗತ್ಯವಾದ ಪ್ರೋತ್ಸಾಹದೊಂದಿಗೆ. ಭಾರತದಲ್ಲಿ ಮುಂಬರುವ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಜೋರ್ಡಾನ್‌ ನಿಂದ ದೊಡ್ಡ ನಿಯೋಗವನ್ನು ನಾವು ಎದುರು ನೋಡುತ್ತಿದ್ದೇವೆ.

 

ಸ್ನೇಹಿತರೇ,

ಭೌಗೋಳಿಕತೆಯು ಜೋರ್ಡಾನ್‌ ನ ಶಕ್ತಿಯಾಗಿದೆ. ಭಾರತವು ಕೌಶಲ್ಯ ಮತ್ತು ಪ್ರಮಾಣ ಎರಡನ್ನೂ ಹೊಂದಿದೆ. ಈ ಶಕ್ತಿಗಳು ಒಟ್ಟಿಗೆ ಸೇರಿದಾಗ, ಅವು ಎರಡೂ ದೇಶಗಳ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ.

ನಮ್ಮ ಎರಡೂ ಸರ್ಕಾರಗಳ ದೃಷ್ಟಿಕೋನವು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ನಿಮ್ಮ ಕಲ್ಪನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಈ ದೃಷ್ಟಿಕೋನವನ್ನು ವಾಸ್ತವಕ್ಕೆ ಭಾಷಾಂತರಿಸುವುದು ಈಗ ವ್ಯಾಪಾರ ಸಮುದಾಯದ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

ಕೊನೆಯದಾಗಿ, ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ:

ಬನ್ನಿ...
ನಾವು ಒಟ್ಟಿಗೆ ಹೂಡಿಕೆ ಮಾಡೋಣ
ಒಟ್ಟಿಗೆ ನಾವೀನ್ಯತೆ ಸಾಧಿಸೋಣ
ಮತ್ತು ಒಟ್ಟಿಗೆ ಬೆಳೆಯೋಣ

ಘನತೆವೆತ್ತ ಮಹಾರಾಜ ಅವರೇ,

ಮತ್ತೊಮ್ಮೆ, ಜೋರ್ಡಾನ್ ಸರ್ಕಾರಕ್ಕೆ ಮತ್ತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ.

ಶುಕ್ರನ್.

ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways clears ₹755-crore project to build third line between Champa and Korba

Media Coverage

Indian Railways clears ₹755-crore project to build third line between Champa and Korba
NM on the go

Nm on the go

Always be the first to hear from the PM. Get the App Now!
...
PM Modi arrives in Paris
June 18, 2026

PM Modi arrived in Paris, France, to a warm welcome by the Indian diaspora.

During the visit, PM Modi will attend the VivaTech 2026 alongside President Macron. India will have the largest national pavilion at this edition, a fitting symbol of the enormous potential for partnership between Indian and European innovation ecosystems. The PM will also meet the members of the vibrant Indian community in Paris.